ಶನಿವಾರ, ನವೆಂಬರ್ 1, 2008

ಒರಿಸ್ಸಾ ಮತ್ತು ಮತಾಂತರ

ಒರಿಸ್ಸಾದ ಆದಿವಾಸಿ ಜನ ಹಿಂದೂಗಳೂ ಅಲ್ಲ ಕ್ರೈಸ್ತರೂ ಅಲ್ಲ. ಅವರೆಲ್ಲ ಪ್ರಕೃತಿಪೂಜಕರು. ರಾಮನಾಗಲೀ ಕ್ರಿಸ್ತನಾಗಲೀ ಯಾರೆಂದು ಅವರಿಗೆ ತಿಳಿಯದು. ಬೆಟ್ಟಗುಡ್ಡಗಳೇ ಅವರ ಮನೆ. ಅರಣ್ಯವೇ ಅವರ ದೇವರು. ಅರಣ್ಯದಲ್ಲಿ ಸಿಗುವ ಯಾವುದೋ ಮರದ ಬೇರು, ಅದರಿಂದೊಸರುವ ನೀರು, ಗೆಡ್ಡೆಗೆಣಸುಗಳು, ಯಾವುದೋ ಮರದ ಎಲೆ, ಅಪರೂಪಕ್ಕೆ ಸಿಗುವ ಮೊಲ ಮುಂಗುಸಿ ಮುಂತಾದ ಪ್ರಾಣಿಗಳು, ಕಾಡ ಹಕ್ಕಿಗಳು ಕೋಳಿಗಳು ಇವೇ ಅವರ ಆಹಾರ. ಆರು ತಿಂಗಳು ಒಂದೇ ಸಮನೆ ಮಳೆ ಸುರಿದರೂ ಎಲ್ಲ ಇಂಗಿಹೋಗುವ ಹಾಗೂ ಮತ್ತಾರು ತಿಂಗಳ ಬಿಸಿಲ ಬೇಗೆಗೆ ಎಲ್ಲ ಒಣಗಿ ಮರುಭೂಮಿಯಂತಾಗುವ ನೆಲ, ಇಲ್ಲಿ ಜೀವನ ನಡೆಸುವುದೇ ಪ್ರತಿನಿತ್ಯದ ಗೋಳಾಗಿರುವಾಗ ದೇವರುದಿಂಡರಿಗೆ ಎಲ್ಲಿ ಸಮಯ? ಎಲ್ಲೋ ಕೆಲವರು ಕಣಿವೆಗಳ ಕೆಸರು ಭೂಮಿಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರೆ. ಅಲ್ಲಲ್ಲಿ ವಾರಕ್ಕೊಮ್ಮೆ ನಡೆವ ಸಂತೆಗಳಲ್ಲಿ ಈ ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳಿಗಾಗಿ ವಿನಿಮಯಿಸಿಕೊಳ್ಳುತ್ತಾರೆ.
ಸಂತಾಲಿ ಎಂಬ ಸಂಪರ್ಕ ಭಾಷೆಯೊಂದನ್ನು ಹೊರತುಪಡಿಸಿದರೆ ಅವರ ಭಾಷೆಗಳೂ ವೇಷಭೂಷಣಗಳೂ ವೈವಿಧ್ಯಮಯ. ಹೆಚ್ಚಿನವರು ಲಂಗೋಟಿ ಬಿಟ್ಟರೆ ಬೇರೇನೂ ಧರಿಸುವುದಿಲ್ಲ. ಹೆಂಗಸರು ಮಾತ್ರ ಸೀರೆಯನ್ನು ಅದರ ಮಾಮೂಲಿ ಶೈಲಿಯಲ್ಲಿ ಉಡದೆ ಒಂದು ಸುತ್ತು ತಂದು ಭುಜದ ಹತ್ತಿರ ಗಂಟು ಹಾಕ್ಕೊಂಡಿರುತ್ತಾರೆ. ರವಿಕೆ ಇರೋದಿಲ್ಲ ಆದರೆ ಲಂಗೋಟಿ ಇರುತ್ತೆ. ಕೂದಲನ್ನು ಕೊಂಡೆ ಸುತ್ತಿ ಪಕ್ಕಕ್ಕೆ ವಾಲಿಬಿಟ್ಟಿರುತ್ತಾರೆ. ಮೂವತ್ತು ವರ್ಷಗಳ ಹಿಂದೆ ಸಿನಿಮಾ ಮೂಲಕ ಈ ಹೇರ್‍ ಸ್ಟೈಲ್ ಎಲ್ಲೆಡೆ ಹಬ್ಬಿತ್ತು. ಒರಿಸ್ಸಾ, ಮಹಾರಾಷ್ಟ್ರ, ಆಂಧ್ರ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳಲ್ಲಿ ಹರಡಿರುವ ಇವರಿಗೆ ಯಾವುದೇ ಗಡಿಗಳಿಲ್ಲ.ಹಸಿವು ನೀಗಿಕೊಳ್ಳಲು ಎಲ್ಲೆಂದರಲ್ಲಿಗೆ ಸ್ಥಳ ಬದಲಾಯಿಸುತ್ತಾರೆ, ಏನೂ ಸಿಕ್ಕದಾದಾಗ ತಮ್ಮದೇ ಹಸುಗಳನ್ನು ಕೊಂದು ತಿನ್ನುತ್ತಾರೆ. ಹೀಗಿದ್ದರೂ ಹಸಿವಿನಿಂದ ಸಾಯುವವರೇನೂ ಕಮ್ಮಿಯಿಲ್ಲ.
ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು ಎನ್ನುವ ಧ್ಯೇಯವುಳ್ಳ ಕ್ರೈಸ್ತ ಸಂಸ್ಥೆಗಳು ಇವರಿಗೆ ಬದುಕುವ ರೀತಿಯನ್ನು ಕಲಿಸುತ್ತಿವೆ, ಆರೋಗ್ಯ ನೀಡುತ್ತಿವೆ, ಅಕ್ಷರ ಕಲಿಸುತ್ತಿವೆ, ಹೆಣ್ಣುಮಕ್ಕಳು ಕಿರಿಯವಯಸ್ಸಿನಲ್ಲಿ ತಾಯಿಯರಾಗದಂತೆ ನೋಡುತ್ತಿವೆ. ಎಲ್ಲಕ್ಕೂ ಮೊದಲು ಬಟ್ಟೆ ತೊಡುವುದನ್ನು ಹೇಳಿಕೊಟ್ಟಿವೆ. ಆದರೆ ಉದ್ಯೋಗ ನಿಮಿತ್ತ ಇಲ್ಲಿ ನೆಲೆನಿಂತ ಒರಿಸ್ಸಾದ ಪೂರ್ವಭಾಗದ ನಾಗರಿಕ ಜನ ಈ ಆದಿವಾಸಿಗಳನ್ನು ನಿಕೃಷ್ಟವಾಗಿ ಕಾಣುತ್ತಾರೆ. ಸೌದೆ ಹುಣಿಸೇಹಣ್ಣು ಜೇನು ಪುನುಗು ಇತ್ಯಾದಿಗಳನ್ನು ಕೊಟ್ಟು ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುವ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಒಂಥರಾ ಇರುಸುಮುರುಸಾಗುತ್ತದೆ. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿಗಳ ಕಗ್ಗೊಲೆಯಾಯಿತು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು, ಆದರೆ ನೋಡಿ ಎಲ್ಲೂ ಈ ಕ್ರೈಸ್ತರು ತಮ್ಮ ಬಿಲ್ಲುಬಾಣ ಭರ್ಜಿಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ.

ಮೈಲಾರಲಿಂಗ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನು ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ, ಮಲ್ಲಣ್ಣ, ಮಲ್ಲಯ್ಯ ಎಂದು ಕರೆದ ಉದಾಹರಣೆಯಿಲ್ಲ. ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.

ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.

ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.

ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.

ಬೀದರಿಗೆ ಹೋಗಿದ್ದಾಗ ಹಲಬರ್ಗಾ ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿಗೊಂಡೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲಾರ ಅನ್ನೋ ಊರು ಇರಾಂಗಿಲ್ರೀ, ಅಲ್ಲಿಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.

ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.

ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೆ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.

ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.

ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.

ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು.

ನನ್ನ ಸ್ನೇಹಿತರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಇಲ್ಲಿ ಧಾಖಲಿಸುತ್ತೇನೆ. ”ಬಳ್ಳಾರಿ ಜಿಲ್ಲಾ ಸನೇಕಿನ ಆಂಧ್ರಪ್ರದೇಶದ ಗಡಿಯೊಳಗಿನ ಒಂದ ಹಳ್ಯಾನ ಮಂದಿ ಮಗ್ಗಲಕಿನ ಹಳ್ಯಾನ ಮಂದಿ ಜೋಡಿ ಬಡಗಿ ತಗೊಂಡ ಬಡದಾಡ್ತಾರ. ಒಂದ ಹಳ್ಯಾನ ದೈವ ಗುಡ್ಡದ ಮಲ್ಲಯ್ಯ ಅದ . . ಮೈಲಾರಲಿಂಗ. ಇನ್ನೊಂದ ಹಳ್ಯಾನ ಮಂದಿ ಅದನ್ನು ತಮ್ಮ ಹಳ್ಳಿಗೆ ತಗೊಂಡ ಹೋಗಾಕ ಬರ್ತಾರ. ದೈವ ಇರೂ ಹಳ್ಯಾನ ಮಂದಿ ಜಗಳಕ್ಕ ನಿಲ್ತಾರ. ದರ ವರ್ಸಾ ದಸರಾಕ್ಕ ಇದೂ ನಡಿಯೂದ. ತಲಿ ಒಡಕೋತಾರ. ಪಟ್ಟಿ ಕಟಗೊಂಡ ಮತ್ತ ಬರ್ತಾರ ಬೆಳತನ್ಕ ಜಗಳಕ್ಕ ನಿಲ್ತಾರ, ದೇವರ ಹೊಳ್ಳಿ ಬಂದ ಕೂಡ್ಲೆ ಬಡದಾಟ ಮುಗೀತದ. ಎರಡೂ ಹಳ್ಳಿ ಮಂದಿ ಸೇರಿ ಹಬ್ಬಾ ಮಾಡ್ತಾರ.”

ಅಂಗುಲಹುಳು

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.
ಪಶ್ಚಿಮದ ದೇಶದಲ್ಲಿ ’ಅಂಗುಲದಹುಳು" ಎಂಬ ಕೀಟವಿದೆಯಂತೆ. ಉದ್ದನೆಯ ಕಾಲುಗಳಲ್ಲಿ ಅದು ನಡೆದಾಡುವಾಗ ಅದರ ಪ್ರತಿಯೊಂದು ಹೆಜ್ಜೆಯ ಅಂತರ ಒಂದು ಅಂಗುಲ ಇರುತ್ತದೆಯಂತೆ. ಕರಾರುವಾಕ್ಕಾದ ಆ ಅಳತೆಯನ್ನೇ ಮುಂದೆ ಅಳತೆ ಪಟ್ಟಿ ಮಾಡುವಾಗ ಮಾನಕವಾಗಿ ತೆಗೆದುಕೊಂಡರಂತೆ. ಅಲ್ಲದೆ ತಾವು ಹೋದಲ್ಲೆಲ್ಲ ತಮ್ಮ ಅಳತೆಯೇ ಶ್ರೇಷ್ಠ ಹಾಗೂ ಸರ್ವಮಾನ್ಯ ಎಂದು ವಾದಿಸತೊಡಗಿದರಂತೆ.
ಆಫ್ರಿಕಾದ ಆನೆಗಳು ಆ ಹುಳುವನ್ನು ರಾಜಮರ್ಯಾದೆಯೊಂದಿಗೆ ಕರೆಸಿಕೊಂಡು ತಮ್ಮ ದಂತಗಳ ಉದ್ದವನ್ನು ಅಳತೆ ಮಾಡಿಸಿಕೊಂಡವು. ಅಮೆರಿಕದ ಮೊಸಳೆಗಳು ಬಾಯ್ದೆರೆದು ತಮ್ಮ ಹಲ್ಲುಗಳ ಮೊನಚನ್ನು ಜಗತ್ತಿಗೆ ಸಾರಿಕೊಂಡವು. ಯೂರೋಪಿನ ಹುಂಜಗಳು ತಮ್ಮ ರೆಕ್ಕೆಗರಿಯ ಥಳುಕನ್ನು ಲೆಕ್ಕ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗಿದವು. ನಮ್ಮ ದೇಶಕ್ಕೂ ಆ ಹುಳ ಬಂದು ಹಿಮಾಲಯವನ್ನು ಹತ್ತಿಳಿದು ಉನ್ನತ ಶಿಖರದ ಎತ್ತರ ಇಂತಿಷ್ಟೇ ಎಂದು ತಿಳಿಹೇಳಿತು.
ಕೆಲವರು ತಮ್ಮ ಬಾಯಗಲವನ್ನು ಕೆಲವರು ತಮ್ಮ ನೋಟಶಕ್ತಿಯನ್ನು ಅಳತೆ ಮಾಡಿಸಿಕೊಂಡರು. ಕನ್ನಡದಲ್ಲೇನಿದೆ ಅನ್ತ ಯಾರೋ ಕೇಳ್ತಿದ್ರಲ್ಲ, ಆ ಹುಳು ಇತ್ತ ತಿರುಗಿತು. ಅಷ್ಟರಲ್ಲಾಗಲೇ ಮಲ್ಲಿಗೆಯ ಸುವಾಸನೆಗೆ ಅದರ ತಲೆ ತಿರುಗತೊಡಗಿತ್ತು. ಮಾವಿನ ಮರದಲ್ಲಿ ಕೋಗಿಲೆಯ ಇಂಚರ "ಕುಹೂ" ಎಂದಿತು. “ಕೋಗಿಲೆಯ ಸ್ವರವನ್ನೇ ಮೊದಲು ಅಳೆಯೋಣ, ಆ ನಂತರ ಮಿಕ್ಕಿದ್ದು" ಎಂದ ಆ ಹುಳು ಅದನ್ನು ಅಳೆಯತೊಡಗಿತು. ರಾಗಗಾನಮಾಧುರ್ಯದ ಆ ಪಂಚಮಸ್ವರವಲ್ಲರಿಯನ್ನು ಆ ಹುಳು ಇನ್ನೂ ಅಳೆಯುತ್ತಲೇ ಇದೆ, ಆದರೆ ಆ ಸುಮಧುರ ಕಂಠದ ಉದ್ದಗಲಗಳ ನಿಲುವನ್ನು ಅದು ಮುಟ್ಟಲಾಗಿಲ್ಲ.. ಇನ್ನು ಕನ್ನಡ ವಾಗ್ದೇವಿಯ ಭಂಡಾರದ ಸಿರಿ, ಪ್ರಾಕೃತಿಕ ಸಂಪತ್ತು, ಜನಮಾನಸದ ಔನ್ನತ್ಯ ಇವೆಲ್ಲ ಇನ್ನೂ ನಿಲುಕಲಾರದವು ಅಲ್ಲವೇ?