ಶುಕ್ರವಾರ, ಸೆಪ್ಟೆಂಬರ್ 23, 2011

ಅಪೂರ್ವ ತಿರುವು


“ಕತ್ತಲೆಯನಳಿದು ಬೆಳಕ ಚಿತ್ತಾರವ ಬರೆಯೆ
ಮತ್ತಾಯನರಮನೆಗೆ ಯೇಸು ಬಂದ”
ಅಂದು ಮತ್ತಾಯನು ಸುಂಕದಕಟ್ಟೆಯ ತನ್ನ ಕಚೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದ. ಅವನಿಗೆ ಯೇಸು ಯಾರೆಂದು ತಿಳಿದಿತ್ತೋ ಇಲ್ಲವೋ? ಅಥವಾ ಯೇಸುವಿನೆಡೆಗೆ ಅವನ ಮನ ಒಳಗೊಳಗೇ ತುಡಿದಿತ್ತೋ ಏನೋ? ಅದೆಲ್ಲ ಏನೇ ಇರಲಿ, ಆ ದಿನವಂತೂ ಒಂದು ಮಹತ್ತರ ದಿನ. ಯೇಸು ಆ ದಾರಿಯಲ್ಲಿ ನಡೆಯುತ್ತಿದ್ದವನು ಮತ್ತಾಯನೆಡೆಗೆ ನೋಡಿ ’ನನ್ನನ್ನು ಹಿಂಬಾಲಿಸು’ ಎಂದ. ಆಕ್ಷಣವೇ ಮತ್ತಾಯ ಮರುಮಾತಾಡದೇ ತನ್ನ ಜೀವನದ ಒಂದು ಮಹತ್ವದ ನಿರ್ಧಾರ ತಳೆದು ಕಚೇರಿಯನ್ನು ತೊರೆದು ಬಂದ. ಅದೊಂದು ’ಅಪೂರ್ವ ತಿರುವು’.
ಯೇಸು ಒಮ್ಮೆ ಗಲಿಲೇಯ ಸರೋವರದ ದಡದ ಗುಂಟ ನಡೆದಿದ್ದ. ಅಲ್ಲಿ ಸಿಮೋನ ಮತ್ತು ಅಂದ್ರೆಯ ಎಂಬ ಬೆಸ್ತರು ಬಲೆ ಹೆಣೆಯುತ್ತಿದ್ದರು. ಯೇಸು ಅವರತ್ತ ತಿರುಗಿ ನನ್ನೊಂದಿಗೆ ಬನ್ನಿ ಎಂದಾಗ (ಮತ್ತಾಯ ೪:೧೮-೨೦) ಅವರು ಬಲೆಯನ್ನು ಅಲ್ಲೇ ಬಿಸುಟು ಯೇಸುವಿನ ಹಿಂದೆ ಹೋದವರು ಮತ್ತೆ ತಿರುಗಿ ನೋಡಲಿಲ್ಲ. ಯೇಸು ಮುಂದೆ ಹೋಗುತ್ತಿದ್ದಾಗ ತಮ್ಮ ತಂದೆಯೊಂದಿಗೆ ದೋಣಿಯಲ್ಲಿದ್ದ ಜೇಮ್ಸ್ ಮತ್ತು ಜಾನರನ್ನು ಕಂಡು ಅವರಿಗೂ ನನ್ನೊಂದಿಗೆ ಬನ್ನಿರೆಂದ. (ಮತ್ತಾಯ ೪:೨೧-೨೨) ಅವರು ಮರುಮಾತಾಡದೆ ತಮ್ಮ ತಂದೆಯ ಕಡೆಗೂ ನೋಡದೆ ಯೇಸುವನ್ನು ಹಿಂಬಾಲಿಸಿದರು. ಇವೆಲ್ಲ ಮತ್ತಾಯನೇ ದಾಖಲಿಸಿದ ಆಖ್ಯಾಯಿಕೆಗಳು. ಬಹುಶಃ ಯೇಸುವಿನ ಕರೆಯೋಲೆಗೆ ತನ್ನ ಪ್ರತಿಕ್ರಿಯೆಯ ಸ್ವರೂಪವನ್ನು ಸ್ಪಷ್ಟಗೊಳಿಸುವ ಪ್ರಕ್ರಿಯೆಯಾಗಿ ಈ ಘಟನೆಗಳನ್ನು ಅವನು ಹೇಳುತ್ತಿದ್ದಾನೆನಿಸುತ್ತದೆ.
ಜಾನ್ ಹೆನ್ರಿ ನ್ಯೂಮನ್ ಎಂಬ ವ್ಯಕ್ತಿ ಇಂಗ್ಲೆಂಡಿನಲ್ಲಿ ಜೀವಿಸಿದ್ದಾತ, ಒಂದು ಕಾಲದಲ್ಲಿ ಕಥೋಲಿಕ ವಿರೋಧಿ, ಆಮೇಲೆ ಕಥೋಲಿಕ ಪಂಥಕ್ಕೆ ಒಲಿದು ಬಂದು ಕಾರ್ಡಿನಲ್ ಆಗಿ ಪುನೀತ ಪದವಿಯನ್ನು ಅಲಂಕರಿಸಿದ. ನ್ಯೂಮನ್ ಅವರು ಬ್ಯಾಂಕ್ ಕೆಲಸವನ್ನು ತೊರೆದು ಕ್ರೈಸ್ತಧರ್ಮಪ್ರಚಾರದತ್ತ ನಡೆದು ಸಂತನಾಗುವ ಹೊತ್ತಿಗೆ ಅವರ ಜೀವನದಲ್ಲಿ ಏನೆಲ್ಲ ತಿರುವುಗಳು! ಮಹಾತ್ಮ ಗಾಂಧಿಯವರು ಅವರು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಕಾನೂನು ಪದವಿಗಾಗಿ ಓದುತ್ತಿದ್ದಾಗ ನ್ಯೂಮನ್ ಬರೆದ Lead Kindly Light ಎಂಬ ಪದ್ಯವು ಅವರ ಮೇಲೆ ಬಹು ಪ್ರಭಾವ ಬೀರಿತ್ತು. ತಮ್ಮ ಜೀವಿತದ ಕೊನೆಯವರೆಗೂ ಗಾಂಧಿಯವರು ಕರುಣಾಳು ಬಾ ಬೆಳಕೆ ಎಂಬ ಆ ಹಾಡನ್ನು ಆಗಾಗ್ಗೆ ಮೆಲುಕು ಹಾಕುತ್ತಿದ್ದರಂತೆ. ಗಾಂಧಿಯವರು ದಕ್ಷಿಣ ಆಫ್ರಿಕೆಯಲ್ಲಿದ್ದಾಗ ರೈಲಿನ ಮೇಲ್ದರ್ಜೆಯ ಬೋಗಿಯಲ್ಲಿ ಒಮ್ಮೆ ಪಯಣಿಸುತ್ತಿದ್ದರು. ಆ ಬೋಗಿಯಲ್ಲಿದ್ದ ಬಿಳಿಯರು ಅವರನ್ನು ನೋಡಿ ಅಸಹನೆಯಿಂದ ಪೊಲೀಸು ಅಧಿಕಾರಿಯ ಮೂಲಕ ಅವರನ್ನು ಹೊರದೂಡುತ್ತಾರೆ. ಆ ಕ್ಷಣ ಗಾಂಧಿಯ ಜೀವನದಲ್ಲೊಂದು ಮಹತ್ತರ ತಿರುವು.