ಮಂಗಳವಾರ, ಸೆಪ್ಟೆಂಬರ್ 1, 2009

ಕುಂಕುಮ ಮತ್ತು ಬಳೆ

“ಸಮಾಜದ ಕಟ್ಟಕಡೆಯವನಿಗೆ ನೀವು ಏನನ್ನು ಮಾಡುತ್ತೀರೋ ಅದನ್ನು ನನಗೇ ಮಾಡಿದಂತೆ” ಎಂದ ಯೇಸುಕ್ರಿಸ್ತನ ಆದೇಶದಂತೆ ಕ್ರೈಸ್ತಧರ್ಮೀಯರು ತಮ್ಮ ಕ್ರಿಯಾತ್ಮಕ ಚಟುವಟಿಕೆಗಳಿಂದ ಕ್ರಿಸ್ತಪ್ರೀತಿಯನ್ನು ಎಲ್ಲರಿಗೂ ಭೇದಭಾವವಿಲ್ಲದೆ ಹಂಚುತ್ತಿದ್ದಾರೆ. ಆದರೆ ಅವರ ಚಟುವಟಿಕೆಗಳು ಹಿಂದೂ ಮೂಲಭೂತವಾದಿಗಳಿಗೆ ಮತಾಂತರದ ಹುನ್ನಾರದಂತೆ ತೋರುತ್ತಿವೆ. ಇತ್ತೀಚಿನ ದಿನಗಳಲ್ಲಿ ಕ್ರೈಸ್ತಧರ್ಮ ಮತ್ತು ಕ್ರೈಸ್ತ ನಡವಳಿಕೆಗಳ ಬಗ್ಗೆ ಇವರಲ್ಲಿ ಅಸಹನೆ ಹೆಚ್ಚುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಸಂಘಪರಿವಾರದ ಕೆಲ ಸಂಘಟನೆಗಳು ಏನೂ ಅರಿಯದ ಯುವಜನರಲ್ಲಿ ಕ್ರೈಸ್ತಧರ್ಮದ ಬಗ್ಗೆ ವಿಷಬೀಜವನ್ನು ಬಿತ್ತುತ್ತಾ ಇದ್ದಾರೆ. ಸುಳ್ಳುಸುಳ್ಳೇ ಆರೋಪಗಳನ್ನು ಕ್ರೈಸ್ತಧರ್ಮೀಯರ ಬಗ್ಗೆ ಆರೋಪಿಸುತ್ತಾ ಇವರು ಅಮಾಯಕರಲ್ಲಿ ಕಿಚ್ಚು ಹೊತ್ತಿಸುತ್ತಾರೆ.

ಈ ಸಂಘಪರಿವಾರದವರು ಕ್ರೈಸ್ತರ ಬಗ್ಗೆ ಹೊಂದಿರುವ ತಪ್ಪು ಪರಿಕಲ್ಪನೆಗಳಲ್ಲಿ ಈ ಕುಂಕುಮ ಬಳೆ ವ್ಯಾಖ್ಯಾನವೂ ಒಂದು. ಕ್ರೈಸ್ತ ವಿದ್ಯಾಸಂಸ್ಥೆಗಳಲ್ಲಿ ಹೆಣ್ಣುಮಕ್ಕಳಿಗೆ ಕುಂಕುಮ ಹಚ್ಚಿಕೊಳ್ಳಲು ಅಥವಾ ಬಳೆ ತೊಟ್ಟುಕೊಳ್ಳಲು ನಿರ್ಬಂಧವಿದೆ ಎಂಬುದು ಅಂಥ ಒಂದು ವಾದ. ದಿನಾಂಕ ೨೬-೦೮-೨೦೦೯ರ ಪ್ರಜಾವಾಣಿ ವಾಚಕರವಾಣಿಯಲ್ಲಿ ಒಬ್ಬರು ಬರಗೂರು ರಾಮಚಂದ್ರಪ್ಪನವರ ಹೆಸರನ್ನು ಉಲ್ಲೇಖಿಸುತ್ತಾ ಹೀಗೆ ಹೇಳಿಕೊಂಡಿದ್ದಾರೆ.
http://www.prajavani.net/Content/Aug262009/netmail20090825143307.asp

ಕುಂಕುಮ ಬಳೆಗಳನ್ನು ಧರಿಸಬೇಡಿ ಎನ್ನುವ ನಿರ್ಬಂಧ ಕ್ರೈಸ್ತಸಂಸ್ಥೆಗಳಲ್ಲಿ ಮಾತ್ರವಲ್ಲ ಇತರ ಧರ್ಮೀಯರು ನಡೆಸುವ ಶಾಲೆಗಳಲ್ಲೂ ಕೇಂದ್ರೀಯ ವಿದ್ಯಾಲಯಗಳಲ್ಲೂ ಇದೆ. ಸರ್ಕಾರದ ನಿಯಮದಂತೆ ಯೂನಿಫಾರ್ಮಿಟಿ ಪಾಲಿಸುವುದಕ್ಕೋಸ್ಕರವೂ ಮಕ್ಕಳಲ್ಲಿ ಶಿಸ್ತು ತರುವ ಕಾರಣಕ್ಕಾಗಿಯೂ ಇಂತ ನಿರ್ಬಂಧಗಳನ್ನು ಹಾಕಿಕೊಳ್ಳಬೇಕಾಗುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಇನ್ನೂ ಕೆಲವು ಶಾಲೆಗಳಲ್ಲಿ ಗೋರಂಟಿ ಹಚ್ಚಿಕೊಳ್ಳಬಾರದು, ಉಗುರುಬಣ್ಣ ಹಚ್ಚಿಕೊಳ್ಳಬಾರದು, ಸರ ಧರಿಸಬಾರದು, ಬೆಲೆಬಾಳುವ ಆಭರಣ ಧರಿಸಬಾರದು, ಕೆಂಪು ರಿಬ್ಬನ್ ಕಟ್ಟಬೇಕು, ಬಿಳಿ ಕಾಲುಚೀಲ ಧರಿಸಬೇಕು ಹೀಗೆ ಏನೇನೋ ಶಿಸ್ತಿನ ಕ್ರಮಗಳಿವೆ.

ಬರೀ ಕುಂಕುಮವಷ್ಟನ್ನೇ ಮತ್ತು ಕ್ರೈಸ್ತಶಾಲೆಗಳಷ್ಟನ್ನೇ ಈ ಮತಾಂಧರು ಜಾತಿಧರ್ಮಗಳ ದೃಷ್ಟಿಯಿಂದ ನೋಡುತ್ತಾರೆ. ಅಂದಹಾಗೇ ಕುಂಕುಮ ಮತ್ತು ಬಳೆಗಳು ಜಾತಿಧರ್ಮಗಳ ಸೂಚಕವೋ ಸಂಸ್ಕೃತಿಯ ಸೂಚಕವೋ ಎನ್ನುವುದೇ ಒಂದು ಯಕ್ಷಪ್ರಶ್ನೆ. ಹಾಗೆ ನೋಡಿದರೆ ಕ್ರೈಸ್ತರು ತಮ್ಮ ದೈನಂದಿನ ಬದುಕಿನಲ್ಲಿ ಕುಂಕುಮ ಬಳೆಗಳನ್ನು ನಿಷೇಧಿಸಿಲ್ಲ. ಎಲ್ಲೋ ಕೆಲವರು ವ್ರತ ನೇಮಗಳ ನೆಪದಲ್ಲಿ ಅವನ್ನು ಧರಿಸದೇ ಇರಬಹುದು. ಇನ್ನು ಕ್ರೈಸ್ತ ಸಂನ್ಯಾಸಿನಿಯರು ಮದುವೆಯಾಗದೆ ಕ್ರಿಸ್ತಸೇವೆಯಲ್ಲಿ ನಿರತರಾಗುವುದರಿಂದ ಅವರಿಗೆ ಕುಂಕುಮ ಬಳೆ ಮಾತ್ರವಲ್ಲ ಪ್ರಸಾಧನ ಸಾಧನಗಳು, ವೈವಿಧ್ಯಮಯ ಉಡುಪುಗಳು, ಆಭರಣಗಳು ಎಲ್ಲವೂ ವರ್ಜ್ಯ.

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಗಂಡನಿರುವ ಸ್ತ್ರೀಯರು ಮಾತ್ರವೇ ಕುಂಕುಮ ಮತ್ತು ಬಳೆಗಳನ್ನು ಧರಿಸುವುದು ವಾಡಿಕೆ. ನಮಗೆ ತಿಳಿದಿರುವಂತೆ ಮದುವೆಯಾದ ಹೆಣ್ಣುಮಕ್ಕಳು ತಮ್ಮ ವಿವಾಹದ ಸಂಕೇತವಾಗಿ ಕುಂಕುಮ ಧರಿಸುತ್ತಾರೆ ಹಾಗೂ ಮದುವೆಯಾಗದ ಹೆಣ್ಣುಮಕ್ಕಳು ಸಣ್ಣದೊಂದು ಬೊಟ್ಟು ಇಟ್ಟುಕೊಳ್ಳುತ್ತಾರೆ. ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳು ಇನ್ನೂ ಮದುವೆಯೇ ಆಗಿಲ್ಲದಿರುವುದರಿಂದ ಅವರಿಗೆ ಕುಂಕುಮ ಮತ್ತು ಬಳೆಗಳನ್ನು ಧರಿಸಲು ಹೇಗೆ ತಾನೇ ಹೇಳಲಾದೀತು? ಮೊದಲಿಗೆ ಸಂಘಪರಿವಾರದ ಈ ಜನರು ತಮ್ಮ ಜನಾಂಗದಲ್ಲಿ ವಿಧವೆಯರಾದ ಹೆಣ್ಣುಮಕ್ಕಳಿಗೆ ಬಳೆ ಮತ್ತು ಕುಂಕುಮ ತೊಡುವುದಕ್ಕೆ ಅವಕಾಶ ಕೊಡಲಿ, ಆಮೇಲೆ ಮದುವೆಯಾಗದ ಹೆಣ್ಣುಮಕ್ಕಳ ಬಗ್ಗೆ ಮಾತನಾಡೋಣ. ಈಚೀಚೆಗೆ ಮದುವೆಯಾದ ಹೊಸಪೀಳಿಗೆ ಹಿಂದೂ ಹೆಣ್ಣುಮಕ್ಕಳು ತಾಳಿಯನ್ನು ಕಳಚಿ ತಮ್ಮ ಜೀನ್ಸ್ ಪ್ಯಾಂಟಿನ ಜೇಬಿನಲ್ಲಿಟ್ಟುಕೊಂಡು ಓಡಾಡುತ್ತಾರಲ್ಲ, ಅದರ ಬಗ್ಗೆ ಇವರು ಏನು ಹೇಳುತ್ತಾರೋ?