ಭಾನುವಾರ, ಫೆಬ್ರವರಿ 9, 2014

ಕೆಟ್ಟ ದಡಿಯನ ಕತೆ

[ಇದು ಆಸ್ಕರ್ ವಿಲ್ಡನು ಮಕ್ಕಳಿಗಾಗಿ ಬರೆದ The Selfish Giant ಕತೆಯ ಕನ್ನಡ ರೂಪಾಂತರ]

ಆ ದಡಿಯನದೊಂದು ಸುಂದರ ತೋಟವಿತ್ತು. ಶಾಲೆ ಬಿಟ್ಟಾಗ ಅದೇ ದಾರಿಯಲ್ಲಿ ಬರುತ್ತಿದ್ದ ಮಕ್ಕಳಿಗೆ ಆ ತೋಟ ಬಲು ಮೆಚ್ಚಿನ ತಾಣವಾಗಿತ್ತು.
ಆ ತೋಟವು ವಿಶಾಲವಾಗಿತ್ತಲ್ಲದೆ ಮೃದುವಾದ ಹಸಿರ ಹುಲ್ಲು ಬೆಳೆದು ಸಿಕ್ಕಾಪಟ್ಟೆ ಚೆನ್ನಾಗಿತ್ತು, ಹುಲ್ಲು ಹಾಸಿನ ಮೇಲೆ ಅಲ್ಲೊಂದು ಇಲ್ಲೊಂದು ನಕ್ಷತ್ರದಂತ ಹೂಗಳು ಅರಳಿ ನಗುತ್ತಿದ್ದವು. ಅಲ್ಲಿದ್ದ ಹನ್ನೆರಡು ಸೀಬೆ ಮರಗಳು ವಸಂತನ ಆಗಮನದೊಂದಿಗೆ ರತ್ನಾಭರಣ ತೊಡುವಂತೆ ಮನೋಹರ ಹೂಗಳನ್ನು ಧರಿಸಿ ಬೀಗುತ್ತಿದ್ದವು. ಮಳೆಗಾಲ ಸನಿಹವಾಗುತ್ತಿದ್ದಂತೆ ಹೇರಳವಾದ ಕಾಯಿಹಣ್ಣುಗಳನ್ನು ಹೊತ್ತು ಬಾಗುತ್ತಿದ್ದವು. ಗಿಳಿ ಕೋಗಿಲೆ ಗುಬ್ಬಚ್ಚಿಗಳು ಆ ಮರಗಳಲ್ಲಿ ಕುಳಿತು ಹಾಡುತ್ತಿದ್ದರೆ ಮಕ್ಕಳು ಆಟ ಮರೆತು ಆ ಗಾನವನ್ನು ಆಲಿಸುತ್ತಿದ್ದರು. ’ಏ ಎಷ್ಟೊಂದು ಮಜಾ ಅಲ್ವಾ?’ ಎನ್ನುತ್ತಾ ಸಂಭ್ರಮ ಪಡುತ್ತಿದ್ದರು.
ಹೀಗೇ ಇರುವಲ್ಲಿ ಒಂದು ದಿನ ದಡಿಯ ಬಂದ. ಸ್ನೇಹಿತನ ಊರಿಗೆ ಎಂದು ಹೋದವನು ಏಳು ವರ್ಷಗಳ ಕಾಲ ಅಲ್ಲೇ ಉಳಿದುಬಿಟ್ಟಿದ್ದನಂತೆ. ಅವನು ಹಿಂದಿರುಗಿ ಬಂದಾಗ ಅವನ ಈ ತೋಟದಲ್ಲಿ ಮಕ್ಕಳು ತುಂಟಾಟವಾಡುತ್ತಿದ್ದರು.
ಒಮ್ಮೆಲೇ ಅವನು ಗುಟುರು ಹಾಕುತ್ತಾ ’ಯಾರದು, ನೀವೆಲ್ಲ ಏನು ಮಾಡ್ತಾ ಇದ್ದೀರಿ?’ ಎಂದ ಕೂಡಲೇ ಮಕ್ಕಳೆಲ್ಲ ಭಯಭೀತರಾಗಿ ಓಡಿಹೋದರು.
’ಇದು ನನ್ನ ತೋಟ, ನನ್ನ ಸ್ವಂತ ತೋಟ, ಅರ್ಥವಾಯಿತು ತಾನೇ? ಇಲ್ಲಿ ಯಾರನ್ನೂ ಸೇರಿಸಿಕೊಳ್ಳಲ್ಲ, ನಾನೊಬ್ಬನೇ ಆಡಿಕೊಳ್ಳುತ್ತೇನೆ’ ಎಂದು ಕೂಗು ಹಾಕಿದ. ಆಮೇಲೆ ಆ ತೋಟದ ಸುತ್ತ ಎತ್ತರದ ಗೋಡ ಕಟ್ಟಿಸಿದ. ಹಾಗೂ ಒಂದು ಹಲಗೆಯ ಮೇಲೆ
’ಅಡಿಯಿಟ್ಟರೆ ಕಡಿದುಬಿಡುವೆ’
ಎಂದು ಬರೆದು ತೂಗುಹಾಕಿದ.
ಅಲ್ಲ, ಯಾರಾದರೂ ಇಷ್ಟೊಂದು ಕೆಟ್ಟವರಾಗಿರ್ತಾರಾ? ಮಕ್ಕಳು ದೇವರ ಸಮಾನ ಅನ್ತಾರೆ, ಇವನ್ಯಾಕೋ ಮಕ್ಕಳು ಅಂದರೆ ಸಿಡುಕುತ್ತಾನಲ್ಲ?
ಪಾಪ ಬಡಪಾಯಿ ಮಕ್ಕಳಿಗೆ ಆಟಕ್ಕೆ ಜಾಗವಿಲ್ಲದಂತಾಯ್ತು. ರಸ್ತೆ ಮೇಲೆ ಆಡಿಕೊಳ್ಳೋಣ ಅಂದರೆ ಒಂದರ ಹಿಂದೆ ಒಂದು ಬಂಡಿ ಬರ್ತಾ ಇರುತ್ತೆ. ಹೊಳೆಗೆ ಹೋಗಿ ಆಡೋಣ ಅಂದ್ರೆ ಹೊಳೆ ನೀರೆಲ್ಲ ಗಲೀಜಾಗಿದೆ. ಏನು ಮಾಡೋದು, ಪ್ರತಿದಿನ ಅವರು ದಡಿಯನ ತೋಟದ ಸುಂದರ ನೆನಪುಗಳನ್ನು ಮೆಲುಕು ಹಾಕುತ್ತಾ ಅದರ ಸುತ್ತಲೂ ಠಳಾಯಿಸುತ್ತಿದ್ದರು. ಶಾಲೆ ಬಿಟ್ಟಾಗೆಲ್ಲ ಅದೇ ದಾರಿಯಲ್ಲಿ ಬರುತ್ತಾ ತೋಟದ ಕತೆಗಳನ್ನು ಹಂಚಿಕೊಳ್ಳುತ್ತಿದ್ದರು. ’ಅದೆಷ್ಟು ಚೆನ್ನಾಗಿತ್ತು ಗೊತ್ತಾ?’ ಎಂದು ಪರಸ್ಪರ ಹೇಳಿಕೊಂಡು ಮನಸಿನಲ್ಲೇ ಮಿಠಾಯಿ ಸವಿಯುತ್ತಿದ್ದರು.
< 2 >
 ಋತುಗಳ ರಾಜ ವಸಂತ ಬಂದ, ಎಲ್ಲೆಡೆ ಮರಗಿಡಗಳು ಚಿಗುರೊಡೆದವು, ಕೋಗಿಲೆ ಕುಹೂಕುಹೂ ಹಾಡಿತು. ಎಲ್ಲೆಲ್ಲಿಂದಲೋ ಗುಬ್ಬಚ್ಚಿ ಗಿಳಿ ಗೊರವಂಕಗಳು ಬಂದು ಚಿಲಿಪಿಲಿಗುಟ್ಟಿ ಹಾಡಿ ತಣಿದವು, ಹಸಿರ ನಡುವೆ ಮೊಗ್ಗು ಒಡೆದು ಹೂಗಳರಳಿ ಗಾಳಿ ಗಮ್ಮೆಂದಿತು. ಆದರೆ .. ಆದರೆ ಆ ದಡಿಯನ ತೋಟದಿಂದ ಚಳಿಗಾಲ ಹೊರಹೋಗಲೇ ಇಲ್ಲ. ಅಲ್ಲಿ ಗಿಡಮರಗಳು ಚಿಗುರಲಿಲ್ಲ, ತಂಬೆಲರು ಸುಳಿಯಲಿಲ್ಲ. ಹಕ್ಕಿಗಳಂತೂ ಬರಲೇ ಇಲ್ಲ. ಮಕ್ಕಳೇ ಇಲ್ಲದ ಮೇಲೆ ಅಲ್ಲಿ ಹಾಡುವುದಾದರೂ ಹೇಗೆ ಎಂದುಕೊಂಡವೇನೋ. ಮರಗಳ ರೆಂಬೆಕೊಂಬೆಗಳಲ್ಲಿ ಮಕ್ಕಳು ಮರಕೋತಿ ಆಡದೆ ಮರಗಳಿಗೂ ಬೇಸರವಾಗಿ ಅವು ಮೊಗ್ಗು ತೊಡಲೇ ಇಲ್ಲ. ಹುಲ್ಲಿನ ನಡುವಿನಿಂದ ಹೂವೊಂದು ಇಣುಕಿ ನೋಡಿತು, ದಡಿಯನ ಎಚ್ಚರಿಕೆಯ ಬೋರ್ಡು ಕಂಡಿದ್ದೇ ಹೆದರಿಕೆಯಾಗಿ ಮತ್ತೆ ಹುಲ್ಲಿನೊಳಗೆ ಅವಿತುಕೊಂಡಿತು.
ಹಸಿರೊಂದೇ ಮಕ್ಕಳ ಬಗ್ಗೆ ಮರುಕಪಟ್ಟಿದ್ದು. ಚಳಿಯೂ ಇಬ್ಬನಿಯೂ ನಮಗಾವ ತಂಟೆಯೂ ಬೇಡ ಎಂದು ತಮ್ಮ ಪಾಡಿಗೆ ತಾವು ಬಿದ್ದುಕೊಂಡಿದ್ದವು. ಆದರೂ ಅವು ’ವಸಂತ ಯಾಕೋ ಇಲ್ಲಿಗೆ ಬರುವುದನ್ನು ಮರೆತುಬಿಟ್ಟಿದ್ದಾನೆ, ಅವನು ಬರಲಿಲ್ಲ ಅಂದರೆ ಕತ್ತೆ ಬಾಲ ಹೋಯ್ತು, ಯಾವೋನು ಹೆಂಗಿದ್ರೆ ನಮಗೇನು, ನಾವು ಚೆನ್ನಾಗಿದ್ದರೆ ಸಾಕು’ ಎಂದು ಮಾತಾಡಿಕೊಂಡವು. ಇಬ್ಬನಿಯು ಹುಲ್ಲು ಹಾಸಿನ ಮೇಲೆ ತನ್ನ ಬಿಳಿಯುಡುಗೆಯನ್ನು ಹಾಸಿತು. ಸಾಲದೆಂಬಂತೆ ಮರಗಳ ಎಲೆಗಳ ಮೇಲೆ ಸಕ್ಕತ್ತಾಗಿ ಸುರಿದು ತೋಯಿಸಿಬಿಟ್ಟಿತು. ಚಳಿಯಿಂದಾಗಿ ಮರಗಳು ಗಾಢನಿದ್ದೆಗೆ ಜಾರಿದವು. ಸೊಕ್ಕಿದ ಚಳಿಯು ಉತ್ತರದ ಗಾಳಿಯನ್ನೂ ಕರೆದು ತನ್ನ ಜೊತೆಯಲ್ಲಿರಿಸಿಕೊಂಡಿತು. ಉತ್ತರದ ಗಾಳಿಯು ಬಂದವನೇ ತೋಟದ ಮೇಲೆಲ್ಲ ಸುಂಯೆಂದು ಸುತ್ತಾಡಿದ, ಹೊಗೆಕೊಳವೆಯಲ್ಲಿ ಪೀಪಿ ಊದಿದ. ’ಈ ಜಾಗ ನನಗೆ ತುಂಬಾ ಇಷ್ಟವಾಯಿತು’ ಎಂದು ಸಡಗರಗೊಂಡ ಅವನು ತನ್ನ ಜೊತೆ ಸುಂಟರಗಾಳಿಯೂ ಇದ್ದಿದ್ದರೆ ಚೆನ್ನಾಗಿತ್ತು ಎಂದುಕೊಂಡ. ಅದೆಲ್ಲಿದ್ದನೋ ಸುಂಟರಗಾಳಿ, ಕೂಡಲೇ ಅಲ್ಲಿಗೆ ಆಗಮಿಸಿ ಮನೆಯ ಹೆಂಚುಗಳನ್ನೆಲ್ಲ ಅಲ್ಲಾಡಿಸಿ ಸಿಳ್ಳೆ ಹಾಕಿ ತನ್ನ ಪ್ರತಾಪ ತೋರಿಸಿದನಲ್ಲದೆ ತೋಟದಲ್ಲೆಲ್ಲ ಬಿರುಸಾಗಿ ಸುತ್ತಾಡಿದ. ದಟ್ಟ ಮಂಜಿನ ಉಡುಗೆ ತೊಟ್ಟಿದ್ದ ಅವನ ಉಸಿರಿನ ಗಾಳಿ ಕೊರೆತಕ್ಕೆ ಮೈ ನಡುಗುತ್ತಿತ್ತು.
ಇತ್ತ ಮನೆಯೊಳಗೆ ಬೆಂಕಿ ಗೂಡಿಗೆ ಕೊಳ್ಳಿಯನ್ನು ತುರುಕಿ ಆರಾಮ ಕುರ್ಚಿಯ ಮೇಲೆ ಕುಳಿತ ದಡಿಯ ಯಾಕಿನ್ನೂ ಚಳಿ ಹೋಗಿಲ್ಲ ಎಂದುಕೊಂಡವನು ಕಿಟಕಿ ತೆರೆದು ನೋಡಿದಾಗ ಹೊರಗೆ ಮಂಜು ಸುರಿಯುತ್ತಿತ್ತು. ಬಹುಶಃ ಕಾಲದಲ್ಲೇನೋ ಬದಲಾವಣೆಯಾಗಿದೆ’ ಎಂದುಕೊಂಡು ಕಿಟಕಿ ಮುಚ್ಚಿದ.
ಆದರೆ ಚಳಿಗಾಲ ಅವನ ತೋಟದಿಂದಹ ಹೊರಹೋಗಲೇ ಇಲ್ಲ, ಮತ್ತೆ ಬೇಸಿಗೆಯೂ ಬರಲಿಲ್ಲ. ಮಳೆಗಾಲ ಹತ್ತಿರವಾಗುತ್ತಿದ್ದಂತೆ ಎಲ್ಲ ಮರಗಳೂ ಚಿನ್ನದಂಥ ಹಣ್ಣುಗಳನ್ನುದುರಿಸಿದರೆ ದಡಿಯನ ತೋಟದ ಮರಗಳು ಇನ್ನೂ ಮಲಗಿಯೇ ಇದ್ದವು. ಮಲೆನಾಡಿನ ತಂಡಿ ಗಾಳಿ ಅವನ ತೋಟಕ್ಕೆ ಕಾಲಿಡಲು ಇಷ್ಟಪಡಲಿಲ್ಲ. ಹಾಗಾಗಿ ಅವನ ತೋಟದಲ್ಲಿ ಚಳಿಗಾಲ ಶಾಶ್ವತವಾಗಿ ಮನೆಮಾಡಿತು, ಉತ್ತರದ ಶೀತಗಾಳಿ ಬೀಸಿಯೇ ಬೀಸಿತು, ಕೊರೆಯುವ ಮಂಜಿನಸೋನೆ ಇಡೀ ತೋಟವನ್ನು ತೋಯಿಸಿತು. ಹಿಮ ಮತ್ತು ಇಬ್ಬನಿಗಳು ಮರಗಳ ಕೊಂಬೆ ರೆಂಬೆಗಳಲ್ಲಿ ಕುಣಿದು ಕುಪ್ಪಳಿಸಿ ಚೆಲ್ಲಾಟವಾಡಿದವು.
ಹೀಗೇ ಇರುವಲ್ಲಿ ಒಂದಾನೊಂದು ಮುಂಜಾನೆ ದಡಿಯನು ಇನ್ನೂ ಹಾಸಿಗೆಯ ಮೇಲೆ ಉರುಳಾಡುತ್ತಿರುವಾಗ ಎಲ್ಲಿಂದಲೋ ಇಂಪಾದ ನಾದ ಮಾಧುರ್ಯ ತೇಲಿಬಂತು. ಅದರ ಇಂಚರದಿಂದ ಅವನು ಪುಳಕಗೊಂಡ, ಅರಮನೆಯ ಬ್ಯಾಂಡಿನವರು ತನ್ನ ಮನೆಯ ಮುಂದೆ ಹಾದುಹೋಗುತ್ತಿರಬೇಕು ಎಂದುಕೊಂಡ. ಕಣ್ಣುಮುಚ್ಚಿ ಕಿವಿದೆರೆದು ಆಲಿಸಿಯೇ ಆಲಿಸಿದ. ಅದು ಯಾವ ವಾದ್ಯಮೇಳವೂ ಅಲ್ಲ ತನ್ನ ಕೋಣೆಯ ಕಿಟಕಿಯಾಚೆ ಯಾವುದೋ ಹಕ್ಕಿ ಹಾಡುತ್ತಿದೆ ಎನಿಸಿತು. ಎಷ್ಟೋ ವರ್ಷಗಳ ಕಾಲ ಅವನು ಹಕ್ಕಿಯ ಹಾಡನ್ನೇ ಕೇಳಿರಲಿಲ್ಲವಾದ್ದರಿಂದ ಈ ಒಂಟಿ ಹಕ್ಕಿಯ ಗಾನ ಅವನನ್ನು ಹುಚ್ಚನಾಗಿಸಿತು. ಜಗತ್ತಿನಲ್ಲೇ ಅತ್ಯಂತ ಮಧುರವಾದ ರಾಗವಿದು ಎಂದುಕೊಂಡ. ಸುಂಯೆನ್ನುವ ಕುಳಿರ್ಗಾಳಿ ನಿಂತುಹೋಯಿತು. ಇಬ್ಬನಿ ಕರಗಿತು. ಮಂಜಿನ ತೆರೆ ಸರಿದು ವಾತಾವರಣ ಬೆಚ್ಚಗಾಗತೊಡಗಿತು. ಎಲ್ಲಿಂದಲೋ ಸುಗಂಧ ಸೌರಭ ಸೂಸಿ ದಡಿಯನ ಮುಖವರಳಿತು. ಮಂಚದಿಂದ ಎದ್ದವನೇ ’ಅಬ್ಬ ಕೊನೆಗೂ ವಸಂತ ಬಂದ’ ಎಂದು ಕುಣಿದು ಕುಪ್ಪಳಿಸಿದ. ಮನೆಯ ಕಿಟಕಿಗಳನ್ನು ತೆರೆದ.
< 3 >
 ಓ ಅದೊಂದು ಅದ್ಭುತ ನೋಟ!
ತೋಟದ ಹೊರಗೋಡೆಯಲ್ಲಿ ಸಣ್ಣದೊಂದು ಸಂದು ಮಾಡಿಕೊಂಡು ಮಕ್ಕಳು ನುಗ್ಗಿ ಬರುತ್ತಿದ್ದರು. ಬಂದವರೇ ಮರಗಳ ಕೊಂಬೆರೆಂಬೆಗಳನ್ನೇರಿ ಜೋಕಾಲಿಯಾಡುತ್ತಿದ್ದರು. ಮರಗಳಿಗೂ ಮಕ್ಕಳನ್ನು ನೋಡಿ ಸಂತೋಷವಾಗಿ ಮೈಕೈಯೆಲ್ಲ ಹೂಗಳನ್ನು ಮುಡಿದು ಸ್ವಾಗತಿಸುತ್ತಿದ್ದವು. ಮಕ್ಕಳ ತಲೆಯ ಮೇಲೆ ಹಸಿರೆಲೆಗಳನ್ನು ನವಿರಾಗಿ ಸೋಕಿಸುತ್ತಿದ್ದವು. ಹಕ್ಕಿಗಳು ಸಂಭ್ರಮದಿಂದ ಕಲರವ ಮಾಡುತ್ತಿದ್ದವು. ಹುಲ್ಲಿನೊಳಗಿಂದ ಹೊರಬಂದ ಹೂಗಳು ಚಂದದ ಮೊಗದಿಂದ ನಗುತ್ತಿದ್ದವು. ಅಲ್ಲಿದ್ದ ಪ್ರತಿ ಮರದ ಮೇಲೂ ಒಬ್ಬನಾದರೂ ಹುಡುಗ ಕುಳಿತಿದ್ದ.
ಮನಮೋಹಕವೂ ರಮಣೀಯವೂ ಆದ ನೋಟವದು. ಆದರೆ ತೋಟದ ದೂರದ ಒಂದು ಮೂಲೆಯಲ್ಲಿ ಮಾತ್ರ ಇನ್ನೂ ಇಬ್ಬನಿ ಹೆಪ್ಪುಗಟ್ಟಿತ್ತು. ಅಲ್ಲೊಬ್ಬ ಪುಟ್ಟ ಹುಡುಗ ನಿಂತುಕೊಂಡಿದ್ದ. ಅವನೆಷ್ಟು ಪುಟ್ಟ ಹುಡುಗನೆಂದರೆ ಮರದ ಕೊಂಬೆಗಳತ್ತ ಕೈಚಾಚಿದರೆ ನಿಲುಕುತ್ತಲೇ ಇರಲಿಲ್ಲ. ಮರದ ಸುತ್ತಲೂ ಸುತ್ತುತ್ತ ಎಲ್ಲಿಯಾದರೂ ಹತ್ತಲು ಆಸ್ಪದವುಂಟೇ ಎಂದು ನೋಡುತ್ತಿದ್ದ. ಅಸಹಾಯಕನಾಗಿ ಅಳುತ್ತಿದ್ದ. ಮರದ ಕೊಂಬೆಗಳು ಕವಲುಗಳು ಇನ್ನೂ ಇಬ್ಬನಿಯಿಂದ ತೊಯ್ದು ಮುದ್ದೆಯಾಗಿದ್ದವು. ಮರದ ಮೇಲೆ ಇನ್ನೂ ಶೀತಗಾಳಿ ಬೀಸುತ್ತಿತ್ತು. ಹತ್ತು ಮಗೂ ಹತ್ತು ಎಂದು ಮರ ಪಿಸುಗುಡುತ್ತಿತ್ತು. ತನ್ನ ರೆಂಬೆಗಳನ್ನು ಸಾಧ್ಯವಾದಷ್ಟೂ ಕೆಳಕ್ಕೆ ಚಾಚುತ್ತಿತ್ತು. ಆದರೆ ಆ ಪುಟ್ಟ ಹುಡುಗನವರೆಗೂ ಅವು ತಲಪಲಾಗುತ್ತಿಲ್ಲ.
ಅದನ್ನು ನೋಡುತ್ತಿದ್ದಂತೆ ದಡಿಯನ ಹೃದಯ ಕರಗಿತು. ’ನಾನೆಷ್ಟು ಸ್ವಾರ್ಥಿಯಾಗಿದ್ದೆ’ ಎಂದು ಮನಸಿನಲ್ಲೇ ಅಂದುಕೊಂಡ. ’ಅದಕ್ಕೇ ಇಲ್ಲಿಗೆ ವಸಂತ ಬರಲಿಲ್ಲ, ನಾನೀಗಲೇ ಹೋಗಿ ಆ ಪುಟ್ಟ ಕಂದನನ್ನು ಮರದ ಮೇಲೆ ಕೂರಿಸುವೆ, ಆಮೇಲೆ ಈ ಗೋಡೆಯನ್ನು ಬೀಳಿಸುವೆ, ನನ್ನ ತೋಟ ಮಕ್ಕಳಾಟಕ್ಕೆ ಒದಗಲಿ, ಅದು ಎಂದೆಂದೂ ಮಕ್ಕಳ ತೋಟವಾಗಲಿ’ ಎಂದುಕೊಂಡ. ಇದುವರೆಗೆ ಆದುದಕ್ಕೆ ಬಲು ಪರಿತಾಪ ಪಟ್ಟ.
ಮೆಲ್ಲನೆ ಮನೆಯ ಬಾಗಿಲನು ತೆರೆದು ತೋಟದ ಒಳಹೊಕ್ಕ. ಮಕ್ಕಳು ಅವನನ್ನು ನೋಡಿದ್ದೇ ಚೆಲ್ಲಾಪಿಲ್ಲಿಯಾಗಿ ಫೇರಿ ಕಿತ್ತು ಓಡಿಹೋದರು. ತೋಟದಲ್ಲಿ ಮತ್ತೆ ಚಳಿಗಾಲ ಅಮರಿಕೊಂಡಿತು. ಆದರೆ ಆ ಪುಟ್ಟ ಹುಡುಗ ಮಾತ್ರ ಅಲ್ಲೇ ನಿಂತಿದ್ದ. ಅವನ ಕಣ್ಣುಗಳಲ್ಲಿ ಕಂಬನಿ ತುಂಬಿದ್ದರಿಂದ ದಡಿಯ ಬಂದಿದ್ದನ್ನು ಅವನು ನೋಡಲಿಲ್ಲ. ದಡಿಯನು ಆ ಮಗುವನ್ನು ಹೂವಿನಂತೆ ಮೇಲೆತ್ತಿ ಮರದ ಮೇಲೆ ಕುಳ್ಳಿರಿಸಿದ. ಕೂಡಲೇ ಮರವು ನಲಿದಾಡಿ ತಳಿರು ಹೊದೆಯಿತು. ಹಸಿರೆಲೆಗಳ ನಡುವಿನಿಂದ ತಂಬೆಲರು ತೂರಿ ಹೂಗಳು ಅರಳಿ ಕಂಪು ಸೂಸಿದವು. ಎಲ್ಲೆಲ್ಲಿಂದಲೋ ಹಕ್ಕಿಗಳು ಕುಣಿದು ಬಂದು ಪಂಚಮ ಸ್ವರವಲ್ಲರಿಯ ಗಾನವಾಡಿದವು. ಪುಟ್ಟ  ಹುಡುಗನು ಕಿಲಕಿಲ ನಗುತ್ತಾ ದಡಿಯನ ಕೊರಳ ಸುತ್ತ ತೋಳು ಬಳಸಿ ಅವನಿಗೊಂದು ಮುತ್ತು ಕೊಟ್ಟ. ದಡಿಯ ರೋಮಾಂಚನಗೊಂಡ. ಅವನ ಕಠೋರ ಹೃದಯ ಕುಸುಮದಂತೆ ಮೃದುವಾಯಿತು.
ದೂರದಿಂದ ಇಣುಕಿ ನೋಡುತ್ತಿದ್ದ ಮಕ್ಕಳಿಗೆ ದಡಿಯ ಒಳ್ಳೆಯವನು ಎನಿಸಿತು. ಕೂಡಲೇ ಅವರು ಕೇಕೆ ಹಾಕುತ್ತಾ ತೋಟದೊಳಕ್ಕೆ ಓಡಿ ಬಂದರು. ಅವರ ಹಿಂದೆಯೇ ವಸಂತನಾಗಮನವೂ ಆಗಿ ತೋಟ ನಳನಳಿಸಿತು. ದಡಿಯನು ’ಮಕ್ಕಳೇ ಇನ್ನು ಮುಂದೆ ಈ ತೋಟ ನಿಮ್ಮದೇ’ ಎಂದು ಕೂಗಿ ಹೇಳಿ ತಾನು ಹಾಕಿದ್ದ ಬೋರ್ಡನ್ನು ಕಿತ್ತು ಬಿಸಾಡಿದ ಗೋಡೆಯನ್ನು ಒಡೆದು ಹಾಕಿದ. ಸಂತೆಗೆಂದು ಹೊರಟಿದ್ದ ಊರಜನ ಮಕ್ಕಳೊಂದಿಗೆ ಆಡುತ್ತಿದ್ದ ದಡಿಯನನ್ನೂ ಸ್ವರ್ಗದಂತಿದ್ದ ತೋಟವನ್ನೂ ನೋಡಿ ಬೆರಗಾದರು. ಇಂಥ ಸುಂದರವಾದ ತೋಟವನ್ನು ತಾವೆಂದೂ ಕಂಡಿದ್ದೇ ಇಲ್ಲವೆಂದು ಮಾತಾಡಿಕೊಂಡರು.
< 4 >
 ಅವರು ದಿನವೆಲ್ಲ ಆಡಿದರು, ಹಾಡಿ ಕುಣಿದರು, ಸಂಜೆ ಹತ್ತಿರವಾಗುತ್ತಿದ್ದಂತೆ ಮಕ್ಕಳೆಲ್ಲ ದಡಿಯನಿಗೆ ವಂದಿಸಿ ತಮ್ಮ ಮನೆಗಳಿಗೆ ಹಿಂದಿರುಗಿದರು.
’ಆದರೆ ನಾನು ಮರದ ಮೇಲೆ ಕೂರಿಸಿದೆನಲ್ಲ ಆ ಪುಟ್ಟ ಎಲ್ಲಿ?’ ಎಂದು ಅವನು ಕಕ್ಕುಲತೆಯಿಂದ ಕೇಳಿದ. ಆ ಹುಡುಗ ನೀಡಿದ ಸವಿಮುತ್ತಿನ ಮಾಧುರ್ಯವನ್ನು ಅವನಿನ್ನೂ ಮೆಲುಕು ಹಾಕುತ್ತಿದ್ದ. ಆ ಹುಡುಗನ ಬಗ್ಗೆ ಏನೋ ಒಂದು ಮಮತೆ ವಾತ್ಸಲ್ಯ ಮೂಡಿತ್ತು.
ಎಲ್ಲ ಮಕ್ಕಳೂ ’ನಮಗೆ ಗೊತ್ತಿಲ್ಲ, ಅವನು ಹೋಗಿರಬಹುದು’ ಎಂದರು.
’ನಾಳೆಯೂ ಕಂಡಿತ ಬರಬೇಕೆಂದು ಅವನಿಗೆ ಹೇಳಿ’ ಎಂದು ಹೇಳಿದ್ದಕ್ಕೆ ಮಕ್ಕಳು ’ಇಲ್ಲ ಅವನಾರೆಂದೇ ನಮಗೆ ತಿಳಿಯದು, ಇವೊತ್ತೇ ನಾವು ಅವನನ್ನು ನೋಡಿದ್ದು’ ಎಂದಾಗ ದಡಿಯನಿಗೆ ತುಂಬಾ ಬೇಸರವಾಯಿತು.  
ಪ್ರತಿದಿನ ಶಾಲೆ ಮುಗಿದಾಗ ಮಕ್ಕಳು ತೋಟಕ್ಕೆ ಬಂದು ದಡಿಯನ ಜೊತೆ ಆಡುತ್ತಿದ್ದರು. ಆದರೆ ಅವನ ಪ್ರೀತಿಯ ಪುಟ್ಟ ಹುಡುಗ ಮಾತ್ರ ಬರಲೇ ಇಲ್ಲ. ದಡಿಯ ಎಲ್ಲ ಮಕ್ಕಳನ್ನೂ ಪ್ರೀತಿಯಿಂದ ಕಾಣುತ್ತಿದ್ದ. ಆದರೆ ಅವನ ಮೊದಲ ಪುಟ್ಟ ಗೆಳೆಯನ ಮೇಲೆ ಅವನಿಗೆ ವಿಶೇಷ ಅಕ್ಕರೆಯಿತ್ತು. ಯಾವಾಗಲೂ ಅವನ ಬಗ್ಗೆಯೇ ಮಾತನಾಡುತ್ತಿದ್ದ. ’ಹೇಗಾದರೂ ಅವನನ್ನು ಕಾಣಲೇಬೇಕು’ ಎಂದುಕೊಳ್ಳುತ್ತಿದ್ದ. 
ವರ್ಷಗಳೇ ಕಳೆದು ಹೋದವು, ದಡಿಯ ಮುದುಕನಾದ, ದೇಹದ ಕಸುವು ಕಡಿಮೆಯಾಯಿತು. ಮುನ್ನಿನಂತೆ ಅವನು ಆಡಲಾಗುತ್ತಿಲ್ಲ, ದೊಡ್ಡದಾದ ಆರಾಮಕುರ್ಚಿಯಲ್ಲಿ ಕುಳಿತು ಮಕ್ಕಳಾಟವನ್ನು ನೋಡುವುದೇ ಅವನ ದಿನಚರಿಯಾಯಿತು, ತನ್ನ ತೋಟದ ಬಗ್ಗೆ ಅವನಿಗೆ ಹೆಮ್ಮಯೆನಿಸಿತು. ’ನನ್ನಲ್ಲಿ ಎಷ್ಟೋ ಸುಂದರ ಹೂಗಳಿವೆ, ಆದರೆ ಮಕ್ಕಳು ಮಾತ್ರ ಎಲ್ಲ ಹೂಗಳಿಗಿಂತ ಮಿಗಿಲು’ ಎಂದುಕೊಂಡ.
ಒಂದು ಚಳಿಗಾಲದ ಮುಂಜಾನೆ ಅವನು ಬಟ್ಟೆ ಉಡುತ್ತಿರುವಾಗ ಕಿಟಕಿಯಾಚೆ ನೋಡಿದ. ಈಗವನು ಚಳಿಯನ್ನು ದ್ವೇಷಿಸುತ್ತಿಲ್ಲ, ಅವನಿಗೆ ಗೊತ್ತು ವಸಂತನ ನಿದ್ದೆಯ ಕಾಲವದು ಮತ್ತು ಹೂಗಳಿಗೂ ವಿಶ್ರಾಂತಿ ಬೇಕೆಂದು.
ಇದ್ದಕ್ಕಿದ್ದಂತೆ ಅವನು ಅಚ್ಚರಿಯಿಂದ ಕಣ್ಣಗಲಿಸಿ ನೋಡಿದ, ದೂರದ ಮೂಲೆಯತ್ತ ದೃಷ್ಟಿಸಿ ನೋಡಿದ. ಅದು ನಿಜವಾಗಿಯೂ ಒಂದು ಅನುಪಮ ಕಾಣ್ಕೆ. ತೋಟದ ದೂರದ ಮೂಲೆಯಲ್ಲಿನ ಆ ಮರ ಕಣ್ಣಿಗೆ ಹಬ್ಬದಂತೆ ಬಲು ಮೋಹಕವಾದ ಬಿಳಿಯ ಹೂಗಳನ್ನು ಧರಿಸಿತ್ತು. ಅದರ ಬಂಗಾರದ ಕೊಂಬೆಗಳಲ್ಲಿ ಬೆಳ್ಳಿಯ ಹಣ್ಣುಗಳು ಜೋತಾಡುತ್ತಿದ್ದವು. ಕೆಳಗೆ ಅವನು ಅತಿಯಾಗಿ ಹಚ್ಚಿಕೊಂಡಿದ್ದ ಅದೇ ಹುಡುಗ ನಿಂತಿದ್ದ.
ಸಂತೋಷಾತಿರೇಕದಿಂದ ದಡಿಯ ಅಲ್ಲಿಗೆ ಧಾವಿಸಿ ಓಡಿದ. ಹುಲ್ಲು ಸಸಿ ಪೊದೆ ಗಿಡಗಳನ್ನು ದಾಟಿ ಮಗುವಿನ ಬಳಿ ಬಂದ. ಆದರೆ ಮಗುವನ್ನು ನೋಡುತ್ತಿದ್ದಂತೆ ಅವನ ಮುಖ ಕೆಂಪಾಯಿತು, ಕೋಪದಿಂದ ಅವನು ಕುದಿಯ ತೊಡಗಿದ. ’ಯಾರು? ಯಾರದು ಈ ಪುಟ್ಟ ಕಂದನಿಗೆ ಹೊಡೆದವರು? ರಕ್ತ ಸುರಿಯುವಂತೆ ಗಾಯಗೊಳಿಸಲು ಮನಸ್ಸಾದರೂ ಹೇಗೆ ಬಂತು’ ಎಂದು ಕಿರುಚಾಡಿದ. ಏಕೆಂದರೆ ಆ ಮಗುವಿನ ಎರಡೂ ಅಂಗೈ ತೂತಾಗಿತ್ತು ಪಾದಗಳಲ್ಲೂ ತೂತಾಗಿತ್ತು.
< 5 >
’ಮಗುವೇ ಹೇಳಪ್ಪಾ ಯಾರು ನಿನಗೆ ಹೀಗೆ ಮಾಡಿದ್ದು, ಈಗಲೇ ದೊಡ್ಡದೊಂದು ಕೊಡಲಿ ತೆಗೆದುಕೊಂಡು ಹೋಗಿ ಅವನ್ನು ಅಡ್ಡಡ್ಡ ಸಿಗಿದು ಹಾಕುವೆ’ ಎಂದ.
’ಇಲ್ಲ, ಇವು ಪ್ರೀತಿಯಿಂದಾದ ಗಾಯಗಳು’ ಎಂದಿತು ಆ ಮಗು.
’ಏನು!?’  ದಡಿಯನ ಗಂಟಲುಬ್ಬಿತು. ಅವನು ಮಗುವಿನ ಮುಂದೆ ಮಂಡಿಯೂರಿ ಕುಳಿತ.
ಅವನನ್ನು ನೋಡಿ ಮಗು ಮುಗುಳುನಗೆ ನಕ್ಕಿತು. ’ನಿನ್ನ ತೋಟದಲ್ಲಿ ನನಗೆ ಆಡಲು ಬಿಟ್ಟೆಯಲ್ಲವೇ, ಇಂದು ನೀನು ನನ್ನ ತೋಟಕ್ಕೆ ಬಾ, ಸ್ವರ್ಗವೇ ನನ್ನ ತೋಟ’ ಎಂದಿತು.

ಮಧ್ಯಾಹ್ನ ಶಾಲೆ ಬಿಟ್ಟಾಗ ಮಕ್ಕಳೆಲ್ಲ ಬಂದು ನೋಡಿದ್ದೇನು? ದಡಿಯ ಮರದ ಕೆಳಗೆ ಸುವಾಸಿತ ಬಿಳಿಯ ಹೂಗಳನ್ನು ಹೊದ್ದು ಮಲಗಿದ್ದ.

ಭಾನುವಾರ, ಡಿಸೆಂಬರ್ 29, 2013

ಮಾರ್ಸೆಲಿನೊ

ನನ್ನ ಹಳೆಯ ಪಳೆಯ ನೆನಪುಗಳಲ್ಲಿ ಆಗಾಗ್ಗೆ ಕಾಡುವುದು ಎಪ್ಪತ್ತರ ದಶಕದಲ್ಲಿ ನಮ್ಮ ಶಾಲೆಯಲ್ಲಿ ತೋರಿಸಿದ ಒಂದು ಚಲನಚಿತ್ರ. ಬಹುಶಃ ನಾನಾಗ ಐದನೇ ತರಗತಿಯ ವಿದ್ಯಾರ್ಥಿ.
ಆ ಚಿತ್ರದ ನಾಯಕ ಒಬ್ಬ ಪುಟಾಣಿ ತುಂಟ ಹುಡುಗ. ಅಂದೊಮ್ಮೆ ಬೆಳಂಜಾವ ಆ ಮಠದ ಸ್ವಾಮಿಗಳು ಚರ್ಚಿನ ಗಂಟೆ ಬಾರಿಸುವಾಗ ಗೇಟಿನ ಬಳಿ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ್ದ ಒಂದು ಅನಾಥ ಮಗುವನ್ನು ಕಾಣುತ್ತಾರೆ. ಮಠದ ಎಲ್ಲ ಸಂನ್ಯಾಸಿಗಳೂ ಅದರ ಸುತ್ತ ನೆರೆದು ಪಾಪುವನ್ನು ಮುದ್ದಿಸಿ ಒಳಕರೆತರುತ್ತಾರೆ. ಒಬ್ಬರು ಬೆಚ್ಚನೆಯ ಹಾಸಿಗೆ ಮಾಡಿದರೆ ಮತ್ತೊಬ್ಬರು ಹಾಲಿನ ಬಾಟಲಿ ತರುತ್ತಾರೆ. ಎಲ್ಲರೂ ಸೇರಿ ಮಗುವಿಗೆ ಮಾರ್ಸೆಲಿನೊ ಎಂದು ಹೆಸರಿಟ್ಟು ದೀಕ್ಷಾಸ್ನಾನ ಕೊಡುತ್ತಾರೆ. 
ಮಠದೊಳಗಿನ ಧಾರ್ಮಿಕ ಶಿಸ್ತಿನ ಪರಿಸರದೊಳಗಿದ್ದೂ ಹುಡುಗ ಬಲು ತುಂಟನಾಗಿ ಬೆಳೆಯುತ್ತಾನೆ. ಹೋಗಬಾರದೆನ್ನುವ ಕಡೆ ಹೋಗುತ್ತಾನೆ, ಮುಟ್ಟಬಾರದೆಂದುದನ್ನು ಮುಟ್ಟುತ್ತಾನೆ, ಕಲ್ಲಿನ ಕೆಳಗೆ ಅವಿತಿದ್ದ ಚೇಳನ್ನು ಮುಟ್ಟಿ ಕಿಟಾರನೆ ಕಿರುಚಿಕೊಂಡು ಜ್ವರಬಂದು ಮಲಗುತ್ತಾನೆ, ಕೆಟ್ಟ ಹುಡುಗರ ಸಹವಾಸ ಮಾಡಿ ಊರವರೆಲ್ಲರಿಂದ ಉಗಿಸಿಕೊಳ್ಳುತ್ತಾನೆ. ಹೀಗೆ ಒಮ್ಮೆ ಸಂತೆಗೆ ಹೋಗಿದ್ದಾಗ ಹಸುಕರುಗಳನ್ನು ಬಿಚ್ಚಿ ಓಡಿಸಿ ಸಂತೆಯೆಲ್ಲ ಗಲಿಬಿಲಿಗೊಳ್ಳುವಂತೆ ಮಾಡುತ್ತಾನೆ. ಊರಿನ ಮುಖಂಡ ಬಂದು ಹುಡುಗನನ್ನು ನನಗೆ ಕೊಡಿ ಅವನಿಗೆ ಚೆನ್ನಾಗಿ ಬುದ್ದಿ ಕಲಿಸುವೆ, ಇಡೀ ದಿನ ನನ್ನ ಕುಲುಮೆಯ ತಿದಿಯೊತ್ತಲಿ ಎನ್ನುತ್ತಾನೆ. ಆದರೆ ಗುರುಗಳು ಒಪ್ಪುವುದಿಲ್ಲ. 
ಮಠದ ಅಟ್ಟದಲ್ಲಿ ಏನಿದೆಯೋ ಎಂದು ನೋಡುವ ಕುತೂಹಲ ಮಾರ್ಸೆಲಿನೊಗೆ. ಆದರೆ ನೀನೆಲ್ಲಿ ಬೇಕಾದರೂ ಹೋಗು, ಆದರೆ ಅಟ್ಟಕ್ಕೆ ಮಾತ್ರ ಹತ್ತಬೇಡ, ಅದರ ಮೆಟ್ಟಿಲುಗಳಿಗೆ ಹಿಡಿಗಂಬಿ ಇಲ್ಲ, ಜಾರಿಬಿದ್ದೀಯೆ, ಅಲ್ಲದೆ ಅಟ್ಟದ ಮೇಲೆ ಭೂತವಿದೆ ಎಂದು ಅವನಿಗೆ ಮಠದ ಸ್ವಾಮಿಗಳು ಹೆದರಿಸುತ್ತಾರೆ. ಆದರೂ ಆ ಹುಡುಗನಿಗೆ ಒಂದು ಕೆಟ್ಟ ಕುತೂಹಲ. ಒಂದು ದಿನ ಅಟ್ಟ ಹತ್ತಿ ಅಲ್ಲಿನ ಕೋಣೆಯ ಬಾಗಿಲು ತೆರೆದು ದೆವ್ವ ಕಂಡವನಂತೆ ಬೆಚ್ಚಿಬಿದ್ದು ಓಡಿ ಬರುತ್ತಾನೆ. ಮತ್ತೊಂದು ದಿನ ಧೈರ್ಯಮಾಡಿ ಮತ್ತೆ ಅಲ್ಲಿಗೆ ತೆರಳಿ ಬಾಗಿಲಲ್ಲಿ ಇಣುಕುತ್ತಾನೆ. ಅದು ಭೂತವಾಗಿರದೆ ಶಿಲುಬೆಯ ಮೇಲೆ ನೇತಾಡುತ್ತಿರುವ ಒಬ್ಬ ಮನುಷ್ಯನಂತೆ ತೋರುತ್ತದೆ. ಅದರ ಹತ್ತಿರ ಹೋಗಿ ಮಾತಾಡಿಸುತ್ತಾನೆ. ನೀನೇಕೆ ಹೀಗಿದ್ದೀಯ, ಹಸಿವಾಗುತ್ತಿದೆಯೇ ತಾಳು ರೊಟ್ಟಿ ತರುವೆ ಎಂದು ಅಡಿಗೆಮನೆಗೆ ಹೋಗಿ ಕದ್ದುಮುಚ್ಚಿ ರೊಟ್ಟಿ ತಂದು ಶಿಲುಬೆಯ ಮೇಲಿನ ಮನುಷ್ಯನಿಗೆ ಕೊಡುತ್ತಾನೆ. ನಿಧಾನವಾಗಿ ಕೈ ಕೆಳಗಿಳಿಸುವ ಆ ವ್ಯಕ್ತಿ ರೊಟ್ಟಿಯನ್ನು ತಿನ್ನುತ್ತಾನೆ. 
ಹೀಗೇ ಹಲವಾರು ದಿನ ನಡೆಯುತ್ತದೆ. ಊಟದ ಮೇಜಿನ ಬಳಿ ಕುಳಿತಾಗ ಎಲ್ಲರ ತಟ್ಟೆಗೂ ರೊಟ್ಟಿ ಬಡಿಸುತ್ತಾರೆ. ಒಂದೇ ಕ್ಷಣದಲ್ಲಿ ಮಾರ್ಸೆಲಿನೊ ತನ್ನ ತಟ್ಟೆಯೊಳಗಿನ ರೊಟ್ಟಿಯನ್ನು ಯಾರಿಗೂ ಕಾಣದಂತೆ ತೆಗೆದು ತನ್ನ ಅಂಗಿಯೊಳಗೆ ಸೇರಿಸಿಕೊಳ್ಳುತ್ತಾನೆ. ಅಡಿಗೆಯವನಿಗೆ ಏನೋ ಸಂದೇಹ, ಈಗಷ್ಟೇ ಅವನ ತಟ್ಟೆಯಲ್ಲಿ ರೊಟ್ಟಿ ಹಾಕಿದ ನೆನಪು, ಹುಡುಗ ಅಷ್ಟು ಬೇಗನೇ ತಿಂದು ಮುಗಿಸಿದನೇ, ಅಥವ ನಾನು ಅವನಿಗೆ ರೊಟ್ಟಿಯನ್ನೇ ಹಾಕಲಿಲ್ಲವೇ...?
ಒಂದು ದಿನ ಅಡಿಗೆಯವ ಈ ಕಳ್ಳಾಟವನ್ನು ಕಂಡುಕೊಂಡ. ಹುಡುಗನಿಗೆ ಗೊತ್ತಾಗದಂತೆ ಹಿಂಬಾಲಿಸಿ ಹೋದ. ಅಟ್ಟದಲ್ಲಿನ ಕೋಣೆಯಲ್ಲಿ ಮುರುಕಲು ಕುರ್ಚಿಯ ಮೇಲೆ ಕುಳಿತುಕೊಂಡಿದ್ದ ಶಿಲುಬೆಯ ಮನುಷ್ಯ ಹುಡುಗನ ಕೈಯಿಂದ ರೊಟ್ಟಿ ಇಸಿದುಕೊಂಡು ತಿಂದು ನೀರು ಕುಡಿಯುತ್ತಾನೆ. ಆಮೇಲೆ ಹುಡುಗನಿಗೆ ತಾನ್ಯಾರೆಂದು ಹೇಳುತ್ತಾನೆ. ಜಪಗಳನ್ನು ಹೇಳಿಕೊಡುತ್ತಾನೆ. ನಿನಗೇನು ಬೇಕು ಕೇಳು ಕೊಡುತ್ತೇನೆ ಎಂದಾಗ ಹುಡುಗ ನನಗೆ ನನ್ನ ಅಮ್ಮ ಬೇಕು ಎನ್ನುತ್ತಾನೆ. 
ನಿನ್ನ ಅಮ್ಮ ನನ್ನ ಅಮ್ಮನ ಬಳಿಯಿದ್ದಾಳೆ, ಬಾ ಕರೆದುಕೊಂಡು ಹೋಗುತ್ತೇನೆ ಎಂದು ಶಿಲುಬೆಯವ ಹೇಳುತ್ತಿದ್ದಂತೆ ಮಾರ್ಸೆಲಿನೊಗೆ ಗಾಢ ನಿದ್ದೆ ಬರುತ್ತದೆ, ಅವನ ದೇಹವನ್ನು ಒಂದು ಅಪೂರ್ವ ಬೆಳಕು ಆವರಿಸುತ್ತದೆ. ಬಾಗಿಲ ಸಂದಿಯಲ್ಲಿ ಇಣುಕುತ್ತಿದ್ದ ಮಠದ ಸ್ವಾಮಿಗಳೆಲ್ಲ ಬಿಟ್ಟ ಬಾಯಿ ಬಿಟ್ಟ ಹಾಗೇ ಇದನ್ನು ನೋಡುತ್ತಿರುತ್ತಾರೆ. ಆಮೇಲೆ ಅವರು ಚರ್ಚಿನ ಗಂಟೆಯನ್ನು ಢಣಢಣ ಬಾರಿಸಿ ಊರವರನ್ನೆಲ್ಲ ಕರೆದು ನಡೆದ ಕತೆಯನ್ನೆಲ್ಲ ಹೇಳಿ ಸುಂದರವಾದ ಹಾಡು ಹಾಡುತ್ತಾರೆ. 

ನಾ. ಡಿಸೋಜ

ನಮ್ಮೆಲ್ಲರ ಹೆಮ್ಮೆಯ ಹಾಗೂ ಮಕ್ಕಳ ಮೆಚ್ಚಿನ ಕತೆಗಾರ ನಾ ಡಿಸೋಜರ ಬಗ್ಗೆ ಕೇಳದವರಾರು? ಅವರ ಹೆಚ್ಚಿನ ಕತೆಗಳು ಚರ್ಚಿನ ಸುತ್ತಾಲೆ(compound)ಯಲ್ಲಿ ಅಡ್ಡಾಡಿದರೂ ಮಕ್ಕಳಿಂದ ಮುದುಕರವರೆಗೆ ಓದಿನ ಹುಚ್ಚು ಹಚ್ಚಿದ್ದು ಮಾತ್ರ ಸುಳ್ಳಲ್ಲ.
ನಾ. ಡಿಸೋಜ ಎಂದೇ ಹೆಸರುವಾಸಿಯಾಗಿರುವ ನಾರ್ಬರ್ಟ್ ಡಿಸೋಜರು ಶೀಮೊಗ್ಗೆ ಜಿಲ್ಲೆಯ ಸಾಗರದಲ್ಲಿ ೧೯೩೭ರ ಜೂನ್ ೬ರಂದು ಹುಟ್ಟಿದರು. ಇವರ ತಂದೆ ಫಿಲಿಪ್ ಡಿಸೋಜರು ಶಾಲಾ ಮಾಸ್ತರರಾಗಿದ್ದರಿಂದ ಅವರು ಶಾಲಾಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಓದುತ್ತಿದ್ದ ನಾ ಡಿಸೋಜ ಅವರಲ್ಲಿ ತನ್ನಿಂತಾನೇ ಸಾಹಿತ್ಯದೊಲವು ಮೊಳೆಯಿತು. ಜೊತೆಗೆ ತಾಯಿ ರೊಪೀನಾ ಅವರು ಹೇಳುತ್ತಿದ್ದ ಜನಪದ ಹಾಡುಗಳು, ಕತೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಮಲೆನಾಡಿನ ಸೊಬಗಿನೊಂದಿಗೆ ಎಲ್ಲಜನರ(public) ಪುಸ್ತಕಭಂಡಾರಗಳ ಅಪಾರ ಬರಹದ ಹೆದ್ದೊರೆಗಳ ನೀರು ಕುಡಿದ ನಾ ಡಿಸೋಜರಿಗೆ ಬರವಣಿಗೆ ತಾನಾಗಿ ಒದಗಿಬಂತು. ಇಂದಿಗೆ ಸುಮಾರು ಐವತ್ತು ವರುಶಗಳಿಂದಲೂ ಲೆಕ್ಕಣಿ(pen)ವಿಡಿದು ಕನ್ನಡ ಸಾಹಿತ್ಯದ ಎಲ್ಲ ನಮೂನೆಗಳಲ್ಲಿಯೂ ಗೀಚುತ್ತ ಬಂದಿರುವ ನಾರ್ಬರ್ಟ್ ಡಿಸೋಜರು ಇದೇ ಜನವರಿಯಲ್ಲಿ ನಡೆಯಲಿರುವ ೮೦ನೇ ಇಂಡಿಯಾ ದೇಶದ ಕನ್ನಡ ಸಾಹಿತ್ಯ ಕೂಟದ ತಲೆಯಾಳಾಗಿ(president) ಯಿಕೆಯಾಗಿದ್ದಾರೆ.

ಬದುಕಿಗೆ ಮೊದಲಿಟ್ಟಿದ್ದು
ನಾ ಡಿಸೋಜರು ಜನಗೆಲಸಗಳ ಚಾವಡಿಯಲ್ಲಿ (ಪೀಡಬ್ಲಿಯುಡಿ) ಬೆರಳಚ್ಚುಗಾರನಾಗಿ ಉಜ್ಜುಗಕ್ಕೆ ಸೇರಿ, ಆಮೇಲೆ ಅಲ್ಲಿಯೇ ಕಾರಕೂನನಾಗಿ ಶರಾವತಿ ಹಮ್ಮುಗೆ(project), ಕಾರ್ಗಲ್, ಮಾಸ್ತ್ತಿಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕೆಲಸ ಮಾಡಿದರು. ಜನಗೆಲಸಗಳ ಚಾವಡಿಯು ಕೈಗೊಂಡಿದ್ದ ಅಣೆಕಟ್ಟು ಹಮ್ಮುಗೆಗಳಲ್ಲ್ಲಿ ಮುಳುಗಡೆಯಾದ ಊರುಗಳ ಉಸಿರುಗಳು ಚಡಪಡಿಸಿದ ಪರಿಯನ್ನು ತಮ್ಮ ಲೆಕ್ಕಣಿಯಲ್ಲಿ ಪಡಿಮೂಡಿಸಿ ಬರೆದರು. ನಾಡಿಗೆ ಬೆಳಕನ್ನು ನೀಡಲು ಮೊದಲಿಟ್ಟ ಮಿನ್ಬಲ ಹಮ್ಮುಗೆಗಾಗಿ (ವಿದ್ಯುಚ್ಛಕ್ತಿ ಯೋಜನೆ) ಎಷ್ಟೋ ಜನರ ಹದುಳವಾದ ಬದುಕನ್ನು ಮೂರಾಬಟ್ಟೆಯಾಗಿಸಿದ್ದನ್ನು ಹೇಳುವಮುಳುಗಡೆಎಂಬ ನೀಳ್ಗತೆಯು ಸುಧಾ ಯುಗಾದಿ ಕಾದಂಬರಿ ಪೋಟಿಯಲ್ಲಿ ಬೋಮಾನ ಪಡೆಯಿತು. ಅದೇ ಸರಕುಳ್ಳದ್ವೀಪನೀಳ್ಗತೆಯು ಓಡುಚಿತ್ತಾರವಾಗಿ ಹೊಂದಾವರೆಯನ್ನು ಮುಡಿಗೇರಿಸಿತು.
ಹಸಿರೇ ಉಸಿರೆನ್ನುವ ಕತೆಗಾರ ನಾ ಡಿಸೋಜರು ತಮ್ಮೆಲ್ಲ ಬರಹಗಳಲ್ಲಿ ಹಸಿರುಳಿಸುವ ಬಗ್ಗೆ ಎಚ್ಚರಿಸುತ್ತ ಬಂದಿದ್ದು ಹಸಿರಿನ ಅಳಿವೇ ಮಂದಿಯ ಅಳಿವು ಎಂಬುದನ್ನು ಮತ್ತೆ ಮತ್ತೆ ತೋರಿದ್ದಾರೆ. ಕನ್ನಡ ನುಡಿಸಿರಿಯಲ್ಲಿ ಮಕ್ಕಳಿಗಾಗಿಯೇ ಬಹಳಷ್ಟು ಬರಹಗಳನ್ನು ಬರೆದಿರುವ ಡಿಸೋಜರು ಮಕ್ಕಳ ಮೆಚ್ಚಿನ ಕತೆಗಾರನಾಗಿದ್ದಾರೆ.

ಕತೆ ಕಾದಂಬರಿ
ನಾ ಡಿಸೋಜ ಅವರ ಕತೆಗಳ ಬೇಸಾಯವು ಪ್ರಪಂಚ ಪತ್ರಿಕೆಯಲ್ಲಿ ಮೊದಲ ಫಸಲು ಬಿಟ್ಟಿತು. ಇಂದು ನಾಡಿನ ಎಲ್ಲ ಸುದ್ದಿಹಾಳೆಗಳು ಡಿಸೋಜರಿಗೆ ಕತೆ ಬರೆದುಕೊಡಿ ಎಂದು ಕೇಳುವಷ್ಟು ಜನಮೆಚ್ಚುಗೆ ಅವರ ಹಿರಿಮೆ. ಹಿಂದೊಮ್ಮೆ ಅವರ ಇಪ್ಪತ್ತೈದು ಸಣ್ಣ ಕತೆಗಳ ಗೊಂಚಲು ಬೆಳಕುಕಂಡಿತ್ತು. ಇದೀಗ ಸಾಗರ ಪ್ರಕಾಶನದವರು ನಾ ಡಿಸೋಜರ ಎಲ್ಲ ಸಣ್ಣಕತೆಗಳನ್ನು ಕೂಡಿಸಿ ಎರಡು ಹಿರಿಹೊತ್ತಿಗೆಗಳನ್ನು ಹೊರತಂದಿದ್ದಾರೆ. ಡಿಸೋಜ ಅವರ ಹಲವಾರು ಸಣ್ಣಕತೆಗಳು ಕೊಂಕಣಿ, ಮಲಯಾಳಂ, ತೆಲುಗು, ಹಿಂದಿ, ಇಂಗ್ಲಿಷ್ ನುಡಿಗಳಿಗೂ ಮಾರ್ಪಾಟಾಗಿವೆ. ನಾ ಡಿಸೋಜರ ಕತೆಗಳ ಎಣಿಕೆಯೇ ೪೦೦ ಮುಟ್ಟುತ್ತದೆಂದರೆ ಅವರ ಲೆಕ್ಕಣಿಯ ಹರಿವು ಎಷ್ಟು ಸರಾಗ ಎಂದು ಊಹಿಸಬಹುದು.
ಡಿಸೋಜರ ಮೊದಲ ಕಾದಂಬರಿಬಂಜೆ ಬೆಂಕಿ೧೯೬೪ರಲ್ಲಿ ಬೆಳಕಿಗೆ ಬಂತು. ಹಸಿರಿನಳಿವು, ಕ್ರಿಸ್ತುವ ಮಂದಿಯ ನಡೆನುಡಿ, ಕಳ್ಳ ಸಂಪಾದನೆ, ಹಿಂದುಳಿದ ಬುಡಕಟ್ಟು ಜನರ ಬದುಕು ಹೀಗೆ ಹಲವು ಹತ್ತು ಚಿತ್ತಾರಗಳನ್ನೊಳಗೊಂಡ ಅವರ ೮೦ಕ್ಕೂ ಮಿಗಿಲಾದ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ. ಸುರೇಶ್ ಹೆಬ್ಳೀಕರ್ ಅವರ ತೋರುದಾರಿ(direction)ಯಲ್ಲಿಕಾಡಿನ ಬೆಂಕಿ’, ಗಿರೀಶ್ ಕಾಸರವಳ್ಳಿಯವರ ತೋರುದಾರಿಯಲ್ಲಿದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ತೋರುದಾರಿಯಲ್ಲಿಬಳುವಳಿ’, ಕೋಡ್ಲು ರಾಮಕೃಷ್ಣರವರ ತೋರುದಾರಿಯಲ್ಲಿಬೆಟ್ಟದಪುರದ ದಿಟ್ಟಮಕ್ಕಳುಮತ್ತು ಮನುರವರ ತೋರುದಾರಿಯಲ್ಲಿಆಂತರ್ಯಕಾದಂಬರಿಗಳು ಓಡುಚಿತ್ತಾರಗಳಾಗಿಯೂ ಜಮೆಚ್ಚುಗೆಯನ್ನು ಪಡೆದಿವೆ. ದ್ವೀಪ ಕಾದಂಬರಿಯು ಐಲ್ಯಾಂಡ್ ಎಂಬ ಹೆಸರಿನಲ್ಲಿ ಇಂಗ್ಲಿಶಿಗೆ ಹೋಗಿ ಆಕ್ಸ್ಫರ್ಡ್ ಓದುಮನೆಯ ಅಚ್ಚುಗೂಡಿನ ಮೂಲಕ ಬೆಳಕು ಕಂಡಿದೆ.
ಕುವೆಂಪು ಓದುಮನೆ, ಬೆಂಗಳೂರು ಓದುಮನೆ, ಮಂಗಳೂರು ಓದುಮನೆ ಮತ್ತು ಕರ್ನಾಟಕ ಓದುಮನೆಗಳಲ್ಲಿಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳುಮುಂತಾದ ಕಾದಂಬರಿಗಳು ಕಲಿಕಾಪುಸ್ತಕಗಳಾಗಿ ಅವರ ಬರಹಗಳ ಎತ್ತರಕ್ಕೆ ತೋರುಗನ್ನಡಿಯಾಗಿವೆ. ಹೀಗೆ ಎಲ್ಲರಿಗೂ ಓದನ್ನೇ ಉಣಬಡಿಸಿದ ಡಿಸೋಜರವರ ಎಲ್ಲ ಬರಹಗಳು ಓದುಮನೆಗಳಲ್ಲಿ ಅರಿವಿನ ಹುಡುಕಾಟಕ್ಕೆ ಪಿರಿದಾದ ಸರಕಾಗಿಯೂ ಹೊರಹೊಮ್ಮಿದೆ. ಎಂಫಿಲ್ ಪದವಿಗಾಗಿ ಮದರಾಸು ಓದುಮನೆಯ ಶ್ರೀ ಪ್ರಕಾಶ್ ಸೈಮನ್ರವರುನಾ. ಡಿಸೋಜರವರ ೨೫ ಕತೆಗಳು ಒಂದು ಅಧ್ಯಯನ’ (೧೯೯೫), ಮಧುರೆ ಕಾಮರಾಜ ಓದುಮನೆಯ ಎಂ.ಎಂ. ಮಂಜುನಾಥರವರುನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ - ಒಂದು ಅಧ್ಯಯನ’ (೧೯೯೮), ಕುವೆಂಪು ಓದುಮನೆಯ ಟಿ.ಎಸ್. ಶೈಲಾರವರುನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳು’ (೨೦೦೧) ಮುಂತಾದ ಪೆರ್ಬರಹ(thesis)ಗಳನ್ನು ಬರೆದಿದ್ದಾರೆ. ಕರ್ನಾಟಕ ಓದುಮನೆಯ ಗಂಗಾ ಮೂಲಿಮನಿಯವರುನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನಪೆರ್ಬರಹಕ್ಕೆ ಡಾಕ್ಟರೇಟ್ (೨೦೦೧) ಪಡೆದಿದ್ದಾರೆ.

ಚುರುಕಾದ ಆಳ್ತನ
ನಾ. ಡಿಸೋಜ ಅವರು ಬರವಣಿಗೆ ಮಾತ್ರವಲ್ಲದೆ ಹಸಿರುಳಿಕೆಯ ಜಗ್ಗಾಟಕ್ಕೂ ಟೊಂಕಕಟ್ಟಿ ನಿಂತಿದ್ದಾರೆ. ಇಕ್ಕೇರಿ ಗಣಿಬೇಡ ಹೋರಾಟ, ಅಂಬುತೀರ್ಥದಿಂದ ಅರಬ್ಬೀಸಮುದ್ರದವರೆಗಿನ ಶರಾವತಿ ನಡೆ, ತಾಳಗುಪ್ಪ ಶಿವಮೊಗ್ಗ ಬ್ರಾಡ್ ಗೇಜ್ ಹೋರಾಟ ಮುಂತಾದವುಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೊಂಕಣಿ ಸಾಹಿತ್ಯ ಅಕಾಡೆಮಿ (೧೯೯೫), ಕನ್ನಡ ಪುಸ್ತಕ ಪ್ರಾಧಿಕಾರ (೧೯೯೫), ಕುವೆಂಪು ಓದುಮನೆ ಸೆನೆಟ್ (೧೯೯೬-೯೮), ಹಂಪಿ ಕನ್ನಡ ಓದುಮನೆ ಸೆನೆಟ್ (೧೯೯೩-೯೫; ೧೯೯೬-೯೮), ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್ತು (೧೯೯೬-೯೯), ಕುವೆಂಪು ರಂಗಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆಗಳಲ್ಲಿ ತಾವು ಪಡೆದಿದ್ದಾರೆ.
ಹಲವಾರು ಹಿರಿತನದ ಮರ್ಯಾದೆಗಳು ನಾ ಡಿಸೋಜರನ್ನು ಹುಡುಕಿಕೊಂಡು ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮರ್ಯಾದೆಯು ಎರಡು ಸಲ (೧೯೮೮, ೧೯೯೩) ಇವರ ಮುಡಿಗೇರಿದೆ. ಅಲ್ಲದೆ ಗುಲ್ವಾಡಿ ವೆಂಕಟಾವ್ ಬಾಳ್ಗಳ್ಚು(award)(೧೯೮೮), ಸಂದೇಶ್ ಸಾಹಿತ್ಯ ಬಾಳ್ಗಳ್ಚು(೧೯೯೮), ನಿರಂಜನ ಸಾಹಿತ್ಯ ಬಾಳ್ಗಳ್ಚು(೨೦೦೩), ಆಳ್ವಾಸ್ ನುಡಿಸಿರಿ ಬಾಳ್ಗಳ್ಚು(೨೦೦೬), ವರ್ಧಮಾನ ಬಾಳ್ಗಳ್ಚು(೨೦೦೬), ಚಿತ್ರದುರ್ಗದ ಬೃಹನ್ಮಠದಿಂದ ಶಿವಮೂರ್ತಿ ಮುರುಘಾ ಶರಣ ಬಾಳ್ಗಳ್ಚು(೨೦೧೧), ಕೇಂದ್ರಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಬಾಳ್ಗಳ್ಚು(೨೦೧೧), ಮಾಸ್ತಿ ಬಾಳ್ಗಳ್ಚು(೨೦೧೨), ಭಟ್ಕಳ ತಾಲ್ಲೂಕು ಎರಡನೇ ಸಾಹಿತ್ಯ ಸಮ್ಮೇಳ ಹಿರಿಪದ (೨೦೦೬), ಬೊಂಬಾಯಿಯ ಇಡೀ ಇಂಡಿಯಾ ಸಂಸ್ಕೃತಿ ಸಮ್ಮೇಳನದ ಹಿರಿಪದ (೨೦೦೬), ಕನ್ನಡ ದೇಶೋತ್ಸವ ಬಾಳ್ಗಳ್ಚು(೧೯೯೭), ಮತ್ತು ಕುವೆಂಪು ಓದುಮನೆ ಗವುರವ ಡಾಕ್ಟರೇಟ್ (೨೦೦೭) ಮುಂತಾದ ಹೊನ್ನಿನ ಗರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ನಾ. ಡಿಸೋಜರವರಿಗೆ ಒಳಿತಾಗಲಿ.

ನಾ ಡಿಸೋಜರ ಬಗೆಗೆ ಮತ್ತಷ್ಟು ತಿಳಿಯಬೇಕೆನ್ನುವವರು ಹೊತ್ತಿಗೆಗಳನ್ನು ನೋಡಬಹುದು. ಸಾಗರದ ವಿಲಿಯಂ ಅವರು ಬರೆದಿರುವ "ನಾ. ಡಿಸೋಜ ಬದುಕು ಬರಹ", ಸರ್ಪರಾಜ ಚಂದ್ರಗುತ್ತಿಯವರು ಬರೆದಿರುವ "ನಾ. ಡಿಸೋಜ ಎಂಬ ಶರಾವತಿಯ ನಾಲ್ಕು ಜಲಧಾರೆಗಳು", "ಮಲೆನಾಡಿಗ" ಡಾ. ನಾ. ಡಿಸೋಜ ಸಾಹಿತ್ಯ ಕುರಿತ ಚಿಂತನ ಮಂಥನ ಹಾಗೂ "ಬುತ್ತಿ" ನಾ. ಡಿಸೋಜರ ಬದುಕಿನ ಒಳ ನೋಟಗಳು.