ಭಾನುವಾರ, ಜನವರಿ 25, 2009

ಒಮ್ಮುಖ ಪತ್ರಿಕೆ

ಕನ್ನಡ ದಿನಪತ್ರಿಕೆ “ವಿಜಯಕರ್ನಾಟಕ”ವು ಸಂಘಪರಿವಾರದ ಮುಖವಾಣಿಯಂತಿದ್ದು ಪ್ರತಿನಿತ್ಯ ಅದರ ತುಂಬೆಲ್ಲ ಕ್ರೈಸ್ತರನ್ನು ದೇಶದ್ರೋಹಿಗಳೆಂಬಂತೆ ಪ್ರತಿಬಿಂಬಿಸಲಾಗುತ್ತಿದೆ. ಅದರಲ್ಲಿ ಕ್ರೈಸ್ತ ಸಮುದಾಯದ ಪರವಾದ ಸುದ್ದಿಗಳು ಪ್ರಕಟವಾಗುವುದಿಲ್ಲ ಮಾತ್ರವಲ್ಲ ಸಂಪಾದಕೀಯದಿಂದ ಹಿಡಿದು ಅಂಕಣಗಳು ಹಾಗೂ ವಾಚಕರ ಪತ್ರಗಳವರೆಗೆ ಎಲ್ಲವೂ ಕ್ರೈಸ್ತರ ವಿರುದ್ಧ ಹಲ್ಲು ಮಸೆಯುತ್ತಿರುವುದನ್ನು ಕಾಣಬಹುದಾಗಿದೆ. ಭಾರತೀಯ ಪತ್ರಿಕಾ ನೀತಿಯ ಪ್ರಕಾರ ಸುದ್ದಿಯೊಂದರ ಎರಡೂ ಬದಿಗಳನ್ನು ಓದುಗರ ಮುಂದಿಡಬೇಕು. ಆದರೆ ಇಲ್ಲಿ ಈ ಪತ್ರಿಕೆಯಲ್ಲಿ ಸಂಘಪರಿವಾರದ ವಿಧ್ವಂಸಕ ಕೃತ್ಯಗಳನ್ನು ರಣಶೌರ್ಯದಂತೆ ತೋರಿಸಲಾಗುತ್ತದೆ, ಅದೇ ವೇಳೆಯಲ್ಲಿ ಕ್ರೈಸ್ತರ ಅಥವಾ ಕ್ರೈಸ್ತ ಸಂಸ್ಥೆಗಳ ಕಾರ್ಯಗಳನ್ನು ದೇಶದ್ರೋಹದಂತೆ ಬಿಂಬಿಸಲಾಗುತ್ತದೆ. ಕ್ರೈಸ್ತ ಸಂಸ್ಥೆಗಳು ಮಾಡುವ ಒಳ್ಳೇ ಕಾರ್ಯಗಳನ್ನು ಈ ಪತ್ರಿಕೆ ವರದಿ ಮಾಡುವುದೇ ಇಲ್ಲ, ಆದರೆ ಎಲ್ಲೋ ಒಂದು ಸಣ್ಣ ತಪ್ಪನ್ನು ಒಬ್ಬ ಕೆಲಸಕ್ಕೆ ಬಾರದ ವರದಿಗಾರನೊಬ್ಬ ವರದಿ ಮಾಡಿದರೂ ಅದಕ್ಕೆ ವಿಶೇಷಣಗಳ ಮೇಲ್ಬರಹ ಕೊಟ್ಟು ಬಣ್ಣಬಣ್ಣವಾಗಿ ಪ್ರಕಟಿಸಲಾಗುತ್ತದೆ.
ಪ್ರತಾಪಸಿಂಹ ಎಂಬ ಒಬ್ಬ ಅಂಕಣಕಾರನಂತೂ ತಾನೊಬ್ಬ ಮಹಾನ್ ಪಂಡಿತ ಎಂದಂದುಕೊಂಡು ಮಹಾನ್ ವ್ಯಕ್ತಿಗಳ ಹೇಳಿಕೆಗಳನ್ನುತನಗೆ ಬೇಕಾದಂತೆ ತಿರುಚಿ ಸುಳ್ಳುಗಳ ಕಂತೆಯನ್ನೇ ಹೊಸೆಯುತ್ತಾನೆ. ಆತ ಬೌದ್ಧ ಧರ್ಮದ ಪ್ರಾರಂಭದೊಂದಿಗೆ ನಮ್ಮ ದೇಶದ ಅಧಃಪತನವೂ ಪ್ರಾರಂಭವಾಯಿತೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆಂದು ಇತ್ತೀಚೆಗೆ ಬೊಗಳೆ ಹೊಡೆದಿದ್ದ. ಬುದ್ಧನು ತನ್ನ ಕಾಲದಲ್ಲಿ ಆಚರಣೆಯಲ್ಲಿದ್ದ ವೈದಿಕ ಧರ್ಮದ ಶ್ರೇಣೀಕೃತ ವ್ಯವಸ್ಥೆಯನ್ನೂ ಗೊಡ್ಡು ಸಂಪ್ರದಾಯಗಳನ್ನೂ ಸ್ವರ್ಗನರಕಗಳ ಪರಿಕಲ್ಪನೆಯನ್ನೂ ಖಂಡಿಸಿ ಎಲ್ಲ ಮನುಷ್ಯರಿಗೂ ಸಮಾನಸ್ಥಾನ ನೀಡಿದ. ಈ ಮಹಾನ್ ಆದರ್ಶವನ್ನು ಅವನ ಅನುಯಾಯಿಗಳು ದಿಕ್ಕುದಿಕ್ಕಿಗೂ ಕೊಂಡೊಯ್ದರು. ಬುದ್ಧನನ್ನು ಪ್ರಗತಿಪರ ಭಾರತದ ನವ್ಯ ಪ್ರವರ್ತಕ ಎಂದು ಭಾವಿಸಿದ್ದ ವಿವೇಕಾನಂದರು ಆತನನ್ನು ಭಗವಾನ್ ಬುದ್ಧ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮನುಧರ್ಮವು ಬುದ್ಧನ ಆದರ್ಶ ತತ್ವಗಳನ್ನೆಲ್ಲ ಗಾಳಿಗೆ ತೂರಿ ತನ್ನ ಬೇರುಬಿಟ್ಟಿತು. ಇದನ್ನು ಕುರಿತೇ ವಿವೇಕಾನಂದರು ಒಮ್ಮೆ ತಮ್ಮ ಭಾಷಣದಲ್ಲಿ ".... ನಿಮ್ಮ ಪೂರ್ವೀಕರ ಮಾತಿನಲ್ಲಿ ನಿಮಗೆ ನಂಬಿಕೆ ಇನ್ನೂ ಇದ್ದರೆ, ಈ ಕ್ಷಣವೇ ಹಿಂದೆ ಕುಮಾರಿಲ ಭಟ್ಟ ತನ್ನ ಬಗ್ಗೆ ಸುಳ್ಳು ಹೇಳಿಕೊಂಡು ಒಬ್ಬ ಬೌದ್ಧ ಗುರುವಿನಲ್ಲಿ ಕಲಿತದ್ದರ ಆಧಾರದ ಮೇಲೆ, ಆ ಗುರುವನ್ನೇ ವಾದದಲ್ಲಿ ಸೋಲಿಸಿ; ಆನಂತರ ಸುಳ್ಳು ಹೇಳಿ ಗೈದ ಗುರು ದ್ರೋಹದ ಪ್ರಾಯಶ್ಚಿತ್ತಕ್ಕಾಗಿ ತುಷಾನಲದಲ್ಲಿ ಬಿದ್ದಂತೆ ನೀವೂ ಬಿದ್ದು ಪ್ರಾಯಶ್ಚಿತ್ತ ಮಾಡಿಕೊಳ್ಳಿ. ಇದನ್ನು ಮಾಡುವುದಕ್ಕೆ ನಿಮಗೆ ಧೈರ್ಯವಿಲ್ಲದೇ ಇದ್ದಲ್ಲಿ, ನಿಮ್ಮ ತಪ್ಪನ್ನು ಒಪ್ಪಿಕೊಂಡು ಎಲ್ಲರಿಗೂ ಸಹಾಯ ಮಾಡಿ. ಜ್ಞಾನಾಗಾರದ ಬಾಗಿಲನ್ನು ಎಲ್ಲರಿಗೂ ತೆರೆದು ಸಹಾಯ ಮಾಡಿ. ದುರ್ಬಲ ಜನಸಾಮಾನ್ಯರಿಗೆ ಮತ್ತೊಮ್ಮೆ ಅವರಿಗೆ ನ್ಯಾಯವಾಗಿ ಸಲ್ಲುವ ಹಕ್ಕು ಬಾಧ್ಯತೆಗಳನ್ನು ಕೊಡಿ.'' ವಿವೇಕಾನಂದರ ಈ ಎಚ್ಚರಿಕೆಯ ಮಾತುಗಳಿಗೆ ಕಿವಿಗೊಡದೆ ತಮ್ಮ ಭೋಜನ - ಬೈಠಕ್ಕುಗಳಲ್ಲೇ ಕಾಲ ಕಳೆದ ಬುದ್ಧ ನಿಂದಕರು, ತಾವು ಮಾಡದ ಕೆಲಸವನ್ನು ಕ್ರಿಶ್ಚಿಯನ್ ಮಿಷನರಿಗಳು ಮಾಡತೊಡಗಿದಾಗ, ತಮ್ಮ ಸಾಮ್ರಾಜ್ಯ ಕುಸಿಯುತ್ತಿರುವ ಆತಂಕದಲ್ಲಿ ಈಗ ದೇಶಪ್ರೇಮ ಹಾಗೂ ಧರ್ಮಪ್ರೇಮದ ಬೊಬ್ಬೆ ಹೊಡೆಯತೊಡಗಿದ್ದಾರೆ. (ವಿಕ್ರಾಂತ ಕರ್ನಾಟಕದಲ್ಲಿ ಮಾನ್ಯ ಡಿ ಎಸ್ ನಾಗಭೂಷಣರು ಬರೆದ ಲೇಖನದಿಂದ). ಈ ಪ್ರತಾಪಸಿಂಹನೂ ಅದೇ ಸಂಘಪರಿವಾರದ ಮರಿಯಾಗಿರುವುದು ಸ್ಪಷ್ಟವಾಗಿರುವುದರಿಂದ ಆತನಿಂದ ಖಾಲಿ ಬಿಂದಿಗೆಯ ಶಬ್ದದ ಹೊರತು ಇನ್ನೇನು ತಾನೇ ನಿರೀಕ್ಷಿಸಲು ಸಾಧ್ಯ?
ಅದೇ ಪತ್ರಿಕೆಯ ಓದುಗರ ಪತ್ರಗಳ ಅಂಕಣದಲ್ಲಿಯೂ ಅಪ್ಪಿತಪ್ಪಿ ಕೂಡಾ ಕ್ರೈಸ್ತಸಮುದಾಯದ ಪರವಾದ ಪತ್ರಗಳು ಪ್ರಕಟವಾಗುತ್ತಿಲ್ಲ. ನಾಡಿನಲ್ಲಿ ಅನೇಕ ಸಮಸ್ಯೆಗಳಿದ್ದರೂ ಜನರೆಲ್ಲರೂ ಕ್ರೈಸ್ತಸಮುದಾಯದ ವಿರುದ್ಧವೇ ಚಿಂತಿಸುತ್ತಾರೆ ಎಂಬಂತೆ ಆ ಅಂಕಣದ ತುಂಬೆಲ್ಲ ಬರೀ ಅದೇ ವಿಷಯಗಳ ಪತ್ರಗಳನ್ನು ಪ್ರಕಟಿಸಲಾಗುತ್ತಿದೆ.
ಇದೀಗ ಕನ್ನಡದ ಪ್ರಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರು ಕ್ರಿಸ್ತೀಕರಣದ ಕುರಿತಂತೆ ಬರೆದ ಲೇಖನಕ್ಕೆ ಒಂದೂವರೆ ಪುಟಗಳನ್ನು ಮೀಸಲಿಟ್ಟ ಈ ಪತ್ರಿಕೆ ಆ ಲೇಖನದ ಕುರಿತ ಚರ್ಚೆಗೆ ತಾನು ವೇದಿಕೆಯಾಗುವುದಾಗಿ ಪ್ರಕಟಿಸಿತು. ಅದರ ಮರುದಿನವೇ ಜಾನ್ ಸಿಕ್ವೆರಾ ಸಮಜಾಯಿಷಿ ಪ್ರಕಟವಾಯಿತು. ಮತ್ತು ಆ ಪ್ರತಿಕ್ರಿಯೆ ಜಾಳಾದ ಹಂದರ ಹೊಂದಿತ್ತು ಮಾತ್ರವಲ್ಲ ಚರ್ಚೆಯನ್ನು ದಾರಿತಪ್ಪಿಸುವ ಆಶಯ ಹೊಂದಿತ್ತು. ಹೀಗೇ ಮತ್ತೂ ಹಲವು ನಮ್ಮ ಸಮುದಾಯದ ವಿರುದ್ಧವಾದ ಪ್ರತಿಕ್ರಿಯೆಗಳು ಬಂದವು. ವಿಜಯಕರ್ನಾಟಕ ಪತ್ರಿಕೆ ಏಕಾಏಕಿ ತನ್ನ ಪ್ರಸರಣ ಸಂಖ್ಯೆ ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಒಂದು ಗದ್ದಲವನ್ನು ಹುಟ್ಟುಹಾಕಿತೇನೋ, ಆದರೆ ಸಂಪಾದಕ ವಿಶ್ವೇಶ್ವರಭಟ್ಟನಿಗೆ ಪೇಜಾವರ ಸ್ವಾಮಿಗಳ, ಯಡಿಯೂರಪ್ಪನವರ ಮತ್ತು ಸಂಘಪರಿವಾರದವರ ವಿಶೇಷ ಆಶೀರ್ವಾದಗಳು ಸಿಕ್ಕಿತೆನ್ನಬಹುದು.

ಭಾನುವಾರ, ಜನವರಿ 11, 2009

ಸಾಪ್ತಾಹಿಕ ಪುರವಣಿ ೧೧೦೧೨೦೦೯

ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಲೇಖನಗಳು ನನ್ನ ಮನಸ್ಸಿಗೆ ಬಹುವಾಗಿ ಲಗತ್ತಾದವು.

"ಸಂಕ್ರಾಂತಿಯ ಹಿಗ್ಗು ಕಾಣುವುದು ಸುಗ್ಗಿಯಲ್ಲಿ. ಮುಳುಗಡೆಯ ನಂತರ ಚಿಂದಿಯಾದ ಬದುಕು, ಉಳುವ ಭೂಮಿಯ ತೊಳೆದುಹಾಕಿದ ಯೋಜನೆಗಳ ನಡುವೆ ಮಣ್ಣಿನ ಮಕ್ಕಳೆಲ್ಲಾ ಕಂಗಾಲು. ಬದುಕನ್ನು ಮತ್ತೆ ಕಟ್ಟುವ ಅನಿವಾರ್ಯತೆಗೆ ಮುಖಾಮುಖಿಯಾಗಿರುವ ರೈತವರ್ಗ ಅಸಲಿ ಸುಗ್ಗಿಯನ್ನೂ, ಸಂಕ್ರಮಣವನ್ನೂ ಎದುರು ನೋಡುತ್ತಿದೆ. ಅವರ ಪಥ ಬದಲಾಗುವುದು ಎಂದೋ?" ಎನ್ನವು ಲೇಖನ ’ಸುಗ್ಗಿಯಲ್ಲೂ ಕುಗ್ಗಿದವರು’. ರೈತನ ಹಬ್ಬವಾದ ಸಂಕ್ರಾಂತಿಯು ಹೇಗೆ ರೈತನನ್ನು ನೇಪಥ್ಯಕ್ಕೆ ಸರಿಸುತ್ತಾ ಇತರರ ಹಬ್ಬವಾಗಿದೆ ಎಂಬುದನ್ನು ಸಾರುತ್ತದೆ.

ಹಾಗಂತ, ಸಂಕ್ರಾಂತಿಯ ಸವಿಯನ್ನು ಮೆಲುಕು ಹಾಕದಿರಲು ಸಾಧ್ಯವೇ? "ಹೊಲ ಇದ್ದವರೆಲ್ಲ ತಮ್ಮ ಆಪ್ತೇಷ್ಟರಿಗೆ ’ಸೀತನಿ ತಿನ್ನಾಕ ಹೋಗೂನು ಬರ್‍ರಿ’ ಎಂದು ಆತ್ಮೀಯ ವೀಳ್ಯವಿತ್ತರೆ, ಭೂರಿಭೋಜನದ ಹಬ್ಬವೇ ಆಗಿರುತ್ತದೆ. ಬುತ್ತಿಗೆ ಸಜ್ಜೆ ರೊಟ್ಟಿ, ಝಣಕದ ಒಡಿ, ಎಣ್ಣಿಗಾಯಿ, ಮೊಸರನ್ನದ ಬುತ್ತಿ, ಸೇಂಗಾ ಹಿಂಡಿ, ಗಟ್ಟ ಮೊಸರು, ಗೋಧಿ ಕುಟ್ಟಿದ ಹುಗ್ಗಿ . . . ಜೊತೆಗೆ ಹಸಿಮೆಂತ್ಯ ಸೊಪ್ಪು, ಹೊಲದ ಬದುವಿನ ಮೇಲೆ ಸಿಗುವ ಹಕ್ಕರಿಕೆ, ಎಳೆ ಕಡಲೆಗಿಡದ ಎಲೆಗಳು.. ಹೀಗೆ ಒಂದೆರಡಲ್ಲ, ಹತ್ತು ಹಲವು ಪದಾರ್ಥಗಳೊಂದಿಗೆ ಸಿಹಿ ಸೀತನಿ ಸವಿಯುವ ನೆವದಲ್ಲಿ ಒಂದು ’ಈಟ್ ಔಟ್’ . .

ಇಂದು ಕಾಲೇಜಿನಲ್ಲಿ ಗೋಕಾಕರ ಮೊದಲ ಉಪನ್ಯಾಸ, ಅವರನ್ನು ಗೇಲಿ ಮಾಡಿ ಕೆಣಕಲು ನಾವು ಪಣ ತೊಟ್ಟಿದ್ದೆವು. ಆದರೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಅವರ ಮಾತಿನ ಓಘದ ಝರಿಗೆ ನಾವೆಲ್ಲ ಮಂತ್ರಮುಗ್ದರಾಗಿಬಿಟ್ಟೆವು. ಅದೇನು ಕವಿಯೊಬ್ಬ ಕಾವ್ಯದ ವಿಮರ್ಶೆ ಮಾಡುತ್ತಿದ್ದಾನೋ ಅಥವಾ ವಿಮರ್ಶೆಯೇ ಕಾವ್ಯವಾಗುತ್ತಿದೆಯೋ . .

ಕಿಟೆಲ್ ತಮ್ಮ ನಿಘಂಟಿನಲ್ಲಿ "ಇದ್ದಕ್ಕಿದ್ದ ಹಾಗೆ" ಎಂಬುದು ಜನರ ಮಾತಿನಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ ಬರವಣಿಗೆಯಲ್ಲಿ ಮುಂಬಯಿ ಪ್ರಾಂತ್ಯದ ಶಾಲಾ ಪುಸ್ತಕಗಳಲ್ಲಿ ಬಳಕೆಯಾಗಿದೆಯೆಂದೂ ಹೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಎಂಬುದಕ್ಕೆ ಇರುವಂತೆಯೇ, ಯಥಾವತ್ತಾಗಿ, ತದ್ದವತ್ತಾಗೆ ಎಂಬ ತಿರುಳುಗಳನ್ನು ಕಿಟೆಲ್ ಅವರು ಗುರುತಿಸುತ್ತಾರೆ. ಈಗ ೧.ನಡುಹಗಲಲ್ಲಿ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ೨. ನೀನು ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಅಷ್ಟು ಹಣ ನಾನು ಎಲ್ಲಿ ತರಲಿ? . . ಅಂದರೆ ನೂರು ವರುಷಗಳ ಅವಧಿಯಲ್ಲಿ ಇದ್ದಕ್ಕಿದ್ದ ಹಾಗೆ ಎಂಬ ರಚನೆಯ ತಿರುಳಿನಲ್ಲಿ ಎದ್ದುಕಾಣುವ ಬದಲಾವಣೆಯಾಗಿದೆ ಎಂದಾಯ್ತು.

ಸಿದ್ದರಾಮನು ಎಂಬ ಗೋವು ಬದ್ದನಾಗಿರೆ ಹಸ್ತದೊಳಗೆ ಗದ್ದುಗೆಯು ಸಿಗದಿರಲು ಆಗ ಎದ್ದು ನಡೆದನು ಕೇರ್‍ಳಕೆ | ಅಂಕಿ ಇದಿಗೋ ಸಂಖ್ಯೆ ಇದಿಗೋ ಸಂಕ್ರಮಣ ನಿರ್ಧಾರವಿದಿಗೋ ಬಿಂಕದಿಂದಲೆ ಆಚೆ ನಡೆವೆನು ಥಿಂಕು ಮಾಡಿರಿ ಎಂದನು

ಇವಿಷ್ಟಲ್ಲದೆ ಪ್ರಿಯಾ ತೆಂಡೂಲ್ಕರರ ಕತೆ, ಹರಿಯಬ್ಬೆ ಪ್ರೇಮಕುಮಾರರ ಸಂಸ್ಕೃತಿ ಮೆಲುಕು, ತಾರಿಣಿ ಶುಭದಾಯಿನಿಯವರ ಕಾವ್ಯದೃಷ್ಟಿ, ಲಕ್ಷ್ಮಣ ಕೊಡಸೆಯವರ ವಿಮರ್ಶೆ, ಯಲ್ಲಾಪ್ರಗಡ ಸುಬ್ಬರಾಯರ ಬಗ್ಗೆ ಬಿಂದುಸಾರ ಅವರ ಲೇಖನ, ವಿಜ್ಞಾನ-ವಿನೋದ, ಸಾಗರಕ್ಕೆ ೪೮ ಕಿಲೋಮೀಟರು ದೂರದಲ್ಲಿರುವ ಸಿಗಂದೂರಿಗೆ ನೀರಯಾತ್ರೆ, ಭುಬನೇಶ್ವರದಿಂದ ಪುರಿಗೆ ಹೋಗುವ ದಾರಿಯಲ್ಲಿರುವ ಪಿಪಿಲಿ ಎಂಬ ಪುಟ್ಟ ಗ್ರಾಮದ ಕರಕುಶಲಕಲೆ ಇವುಗಳೆಲ್ಲ ಮನಸೆಳೆಯುತ್ತವೆ.

ಒಟ್ಟಿನಲ್ಲಿ ಸಾಪ್ತಾಹಿಕ ಪುರವಣಿ ಒಂದು ಓದಲೇಬೇಕಾದ ಸರಕು.