ಶುಕ್ರವಾರ, ಡಿಸೆಂಬರ್ 17, 2010

ಬಾಲ್ಯದ ನೆನಪು

ಅದು ಎಪ್ಪತ್ತರ ದಶಕ. ನಾನು ಮಾಧ್ಯಮಿಕ ಶಾಲಾದಿನಗಳ ರಜಾದ ಮಜಾದಲ್ಲಿದ್ದೆ. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯ ಗಂಟೆ ಗೋಪುರದ ಬಳಿಯೇ ನಮ್ಮ ಮನೆಯಿತ್ತು. ಬದಿಯಲ್ಲಿಯೇ ಇದ್ದ ಸಂತ ರಾಯಪ್ಪರ ಗುರುಮಠಕ್ಕೂ ಹೊಕ್ಕು ಬಳಕೆ ನಮಗೆ ಸಲೀಸಾಗಿತ್ತು. ನನ್ನ ಬಾಲ್ಯವೆಲ್ಲ ಕ್ರಿಸ್ತರಾಜರ ದೇವಾಲಯದಿಂದ ಹಿಡಿದು ನಿರ್ಮಲರಾಣಿ ಶಾಲೆಯವರೆಗಿನ ಇಂದಿನ ಕ್ಲರೇಷಿಯನ್ ಮತ್ತು ಎಂಎಸ್‌ಎಫ್‌ಎಸ್ ಸೆಮಿನರಿಗಳವರೆಗೆ ಮಾತ್ರವಲ್ಲ ಸೆಂಟ್ ತೆರೇಸಾಸ್ ಸ್ಯಾನಿಟೋರಿಯಂ ಎಂಬ ಗುಟ್ಟೆ ಆಸ್ಪತ್ರೆವರೆಗಿನ ಪ್ರದೇಶದಲ್ಲಿ ಆಡಾಡುತ್ತಾ ಕಳೆದಿತ್ತು.
ಈ ಒಂದು ನೆನಪಿನ ಬುತ್ತಿಯಿಂದ ಸಣ್ಣ ತುಣುಕೊಂದನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ನಾನು ಪೆನ್ವೆನ್ ಸ್ವಾಮಿಯವರ ಕೊಠಡಿಯ ಬಳಿ ಅಡ್ಡಾಡುತ್ತಿದ್ದಾಗ ಮೇಲುಗಡೆಯ ಕೊಠಡಿಯೊಂದರಿಂದ ಯಾರೋ ನನ್ನನ್ನು ಕರೆದಂತಾಯಿತು. ತಲೆಯೆತ್ತಿ ನೋಡಿದಾಗ ಅದು ಆಗಷ್ಟೇ ಯಾಜಕ ಪದವಿ ಪಡೆದು ರೂಮು ತೆರವು ಮಾಡುತ್ತಿದ್ದ ಯುವ ಬ್ರದರ್ (ಅಲ್ಲ ಫಾದರ್) ಒಬ್ಬರು ನನ್ನನ್ನು ಕರೆಯುತ್ತಿದ್ದುದು ಕಾಣಿಸಿತು. ಅವರು ತಮ್ಮ ಕೊಠಡಿಯಲ್ಲಿನ ಹಳೆಯಪಳೆಯ ವಸ್ತುಗಳನ್ನು ಎಸೆಯುತ್ತಾ ತಮ್ಮ ಬಟ್ಟೆಬರೆ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಾ ತಮ್ಮ ಸೆಮಿನರಿ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದರು. ಆ ಕೆಲಸಕ್ಕೆ ಸಹಾಯ ಮಾಡಲು ಅವರು ನನ್ನನ್ನು ಕೇಳಿಕೊಂಡಾಗ ತುಂಬಾ ಸಂತಸದಿಂದ ಹೂಂಗುಟ್ಟಿದೆ. ನಗುಮುಖದ ಯುವಪಾದ್ರಿಗಳು ಸಹಾಯಕ್ಕೆ ಕರೆದಾಗ ಉತ್ಸಾಹದಿಂದ ಮುಂದಾಗುವುದು ನನಗೆ ಸಹಜವಾಗಿತ್ತು.
ಅವರ ಕೋಣೆಯಲ್ಲಿ ಗೋಡೆಗಳ ಮೇಲೆ ಇದ್ದ ಪಟ ಚಿತ್ರ ಇತ್ಯಾದಿಗಳನ್ನು ತೆಗೆದಿದ್ದರಿಂದ ಕೋಣೆ ಬಿಕೋ ಅನ್ನುತ್ತಿತ್ತು. ಮಂಚಕ್ಕೆ ಕಟ್ಟಿದ್ದ ಸೊಳ್ಳೆಪರದೆ ಬೆಡ್ ಶೀಟು ಮುಂತಾದವುಗಳನ್ನು ತೆಗೆದುಬಿಟ್ಟಿದ್ದರಿಂದ ಅಲ್ಲಿದ್ದ ಹಾಸಿಗೆ ನಿರಾಭರಣ ಸುಂದರಿಯಂತಿತ್ತು. ಹರಿದ ನ್ಯೂಸ್ ಪೇಪರುಗಳು ಬಿಡಿಗೂದಲುಗಳು ಧೂಳಿನೊಂದಿಗೆ ನೆಲದಲ್ಲಿ ಆಟವಾಡುತ್ತಿದ್ದವು. ಕಿಟಕಿಯ ಬಳಿ ಜೋಡಿಸಿದ್ದ ಬಾಚಣಿಗೆಯನ್ನು ನಾನು ಅಲ್ಲಿಂದಲೇ ಹೊರಕ್ಕೆಸೆದಾಗ ಸಣ್ಣಗೆ ಗದರಿದ ಅವರು ಅಲ್ಲಿಂದೇನನ್ನೂ ಕೆಳಗೆ ಹಾಕಬಾರದೆಂದೂ ಬುಟ್ಟಿಯಲ್ಲಿ ತುಂಬಿಕೊಂಡು ಮೆಟ್ಟಿಲಿಳಿದು ಕೆಳಗಿಹೋಗಿ ಕಸದ ರಾಶಿಗೆ ಸುರಿದುಬರುವಂತೆಯೂ ಹೇಳಿದರು. ಹಾಗೆ ನಾನು ಬಹಳಷ್ಟು ವಸ್ತುಗಳನ್ನು ಕಸದರಾಶಿಗೆ ಚೆಲ್ಲಿಬಂದೆ. ಕಿಟಕಿ ಬಳಿಯಲ್ಲಿ ಅವರು ಸಾಲಾಗಿ ಇಟ್ಟಿದ್ದ ಬ್ಲೇಡುಗಳಲ್ಲಿ ಹೊಳಪಿದ್ದ ಒಂದನ್ನು ಮೆಲ್ಲಗೆ ಎತ್ತಿಕೊಂಡು ಅಂಗಿಯ ಕಿಸೆಯಲ್ಲಿಟ್ಟುಕೊಂಡೆ, ಪೆನ್ಸಿಲ್ ಹೆರೆಯುವದಕ್ಕೆ ತುಂಬಾ ಚೆಂದವಾಗಿ ತೋರಿದ್ದ ಅದು ನನ್ನ ಮಿತ್ರರೆದುರಲ್ಲಿ ನನಗೆ ತುಂಬಾ ಹೆಮ್ಮೆ ತಂದುಕೊಡುವ ಸಾಧನವಾದೀತೆಂಬ ಆತ್ಮವಿಶ್ವಾಸ ನನ್ನ ಎದೆಯುಬ್ಬಿಸಿತ್ತು.
ಈ ಒಂದು ಸಂದರ್ಭದಲ್ಲೇ ಒಂದೇ ಶೀರ್ಷಿಕೆಯ ಹಲವಾರು ಪುಸ್ತಕಗಳನ್ನು ಒಟ್ಟಿಗೆ ಕಟ್ಟಿಡಲಾಗಿದ್ದ ಒಂದು ಪುಸ್ತಕದ ಕಟ್ಟು ಕಾಣಿಸಿತು. ಕುತೂಹಲದಿಂದ ಅದರ ಶೀರ್ಷಿಕೆ ಓದಿದೆ. ಅದು ಬಿಳಿ ಹೊದಿಕೆಯ ಮೇಲೆ ಅಚ್ಚ ಕೆಂಪು ಅಕ್ಷರಗಳಲ್ಲಿ ಮುದ್ರಿತವಾಗಿತ್ತು. ಅದರ ಹೆಸರು ಕ್ರೈಸ್ತಗುರು ಕೊಲೆಗಾರರೇ?’ ಎಂಬುದು ನನ್ನ ನೆನಪು. ಮುಂದೆ ಎಷ್ಟೋ ವರ್ಷಗಳ ಕಾಲ ಆ ಯುವಪಾದ್ರಿಯ ಮುಖದೊಂದಿಗೆ ಇತರರ ಮುಖಗಳನ್ನು ಹೋಲಿಸಿಕೊಂಡು ನನ್ನ ನೆನಪನ್ನು ಬ್ರಷ್ ಮಾಡಿಕೊಂಡದ್ದೂ ಉಂಟು. ಡಿಸೆಂಬರ್ ಚಳಿಗೆ ನನ್ನ ಮುಂಬೆರಳ ತುದಿ ಹಿಂಡಿದಾಗಲೆಲ್ಲ ಆ ನನ್ನ ಬಾಲ್ಯದ ಹೊಳಪಿನ ಬ್ಲೇಡಿನ ನೆನಪೂ ಕಾಡುತ್ತದೆ.

ಗುರುವಾರ, ನವೆಂಬರ್ 11, 2010

Bengaluru ಎಂದು ಬರೆಯೋಣ

ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ ಇದು ಚಲಾವಣೆಯಲ್ಲಿದೆ.

ಈಗ ಬೆಂಗಳೂರನ್ನು ಬೆಂಗಳೂರೆಂದೇ ಕರೆಯೋಣವೆಂಬ ಕೂಗು ಎದ್ದಿದೆ. ಆದರೆ ಜನಮಾನಸದ ಚಟವನ್ನು ಅಷ್ಟು ಸುಲಭದಲ್ಲಿ ಹೋಗಲಾಡಿಸಲಾದೀತೇ?

ಬೆಂಗಳೂರನ್ನು ಬೆಂಗಳೂರೆಂದು ಉಚ್ಚರಿಸುವ, ಬರೆಯುವ ಹಾಗೂ ಬೇರೆಯವರಿಂದ ಹಾಗೆ ಹೇಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಕಲ್ಪನೆಗೂ ಮೀರಿದ ಇಚ್ಛಾಶಕ್ತಿ ಹಾಗೂ ಪ್ರೇರಣೆಗಳ ಅಗತ್ಯವಿದೆ. ಈಗಾಗಲೇ NDTV ಯವರು BENGALURU ಪದದ ಬಳಕೆಯನ್ನು ತಮ್ಮ ಟಿವಿ ವಾಹಿನಿಯಲ್ಲಿ ತಂದುಬಿಟ್ಟಿದ್ದಾರೆ. www.map.google.com ನಲ್ಲಿ BENGALURU ಎಂದು ಟೈಪಿಸಿದರೆ ಅದು ಸ್ವೀಕರಿಸುತ್ತದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೆಸೆಯಿಂದ ಇಂದು ಹಲವಾರು ವಿಮಾನಯಾನ ಸಂಸ್ಥೆಗಳು BENGALURU ಎಂದು ಬಳಸಲಾರಂಭಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಪೊಲೀಸು ಇಲಾಖೆ ಸೇರಿದಂತೆ ಹಲವರು ಸ್ವಯಂಪ್ರೇರಣೆಯಿಂದ ತಮ್ಮ ನಾಮಫಲಕಗಳಲ್ಲಿ ಹಾಗೂ ವಿಳಾಸಗಳಲ್ಲಿ BENGALURU ಎಂಬುದಾಗಿ ಬಳಸುತ್ತಿದ್ದಾರೆ. ಸರ್ಕಾರದ ಆದೇಶ ಬರುವವರೆಗೂ ಕಾಯದೆ ಈಗಿಂದೀಗಲೇ ನಾವೆಲ್ಲ ಬೆಂಗಳೂರನ್ನು ‘ಬೆಂಗಳೂರು’ ಎಂದು ಕರೆಯುವ, ಬರೆಯುವ ಹಾಗೂ ತಿದ್ದುವ ಪ್ರಯತ್ನದಲ್ಲಿ ತೊಡಗೋಣ.

ನಮ್ಮೆಲ್ಲ ಪತ್ರಗಳು, ಲೇಖನಗಳು, ದಾಖಲೆಗಳು, ದಸ್ತಾವೇಜುಗಳು, ಕರಡಚ್ಚುಗಳು, ನಾಮಫಲಕಗಳು, ಠಸ್ಸೆಗಳು, ಶಿರೋನಾಮೆಗಳು, ವಿಳಾಸಸೂಚಿಗಳು ಇತ್ಯಾದಿಗಳಲ್ಲೆಲ್ಲ Bangalore ಅನ್ನು BENGALURU ಆಗಿ ಬದಲಾಯಿಸುವ ಕೆಲಸಕ್ಕೆ ಇಂದೇ ಚಾಲನೆ ನೀಡೋಣ.

ಶುಕ್ರವಾರ, ನವೆಂಬರ್ 5, 2010

ದೇವರು ನಕ್ಕುಬಿಟ್ಟ

ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.
ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ, ಒಂಟೆಯು ಸೂಜಿಯ ಕಣ್ಣೊಳಗೆ ಪ್ರವೇಶಿಸುವಂತೆ.


ಮಂಗಳವಾರ, ನವೆಂಬರ್ 2, 2010

ಗಿಬ್ರಾನನ ಜೀಸಸ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ"
           
ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್‌ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನುಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಆ ಎಪ್ಪತ್ತು ವ್ಯಕ್ತಿಗಳು ಜುದಾಸನಾಗಿ, ಪಿಲಾತನಾಗಿ, ಪೇತ್ರನಾಗಿ, ಮಗ್ದಲದ ಮರಿಯಳಾಗಿ ಮೈದಳೆದಿದ್ದಾರೆ. ಆದರೆ ಗ್ರಮಥದ ಕೊನೆಯಲ್ಲಿನ ನೀಳ್ಗವನದಲ್ಲಿ ಗಿಬ್ರಾನ್ ತಾನೇ ತಾನಾಗಿ ಮೂಡಿ ಬಂದಿದ್ದಾನೆ. ಹತ್ತೊಂಬತ್ತು ಶತಮಾನಗಳ ನಂತರ ಎಂದು ಹೇಳಿದ್ದರೂ ಎಪ್ಪತ್ತು ಜೊತೆ ಕಣ್ಣುಗಳ ಮೂಲಕ ಯೇಸುವಿನ ವಿಶ್ವರೂಪವನ್ನು ಕಂಡ ಭಾಗ್ಯಶಾಲಿ ಗಿಬ್ರಾನ್.

ಕ್ರಿಸ್ತಶಕ ೧೮೮೩ರಲ್ಲಿ ಲೆಬನಾನ್‌ನಲ್ಲಿ ಹುಟ್ಟಿದ ಗಿಬ್ರಾನ್ ಬಹುಶಃ ತನ್ನ ೩೫-೪೦ನೇ ವಯಸ್ಸಿನಲ್ಲಿ ಭ್ರಾಮಕ ಸ್ಥಿತಿಯಲ್ಲಿ ಯೇಸುವಿನ ಜೀವನ ಕಥನವನ್ನು ಕಣ್ಣಾರೆ ಕಂಡವನಂತೆ ಬಣ್ಣಿಸುತ್ತಾ ಇರುವಾಗ್ಗೆ ಆತನ ಗೆಳತಿ ಅದನ್ನು  ಬರೆದುಕೊಂಡಳಂತೆ, "ಜೀಸಸ್, ದಿ ಸನ್ ಆಫ್ ಮ್ಯಾನ್" ಎಂಬ ಆ ಪುಸ್ತಕದಲ್ಲಿ ಯೇಸುವಿನ ಜನನದಿಂದ ಮರಣದವರೆಗಿನ ಕಥೆಯು ಅನುಕ್ರಮವಾಗಿ ಮೂಡಿಬರದೆ ಅಲ್ಲಲ್ಲಿ ಕೆದಕಿದಂತೆ ಇರುವುದಾದರೂ ಆ ಪುಸ್ತಕ ಶ್ರೀಯೇಸುವನ್ನು ಕುರಿತ ಸಾಂಪ್ರದಾಯಿಕ ಕಥಾನಕವನ್ನು ಬದಿಗೊತ್ತಿ ಕ್ರೈಸ್ತ ಪ್ರಪಂಚದಲ್ಲಿ ಹೊಸ ವೈಚಾರಿಕ ತರಂಗಗಳಿಗೆ ಕಾರಣವಾಯಿತು, ಅಷ್ಟೇ ಜನಪ್ರಿಯವೂ ಆಯಿತು.

ಇದರಲ್ಲಿ ಯೇಸುವಿನ ಜೀವನಕಾಲದ ವಿಭಿನ್ನ ಕಾಲಘಟ್ಟದ ವಿಭಿನ್ನ ವ್ಯಕ್ತಿಗಳು ಯೇಸುವಿನ ಜೀವನವನ್ನು ತೆರೆದಿಡುತ್ತಾ ಸಾಗುತ್ತಾರೆ. ಅದು ಹೊಗಳಿಕೆಯಾಗಿರಬಹುದು-ತೆಗಳಿಕೆಯಾಗಿರಬಹುದು, ಅವ್ಯಾಜ ಪ್ರೇಮವಾಗಿರಬಹುದು, ಮಮತೆ ವಾತ್ಸಲ್ಯದ ಆರ್ದ್ರತೆಯಿರಬಹುದು, ಈರ್ಷ್ಯೆಯಿರಬಹುದು-ಸ್ನೇಹವಿರಬಹುದು, ಭಕ್ತಿಯಿರಬಹುದು-ಅಹಮಿಕೆಯಿರಬಹುದು, ಎಲ್ಲ ವಿವರಣೆಯಲ್ಲಿಯೂ ಯೇಸುವನ್ನು ಎಣೆಯಿಲ್ಲದ ಔನ್ನತ್ಯದಲ್ಲಿ ನಿಲ್ಲಿಸುವುದೇ ಗಿಬ್ರಾನನ ತಂತ್ರಗಾರಿಕೆಯಾಗಿದೆ.

ಉದಾಹರಣೆಗೆ ಕೆಲ ತುಣುಕುಗಳನ್ನು ನೋಡೋಣ.
೧.         ಯೇಸುವಿನ ಶಿಷ್ಯ ಲೂಕ ಕೇಳುತ್ತಾನೆ: ಗುರುಗಳೇ, ನೀವು ಪಾಪಿಗಳನ್ನೂ ಬಡಪಾಯಿಗಳನ್ನೂ ಚಂಚಲರನ್ನಷ್ಟೇ ಆದರಿಸಿ, ಡಾಂಭಿಕರನ್ನು ಅಲಕ್ಷಿಸುತ್ತೀರಲ್ಲ? ಅದಕ್ಕೆ ಯೇಸು ಹೇಳುತ್ತಾನೆ ನೀವು ಪಾಪಿಗಳೆಂದು ಕರೆಯುವ ಈ ದುರ್ಬಲರು ಗೂಡಿನಿಂದ ಕೆಳಕ್ಕೆ ಬಿದ್ದ ರೆಕ್ಕೆ ಬಲಿಯದ ಹಕ್ಕಿ ಮರಿಗಳು, ಆದರೆ ಆಷಾಢಭೂತಿಗಳಾದರೋ ಮರಿಹಕ್ಕಿಯ ಮರಣಕ್ಕೆ ಕಾದಿರುವ ರಣಹದ್ದುಗಳು, ದುರ್ಬಲರು ಮರಳುಗಾಡಿನ ನಡುವೆ ಕಳೆದುಹೋದವರು, ಡಂಭಾಚಾರಿಗಳು ತಮ್ಮ ನೆಲೆ ಅರಿತಿದ್ದರೂ ಸುಂಟರಗಾಳಿಯ ನಡುವೆ ತುಂಟಾಟವಾಡುವರು.

೨.         ಪಿಲಾತನ ಆಂತರ್ಯ: ನಾನು ವೇದಿಕೆಯ ಮೇಲೆ ಕುಳಿತಿದ್ದೆ, ಅವನು ನನ್ನೆಡೆಗೆ ಸುದೀರ್ಘ ಹಾಗೂ ಸುನಿಶ್ಚಿತ ಹೆಜ್ಜೆ ಹಾಕುತ್ತಾ ನಡೆದು ಬಂದ, ಬಳಿಕ ಅನು ಸ್ಥೈರ್ಯದಿಂದ ನಿಂತುಕೊಂಡು ಮುಖವನ್ನು ಮೇಲಕ್ಕೆತ್ತಿದ, ಆ ಕ್ಷಣಕ್ಕೆ ನನಗೇನಾಯಿತೋ ನನಗೇ ತಿಳಿಯದಾಯಿತು. ಆದರೆ ನಾನು ನನ್ನ ಆಸನವನ್ನು ಬಿಟ್ಟೆದ್ದು ಅವನೆಡೆಗೆ ಹೋಗಿ ಅನವ ಪಾದದಡಿ ಬೀಳಬೇಕೆಮದು ನನ್ನ ಇಚ್ಛೆ ಅಲ್ಲದಿದ್ದರೂ ನನಗೆ ಆಸೆಯಾಯಿತು. ಒಬ್ಬ ಗ್ರೀಕ್ ತತ್ವಜ್ಞಾನಿಯು 'ಏಕಾಕಿಯೇ ಸಮರ್ಥತಮ ನಾಯಕ' ಎಂದು ಹೇಳಿದ್ದನ್ನು ನಾನು ಓದಿದ್ದು ನನ್ನ ನೆನಪಿಗೆ ಬಂತು.

೩.         ಮಗ್ದಲದ ಮರಿಯಳ ಮನದ ತುಮುಲ: ಗೆಳೆಯಾ ಕೇಳಿಲ್ಲಿ, ನಾನು ಸತ್ತಂತೆಯೇ ಇದ್ದೆ, ಆತ್ಮದಿಂದ ಪರಿತ್ಯಕ್ತಳಾದ ಹೆಣ್ಣಾಗಿದ್ದೆ, ಎಲ್ಲರಿಗೂ ಸೇರಿದವಳಾಗಿದ್ದರೂ ಯಾರಿಗೂ ಬೇಡದವಳಾಗಿದ್ದೆ, ವೇಶ್ಯೆಯೆಂದೇ ನನ್ನನ್ನು ಕರೆಯುತ್ತಿದ್ದರು.
ನಾನು ಅವನತ್ತ ನೋಡಿದೆ. ನನ್ನ ಆತ್ಮವು ಒಳಗೊಳಗೆಯೇ ನಡುಗಿಬಿಟ್ಟಿತು. ನನ್ನ ಮನದ ಬಾಂದಳದ ದಿಗಂತದಿಗಂತವೆಲ್ಲವೂ ಆತನ ಬರುವಿಕೆಗಾಗಿಯೇ ಕಾದಿತ್ತು. ಅವನಿಗೆ ನಾನೆಂದೆ 'ನೀನು ನನ್ನ ಮನೆಗೆ ಬರುವುದಿಲ್ಲವೇ?' ಅವನೆಂದ 'ಈಗಾಗಲೇ ನಾನು ನಿನ್ನ ಮನೆಯೊಳಗಿಲ್ಲವೇ?' ಆತ ಆಡಿದ ಮಾತು ಆಗ ನನಗೆ ಅರ್ಥವಾಗಲಿಲ್ಲ, ಆದರೆ ಈಗ ಅದರರ್ಥವನ್ನು ನಾನು ಬಲ್ಲೆ.
ಅವನು ನನ್ನ ಕಣ್ಣಲ್ಲಿ ಬೆಳಗುಕಂಗಳಿಂದ ನೋಡುತ್ತಾ ಹೇಳಿದ 'ನಿನಗೆ ಅನೇಕ ಪ್ರೇಮಿಗಳಿದ್ದಾರೆ ಆದರೂ ನಾನೊಬ್ಬ ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ, ಇತರರು ನಿನ್ನ ಸನಿಹದಲ್ಲಿ ತಮ್ಮನ್ನೇ ಪ್ರೀತಿಸಿಕೊಳ್ಳುತ್ತಾರೆ, ನಾನು ಮಾತ್ರ ನಿನ್ನೊಳಗಿನ ನಿನ್ನನ್ನು ಪ್ರೀತಿಸುತ್ತೇನೆ, ಉಳಿದವರು ಅವರ ಆಯುಷ್ಯದೊಂದಿಗೆ ಅಳಿದುಹೋಗುವ ನಿನ್ನ ಚೆಲುವನ್ನು ಮಾತ್ರ ಕಂಡರೆ ನಾನು ಮಾತ್ರ ನಿನ್ನಲ್ಲಿ ಬಾಡದ ಚೆಲುವನ್ನು ಕಾಣುತ್ತೇನೆ, ನಿನ್ನ ಬದುಕಿನ ಶಿಶಿರ ಕಾಲದಲ್ಲಿ ಆ ಚೆಲುವು ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಅಳುಕುವುದಿಲ್ಲ, ಎಲ್ಲರೂ ತಮಗಾಗಿ ನಿನ್ನನ್ನು ಪ್ರೀತಿಸುತ್ತಾರೆ, ನಾನು ನಿನಗಾಗಿ ಮಾತ್ರವೇ ನಿನ್ನನ್ನು ಪ್ರೀತಿಸುವೆ' ಎಂದು ಹೇಳಿ ಆತ ಹೊರಟುಹೋದ. ಆತ ಹೊರಟು ನಡೆದಂತೆ ಇನ್ನಾವ ಪುರುಷನೂ ನನ್ನಿಂದ ನಡೆದುಹೋಗಲಿಲ್ಲ, ನನ್ನ ತೋಟದಲ್ಲಿ ಹುಟ್ಟಿ ಮೂಡಣದೆಡೆಗೆ ಸಾಗಿದ ಉಸಿರೇ ತಾನೆಂಬಂತೆ, ಎಲ್ಲದರ ಅಡಿಗಲ್ಲುಗಳನ್ನು ಅಲುಗಾಡಿಸಿಬಿಡುವ ಬಿರುಗಾಳಿಯಂತೆ, ನನ್ನೊಳಡಗಿದ್ದ ಪೈಶಾಚೀ ಘಟಸರ್ಪವನ್ನು ಅವನ ಕಂಗಳ ಸೂರ್ಯಾಸ್ತವು ಕೊಂದುಬಿಟ್ಟಿತ್ತು. ಅಂದೇ ನಾನು ಸ್ತ್ರೀಯಾದೆ, ಮಗ್ದಲದ ಮರಿಯಳಾದೆ'

೪.         ಗಲಿಲೇಯದ ಒಬ್ಬ ವಿಧವೆ: ನನ್ನ ಚೊಚ್ಚಲ ಒಬ್ಬನೇ ಮಗ ಯೇಸುವಿನ ಬೋಧನೆಯನ್ನು ಕೇಳುವವರೆಗೆ ಹೊಲದಲ್ಲಿ ಗೆಯ್ಮೆ ಮಾಡುತ್ತಾ ತೃಪ್ತಿಯಿಂದಲೇ ಇದ್ದ. ಯೇಸುವನ್ನು ಕಂಡಿದ್ದೇ ನನ್ನ ಮಗ ಬೇರೆಯೇ ಆಗಿಬಿಟ್ಟ. ಯಾವುದೋ ಆತ್ಮವನ್ನು ಆವಾಹಿಸಿದವನಂತೆ, ಹೊಲ ತೋಟಗಳನ್ನಷ್ಟೇ ಅಲ್ಲ ನನ್ನ ಯೋಚನೆಯನ್ನೂ ಬಿಟ್ಟುಬಿಟ್ಟ. ನಜರೇತಿನ ಆ ಯೇಸು ಒಬ್ಬ ಪಾಪಿ; ಏಕೆಂದರೆ ಒಳ್ಳೇ ಜನರು ತಾಯಿಯಿಂದ ಮಗನನ್ನು ಅಗಲಿಸುವರೇ? ಈ ಮನುಷ್ಯರು ಯೇಸುವನ್ನು ಹಿಡಿದು ಶಿಲುಬೆಗೇರಿಸಿ ಒಳ್ಳೆಯದನ್ನೇ ಮಾಡಿದರು. 'ನನ್ನ ನುಡಿಗಳನ್ನು ಕೇಳುವವರೂ, ನನ್ನನ್ನು ಹಿಂಬಾಲಿಸುವವರೂ ನನ್ನ ಬಂಧುಗಳು, ನನ್ನ ತಂದೆತಾಯಿಗಳು' ಎಂದಿದ್ದನಂತೆ. ಆದರೆ ಅವನ ಬೆಂಬತ್ತಿ ಹೋಗಲೆಂದು ಮಕ್ಕಳು ತಮ್ಮ ತಾಯಂದಿರನ್ನು ಏಕೆ ತೊರೆಯಬೇಕು?

ಹೀಗೆ ಗಿಬ್ರಾನನು ಪವಿತ್ರ ಬೈಬಲ್‌ನಲ್ಲಿ ಕಾಣದ ಎಷ್ಟೋ ಪ್ರಸಂಗಗಳನ್ನು ತನ್ನ ಒಳಗಣ್ಣಿಂದ ಹೆಕ್ಕಿ ತೆಗೆದು ಮತ್ತಷ್ಟು ಧ್ವನಿಪೂರ್ಣವಾಗಿ ತನ್ನದೇ ಚಿರಂತನವಾದ ಉಪಮೆಗಳಿಂದ ಅಲಂಕರಿಸಿ ಮನುಕುಲದ ಗದ್ಯಸಾಹಿತ್ಯಕ್ಕೆ ಮೇರುಕೃತಿಯನ್ನು ಕೊಡಮಾಡಿದ್ದಾನೆ.

ಜುದಾಸ ಮತ್ತು ಯೇಸುವಿನ ತುಲನೆಯನ್ನು ಗಿಬ್ರಾನನು ಎರಡೇ ವಾಕ್ಯಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ ನೋಡಿ :
"ಒಬ್ಬ ಮನುಷ್ಯ ತಾನು ರಾಜಕುಮಾರನಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ
ಇನ್ನೊಬ್ಬ ಮನುಷ್ಯ ಎಲ್ಲಾ ಮನುಷ್ಯರೂ ರಾಜಕುಮಾರರಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ"

ಒಟ್ಟಿನಲ್ಲಿ ಕಹ್‌ಲಿಲ್ ಗಿಬ್ರಾನನ "ಜೀಸಸ್" (Jesus, the son of Man) ಹೊಸಒಡಂಬಡಿಕೆಯ ನಂತರದ ಮಹತ್ತರ ದೃಶ್ಯಕಾವ್ಯವೆಂದು ಹೇಳಬಹುದು.

ಕ್ರಿಸ್ತಶಕ ೧೯೫೫ರಲ್ಲಿ ಶ್ರೀಯುತರಾದ ದೇಸಾಯಿ ದತ್ತಮೂರ್ತಿ (ದೇವದತ್ತ) ಅವರು ಇದನ್ನು ಕನ್ನಡಿಸಿ ಧಾರವಾಡದ ಮಿಂಚಿನಬಳ್ಳಿ ಚಾವಡಿ (ಬುರ್ಲಿ ಬಿಂಧುಮಾಧವರ ಪ್ರಕಾಶನ ಸಂಸ್ಥೆ) ಯ ಮೂಲಕ ಕನ್ನಡಿಗರ ಕೈಗಿತ್ತಿದ್ದಾರೆ. ಅದರ ಮುನ್ನುಡಿಯಲ್ಲಿ ವಿನಾಯಕ ಕೃಷ್ಣ ಗೋಕಾಕರು 'ಓರ್ವ ಮಹಾಕವಿಯು ಈ ಕೃತಿಯಲ್ಲಿ ಒಂದು ಮಹಾಜೀವನಕ್ಕೆ ತನ್ನ ಹೃದಯದ ಕನ್ನಡಿಯನ್ನು ಎತ್ತಿ ಹಿಡಿದಿದ್ದಾನೆ' ಎಂದು ಗಿಬ್ರಾನನನ್ನು ಹೊಗಳಿದ್ದಾರೆ, ಅಷ್ಟೇ ಮುಕ್ತ ಕಂಠದಿಂದ ದೇವದತ್ತರ ಕನ್ನಡಾನುವಾದವನ್ನು ಶ್ಲಾಘಿಸಿದ್ದಾರೆ.

ಪ್ರಭುಶಂಕರ ಅವರು ಗಿಬ್ರಾನನ ಕೃತಿಯನ್ನು ಕಿರುಗಾತ್ರದಲ್ಲಿ ಪರಿಚಯಿಸಿದ್ದಾರೆ. ಕೃತಿಯನ್ನು ಇಡಿಯಾಗಿ ನೀಡಲು ಅವರಿಗೆ ತಮ್ಮದೇ ಆದ ಇತಿಮಿತಿಗಳಿವೆ.

ಚಸರಾ ಮತ್ತು ಎಲ್ಸಿ ನಾಗರಾಜರಿಂದ ಅನುವಾದಗೊಂಡಿರುವ "ಜೀಸಸ್" (ಸಂಚಲನ ಪ್ರಕಾಶನ, ಬೆಂಗಳೂರು, ೧೯೯೬) ಶಬ್ದಸಂಪತ್ತು ಮತ್ತು ಭಾಷಾವೈಪರೀತ್ಯದ ದೃಷ್ಟಿಯಿಂದ ದೇವದತ್ತರಿಗಿಂತ ಬೇರೆಯೇ ಆಗಿ ಕಂಡರೂ ಎರಡೂ ಕೃತಿಗಳ ಸಮರ್ಥ ಅನುವಾದವು ಅವುಗಳನ್ನು ಮೇಲ್ಮಟ್ಟದಲ್ಲೇ ಇರಿಸುತ್ತದೆ. ಕನ್ನಡ ಬಲ್ಲ ಪ್ರತಿಯೊಬ್ಬರೂ ಈ ಕೃತಿಗಳನ್ನು ಓದಿ ಅನುಭವಿಸಬೇಕು.

ಸೋಮವಾರ, ನವೆಂಬರ್ 1, 2010

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೇ?

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?
ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.
ಅದರ ಬದಲು ಜಾಗತಿಕ ವೇದಿಕೆಯಲ್ಲಿ ಸೆಣೆಸಲು ಎಲ್ಲರೂ ಇಂಗ್ಲಿಷನ್ನು ಉಪಭಾಷೆಯಾಗಿ ಕಲಿತರೆ ಒಳ್ಳೆಯದು. ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಇಂಗ್ಲಿಷನ್ನು ಒಂದು ಸಂಪರ್ಕಭಾಷೆಯಾಗಿ ನೆಲೆಗೊಳಿಸುವುದು ಸುಲಭ. ವಿಪರ್ಯಾಸವೆಂದರೆ ಅವುಗಳಲ್ಲಿ ಹಿಂದೀಯನ್ನು ಜಾರಿಗೆ ತರಲಿಕ್ಕಾಗಿ ಅಪಾರ ಹಣ ವ್ಯಯ ಮಾಡಲಾಗುತ್ತಿದೆ. ಕೆಲವೊಮ್ಮೆಯಂತೂ ಹಿಂದೀಯನ್ನು ಬಲವಂತವಾಗಿ ಹೇರಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನೆಲೆಗೊಂಡ ಅಂಥ ಸಂಸ್ಥೆಗಳಲ್ಲಿ ಆಯಾ ರಾಜ್ಯಭಾಷೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹಿಂದೀಯನ್ನು ಬಲವಂತವಾಗಿ ಹೇರಬಾರದು.
ಆದರೆ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಹಿಂದೀ ಭಾಷೆಯೇ ಪ್ರಧಾನ ಎಂಬುದಾಗಿ ಕೆಲ ಮುಟ್ಠಾಳರು ಪ್ರತಿಪಾದಿಸುತ್ತಿದ್ದಾರೆ. ಅವರನ್ನು ಮುಟ್ಠಾಳರು ಎಂದು ಏಕೆ ಕರೆಯುತ್ತಿದ್ದೇನೆ ಎಂದರೆ ಅವರಿಗೆ ಹಿಂದೀ ಕುರಿತ ವಾಸ್ತವತೆಯ ಅರಿವಿಲ್ಲ. ಹಿಂದೀಗಾಗಿ ನೀಡಲಾಗುವ ಪುಡಿಗಾಸಿನ ಎಂಜಲಿಗಾಗಿ ಅವರು ಕನ್ನಡವನ್ನು ಬಲಿಗೊಡುತ್ತಿದ್ದಾರೆ. ಅದೇ ನೇರದಲ್ಲಿ ಅವರು ತಮ್ಮ ಮುಂದಿನ ಪೀಳಿಗೆಗೂ ವಂಚನೆ ಮಾಡುತ್ತಿದ್ದಾರೆ.
ಈ ಸಂಸ್ಥೆಗಳಲ್ಲಿ ನಡೆವ ಹಿಂದೀ ಪಕ್ಷಾಚರಣೆಯನ್ನೇ ನೋಡೋಣ. ಅದರಲ್ಲಿ ಭಾಗವಹಿಸುವವರಾದರೂ ಎಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು ಮಂದಿ. ಪ್ರತಿವರ್ಷವೂ ನೋಟಿಂಗ್ ಅಂಡ್ ಡ್ರಾಫ್ಟಿಂಗ್, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಗಾಯನಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಅದೇ ನಾಲ್ಕೈದು ಮಂದಿ. ಅದರ ಬಹುಮಾನಗಳನ್ನು ಅವರವರೇ ಹಂಚಿಕೊಳ್ಳುತ್ತಾರೆ.

ಕನ್ನಡದಲ್ಲಿ ಓಸಿಆರ್‍

ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ? ಈಗಾಗಲೇ ನವದೆಹಲಿಯ AES ನವರು ಹಳೆಯ ಕನ್ನಡ ಪುಸ್ತಕಗಳನ್ನು ಹೀಗೆಯೇ ಮರುಮುದ್ರಣ ಮಾಡಿದ್ದಾರೆ. ಆದರೆ ಅಚ್ಚಾಗುವ ಮುನ್ನ ಆ ಪುಸ್ತಕದ ಒಡಲಲ್ಲಿ ಏನನ್ನಾದರೂ ತಿದ್ದಬೇಕೆಂದರೆ ಅದು ಸಾಧ್ಯವಿಲ್ಲ.

ಮೈಸೂರು ವಿವಿ ಯವರು ತಮ್ಮ ಇಂಗ್ಲಿಷ್ ಕನ್ನಡ ನಿಘಂಟನ್ನು ಪಿಡಿಎಫ್ ರೂಪದಲ್ಲಿ ನೀಡಿದ್ದಾರೆ.

ಪುಸ್ತಕದ ಪುಟಗಳನ್ನು ನೋಡಿ ತಾನಾಗೇ ಅಕ್ಷರಗಳನ್ನು ಕಂಪೋಸ್ ಮಾಡುತ್ತಂತಲ್ಲ ಒಂದು ತಂತ್ರಾಂಶ, ಅದು ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಿತ್ತು ಅಲ್ಲವೇ? ಇಂಗ್ಲಿಷಿನಲ್ಲಿ ಈಗಾಗಲೇ ಅಂಥದು ಇದೆಯಂತೆ. ಇಂಗ್ಲಿಷಿನಲ್ಲಿ ಬರೇ ೨೬+೨೬ ಅಕ್ಷರಗಳಿರುವುದರಿಂದ ಈ ತಂತ್ರಾಂಶ ಸಾಧ್ಯವಾಗಿದೆಯಂತೆ. ಆದರೆ ಕನ್ನಡದಲ್ಲಿ ಅಕ್ಷರಮಾಲೆ, ಒತ್ತಕ್ಷರ, ಕಾಗುಣಿತ ಎಲ್ಲ ಸೇರಿದರೆ ಅದು ಹತ್ತಿರ ಹತ್ತಿರ ೫೦೦ ಆಗುತ್ತದೆಯಾದ್ದರಿಂದ ಈ ಓಸಿಆರ್‍ (ಆಪ್ಟಿಕಲ್ ಕ್ಯಾರಕ್ಟರ್‍ ರೆಕಗ್ನಿಶನ್) ತಂತ್ರಾಂಶ ಸಾಧ್ಯವಾಗುತ್ತಿಲ್ಲವಂತೆ.

ಹಿಂದೊಮ್ಮೆ ತಾತಾ ವಿಜ್ಞಾನ ಮಂದಿರದ ಇಬ್ಬರು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಂತೆ. ನೋಡಿ http://www.springerlink.com/content/09gn4jx2eqcwk9xy/ ಅಲ್ಲದೆ ಅಡೋಬ್ ನವರಾಗಲೀ, ಮೈಕ್ರೋಸಾಫ್ಟಿನವರಾಗಲೀ ಅಥವಾ ಇನ್ಯಾರಾದರೂ ಈ ಕುರಿತು ತಮ್ಮ ಪ್ರಯತ್ನ ಮುಂದುವರಿಸಿರಬಹುದು. ಆ ಪ್ರಯತ್ನ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.

ಏಕೆಂದರೆ ನಮ್ಮಲ್ಲಿ ನವಕರ್ನಾಟಕದವರ ಜ್ಞಾನವಿಜ್ಞಾನಕೋಶ, ಮೈಸೂರು ವಿಶ್ವವಿದ್ಯಾಲಯದವರ ಕನ್ನಡ ವಿಶ್ವಕೋಶ, ರೈಸರ ಎಪಿಗ್ರಾಫಿಯಾ ಕರ್ನಾಟಿಕಾ, ಕಿಟೆಲರ ನಿಘಂಟು, ಕವಿಗಳ ಸಾರಸ್ವತ ಭಂಡಾರ ಎಲ್ಲವೂ ಪುಸ್ತಕ ರೂಪದಲ್ಲಿದೆ. ಅವನ್ನೆಲ್ಲ ಡಿಜಿಟೈಸ್ ಮಾಡಿ ಅಂತರ್ಜಾಲದಲ್ಲಿ ಊಡಿದರೆ ಎಷ್ಟು ಚೆನ್ನ ಅಲ್ಲವೇ? ಆದ್ದರಿಂದ ಅಂಥಾ ಒಂದು ತಂತ್ರಾಂಶದ ಅಗತ್ಯ ಇಂದು ಎದ್ದು ಕಾಣುತ್ತಿದೆ.

ಶನಿವಾರ, ಆಗಸ್ಟ್ 14, 2010

ಲತೀನ ಕನ್ನಡ ನಿಘಂಟು

೧೯೮೭ರ ಮಾರ್ಚ್ ತಿಂಗಳ ಒಂದು ದಿನ. ಮಲ್ಲೇಶ್ವರದ ಆಟದ ಮೈದಾನದಲ್ಲಿ ಬೆಂಗಳೂರು ಬುಕ್ ಫೇರ್ ಎಂಬ ಮೇಳ ನಡೆದಿತ್ತು. ನಾನು ಸುಮ್ಮನೇ ಕುತೂಹಲಕ್ಕಾಗಿ ಎಂದು ಅಲ್ಲಿಗೆ ತೆರಳಿದ್ದವನು ಕಣ್ಣಾಡಿಸುತ್ತಿರುವಾಗ ನವದೆಹಲಿಯ ಏಶಿಯನ್ ಎಜುಕೇಷನಲ್ ಸರ್ವಿಸಸ್ ಎಂಬ ಹೆಸರಿನ ಒಂದು ಪುಸ್ತಕ ಮಳಿಗೆಯಲ್ಲಿ ಕನ್ನಡ ಶೀರ್ಷಿಕೆಯ ಪುಸ್ತಕಗಳನ್ನು ಕಂಡು ಸೋಜಿಗದಿಂದ ಒಳಹೊಕ್ಕೆ. ಬುಚರ್ ಎಂಬುವನು ಸಂಪಾದಿಸಿದ್ದ ಕನ್ನಡ ಇಂಗ್ಲಿಷು ನಿಘಂಟುವನ್ನು ತಿರುವುತ್ತಿದ್ದೆ. ಅಂಗಡಿಯವನು ಪುಸ್ತಕಗಳನ್ನು ಕಟ್ಟಿಡುವುದರಲ್ಲಿ ಮಗ್ನನಾಗಿದ್ದ. ಏಕೆಂದರೆ ಅಂದೇ ಪುಸ್ತಕ ಪ್ರದರ್ಶನದ ಕೊನೆಯ ದಿನ ಹಾಗೂ ಮುಕ್ತಾಯದ ವೇಳೆಯೂ ಸಮೀಪಿಸಿತ್ತು. ನನಗೇನೋ ಆ ಪುಸ್ತಕವನ್ನು ಕೊಳ್ಳುವಾಸೆ ಆದರೆ ಅದರ ಮುಖಬೆಲೆ ಇಪ್ಪತ್ತೈದು ರೂಪಾಯಿ. ನನ್ನ ಜೇಬಿನಲ್ಲಿದ್ದದ್ದು ಬರೇ ಇಪ್ಪತ್ತು ರೂಪಾಯಿ. ಅಂಗಡಿಯವನಿಗೆ ಅರ್ಥವಾಯಿತೇನೋ, ಆತ ಮುಗುಳ್ನಕ್ಕು ನಿಮ್ಮಲ್ಲೆಷ್ಟಿದೆಯೋ ಅಷ್ಟೇ ಕೊಡಿ ಸಾಕು ಎಂದ. ಸಂಕೋಚದಿಂದ ಇಪ್ಪತ್ತು ರೂಪಾಯಿ ಕೊಟ್ಟೆ. ಆತ ಸಂತೋಷದಿಂದ ಬಿಲ್ ಬರೆದು ಹರುಕು ಮುರುಕು ಇಂಗ್ಲಿಷಿನಲ್ಲಿ ಏನೇನೋ ಹೇಳಿದೆ. ಹಣದ ಮೌಲ್ಯಕ್ಕಿಂತಲೂ ಪುಸ್ತಕ ಕೊಳ್ಳಬೇಕೆನ್ನುವ ಮನಸ್ಸು ಮುಖ್ಯ ಎಂದು ಹೇಳಿದನೆಂದು ನಾನು ಅರ್ಥೈಸಿಕೊಂಡು ತಲೆದೂಗಿದೆ. ಏಕೆಂದರೆ ನನ್ನ ಇಂಗ್ಲಿಷು ಅವನದಕ್ಕಿಂತಲೂ ಮೇಲ್ಮಟ್ಟದ್ದಾಗಿರಲಿಲ್ಲ ಎಂದು ಎದೆ ಮುಟ್ಟಿ ಹೇಳುತ್ತೇನೆ.

ಆ ಪುಸ್ತಕ ಕೆಲ ದಿನಗಳವರೆಗೆ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತ್ತು. ಕಿಟೆಲರ ಕೃತಿಯನ್ನಾಧರಿಸಿದ ಸಂಗ್ರಹ ರೂಪದ ಪದಕೋಶವದು. ನಾವು ನಿತ್ಯವೂ ಬಳಸುವ ಕನ್ನಡ ಪದಗಳ ಮೂಲ ನಿಷ್ಪನ್ನಗಳ ಸೂಚಿಯೊಂದಿಗೆ ಇದ್ದ ಆ ಪದಸಂಗ್ರಹಕ್ಕೆ ಮಾರುಹೋದೆ. ಕನ್ನಡದಲ್ಲಿ ಯೋಚಿಸಿ ಇಂಗಲೀಸು ಪದಪ್ರಯೋಗ ಮಾಡುವ ನನ್ನಂಥವರ ಪದಸಂಪದವನ್ನು ಹೆಚ್ಚಿಸಲು ಅದು ಬಲು ಒಳ್ಳೆಯ ಪುಸ್ತಕ.

ಅದು ಸರಿ ಕನ್ನಡದ ಬಗ್ಗೆ ಕೆಲಸ ಮಾಡಿದ ಕ್ರೈಸ್ತ ಮಿಷನರಿಗಳೆಲ್ಲ ಕಿಟೆಲ್ ರೈಸ್ ಫ್ಲೀಟ್ ಮೊಗ್ಲಿಂಗ್ ಮುಂತಾದ ಪ್ರೊಟೆಸ್ಟಾಂಟರೇ. ಹಾಗಿದ್ದರೆ ಕಥೋಲಿಕ ಮಿಷನರಿಗಳು ಕನ್ನಡದಲ್ಲಿ ಏನೂ ಮಾಡಲೇ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಸ್ವಲ್ಪ ಜಟಿಲವಾದದ್ದು. ಏಕೆಂದರೆ ಪ್ರೊಟೆಸ್ಟೆಂಟರ ಕೃತಿಗಳು ಪ್ರಾಪಂಚಿಕ ಬಳಕೆಗೆ ತೆರೆದಿಟ್ಟುಕೊಂಡಿವೆಯಾದರೆ ಕಥೋಲಿಕರವು ಅವರ ಮಠಗಳ ಆರ್ಕೈವುಗಳಲ್ಲಿ ಸಂರಕ್ಷಿತವಾಗಿ ಲೋಕದ ಕಣ್ಣಿಗೆ ಮರೆಯಾಗಿವೆ. ರೋಮಿನ ಪ್ರಖ್ಯಾತ ಗ್ರೆಗರಿಯನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರಿಂದಲೇ ಅಲ್ಲವೇ ಸ್ವಾಮಿ ಅಂತಪ್ಪನವರಿಗೆ ೧೭ನೇ ಶತಮಾನದಲ್ಲಿ ಜೆಸ್ವಿತರು ನಮ್ಮ ನಾಡಿನ ಆಗುಹೋಗುಗಳ ಬಗ್ಗೆ ಬರೆದ ಅಮೂಲ್ಯ ಪತ್ರಗಳು ಕಣ್ಣಿಗೆ ಬಿದ್ದದ್ದು? ಇಂದು ಆ ಜೆಸ್ವಿತ್ ಪತ್ರಗಳ ಬೆಳಕಲ್ಲಿ ಕನ್ನಡ ನಾಡಿನ ಇತಿಹಾಸವನ್ನು ಪುನರ್ ರಚನೆ ಮಾಡಬಹುದಾಗಿದೆ.

ಬೆಂಗಳೂರಿನ ಪ್ರಾಚೀನ ಚರ್ಚುಗಳಲ್ಲೊಂದಾದ ಸಂತ ಮೇರಿ ಬೆಸಿಲಿಕಾದಲ್ಲಿನ ಗುರುವರ‍್ಯರಾದ ಸ್ವಾಮಿ ಅರುಳಪ್ಪನವರ ಬಳಿ ಈ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದಾಗ ಅವರು ತಮ್ಮ ಬಳಿಯಿದ್ದ ಒಂದು ಅಮೂಲ್ಯ ಗ್ರಂಥವನ್ನು ನನಗೆ ತೋರಿಸಿದರು. ಅದರ ತಲೆಬರಹವನ್ನು Dictionarium Latino Canarense (ದಿಕ್ತಿಯನೇರಿಯುಂ ಲತೀನೊ ಕನಾರೆನ್) ಎಂದು ಬರೆಯಲಾಗಿತ್ತು. ಅಂದರೆ ಅದೊಂದು ಲತೀನ ಕನ್ನಡ ಪದಕೋಶ. ಎಲ್ಲೂ ಉಪಲಭ್ದವಿಲ್ಲದ ಅಪರೂಪದ ಪುಸ್ತಕ ಅದು. ಅದನ್ನು ಮರುಪ್ರಕಟಿಸಿದರೆ ಹೇಗೆ ಎಂದು ಅರುಳಪ್ಪನವರು ಕೇಳಿದರು. ಅದರ ಬಗ್ಗೆ ಮಾನ್ಯ ಜಿ ವೆಂಟಸುಬ್ಬಯ್ಯವರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಆ ಪುಸ್ತಕವನ್ನು ಹಿಂದೊಮ್ಮೆ ನೋಡಿದ್ದೇನೆ, ಆದರೆ ಅದರ ಮರುಪ್ರಕಟನೆಯಿಂದ ಯಾರಿಗೂ ಪ್ರಯೋಜನವಿಲ್ಲ, ಆ ಪುಸ್ತಕವನ್ನು ಪ್ರದರ್ಶನ ಮಳಿಗೆಯಲ್ಲಿ ಇಡಲಷ್ಟೇ ಯೋಗ್ಯ ಎಂದರು. ಅರುಳಪ್ಪನವರಿಗೆ ನಿರಾಶೆಯಾಯತೇನೋ? ಅವರಿಗೆ ಹೇಳಿದೆ ಇಂದು ಲತೀನ ಕನ್ನಡ ನಿಘಂಟು ಬಳಕೆಗೆ ಬರುವುದೋ ಇಲ್ಲವೋ ಅದು ಮುಖ್ಯವಲ್ಲ, ಇಂತದೊಂದು ಚರಿತ್ರಾರ್ಹ ಗ್ರಂಥವೊಂದು ಕಥೋಲಿಕರಿಂದ ರಚಿತವಾಗಿತ್ತು ಎಂಬುದನ್ನು ಪ್ರಪಂಚಕ್ಕೆ ತಿಳಿಯಪಡಿಸುವುದು ಮುಖ್ಯ ಎಂದು. ಹಣಕಾಸಿನ ನೆರವಿನ ಭರವಸೆ ನೀಡಿ ಅವರು ಆ ಅಮೂ ಗ್ರಂಥದ ಮರುಪ್ರಕಟನೆಯ ಜವಾಬ್ದಾರಿಯನ್ನು ನನಗೊಪ್ಪಿಸಿದರು.

ಸುಮಾರು ೧೨೦೦ ಪುಟಗಳ ಆ ಪುಸ್ತಕವನ್ನು ಬರೆದವರಾರು ಎಂಬುದನ್ನು ಎಲ್ಲಿಯೂ ಹೇಳಿರಲಿಲ್ಲ. ಮುಖಪುಟದಲ್ಲಿ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೇತುಸ್ ಅಪೊಸ್ತೊಲಿಕುಸ್ ಮಯಿಸ್ಸುರ್ ಎಂದಷ್ಟೇ ಬರೆಯಲಾಗಿತ್ತು. ಅದನ್ನು ಒರೆಗೆ ಹಚ್ಚಿದಾಗ AUCTORE = Author ಲೇಖಕ, RR = Right Reverend ಪೂಜ್ಯ, EPISCOPO JASSENSI = Bishop of Jasso ಯಸೊ ಪ್ರಾಂತ್ಯದ ಧರ್ಮಾಧಿಕಾರಿ, V. A. MAISSURENSI = Apostolic Vicar to Mysore ಮೈಸೂರು ಪ್ರಾಂತ್ಯಕ್ಕೆ ನಿಯುಕ್ತರಾದ ಗುರುಸ್ವಾಮಿಗಳು ಎಂಬುದಾಗಿ ಬಿಡಿಸಿ ಅದು ಮತ್ಯಾರೂ ಅಲ್ಲದೆ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೊ ಎಂಬ ತೀರ್ಮಾನಕ್ಕೆ ಬರಲಾಯಿತು.

ಇನ್ನು ಅದರ ಮೊದಲ ಪುಟಗಳಲ್ಲಿ ಮುದ್ರಿತವಾಗಿರುವ ಪ್ರಸ್ತಾವನೆಯು ಲತೀನ ಭಾಷೆಯಲ್ಲಿದ್ದು ಅದನ್ನು ತರ್ಜುಮೆ ಮಾಡುವವರು ಯಾರೂ ದೊರಕಲಿಲ್ಲವಾಗಿ ಅಂತರ್ಜಾಲದ ಮರೆಹೊಕ್ಕೆ. ಆದರೆ ದುರದೃಷ್ಟವೆಂದರೆ ಅಂತರ್ಜಾಲದಲ್ಲಿ ಸ್ಪ್ಯಾನಿಶ್, ಇಟಾಲಿಯನ್, ಫ್ರೆಂಚ್, ಜರ್ಮನ್, ಪೋರ್ಚುಗೀಸ್, ಜಪಾನೀ ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಯ ಸೌಲಭ್ಯವಿದ್ದರೂ ಲತೀನ ಭಾಷೆಯಿಂದ ತರ್ಜುಮೆ ಮಾಡಲು ಯಾವ ತಂತ್ರಾಂಶವೂ ಸಿಕ್ಕಲಿಲ್ಲ. ಕೆಲ ಅಂತರ್ಜಾಲ ತಾಣಗಳು ಲತೀನದ ಪಠ್ಯವನ್ನು ಕಳಿಸಿ, ಪ್ರಯತ್ನಿಸುತ್ತೇವೆ ಎಂದುದರಿಂದ OCR ತಂತ್ರಜ್ಞಾನ ಬಳಸಿ ಪಠ್ಯವನ್ನು ಅಂತರ್ಜಾಲಕ್ಕೆ ಊಡಿದೆ. ಆದರೆ ಫಲಿತಾಂಶ ಶೂನ್ಯವಾಗಿತ್ತು.

ಆ ವೇಳೆಗೆ ಫಾದರ್ ದೇವದತ್ತ ಕಾಮತರ ಪ್ರಸ್ತಾಪ ಮಾಡಿದರು ಸ್ವಾಮಿ ಅರುಳಪ್ಪನವರು. ಈ ಫಾದರ್ ದೇವದತ್ತರು ಸಂಸ್ಕೃತ ವಿದ್ವಾಂಸರಾಗಿದ್ದು ಮಧ್ವಾಚಾರ್ಯರ ಕೃತಿಗಳ ಬಗ್ಗೆ ಆಳ ಸಂಶೋಧನೆ ನಡೆಸಿದ್ದಾರೆ. A Study on the Doctrines of Madhvacharya ಅನ್ನೋದು ಅವರ ಸಂಶೋಧನಾ ಪ್ರಬಂಧವಾಗಿದೆ. ಅವರು ಲತೀನದ ಪಂಡಿತರೂ ಆಗಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ಒಂದೇ ದಿನದಲ್ಲಿ ಅವರು ಲತೀನ ಪ್ರಸ್ತಾವನೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟರು. ಆ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ.

ಇಂದು ನಾವು ಅದನ್ನೊಪ್ಪಲು ಸಾಧ್ಯವಿಲ್ಲವಾದರೂ ಶಾರ್ಬೊನೊ ಅವರ ಸಮಕಾಲೀನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅವರ ತಿಳುವಳಿಕೆಯ ನೆಲೆಯನ್ನು ಗುರುತಿಸಬಹುದಾಗಿದೆ. ಏಕೆಂದರೆ ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ಅಂದಿನ ಸಂದರ್ಭದಲ್ಲಿ ಮುದ್ರಿತ ಪುಸ್ತಕಗಳ ಕೊರತೆ ಹಾಗೂ ಎಲ್ಲೆಡೆಯೂ ಅವು ಸಿಗದಿದ್ದ ಕಾರಣದಿಂದ ಶಾರ್ಬೊನೊ ಅವರ ಹೇಳಿಕೆಯನ್ನು ನಾವು ಅನುಕಂಪದಿಂದ ನೋಡಬೇಕಾಗುತ್ತದೆ.

ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.

ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಹದಿನೈದು ವರ್ಷಗಳ ಕಾಲ ಅವರು ಜನಸಾಮಾನ್ಯರ ಒಡನಾಟದಲ್ಲಿ ಕೇಳಿದ ಮಾತುಗಳನ್ನು ಟಿಪ್ಪಣಿ ಮಾಡಿಟ್ಟುಕೊಂಡು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಿದ್ದಾರೆ. ಏಕೆಂದರೆ ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು. ಅಲ್ಲದೆ ನಮ್ಮ ದೇಶಕ್ಕೆ ಭೇಟಿ ನೀಡುತ್ತಿದ್ದ ಐರೋಪ್ಯ ಕಥೋಲಿಕ ಮಿಷನರಿಗಳು ಯಾವ ಮಾತೃಭಾಷೆಯವರೇ ಆಗಿದ್ದರೂ ಲತೀನ ಭಾಷೆಯನ್ನು ಕಲಿತಿರುತ್ತಿದ್ದರು.

ಶಾರ್ಬೊನೊ ಅವರ ಈ ಪುಸ್ತಕದಲ್ಲಿನ ಮೊದಲ ನಮೂದು ಲತೀನ ಆಗಿದ್ದು ಎರಡನೇ ನಮೂದು ಕನ್ನಡವಾಗಿದೆ. ಉದಾಹರಣೆಗೆ ನೋಡುವುದಾದರೆ ab ostio jacens = ಬಾಗಲಿಗೆ ಮುಂಚೆ, ಯೆದುರಾಗಿ ಬಿದ್ದಿರುವ, liberis impuberibus = ಮಕ್ಕಳ ಸಂಣ ಪ್ರಾಯದೊಳು, ಸಂಣ ಪ್ರಾಯದ ಕಾಲದಲ್ಲಿ.

ಇವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆ, ಅದರಲ್ಲಿ ರ ಒತ್ತಕ್ಷರ, ತ ಒತ್ತಕ್ಷರಗಳು, ಪ ಮತ್ತು ಸ ದೀರ್ಘಾಕ್ಷರಗಳು ಇಂದಿಗೂ ತೆಲುಗು ಲಿಪಿಯಲ್ಲಿ ಉಳಿದುಕೊಂಡಿವೆ. ಅಲ್ಲದೆ ಇವರ ಪುಸ್ತಕದಲ್ಲಿ ಅರ್ಕವೊತ್ತು ಕಾಣುವುದಿಲ್ಲ.

ಈ ಪುಸ್ತಕವನ್ನು ಅವಲೋಕಿಸಿದ ನುಡಿಯರಿಗ ಡಾ. ಕೆ ವಿ ನಾರಾಯಣರು ಬಹು ಸಂತೋಷಪಟ್ಟು ಒಂದು ವಿದ್ವತ್ ಲೇಖನ ಬರೆದುಕೊಟ್ಟರು. ಅಲ್ಲದೆ ಈ ಪುಸ್ತಕದ ಮರುಪ್ರಕಟನೆಯ ಸುದ್ದಿ ಕೇಳಿ ಇತರ ನುಡಿಯರಿಗರಾದ ಕನ್ನಡ ವಿವಿಯ ಡಾ. ಮುರಿಗೆಪ್ಪನವರು, ರಂಗಾಯಣದ ಲಿಂಗದೇವರು ಹಳೆಮನೆಯವರು, ಧಾರವಾಡದ ಸಂಗಮೇಶ ಸವದತ್ತಿಮಠ ಅವರು ಬಲು ಸಂಭ್ರಮಿಸಿದರು.

ಹೀಗೆ ಅಂತೂ ಇಂತೂ ಈ ಲತೀನ ಕನ್ನಡ ನಿಘಂಟು ಮರುಮುದ್ರಿತವಾಗಿ ೨೦೧೦ ಆಗಸ್ಟ್ ೮ ರಂದು ಭಾನುವಾರ ಬೆಳಗ್ಗೆ
ಹತ್ತೂವರೆ ಗಂಟೆಗೆ ಕನ್ನಡಭವನದ ನಯನ ಸಭಾಂಗಣದಲ್ಲಿ ಲೋಕಾರ್ಪಿತವಾಯಿತು.
http://www.prajavani.net/Content/Aug82010/books20100807198321.asp

ಭಾನುವಾರ, ಡಿಸೆಂಬರ್ 27, 2009

ಉನ್ನತಿಯ ಮರವೇರಿ

ನಾನು ಜಕ್ಕಾಯನೆಂದು ನಾ ಹೇಳಲಾರೆ
ಕುಬ್ಜನಿಗೇಕಣ್ಣ ಗರುವದ ಮಾತು

ನಾ ಸುಂಕದವ ಕಡುಪಾಪಿ ಜೂಜುಕೋರ
ನಿತ್ಯಸುಮಂಗಲಿಯರ ಹೃದಯಚೋರ

ನನ್ನ ಮನೆಯ ದೀಪ ಉರಿಯದಿದ್ದರೇನಂತೆ
ಮುಗ್ದರನು ವಂಚಿಸುತ ಜಗವ ಮರೆತವ ತಾನೇ?

ಯೇಸುವನೂ ಬಿಡಲಿಲ್ಲ ಸುಂಕ ಕೊಡು ಎಂದೆ
ಸೀಜರನದು ಸೀಜರನಿಗೆ ಎಂದನಾತ

ಗೆದ್ದವನು ನಾನೆಂದು ಬಲು ಉಬ್ಬಿಹೋದೆ
ಸಿಕ್ಕ ಪರುಷಮಣಿಯನು ನೆಲಕೆ ಚೆಲ್ಲಿ

ವರುಷ ಕಳೆಯಿತು ಹರುಷ ಜಾರಿತು
ನೆಮ್ಮದಿಯ ನಾಳೆಗಳು ಇಲ್ಲವಾಗಿ

ಶಾಂತಿ ಬಯಸಿತು ಮನ ತಂಪ ಕೋರಿತು ತನು
ಉತ್ಸಾಹದರಮನೆಯ ದೀಪ ನಂದಿ

ಬೆಳಗಬಲ್ಲುದೆ ಮನದ ದೀಪ
ನೆಮ್ಮದಿ ನಿರುಮ್ಮಳತೆ ಇಲ್ಲದಿರೆ?

ಪ್ರೀತಿ ನಂಬಿಕೆ ಬೇಕು ಮನ ಶುದ್ಧಿಯಿರಬೇಕು
ಸರ್ವರಲಿ ಸೋದರತೆಯ ಕಂಪು ಬೀರಿ

ದೀನದಲಿತರ ಮಿತ್ರ ಪಾಪಿ ಪತಿತರ ಗೆಳೆಯ
ಯೇಸುವಿನ ದರುಶನಕೆ ಮನ ತಪಿಸಿ

ಅವ ಬರುವ ಹಾದಿಯಲಿ ಮರವೇರಿ ಕುಳಿತೆ
ಅವನ ದೃಷ್ಟಿಗೆ ಹೆದರಿ ಮುಖವ ಮರೆಮಾಡಿ

ವಾತ್ಸಲ್ಯಮೂರ್ತಿಯವ ಪ್ರೀತಿಕಂಗಳ ಸೂಸಿ
ನಾನಿನ್ನ ಅತಿಥಿಯಾದೆ ಇಳಿದು ಬಾರೆಂದ

ಕರಗಿ ಹೋದೆನು ನಾನು ಆ ಮಮತೆ ನುಡಿಗಳಿಗೆ
ಎರಗಿ ಬಿದ್ದೆನು ಅವನ ಪಾದದಡಿಗೆ

ಮರವೇರಿ ಕುಳಿತೆನ್ನನು ಕರಬೀಸಿ ಕರೆದ
ಪಾಪಿಮನದಾಸೆಯನು ಹೇಳದೆಯೇ ತಿಳಿದ

ಅಂದು ನಿನ್ನ ಕಂಡಾಗ ನಿನ್ನನರಿಯದೇ ಹೋದೆ
ಸ್ವಾಮಿ ಇಂದೆನ್ನ ಕರವಿಡಿದು ಉದ್ಧರಿಸಯ್ಯಾ

ತಬ್ಬಿಹಿಡಿದೆನ್ನನು ಯೇಸು ನುಡಿದನು ಜನಕೆ
ತಪ್ಪಿಹೋದ ಕುರಿಮರಿಯು ಮತ್ತೆ ಸಿಕ್ಕಿತು ಎನಗೆ

ಜಕ್ಕಾಯ ನೀನಿನ್ನು ಕುಬ್ಜಕಾಯನಲ್ಲ
ದೇವರಿಗೆ ಕಾಣುವುದು ಆತ್ಮವೊಂದೇ

ನಿನ್ನಂತೆ ನೀನಾಗು ಅಂತರಂಗವನು ಬೆಳಗು
ನಿನ್ನಂತೆ ಪರರನ್ನು ಪರಿಭಾವಿಸುತಲಿ

ಇದುವೆ ಪರಮಾತ್ಮಜ್ಞಾನ ಇದುವೆ ಉನ್ನತಧರ್ಮ
ಅರಿತೊಡನೆ ಧರೆಗಿಳಿವುದು ದೇವಲೋಕ

ಮಂಗಳವಾರ, ಡಿಸೆಂಬರ್ 22, 2009

ಕ್ರಿಸ್‌ಮಸ್ ನವೋಲ್ಲಾಸ

ಕ್ರಿಸ್‌ಮಸ್ ಮುನ್ನಾದಿನಗಳ ನೆನಪೇ ಮಧುರ. ದೀಪದ ಬುಟ್ಟಿಗಳಲ್ಲಿ ಮೇಣದ ಬತ್ತಿಗಳನ್ನು ಹಚ್ಚಿಕೊಂಡು ವಿವಿಧ ವಾದ್ಯಗಳೊಂದಿಗೆ ಸಜ್ಜಾದ ಮಕ್ಕಳು ಕ್ರಿಸ್ತಾಗಮನದ ಗೀತೆಗಳನ್ನು ಹಾಡುತ್ತಾ ಮನೆಮನೆಯಲ್ಲೂ ಕ್ರಿಸ್ತಜಯಂತಿಯ ಬರುವಿಕೆಯನ್ನು ಸಾರುತ್ತಾ ಎಲ್ಲರೆದೆಗಳಲ್ಲೂ ಸಂತಸ ಸಂಭ್ರಮದ ಭಾವನೆಗಳನ್ನು ಬಿತ್ತುತ್ತಾರೆ.

ಪೆಟ್ರೊಮ್ಯಾಕ್ಸ್ ಬೆಳಕಿನಲ್ಲಿ ಹಾರ್ಮೋನಿಯಂ ನಾದಕ್ಕೆ ತಾಳ ಗೆಜ್ಜೆ ಝಲ್ಲರಿ ಕಂಜಿರಗಳು ಜೊತೆಗೂಡಿವೆ. ನಡುವೆ ಕೆಂಪಂಗಿ ಬಿಳಿದಾಡಿಯ ಸಾಂಟಾಕ್ಲಾಸ್ ವೇಷಧಾರಿ. ಕೇಕು ಬಿಸ್ಕತ್ತು ಚಕ್ಕುಲಿ ಕರ್ಚಿಕಾಯಿ ಕಲ್ಕಲ್ಸ್ ಕುರುಕು ತಿಂಡಿಗಳ ಸವಿಯೊಂದಿಗೆ ಮಕ್ಕಳ ಮೆರವಣಿಗೆ ಸಾಗುತ್ತಿದ್ದರೆ ಬಾಲ್ಯದ ಆ ದಿನಗಳ ಸವಿನೆನಪು ಗರಿಗೆದರುತ್ತದೆ. ಅದೆಲ್ಲೋ ಜಿಂಗಲ್ ಬೆಲ್ಸ್ ಜಿಂಗಲ್ ಬೆಲ್ಸ್ ಹಾಡು ತೇಲಿ ಬರುತ್ತಿದ್ದರೆ ಹೃದಯ ತಂತಾನೇ ಪುಟಿಯ ತೊಡಗುತ್ತದೆ. ಕ್ರಿಸ್‌ಮಸ್ ಭಜನೆಯ ಆ ಮಕ್ಕಳ ಮೇಳದ ಶಬ್ದ ಕಿವಿಗೆ ಸೋಕುತ್ತಿದ್ದಂತೆ ಮನೆಯೊಳಗಿನ ಎಲ್ಲ ಕೆಲಸಗಳೂ ಸ್ತಬ್ಧವಾಗಿ ಸಡಗರದಿಂದ ಸಜ್ಜಾಗಿ ದೇವರಿಗೆ ದೀಪಹಚ್ಚಿ ಬಾಗಿಲ ತೆರೆದು ಅವರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವುದು ಇದೆಯಲ್ಲ! ಓಹ್ ಅದೊಂದು ಸುಂದರ ಭಾವಗೀತೆಯೇ ಸರಿ.

ಆ ಮೆರವಣಿಗೆಯಲ್ಲಿ ನಮ್ಮ ಮಕ್ಕಳೂ ಇದ್ದಾರಲ್ಲವೇ!? ಅವರೊಂದಿಗೆ ಎಲ್ಲ ಓರಗೆಯ ಮಕ್ಕಳು, ಕೆಲವರಂತೂ ನಮ್ಮ ಸ್ನೇಹಿತರ ಮಕ್ಕಳೇ. ಮತ ಬೇರೆಯಾದರೂ ನಮ್ಮ ಮಕ್ಕಳೊಂದಿಗೆ ಕ್ರಿಸ್‌ಮಸ್ ಭಜನೆಗೆ ಬಂದಿದ್ದಾರೆ, ಇದಲ್ಲವೇ ಸಹಬಾಳ್ವೆ ಸಾಮರಸ್ಯ! ಕ್ರಿಸ್‌ಮಸ್ ಸೆಳೆತವೇ ಅಂಥದು.

ಮತ್ತದೇ ಮೌನ ವಿರಾಮದ ನಂತರ ಸುಶ್ರಾವ್ಯವಾಗಿ ‘ಸೈಲೆಂಟ್ ನೈಟ್ ಹೋಲಿ ನೈಟ್ ಆಲ್ ಇಸ್ ಕಾಮ್ ಅಂಡ್ ಆಲ್ ಇಸ್ ಬ್ರೈಟ್’ ಪಂಚಮ ಸ್ವರವಲ್ಲರಿಯ ಆ ಗಾನಮಾಧುರ್ಯ ಗಾಳಿಯಲ್ಲಿ ಬೆರೆತು ಬರುತ್ತಿದೆ. ಅದೇ ರಾಗ. ಹೌದು ಅದೇ ರಾಗ ಆದರೆ ಹಾಡು ಬೇರೆ. ಏನದು ಕನ್ನಡದ್ದೇ ಪದಗಳು ಅನಿಸುತಿದೆ, ಓ ಹೌದು ಕನ್ನಡದ್ದೇ ಸಾಹಿತ್ಯ, ‘ಮಂಗಳಶ್ರೀ ರಾತ್ರಿಯಲಿ ದೂತರು ಗಾನದಿ ಹಿಂಡು ಕಾಯುವ ಕುರುಬರ್ಗೆ ತಂದ ವಾರ್ತೆಯು’. ಓಹ್ ಮೈಮನ ಪುಳಕಗೊಳ್ಳುತ್ತಿವೆ.

ಶಾಂತಿ ದೀವಿಗೆಯಾಗಿ ಪ್ರೀತಿ ಮಲ್ಲಿಗೆಯಾಗಿ ಮರಿಯಮ್ಮನ ಮಡಿಲಲ್ಲಿ ಹಸುಕಂದನಾಗಿ, ನಸುನಗುತ ನಮಗೆಲ್ಲ ಬೆಳಕು ತೋರುವ ಯೇಸು ನಮ್ಮೆದೆಯೊಳಗೆ ಬರುತಾನೆ ನೆಮ್ಮದಿಯ ನೀಡಿ.
http://www.prajavani.net/content/Dec222009/metrotue20091221161880.asp

ಶನಿವಾರ, ಡಿಸೆಂಬರ್ 5, 2009

ಹೀಗೊಂದು ಪುಸ್ತಕದ ಮನೆ

ಎಚ್ಎಎಲ್ ಏರೋಇಂಜಿನ್ ವಿಭಾಗದಲ್ಲಿ ಕರ್ನಾಟಕ ಕಲಾಸಂಘದ ಸ್ಥಾಪನೆ ೧೯೬೯ರಲ್ಲಾಯಿತು. ಅಂದು ಕಾರ್ಖಾನೆಯಲ್ಲಿ ತಮಿಳು ಭಾಷಾಂಧರ ಅಟಾಟೋಪ ಮೇರೆ ಮೀರಿದ್ದಾಗ ನೇರವಾಗಿ ಕನ್ನಡಸಂಘ ಎಂದು ಕರೆಯದೆ ಕನ್ನಡ ನಾಡಿನಲ್ಲಿನ ಎಲ್ಲ ಸಂಸ್ಕೃತಿ ಮತ್ತು ಕಲೆಗಳನ್ನು ಎತ್ತಿಹಿಡಿಯುವ ನೆಪದಲ್ಲಿ ಕನ್ನಡಿಗ ನೌಕರರ ಹಿತ ಕಾಯುವುದಕ್ಕೋಸ್ಕರ ಸ್ಥಾಪಿಸಲಾಯಿತು. ಕಾರ್ಖಾನೆ ಮುಖ್ಯಸ್ಥರಾಗಿದ್ದ ರಾಮಚಂದ್ರಕರ್ವೆಯವರು ತಮ್ಮ ಪತ್ನಿ ಮೀರಾಕರ್ವೆಯವರ ನೇತೃತ್ವದಲ್ಲಿ ಕನ್ನಡಿಗರನ್ನು ಒಂದುಗೂಡಿಸಿ ಹಾಡುಗಾರಿಕೆ, ಚರ್ಚಾಗೋಷ್ಠಿ, ಉಪನ್ಯಾಸ, ಯುಗಾದಿ ಮತ್ತು ದಸರಾ ಆಚರಣೆಗಳ ಮೂಲಕ ಕಾರ್ಮಿಕರಲ್ಲಿ ಕಲಾಭಿವ್ಯಕ್ತಿಯನ್ನು ಉದ್ದೀಪನಗೊಳಿಸಿ ಅವರ ಜಡ್ಡುಗಟ್ಟಿದ ಮನಸ್ಸುಗಳಲ್ಲಿ ಲವಲವಿಕೆಯನ್ನು ತುಂಬಿದ್ದರು.

ಆ ದಿನಗಳಲ್ಲಿ ಕಾರ್ಮಿಕನಾಗಿದ್ದ ದೊ ತಿ ಹನುಮಯ್ಯ ಎಂಬ ಉತ್ಸಾಹಿ ಕಾರ್ಯಕರ್ತನಿಂದ ಒಂದು ಪುಟ್ಟ ಗ್ರಂಥಾಲಯ ಸ್ಥಾಪನೆಯಾಯಿತೆನ್ನಬಹುದು. ಹನುಮಯ್ಯನವರು ತಮ್ಮ ಕೆಲಸದ ಸ್ಥಳದಲ್ಲಿಯೇ ಒಂದು ಮರದ ಪೆಟ್ಟಿಗೆಯಲ್ಲಿ ಶ್ರೀಕಂಠಯ್ಯ ಮುಂತಾದವರಿಂದ ಸಂಗ್ರಹಿಸಿ ತಂದ ಪುಸ್ತಕಗಳನ್ನು ಇಟ್ಟುಕೊಂಡು ಆಸಕ್ತರಿಗೆ ಎರವಲು ಕೊಡುತ್ತಾ ಕಾರ್ಮಿಕರಲ್ಲಿ ವಾಚನಾಭಿರುಚಿ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ವಿಚಿತ್ರವೆಂದರೆ ಎಂಭತ್ತರ ದಶಕದವರೆಗೂ ಎಚ್ಎಎಲ್ ಪ್ರದೇಶದಲ್ಲಿ ಕನ್ನಡ ದಿನಪತ್ರಿಕೆಗಳನ್ನು ಕಾಣುವುದೇ ದುಸ್ತರವಾಗಿತ್ತು. ಕನ್ನಡ ಕಾರ್ಮಿಕರು ತಮಿಳು ಭಾಷಿಕ ಸಹೋದ್ಯೋಗಿಗಳಿಗೆ ಹಾಗೂ ಸೆಕ್ಯುರಿಟಿ/ವಿಜಿಲೆನ್ಸ್ ಸಿಬ್ಬಂದಿಗೆ ಹೆದರುತ್ತಾ ಅವರೊಂದಿಗೆ ತಮಿಳಿನಲ್ಲೇ ವ್ಯವಹರಿಸುತ್ತಾ ಕನ್ನಡ ಪುಸ್ತಕಗಳನ್ನು ಕದ್ದುಮುಚ್ಚಿ ಓದುತ್ತಿದ್ದರು. ಆದರೆ ವಿಪರ್ಯಾಸವೆಂದರೆ ತಮಿಳರ ಗ್ರಂಥಾಲಯವು ಕಾರ್ಪೆಂಟರಿ ಇಲಾಖೆಯಲ್ಲಿ ರಾಜಾರೋಷವಾಗಿ ನಡೆಯುತ್ತಿತ್ತು.

ನಂತರದ ದಿನಗಳಲ್ಲಿ ನಾರಾಯಣಮೂರ್ತಿ, ಗೋ ಶ್ರೀನಿವಾಸ್ ಅವರ ಮುನ್ನುಗ್ಗುವಿಕೆಯ ಫಲವಾಗಿ ಕನ್ನಡ ಪುಸ್ತಕಗಳ ಬಹಿರಂಗ ಓದಿಗೆ ಅವಕಾಶವಾಯಿತು. ಎಚ್ ಜಗದೀಶ, ಜ್ಞಾನೇಂದ್ರಗುಪ್ತಾ, ಮುನಿಗಿರಿಯಪ್ಪ, ಎನ್ ನಾಗರಾಜು, ಚಂದ್ರಪ್ಪ ಮುಂತಾದವರ ಅನುಪಮ ಸೇವೆಯಿಂದ ಅದು ಮುಂದುವರಿಯುತ್ತಾ ಬಂತು.

ಕಾರ್ಮಿಕರ ಭೋಜನಾಲಯದಲ್ಲಿ ಭೋಜನದ ವೇಳೆಯಲ್ಲಿ ಧ್ವನಿವರ್ಧಕದ ಮೂಲಕ ಚಿತ್ರಗೀತೆಗಳನ್ನು ಪ್ರಸಾರ ಮಾಡುವುದು ವಾಡಿಕೆ. ಊಟದ ಸಮಯದ ಮೊದಲ ಐದು ನಿಮಿಷ ಕನ್ನಡದ ಹಾಡು, ನಂತರದ ಹತ್ತು ನಿಮಿಷ ಹಿಂದೀ ಚಿತ್ರಗೀತೆಗಳು ಆಮೇಲಿನ ಹದಿನೈದು ನಿಮಿಷಗಳ ಕಾಲ ತಮಿಳು ಚಿತ್ರಗೀತೆಗಳನ್ನು ಪ್ರಸಾರ ಮಾಡುತ್ತಿದ್ದರು. ಊಟದ ಮನೆಗೆ ಪ್ರವೇಶಿಸುವ ಸಂದರ್ಭದಲ್ಲಿನ ಗದ್ದಲದಲ್ಲಿ ಕನ್ನಡ ಗೀತೆ ಕೇಳಿಸುತ್ತಲೇ ಇರಲಿಲ್ಲ. ಆದರೆ ಊಟ ಮುಗಿದ ನಂತರದ ಪ್ರಶಾಂತ ವೇಳೆಯಲ್ಲಿ ತಮಿಳು ಹಾಡುಗಳಿಗೆ ಕನ್ನಡಿಗರೂ ತಲೆದೂಗುತ್ತಿದ್ದರೆಂದರೆ ಅದು ಕನ್ನಡಿಗರ ಔದಾರ್ಯವೆನ್ನಲೇಬೇಕು. ಆದರೆ ಸೋಮಶೇಖರ, ರುದ್ರಪ್ರಕಾಶ, ಬಸವರಾಜು, ಗಂಗೇಗೌಡ ಹಾಗೂ ನನ್ನಂಥವರಿಗೆ ಅದು ತುಂಬಾ ಅಸಹನೀಯವೆನಿಸಿತ್ತು. ಹೀಗೊಂದು ದಿನ ೧೯೯೮ ರಲ್ಲಿ ಓದಲಿಕ್ಕೆಂದು ಬಹಿರಂಗವಾಗಿ ಪ್ರದರ್ಶಿತವಾಗಿದ್ದ ತಮಿಳು ದಿನಪತ್ರಿಕೆಯೊಂದು ನಮ್ಮ ಬಹುದಿನಗಳ ಅಸಹನೆಯನ್ನು ಆಸ್ಫೋಟಿಸಲು ಸಕಾರಣ ಒದಗಿಸಿತು. ಸಿಡಿದೆದ್ದ ಕನ್ನಡಿಗರ ಕೋಪವನ್ನು ತಣಿಸುವ ಕೆಲಸ ಬಹು ಸುಲಭದ್ದಾಗಿರಲಿಲ್ಲ. ಉದ್ಯಮದಲ್ಲಿನ ಅಶಾಂತಿಯ ಕಾರಣ ನೀಡಿ ಅಂದೇ ತಮಿಳರ ಪುಸ್ತಕ ಸಂಗ್ರಹಕ್ಕೆ ಬೀಗಮುದ್ರೆ ಹಾಕಲಾಯಿತು. ಕನ್ನಡ ಪುಸ್ತಕ ಭಂಡಾರಕ್ಕೆ ರಾಜಮನ್ನಣೆ ದೊರೆತು ಭೋಜನಾಲಯದ ಬಳಿ ಅದಕ್ಕೊಂದು ಸ್ಥಳಾವಕಾಶವೂ ಲಭ್ಯವಾಯಿತು. ಸಂಘದ ಕಚೇರಿಗೂ ವಿಸ್ತೃತ ಜಾಗ ದೊರೆತು ಅದರ ನವೀಕರಣವೂ ಆಯಿತು.

ಆದರೆ ಮುಂದೆ ಕನ್ನಡದ ಕಾವು ಆರಿದ ಕೆಲದಿನಗಳಲ್ಲಿ ಭೋಜನಾಲಯದ ನವೀಕರಣದ ಸಬೂಬು ನೀಡಿ ಗ್ರಂಥಾಲಯವಿದ್ದ ಜಾಗವನ್ನು ತೆರವುಗೊಳಿಸಿ ದೂರವಿರುವ ಈಗಿನ ಸ್ಥಳಕ್ಕೆ ವರ್ಗಾಯಿಸಲಾಯಿತು. ಅದು ಸ್ಥಳಾಂತರಗೊಂಡು ನಿಯಮಿತವಾಗಿ ತೆರೆಯದೇ ಇದ್ದುದರ ಕಾರಣ ಸದಸ್ಯರಲ್ಲಿ ಆಸಕ್ತಿಯೂ ಮೊಟಕುಗೊಂಡಿತು.

ಇಕ್ಕಟ್ಟಾದ ಕೊಠಡಿಯಲ್ಲಿದ್ದ ಈ ಗ್ರಂಥಾಲಯದ ಉಸ್ತುವಾರಿಯನ್ನು ೨೦೦೨ರಲ್ಲಿ ನನಗೆ ವಹಿಸಲಾಯಿತು. ಹಿಂದಿನವರು ಮಾಡಿದ್ದ ಎಲ್ಲ ಸುಕಾರ್ಯಗಳನ್ನೂ ಸ್ಮರಿಸುತ್ತಾ ಈ ಪುಸ್ತಕಭಂಡಾರಕ್ಕೆ ಕಾಯಕಲ್ಪ ನೀಡುವ ಕೆಲಸದಲ್ಲಿ ವಿನೀತನಾಗಿ ತೊಡಗಿಕೊಂಡೆ. ಅಲ್ಲಿ ಪುಸ್ತಕಗಳನ್ನು ಬಿಟ್ಟರೆ ಬೇರೆ ಏನಿತ್ತು ಎನ್ನುವುದಕ್ಕಿಂತ ಏನಿಲ್ಲ ಎಂಬುದೇ ದೊಡ್ಡ ಪಟ್ಟಿಯಾಗಿತ್ತು. ಕಸದಬುಟ್ಟಿ, ಪೊರಕೆ, ಇಂಕ್ಪ್ಯಾಡ್, ಸ್ಟ್ಯಾಪ್ಲರ್, ಪಂಚ್, ಬಿಳಿಕಾಗದ, ಕಡತ, ಗೋಂದು ಬಾಟ್ಲಿಯಿಂದ ಮೊದಲುಗೊಂಡು ವಿದ್ಯುತ್ ವ್ಯವಸ್ಥೆ, ದೀಪವ್ಯವಸ್ಥೆಯನ್ನು ಮಾಡಿಕೊಂಡಿದ್ದಾಯಿತು.

ಅಲ್ಲಿ ಏನೆಲ್ಲ ಪುಸ್ತಕಗಳಿವೆ ಎಂಥ ಪ್ರಕಾರಗಳಿವೆ ಎಂಬುದರ ಪಟ್ಟೀಕರಣ ಆಗಬೇಕಿತ್ತು. ಗೆದ್ದಲು ಹತ್ತಿದ್ದವಕ್ಕೆ ಕಾಯಕಲ್ಪ ಆಗಬೇಕಿತ್ತು. ಬಾಕಿ ಉಳಿಸಿಕೊಂಡವರಿಂದ ಪುಸ್ತಕಗಳನ್ನು ವಾಪಸು ಪಡೆಯಬೇಕಿತ್ತು. ಪಟ್ಟೀಕರಣದ ಕೆಲಸದಲ್ಲಿ ಶ್ರೀಯುತರಾದ ಎಂ ಜಗನ್ನಾಥ ಹಾಗೂ ದಿವಂಗತ ಪಂಡಿತ ಚನಗೊಂಡರವರು ನನಗೆ ನೆರವಾದರು. ಪುಸ್ತಕಗಳನ್ನು ಬಹುದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ನೂರಕ್ಕೂ ಹೆಚ್ಚು ಸದಸ್ಯರ ಮನವೊಲಿಸಿ ಪುಸ್ತಕಗಳನ್ನು ಹಿಂದಕ್ಕೆ ಪಡೆಯಲಾಯಿತು. ಇದ್ದ ಎಲ್ಲ ಪುಸ್ತಕಗಳ ಪಟ್ಟಿಯನ್ನು ಸದಸ್ಯರ ಅವಗಾಹನೆಗಾಗಿ ಮುದ್ರಿಸಿ ಇಡಲಾಯಿತು.

ಆಗ ಪುಸ್ತಕಾಲಯದಲ್ಲಿ ಸ್ತ್ರೀ ಸಾಹಿತ್ಯ, ಪತ್ತೇದಾರಿ ಸಾಹಿತ್ಯ, ಸಾಮಾಜಿಕ ಕಾದಂಬರಿ ಇತ್ಯಾದಿ ಹಳೆಯ ಶೈಲಿಯ ಸಾಹಿತ್ಯ ಪ್ರಕಾರವೇ ತುಂಬಿದ್ದವು. ಅದರಲ್ಲಿ ಕಥಾಸಂಕಲನ, ವಿಜ್ಞಾನ, ಹಾಸ್ಯ, ಕಾವ್ಯ, ಅಧ್ಯಾತ್ಮ, ಆರೋಗ್ಯ, ವ್ಯಕ್ತಿಚಿತ್ರ, ನಾಟಕ, ಇತಿಹಾಸ, ಮನೋವಿಕಾಸ, ಸಾಹಿತ್ಯಚಿಂತನೆ, ಸಂಸ್ಕೃತಿ, ಪರಿಸರ ಇತ್ಯಾದಿ ಸಮೃದ್ಧ ಪ್ರಕಾರಗಳನ್ನು ತುಂಬಿಸಿ ಗ್ರಂಥಾಲಯವನ್ನು ಪ್ರತಿದಿನವೂ ತೆರೆಯುವಂತೆ ಮಾಡಿ ಓದುಗರನ್ನು ಸೆಳೆಯುವ ಪ್ರಯತ್ನ ಆಗಬೇಕು ಎಂಬುದನ್ನು ಮನಗಂಡೆ. ಈ ಅವಿರತ ಪ್ರಯತ್ನದಿಂದಾಗಿ ಇಂದು ಗ್ರಂಥಾಲಯದಲ್ಲಿ ಸಂಘದ ಹಣದಿಂದ ಖರೀದಿಸಿದ್ದು, ಆಡಳಿತವರ್ಗದಿಂದ ಪಡೆದುಕೊಂಡಿದ್ದು ಮಾತ್ರವಲ್ಲದೆ ಉದಾರ ದಾನಿಗಳಿಂದ ಸಂಗ್ರಹೀತವಾದುವು ಸೇರಿ ಒಟ್ಟಾರೆ ಈ ಪುಸ್ತಕಗಳ ಸಂಖ್ಯೆ ೩೫೦೦ ಮುಟ್ಟಿದೆ. ಈ ವರ್ಷ ಕನ್ನಡ ಪುಸ್ತಕ ಪ್ರಾಧಿಕಾರವು ಸುಮಾರು ೨೫೦೦೦ ರೂಪಾಯಿಗಳ ಮೌಲ್ಯದ ೧೮೦ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದೆ. ಗ್ರಂಥಾಲಯಕ್ಕೆ ಹೊಸಪುಸ್ತಕ ಬಂದ ಕೂಡಲೇ ಅದಕ್ಕೊಂದು ದಪ್ಪರಟ್ಟಿನ ಹೊದಿಕೆ ಹಾಕಿ ನಂಬರು ಬರೆದು ಠಸ್ಸೆ ಒತ್ತಿ ಪಟ್ಟೀಕರಣಗೊಳಿಸಿ ಇಡಲಾಗುತ್ತದೆ.

ಗ್ರಂಥಾಲಯಕ್ಕೆ ಗಣಕಯಂತ್ರದ ಕೊಡುಗೆ ಅನುಪಮ ಹಾಗೂ ಅನನ್ಯ. ಆದರೆ ನಮಗೆ ಕೊಟ್ಟ ಗಣಕಯಂತ್ರವು ತೀರಾ ಹಳೆಯದಾಗಿತ್ತಲ್ಲದೆ ಯಾರೋ ಬೇಡವೆಂದು ಮಡಗಿದ್ದನ್ನು ನಮ್ಮ ಸುಪರ್ದಿಗೆ ಕೊಡಲಾಗಿತ್ತು. ಕ್ರಮೇಣ ಅದರ ಬಿಡಿಭಾಗಗಳನ್ನು ಮೇಲ್ದರ್ಜೆಗೇರಿಸಿ, ಅಚ್ಚುಕಟ್ಟಾದ ಮೇಜೊಂದನ್ನು ಹೊಂದಿಸಿದ್ದಾಯಿತು. ಇಷ್ಟೆಲ್ಲ ಇದ್ದರೂ ಮಾನ್ಯ ಸದಸ್ಯರು ಕೇಳುವ ಪುಸ್ತಕಗಳನ್ನು ಸುಲಭದಲ್ಲಿ ಹುಡುಕಿ ತೆಗೆಯಲಾಗುತ್ತಿರಲಿಲ್ಲ. ಒಬ್ಬರು ಹುಡುಕುವಾಗ ಇನ್ನೊಬ್ಬರು ಕಾಯುತ್ತಾ ನಿಲ್ಲುವುದು ಸಾಮಾನ್ಯ ಸಂಗತಿಯಾಗಿತ್ತು. ಇರುವ ಅಲ್ಪಕಾಲದಲ್ಲಿ ಎಲ್ಲರಿಗೂ ಸಮರ್ಥಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಜಾಗದ ಕೊರತೆ ಇರುವುದರಿಂದ ಸದಸ್ಯರು ಹೊರಗೆ ಕಾಯುತ್ತಾ ನಿಲ್ಲುವುದು ಸಹಜವಾಗಿತ್ತು. ಮಹಿಳಾ ಸದಸ್ಯರು ಈ ಜನಜಂಗುಳಿಯ ಬಗ್ಗೆ ದೂರುತ್ತಿದ್ದರು. ನಮ್ಮ ಸಂಘದ ಕಾರ್ಯದರ್ಶಿ ಎಂ ಜಯರಾಜಯ್ಯನವರ ಅವಿರತ ಓಡಾಟದ ಫಲವಾಗಿ ಗ್ರಂಥಾಲಯ ಕಟ್ಟಡ ಈಗ ವಿಸ್ತಾರಗೊಂಡಿದೆ.

ಮೊದಲು ಇದ್ದ ನಾಲ್ಕು ಮರದ ಕಪಾಟುಗಳ ಸ್ಥಾನದಲ್ಲಿ ಇಂದು ಹದಿನೆಂಟು ಉಕ್ಕಿನ ಕಪಾಟುಗಳಿವೆ. ಪುಸ್ತಕಾಲಯದ ಗಣಕಯಂತ್ರದಲ್ಲಿ ಎಲ್ಲ ೩೫೦೦ ಪುಸ್ತಕಗಳ ಹಾಗೂ ೧೫೦೦ ಸದಸ್ಯರ ಹೆಸರು ಹಾಗೂ ವಿವರಗಳನ್ನು ದಾಖಲು ಮಾಡಲಾಗಿದೆ. ಪುಸ್ತಕದ ಮೌಲ್ಯ, ಲೇಖಕ ಪ್ರಕಾಶಕರ ದಾನಿಗಳ ಹೆಸರು, ಪ್ರಕಾರ ವಿಂಗಡನೆ, ಎರವಲು ಹೋಗಿದ್ದರೆ ಯಾರು ತೆಗೆದುಕೊಂಡಿದ್ದಾರೆ ಎಂಬ ವಿವರ, ಮೊದಲೇ ಓದಿ ಆಗಿದ್ದರೆ ಅದರ ಬಗೆಗಿನ ಮಾಹಿತಿ, ಸದಸ್ಯರ ವಿಭಾಗ ಬಿಲ್ಲೆ ಮತ್ತು ದೂರವಾಣಿ ಸಂಖ್ಯೆ ಇತ್ಯಾದಿಗಳನ್ನು ಕ್ಷಣದಲ್ಲೇ ತಿಳಿಯಲು ಸಂಪೂರ್ಣ ಕನ್ನಡಮಯವಾದ ಒಂದು ಉಪಯುಕ್ತ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ಅಚ್ಚಗನ್ನಡ ತಂತ್ರಾಂಶದ ಸಹಾಯದಿಂದ ಪುಸ್ತಕದ ವಿತರಣೆ ಅತ್ಯಂತ ಸುಲಭಸಾಧ್ಯವಾಗಿದೆ. ಪುಸ್ತಕದ ಶೀರ್ಷಿಕೆ ಗೊತ್ತಿಲ್ಲ ಮಗುವಿಗೆ ಸಂಬಂಧಿಸಿದ್ದು ಎಂದರೆ ಸಾಕು, ಬೆರಳ ತುದಿಗಳಲ್ಲೇ ನಿಮ್ಮ ಮಗು, ತಾಯಿ ಮಗು, ಮಗುವಿಗೊಂದು ಹೆಸರು ಈ ರೀತಿಯಾಗಿ ’ಮಗು’ ಎಂಬ ಪದ ಇರುವ ಎಲ್ಲ ಶೀರ್ಷಿಕೆಗಳನ್ನೂ ತೋರಿಸುತ್ತದೆ. ಪುಸ್ತಕದ ಹೆಸರಿನೊಂದಿಗೆ ಲೇಖಕರು ಅನುವಾದಕರು ಪ್ರಕಾಶಕರು ಬೆಲೆ ಲಭ್ಯವಿದೆ/ಲಭ್ಯವಿಲ್ಲ ಇತ್ಯಾದಿ ಮಾಹಿತಿಗಳು ಕಾಣುತ್ತವೆ. ಪುಸ್ತಕಗಳನ್ನು ಪ್ರಕಾರಾದಿ, ಲೇಖಕರಾದಿ, ಶೀರ್ಷಿಕೆಯಾದಿ ಹುಡುಕಬಹುದು. ಮೊದಲೇ ಓದಿದ್ದ ಪುಸ್ತಕವೊಂದನ್ನು ಆಯ್ಕೆ ಮಾಡಿಕೊಂಡಾಗ ಈಗಾಗಲೇ ಅದನ್ನು ಓದಿದ್ದೀರಿ ಮತ್ತೊಮ್ಮೆ ಬೇಕೇ ಎಂಬಂತಹ ಪ್ರಶ್ನೆಗಳೂ ಕಾಣಬರುತ್ತವೆ. ಅವಧಿ ಮೀರಿ ಹಿಂದಿರುಗಿಸಿದಾಗ ಇಂತಿಷ್ಟು ದಂಡ ಪಾವತಿಸಿ ಎಂಬ ಸಂದೇಶವೂ ಕಾಣುತ್ತದೆ.
ಈ ತಂತ್ರಾಂಶವನ್ನು ರೂಪಿಸಿದ ಕರ್ತವ್ಯ ಐ ಟಿ ಸಲ್ಯೂಷನ್ಸಿನ ಸಿದ್ಧಾರೂಢ ಮತ್ತು ಅವರ ಗೆಳೆಯರು ಸದಾ ಸ್ಮರಣೀಯರು. ಏಕೆಂದರೆ ಈ ಗ್ರಂಥಾಲಯ ಕಾರ್ಯನಿರತವಾಗುವುದು ಪ್ರತಿದಿನ ಊಟದ ವೇಳೆಯಲ್ಲಿ ಮಾತ್ರ. ಪುಸ್ತಕ ಹಿಡಿದು ಬರುವವರ ದೊಡ್ಡ ದಂಡು ಲಭ್ಯವಿರುವ ಅಲ್ಪ ಸಮಯದಲ್ಲಿ ತನ್ನ ಅಭೀಷ್ಟೆ ಪೂರೈಸಿಕೊಳ್ಳಲು ಈ ತಂತ್ರಾಂಶ ಗರಿಷ್ಠ ಸಹಾಯ ನೀಡುತ್ತದೆ.

ಕಾರ್ಖಾನೆಯ ಮೊದಲ ಮನುಷ್ಯನಿಂದ ಹಿಡಿದು ಅತ್ಯಂತ ಕೆಳಮನುಷ್ಯನವರೆಗೂ ಎಲ್ಲರೂ ಸದಸ್ಯರಾಗಿರುವ ಈ ಗ್ರಂಥಾಲಯದ ಗುರುತಿನ ಚೀಟಿಯು ಅತ್ಯಂತ ವಿಶಿಷ್ಟವಾಗಿದೆ. ಅದರಲ್ಲಿ ಸದಸ್ಯನ ಹೆಸರು ಸಂಖ್ಯೆ ವಿಭಾಗ ಮತ್ತು ದೂರವಾಣಿಗಳು ಕನ್ನಡದಲ್ಲಿ ಮುದ್ರಿತವಾಗಿವೆ. ಜ್ಞಾನಪೀಠ ಪುರಸ್ಕೃತ ಕನ್ನಡಿಗರ ವರ್ಣಚಿತ್ರದ ಕೊಲಾಜ್ ಇದೆ. ಹಿಂಬದಿಯಲ್ಲಿ ನಿಬಂಧನೆಗಳ ಜೊತೆಗೆ ಕನ್ನಡದ ಅಂಕಿಗಳ ಪರಿಚಯವಿದೆ. ಕನ್ನಡೇತರರೂ ಈ ಗುರುತಿನ ಚೀಟಿಯನ್ನು ತಮ್ಮ ಕಿಸೆಯಲ್ಲಿಟ್ಟುಕೊಳ್ಳುವುದಕ್ಕೆ ತುಂಬಾ ಹೆಮ್ಮೆ ಪಡುತ್ತಾರೆ.