ಸೋಮವಾರ, ಡಿಸೆಂಬರ್ 26, 2011

ತೆಸಿಯೇ ಸ್ವಾಮಿಯವರು TEISSIER Hippolyte, MEP (1853 - 1922)


ನವೆಂಬರ್ ೧೫ನೇ ತಾರೀಖು ತೆಸಿಯೇ ಸ್ವಾಮಿಯವರ ಜನ್ಮದಿನ. ಬೆಂಗಳೂರು, ಮೈಸೂರು ಮತ್ತು ಶೀಮೊಗ್ಗೆ ಧರ್ಮಪ್ರಾಂತ್ಯಗಳು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದಂಥ ಅನುಪಮ ಚೇತನ ಈ ತೆಸಿಯೇ ಸ್ವಾಮಿಯವರು. ಫ್ರಾನ್ಸ್ ದೇಶದ ಐಷಾರಾಮೀ ಜೀವನವನ್ನು ಬದಿಗೊತ್ತಿ ಕ್ರಿಸ್ತರಾಜ್ಯವನ್ನು ಪಸರಿಸುವ ಕಷ್ಟಕರ ಹಾದಿ ತುಳಿದ ಇವರು ಏಳು ದಶಕಗಳ ಕಾಲ ನಮ್ಮ ನಾಡಿನಲ್ಲಿ ಜೀವ ಸವೆಸಿದವರು. ಅಂದು ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಅದೇ ತಾನೇ ಪ್ರವರ್ಧಿಸುತ್ತಿತ್ತು. ಇಲ್ಲಿ ಧರ್ಮಪ್ರಚಾರ ನಡೆಸಿದ್ದ ಜೆಸ್ವಿತರು ತಂತಮ್ಮ ನಾಡುಗಳಿಗೆ ಹಿಂದಿರುಗಿ ಐವತ್ತು ವರ್ಷಗಳಾಗಿದ್ದವು. ಸ್ಥಳೀಯ ಕ್ರೈಸ್ತರು ಆಧ್ಯಾತ್ಮಿಕ ಪೋಷಣೆಯಿಲ್ಲದೆ ಜ್ಞಾನಸ್ನಾನ ಪೂಜೆ ಸತ್ಪ್ರಸಾದಗಳಿಲ್ಲದೆ ಮದುವೆ ಮತ್ತು ಸಾವುಗಳನ್ನು ಮಂತ್ರಿಸುವವರಿಲ್ಲದೆ ಸೊರಗಿದ್ದರು. ಉಪದೇಶಿಗಳಷ್ಟೇ ಜಪತಪಗಳನ್ನು ಮುಂದುವರಿಸಿದ್ದರು.
ಫ್ರಾನ್ಸ್ ದೇಶದ ಮಿಷನರಿಗಳು ಧರ್ಮಸೇವೆಯ ಹೊಣೆ ಹೊತ್ತುಕೊಂಡಿದ್ದರಾದರೂ ಅವರ ವ್ಯಾಪಕ ಚಟುವಟಿಕೆಗೆ ಅಪಾರ ಹಣ ಮತ್ತು ಗುರುವರ್ಯರ ಅವಶ್ಯಕತೆ ಇತ್ತು. ದೇಶೀಯ ಗುರುಗಳನ್ನು ಹುಟ್ಟುಹಾಕುವ ಪದ್ಧತಿ ಇನ್ನೂ ಶುರುವಾಗಿರಲಿಲ್ಲ. ಪ್ರತಿಯೊಂದಕ್ಕೂ ಯೂರೂಪಿನತ್ತಲೇ ನೋಡಬೇಕಾದಂಥ ಪರಿಸ್ಥಿತಿ ಇತ್ತು. ಫ್ರೆಂಚರು ವಸಾಹತು ಹೊಂದಿದ್ದ ಪಾಂಡಿಚೇರಿಯಲ್ಲಿ ಫ್ರೆಂಚ್ ಮಿಷನರಿಗಳು ಕೇಂದ್ರ ಕಚೇರಿ ಇಟ್ಟುಕೊಂಡು ಗುರುಗಳಿಗೆ ನಿರ್ದೇಶನ ನೀಡುತ್ತಿದ್ದರು. ಅಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದ್ಯುಬುವಾ, ಶಾರ್ಬೊನೊ, ಶೆವಾಲಿಯೇ ಮುಂತಾದವರು ಕ್ರಿಸ್ತರಾಜ್ಯದ ಸಸಿಗೆ ನೀರೆರೆದು ಪೋಷಿಸಿದರು. ತೆಸಿಯೇ ಅವರು ಕೂಡಾ ಇಂಥ ಮಹನೀಯರಲ್ಲಿ ಒಬ್ಬರು.
೧೮೫೩ರಲ್ಲಿ ಫ್ರಾನ್ಸ್ ದೇಶದಲ್ಲಿ ಹುಟ್ಟಿದ ತೆಸಿಯೇ ಅವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಅಂದರೆ ೧೮೭೯ರಲ್ಲಿ ಗುರುಪಟ್ಟ ಪಡೆದು ಅದೇ ವರ್ಷ ಬೆಂಗಳೂರಿಗೆ ಬಂದರು. ಆರು ತಿಂಗಳ ಕಾಲ ಇಲ್ಲಿ ಕನ್ನಡವನ್ನು ಅಭ್ಯಸಿಸಿದ ಅವರು ಇಂದು ತಮಿಳುನಾಡಿಗೆ ಸೇರಿಹೋಗಿರುವ ಹೊಸೂರಿನ ಸಮೀಪದ ಮತ್ತಿಕೆರೆಗೆ ನಿಯುಕ್ತರಾದರು. ಹೊಸೂರಿಗೆ ಸಮೀಪವಿರುವ ಮತ್ತಿಕೆರೆ, ಮರಂದನಹಳ್ಳಿ, ದಾಸರಹಳ್ಳಿ, ತಳಿ ಮುಂತಾದ ಧರ್ಮಕೇಂದ್ರಗಳು ಅಂದು ಕನ್ನಡನಾಡಿನ ಭಾಗಗಳೇ ಆಗಿದ್ದು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರು ಕನ್ನಡದಲ್ಲಿಯೇ ಜಪತಪಗಳನ್ನು ಮಾಡುತ್ತಿದ್ದರೆಂಬುದು ಗಮನಾರ್ಹ.
ಅಲ್ಲಿ ಕೆಲ ತಿಂಗಳು ಕಳೆದ ಮೇಲೆ ತೆಸಿಯೇ ಸ್ವಾಮಿಯವರನ್ನು ಶೀಮೊಗ್ಗೆಗೆ ಕಳಿಸಲಾಯಿತು. ಮಲೆನಾಡಿನ ಸುಂದರ ಪರಿಸರದಲ್ಲಿ ಮೂರುವರ್ಷಗಳ ಕಾಲ ಕ್ರಿಸ್ತನ ಸೇವೆ ಮಾಡಿದ ಆ ಉತ್ಸಾಹೀ ತರುಣ ೧೮೮೪ರ ಜನವರಿಗೆ ಬೆಂಗಳೂರಿನ ಶಿಲ್ವೆಪುರಕ್ಕೆ ಬಂದರು. ಆಗಷ್ಟೇ ಶಿಲ್ವೆಪುರವು ಕ್ಷಾಮ ಮತ್ತು ಪ್ಲೇಗಿನಿಂದ  ಅನಾಥರಾಗಿದ್ದವರ ಪುನರ್ವಸತಿ ಕೇಂದ್ರವಾಗಿ ರೂಪುಗೊಂಡಿತ್ತು. ಆ ಹೊಸ ಶಿಬಿರದ ಜನರಿಗೆ ಒಂದು ವರ್ಷಕಾಲ ಕೃಷಿ ಚಟುವಟಿಕೆಗಳ ಕುರಿತ ಮಾರ್ಗದರ್ಶನ ನೀಡಿದ ತೆಸಿಯೇ ಸ್ವಾಮಿಗಳು ೧೮೮೫ರ ಜೂನ್ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಊರಿಗೆ ವರ್ಗವಾದರು.
 ಗಂಜಾಮು ಮೈಸೂರು ಪ್ರಾಂತ್ಯದ ಪ್ರಾಚೀನ ಕ್ರೈಸ್ತಕೇಂದ್ರ. ಅಲ್ಲಿದ್ದ ಕ್ರೈಸ್ತರೆಲ್ಲ ಸಿರಿವಂತ ಒಕ್ಕಲುಮಕ್ಕಳು. ಜೆಸ್ವಿತರ ನಿರ್ಗಮನದ ನಂತರ ತಮಗೆ ಗುರುಗಳ ಕೊರತೆಯಾದಾಗ ಟಿಪ್ಪುಸುಲ್ತಾನನ ಮೂಲಕ ಗೋವೆಯವರೆಗೂ ಅಹವಾಲು ಕೊಂಡೊಯ್ದ ಜನ ಅವರು. ಅಂಥಾ ಹೋರಾಟದ ಪರಂಪರೆಯುಳ್ಳ ಗಂಜಾಮು ತೆಸಿಯೇ ಅವರ ಕರ್ಮಭೂಮಿಯಾಯಿತು. ಅಲ್ಲಿದ್ದುಕೊಂಡೇ ಅವರು ಇಡೀ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ ಕ್ರೈಸ್ತರಿಗೆ ಅಧ್ಯಾತ್ಮದ ಪೋಷಣೆ ಮಾಡಿದರು. ಕೊಡಗಿನ ಗಡಿಯ ಕಾಡುಕುರುಬರನ್ನು ಕ್ರೈಸ್ತಧರ್ಮಕ್ಕೆ ಬರಮಾಡಿಕೊಳ್ಳುವಲ್ಲಿ ಅವರ ಸಾಧನೆ ಗಣನೀಯ. ದೋರನಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಜನಪ್ರಿಯಗೊಳಿಸಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾ ಜನಸಾಮಾನ್ಯರೊಂದಿಗೆ ಆತ್ಮೀಯರಾಗಿದ್ದ ತೆಸಿಯೇ ಸ್ವಾಮಿಯವರನ್ನು ಅಂದು ಮೈಸೂರು ಧರ್ಮಪ್ರಾಂತ್ಯದ ಬಿಷಪರಾಗಿದ್ದ ಕುವಾಡು (Mgr. Couadou) ಅವರು ೧೮೯೦ರಲ್ಲಿ ಎಂಟು ಜಿಲ್ಲೆಗಳ ಇಡೀ ಮೈಸೂರು ಪ್ರಾಂತ್ಯಕ್ಕೆ prosecutor ಆಗಿ ನೇಮಿಸಿ ಬಿಷಪರ ಮನೆಯಲ್ಲಿಯೇ ಅವರಿಗೊಂದು ಸ್ಥಾನ ಕಲ್ಪಿಸಿದರು.
ಸುಮಾರು ಇಪ್ಪತ್ತಾರು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದರಲ್ಲದೆ ಬೆಂಗಳೂರಿನ ಮಾರ್ಥಾ ಆಸ್ಪತ್ರೆಯಲ್ಲಿ ಆಧ್ಯಾತ್ಮಿಕ ಗುರುವಾಗಿಯೂ ಜನರಿಗೆ ಮಾರ್ಗದರ್ಶನ ನೀಡಿದರು. ಮಾರ್ಥಾ ಆಸ್ಪತ್ರೆಯಲ್ಲಿ ನರ್ಸಿಂಗ್ ಶಾಲೆಯನ್ನು ತೆರೆದು ನೂರಾರು ಹೆಣ್ಣುಮಕ್ಕಳಿಗೆ ಕೆಲಸ ಕಲ್ಪಿಸಿದರು. ದೇಶೀ ಹೆಣ್ಣುಮಕ್ಕಳಿಗಾಗಿಯೇ ಸಂತ ಫ್ರಾನ್ಸಿಸರ ಮೂರನೇ ಮಠವನ್ನು ಸ್ಥಾಪಿಸಿದರು. ಬೆಂಗಳೂರಿನ ಪ್ರಸಿದ್ಧ ಸಂತ ಜೋಸೆಫರ ಕಾಲೇಜನ್ನು ಕಟ್ಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
೧೯೧೬ರ ಸೆಪ್ಟೆಂಬರ್ ೪ನೇ ತಾರೀಖು ತೆಸಿಯೇ ಸ್ವಾಮಿಯವರ ಜೀವನದಲ್ಲಿ ಒಂದು ಮಹತ್ವದ ದಿನ. ಆ ದಿನ ಅವರು ಇಡೀ ಮೈಸೂರು ಪ್ರಾಂತ್ಯಕ್ಕೆ ಮೇತ್ರಾಣಿಯಾಗಿ ನೇಮಕಗೊಂಡರು. ನಿಜ ಹೇಳಬೇಕೆಂದರೆ ಬಿಷಪ್ ಪದವಿ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಹಲವಾರು ಕಷ್ಟ ತೊಂದರೆಗಳನ್ನು ಅವರು ಎದುರಿಸಬೇಕಾಗಿತ್ತು. ಯೂರೋಪಿನಲ್ಲಿ ಮಹಾಯುದ್ಧ ನಡೆಯುತ್ತಿದ್ದ ಕಾರಣ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ಜನಜೀವನ ದುರ್ಭರವಾಗಿತ್ತು. ಗುರುಗಳ ಸಂಖ್ಯೆಯೂ ಕಡಿಮೆಯಿತ್ತು. ಯೂರೋಪಿನ ಸಹಾಯಧನ ನಿಂತುಹೋಗಿತ್ತು. ಇಂಥ ಕಠಿಣವಾದ ದಿನಗಳಲ್ಲಿ ತೆಸಿಯೇ ಸ್ವಾಮಿಗಳು ವಿಶಾಲ ಧರ್ಮಪ್ರಾಂತ್ಯವನ್ನು ತನ್ನ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು ಬಹುವಾಗಿ ಶ್ರಮಿಸಿದರು.
ಅವರ ೪೭ವರ್ಷಗಳ ದೀರ್ಘಕಾಲದ ಅವಿರತ ಸೇವೆಯ ಫಲವಾಗಿ ಅವಿಭಜಿತ ಮೈಸೂರು ಧರ್ಮಪ್ರಾಂತ್ಯವು ಇಡೀ ದೇಶದಲ್ಲಿಯೇ ಒಂದು ಮಾದರಿ ಧರ್ಮಪ್ರಾಂತ್ಯವಾಗಿ ರೂಪುಗೊಂಡಿತು ಎಂದರೆ ಅತಿಶಯವಲ್ಲ. ಹೀಗೆ ಯೇಸುಕ್ರಿಸ್ತನ ವಿನಮ್ರ ಸೇವಕನಾಗಿ ಹಗಲೂ ಇರುಳೂ ದುಡಿದ ಅವರು ೧೯೨೨ ಫೆಬ್ರವರಿ ೨೬ರಂದು ಸ್ವರ್ಗಸ್ಥರಾದರು. ಅಂದಿನ ಕಾಲದಲ್ಲಿ ಬಿಷಪರ ನಿವಾಸವೂ ಪ್ರಧಾನಾಲಯವೂ ಆಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಆವರಣದಲ್ಲಿಯೇ ಅವರನ್ನು ಮಣ್ಣುಮಾಡಲಾಗಿದೆ.
ಯಾವಾಗಲಾದರೂ ಆ ದೇವಾಲಯಕ್ಕೆ ಭೇಟಿ ನೀಡಿದಾಗ ಬಲಿಪೀಠದ ಬಳಿ ಬಲರೆಕ್ಕೆಯಲ್ಲಿ ತೆಸಿಯೇ ಸ್ವಾಮಿಗಳ ಸಮಾಧಿಕಲ್ಲನ್ನು ನೋಡಿ ನಮಿಸೋಣ. ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಬಲವಾಗಿ ಬೇರೂರಲು ಶ್ರಮವಹಿಸಿ ನೀರೆರೆದ ಒಬ್ಬ ಮಹಾನ್ ದೇವಸೇವಕನನ್ನು ಹೃತ್ಪೂರ್ವಕವಾಗಿ ಸ್ಮರಿಸೋಣ. 

ಬುಧವಾರ, ಡಿಸೆಂಬರ್ 7, 2011

ಮಿಶನರಿ ಯಾತ್ರೆಯ ಹಿಂದೆ


೧೫-೧೬ನೇ ಶತಮಾನಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಐರೋಪ್ಯರು ಹೊಸಹೊಸ ಜಲಮಾರ್ಗಗಳನ್ನು ಕಂಡುಹಿಡಿದು ವಿವಿಧ ಖಂಡಗಳನ್ನು ತಲುಪಿ ಅಲ್ಲೆಲ್ಲಾ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು. ಅವರೊಂದಿಗೆ ಅವರ ವಾಣಿಜ್ಯ ಹಡಗುಗಳಲ್ಲಿ ಕ್ರೈಸ್ತ ಧರ್ಮಪ್ರಚಾರದ ಅಭಿಲಾಷೆಯುಳ್ಳ ಪಾದ್ರಿಗಳೂ ಸ್ವಯಿಚ್ಛೆಯಿಂದ ಪ್ರಯಾಣಿಸಿ ಹೊಸ ದೇಶಗಳ ಒಳನಾಡನ್ನೆಲ್ಲ ಸುತ್ತಿದರು.
ಹಾಗೆ ಇಂಡಿಯಾ ದೇಶಕ್ಕೆ ಜಲಮಾರ್ಗವಾಗಿ ಬಂದವರಲ್ಲಿ ಪೋರ್ಚುಗೀಸರೇ ಮೊದಲಿಗರು. ೧೪೯೮ರಲ್ಲಿ ವಾಸ್ಕೊ ಡ ಗಾಮನು ಕಲ್ಲಿಕೋಟೆಯಲ್ಲಿ ಲಂಗರು ಹಾಕುವುದರೊಂದಿಗೆ ಇಂಡಿಯಾದ ನೆಲದಲ್ಲಿ ಹೊಸ ಗಾಳಿ ಬೀಸುವುದಕ್ಕೆ ಕಾರಣಕರ್ತನಾದನು. ಪೋರ್ಚುಗೀಸ್ ಸರ್ಕಾರದ ವತಿಯಿಂದ ನಡದ ಇಂತಹ ಸಾಹಸೀ ಜಲಯಾತ್ರೆಗಳನ್ನು ಕ್ರೈಸ್ತ ಜಗದ್ಗುರು ಪೋಪರೂ ಹರಸಿ ಆಶೀರ್ವದಿಸಿದ್ದರು. ಅಂತೆಯೇ ಹೊಸದಾಗಿ ಕಂಡುಹಿಡಿವ ದೇಶಗಳಲ್ಲಿ ಧರ್ಮಪ್ರಚಾರಕರಿಗೆ ಸಹಕಾರ ನೀಡಬೇಕೆನ್ನುವ ಕ್ರೈಸ್ತ ಜಗದ್ಗುರುಗಳ ಮನವಿಯನ್ನು ಧರ್ಮಭೀರುಗಳಾದ ಪೋರ್ಚುಗೀಸರು ಶಿರಸಾವಹಿಸಿ ಪಾಲಿಸಿದ್ದರಲ್ಲಿ ಅತಿಶಯವೇನೂ ಇಲ್ಲ.
ಅಲ್ಲದೆ ವರ್ತಕರ ಮತ್ತು ಧರ್ಮಪ್ರಚಾರಕರ ನಡುವೆ ಒಂದು ಕಂಡೂ ಕಾಣದ ಒಳ ಒಪ್ಪಂದವಿದ್ದಂತೆಯೂ ತೋರುತ್ತದೆ. ಧರ್ಮಪ್ರಚಾರಕರು ಮಳೆಬಿಸಿಲೆನ್ನದೆ ಹಸಿವು ನೀರಡಿಕೆಯೆನ್ನದೆ ಕಾಡುಮೇಡುಗಳೆನ್ನದೆ ಸುತ್ತಿ ಕ್ರಿಸ್ತಸಂದೇಶವನ್ನು ಪ್ರಚಾರ ಮಾಡುತ್ತಿದ್ದರು. ಪಾದ್ರಿಗಳ ಕೆಲಸದಲ್ಲಿ ತ್ಯಾಗ ಬಲಿದಾನಗಳೇ ಮೇಲುಗೈಯಾದರೆ ಅದೇ ವೇಳೆಯಲ್ಲಿ ಸಮಾನಸಾಹಸಿಗಳಾಗಿದ್ದ ವಾಣಿಜ್ಯ ಯಾತ್ರಿಗಳಲ್ಲಿ ಧನದಾಹದ ಸ್ವಾರ್ಥ ಮೇಲಾಟ ನಡೆಸಿದ್ದವು. ಆದರೂ ಈ ವರ್ತಕರು ಧರ್ಮಪ್ರಚಾರಕರನ್ನು ಅತ್ಯಂತ ಗೌರವದಿಂದ ಪರಿಭಾವಿಸುತ್ತಿದ್ದರು. ವರ್ತಕರ ಹಡಗುಗಳಲ್ಲಿ ಪಾದ್ರಿಗಳು ಪತ್ರಗಳನ್ನು, ಬಟ್ಟೆಬರೆಗಳನ್ನು, ಔಷಧಿ ಉಡುಗರೆ ಪೂಜಾಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಬಹುದಿತ್ತು. ಅವರು ಒಂದು ಪೆಟ್ಟಿಗೆಯ ಮೇಲೆ ವಿಳಾಸದಾರರ ಹೆಸರು ಬರೆದು ಹಡಗಿನ ಸಿಬ್ಬಂದಿಗೆ ನಿಶ್ಚಿಂತೆಯಿಂದ ಒಪ್ಪಿಸಿಬಿಟ್ಟರೆ ಸಾಕಿತ್ತು, ಅದರೊಳಗೇನಿದೆ ಎಂದು ವಿಚಾರಿಸುವ ಗೊಡವೆಗೇ ಹೋಗದೆ ಅದು ವಿಳಾಸದಾರರಿಗೆ ಖಂಡಿತ ತಲುಪುತ್ತಿತ್ತು. ಹೀಗೆ ಇಂದಿನ ಕೊರಿಯರ್ ಸೇವೆಯ ಮೂಲಬೇರುಗಳನ್ನು ನಾವಿಲ್ಲಿ ಕಾಣಬಹುದು. 
ವರ್ತಕ ಸಮುದಾಯವು ತಮಗಾಗಿ ಇಷ್ಟನ್ನೆಲ್ಲ ಮಾಡುವಾಗ ಅವರ ಋಣ ತೀರಿಸಲು ಪಾದ್ರಿ ಸಮುದಾಯವು ತಾನೂ ಏನಾದರೂ ಮಾಡಬೇಕಲ್ಲವೇ?  ಅವರು ತಾವು ಸಂದರ್ಶಿಸಿದ ಪ್ರಾಂತ್ಯಗಳ ರಾಜನೊಂದಿಗೆ ಸಂವಾದಿಸಿ ರಾಯಭಾರಿಯ ಕೆಲಸ ಮಾಡುತ್ತಿದ್ದರು. ಆ ರಾಜನನ್ನು ಭೇಟಿಯಾದಾಗ ಚಿನ್ನಬೆಳ್ಳಿಯ ಕುಸುರಿವಸ್ತುಗಳು, ಬೆಲೆಬಾಳುವ ವಸ್ತ್ರಗಳು, ವಿಶೇಷವಾಗಿ ಭಟ್ಟಿಯಿಳಿಸಿದ ಮದ್ಯ ಮುಂತಾದವುಗಳನ್ನು ಉಡುಗರೆಯಾಗಿ ನೀಡಲಾಗುತ್ತಿತ್ತು. ಈ ವಸ್ತುಗಳನ್ನು ವರ್ತಕ ಸಿಬ್ಬಂದಿಯೇ ಒದಗಿಸುತ್ತಿದ್ದಂತೆ ತೋರುತ್ತದೆ. ಆ ಮೂಲಕ ಆ ರಾಜರುಗಳೊಂದಿಗೆ ದೌತ್ಯದಲ್ಲಿ ಯಶರಾಗುತ್ತಿದ್ದ ಪಾದ್ರಿಗಳು ಅವರ ನಾಡಿನಲ್ಲಿ ಮುಕ್ತವಾಗಿ ಸಂಚರಿಸಲು ಸನ್ನದು ಪಡೆಯುತ್ತಿದ್ದರು ಮತ್ತು ಅದೇ ವೇಳೆಯಲ್ಲಿ ಆ ರಾಜರು ತಮ್ಮ ಸೇನಾಪಡೆಯನ್ನು ಮೇಲ್ದರ್ಜೆಗೇರಿಸಲು ವರ್ತಕರೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ವಿಜಯನಗರದ ಅರಸನು ತನ್ನ ಓರಗೆಯ ಬಿಜಾಪುರ ಸುಲ್ತಾನನ್ನು ಮಣಿಸಲು ಪೋರ್ಚುಗೀಸರಿಂದ ಕುದುರೆಗಳನ್ನೂ ಮದ್ದುಗುಂಡುಗಳನ್ನೂ ಖರೀದಿಸಿದ ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ.
ಹೀಗೆ ಪೋರ್ಚುಗೀಸರು ಇಂಡಿಯಾ ದೇಶಕ್ಕೆ ತಾವು ಕಂಡುಕೊಂಡ ಜಲಮಾರ್ಗಕ್ಕೆ ಪೋಪ್ ಜಗದ್ಗುರುಗಳಿಂದ ವಿಶೇಷ ಪರ್ಮಿಟ್ಟು ಮಾಡಿಕೊಂಡಿದ್ದರಲ್ಲವೇ? ಅವರು ಅಂದು ಪೋಪ್ ಜಗದ್ಗುರುಗಳಿಗೆ ಇಂಡಿಯಾ, ಸಿಲೋನ್, ಬರ್ಮಾ, ಚೀನಾ, ಜಪಾನ್ ದೇಶಗಳನ್ನು ಒಟ್ಟು ಸೇರಿಸಿ ಈ ಅಗಾಧವಾದ ಪ್ರದೇಶವನ್ನು ಒಂದು ಪುಟ್ಟ ಭೂಭಾಗದಂತೆ ತೋರಿಸಿದ ಭೂಪಟವನ್ನು ತಯಾರಿಸಿ ಧರ್ಮಪ್ರಚಾರದ ಹಕ್ಕನ್ನು ಪಡೆದಿದ್ದರು. ಹೀಗೆ ಅವರು ಯೂರೋಪಿನಲ್ಲಿ ಸಂಬಾರ ಪದಾರ್ಥಗಳನ್ನು ವಿಕ್ರಯಿಸುವ ಏಕೈಕ ದೊರೆಗಳಾಗಿ ಮೆರೆಯಲು ತೊಡಗಿದಾಗ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದ ಸ್ಪೇನ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮುಂತಾದ ದೇಶಗಳಿಗೆ ಕಣ್ಣುಕಿಸುರಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಅವರೂ ಇಂಡಿಯಾದತ್ತ ಮುಖ ಮಾಡಲಾರಂಭಿಸುತ್ತಿದ್ದಂತೆ ಪೋರ್ಚುಗೀಸರಿಗೆ ಆತಂಕ ಶುರುವಾಯಿತು.
ಇಂಡಿಯಾದ ಜಲಮಾರ್ಗದಲ್ಲಿ ಆ ಇನ್ನಿತರರೂ ಪಯಣಿಸಿದರೆ ಇಂಡಿಯಾ ಸೇರಿದಂತೆ ಜಪಾನ್ ವರೆಗಿನ ಭೂಮಾಪನದ ಅಳತೆ ಸಿಕ್ಕಿ ಪೋಪರೆದುರು ಮುಖಭಂಗವಾಗುವುದು ಮಾತ್ರವಲ್ಲ, ಸಿಗುತ್ತಿದ್ದ ವರಮಾನದಲ್ಲಿ ಕಡಿತ ಉಂಟಾಗುವುದು ಅವರಿಗೆ ಬೇಡವಾಗಿತ್ತು. ಅದಕ್ಕಾಗಿ ಅವರು ಇಂಗ್ಲಿಷರು ಮತ್ತು ಫ್ರೆಂಚರ ವಿರುದ್ಧ ಕ್ರೈಸ್ತ ಜಗದ್ಗುರು ಪೀಠಕ್ಕೆ ಒತ್ತಡ ತರಲೆತ್ನಿಸಿದರು. ತಾವೇ ಕ್ರೈಸ್ತ ಧರ್ಮರಕ್ಷಕರು, ಈ ಆಂಗ್ಲರು ಮತ್ತು ಫ್ರೆಂಚರು ಪಾಷಂಡಿಗಳು ಎನ್ನುವ ಅಭಿಪ್ರಾಯವನ್ನು ಬಿಂಬಿಸಲು ಸಹಾ ಅವರು ಹಿಂಜರಿಯಲಿಲ್ಲ.
ಒಂದು ಶತಮಾನದ ಕಾಲ ಇಲ್ಲಿ ನೆಲೆನಿಂತು ಅಪಾರ ಹಣಗಳಿಸಿದರೂ ಧರ್ಮಪ್ರಚಾರಕ್ಕೆ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಗೆ ಇಂಕ್ವಿಸಿಷನ್ ಎಂಬ ಬಲವಂತ ದೀಕ್ಷೆ ಉತ್ತರವಾಯಿತೇ? ಅಲ್ಲದೆ ಪೋರ್ಚುಗೀಸ್ ರಾಜಕಾರಣವು ವ್ಯಾಟಿಕನ್ನಿನ ಕ್ರೈಸ್ತ ಜಗದ್ಗುರುಪೀಠದ ಆಡಳಿತದಲ್ಲೂ ಕೈಹಾಕಿ ಪೋಪರ ಮತ್ತು ಬಿಷಪರ ಆಯ್ಕೆಗಳನ್ನು ಪೋರ್ಚುಗೀಸ್ ರಾಜಕಾರಣದ ದಾಳದಂತೆಯೇ ನಡೆಸಿಕೊಂಡದ್ದೂ ಸುಳ್ಳೇನಲ್ಲ. ಅದೇ ರಾಜಕೀಯ ಹುನ್ನಾರದ ಫಲವಾಗಿಯೇ ಜಗದ್ಗುರುಪೀಠವು ತನಗೆ ನಿಷ್ಠರಾಗಿದ್ದ ಯೇಸುಸಭೆಯನ್ನು ಬಹಿಷ್ಕರಿಸಿತ್ತು ಎಂಬುದಂತೂ ಕಟುಸತ್ಯ.
ಕೊನೆಗೂ ರೋಮಾಪುರಿಯ ಈ ಜಗದ್ಗುರುಪೀಠವು ಆ ಕಬಂಧಬಾಹುವಿನಿಂದ ಹೊರಬಂದು ತನ್ನ ಕಾಲಮೇಲೆ ನಿಲ್ಲುವ ಮುನ್ನ ಶತಮಾನಗಳ ಕಾಲ ಪಾದ್ರುವಾದೆ ಮತ್ತು ಪ್ರಾಪಗಾಂಡಾಗಳ ನಡುವಿನ ಶೀತಲಸಮರವನ್ನು ಎದುರಿಸಬೇಕಾಯಿತೆಂಬುದು ಇತಿಹಾಸ.

ಗುರುವಾರ, ಡಿಸೆಂಬರ್ 1, 2011

ಮಣ್ಣಿನ ದಾಖಲೆ


ಕ್ರೈಸ್ತಧರ್ಮ ನಮ್ಮ ನೆಲದ ಧರ್ಮವಲ್ಲ. ನಮ್ಮ ಮಣ್ಣಿನ ಧರ್ಮಗಳಲ್ಲಾದರೆ ಧರ್ಮಸಂಹಿತೆಗಿಂತಲೂ ಹೆಚ್ಚಾಗಿ ಪುರಾಣಪುಣ್ಯ ಕತೆಗಳು, ಉಪಕತೆಗಳು, ನೀತಿಪ್ರಧಾನ ಪ್ರಸಂಗಗಳು ಜನಜನಿತವಾಗಿವೆ. ಆದರೆ ಕ್ರೈಸ್ತಧರ್ಮವನ್ನು ಪ್ರಚುರಪಡಿಸಿದ ವಿದೇಶೀಯರು ತಮ್ಮ ಪಾಶ್ಚಾತ್ಯ ದೇಶಗಳ ಶೈಲಿಯಲ್ಲೇ ವಿಷಯ ನಿರ್ದುಷ್ಟ ಕಟ್ಟುಪಾಡಿಗೆ ಒಳಗಾದವರು. ಅದರ ಜೊತೆಜೊತೆಗೇ ಅವರು ನಮ್ಮ ನಾಡಿಗೆ ಬಂದಾಗ ಅವರಿಗೆ ಭಾಷೆಯ/ಭಾಷಾಂತರದ ಸಂದಿಗ್ದತೆಯೂ ಕಾಡುತ್ತಿತ್ತು. ಈ ಒಂದು ಹಿನ್ನೆಲೆಯಲ್ಲಿ ಆ ಕಾಲದ ಸಂದರ್ಭವನ್ನು ವಿವೇಚಿಸಿದಾಗ ವಿದೇಶೀ ಪಾದ್ರಿಗಳು ಹಾಗೂ ಕ್ರೈಸ್ತ ಜನಸಾಮಾನ್ಯರ ನಡುವೆ ಸ್ಥಳೀಯರೇ ಆದ ಉಪದೇಶಿಗಳು ಪ್ರಮುಖ ಸೇತುವೆಯಾಗಿ ನಿಲ್ಲುವುದನ್ನು ಕಾಣುತ್ತೇವೆ.
ಒಂದೆಡೆ ಈ ಉಪದೇಶಿಗಳು ವಿದೇಶೀ ಪಾದ್ರಿಗಳಿಗೆ ಕನ್ನಡ ಕಲಿಸುವ ಗುರುಗಳಾಗಿದ್ದರೆ ಅದೇ ನೇರದಲ್ಲಿ ಆ ಪಾದ್ರಿಗಳು ಹೇಳುವ ತತ್ತ್ವಗಳಿಗೆ ದೇಶೀಯ ನೆಲೆಯಲ್ಲಿ ತಕ್ಕ ಪದಗಳನ್ನು ಸಂಯೋಜಿಸಿ ಜನರಿಗೆ ತಲಪಿಸುವ ಹೊಣೆಗಾರಿಕೆಯುಳ್ಳವರೂ ಆಗಿದ್ದರು.
ನಮ್ಮ ದೇಶೀಯ ಸಮಾಜಕ್ಕೆ ಅತಿ ಪುರಾತನ ಧಾರ್ಮಿಕ ಆಕರಗಳೆಂದರೆ ವೇದಗಳು, ಧರ್ಮಪ್ರವರ್ತನ ಸೂತ್ರ, ತೀರ್ಥಂಕರ ಚರಿತ್ರೆ, ಷಟ್‌ಸ್ಥಲಸಿದ್ಧಾಂತ ಮತ್ತು ದ್ವೈತಾದ್ವೈತಗಳು. ಇವೆಲ್ಲವುಗಳಲ್ಲಿ ಅತಿ ಪ್ರಾಚೀನವಾದುದು ವೇದಗಳೇ ಆದ್ದರಿಂದ ಕ್ರೈಸ್ತರ ಧರ್ಮಗ್ರಂಥವನ್ನು ವೇದಗಳಿಗೆ ಸಮನಾಗಿ ಪರಿಗಣಿಸುವುದಾಗಲೀ ಅಥವಾ ಚತುರ್ವೇದಗಳ ಸಾಲಿನಲ್ಲಿಟ್ಟು ಸತ್ಯವೇದ ಎಂದು ಕರೆಯುವುದಾಗಲೀ ಈ ಉಪದೇಶಿಗಳಿಂದಲೇ ಸಾಧ್ಯ. ಆದರೆ ಕನ್ನಡನಾಡು ಮಾತ್ರವಲ್ಲ ಇಡೀ ದಕ್ಷಿಣ ಇಂಡಿಯಾದಲ್ಲಿ ಕ್ರೈಸ್ತಧರ್ಮ ಪ್ರಚಾರವನ್ನು ನಡೆಸಿದ ಜೆಸ್ವಿತರಾಗಲೀ ಫ್ರೆಂಚ್ ಮಿಷನ್ನಿನವರಾಗಲೀ ಯಾರೂ ಈ ಉಪದೇಶಿಗಳನ್ನು ತಮ್ಮ ವರದಿಗಳಲ್ಲಿ ದಾಖಲಿಸಲಿಲ್ಲವೆನ್ನುವುದು ವಿಷಾದಕರ ಸಂಗತಿ.
ಮೇಲೆ ಹೇಳಿದ ಮತಪ್ರಚಾರಕರಿಗೆ ತಾವು ಎಷ್ಟು ಮಂದಿಗೆ ಕ್ರೈಸ್ತದೀಕ್ಷೆ ಕೊಟ್ಟೆವೆನ್ನುವ ಅಂಕಿಸಂಖ್ಯೆಗಳೇ ಮುಖ್ಯವಾಗುತ್ತವೆ ಹೊರತು ಎಂಥಾ ಜನರಿಗೆ ತಾವು ದೀಕ್ಷೆಯನ್ನು ಧಾರೆ ಎರೆದೆವೆನ್ನುವುದು ಮುಖ್ಯವಾಗುವುದಿಲ್ಲ. ಹಾಗೇನಾದರೂ ಉಲ್ಲೇಖವಿದ್ದಲ್ಲಿ ವ್ಯಕ್ತಿಯೊಬ್ಬನ ದೀಕ್ಷಾಸಂದರ್ಭದಲ್ಲಿ ನಡೆದ ಘರ್ಷಣೆ, ಅಲ್ಲಿನ ಪಾಳೇಗಾರನ ಅಥವಾ ಜನನಾಯಕನ ಅಥವಾ ಅರಸನ ಪಾತ್ರಗಳು ಚಿತ್ರಿತವಾಗುವ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆ ವ್ಯಕ್ತಿಯನ್ನು ಉಲ್ಲೇಖಿಸಲಾಗಿರುತ್ತದೆ. ಇನ್ನೆಲ್ಲಿಯೂ ಹೊಸಕ್ರೈಸ್ತರ ಮೂಲಹೆಸರುಗಳನ್ನು ಪ್ರಸ್ತಾಪಿಸಿರುವುದೇ ಇಲ್ಲ. ಹೀಗೊಬ್ಬ ಬ್ರಾಹ್ಮಣ ಕ್ರೈಸ್ತನಾದ, ಹೀಗೊಬ್ಬ ಶೈವಸಂನ್ಯಾಸಿ ಕ್ರೈಸ್ತನಾದ, ಅಲ್ಲೊಬ್ಬ ಹೆಂಗಸು ಕ್ರೈಸ್ತಳಾದಳು, ಈ ಊರಿನಲ್ಲಿ ಇಷ್ಟು ಸಂಖ್ಯೆಯ ಮಂದಿ ಕ್ರೈಸ್ತರಾದರು ಎಂಬುದನ್ನಷ್ಟೇ ಕಾಣುತ್ತೇವೆ.
ಆಮೇಲೆ ಆ ಹೊಸಕ್ರೈಸ್ತರ ಪಾಡೇನಾಯಿತು, ಅವರ ಬದುಕು ಆಚಾರ ವಿಚಾರಗಳು ತೀವ್ರತರ ಬದಲಾವಣೆಗಳನ್ನು ಕಂಡವೇ, ಅವರಿಂದ ಸೃಷ್ಟಿಯಾದ ಜನಪದವೇನಾದರೂ ಇತ್ತೇ, ಅವರ ಧರ್ಮದೊಂದಿಗೇನೆ ಜನಪದವೂ ಮುಂಪೀಳಿಗೆಗಳಿಗೆ ಹರಿದು ಬಂತೇ ಎಂಬುದನ್ನು ತಿಳಿಸುವ ದಾಖಲೆಗಳಿಲ್ಲ. 

ಸೋಮವಾರ, ಅಕ್ಟೋಬರ್ 17, 2011

ಜೇನಿನ ರುಚಿಗಿಂತ


ಬೊಂಬಾಯಿನ ಕೊಲಾಬಾದಲ್ಲಿ ಸಾಗರ್ ಎಂಬೋ ನೌಕಾದಳದ ಅತಿಥಿಗೃಹದಲ್ಲಿ ನಾನು ಕೆಲ ದಿನಗಳ ವಾಸ್ತವ್ಯ ಹೊಂದಿದ್ದೆ. ಅದರ ಎಂಟನೇ ಮಹಡಿಯ ಕಿಟಕಿಯಲ್ಲಿ ನಿಂತು ಸನಿಹದಲ್ಲೇ ಕಾಣುತ್ತಿದ್ದ ರಾಜಾಭಾಯ್ ಗಡಿಯಾರ ಗೋಪುರವನ್ನು ನೋಡುತ್ತಲಿದ್ದೆ. ಅತಿಥಿಗೃಹದ ಕೆಳಗಿನ ಉದ್ಯಾನದಲ್ಲಾಗುತ್ತಿದ್ದ ಗದ್ದಲ ಇಲ್ಲಿಗೂ ಕೇಳಿಸುತ್ತಿತ್ತು. ಆ ಉದ್ಯಾನ ಹಾಗೂ ಅದಕ್ಕೆ ಸೇರಿದ ಸಭಾಂಗಣವು ಸಂಜೆಯಾಗುತ್ತಿದ್ದಂತೆ ಕುಡಿತದ ಕೇಕೆಯ ಹಾಗೂ ಔತಣದ ತಾಣವಾಗುತ್ತಿತ್ತು. ದಿನಗಟ್ಟಲೆ ಸಮುದ್ರದ ಏಕತಾನತೆಯಲ್ಲಿ ಸೋತ ನಾವಿಕರು ದಡಕ್ಕೆ ಬಂದು ಶುಭ್ರವಾದ ಬಟ್ಟೆ ತೊಟ್ಟುಕೊಂಡು ನಗರವನ್ನೆಲ್ಲ ಅಂಡಲೆದು ಕೊನೆಗೆ ಸಂಜೆಯಾಗುತ್ತಿದ್ದಂತೆ ಇಲ್ಲಿ ಸೇರುತ್ತಾರೆ.
ಸಭಾಂಗಣದಲ್ಲಿ ಬೃಹತ್ ಪರದೆಗಳ ಮೇಲೆ ಪ್ರಚಲಿತ ಜನಪ್ರಿಯ ಟಿವಿ ಶೋ ಇದ್ದರೂ ಅದರತ್ತ ಯಾರೂ ನೋಡುವವರಿಲ್ಲ. ಅಲ್ಲ, ಮಾತನಾಡಲಿಕ್ಕೆ ಏನೆಲ್ಲ ವಿಷಯಗಳುಂಟು, ಟಿವಿ ತಾನೇ ಯಾರಿಗೆ ಬೇಕು? ಮೋಜು, ಕುಣಿತ, ಕುಡಿತ, ಧೂಮಲೀಲೆ ಹಾಗೂ ಭರ್ಜರಿ ಬಾಡೂಟವಿರುವಾಗ ನಗು ಕೇಕೆ ಹರಟೆಗಳ ನಡುವೆ ಟಿವಿ ಅದರ ಪಾಡಿಗೆ ಅದು ಚಾಲನೆಯಲ್ಲಿರುತ್ತದೆ. ಎಲ್ಲೋ ಒಬ್ಬೊಬ್ಬರು ನಡುವಯಸ್ಸಿನ ಅಬ್ಬೇಪಾರಿಗಳು ಒಂಟಿಯಾಗಿ ಮಧು ಹೀರುತ್ತಾ ಮನೆಯ ನೆನಪುಗಳನ್ನು ನವೀಕರಿಸುತ್ತಾ ಗೆಳೆಯರಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಅಂಥ ಒಂಟೆತ್ತಿನ ಮೇಜಿನಲ್ಲಿ ಕುಳಿತು ಊಟ ಮುಗಿಸಿದವನು ಮೇಲೆ ಹೋಗಿ ಬೃಹತ್ ಬೊಂಬಾಯಿ ನಗರದ ದೀಪದೃಶ್ಯಗಳನ್ನು ನೋಡುವುದೇ ಚೆಂದ. ಆದರೆ ಇಂದು ಎಂಟನೇ ಮಹಡಿಯಲ್ಲಿ ಇನ್ನೊಬ್ಬ ಸ್ನೇಹಿತನಿಗಾಗಿ ನಿರೀಕ್ಷಿಸುತ್ತ ಕಿಟಕಿಯಾಚೆ ನೋಡುತ್ತಿದ್ದೆ.
ಆ ಸಮಯದಲ್ಲೇ ನನ್ನ ಮೊಬೈಲು ರಿಂಗಣಿಸಿತು. ಮನೆಯಿಂದ ಅಂದರೆ ಬೆಂಗಳೂರಿನಿಂದ ಬಂದ ಕರೆ. ನಾನು ಮಾತನಾಡಿ ಮುಗಿಸಿದ ನಂತರ ಒಬ್ಬ ನಡುವಯಸ್ಕ ನನ್ನ ಬಳಿಗೆ ಬಂದು ’ನೀವು ಕ್ರಿಶ್ಚಿಯನ್ನಾ?’ ಎಂದು ಕೇಳಿದ. ನಾನು ಮುಗುಳ್ನಗುತ್ತಾ ಹೌದೆಂದು ತಲೆಯಾಡಿಸಿದೆ. ನನ್ನ ಹೆಸರನ್ನು ಹೊರತುಪಡಿಸಿದರೆ ಮುಖಚಹರೆಯಿಂದ ಅಥವಾ ಮಾತುಗಾರಿಕೆಯಿಂದ ಯಾರೂ ಇದುವರೆಗೆ ನನ್ನನ್ನು ಕ್ರಿಶ್ಚಿಯನ್ ಎಂದು ಗುರುತಿಸಿಲ್ಲ. ಆದರೆ ಈ ವ್ಯಕ್ತಿ ಅದು ಹೇಗೆ ನನ್ನನ್ನು ಕ್ರಿಶ್ಚಿಯನ್ ಎಂದುಕೊಂಡ? ಅದಕ್ಕವನು ಉತ್ತರಿಸುತ್ತಾ ನಿಮ್ಮ ಮೊಬೈಲಿನ ರಿಂಗ್ ಟೋನ್ ಕೇಳಿ ಹಾಗಂದುಕೊಂಡೆ ಎಂದ.
ತುಂಬಾ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆಯ ರಾಗವನ್ನು ನನ್ನ ಮೊಬೈಲಿಗೆ ಅಳವಡಿಸಿಕೊಂಡಿದ್ದೇನೆ. ’ಜೇನಿನ ರುಚಿಗಿಂತ ಯೇಸು ಸುನಾಮವು ದಿವ್ಯ ಮಧುರವಾದ್ದೇ’ ಅನ್ನೋ ಆ ರಾಗವನ್ನು ನೀವೆಲ್ಲ ಕೇಳಿರುತ್ತೀರಿ. ವಿಚಿತ್ರವೆಂದರೆ ನನ್ನ ತಮಿಳು ಸಹೋದ್ಯೋಗಿಯಿಂದ ಆ ರಾಗವನ್ನು ಪಡೆದುಕೊಂಡಿದ್ದೆ, ತಮಿಳಿನಲ್ಲೂ ಈ ರಾಗದ ಗೀತೆಯೊಂದಿದೆ. ಅದೇ ರಾಗದ ಹಾಡು ಮಲಯಾಳದಲ್ಲೂ ಇದೆಯೆಂಬುದು ಇದೀಗ ಈ ವ್ಯಕ್ತಿಯಿಂದ ತಿಳಿಯಿತು. ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಆ ಕ್ರೈಸ್ತ ಭಕ್ತಿಗೀತೆಯನ್ನು ಇಲ್ಲಿ ನೀಡಿದ್ದೇನೆ. ಜಯನ್ ಎಂಬವರು ಅದನ್ನು ರಚಿಸಿದ್ದಾರೆ. ಎರಡು ಬಗೆಯ ರಾಗಗಳಲ್ಲಿ ಅದು ಪ್ರಚಾರದಲ್ಲಿದೆ. ಪಾಶ್ಚಾತ್ಯ ಶೈಲಿಯ ರಾಗಲ್ಲಿರುವುದನ್ನು ಕೇಳಿದ ನಂತರ
ಯೇಸುದಾಸ್ ಹಾಡುವ ದೇಶಿ ಶೈಲಿಯ ಈ ಗೀತೆಯನ್ನು ಕೇಳಿರಿ.
ಗೀತೆಯ ಪಠ್ಯವನ್ನು ಇಲ್ಲಿ ಕೊಟ್ಟಿದ್ದೇನೆ:
ಎನ್ದತಿಶಯಮೇ ದೈವತ್ತಿನ್ ಸ್ನೇಹಂ
ಎತ್ರ ಮನೋಹರಮೇ, ಅದು
ಚಿನ್ತಯಿಲ್ ಅಡಙ್ಙಾ ಸಿನ್ಧುಸಮಾನಮಾಯ್
ಸನ್ತತಮ್ ಕಾಣುನ್ನು ಞಾನ್
ದೈವಮೇ ನಿನ್ ಮಹಾ ಸ್ನೇಹಮ್ ಅದಿನ್ ವಿಧಂ
ಆರ್ಕು ಗ್ರಹಿಚ್ಚರಿಯಾಮ್
ಎನಿಕ್ಕಾವದಿಲ್ಲೇ ಅದಿನ್ ಆೞಮಳನ್ನಿಡಾನ್
ಎತ್ರ ಬಹುಲಮದು
ಮೋದಮೆೞುಂ ತಿರುಮಾರ್ವಿಲ್ ಉಲ್ಲಾಸಮಾಯ್
ಸಂತತಂ ಚೇರ್ನಿರುನ್ನ, ಏಕ
ಜಾತನಾಮೇಶುವೇ ಪಾದಕರ್ಕಾಯ್ ತನ್ನ
ಸ್ನೇಹಮ್ ಅತಿಶಯಮೇ
ಜೀವಿತತ್ತಿಲ್ ಪಲ ವೀೞ್ಚಗಳ್ ವನ್ನಿಟ್ಟುಂ
ಒಟ್ಟುಂ ನಿಷೇಧಿಕ್ಕಾದೆ, ಎನ್ನೆ
ಕೇವಲಂ ಸ್ನೇಹಿಚ್ಚು ಪಾಲಿಚ್ಚಿಡುಂ ತವ
ಸ್ನೇಹಮತುಲ್ಯಮ್ ಅಹೋ!

ಗೆಳೆಯರೊಬ್ಬರು ಈ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
(ಅಚ್ಚರಿ ಅಚ್ಚರಿ ದೇವನ ಪ್ರೀತಿಯು
ಎನಿತು ಮನೋಹರವು, ಅದು
ಚಿನ್ತೆಯ ಮೀರಿದ ಪೆರ್ಗಡಲೊಲು ಎಂದು
ಅನುದಿನ ಪಾಡುವೆನು, ತಂದೆ
ಅನುದಿನ ಪಾಡುವೆನು
ದೇವನೇ ಹರಿಸಿದೆ ಸ್ನೇಹದ ಹೊನಲ್ಗಳ
ಯಾರು ಅಳೆವವರು, ಎನ್ನ
ತಂದೆಯ ಪ್ರೀತಿಯ ಆಳವನಳೆವುದು
ಮೀರಿದ ಬಲುಮೆಯದು, ಎನ್ನ
ಮೀರಿದ ಬಲುಮೆಯದು
ಮೋದವನೀಯುತ ದೇಹಕುಲ್ಲಾಸವ
ಅನುದಿನ ಪ್ರೀತಿಸುತ, ಏಕ
ಜಾತನೇ ಯೇಸುವೇ ಭಕ್ತರ್ಗೆ ನೀಡಿದ
ಪ್ರೀತಿಯದಚ್ಚರಿಯು, ನಿನ್ನ
ಪ್ರೀತಿಯದಚ್ಚರಿಯು

ಜೀವಿತ ಕಾಲದಿ ಮಾಡಿದ ಪಾಪವ
ಕ್ಷಮಿಸುತ ಪಾಲಿಸುತ, ತಂದೆ
ಸಾಕುತ ಸಲಹುತ ಮುನ್ನಡೆಸುವೆ ನಿನ್ನ
ಪ್ರೀತಿ ಅತುಲ್ಯವದು, ತಂದೆ
ಪ್ರೀತಿ ಅತುಲ್ಯವದು)

ಶನಿವಾರ, ಅಕ್ಟೋಬರ್ 15, 2011

ಎಪ್ಪತ್ತರ ದಶಕದಲ್ಲಿ


ಇದು ಎಪ್ಪತ್ತರ ದಶಕದ ಮಾತು. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯೇ ನಮ್ಮ ಮನೆಯಿದ್ದುದರಿಂದ ಅಲ್ಲಿನ ಪ್ರತಿ ಆಗುಹೋಗುಗಳಿಗೂ ನಾನು ಸಾಕ್ಷಿಯಾಗುತ್ತಿದ್ದೆ. ೧೯೬೦ರಿಂದ ೧೯೭೩ರವರೆಗಿನ ದೀರ್ಘಕಾಲ ಅಲ್ಲಿನ ಗುರುಗಳಾಗಿದ್ದ ಸ್ವಾಮಿ ಅಂತೋಣಿ ಸಿಕ್ವೆರಾ ಅವರು ತಮ್ಮ ಪ್ರಯತ್ನದಿಂದ ಈ ದೇವಾಲಯದ ಸಮುದಾಯವನ್ನು ಪ್ರವರ್ಧಮಾನ ಸ್ಥಿತಿಗೆ ತಂದಿದ್ದರು.
ಪೂಜೆಗಳಲ್ಲಿ ಹೊಸ ಪೀಳಿಗೆಯ ಸಮರ್ಥ ಪಾಲುಗೊಳ್ಳುವಿಕೆಗೆ ಇಂಬುಗೊಡಲು ಅವರು ಹತ್ತಿರದ ನಿರ್ಮಲರಾಣಿ ಶಾಲೆಯನ್ನು ಸಾಧನವಾಗಿ ಬಳಸಿಕೊಂಡಿದ್ದರು. ಅಲ್ಲಿನ ಮದರುಗಳು ಪ್ರತಿ ಭಾನುವಾರ ದೇವಾಲಯಕ್ಕೆ ಆಗಮಿಸಿ ಮಕ್ಕಳನ್ನು ಶಿಸ್ತುಬದ್ದವಾಗಿ ಕೂಡಿಸಿ ಬೆಳೆದ ಮಕ್ಕಳಿಗೆ ವಾಚನ ಓದಲು ಸಿದ್ಧಪಡಿಸಿ ಪುಟ್ಟ ಮಕ್ಕಳಿಗೆ ಜಪ ಧರ್ಮೋಪದೇಶದ ತರಗತಿಗಳನ್ನೂ ನಡೆಸುತ್ತಿದ್ದರು. ಶಾಲೆಯಿಂದ ಹೊರನಡೆದ ಹಳೆಯ ವಿದ್ಯಾರ್ಥಿಗಳೂ ಸಹ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಗಾನವೃಂದ ಪೂಜೆ ಒತ್ತಾಸೆ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಪೀಠದೊಳಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಹಿಂದಿನ ಅಟ್ಟಣಿಗೆಯಲ್ಲಿನ ಗಾನವೃಂದಕ್ಕೆ ಪುಷ್ಪ, ವಿಕ್ಟೋರಿಯಾ ಮುಂತಾದ ಹಿರಿ ವಿದ್ಯಾರ್ಥಿಗಳು ಜೀವಕಳೆ ತುಂಬಿದ್ದರು. ಬ್ರದರ್ ಜೋಸೆಫ್ ಡಿಮೆಲ್ಲೊ, ಬ್ರದರ್ ಎನ್ ಎಸ್ ಮರಿಜೋಸೆಫ್ ಮುಂತಾದವರು ಇಲ್ಲಿಗೆ ಬಂದು ಹಾಡು ಹೇಳಿಕೊಡುತ್ತಿದ್ದರು. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಆದರೆ ಕನ್ನಡ ಓದುತ್ತಿದ್ದ ಹಲವು ಮಂದಿ ಗಾನವೃಂದದಲ್ಲಿದ್ದರು.
೧೯೭೧ರಲ್ಲಿ ರಾಜಾಜಿನಗರದಲ್ಲಿ ಹೊಸ ಚರ್ಚು ತಲೆಯೆತ್ತಿದ್ದರಿಂದ ಮಲ್ಲೇಶ್ವರದ ಈ ಚರ್ಚು ಇಬ್ಭಾಗವಾಯಿತು. ಸಹಜವಾಗಿ ಗಾನವೃಂದದಲ್ಲಿನ ಕನ್ನಡದ ದನಿಗಳು ಸೊರಗಿದವು. ೧೯೭೩ರಲ್ಲಿ ಇನ್ನೊಂದು ಸ್ಥಿತ್ಯಂತರ ನಡೆದು ಥಾಮಸ್ ಫೆರ್ನಾಂಡೊ ಎಂಬ ತಮಿಳು ಪಾದ್ರಿ ಈ ಚರ್ಚಿಗೆ ನೇಮಕವಾದರು. ಅವರು ಯೇಸುಸ್ವಾಮಿ ಸ್ವತಃ ತಮಿಳರಾಗಿದ್ದರೆಂದೂ ಬೆಂಗಳೂರು ತಮಿಳುನಾಡಿನ ಭಾಗವೆಂದೂ ಭಾವಿಸಿದ್ದರು. ಹೀಗೆ ದೇವಾಲಯದ ಭಕ್ತಾದಿಗಳ ನಡುವೆ ಒಂದು ಸ್ಪಷ್ಟ ಗೆರೆ ಎಳೆಯಲಾಯಿತು. ಒಂದು ಕಡೆ ತಮಿಳರೆಂದೂ ಇನ್ನೊಂದು ಕಡೆ ಕನ್ನಡವೆಂದೂ ವಿಭಾಗಿಸಿ ಹಗ್ಗ ಜಗ್ಗಾಟ ಶುರುವಾಯಿತು. ಕನ್ನಡದ ಪೂಜೆಗಳಲ್ಲಿ ಹಾಡುಹಾಡಲು ಪವಿತ್ರಗ್ರಂಥ ಪಠಿಸಲು ಜನರಿಲ್ಲವಾಯಿತು. ಅಲ್ಲಿಯ ತನಕ ನಿರ್ಮಲರಾಣಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತಮಿಳು ಯುವಕರೇ ಕನ್ನಡದ ಬೈಬಲ್ ವಾಚಿಸುತ್ತಿದ್ದರು. ತಮಿಳಿಗಾದರೋ ವಲಸೆ ಬಂದಿದ್ದ ಸ್ಪಷ್ಟ ತಮಿಳು ಉಚ್ಚಾರದ ತಾರ್ಸಿಸ್, ಹ್ಯಾರಿ ಮುಂತಾದ ಓದುಗರಿದ್ದರು.
ಕನ್ನಡಕ್ಕೊದಗಿದ ಈ ಶೂನ್ಯವನ್ನು ತುಂಬಲು ಪೀಟರ್ ಪಿಕಾರ್ಡೊ, ಚೌರಪ್ಪನವರ ಮಗ ಜಾರ್ಜ್, ರೇಲ್ವೆ ಚಾಲಕ ಅರುಳಪ್ಪ, ಸುಬೇದಾರಪಾಳ್ಯದ ಅಂತೋಣಪ್ಪ ಮುಂತಾದವರು ಮುಂದೆ ಬಂದರು.

ಶುಕ್ರವಾರ, ಸೆಪ್ಟೆಂಬರ್ 23, 2011

ಅಪೂರ್ವ ತಿರುವು


“ಕತ್ತಲೆಯನಳಿದು ಬೆಳಕ ಚಿತ್ತಾರವ ಬರೆಯೆ
ಮತ್ತಾಯನರಮನೆಗೆ ಯೇಸು ಬಂದ”
ಅಂದು ಮತ್ತಾಯನು ಸುಂಕದಕಟ್ಟೆಯ ತನ್ನ ಕಚೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ. ಅವನಿಗೆ ಯೇಸು ಯಾರೆಂದು ತಿಳಿದಿತ್ತೋ ಇಲ್ಲವೋ? ಅಥವಾ ಯೇಸುವಿನೆಡೆಗೆ ಅವನ ಮನ ಒಳಗೊಳಗೇ ತುಡಿದಿತ್ತೋ ಏನೋ? ಅದೆಲ್ಲ ಏನೇ ಇರಲಿ, ಆ ದಿನವಂತೂ ಒಂದು ಮಹತ್ತರ ದಿನ. ಯೇಸು ಆ ದಾರಿಯಲ್ಲಿ ನಡೆಯುತ್ತಿದ್ದವನು ಮತ್ತಾಯನೆಡೆಗೆ ನೋಡಿ ’ನನ್ನನ್ನು ಹಿಂಬಾಲಿಸು’ ಎಂದ. ಆಕ್ಷಣವೇ ಮತ್ತಾಯ ಮರುಮಾತಾಡದೇ ತನ್ನ ಜೀವನದ ಒಂದು ಮಹತ್ವದ ನಿರ್ಧಾರ ತಳೆದು ಕಚೇರಿಯನ್ನು ತೊರೆದು ಬಂದ. ಅದೊಂದು ’ಅಪೂರ್ವ ತಿರುವು’.
ಯೇಸು ಒಮ್ಮೆ ಗಲಿಲೇಯ ಸರೋವರದ ದಡದ ಗುಂಟ ನಡೆದಿದ್ದ. ಅಲ್ಲಿ ಸಿಮೋನ ಮತ್ತು ಅಂದ್ರೆಯ ಎಂಬ ಬೆಸ್ತರು ಬಲೆ ಹೆಣೆಯುತ್ತಿದ್ದರು. ಯೇಸು ಅವರತ್ತ ತಿರುಗಿ ನನ್ನೊಂದಿಗೆ ಬನ್ನಿ ಎಂದಾಗ (ಮತ್ತಾಯ ೪:೧೮-೨೦) ಅವರು ಬಲೆಯನ್ನು ಅಲ್ಲೇ ಬಿಸುಟು ಯೇಸುವಿನ ಹಿಂದೆ ಹೋದವರು ಮತ್ತೆ ತಿರುಗಿ ನೋಡಲಿಲ್ಲ. ಯೇಸು ಮುಂದೆ ಹೋಗುತ್ತಿದ್ದಾಗ ತಮ್ಮ ತಂದೆಯೊಂದಿಗೆ ದೋಣಿಯಲ್ಲಿದ್ದ ಜೇಮ್ಸ್ ಮತ್ತು ಜಾನರನ್ನು ಕಂಡು ಅವರಿಗೂ ನನ್ನೊಂದಿಗೆ ಬನ್ನಿರೆಂದ. (ಮತ್ತಾಯ ೪:೨೧-೨೨) ಅವರು ಮರುಮಾತಾಡದೆ ತಮ್ಮ ತಂದೆಯ ಕಡೆಗೂ ನೋಡದೆ ಯೇಸುವನ್ನು ಹಿಂಬಾಲಿಸಿದರು. ಇವೆಲ್ಲ ಮತ್ತಾಯನೇ ದಾಖಲಿಸಿದ ಆಖ್ಯಾಯಿಕೆಗಳು. ಬಹುಶಃ ಯೇಸುವಿನ ಕರೆಯೋಲೆಗೆ ತನ್ನ ಪ್ರತಿಕ್ರಿಯೆಯ ಸ್ವರೂಪವನ್ನು ಸ್ಪಷ್ಟಗೊಳಿಸುವ ಪ್ರಕ್ರಿಯೆಯಾಗಿ ಈ ಘಟನೆಗಳನ್ನು ಅವನು ಹೇಳುತ್ತಿದ್ದಾನೆನಿಸುತ್ತದೆ.
ಜಾನ್ ಹೆನ್ರಿ ನ್ಯೂಮನ್ ಎಂಬ ವ್ಯಕ್ತಿ ಇಂಗ್ಲೆಂಡಿನಲ್ಲಿ ಜೀವಿಸಿದ್ದಾತ, ಒಂದು ಕಾಲದಲ್ಲಿ ಕಥೋಲಿಕ ವಿರೋಧಿ, ಆಮೇಲೆ ಕಥೋಲಿಕ ಪಂಥಕ್ಕೆ ಒಲಿದು ಬಂದು ಕಾರ್ಡಿನಲ್ ಆಗಿ ಪುನೀತ ಪದವಿಯನ್ನು ಅಲಂಕರಿಸಿದ. ನ್ಯೂಮನ್ ಅವರು ಬ್ಯಾಂಕ್ ಕೆಲಸವನ್ನು ತೊರೆದು ಕ್ರೈಸ್ತಧರ್ಮಪ್ರಚಾರದತ್ತ ನಡೆದು ಸಂತನಾಗುವ ಹೊತ್ತಿಗೆ ಅವರ ಜೀವನದಲ್ಲಿ ಏನೆಲ್ಲ ತಿರುವುಗಳು! ಮಹಾತ್ಮ ಗಾಂಧಿಯವರು ಅವರು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಕಾನೂನು ಪದವಿಗಾಗಿ ಓದುತ್ತಿದ್ದಾಗ ನ್ಯೂಮನ್ ಬರೆದ Lead Kindly Light ಎಂಬ ಪದ್ಯವು ಅವರ ಮೇಲೆ ಬಹು ಪ್ರಭಾವ ಬೀರಿತ್ತು. ತಮ್ಮ ಜೀವಿತದ ಕೊನೆಯವರೆಗೂ ಗಾಂಧಿಯವರು ಕರುಣಾಳು ಬಾ ಬೆಳಕೆ ಎಂಬ ಆ ಹಾಡನ್ನು ಆಗಾಗ್ಗೆ ಮೆಲುಕು ಹಾಕುತ್ತಿದ್ದರಂತೆ. ಗಾಂಧಿಯವರು ದಕ್ಷಿಣ ಆಫ್ರಿಕೆಯಲ್ಲಿದ್ದಾಗ ರೈಲಿನ ಮೇಲ್ದರ್ಜೆಯ ಬೋಗಿಯಲ್ಲಿ ಒಮ್ಮೆ ಪಯಣಿಸುತ್ತಿದ್ದರು. ಆ ಬೋಗಿಯಲ್ಲಿದ್ದ ಬಿಳಿಯರು ಅವರನ್ನು ನೋಡಿ ಅಸಹನೆಯಿಂದ ಪೊಲೀಸು ಅಧಿಕಾರಿಯ ಮೂಲಕ ಅವರನ್ನು ಹೊರದೂಡುತ್ತಾರೆ. ಆ ಕ್ಷಣ ಗಾಂಧಿಯ ಜೀವನದಲ್ಲೊಂದು ಮಹತ್ತರ ತಿರುವು. 

ಶುಕ್ರವಾರ, ಆಗಸ್ಟ್ 26, 2011

ಅಣ್ಣಾ ಹಿಂದೆ ಯಾರಿದ್ದಾರೆ?


ಭ್ರಷ್ಟಾಚಾರವೆಂಬುದು ಇಂದು ನಮ್ಮನ್ನು ಕಾಡುತ್ತಿರುವ ರಾಷ್ಟ್ರವ್ಯಾಪೀ ಜ್ವಲಂತ ಸಮಸ್ಯೆಯಾಗಿದೆ. ಸಮಸ್ಯೆಯಿಂದಾಗಿ ನಾವೆಷ್ಟು ರೋಸಿಹೋಗಿದ್ದೇವೆಂದರೆ ಇದರ ವಿರುದ್ಧ ಪ್ರತಿಭಟಿಸುವ ಯಾರೇ ವ್ಯಕ್ತಿ ನಮಗೆ ನಿಜ ನಾಯಕನಾಗಿ ತೋರುತ್ತಾನೆ. ಏಕೆಂದರೆ ಭ್ರಷ್ಟಾಚಾರದ ನಿಜವಾದ ಬಲಿಪಶುಗಳು ನಾವಾಗಿರುತ್ತೇವೆ, ಎಷ್ಟೊ ವೇಳೆ ಅದರ ವಿರುದ್ಧದ ನಮ್ಮ ವಿರೋಧ ಅಥವಾ ಆಕ್ರೋಶವನ್ನು ಅನಿವಾರ್ಯವಾಗಿ ಅದುಮಿಟ್ಟುಕೊಂಡಿರುತ್ತೇವೆ. ಒಂದು ಹಿನ್ನೆಲೆಯಲ್ಲಿ ಅದರ ವಿರುದ್ಧ ದನಿಯೆತ್ತಬಲ್ಲ ಯಾರೇ ಆದರೂ ನಮಗೆ ಹೀರೋ ಆಗಿ ತೋರುವುದರಲ್ಲಿ ಅತಿಶಯವೇನಿಲ್ಲ. ಅದು ಒಬ್ಬ ಕಿರಣ್ ಬೇಡಿ ಇರಬಹುದು, ಒಬ್ಬ ಸಾಂಗ್ಲಿಯಾನಾ ಇರಬಹುದು, ಒಬ್ಬ ಖೈರನಾರ್ ಇರಬಹುದು, ಒಬ್ಬ ಹರ್ಷಗುಪ್ತ ಇರಬಹುದು, ಒಬ್ಬ ಮಣಿವಣ್ಣನ್ ಇರಬಹುದು ಇವರೆಲ್ಲ ನಮಗೆ ಆದರ್ಶಪ್ರಾಯರಾಗಿಯೇ ತೋರುತ್ತಾರೆ. ಇಂದು ಅಣ್ಣಾ ಹಜಾರೆಯ ಕಾಲ. ಎರಡು ದಶಕಗಳ ಹಿಂದೆ ಅವರ ಸಾಧನೆಯ ಬಗ್ಗೆ ಸುಧಾ ಎಂಬ ವಾರಪತ್ರಿಕೆಯಲ್ಲಿ ಲೇಖನ ಪ್ರಕಟವಾದಾಗ ಹೆಚ್ಚು ಮಂದಿ ಗಮನ ಹರಿಸಲಿಲ್ಲವೆಂಬುದು ನಿಜವೇ ಆದರೂ ಇಂದು ಅಣ್ಣಾ ಬಗ್ಗೆ ಗೊತ್ತಿಲ್ಲದ ಜನವೇ ಇಲ್ಲವೆನ್ನಬಹುದು. ಭ್ರಷ್ಟಾಚಾರದ ವಿರುದ್ಧದ ಅವರ ಕೂಗಿಗೆ ಇವೊತ್ತು ಲಕ್ಷ ಜನರು ದನಿಸೇರಿಸುತ್ತಾರೆ.
ಹಾಗಿದ್ದರೆ ಅಣ್ಣಾ ಅವರು ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆಯೇ? ಬಹುಶಃ ಭ್ರಷ್ಟಾಚಾರ ವಿರುದ್ಧದ ದನಿಯಲ್ಲಿ ಅವರು ಮುಂಚೂಣಿಯಲ್ಲಿ ನಿಂತು ರಾಷ್ಟ್ರವನ್ನು ಪ್ರತಿನಿಧಿಸಬಹುದು, ಆದರೆ ರಾಷ್ಟ್ರವನ್ನು ಮುನ್ನಡೆಸುವ ಅಭಿವೃದ್ಧಿ ಯೋಜನೆಗಳು, ಆರ್ಥಿಕ ನೀತಿಗಳು, ರಕ್ಷಣಾ ಸಂಶೋಧನೆಗಳು, ವಿದೇಶೀ ಸಂಬಂಧಗಳು, ಆರೋಗ್ಯ ಶಿಕ್ಷಣ ಮೂಲಭೂತ ಸೌಲಭ್ಯ ಮುಂತಾದ ಆಂತರಿಕ ಪ್ರಕ್ರಿಯೆಗಳನ್ನು ಮುನ್ನಡೆಸಬಲ್ಲ ಒಂದು ಸಾಂವಿಧಾನಿಕ ಆಡಳಿತಯಂತ್ರ ನಿಸ್ಪೃಹವಾಗಿ ಕೆಲಸ ಮಾಡುತ್ತಲೇ ಇದೆಯಲ್ಲವೇ?
ಭ್ರಷ್ಟಾಚಾರದ ವಿರುದ್ಧದ ಒಂದು ಅಸಹನೆ ಅಂತರ್ವಾಹಿನಿಯಾಗಿ ಹರಿಯುತ್ತಾ ಬಂದು ಇಂದು ಸ್ಫೋಟಿಸಿದೆ. ಆದರೆ ಸೇನಾ ಅತಿರೇಕದ ವಿರುದ್ಧ ಕಳೆದ ಹತ್ತುವರ್ಷಗಳಿಂದ ನಿರಂತರವಾಗಿ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಎಂಬ ಮಣಿಪುರದ ಮಹಿಳೆ, ಪೆಟ್ರೋಲ್ ಕಲಬೆರಕೆ ಮಾಫಿಯಾಗೆ ಬಲಿಯಾದ ಮಂಜುನಾಥ ಎಂಬ ಕೋಲಾರದ ಹುಡುಗ, ಹಲ್ಲಾ ಬೋಲ್ ಎಂಬ ಬೀದಿ ನಾಟಕವಾಡುತ್ತಲೇ ಭೀಕರವಾಗಿ ಕೊಲೆಯಾದ ಸಫ್ದರ್ ಹಷ್ಮಿ ಇವರನ್ನೆಲ್ಲ ನಾವು ಮರೆತುಬಿಡುತ್ತೇವೆ. ಅಷ್ಟೇ ಏಕೆ ಇನ್ನೂ ಕಾಡುತ್ತಿರುವ ಜನಾಂಗದ್ವೇಷ, ಜಾತಿಭೇದ, ಕೋಮುಗಲಭೆ, ಹಲ್ಲೆ ಹಿಂಸೆ ದರೋಡೆ ಅತ್ಯಾಚಾರಗಳನ್ನೂ ನಾವು ಪ್ರತಿಭಟಿಸುವುದೇ ಇಲ್ಲ. ಇಂದು ಅವರಿಗಾದುದು ನಾಳೆ ನಮಗಾದೀತೆಂದು ನಾವು ಯೋಚಿಸುವುದೇ ಇಲ್ಲ.
ಯಾವುದರ ವಿರುದ್ಧವೇ ಆದರೂ ದನಿಯೆತ್ತಲು ಪ್ರತಿಭಟಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಮೂಲಕ ಕಾನೂನುಗಳನ್ನು ರೂಪಿಸುವಲ್ಲಿ, ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಮ್ಮ ಪಾತ್ರ ಹಿರಿದೆಂಬುದನ್ನು ನಮ್ಮ ಘನ ಸಂವಿಧಾನವು ತೋರಿಸಿದೆ. ಯುವಶಕ್ತಿಯನ್ನು ಬಳಸಿಕೊಂಡು ನೇತಾರರು ಪ್ರಪಂಚದಲ್ಲಿ ಹಲವಾರು ಮಹತ್ತರ ಪಲ್ಲಟಗಳನ್ನು ನಿರ್ವಹಿಸಿದ್ದಾರೆ. ಲೆನಿನನ ಕ್ರಾಂತಿಕಾರೀ ಘೋಷಣೆಗೆ ಓಗೊಟ್ಟ ಯುವಕರು ಕೆಂಪುಕ್ರಾಂತಿಗೆ ಕಾರಣರಾದರು. ಅದೇ ಯುವಕರು ವಯಸ್ಕರಾದ ಮೇಲೆ ಅದೇ ಲೆನಿನನ ಪ್ರತಿಮೆಯನ್ನು ನೆಲಕ್ಕುರುಳಿಸಿದರು. ಜರ್ಮನಿಯ ಯುವಕರನ್ನು ಹುರಿದುಂಬಿಸಿದ ಹಿಟ್ಲರ್ ಯೆಹೂದಿಗಳ ಮಾರಣಹೋಮ ನಡೆಸಿದ. ಆದರೆ ಯುದ್ಧ ಮುಗಿಯುವ ಮೊದಲೇ ತಾನು ಆತ್ಮಹತ್ಯೆ ಮಾಡಿಕೊಂಡ. ತೊಂಬತ್ತರ ದಶಕದಲ್ಲಿ ನಮ್ಮ ದೇಶದ ಯುವಕರನ್ನು ಪ್ರಚೋದಿಸಿದ ಸಂಘಪರಿವಾರವು ಮಸೀದಿ ಒಡೆಯುವ ಮೂಲಕ ದೇಶದ ಶಾಂತ ಸರೋವರವನ್ನು ಕಲಕಿತು.
ಆದರೆ ಜವಾಬ್ದಾರಿಯುತ ಪ್ರಜೆಗಳಾದ ನಾವು ಸಿಖ್ ಹತ್ಯಾಕಾಂಡ, ಗುಜರಾತ್ ದಾಂಧಲೆ, ಒರಿಸ್ಸಾ ಗಲಭೆ, ಕರ್ನಾಟಕದ ಚರ್ಚ್ ದಾಳಿ ಮುಂತಾದವುಗಳನ್ನು ಮೌನವಾಗಿ ವೀಕ್ಷಿಸಿದೆವು. ಅಥವಾ ತೋಚಿದ ನೆಪಗಳನ್ನು ಹೇಳಿಕೊಂಡು ಘಟನೆಗಳನ್ನು ಸಮರ್ಥಿಸಿಕೊಂಡೆವು. ಮಾನವಧರ್ಮವನ್ನು ಮರೆತು ಬೀದಿನಾಯಿಗಳಂತೆ ಕಚ್ಚಾಡಿದೆವು. ಇಂದು ನಾವೆಲ್ಲ ಸಮೂಹ ಸನ್ನಿಗೊಳಗಾದವರಂತೆ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ. ಆದರೆ ಭ್ರಷ್ಟಾಚಾರವೆಂದರೆ ಹಣದ ಭ್ರಷ್ಟತೆ ಮಾತ್ರವಲ್ಲ ಮಾನಸಿಕ ಭ್ರಷ್ಟತೆ ಕೂಡಾ ಎಂಬುದನ್ನು ಮರೆತಿದ್ದೇವೆ.
ನಮ್ಮ ಮನಸಿನ ಒಳಹೊಕ್ಕು ಸ್ವತಃ ನಾವು ಭ್ರಷ್ಟರಲ್ಲವೇ ಎಂದು ಒಮ್ಮೆ ಆತ್ಮಶೋಧನೆ ಮಾಡಿಕೊಳ್ಳೋಣ. ಯಾವುದೇ ಚುನಾವಣೆಯಲ್ಲಿ ಪ್ರಲೋಭನೆಗೊಳಗಾಗಿ ಓಟು ಮಾಡಿದ್ದೀವಾ? ಓಟು ಮಾಡುವ ಹಕ್ಕಿದ್ದರೂ ಮಾಡದೇ ಮನೆಯಲ್ಲುಳಿದೆವಾ? ಸುಳ್ಳು ಲೆಕ್ಕ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದೀವಾ? ಸುಳ್ಳು ಬಿಲ್ಲು ತೋರಿಸಿ ಹೆಚ್ಚಿನ ಭತ್ಯೆ ಪಡೆದಿದ್ದೀವಾ? ಬಡ್ಡಿಗೆ ದುಡ್ಡು ಕೊಟ್ಟು ರಕ್ತ ಹೀರಿದ್ದೀವಾ? ವರದಕ್ಷಿಣೆಗಾಗಿ ಪೀಡಿಸಿದ್ದೀವಾ? ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟಿದ್ದೀವಾ? ಕಾಲೇಜಿಗೆ ಚಕ್ಕರು ಹಾಕಿದ್ದೀವಾ? ಮತ್ತೊಬ್ಬನ ಹೆಂಡತಿಯನ್ನು ಕೆಟ್ಟದೃಷ್ಟಿಯಿಂದ ನೋಡಿದ್ದೀವಾ? ಸ್ನೇಹಿತರಿಗೇ ಮೋಸ ಮಾಡಿ ತಿರಪತಿಗೋ ಧರ್ಮಸ್ಥಳಕ್ಕೋ ತಪ್ಪುಕಾಣಿಕೆ ಕಟ್ಟಿದ್ದೀವಾ?
ಇರಲಿ ಬಿಡಿ. ಇನ್ನು ಅಣ್ಣಾ ಅವರ ಹಿಂದೆ ಇರುವವರಾರೆಂದು ನೋಡೋಣ. ಅವರೆಲ್ಲ ಕಾರ್ಪೊರೇಟ್ ವಲಯದ ಅಥವಾ ಐಟಿ ಸೆಕ್ಟರಿನ ಜನ. ಅಮೆರಿಕದಲ್ಲಿ ಸೋತು ಇಂಡಿಯಾಕ್ಕೆ ಹಿಂದಿರುಗಿದ ಜನ. ಬಂಡವಾಳ ಹೂಡಿಕೆಯಲ್ಲಿ ಸೋತ ಜನ. ರಾಜಕೀಯ ಲಾಭ ಪಡೆಯಲು ಹೊಂಚು ಹಾಕಿದ ಜನ. ನಿಜ ಹೇಳಬೇಕೆಂದರೆ ಬಡ ರೈತರಾಗಲೀ ಬಡ ಕಾರ್ಮಿಕರಾಗಲೀ ಭ್ರಷ್ಟಾಚಾರದ ಕುರಿತು ಹೆಚ್ಚು ತಲೆಕೆಡಿಸಿಕೊಂಡವರೇ ಅಲ್ಲ. ಇಂದು ಭ್ರಷ್ಟಾಚಾರ ನಿರ್ಮೂಲನವೆಂಬುದು ಕೆಲವರಿಗೆ ಫ್ಯಾಷನ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಅದನ್ನೇ ಹೇಳಿತ್ತು. ಸಂಪೂರ್ಣ ಬದಲಾವಣೆ ತರುತ್ತೇವೆ ಯಾರೂ ಮಾಡದಂಥದನ್ನು ಮಾಡುತ್ತೇವೆ, ಸ್ವಚ್ಛ ಆಡಳಿತ, ದಕ್ಷ ಆಡಳಿತ, ಹಗರಣ ಮುಕ್ತ ಸರ್ಕಾರ, ಭ್ರಷ್ಟಮುಕ್ತ ಸರ್ಕಾರ ಕೊಡುತ್ತೇವೆ ಎಂದು ಘಂಟಾಘೋಷವಾಗಿ ಹೇಳಿತ್ತು. ಆದರೆ ಮಾಡಿದ್ದೇನು? ಇಂದು ಇಂಥದೇ ಫ್ಯಾಸಿಸ್ಟ್ ಶಕ್ತಿಗಳು ಅಣ್ಣಾ ಅವರ ಮುಖವಾಡ ತೊಟ್ಟು ಅವರೊಂದಿಗೆ ಕೈಜೋಡಿಸಿವೆ.
ನೀವು ಹೇಳಬಹುದು ಅಣ್ಣಾ ಅವರೊಂದಿಗೆ ಬಹುಸಂಖ್ಯಾತ ಮಧ್ಯಮವರ್ಗದವರೂ ಅಷ್ಟೇ ಸಂಖ್ಯೆಯ ವಿದ್ಯಾವಂತರೂ ಇದ್ದಾರೆಂದು. ಆದರೆ ಅವರೊಂದಿಗೆ ನಮ್ಮ ದೇಶದ ಅರ್ಧ ಬಿಲಿಯನ್ ಓಬಿಸಿ ಜನ ಇಲ್ಲ, ೨೫೦ ಮಿಲಿಯನ್ ಎಸ್ಸಿಎಸ್ಟಿ ಜನ ಇಲ್ಲ, ೧೫೦ ಮಿಲಿಯನ್ ಅಲ್ಪಸಂಖ್ಯಾತರಿಲ್ಲ. ಅಣ್ಣಾ ಅವರೊಂದಿಗಿದ್ದಾರೆ ಬಾಬಾ ರಾಮ್ದೇವ್ ನಂಥ ಖೂಳರು, ದ್ವೇಷವನ್ನು ಬಿತ್ತಿ ದ್ವೇಷವನ್ನು ಬೆಳೆಯುವಂಥ ದುರುಳರು. ಭ್ರಷ್ಟಾಚಾರ ನಿರ್ಮೂಲದಂಥ ಹೃದಯಸ್ಪರ್ಶಿ ಸಂಗತಿಯನ್ನು ಮುಂದು ಮಾಡಿಕೊಂಡು ಅಣ್ಣಾ ಹೆಸರನ್ನು ಹೈಜಾಕ್ ಮಾಡುವಂಥ ಖದೀಮರು.
ಅಣ್ಣಾ ಅವರ ಪರವಾಗಿ ಟ್ವಿಟರುಗಳು, ಫೇಸ್ ಬುಕ್ಕುಗಳು, -ತಂಡಗಳು, ಬ್ಲಾಗುಗಳು, ಜಾಲತಾಣಗಳು ಬರೆದೇ ಬರೆಯುತ್ತವೆ. ಸುಳ್ಳು ಹೆಸರುಗಳಲ್ಲಿ ಸುಳ್ಳು ಗುರುತುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತವೆ, ಸ್ಪಷ್ಟೀಕರಣ ನೀಡುತ್ತವೆ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ, ಅದೇ ವೇಳೆಯಲ್ಲಿ ವಿರೋಧದ ಸಣ್ಣ ಎಳೆಯನ್ನೂ ಮೊಳೆಯುವ ಮುನ್ನವೇ ಹೊಸಕುತ್ತವೆ. ಇವೆಲ್ಲದರ ಹಿಂದೆ ಇರುವವರಾದರೂ ಯಾರು?
ವಿ ಪಿ ಸಿಂಗ್ ಸರ್ಕಾರವು ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದಾಗಲೂ ಇಂಥದೇ ಚಿತಾವಣೆಗಳು ನಡೆದಿದ್ದವು. ನೆನಪಿಡಿ, ಮೂರು ಸಾವಿರ ವರ್ಷಗಳ ಹಿಂದಿನ ಜಾತಿಪದ್ಧತಿಯನ್ನು ದೇಶದಲ್ಲಿ ಮರುಸ್ಥಾಪಿಸಲು ಸಂಘಟಿತ ಪ್ರಯತ್ನಗಳು ಚಾಪೆಯ ಕೆಳಗಿನ ನೀರಿನಂತೆ ಕಾರ್ಯವೆಸಗುತ್ತಿವೆ ಎಚ್ಚರ.

ಭಾನುವಾರ, ಜುಲೈ 17, 2011

ಕಾರ್ಖಾನೆಯ ನೋಟ

ಇದು ನಾನು ಕಾರ್ಖಾನೆಗೆ ಸೇರಿದ ದಿನದ ಅನುಭವ. ನನ್ನ ಆಯ್ಕೆ ಪ್ರಕ್ರಿಯೆಗಳೆಲ್ಲ ಮುಖ್ಯಕಾರ್ಖಾನೆಯಲ್ಲಿ ಮುಗಿದು ಇಂಜಿನ್ ವಿಭಾಗಕ್ಕೆ ನನ್ನನ್ನು ಹೊತ್ತು ಹಾಕಿದರು. ಜೀಪಿನಲ್ಲಿ ನನ್ನನ್ನು ಕರೆದೊಯ್ದವರು ಇಂಜಿನ್ ವಿಭಾಗದ ದ್ವಾರದಲ್ಲಿ ನನ್ನನ್ನು ಇಳಿಸಿ ಒಳಹೋದರು. ನಾನು ಬಾಗಿಲ ಬಳಿ ಬಂದಾಗ ಅಲ್ಲಿದ್ದ ಸೆಕ್ಯುರಿಟಿ ’ಎನ್ನ’ ಅಂದ. ಒಳಗೆ ಹೋಗ್ಬೇಕು ಅಂದೆ. ನನ್ನ ಅಂಗಿನ ಜೇಬಿನಲ್ಲಿ ಪಂಚ್ ಕಾರ್ಡು ಇಣುಕುತ್ತಿತ್ತು. ಆತ ತಮಿಳಿನಲ್ಲಿ ಏನಯ್ಯ ಪಂಚುಕಾರ್ಡು ತೊಗೊಂಡು ಎಲ್ಲೆಲ್ಲೋ ಓಡಾಡ್ತಿದ್ದೀಯಾ, ನೀನೇನೂ ಟ್ರೇನಿನೋ, ಎಂಪ್ಲಾಯೋ ಅನ್ತ ಕೇಳಿದ. ನನಗೇನೂ ಅರ್ಥವಾಗಲಿಲ್ಲ ಅದೇನು ಕನ್ನಡದಲ್ಲಿ ಕೇಳು ಅಂದೆ. ಎಲ್ಲಿ ಬ್ಯಾಡ್ಜ್ ತೋರಿಸು ಎಂದು ಹೇಳಿ ಅಕ್ಷರಶಃ ಅದನ್ನು ಕಿತ್ತುಕೊಂಡ ಆತ ’ಇದೆನ್ನ ಜೋಸೆಫ್ ಅನ್ನಿ ಪೇರು ಇರುಕ್ಕು, ಕ್ರಿಶ್ಚಿಯನ್ ಅಯಿಟು ತಮಿಳು ತೆರಿಯಾದು ಅನಿ ಸೊಲ್ಲರಿಯಾ, ಎತ್ತನೆ ಗಾಂಚಾಲಿ’ (ಇದೇನು ಜೋಸೆಫ್ ಅನ್ತ ಹೆಸರಿದೆ, ಕ್ರಿಶ್ಚಿಯನ್ ಆಗಿದ್ರೂ ತಮಿಳು ಗೊತ್ತಿಲ್ಲ ಅಂತೀಯಲ್ಲ, ನಿನಗೆಷ್ಟು ಸೊಕ್ಕು) ಅಂದ. ನಾನು ಮುಚ್ಕಂಡ್ ವೋಗಲೋ ಅಂದೆ. ಅವನ ಪಿತ್ತ ನೆತ್ತಿಗೇರಿತು, ’ಐ ವಿಲ್ ಟೀಚ್ ಯು ಎ ಲೆಸನ್’ ಅಂದು ಕೂಗಾಡತೊಡಗಿದ. ನನಗೂ ಮನಸ್ಸಿನಲ್ಲೇ, ಇವತ್ತು ಏನಾದ್ರೂ ಆಗಲಿ ನಾಲಕ್ ಜನಾನ ಕರ್ಕೊಂಡು ಬಂದು ಈ ನನ್ಮಗನ್ನ ಹೊಡೆಸ್ಬೇಕು ಅನ್ತ ಅಂದುಕೊಳ್ತಿದ್ದೆ. ಅಷ್ಟರಲ್ಲಿ ಅವನ ಮೇಲಧಿಕಾರಿ ಹೊರಗೆ ಬಂದವನು ಇವನು ಕೂಗಾಡುತ್ತಿದ್ದುದನ್ನು ಕಂಡು ’ಏಯ್ ಪೊನ್ನುಸ್ವಾಮಿ, ಇದೇನಯ್ಯ ಯಾವಾಗ್ಲೂ ಗೇಟಲ್ಲಿ ಏನಾದ್ರೂ ಸೀನ್ ಕ್ರಿಯೇಟ್ ಮಾಡ್ತಾ ಇರ್ತೀಯ, ನೀನು ಹೀಗೇ ಮಾಡ್ರಾ ಇದ್ರೆ ನಿನ್ನ ಆ ಡ್ಯೂಟಿಗೆ ಹಾಕೋದೇ ಒಳ್ಳೇದು ಅಂದ. ಆ ಡ್ಯೂಟಿ ಅಂದರೇನು ನನಗೆ ಗೊತ್ತಿಲ್ಲ ಆದರೆ ಆ ಪೊನ್ನುಸ್ವಾಮಿಗೆ ಅರ್ಥವಾಯಿತು. ಇದು ಕಾರ್ಖಾನೆಯ ನನ್ನ ಮೊದಲದಿನದ ಅನುಭವ.
ಇನ್ನೊಂದು ಅನುಭವವನ್ನು ಹಂಚಿಕೊಳ್ಳಬಯಸುತ್ತೇನೆ. ಕಾರ್ಯಾಗಾರದಲ್ಲಿ ಕೆಲಸ ಮಾಡಲು ಹಲವು ಉಪಕರಣಗಳ ಅಗತ್ಯವಿರುತ್ತದೆ. ಎಲ್ಲರಿಗೂ ಸಿಗಲಿ ಎಂಬ ಕಾರಣದಿಂದ ಕೆಲ ವಿಶೇಷ ಉಪಕರಣಗಳನ್ನು ಕೋಠಿಯಲ್ಲಿ ಸಂಗ್ರಹಿಸಿರುತ್ತಾರೆ. ಅದಕ್ಕೊಬ್ಬ ಯಜಮಾನ ಇರುತ್ತಾನೆ. ಹೀಗೇ ನನಗೊಂದು ಉಪಕರಣ ಬೇಕಾಯ್ತು. ಅಲ್ಲಿಗೆ ಹೋಗಿ ವಾಡಿಕೆಯಂತೆ ಅಲ್ಲಿದ್ದ ಚೀಟಿಯಲ್ಲಿ ನನ್ನ ವಿವರ ಬರೆದು ಬೇಕಾದ ಉಪಕರಣದ ಬಗ್ಗೆ ಬರೆದೆ. ಕನ್ನಡದಲ್ಲಿದ್ದ ನನ್ನ ಚೀಟಿಯನ್ನು ನೋಡಿ ಅಲ್ಲಿದ್ದ ಕನ್ನಡಿಗನೇ ಆದ ತರಿಯಪ್ಪ ಎಂಬಾತ ಸಿಡಿಮಿಡಿಗೊಂಡ. ಅಲ್ಲಪ್ಪಾ ಇಷ್ಟುದಿನ ಇಲ್ಲಿದ್ದ ಆ ತಮಿಳು ವ್ಯಕ್ತಿ ಏನೂ ಕೊಸರದೆ ಉಪಕರಣಗಳನ್ನು ಕೊಡುತ್ತಿದ್ದನಲ್ಲ ನಿನ್ನದೇನು ರಗಳೆ ಎಂದೆ. ಇದು ಕೇಂದ್ರಸರ್ಕಾರದ ಕಾರ್ಖಾನೆ, ಇಲ್ಲಿ ಕನ್ನಡ ನಡೆಯೋಲ್ಲ, ನಿನಗೆ ತಾಕತ್ತಿದ್ದರೆ ಈ ಚೀಟಿಯನ್ನು ಕನ್ನಡದಲ್ಲಿ ಮುದ್ರಿಸುವಂತೆ ಮಾಡು ಆಮೇಲೆ ಕನ್ನಡದಲ್ಲಿ ಭರ್ತಿ ಮಾಡು ಎಂದು ಇನ್ನೇನೆಲ್ಲ ಮಾತನಾಡಿದ. ನಾನು ಉತ್ತರಿಸುತ್ತಾ ಮುದ್ರಣದ ಮಾತೆಲ್ಲ ಬೇಡ, ಯಾವುದೇ ಕೇಂದ್ರಸರ್ಕಾರದ ಸಂಸ್ಥೆಯಲ್ಲಿ ತ್ರಿಭಾಷಾ ಸೂತ್ರವಿದೆ, ನಾನು ಪ್ರಾದೇಶಿಕ ಭಾಷೆ ಕನ್ನಡವನ್ನು ಬಳಸಿದ್ದೇನೆ ಎಂದೆ. ಸುತ್ತ ಇತರೆಲ್ಲ ಕಾರ್ಮಿಕರು ಜಮಾಯಿಸಿ ಅವನಿಗೆ ಬುದ್ದಿ ಹೇಳಿದರು. ನಾನು ಗೆದ್ದೆನೆಂದು ಬೀಗಿದೆ.

ಮರುದಿನ ಭದ್ರತಾದಳದ ಮುಖ್ಯಸ್ಥರು ದೂರವಾಣಿಯ ಮೂಲಕ ನನ್ನನ್ನು ಅವರ ಕಚೇರಿಗೆ ಕರೆದರು. ತರಿಯಪ್ಪನು ಪರಿಶಿಷ್ಟ ವರ್ಗಕ್ಕೆ ಸೇರಿದವನೆಂದೂ ನಾನು ಗುಂಪು ಕಟ್ಟಿಕೊಂಡು ಹೋಗಿ ಅವನನ್ನು ಜಾತಿಯ ಹೆಸರಲ್ಲಿ ನಿಂದಿಸಿದೆನೆಂದೂ ದೂರು ಬಂದಿರುವುದರಿಂದ ನನ್ನನ್ನು ವಿಚಾರಿಸಲು ಅಲ್ಲಿಗೆ ಕರೆದಿದ್ದರು. ವಾಸ್ತವವಾಗಿ ನಡೆದ ವಿಷಯವೇನೆಂದು ವಿವರಿಸಿ ನನ್ನ ಹೇಳಿಕೆಯನ್ನು ಬರೆದುಕೊಟ್ಟೆ. ತರಿಯಪ್ಪನನ್ನು ಕರೆಸಿ ಏನ್ರೀ ನಿಮಗೆ ಕನ್ನಡ ಗೊತ್ತಿಲ್ಲವಾದರೆ ಮೇಲಧಿಕಾರಿಗೆ ಹೋಗಿ ಹೇಳಬಹುದಿತ್ತು, ನೀವೇ ಏನೇನೆಲ್ಲ ಮಾತನಾಡಿ ಈಗ ಜಾತಿಯ ಪ್ರಸ್ತಾಪ ಮಾಡುತ್ತಿದ್ದೀರಿ ಎಂದರು. ಅದಕ್ಕಾತ ಇದೇನ್ ಸಾರ್ ನೀವು ನನಗೆ ಸಪೋರ್ಟ್ ಮಾಡುವುದು ಬಿಟ್ಟು ಅವರ ಕಡೇನೇ ಮಾತಾಡ್ತೀರಿ, ನಾನು ಸೆಲ್ ಗೆ ಹೋಗಬೇಕಾಗುತ್ತೆ ಎಂದು ದಬಾಯಿಸಿದ. ಅದಕ್ಕವರು ನೀನೆಲ್ಲಿಗೇ ಹೋದರೂ ಇದೇ ಗೇಟಿನಲ್ಲಿ ಒಳಗೆ ಬರಬೇಕು ಹೊರಗೆ ಹೋಗಬೇಕು, ನಿನ್ನದೆಲ್ಲ ನಮಗೆ ಗೊತ್ತಿದೆ ಅಂದರು. ಅಲ್ಲಿಗೆ ಕೇಸು ಬಿದ್ದುಹೋಯಿತು.
ಹೀಗೆ ನಮ್ಮದೇ ನುಡಿಯ ಬಳಕೆಗೆ ಏನೆಲ್ಲ ತೊಡಕುಗಳು ಹಾಗೂ ಅದನ್ನು ನಿವಾರಿಸಿಕೊಳ್ಳುವಲ್ಲಿ ಇರಬೇಕಾದ ಇಚ್ಛಾಶಕ್ತಿಯ ಕುರಿತು ಹೇಳಿದ್ದೇನೆ. ನೀವು ಮೆಚ್ಚಿಕೊಳ್ಳಬೇಕೆಂಬುದು ನನ್ನ ಬಯಕೆಯಲ್ಲ, ದೈನಂದಿನ ನಡಾವಳಿಗಳಲ್ಲಿ ಕನ್ನಡದ ಬಳಕೆಗೆ ಈ ಬರಹ ಉದ್ದೀಪನವಾಗಲಿ ಎಂಬುದಷ್ಟೇ ನನ್ನ ಹಿರಿಯಾಸೆ.

ಸೋಮವಾರ, ಜೂನ್ 13, 2011

ಅಂತೋಣಿಯವರಿಗೆ ಮುಡಿಪು

ಅಂತೋಣಿ ಎಂಬ ಆ ಪುಣ್ಯಾತ್ಮ , ದೋರನಹಳ್ಳಿಯ ಮಹಾಸಂತ. ಆತ ನನ್ನ ಬದುಕಿಗೊಂದು ತಿರುವು ನೀಡಿದ್ದು ನನ್ನ ಜೀವನದ ಅಚ್ಚರಿಗಳಲ್ಲೊಂದು. ಎಲ್ಲಿಯ ಬೆಂಗಳೂರು ಎಲ್ಲಿಯ ಮೈಸೂರು, ಎಲ್ಲಿಯ ಮಲ್ಲೇಶ್ವರ ಎಲ್ಲಿಯ ದೋರನಹಳ್ಳಿ? ಇವೆಲ್ಲವನ್ನೂ ಒಗ್ಗೂಡಿಸಿದ ಸಂತ ಅಂತೋಣಿ ಪವಾಡಪುರುಷನೇ ಸರಿ.
ಸಂತ ಅಂತೋಣಿಯವರಿಗೆ ನಡೆದುಕೊಳ್ಳುವವರ ಒಂದು ನಡವಳಿಕೆಯನ್ನು ಹೊಸದಾಗಿ ಕಂಡೆ. ಇದುವರೆಗೆ ನಾನು ಗಮನಿಸದೇ ಇದ್ದ ಆ ಒಂದು ಸಂಗತಿಯನ್ನು ಇಲ್ಲಿ ದಾಖಲಿಸುತ್ತಿದ್ದೇನೆ.
ನವೇನ ದಿನಗಳ ಮೆರವಣಿಗೆಯಲ್ಲಿ ನಾಲ್ಕಾರು ಮಂದಿ ಭುಜದ ಮೇಲೆ ಹೊರುವ ಅಂತೋಣಿಯವರ ಪುಟ್ಟ ತೇರಿಗೆ ಹೆಗಲು ಕೊಡಲು ನಾ ಮುಂದೆ ತಾ ಮುಂದೆ ಎಂದು ಭಕ್ತಜನ ನೂಕುನುಗ್ಗಲಿನಲ್ಲಿರುತ್ತಾರೆ. ಅದನ್ನು ಗುಡಿಯೊಳಗೆ ತಂದು ನೆಲಕ್ಕಿಳಿಸಿದ ಮೇಲೆಯೂ ಮುಡಿಪು ಕಟ್ಟುವವರ ದೊಡ್ಡ ದಂಡೇ ಇರುತ್ತದೆ.
೧೨ನೇ ಜೂನ್ ೨೦೧೧. ಭಾನುವಾರದ ಶುಭಬೆಳಗು ಎಲ್ಲೆಡೆ ಹರಡಿತ್ತು. ಹಬ್ಬದ ಹಿಂದಿನ ದಿನವಾದ್ದರಿಂದ ಜನಸಂದಣಿಯನ್ನು ಅನುಸರಿಸಿ ಒಂದಾದಮೇಲೊಂದರಂತೆ ಬಲಿಪೂಜೆಗಳು ನಡೆದಿದ್ದವು. ಪೂಜೆಯ ನಂತರ ಪೀಠದ ಸುತ್ತಲೂ ಭಕ್ತಿಭಾವದಿಂದ ನಿಲ್ಲುವ ಜನ, ಅವರ ತಲೆಯ ಮೇಲೆ ಸಂತ ಅಂತೋಣಿಯವರ ಪವಾಡ ಪ್ರತಿಮೆಯನ್ನು ಮಡಗಿ ಭಕ್ತರಿಗೊಂದು ವಿಶಿಷ್ಟಾನುಭೂತಿ ಕಲ್ಪಿಸುವ ಅಂತೋಣಿಯವರ ಮಠದ ಸಂನ್ಯಾಸಿಗಳು, ಭಕ್ತಿಪಾರಮ್ಯದ ಈ ದರ್ಶನವನ್ನು ಕಣ್ದುಂಬಿಕೊಳ್ಳುತ್ತಾ ಹಾಗೆಯೇ ಗುಡಿಯ ಮುಂಬಾಗಿಲ ಬಳಿಯಿದ್ದ ನವೇನ ತೇರಿನ ಬಳಿಬಂದೆ. ಭಕ್ತ ಜನ ಅದರ ಮುಂದೆ ಡಜನುಗಟ್ಟಲೆ ಮೇಣದ ಬತ್ತಿಗಳನ್ನು ಹಚ್ಚಿ ಮೊಣಕಾಲೂರಿ ಹಣೆಯನ್ನು ನೆಲಕ್ಕೆ ಮುಟ್ಟಿಸುವಂತೆ ತಲೆಬಾಗಿ ನಮಸ್ಕರಿಸುತ್ತಿದ್ದರು. ಅಂತೋಣಿಯವರ ಮುಖ ಹೊರತು ಇಡೀ ದೇಹ ಹೂಮಾಲೆಗಳಿಂದ ತುಂಬಿಹೋಗಿತ್ತು.
ಅವರ ಪಾದದಡಿ ಕಣ್ಣು ಹಾಯಿಸಿದಾಗ ಒಂದು ರೀತಿಯ ಅಚ್ಚರಿಯೂ ಕುತೂಹಲವೂ ಮೂಡಿತು. ನಿಲುವಂಗಿಯ ಆ ಕೆಳಭಾಗವನ್ನೆಲ್ಲ ಕಪ್ಪು ಅರಿಶಿನ ಕೆಂಪು ದಾರಗಳು ಸುತ್ತುವರಿದಿದ್ದವು. ಅರಿಶಿನ ದಾರಗಳಲ್ಲಿ ಅರಿಶಿನದ ಕೊಂಬು ಇದ್ದವು. ಇನ್ನುಳಿದವುಗಳಲ್ಲಿ ಬೇಡಿಕೆ ಬರೆದ ಚೀಟಿ, ಬಟ್ಟೆಯಲ್ಲಿ ಸುತ್ತಿದ ಹರಕೆಯ ದುಡ್ಡು, ಕೈ ಕಾಲು ಕಣ್ಣು ದೇಹ ಮಗು ಇತ್ಯಾದಿಗಳ ಬಿಂಬವಿರುವ ಬೆಳ್ಳಿಯ ಬಿಲ್ಲೆಗಳು ಇತ್ಯಾದಿ ವಸ್ತುಗಳಿದ್ದವು.
ನಾನು ನೋಡುತ್ತಿದ್ದಂತೆ ಒಬ್ಬ ಪ್ರೌಢ ಹೆಂಗಸು ದಾರವೊಂದನ್ನು ಎಳೆಯ ತೊಡಗಿದಳು. ಅವಳು ಹೊಸದಾಗಿ ಕಟ್ಟುತ್ತಿದ್ದಾಳೋ ಇರುವುದನ್ನು ಕಿತ್ತುಹಾಕುತ್ತಿದ್ದಾಳೋ ಎಂದು ಖಚಿತ ಪಡಿಸಿಕೊಳ್ಳಲು ಗಮನವಿಟ್ಟು ನೋಡತೊಡಗಿದೆ. ಸಣ್ಣಗಿನ ಕಪ್ಪುದಾರವೊಂದನ್ನು ಆಯ್ಕೆ ಮಾಡಿಕೊಂಡ ಆಕೆ ಅದಕ್ಕೆ ಹಾಕಿದ್ದ ಗಂಟುಗಳನ್ನು ಒಂದೊಂದಾಗಿ ತುಂಬಾ ಸಹನೆಯಿಂದ ಬಿಚ್ಚತೊಡಗಿದಳು. ಆ ದಾರಕ್ಕೆ ಬಿಡಿಯಾಗಿ ಹಲವಾರು ಗಂಟುಗಳಿದ್ದರೆ ಎರಡೂ ಕೊನೆಗಳನ್ನು ಸೇರಿಸಿ ಇನ್ನಷ್ಟು ಗಂಟುಗಳನ್ನು ಹಾಕಲಾಗಿತ್ತು. ಬಿಡಿಗಂಟುಗಳ ಕಾರಣ ಈ ಜೋಡಿಗಂಟುಗಳನ್ನು ಸುಲಭವಾಗಿ ಬಿಚ್ಚಲಾಗುತ್ತಿರಲಿಲ್ಲ. ತುಂಬಾ ತಾಳ್ಮೆಯಿಂದ ಅವಳು ಅವನ್ನೆಲ್ಲ ಬಿಚ್ಚಿ ತನ್ನ ಹಸ್ತದೊಳಗಿಟ್ಟು ಮಡಿಚಿ ಕಣ್ಣಿಗೊತ್ತಿಕೊಂಡು ಎದ್ದು ಹೊರಟಳು. ನಾನಾಕೆಯನ್ನು ತಡೆದು ಅಮ್ಮಾ ನಿಲ್ಲಿ, ಇದೇಕೆ ಹೀಗೆ ದಾರವನ್ನು ಬಿಚ್ಚಿಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದೆ. ಕೊಡಗು ಜಿಲ್ಲೆಯ ಸಿದ್ದಾಪುರದ ಆಕೆ ಹೇಳಿದ ಸಂಗತಿ ಮಾರ್ಮಿಕವಾಗಿತ್ತು. ಕಷ್ಟ ಸಂಕಟಗಳಿಗೆ ಸಿಲುಕಿದವರು ಅದರ ಪರಿಹಾರಕ್ಕಾಗಿ ಸಂತರಿಗೆ ಮೊರೆಯಿಟ್ಟು ಜಾತ್ರೆಯ ಸಮಯಕ್ಕೆ ದೋರನಹಳ್ಳಿಗೆ ಬಂದು ಹೀಗೆ ಮುಡಿಪು ಕಟ್ಟುತ್ತಾರಂತೆ. ಹಾಗೆ ಕಟ್ಟಿದ ಮೇಲೆ ಮೊದಲೇ ಇನ್ಯಾರೋ ಕಟ್ಟಿದ ಮುಡಿಪನ್ನು ಬಿಚ್ಚಿಕೊಂಡು ಹೋಗುತ್ತಾರಂತೆ. ಅದನ್ನು ಅವರು ತೆಗೆದುಕೊಂಡು ಮನೆಗೆ ಹಿಂದಿರುಗುವ ವೇಳೆಗೆ ಇವರು ಹಾಕಿದ ಗಂಟನ್ನು ಇನ್ಯಾರೋ ಬಿಚ್ಚಿರುತ್ತಾರೆ. ಹೀಗೆ ಇವರ ಗಂಟುಗಳು ಸಡಿಲವಾಗುತ್ತಿದ್ದಂತೆ ಇವರ ಕಷ್ಟಗಳೂ ಪರಿಹಾರವಾಗುತ್ತವೆಯಂತೆ. ಎಲ್ಲಾ ಅವರವರ ನಂಬಿಕೆ ಅಥವಾ ದೃಢವಿಶ್ವಾಸವೆನ್ನಬಹುದು. ಹೀಗೆ ಪವಾಡ ಸದೃಶವಾಗಿ ಸಂಕಟ ಪರಿಹರಿಸುವ ಸಂತ ಅಂತೋಣಿಯವರು ಕಾಣದ ವಸ್ತುಗಳನ್ನು ಮರಳಿ ದೊರಕಿಸುವರೆಂಬುದೂ ಒಂದು ನಂಬಿಕೆಯ ಅಂಶ. ಕಳೆದುಹೋದ ಸ್ಥಾನ ಮಾನ ಪ್ರತಿಷ್ಠೆಗಳೂ ಮರಳಿ ಸಿಗುವುದಾದರೆ ಅದಕ್ಕಿಂತ ಅದ್ಭುತ ಬೇರಿನ್ನೇನು!

ಗುರುವಾರ, ಮೇ 26, 2011

ಕಪ್ಪು ಕ್ರಿಸ್ತ

ಫಿಲಿಪ್ಪೀನ್ಸ್ ದೇಶದ ರಾಜಧಾನಿ ಮನಿಲಾದ ಒಂದು ಹಳೆಯ ಬಡಾವಣೆ ಕಿಯಾಪೊ. ಈ ಪ್ರದೇಶದ ಹೆಂಚಿನ ಮಾಳಿಗೆಯ ಪುಟ್ಟಗಾತ್ರದ ಸಂತ ಸ್ನಾನಿಕ ಯೊವಾನ್ನರ ಚರ್ಚ್ ಅತ್ಯಂತ ನಯನ ಮನೋಹರವಾಗಿದೆ. ಸುತ್ತೆಲ್ಲ ವಾಣಿಜ್ಯಕೇಂದ್ರಗಳು, ತಿಂಡಿತಿನಿಸಿನ ಮಳಿಗೆಗಳು, ಸರಿಸರಿ (ಮನರಂಜನೆ) ಕೇಂದ್ರಗಳಿಂದ ತುಂಬಿದ್ದರೂ ಈ ಪುಟ್ಟ ಚರ್ಚ್ ಹಗಲೂ ರಾತ್ರಿ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ಅಲ್ಲಿಗೆ ನೀವು ಯಾವಾಗ ಭೇಟಿ ನೀಡಿದರೂ ಅಲ್ಲಿನ ಪ್ರಸಾದಸಂಪುಟದ ಮುಂದೆ ಮೊಣಕಾಲೂರಿ ಭಕ್ತಿಯಿಂದ ಪ್ರಾರ್ಥಿಸುತ್ತಿರುವ ಹಲವಾರು ಭಕ್ತರನ್ನು ಕಾಣುತ್ತೀರಿ. ಬಿಳಿಯರು, ಕರಿಯರು, ಪೌರ್ವಾತ್ಯರು, ಸ್ಥಳೀಯರು, ಪ್ರವಾಸಿಗರು, ಬಡವರು, ಶ್ರೀಮಂತರು, ಸುಖಲೋಲುಪ್ತರು, ಅಂಗಹೀನರು ಹೀಗೆ ಯಾವುದೇ ಭಿನ್ನಭೇದವಿಲ್ಲದೆ ಇವರೆಲ್ಲ ಕ್ರಿಸ್ತನನ್ನು ಕಾಣಲು ಬಂದಿದ್ದಾರೆ. ಅವರ ಭಕ್ತಿಪಾರಮ್ಯವ ಕಂಡು ನೀವೂ ಪರವಶರಾಗಿ ನಿಮಗೇ ಗೊತ್ತಿಲ್ಲದಂತೆ ಕ್ರಿಸ್ತನ ಮುಂದೆ ಮೊಣಕಾಲೂರುತ್ತೀರಿ.


ಹಾಗೇ ತಲೆಯೆತ್ತಿ ಕ್ರಿಸ್ತನನ್ನು ದರ್ಶಿಸುತ್ತೀರಿ. ಅರೆ! ಆಶ್ಚರ್ಯ, ಕ್ರಿಸ್ತ ಕಪ್ಪಗಿದ್ದಾನೆ. ನೀವು ಯಾವಾಗಲೂ ದೇವಾಲಯಗಳಲ್ಲಿ ನೋಡುವ, ಕಣ್ಣು ಮುಚ್ಚಿದರೂ ಒಳಗಣ್ಣಿಗೆ ತೋರುವ ಆ ಗೌರವರ್ಣದ ಸುಂದರ ಸುಕೋಮಲ ಹಾಲುಗಲ್ಲದ ಬಿಳಿಯ ಕ್ರಿಸ್ತಮೂರ್ತಿಯೆಲ್ಲಿ, ಈ ಕಡುಗಪ್ಪಿನ ಕರಾಳ ಆದರೂ ಪ್ರೀತಿಯೇ ಮೈವೆತ್ತಿದಂತಿರುವ ಕರಿಯ ಕಾಷ್ಠ ಶಿಲ್ಪವೆಲ್ಲಿ?

ನಿಜ, ಇಲ್ಲಿ ಕ್ರಿಸ್ತ ಕಪ್ಪಗಿದ್ದಾನೆ, ಕಡುಗಪ್ಪಾಗಿದ್ದಾನೆ. ಆದರೆ . . ಆದರೆ . . ಅವನ ಕಂಗಳಲ್ಲಿ ಪ್ರೀತಿಯಿದೆ, ಶಾಂತಿಯಿದೆ, ಅಪೂರ್ವ ಕಾಂತಿಯಿದೆ, ಪ್ರಶಾಂತಿಯಿದೆ. ಅವನ ಭಕ್ತರ ಕಡೆ ನೋಡಿರಲ್ಲ. ಕಪ್ಪು, ಕಂದು, ಬಿಳಿ, ಹಳದಿ ಮೈಬಣ್ಣಗಳ ಜನಗಳ ನಡುವೆ ಕ್ರಿಸ್ತ ಕಪ್ಪಗಿರುವುದರಲ್ಲಿ ಏನು ವಿಶೇಷ? ಇದೇನು ವಿಚಿತ್ರ? ಕ್ರಿಸ್ತನೇಕೆ ಕಪ್ಪಗಾದ? ಎಂಬ ಪ್ರಶ್ನೆಗಳು ಕಾಡತೊಡಗುತ್ತವೆ.

ನಮ್ಮ ದೇಶದ ಪುರಾಣಗಳಲ್ಲಿನ ದೇವತೆಗಳಾದ ಕೃಷ್ಣನ ಬಣ್ಣ ಕಪ್ಪು, ರಾಮನ ಬಣ್ಣ ನೀಲಿ, ಹಾಗೆ ನೋಡಿದರೆ ಯೇಸುಕ್ರಿಸ್ತ ಜನಿಸಿದ್ದು ಏಷಿಯಾ ಖಂಡದಲ್ಲಿಯೇ. ಈ ಖಂಡದಲ್ಲಿ ಎಲ್ಲ ಬಣ್ಣಗಳ ಜನ ಇದ್ದಾರೆ. ಆದರೆ ನಮ್ಮ ಕಲ್ಪನೆಯ ಕ್ರಿಸ್ತ ಬೆಳ್ಳಗಿದ್ದಾನೆ, ಹೌದು. ಅದಕ್ಕೆ ಕಾರಣವೇನು?

ಸ್ಪೇನ್, ಇಟಲಿ, ಪೋರ್ಚುಗಲ್, ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳ ಮೂಲಕವೇ ನಮಗೆ ಕ್ರಿಸ್ತನ ಪರಿಚಯವಾಯಿತು. ಆ ದೇಶಗಳಿಂದಲೇ ನಮಗೆ ಯೇಸುಕ್ರಿಸ್ತನ, ಮೇರಿಮಾತೆಯ ಸ್ವರೂಪಗಳು ಬಂದವಲ್ಲವೇ? ಆ ಐರೋಪ್ಯ ಜನ ತಮ್ಮ ದೇಶ ಸಂಸ್ಕೃತಿಗನುಗುಣವಾದ, ತಮ್ಮ ಒಡನಾಡಿಗಳ ರೂಪ ಲಾವಣ್ಯ ಗಾಂಭೀರ್ಯಗಳನ್ನು ಆ ಸ್ವರೂಪಗಳಲ್ಲಿ ಮೂಡಿಸಿ ಅವನ್ನೇ ನಮ್ಮ ದೇವಾಲಯಗಳಲ್ಲಿ ಪ್ರತಿಷ್ಠಾಪಿಸಿದರು ಅಲ್ಲವೇ?

ಅದೇ ರೀತಿ ಕ್ರಿಸ್ತಶಕ ೧೬೦೬ರಲ್ಲಿ ಸ್ಪೇನ್ ದೇಶದ ಪಾದ್ರಿಗಳು ಗೌರವರ್ಣದ ಯೇಸುಕ್ರಿಸ್ತನ ಪ್ರತಿಮೆಯನ್ನು ಫಿಲಿಪ್ಪೀನ್ಸ್ ದೇಶಕ್ಕೆ ಹಡಗಿನಲ್ಲಿ ಕೊಂಡೊಯ್ಯುತ್ತಿದ್ದರು. ಅಂದು ಜನವರಿ ೯ನೇ ದಿನ ಸ್ವಲ್ಪಹೊತ್ತಿಗೆ ದಡ ಸೇರಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಹಡಗಿಗೆ ಬೆಂಕಿ ಬಿದ್ದು ಬಹಳಷ್ಟು ವಸ್ತುಗಳು ದಹಿಸಿಹೋದವು. ಆದರೆ ಕ್ರಿಸ್ತನ ಪ್ರತಿಮೆ ಮಾತ್ರ ಸುಟ್ಟುಹೋಗದೆ ಬಣ್ಣಗೆಟ್ಟು ಕಪ್ಪಾಯಿತೆಂದು ಚರಿತ್ರೆ ಹೇಳುತ್ತದೆ. ಇದೇ ಕಪ್ಪುಕ್ರಿಸ್ತನ ಪ್ರತಿಮೆಯನ್ನು ಕ್ರಿಸ್ತಶಕ ೧೭೮೭ರಿಂದೀಚೆಗೆ ಕಿಯಾಪೊ ಮೊಹಲ್ಲಾದ ಸಂತ ಸ್ನಾನಿಕ ಯೊವಾನ್ನರ ಚರ್ಚಿನಲ್ಲಿ ಬಹಿರಂಗ ಪ್ರದರ್ಶನಕ್ಕೆ ಇಡಲಾಗಿದೆ.

ಕಿಯಾಪೊ ಮೊಹಲ್ಲಾದ ಬೀದಿಗಳಲ್ಲಿ ಜನವರಿ ೯ರಂದು ಹಾಗೂ ಶುಭಶುಕ್ರವಾರದಂದು ಭಾರೀ ಮೆರವಣಿಗೆ ನಡೆಯುತ್ತದೆ. ಭಕ್ತಿಪರವಶರಾದ ಜನ ಮರದಲ್ಲಿ ಕೆತ್ತಲಾದ ಆಳೆತ್ತರದ ಕಪ್ಪು ಕ್ರಿಸ್ತನ ಪ್ರತಿಮೆಯನ್ನು ಹಿಡಿದು "ವಿವಾ ಸೆನೋರ್" ಎಂದು ಕೂಗುತ್ತಾ ಹೋಗುತ್ತಾರೆ. ಈ ಪ್ರತಿಮೆಯನ್ನು ಹೊತ್ತೊಯ್ಯುವ ದಾರಿಯ ಇಕ್ಕೆಲಗಳಲ್ಲಿ ಸೇರಿದ ಜನಜಂಗುಳಿ ಪ್ರತಿಮೆಯ ದರ್ಶನದಿಂದ ಪುಳಕಿತರಾಗುತ್ತಾರೆ. ಕೆಲವರು ಅದನ್ನು ಕೈಯಿಂದ ಮುಟ್ಟಲೆತ್ನಿಸುತ್ತಾರೆ, ಇನ್ನೂ ಕೆಲವರು ತಮ್ಮ ಕರವಸ್ತ್ರಗಳನ್ನೋ ತುಂಡುಬಟ್ಟೆಗಳನ್ನೋ  ಪ್ರತಿಮೆಗೆ ತಾಕಿಸಿ ತಂದು ತಮ್ಮ ಮನೆಯ ದೇವರ ಕೋಣೆಯಲ್ಲಿ ಜೋಪಾನವಾಗಿ ಮಡಗುತ್ತಾರೆ. ಕರಿಯ ಯೇಸುಕ್ರಿಸ್ತನ ಪ್ರತಿಮೆಯ ಸ್ಪರ್ಶವೇ ತಮ್ಮನ್ನು ಕೇಡಿನಿಂದ ತಪ್ಪಿಸಿ ಕ್ಷೇಮವನ್ನು ಪಾಲಿಸುತ್ತೆ ಎಂಬ ಭಾವನೆ ಇದೆಯಲ್ಲ ಅದಕ್ಕಿಂತ ಅನುಪಮವಾದುದು ಬೇರೇನಿದೆ ಅಲ್ಲವೇ?

ಬುಧವಾರ, ಏಪ್ರಿಲ್ 27, 2011

ಜನಲೋಕಪಾಲ ಮಸೂದೆ ಪ್ರಸ್ತಾವ


ಭಾರತೀಯ ಸೇನೆಗೆ ೧೯೬೩ರಲ್ಲಿ ಸೇರಿದ ಅಣ್ಣಾ ಹಜಾರೆಯವರು ೧೫ ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡು ತನ್ನ ಹುಟ್ಟೂರು ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ರಾಲೆಗಾಂವ್ ಸಿದ್ಧಿ ಎಂಬ ಹಳ್ಳಿಗೆ ಬಂದಾಗ ಆ ಊರಿನ ಸ್ಥಿತಿ ಶೋಚನೀಯವಾಗಿತ್ತು. ಆ ಹಳ್ಳಿ ರಸ್ತೆ, ನೀರು, ಕರೆಂಟು ಯಾವುದೂ ಇಲ್ಲದೆ, ಶಿಕ್ಷಣ, ಕೃಷಿ, ನಾಗರಿಕ ಸವಲತ್ತು ಬಗ್ಗೆ ಯಾವುದೇ ಮುನ್ನೋಟವಿಲ್ಲದ ನಿರಕ್ಷರಕುಕ್ಷಿಗಳಿಂದ ತುಂಬಿತ್ತು. ಬರ ಆ ಊರನ್ನು ಬೆಂಗಾಡಾಗಿಸಿತ್ತು. ಕಳ್ಳಭಟ್ಟಿ ಸಾರಾಯಿ ದಂಧೆ ಉತ್ತುಂಗದಲ್ಲಿತ್ತು. ೧೯೭೫ ರಲ್ಲಿ ಅಣ್ಣಾ ಹಜಾರೆ ತನ್ನ ಊರನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯಗಳು ದೇಶಕ್ಕೇ ಮಾದರಿಯಾಗಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ನೀರಾವರಿ ವ್ಯವಸ್ಥೆ, ಶಾಲೆ ಹೀಗೆ ಎಲ್ಲವನ್ನು ಊರವರ ಸಹಕಾರದೊಂದಿಗೆ ಮಾಡಿ ಅದನ್ನು ಮಾದರಿ ಗ್ರಾಮವಾಗಿಸಿ ಸ್ವಾವಲಂಬೀ ಜೀವನ ನಡೆಸಲು ಅಲ್ಲಿನ ಜನರನ್ನು ಪ್ರೇರೇಪಿಸಿದ ಕೀರ್ತಿ ಅಣ್ಣಾ ಅವರ ಸಾಧನೆಯ ದ್ಯೋತಕ.
ಕೆಲ ವರ್ಷಗಳ ಹಿಂದೆ ಅಣ್ಣಾ ಅವರು ಮಾಹತಿಹಕ್ಕು ಕಾನೂನು ಜಾರಿಗೆ ಬರುವಂತೆ ಮಾಡಿದ ಕೀರ್ತಿಗೂ ಭಾಜನರಾಗಿದ್ದಾರೆ. ಅವರು ಅದಕ್ಕಾಗಿ ೨೦೦೩ರ ಜುಲೈನಲ್ಲಿ ೧೨ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು.ಅದರ ಫಲವಾಗಿ ೨೦೦೫ರಲ್ಲಿ ಮಾಹಿತಿಹಕ್ಕು ಕಾಯಿದೆ ೨೦೦೫ ಜಾರಿಗೆ ಬಂತು.
ಜನಪರ ಕಾಳಜಿಗಾಗಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಇವರು ಈಗ, ಭ್ರಷ್ಟರ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಮುಗಿಸಲು ಅನುಕೂಲವಾಗುವ ಜನ ಲೋಕಪಾಲ ಮಸೂದೆ ಜಾರಿಯಾಗಬೇಕು. ಇದು ಕಟ್ಟು ನಿಟ್ಟಿನ ಕಾಯ್ದೆಯಾಗಬೇಕು. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎನ್ನುತ್ತಾ, ಈ ಕಾಯ್ದೆಯ ಕರಡು ರಚಿಸಲು ಜನರನ್ನೂ ಸೇರಿಸಿಕೊಳ್ಳಬೇಕೆಂಬ ಆಗ್ರಹದೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದ್ದು ಎಲ್ಲರಿಗೂ ವೇದ್ಯವಾಗಿದೆ.
ಆದರೆ ಯಾವುದೇ ಸರ್ಕಾರಕ್ಕೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಬದ್ಧತೆ ಇಲ್ಲ. ಏಕೆಂದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಹಲವಾರು ಪಕ್ಷಗಳ ಸರ್ಕಾರಗಳ ಮುಂದೆ ಅದರ ಪ್ರಸ್ತಾವಗಳು ಬಂದರೂ ಜಾರಿಯಾಗಿರಲಿಲ್ಲ. ಅದರ ಈಗಿನ ಪ್ರಸ್ತಾವಗಳಂತೂ ಜಾಳುಜಾಳಾಗಿವೆಯಲ್ಲದೆ ಅದರ ಕರಡು ಸಿದ್ಧತಾ ಸಮಿತಿಯಲ್ಲಿ ಭೂಹಗರಣದಲ್ಲಿ ಸಿಲುಕಿರುವ ಶರದ್ ಪವಾರ್ ಅಂಥವರೂ ಇದ್ದರು. ಈ ಒಂದು ಅಂಶವನ್ನು ಮುಂದುಮಾಡಿಕೊಂಡು ಕೇಂದ್ರಸರ್ಕಾರವನ್ನು ನೊಣೆಯಬಹುದು ಎಂದು ಬಾಯಲ್ಲಿ ಜೊಲ್ಲು ಸುರಿಸುತ್ತಾ ಅಣ್ಣಾ ಹಜಾರೆಯವರಿಗೆ ಬೆಂಬಲು ಸೂಚಿಸಲು ಬಂದ ಬಿಜೆಪಿಯಂಥ ಪಕ್ಷಗಳ ನಾಯಕರನ್ನು ಅಣ್ಣಾ ಅವರು ಬಾಗಿಲಲ್ಲೇ ತಡೆದು ಹಿಂದಕ್ಕೆ ಕಳುಹಿಸಿದ್ದೂ ಸುದ್ದಿಯಾಯಿತು.
ಕರ್ನಾಟಕಕ್ಕೆ ದಕ್ಷ ಆಡಳಿತ, ಭ್ರಷ್ಟಮುಕ್ತ ಸರ್ಕಾರ, ಹಗರಣಮುಕ್ತ ಸರ್ಕಾರವನ್ನು ನೀಡುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ ಎಂಬ ಅಂಗೈ ಹುಣ್ಣಿಗೆ ಕನ್ನಡಿಯೇನೂ ಬೇಕಾಗಿಲ್ಲ ಅಲ್ಲವೇ?
ಲೋಕಪಾಲ ಮಸೂದೆ ಎಂಬುದು ಸರಕಾರ ಸಿದ್ಧಪಡಿಸುತ್ತಿರುವ ಮಸೂದೆಯಾದರೆ, ಅಣ್ಣಾ ಹಜಾರೆ ಪ್ರಸ್ತಾಪಿಸಿದ್ದು ಜನ ಲೋಕಪಾಲ ಮಸೂದೆ, ಅದು ಜನರಿಂದಲೇ ರೂಪುಗೊಳ್ಳುವ ಮಸೂದೆಯಾಗಿರುತ್ತದೆ.
ಸರಕಾರದ ಪ್ರಸ್ತಾವನೆ ಮತ್ತು ಅಣ್ಣಾ ಹಜಾರೆ ನೇತೃತ್ವದ ಒಮ್ಮನಸ್ಸಿನ ಮಂದಿ ರೂಪಿಸಿದ ಪ್ರಸ್ತಾವನೆಯ ತುಲನೆ ಇಲ್ಲಿದೆ.

ಸರಕಾರದ ಪ್ರಸ್ತಾಪದಲ್ಲಿರುವುದು:
ಲೋಕಪಾಲರಿಗೆ ಭ್ರಷ್ಟರ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳುವ ಅಧಿಕಾರವಿರುವುದಿಲ್ಲ ಅಥವಾ ಅವರು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವಂತಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಅನುಮತಿ ಮೂಲಕ ಬಂದ ದೂರುಗಳನ್ನು ಮಾತ್ರವೇ ಅದು ತನಿಖೆ ನಡೆಸಬೇಕು.

ಅಣ್ಣಾ ಹಜಾರೆಯವರ ಪ್ರಸ್ತಾಪ:
ಯಾವುದೇ ಕೇಸಿನಲ್ಲಿ ತಾವಾಗಿಯೇ ತನಿಖೆ ಆರಂಭಿಸುವ ಹಕ್ಕು ಲೋಕಪಾಲರಿಗೆ ಇರಬೇಕು ಮತ್ತು ನೇರವಾಗಿ ಸಾರ್ವಜನಿಕರಿಂದ ಅವರು ದೂರುಗಳನ್ನು ಸ್ವೀಕರಿಸಬಹುದು. ಯಾವುದೇ ಕೇಸಿನ ತನಿಖೆ ಆರಂಭಿಸಲು ಯಾರದೇ ಅನುಮತಿ ಅಥವಾ ಉಲ್ಲೇಖಗಳು ಬೇಕಾಗಿಲ್ಲ.

ಸರಕಾರ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಾಗಿರುತ್ತದೆ. ಅದು ಅದರ ತನಿಖಾ ವರದಿಯನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ "ಜವಾಬ್ದಾರಿಯುತ ಮಂಡಳಿ"ಗೆ ಸಲ್ಲಿಸುತ್ತದೆ.
ಅಣ್ಣಾ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಲ್ಲ. ಕೇಸಿನ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಶಿಕ್ಷೆ ವಿಧಿಸುವ ಹಕ್ಕು ಕೂಡ ಅದಕ್ಕೆ ಇರಬೇಕು. ಯಾವುದೇ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಆದೇಶಿಸುವ ಅಧಿಕಾರವನ್ನೂ ಅದು ಹೊಂದಿರಬೇಕು.

ಸರಕಾರ: ಲೋಕಪಾಲರಿಗೆ ಪೊಲೀಸ್ ಅಧಿಕಾರಗಳಿಲ್ಲ. ಅದರ ಎಲ್ಲ ತನಿಖೆಗಳು ’ಪ್ರಾಥಮಿಕ ತನಿಖೆಗಳಿಗೆ’ ಸಮ. (ಹಾಗಿದ್ದರೆ, ಅದರ ವರದಿ ಅಂಗೀಕೃತವಾದರೆ ಚಾರ್ಜ್ ಶೀಟ್ ಸಲ್ಲಿಸುವುದು ಯಾರು?)
ಅಣ್ಣಾ: ಲೋಕಪಾಲರಿಗೆ ಪೊಲೀಸ್ ಅಧಿಕಾರ ಬೇಕು. ಎಫ್ಐಆರ್ ದಾಖಲು ಮಾಡಲು, ಕ್ರಿಮಿನಲ್ ತನಿಖೆ ನಡೆಸಲು ಮತ್ತು ದಂಡನಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರ ಬೇಕು.

ಸರಕಾರ: ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರೀಯ ತನಿಖಾ ಮಂಡಳಿಯ ಪಾತ್ರ ಏನು ಎಂಬುದರ ಉಲ್ಲೇಖವಿಲ್ಲ. ರಾಜಕಾರಣಿಗಳ ವಿರುದ್ಧ ತನಿಖೆ ಕೈಗೊಳ್ಳುವ ಸಿಬಿಐ ಅಧಿಕಾರ ಹೋಗುತ್ತದೆಯೇ?
ಅಣ್ಣಾ: ಸಿಬಿಐಯ ಭ್ರಷ್ಟಾಚಾರ-ನಿಗ್ರಹ ಘಟಕವನ್ನು ಲೋಕಪಾಲ ಜೊತೆ ವಿಲೀನಗೊಳಿಸಬೇಕು. ಈ ಮೂಲಕ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೈಕ ಸ್ವತಂತ್ರ ಸಂಸ್ಥೆ ಇರುವಂತಾಗುತ್ತದೆ.

ಸರಕಾರ: ಭ್ರಷ್ಟಾಚಾರಕ್ಕೆ ತೀರಾ ಸಣ್ಣ ಶಿಕ್ಷೆ - ಕನಿಷ್ಠ ೬ ತಿಂಗಳು, ಗರಿಷ್ಠ ೭ ವರ್ಷ.
ಅಣ್ಣಾ: ಶಿಕ್ಷೆ ಕಠಿಣವಾಗಬೇಕು. ಕನಿಷ್ಠ ೫ ವರ್ಷಗಳು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ.

ಸರಕಾರ: ಅಕ್ರಮ ಸಂಪತ್ತು ಹೊರತೆಗೆಯುವ ಅಧಿಕಾರವಿಲ್ಲ. ಅಂದರೆ ಯಾವುದೇ ಭ್ರಷ್ಟ ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ, ಅದೇ ಹಣ-ಸಂಪತ್ತನ್ನು ಬಳಸಿಕೊಳ್ಳಬಹುದಾಗಿದೆ.
ಅಣ್ಣಾ: ಭ್ರಷ್ಟಾಚಾರದಿಂದಾಗಿ ಸರಕಾರಕ್ಕೆ ಆಗುವ ನಷ್ಟವನ್ನು ಆಪಾದಿತರಿಂದಲೇ ವಸೂಲು ಮಾಡಬೇಕು.

ಶುಕ್ರವಾರ, ಮಾರ್ಚ್ 25, 2011

ಮರಿಯಾಪುರದಲ್ಲಿ ‘ಯೇಸು ಮಹಿಮೆ’

ಬನ್ನೇರುಘಟ್ಟ ಬೆಟ್ಟದ ಪಶ್ಚಿಮ ಬುಡದಲ್ಲಿ ಹಸಿರುಹೊತ್ತ ಮರಿಯಾಪುರ ಗ್ರಾಮಕ್ಕೆ ಈಗ ೧೨೭ ವರ್ಷ. ಇದನ್ನು ತಲುಪಲು ಬೆಂಗಳೂರು ಕನಕಪುರ ಹೆದ್ದಾರಿಯಲ್ಲಿ ಕಗ್ಗಲೀಪುರದ ಬಳಿ ತಿರುಗಬೇಕು.
ಆರ್ಟ್ ಆಫ್ ಲಿವಿಂಗ್ ಬಳಿ ಉದಿಪಾಳ್ಯದಿಂದ ಒಂದು ಕಿಲೊಮೀಟರು ಮುಂದೆ ಸಾಗಿದರೆ ಸಿಗುವ ಕಗ್ಗಲೀಪುರ ಒಂದು ಜಂಕ್ಷನ್ ಎನ್ನಬಹುದು. ಅಲ್ಲಿಂದ ಎಡಕ್ಕೆ ನಾಲ್ಕೈದು ಕಿ.ಮೀ ಒಳ ದಾರಿಯಲ್ಲಿ ಗುಳಕಮಲೆ, ತರಳು ದಾಟಿ ಮುಂದೆ ಹೋದಾಗ ಸಿಗುವುದೇ ಮರಿಯಾಪುರ.

ಶತಮಾನಕ್ಕೂ ಹಿಂದೆ ಪ್ಲೇಗ್ ಮತ್ತು ಕ್ಷಾಮದ ಹೆಮ್ಮಾರಿಗೆ ಸಿಲುಕಿ ಇಲ್ಲಿದ್ದ ತಟ್ಟಗುಪ್ಪೆ ಎಂಬ ಊರು ನಿರ್ಜನವಾದಾಗ ಫ್ರೆಂಚ್ ಮಿಷನರಿ ಫಿಲಿಪ್ ಸಿಜನ್ ಅವರು ಮಹಾರಾಜರಿಂದ ಈ ಊರನ್ನು ಪಡೆದು ೧೮೮೪ರಲ್ಲಿ ಮರುನಿರ್ಮಾಣ ಮಾಡಿದರು. ಅದೇ ಈಗಿನ ಮರಿಯಾಪುರ.

ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಇಲ್ಲಿನ ಅಚ್ಚರಿಯ ಸಂಗತಿಯೆಂದರೆ ಪರದೆಯಿಲ್ಲದೆ ನಡೆಯುವ ಧ್ವನಿ ಬೆಳಕಿನ ಬೃಹನ್ನಾಟಕ.ಸುಗ್ಗಿ ಕಳೆದ ನಂತರದ ವಿರಾಮದ ದಿನಗಳಲ್ಲಿ ಕ್ರೈಸ್ತ ಜನಪದರು ನಾಟಕ, ಕೋಲಾಟ, ಗೀತಗಾಯನಗಳಲ್ಲಿ ತೊಡಗಿಕೊಳ್ಳುವುದಕ್ಕೆ ತಪಸ್ಸು ಕಾಲವು ಇಂಬುಗೊಡುತ್ತದೆ. ಯೇಸು ಸ್ವಾಮಿಯ ಕೊನೆಯ ಗಳಿಗೆಗಳನ್ನು ಮನನ ಮಾಡುವ ತ್ಯಾಗ ನೇಮಗಳ ದಿನಗಳನ್ನು ತಪಸ್ಸು ಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ಬೇಗೂರು, ಕಾಮನಹಳ್ಳಿ, ದೊರೆಸಾನಿಪಾಳ್ಯ, ವೀರನಪಾಳ್ಯ, ಆರೋಬೆಲೆ, ಮರಿಯಾಪುರಗಳಲ್ಲಿ ಕ್ರೈಸ್ತರಿಂದ ನಡೆಯುವ ನಾಟಕಗಳು ಪ್ರಸಿದ್ಧವಾದವು.

ದೊರೆಸಾನಿಪಾಳ್ಯದ ಡ್ರಾಮಾ ಮಾಸ್ತರ್ ದಾವಿದಪ್ಪನವರಲ್ಲಿ ‘ಜೋಸೆಫ್ ಮತ್ತು ಹನ್ನೆರಡು ಸಹೋದರರು, ಜ್ಞಾನಸುಂದರಿ, ಅಲ್ಫೋನ್ಸೆ, ಗುಣಸುಂದರಿ, ಯೂಸ್ತಾಕಿಯುಸ್, ಜೂಡಿತಮ್ಮ, ಎಸ್ತೆರಮ್ಮ’ ಮುಂತಾದ ಕ್ರೈಸ್ತ ನಾಟಕಗಳ ಹಸ್ತಪ್ರತಿಗಳನ್ನು ಈಗಲೂ ಕಾಣಬಹುದು.

ಅರ್ಕಾವತಿ ದಂಡೆಯ ಆರೂಬೆಲೆಯಲ್ಲಿ ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರ ರಾತ್ರಿ ಆಡುವ ‘ಯೇಸುಕ್ರಿಸ್ತನ ಮಹಿಮೆ’ ನಾಟಕ ಈಗಲೂ ಪ್ರಸಿದ್ಧ.

ಇವೆಲ್ಲವುಗಳ ನಡುವೆ ಮರಿಯಾಪುರದ ಧ್ವನಿ ಬೆಳಕಿನ ನಾಟಕಕ್ಕೆ ಹೊಸ ಹೊಳಪಿದೆ. ಸ್ವಾಮಿ ಫಿಲಿಪ್ ಸಿಜನ್ ಅವರ ನೆನಪು ಚಿರಸ್ಥಾಯಿಯಾಗಿಸುವ ಗ್ರಾಮಸ್ಥರ ಪ್ರಯತ್ನದಿಂದಾಗಿ ಈ ನಾಟಕವು ಹೊಸ ರೂಪ ತಳೆದಿದೆ.

ಗ್ರಾಮದ ಚರ್ಚ್ನ ಹಿಂಬದಿಯ ೧೨೫ ಮೀಟರು ಉದ್ದದ ದಿಬ್ಬದ ಮೇಲೆ ವಿಶಾಲ ವೇದಿಕೆ ನಿರ್ಮಿಸಿ ಇಡೀ ರಾತ್ರಿ ಆಡಲಾಗುವ ಈ ನಾಟಕದಲ್ಲಿ ೩೫೦ ನಟ ನಟಿಯರು, ಸುಮಾರು ೫೦೦ ಬಾಲ ಬಾಲೆಯರು ಹೆಜ್ಜೆ ಹಾಕುತ್ತಾರೆ. ಇನ್ನೂರಕ್ಕೂ ಹೆಚ್ಚು ಸ್ಪಾಟ್ಲೈಟ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹತ್ತು ಸಾವಿರ ವ್ಯಾಟ್ಗಳ ಸ್ಪಷ್ಟ ಧ್ವನಿ ನಾಟಕಕ್ಕೆ ವಿಶೇಷ ಪರಿಣಾಮ ತುಂಬುತ್ತದೆ.

ಯೇಸುವಿನ ಜೀವನವನ್ನು ಕೇಂದ್ರವಾಗಿಸಿಕೊಂಡು ಇಡೀ ಬೈಬಲನ್ನು ಸುಮಾರು ಆರೂವರೆ ಗಂಟೆಗಳ ಕಾಲ ಚಿತ್ರಿಸುತ್ತ ಅಂದಿನ ಕಾಲದ ವೇಷಭೂಷಣಗಳನ್ನು ಬಳಸಲಾಗುತ್ತದೆ. ಜೊತೆಗೆ ದನ ಕರು, ಕುರಿ, ಕತ್ತೆ, ಒಂಟೆ, ಕುದುರೆ, ರಥಗಳು ಹಾಗೂ ಎತ್ತಿನ ಗಾಡಿಗಳು ಬೃಹತ್ ವೇದಿಕೆ ಮೇಲೆ ಬಂದು ಹೋಗುವುದು ಚಿತ್ತಾಕರ್ಷಕವಾಗಿರುತ್ತದೆ. ನಗರದ ಜಂಜಡಗಳನ್ನು ಮರೆತು ಹಳ್ಳಿಗಾಡಿನ ನಿರಭ್ರ ಆಗಸದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುವ ಈ ಅನುಭವ ನಿಜಕ್ಕೂ ಚೇತೋಹಾರಿ.
http://beta.prajavani.net/web/include/story.php?news=902§ion=56&menuid=13

ಗುರುವಾರ, ಮಾರ್ಚ್ 24, 2011

ಹಿಂದುತ್ವ ಸಾಧುವೇ?

ಹೀಗೊಂದು ಪತ್ರಿಕೆಯಲ್ಲಿ ಓದುತ್ತಿರುವಾಗ ಒಂದು ಬರಹ ಕಣ್ಣಿಗೆ ಬಿತ್ತು. ಅದರ ಪ್ರಕಾರ ಎಲ್ಲ ಧರ್ಮಗಳೂ ಒಂದೇ ಏಕೆಂದರೆ Temple, Church, Mosque ಎಂಬ ಭಕ್ತಿಸ್ಥಾನಗಳೂ, Geeta, Bible, Quran ಎಂಬ ಧರ್ಮಗ್ರಂಥಗಳೂ ಸಮ ಸಮ ಅಕ್ಷರಗಳಲ್ಲಿರುವಾಗ ಎಲ್ಲವೂ ಸಮಾನವಲ್ಲವೇ? ಅದೇಕೆ ನಾವು ಕಿತ್ತಾಡುವುದೆನ್ನುವ ಭಾವ ಆ ಲೇಖನದಲ್ಲಿತ್ತು. ಅದರ ಲೇಖಕನ ಆಶಯವೇನೋ ಚೆನ್ನಾಗಿದೆ. ಆದರೆ ಹಿಂದೂ ಧರ್ಮದ ಧರ್ಮಗ್ರಂಥವು ಗೀತೆ ಎಂಬುದನ್ನು ನೋಡಿ ನನ್ನಲ್ಲಿ ವಿಚಾರದ ತುಮುಲಗಳೆದ್ದವು. ಏಕೆಂದರೆ ನನ್ನ ಅರಿವಿಗೆ ಬಂದಂತೆ ಹಿಂದೂ ಎನ್ನುವುದು ಒಂದು ಜೀವನಶೈಲಿಯಷ್ಟೆ. ಅದೊಂದು ಧರ್ಮವಲ್ಲ. ಆಗಲಿ ಅದನ್ನು ಧರ್ಮವೆಂದೇ ಅಂದುಕೊಂಡರೂ ಗೀತೆಯನ್ನು ಅದರ ಧರ್ಮಗ್ರಂಥವೆಂದು ಕರೆಯಲಾಗದು. ಏಕೆಂದರೆ ಹಿಂದೂಸಂಸ್ಕೃತಿಯಲ್ಲಿ ಅನೇಕ ದೇವರುಗಳು, ಅನೆಕ ಪಂಗಡಗಳು, ಅನೇಕ ಒಳಧರ್ಮಗಳು ಇವೆ. ಅವೆಲ್ಲವುಗಳ ತತ್ತ್ವ ಮತ್ತು ಸಂಹಿತೆಗಳು ಒಂದೇ ತೆರನಾಗಿಲ್ಲ. ಹಿಂದೂ ಎಂಬ ಗ್ರಹಿಕೆಯ ಕುರಿತು ಅದರ ಬೆಂಬಲಿಗರು ಯಾವುದೋ ಒಂದು ಸಣ್ಣ ಅರ್ಥಹೀನ ಎಳೆಯನ್ನು ಹಿಡಿದು ನಿಜದ ಹತ್ತಿರಕ್ಕೇ ಬಾರದಂತೆ ಅಗಾಧವಾಗಿ ವಾದ ಮಾಡುತ್ತಾರೆ. ಹಿಂದುತ್ವದ ಹೆಸರು ಹೇಳಿಕೊಂಡು ಕೆಲವರು ಮಾಡುತ್ತಿರುವುದೂ ಅದನ್ನೇ.
ಮೊದಲಿಗೆ ಅವರ ರಾಮನನ್ನೇ ತೆಗೆದುಕೊಳ್ಳೋಣ. ನಮ್ಮ ಕಲ್ಪನೆಯ ರಾಮ ಒಬ್ಬ ಆದರ್ಶ ಪುರುಷ, ಪಿತೃವಾಕ್ಯ ಪರಿಪಾಲಕ, ಅವನ ಹೆಂಡತಿ ಸೀತೆ ಒಬ್ಬ ಆದರ್ಶ ಪತ್ನಿ, ಪತಿವ್ರತಾ ಶಿರೋಮಣಿ, ಸನ್ನಡತೆಯ ನಾರಿ. ರಾಮಸೀತೆಯರಂತೆಯೇ ಬಹಳಷ್ಟು ಆದರ್ಶ ದಂಪತಿಯರು ಹಿಂದೂ ಪುರಾಣಗಳಲ್ಲಿ ಮಾತ್ರವಲ್ಲ ನಮ್ಮ ದೇಶದ ಎಲ್ಲೆಡೆ ಕಾಣಸಿಗುತ್ತಾರೆ. ಶಿವ ಪಾರ್ವತಿ, ನಳ ದಮಯಂತಿ, ಆಯ್ದಕ್ಕಿ ಮಾರಯ್ಯ ದಂಪತಿ ಮುಂತಾದವರನ್ನೆಲ್ಲ ಹೀಗೆ ಹೆಸರಿಸಬಹುದು. ಆದರೆ ಹಿಂದುತ್ವವಾದಿಗಳು ರಾಮನೊಬ್ಬನನ್ನೇ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ ಮಾತ್ರವಲ್ಲ ನಮ್ಮ ರಾಷ್ಟ್ರದ ಪ್ರತೀಕ ಸಹ ಎಂದು ಬಿಂಬಿಸುತ್ತಾರೆ.
ಧಾರ್ಮಿಕತೆ ಮತ್ತು ರಾಷ್ಟ್ರೀಯತೆಗಳು ಎರಡು ವಿಭಿನ್ನ ಚೌಕಟ್ಟುಗಳನ್ನು ಹೊಂದಿವೆಯೆಂಬುದನ್ನು ಅವರು ಅರಿತಂತಿಲ್ಲ. ರಾಷ್ಟ್ರವೊಂದಕ್ಕೆ ತನ್ನದೇ ಇತಿಮಿತಿಗಳಿವೆ, ಸೀಮೆಗಳಿವೆ, ರೀತಿನೀತಿಗಳಿವೆ, ಸಂವಿಧಾನ ಮತ್ತು ಶಾಸನಗಳಿವೆ. ದರ್ಮದ ಕುರಿತು ಹೇಳಬೇಕೆಂದರೆ ಅದು ಹೃದಯಕ್ಕೆ ಸಂಬಂಧಿಸಿದ್ದು, ಆತ್ಮಕ್ಕೆ ಸಂಬಂಧಿಸಿದ್ದು. ಅದಕ್ಕೆ ದೇಶ ಕಾಲಗಳ ಗಡಿಗಳಿಲ್ಲ. ಇನ್ನು ರಾಮನ ಕುರಿತು ಹೇಳಬೇಕೆಂದರೆ ಬಹು ಸಂಸ್ಕೃತಿಯ ಬಹು ದೇವರುಗಳ ನಮ್ಮ ದೇಶಕ್ಕೆ ರಾಮನೊಬ್ಬನೇ ನಾಯಕನಾಗಲಾರ. ವಾಲ್ಮೀಕಿಯ ಕತೆಯಂತೆ ರಾಮ ದೇವತಾ ಪುರುಷನಲ್ಲ, ಏಕೆಂದರೆ ಆನಂತರ ಅಂದರೆ ಸಾವಿರದೈನೂರು ವರ್ಷಗಳ ನಂತರ ಬಂದ ತುಲಸಿದಾಸರು ರಾಮನಿಗೆ ದೈವತ್ವ ಪ್ರಾಪ್ತಿ ಮಾಡಿದರು. ವಾಲ್ಮೀಕಿಯ ರಾಮಾಯಣವನ್ನು ಹಿಡಿದುಕೊಂಡರೆ ರಾಮನಿಗೆ ಚಾರಿತ್ರಿಕ ಸ್ಥಾನವೂ ಸಿಗುವುದಿಲ್ಲ, ಏಕೆಂದರೆ ಅಲ್ಲಿ ಅವನೊಬ್ಬ ಕಾಲ್ಪನಿಕ ಕಥಾನಾಯಕ. ಇನ್ನು ಅವನ ಜನ್ಮಸ್ಥಳ ಅಯೋಧ್ಯೆ ಎನ್ನುವುದು ಸತ್ಯದ ತಲೆಯಮೇಲೆ ಹೊಡೆದಂತೆ. ಇಂಥಲ್ಲಿ ರಾಮ ಜನಿಸಿದ ಎನ್ನುವ ವಾದ ಒಂದು ನಂಬುಗೆಯ ತಳಹದಿಯ ಮೇಲೆ ನಿಂತಿದೆ.
ಯೆಹೂದಿ, ಕ್ರೈಸ್ತ, ಇಸ್ಲಾಂ ಮುಂತಾದ ಸೆಮೆಟಿಕ್ ಧರ್ಮಗಳಿಗೆ ಅವುಗಳ ಕಾರಣಪುರುಷರ ದಿನಾಂಕಗಳು ಲಭ್ಯವಿವೆ. ಆದರೆ ಅದೇ ನೇರದಲ್ಲಿ ಹಿಂದೂ ಎಂಬ ಧರ್ಮದ ಕಾರಣಪುರುಷನ ತೇದಿಯನ್ನು ಇಂಥದೇ ಎಂದು ಹೇಳಲಾಗದು. ಯಾರಾದರೂ ಇತಿಹಾಸ ಸಂಶೋಧನೆ ಮಾಡಿ ಯೇಸುಕ್ರಿಸ್ತನೆಂಬುವನು ಇರಲೇ ಇಲ್ಲ ಎಂದು ಸಾಬೀತು ಪಡಿಸಿದರೆ ಕ್ರೈಸ್ತಧರ್ಮಕ್ಕೆ ಉಳಿಗಾಲವಿರುವುದಿಲ್ಲ. ಅಂತೆಯೇ ಇತಿಹಾಸಜ್ಞರು ಕೃಷ್ಣ ಎಂಬುವನು ಇರಲಿಲ್ಲವೆಂದು ಸಾಬೀತು ಪಡಿಸಿದರೆ ಗೀತೆಯ ಗತಿಯೂ ಅಂತೆಯೇ ಇರುತ್ತದೆ. ಇದೇ ವಾದ ರಾಮನಿಗೂ ಅನ್ವಯಿಸುತ್ತದೆ. ಅದಕ್ಕೇ ಕೆಲವರು ಹಿಂದೂ ಧರ್ಮ ಎನ್ನುವುದು ಸನಾತನ ಧರ್ಮ ಅದರ ಹುಟ್ಟನ್ನು ಕಾಲದಿಂದ ಅಳೆಯಲಾಗದು ಎಂದು ವಾದಿಸುತ್ತಾರೆ.
ಸನಾತನ ಹಿಂದೂ ಧರ್ಮಕ್ಕೂ ಇಂದಿನ ಹಿಂದುತ್ವಕ್ಕೂ ಏನಾದರೂ ಹೋಲಿಕೆ ಇದೆಯೇ? ಸನಾತನ ಹಿಂದೂಗಳಿಗೆ ಅನೇಕ ದೇವರುಗಳಿದ್ದು ಶಾಂತಿಯಿಂದಲೂ ಐಕ್ಯದಿಂದಲೂ ಬಾಳುತ್ತಿದ್ದಾರೆ. ನಮ್ಮ ಕಲ್ಪನೆಯ ರಾಮನಿಗೂ ಹಿಂದುತ್ವವಾದಿಗಳು ಹೇಳುವ ರಾಮನಿಗೂ ಅಗಾಧ ವ್ಯತ್ಯಾಸವಿದೆ. ನಮ್ಮ ಕಲ್ಪನೆಯ ರಾಮ ಮರ್ಯಾದಾ ಪುರುಷೋತ್ತಮ, ಎಲ್ಲ ಆದರ್ಶಗಳ ಮೇರುವ್ಯಕ್ತಿ. ಆತ ಕರ್ತವ್ಯಪಾಲಕ, ಹಿರಿಯರನ್ನು ಗೌರವಿಸಿ ಕಿರಿಯರನ್ನು ವಾತ್ಸಲ್ಯದಿಂದ ಕಂಡವನು, ಎಲ್ಲರನ್ನೂ ಪ್ರೀತಿಯಿಂದ ಪರಿಭಾವಿಸಿದವನು, ಶಾಂತಿ ಅವನ ದೊಡ್ಡ ಗುಣ. ಕಾರಣವಿಲ್ಲದೇ ಯಾರೊಂದಿಗೂ ಜಗಳ ಕಾದವನಲ್ಲ. ಪಾರಂಪರಿಕವಾಗಿ ರಾಮ ಶಾಂತಮೂರ್ತಿ. ಅವನೆಂದೂ ಒಂಟಿಯಲ್ಲ ಅವನೊಂದಿಗೆ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ, ಗೆಳೆಯ ಹನುಮ ಇದ್ದೇ ಇರುತ್ತಾರೆ. ಆದರೆ ಹಿಂದುತ್ವವಾದಿಗಳು ತೋರುವ ರಾಮ ಒಬ್ಬಂಟಿ, ಆತ ಹುಬ್ಬುಗಂಟಿಕ್ಕಿ ಬಿಲ್ಲುಬಾಣಗಳ ಹಿಡಿದು ಜಗಳ ಕಾಯಲು ಸಿದ್ಧನಾಗಿರುವವನು. ಹಿಂದುತ್ವದ ಪ್ರತಿಪಾದಕರಿಗೆ ಉಗ್ರಸ್ವರೂಪಿ ರಾಮನೇ ದೇವರು, ಮತ್ತು ಅವನೇ ಅವರ ಪ್ರಕಾರ ರಾಷ್ಟ್ರನಾಯಕ. ಹಿಂದೂ ಎಂಬ ಭಾವವು ತಾಳ್ಮೆ ಮತ್ತು ಅಹಿಂಸೆ ಎಂಬ ಅಡಿಪಾಯದ ಮೇಲೆ ನಿಂತಿದೆ. ಅದನ್ನು ಹಿಂಸೆ ಮತ್ತು ದ್ವೇಷಗಳ ರೂಪದಲ್ಲಿ ಕಾಣುವುದೇ ಒಂದು ರೀತಿಯ ವ್ಯಂಗ್ಯ. ಅದರೆ ಹಿಂದುತ್ವದ ಸಂದೇಶಗಳು ಈ ಉದಾತ್ತ ಭಾವನೆಗಳಿಗೆ ಧಕ್ಕೆ ತರುವಂತೆ ತೋರುತ್ತಿವೆ, ಮಾತ್ರವಲ್ಲ ಅದನ್ನು ಸಾಬೀತು ಪಡಿಸಿಯೂ ಇವೆ. ವೈರಿಗಳನ್ನು ನಾಶಪಡಿಸೋಣ ಎಂಬುದೇ ಹಿಂದುತ್ವದ ಏಕೈಕ ಸಂದೇಶ, ಕಲ್ಪಿತವಿರಲಿ ನೈಜವಿರಲಿ ವೈರಿ ವೈರಿಯೇ ಎಂಬುದು ಅವರ ವಾದ. ಹಾಗೆ ನೋಡಿದರೆ ವಿಶ್ವದೆಲ್ಲೆಡೆಯ ಭಯೋತ್ಪಾದಕರೂ ಇದೇ ವಾದವನ್ನು ಮುಂದಿಡುತ್ತಾರೆ. ಅಂದರೆ ಹಿಂದುತ್ವವಾದಿಗಳು ಆತಂಕವಾದಿಗಳಾಗುತ್ತಿದ್ದಾರೆಯೇ?
ಹಿಂದುತ್ವವಾದಿಗಳು ಕೆಲ ದಿನಗಳ ಹಿಂದೆ ತ್ರಿಶೂಲಗಳು ತಮ್ಮ ಆಯುಧಗಳಾಗಲಿ ಎಂದು ಬಯಸಿದವರು. ಅದನ್ನೇ ಅವರು ವಿವಿಧ ಜನಗಳಿಗೆ ಹಂಚಿ ಸುದ್ದಿ ಮಾಡಿದ್ದರು. ತ್ರಿಶೂಲ ಮಂಗಳರೂಪಿ ಶಿವನ ಕೈಯಲ್ಲಿನ ಆಭರಣ. ಇಲ್ಲಿ ನಾನು ಅದನ್ನು ಆಯುಧವೆನ್ನುತ್ತಿಲ್ಲ ಏಕೆಂದರೆ ಶಿವ ಅದನ್ನೆಂದೂ ಎಲ್ಲೆಂದರಲ್ಲಿ ಕ್ರೋಧದಿಂದ ಪ್ರಯೋಗಿಸಿಲ್ಲ. ಬದಲಿಗೆ ಹಸನ್ಮುಖನಾಗಿಯೇ ಅದನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ನಮಗೆ ಶಿವನ ಬಗ್ಗೆ ಪ್ರೀತಿಯ ಭಾವನೆ ಸ್ಫುರಿಸುತ್ತದೆ. ಸ್ವತಃ ಶಿವನೇ ಅಸ್ತ್ರವನ್ನು ದೂರಕ್ಕೆಸೆದು ಭೋಳೇಶಂಕರ ಎನಿಸಿದ್ದಾನೆ. ಆದರೆ ಹಿಂದುತ್ವವಾದಿಗಳು ವಿತರಿಸುವ ಅಥವಾ ಪ್ರದರ್ಶಿಸುವ ತ್ರಿಶೂಲ ಶಿವನ ಆಭರಣದಂತಿರದೆ ದಗಾಕೋರರ ಅಥವಾ ಠಕ್ಕರ ಆಯುಧದಂತಿದೆ.
ಹಾಗೆ ನೋಡಿದರೆ ರಾಮನು ಶಾಂತಿಗೆ ಮಾದರಿಯಾಗಿದ್ದಾನೆ, ಕೃಷ್ಣನು ಅವ್ಯಾಜಪ್ರೇಮಕ್ಕೆ ಮಾದರಿಯಾಗಿದ್ದಾನೆ, ಕಾಳಿಯು ಶಿಕ್ಷಣಕ್ಕೆ ಮಾದರಿಯಾಗಿದ್ದಾಳೆ, ಶಿವನು ನೆಮ್ಮದಿಗೆ ಮಾದರಿಯಾಗಿದ್ದಾನೆ, ಇವೆಲ್ಲವುಗಳ ಸಂಮಿಶ್ರವೇ ಹಿಂದೂ ಪ್ರತೀಕವಾಗಬೇಕು. ಇಂಥ ಉದಾತ್ತ ಸಂಸ್ಕೃತಿಗೆ ಏಕದೇವೋಪಾಸನೆಯ ಏಕಧರ್ಮಗ್ರಂಥದ ಅನಗತ್ಯ ಸಂಕೋಲೆ ಬಿಗಿದು ಆವೇಗ, ಆವೇಶ, ಕ್ರೋಧ, ಹಗೆಗಳನ್ನು ಆವಾಹಿಸಿಕೊಳ್ಳುವ ಹಿಂದುತ್ವವು ಲೋಕಕ್ಕೆ ಕಂಟಕಕಾರಿಯಾಗಿದೆ.



ಮಂಗಳವಾರ, ಫೆಬ್ರವರಿ 22, 2011

ತಾಯ್ನುಡಿಯ ಹಿರಿಮೆ

ಬೆಂಗಳೂರಿನಂತಹ ಕಾಸ್ಮೊಪಾಲಿಟನ್ ನಗರಗಳಲ್ಲಿನ ತಾಯ್ತಂದೆಯರು ತಮ್ಮ ಮಗು ಇಂಗ್ಲಿಷಿನಲ್ಲಿ ಮಾತಾಡುತ್ತಿದ್ದರೆ ಒಂದು ರೀತಿಯ ಪರಮಾನಂದ ಅನುಭವಿಸುತ್ತಾರೆ. ಅವರ ಮಕ್ಕಳು ತಮಗೆ ತಮ್ಮದೇ ತಾಯ್ನುಡಿ ಗೊತ್ತಿಲ್ಲ ಎಂದು ಬಲು ಹೆಮ್ಮೆಯಿಂದ ಹಾಗೂ ಯಾವುದೇ ಮುಜುಗರವಿಲ್ಲದೆ ಹೇಳುವುದನ್ನು ಕಂಡಾಗ ಅಥವಾ ನಾವು ಕನ್ನಡಾನ ಮನೇಲಷ್ಟೇ ಮಾತಾಡ್ತೀವಿ, ಓದೋಕೆ ಬರೆಯೋಕಂತೂ ಬರೊಲ್ಲ ಬಿಡಿ ಎಂದಾಗ ಪಿಚ್ಚೆನಿಸಿದರೂ ಕಠೋರ ಸತ್ಯವನ್ನು ಅರಗಿಸಿಕೊಳ್ಳದೇ ಇರಲಾಗದು.

ಕೆಲ ಶಾಲೆಗಳಲ್ಲಿ ಅಳವಡಿಸಿಕೊಂಡಿರುವ ನೀತಿನಿಯಮಾವಳಿಗಳು ತಾಯ್ನುಡಿಯನ್ನು ಮಕ್ಕಳು ಉಪೇಕ್ಷಿಸುವುದಕ್ಕೆ ಪೂರಕವಾಗಿವೆ. ಮಕ್ಕಳು ಬೇರೆ ಭಾಷೆಗಳಲ್ಲಿ ಮಾತಾಡುತ್ತಿದ್ದರೆ ಐರೋಪ್ಯ ನುಡಿಯಾದ ಇಂಗ್ಲಿಷನ್ನು ಕಲಿಯುವುದಕ್ಕೆ ತೊಡಕಾಗುತ್ತದೆ ಎಂಬುದು ಶಿಕ್ಷಕರ ವಾದ. ಅವರ ವಾದ ಸರಿಯಾದುದೇ. ಏಕೆಂದರೆ ನಮ್ಮ ದೇಶದ ನುಡಿಗಳ ವಾಕ್ಯರಚನೆಗೂ ಐರೋಪ್ಯ ನುಡಿಷೆಗಳ ವಾಕ್ಯರಚನೆಗೂ ಅಗಾಧ ವ್ಯತ್ಯಾಸವಿದೆ. ಅಷ್ಟಕ್ಕೂ ಐರೋಪ್ಯ ಭಾಷೆಗಳಲ್ಲಿ ನುರಿತಿರಬೇಕಾದರೆ ಮನಸ್ಸು ನುಡಿಯಲ್ಲೇ ಯೋಚಿಸಬೇಕಾಗುತ್ತದೆ. ಆದರೆ ನಾವು ನೀವೆಲ್ಲ ಏನು ಮಾತನಾಡಬೇಕು ಎಂಬುದನ್ನು ನಮ್ಮ ತಾಯ್ನುಡಿಯಲ್ಲಿ ಯೋಚಿಸಿ ಆಮೇಲೆ ಅದನ್ನು ಇಂಗ್ಲಿಷ್ ಮುಂತಾದ ಪರಕೀಯ ನುಡಿಗಳಲ್ಲಿ ವ್ಯಕ್ತಪಡಿಸುತ್ತೇವೆ. ತಾಯ್ನುಡಿಯನ್ನೇ ಇಂಗ್ಲಿಷ್ ಮಾಡಿಬಿಟ್ಟರೆ, ಇಂಗ್ಲಿಷಿನಲ್ಲೇ ಯೋಚಿಸಬಹುದಲ್ಲವೇ?

ವಾದವನ್ನು ವಿಶ್ಲೇಷಿಸುವ ಮುನ್ನ ತಾಯ್ನುಡಿ ಎಂದರೇನೆಂದು ತಿಳಿದುಕೊಳ್ಳೋಣ. ಒಂದು ಮಗು ತಾನು ಹುಟ್ಟಿದಾಗಿನಿಂದ ಬುದ್ದಿ ಬೆಳವಣಿಗೆಯಾಗುವವರೆಗೆ ತನ್ನ ಅಮ್ಮನಿಂದ, ತನ್ನ ಆಪ್ತರಿಂದ ಹಾಗೂ ಸುತ್ತಲಿನ ಪರಿಸರದಿಂದ ವ್ಯಕ್ತಿಗಳನ್ನು ಮತ್ತು ವಸ್ತುಗಳನ್ನು ಗುರುತಿಸುತ್ತಾ, ನುಡಿಯನ್ನು ಕಲಿಯತೊಡಗುತ್ತದೆ ನುಡಿಯ ಮೂಲಕ ಸಿಹಿ-ಕಹಿ, ಬೇಕು-ಬೇಡ, ಇಷ್ಟಾನಿಷ್ಟ, ನೋವು-ನಲಿವು, ಬಿಸಿ-ತಂಡಿ ಮುಂತಾದವುಗಳನ್ನು ತಾನಾಗಿ ಅರಿತು ಬೌದ್ಧಿಕವಾಗಿ ಬೆಳೆಯತೊಡಗುತ್ತದೆ. ನುಡಿಕಲಿಕೆಯ ಪ್ರಾಥಮಿಕ ಹಂತದಿಂದ ಶಾಲಾ ಹಂತಕ್ಕೆ ಬಂದಾಗಲೂ ಕೂಡ ಅದು ತನಗೊದಗಿದ ಪ್ರಪ್ರಥಮ ನುಡಿಯಲ್ಲೇ ಯೋಚಿಸುತ್ತದೆ ಹಾಗೂ ಎದುರಾದ ವ್ಯಕ್ತಿಯೊಂದಿಗೆ ಸಂಭಾಷಿಸಲಾರಂಭಿಸುತ್ತದೆ. ಪ್ರಾಥಮಿಕ ಚಿಂತನಾ ನುಡಿಯನ್ನೇ ಮೂಲನುಡಿ, ಬೇರುನುಡಿ ಅಥವಾ ತಾಯ್ನುಡಿ ಎನ್ನುತ್ತೇವೆ.

ಒಂದು ಬುನಾದಿಯಲ್ಲಿ ನಾವು ಚಿಂತಿಸಿದಾಗ ಯಾರಾದರೂ ತಮ್ಮ ತಾಯ್ನುಡಿಯಲ್ಲಿ ಮಾತಾಡೋದಿಲ್ಲ ಎಂದರೆ ಅವರು ತಮ್ಮ ಅಸ್ತಿತ್ವದ ಬೇರುಗಳನ್ನು ಕಡಿದುಕೊಳ್ಳುತ್ತಿದ್ದಾರೆಂದು ತಿಳಿಯಬೇಕಾಗುತ್ತದೆ. ಏಕೆಂದರೆ ನಮ್ಮ ಅನಿಸಿಕೆ, ನೋವು ನಲಿವು, ಪ್ರೀತಿ ಮಮತೆ ಇತ್ಯಾದಿಗಳನ್ನು ನಾವು ಆಂತರ್ಯದಿಂದ ಅಭಿವ್ಯಕ್ತಿಸಬೇಕಾದಲ್ಲಿ ಹೃದಯದ ಮಾತೇ ಮುಖ್ಯವಾಗುತ್ತದೆ ಹೊರತು ಇತರೆಲ್ಲ ಮಾತುಗಳು ಶುಷ್ಕವಾದ ಅಭಿನಯವಾಗುತ್ತದಷ್ಟೆ. ಆದರೂ ಕೆಲವರು ತಮ್ಮ ತಾಯ್ನುಡಿಗಿಂತಲೂ ತಾವು ವ್ಯವಹರಿಸುವ ನುಡಿಯಲ್ಲೇ ತಾದಾತ್ಮ್ಯ ಗಳಿಸಿಕೊಂಡು ಅದನ್ನೇ ತಮ್ಮ ಹೃದಯಕ್ಕೆ ಹತ್ತಿರಾಗಿಸಿಕೊಂಡಿರುತ್ತಾರೆ. ಅಯ್ಯಂಗಾರ, ತಿಗುಳ, ಸಂಕೇತಿ ಮುಂತಾದ ಜನಾಂಗದವರು ತಮ್ಮ ಮೂಲನುಡಿಗಿಂತಲೂ ಕನ್ನಡದಲ್ಲೇ ತಾದಾತ್ಯ ಹೊಂದಿರುವುದನ್ನು ಕಂಡಿದ್ದೇವೆ. ಇನ್ನು ಕೆಲವರು ತಾಯ್ನಾಡಿನಿಂದ ಹೊರಗೆ ನೆಲೆಗೊಂಡು ಅಲ್ಲಿನವರನ್ನೇ ಮದುವೆಯಾಗಿ ಅಲ್ಲಿನ ನುಡಿಯನ್ನೇ ತಮ್ಮ ನುಡಿಯನ್ನಾಗಿ ಅಳವಡಿಸಿಕೊಂಡಿರುವುದನ್ನೂ ಕಂಡಿದ್ದೇವೆ.


ಎಷ್ಟೇ ನುಡಿಗಳನ್ನು ರೂಢಿಸಿಕೊಂಡು ಎಷ್ಟೇ ನಿರರ್ಗಳವಾಗಿ ಮಾತನಾಡಿದರೂ ಮನುಷ್ಯನ ಸುಷುಪ್ತಿಯ ನುಡಿಯೇ ಬೇರೆಯಾಗಿರುತ್ತದೆ. ಅದು ಅಂತರಾತ್ಮಕ್ಕಷ್ಟೇ ಗೊತ್ತು. ಅದೇ ಮನುಷ್ಯನನ್ನು ನಿರಂತರ ಮುನ್ನಡೆಸುತ್ತದೆ. ನುಡಿಗೆ ಧ್ವನಿಯಿಲ್ಲ, ಲಿಪಿಯಿಲ್ಲ, ವ್ಯಾಕರಣವಂತೂ ಇಲ್ಲವೇ ಇಲ್ಲ. ಕಿವುಡ ಮೂಕರಿಗೂ ನುಡಿ ಗೊತ್ತು. ಆತ್ಮವಿದ್ದವರೆಲ್ಲ ನುಡಿಗೆ ಸ್ಪಂದಿಸುತ್ತಾರೆ.

            ನುಡಿಯ ಬಗೆಗಿನ ಅಭಿಮಾನದ ವಿಷಯದಲ್ಲಿ ಬಂಗಾಳಿಗಳು ವಿಶ್ವಕ್ಕೇ ಮಾದರಿಯಾಗಿದ್ದಾರೆ. ೧೯೪೮ರ ಮಾರ್ಚ್ ೨೨ ರಂದು ಪಾಕಿಸ್ತಾನದ ಪ್ರಧಾನಿಯಾಗಿದ್ದ ಮಹಮದಾಲಿ ಜಿನ್ನಾ ಅವರು ತಮ್ಮ ದೇಶದ ಅಧಿಕೃತ ನುಡಿ ಉರ್ದು ಎಂದು ಘೋಷಿಸಿದರು. ಪಡುವಣ ಪಾಕಿಗಳಿಗೆ ಅದು ಒಪ್ಪಿಗೆಯಾಯಿತಾದರೂ ಮೂಡಣ ಪಾಕಿಸ್ತಾನದ ಪ್ರಜೆಗಳಿಗೆ ಆದೇಶ ಪಥ್ಯವಾಗಲಿಲ್ಲ. ಎಷ್ಟಾದರೂ ಅವರು ಬಂಗಾಲದ ಬೇರಿನಿಂದ ಬೇರೆಯಾದವರಲ್ಲವೇ? ತಮ್ಮ ತಾಯ್ನುಡಿಯ ಉಳಿವಿಗಾಗಿ ಅವರು ಹೋರಾಡಿದರು. ಅದು ಉಗ್ರಸ್ವರೂಪ ತಾಳಿ ಕರ್ಫ್ಯೂ ಗೋಲಿಬಾರುಗಳಾಗಿ ಪೆಬ್ರವರಿ ೨೧ರಂದು ಮೂರು ವಿದ್ಯಾರ್ಥಿಗಳು ಬಲಿದಾನವಾದರು. ತಕ್ಷಣವೇ ವಿಶ್ವಸಂಸ್ಥೆಯು ಮಧ್ಯಪ್ರವೇಶಿಸಿ ಯಾವುದೇ ಮನುಷ್ಯನು ತನ್ನದೇ ನುಡಿಯನ್ನಾಡಲು ಮತ್ತು ಅದನ್ನು ಜತನದಿಂದ ಕಾಪಾಡಿಕೊಂಡು ಬರಲು ಹಕ್ಕುಳ್ಳವನಾಗಿದ್ದಾನೆಂದು ಸಾರಿತು. ಅಂದಿನಿಂದ ಫೆಬ್ರವರಿ ೨೧ಅನ್ನು ವಿಶ್ವ ಮಾತೃಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಅಂದು ಜಿನ್ನಾ ಮಾಡಿದ ಅದೇ ತಪ್ಪನ್ನು ಇಂದು ನಮ್ಮ ಭಾರತಸರ್ಕಾರ ಮಾಡುತ್ತಿರುವುದು ನಮ್ಮ ಕರ್ಮ. ಇಂದು ಕೇಂದ್ರ ಸರ್ಕಾರದ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ, ಉದ್ದಿಮೆಗಳಲ್ಲಿ ಹಿಂದೀ ಪ್ರಚಾರಕ್ಕೆಂದು ಕೋಟ್ಯಂತರ ರೂಪಾಯಿಗಳನ್ನು ವ್ಯಯಮಾಡಲಾಗುತ್ತಿದೆ. ಉತ್ತರ ಭಾರತದ ಹಿಂದೀ ತಾಯ್ನುಡಿಯವರಿಗೆ ಅನುಕೂಲ ಮಾಡಿಕೊಡಲು ಅವರು ನಮಗೆಲ್ಲ ಹಿಂದೀ ಕಲಿಸಿ ಅವರೊಂದಿಗೆ ಸ್ಪರ್ಧಿಸಲು ತಯಾರು ಮಾಡುತ್ತಿದ್ದಾರೆ. ಇಂದಿನ ಪ್ರೋತ್ನಾಹಧನಕ್ಕೆ ಆಸೆಬಿದ್ದು ಹಿಂದೀ ಕಲಿಯುವ ನಾವು ಮುಂದೆ ನಮ್ಮ ಪೀಳಿಗೆಯವರು ಉತ್ತರಭಾರತದವರ ದಬ್ಬಾಳಿಕೆಯಡಿ ನಲುಗುವಂತೆ ವೇದಿಕೆ ರೂಪಿಸುತ್ತಿದ್ದೇವೆ.

ಹಿಂದೀ ಎಂಬುದು ರಾಷ್ಟ್ರಭಾಷೆ ಎಂಬ ವಾದವನ್ನು ಕೆಲ ಮುಟ್ಠಾಳರು ಮುಂದಿಡುತ್ತಿದ್ದಾರೆ. ರಾಷ್ಟಭಾಷೆಗೂ ರಾಜಭಾಷೆಗೂ ವ್ಯತ್ಯಾಸವಿದೆ. ಇಂಡಿಯಾದಲ್ಲಿ ಕನ್ನಡವೂ ಸೇರಿದಂತೆ ಹದಿನೈದು ರಾಷ್ಟ್ರಭಾಷೆಗಳಿವೆ. ಬೇಕಿದ್ದರೆ ನಿಮ್ಮ ಜೇಬಿನಲ್ಲಿರುವ ಕರೆನ್ಸಿನೋಟನ್ನು ತೆರೆದು ನೋಡಿ. ಇನ್ನು ರಾಜಭಾಷೆ ಎಂದರೆ ಅಧಿಕೃತ ಭಾಷೆ ಎಂದರ್ಥ. ಹಿಂದೀಯ ಜೊತೆಜೊತೆಗೇ ಇಂಗ್ಲಿಷು ಸಹ ನಮ್ಮ ದೇಶದ ಅಧಿಕೃತ ಭಾಷೆಯಾಗಿದೆ. ಇಂದು ಜಗತ್ತಿನಾದ್ಯಂತದ ವ್ಯವಹಾರಕ್ಕಾಗಿ ನಾವು ಇಂಗ್ಲಿಷು ಕಲಿಯುವುದರಿಂದ ನಮ್ಮ ದೇಶದ ಅಧಿಕೃತ ನುಡಿಯಾಗಿ ಇಂಗ್ಲಿಷೇ ಮುಂದುವರಿದರೆ ನಮಗೆ ಅನುಕೂಲವಾಗಿರುತ್ತದೆ. ಆದರೆ ಹಿಂದೀ ಮಾತ್ರವೇ ರಾಜಭಾಷೆ ಎಂದಾಗ ಹಿಂದೀಯವರ ಕೈ ಮೇಲಾಗುತ್ತದೆ. ಅವರಿಗೆ ಇಂಗ್ಲಿಷು ಬೇಕಾಗದು, ಕನ್ನಡವಂತೂ ಬೇಡವೇ ಬೇಡ. ಹೀಗೆ ಬಹುಸಂಖ್ಯಾತ ಉತ್ತರಭಾರತೀಯರ ನಡುವೆ ನಮಗೆ ಅನ್ಯಾಯವಾಗುವುದು ಖಚಿತ. ಅನ್ಯಾಯ ಈಗಾಗಲೇ ಆಗುತ್ತಿದೆ. ಇಂದು ಬ್ಯಾಂಕುಗಳು, ಕೇಂದ್ರಸರ್ಕಾರದ ಕಚೇರಿಗಳು, ಎಚ್ಎಎಲ್ ನಂತಹ ಕಾರ್ಖಾನೆಗಳಲ್ಲಿ ಬಹುಪಾಲಿನ ಅಧಿಕಾರಿಗಳು ಹಿಂದೀ ಭಾಷಿಕರೇ ಆಗಿದ್ದಾರೆ. ಅವರಿಗೆ ಭಾರತದ ಇತರ ಯಾವ ನುಡಿಗಳೂ ಗೊತ್ತಿಲ್ಲ ಮಾತ್ರವಲ್ಲ ಇಂಗ್ಸಿಷೂ ಅಷ್ಟಕ್ಕಷ್ಟೇ. ಅವರೊಂದಿಗೆ ಸೆಣಸಲು ನಾವು ಕನ್ನಡ ಮತ್ತು ಇಂಗ್ಲಿಷು ಎರಡನ್ನೂ ಬಲಿಗೊಡಬೇಕಾಗಿದೆ.