ಭಾನುವಾರ, ಡಿಸೆಂಬರ್ 26, 2010

ಕ್ರಿಸ್ಮಸ್ ರಾತ್ರಿ

ಕ್ರಿಸ್ಮಸ್ ಸಂದರ್ಭದ ಆ ಸಂಭ್ರಮವೇ ಅನುಪಮ. ಚಳಿಯ ಚುಮುಚುಮು ರಾತ್ರಿಯಲ್ಲಿನ ನಕ್ಷತ್ರಗಳ ಒಡ್ಡೋಲಗದಲ್ಲಿ ಇಬ್ಬನಿಯ ಮಸುಕಾದ ತೆರೆಯ ನಡುವೆ ಮೋಂಬತ್ತಿಗಳು ಜಗಮಗಿಸುತ್ತಿವೆ. ಜರತಾರಿ ರೇಷ್ಮೆಯ ಸರಪರ ಸದ್ದು ಕಿಲಕಿಲ ನಗುವಿನೊಂದಿಗೆ ಜುಗಲಬಂದಿ ಹಾಡುತ್ತಿದೆ. ನುಣುಪು ಹಸ್ತಗಳ ನಡುವೆ ಬೆಚ್ಚನೆಯ ಶುಭಾಶಯಗಳು ತವಕದಿಂದ ಕುಣಿಯುತ್ತಿವೆ. ಕುತ್ತಿಗೆಯ ಹಿಂಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣಗೆ ನಡುಕ ಹುಟ್ಟಿಸಿ ತನ್ನಿರುವನ್ನು ಪ್ರಕಟಪಡಿಸುವ ಆ ಚಳಿ ಮರುಕ್ಷಣವೇ ಮುದುಡಿಕೊಂಡು ಮೂಲೆ ಹಿಡಿಯುತ್ತಿದೆ. ನೂರಾರು ಕಂಠಗಳು ಚರ್ಚಿನ ಆ ಕಲ್ಲುಗೋಡೆಗಳ ನಡುವೆ ಕ್ಯಾರಲ್ಲುಗಳನ್ನು ಎದೆತುಂಬಿ ಹಾಡುತ್ತಿದ್ದರೆ ಆ ಬಿಸಿಯುಸಿರುಗಳ ಎದುರಲ್ಲಿ ಬೃಹತ್ ಬಾಗಿಲು ಕಿಟಕಿಗಳ ನಡುವಿನಿಂದ ತೂರಿಬರುವ ಹಿಮಗಾಳಿಯೂ ಸೋತು ಶರಣಾಗುತ್ತಿದೆ.
ನನ್ನ ಬಾಲ್ಯಕಾಲದಿಂದಲೂ ನೋಡುತ್ತಿದ್ದೇನೆ, ಅಲ್ಲ ಕೇಳುತ್ತಿದ್ದೇನೆ, ಕ್ರಿಸ್ಮಸ್ ಗೀತೆಗಳ ಆ ಸೊಬಗು ಆ ಸೊಗಡು ಆ ಸೌಂದರ್ಯ ನವನವೋನ್ಮೇಷಶಾಲಿನಿಯಾಗಿ ಚಿರಯೌವನೆಯಾಗಿಯೇ ಉಳಿದುಕೊಂಡಿದೆ. ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ, ಜನರೇ ಸಂತೋಷಿಸಿರಿ ಯೇಸುಬಾಲರು ಹುಟ್ಟಿದರು, ಭಗವಾನ್ ಕ್ರಿಸ್ತರು ಹುಟ್ಟಿದ ಸುದಿನ ಜಗದೊಳು ಮಹದಾನಂದದ ದಿನ, ಸುಂದರ ರಕ್ಷಕನೇ ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ, ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಂ ಗ್ರಾಮದಿ . . . ಹೀಗೆ ಈ ಕ್ರಿಸ್ಮಸ್ ಗೀತೆಗಳ ಸೊಗಸೇ ಅನನ್ಯ. ಅದರಲ್ಲಿ ಹೃದಯಗಳನ್ನು ಬೆಸೆಯುವ ಸುಮಧುರ ನಾದವಿದೆ, ಅನುಪಮ ಕಾಂತಿಯಿದೆ, ಪ್ರೀತಿಶಾಂತಿಯಿದೆ.
ಕ್ರಿಸ್ತಜಯಂತಿಗೆ ನಾಲ್ವತ್ತು ದಿನಗಳ ಮುಂಚಿನಿಂದಲೇ ಆಗಮನಕಾಲ ಶುರುವಾಗುತ್ತದೆ. ಕ್ರಿಸ್ತನನ್ನು ಎದುರುಗೊಳ್ಳುವ ನಿರೀಕ್ಷೆಯ ಈ ಕಾಲವೆಲ್ಲ ಸುಣ್ಣ ಬಣ್ಣ ಅಲಂಕಾರ, ಹೊಸಬಟ್ಟೆ ಖರೀದಿ, ಉಡುಗರೆಗಳ ಆಯ್ಕೆ, ಶುಭಾಶಯಪತ್ರಗಳ ಸಿದ್ಧತೆ, ಹಳೆಯ ಪಳೆಯ ವಸ್ತುಗಳ ವಸ್ತ್ರಗಳ ವಿಲೇವಾರಿ, ಕ್ಯಾರಲ್ಲುಗಳ ಗಾನ, ಕರ್ಚಿಕಾಯಿ ಕಜ್ಜಾಯ ಕಲ್ಕಲ್ಸ್ ಎಂಬ ವಿಶಿಷ್ಟ ತಿಂಡಿಗಳ ತಯಾರಿ, ಇವೆಲ್ಲವುಗಳ ಭರಾಟೆಯಲ್ಲಿ ಅತಿ ಶೀಘ್ರವಾಗಿ ಕಳೆಯುತ್ತದೆ. ಹೀಗೆ ಕ್ರಿಸ್‌ಮಸ್ಸು ನಿಜವಾಗಿಯೂ ಬಲು ನಿರೀಕ್ಷೆಯ ಹಬ್ಬವೇ ಸರಿ.
ಹಾಗೆ ನೋಡಿದರೆ ಈ ಕ್ರಿಸ್ಮಸ್ಸು ಮಕ್ಕಳ ಹಬ್ಬ ಎನ್ನಬಹುದೇನೋ? ಏಕೆಂದರೆ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ. ಅವರೆಷ್ಟು ಕುಣಿದು ಕುಪ್ಪಳಿಸಿದರೂ ಕೇಳುವವರಿಲ್ಲ. ಅವರಿಗೆ ಬೇಕೆನಿಸಿದ ಉಡುಗರೆ, ಬೇಕೆನಿಸಿದ ಬಟ್ಟೆಬರೆ, ತಿಂಡಿ ತಿನಿಸು, ಆಟೋಟ ಸುತ್ತಾಟ, ಸಂಭ್ರಮ ಸಡಗರ . . ನೋಡ್ತಾ ನೋಡ್ತಾ ಇದ್ರೆ ವಯಸ್ಕರೂ ಮಕ್ಕಳಲ್ಲಿ ಮಕ್ಕಳಾಗಿ ಬಿಡುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳ ಮನದಿಂಗಿತವನ್ನು ತಿಳಿದುಕೊಂಡು ಸಾಂಟಾಕ್ಲಾಸ್ ಎಂಬ ಕಾಲ್ಪನಿಕ ವ್ಯಕ್ತಿಯ ನೆವದಲ್ಲಿ ಇವರೇ ಉಡುಗರೆ ತಂದು ಮಕ್ಕಳ ಮನ ಗೆಲ್ಲುವುದು, ಆ ಮಕ್ಕಳು ಮುಂದೆ ದೊಡ್ಡವರಾಗಿ ಅವರ ಮಕ್ಕಳಿಗೆ ಈ ಪವಿತ್ರವಾದ ಗುಟ್ಟನ್ನು ಗುಟ್ಟಾಗಿಯೇ ದಾಟಿಸುವುದು ಇವೆಲ್ಲ ಕ್ರಿಸ್‌ಮಸ್ ಹಬ್ಬವು ದಯಪಾಲಿಸಿದ ಪ್ರೀತಿಯ ಕೊಡುಗೆಯೇ ಅಲ್ಲವೇ?
ಡಿಸೆಂಬರ್ ತಿಂಗಳಿನ ಇಪ್ಪತ್ನಾಲ್ಕನೇ ದಿನದ ಮೈ ನಡುಗಿಸುವ ಚಳಿಯಲ್ಲಿ ಅದೂ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮ ಗರಿಗೆದರುತ್ತದೆ. ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ ಇಪ್ಪತ್ನಾಲ್ಕರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಈ ಸಂದರ್ಭ ಅವರಿಗೆಲ್ಲ ಸುಗ್ಗಿಯ ಹಬ್ಬ ಮಾತ್ರವಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಪುರಾತನ ರೋಮನರು ಸೂರ್ಯನ ಜಾಗದಲ್ಲಿ ಯೇಸುಕ್ರಿಸ್ತನನ್ನು ಅಲಂಕರಿಸಿ ಕ್ರಿಸ್‌ಮಸ್ ಆಚರಣೆಗೆ ನಾಂದಿ ಹಾಡಿದರು. ಅದರಿಂದಲೇ ಕ್ರಿಸ್ಮಸ್ ದಿನದ ಹಿಂದಿನ ನಡುರಾತ್ರಿಯ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ.
ಅಂದಿನ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆಲ್ಲ ಎಲ್ಲೆಲ್ಲಿಂದ ಜನ ಬಂದು ಚರ್ಚಿನೊಳಗಡೆ ತಮ್ಮ ಜಾಗ ಹಿಡಿದುಕೊಳ್ಳುತ್ತಾರೆ. ಗಾನವೃಂದದವರು ಒಂದಾದ ಮೇಲೊಂದರಂತೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ಕ್ರಿಸ್ತನಿರೀಕ್ಷೆಗೆ ಹೊಳಪು ನೀಡುತ್ತಾರೆ. ಅವೆಲ್ಲ ಗೊತ್ತಿರುವ ಹಾಡುಗಳೇ. ಪ್ರತಿವರ್ಷ ಇದೇ ಸಮಯಕ್ಕೆ ನಾವು ಹಾಡಿದ್ದೇ ಅಲ್ಲವೇ? ಆದರೂ ಇಂದು ಅವು ಹೊಚ್ಚ ಹೊಸದರಂತೆ ನಿತ್ಯನಾವೀನ್ಯತೆಯಿಂದ ಕಂಗೊಳಿಸುತ್ತಿವೆ ಅಲ್ಲ ಇನಿದಾಗಿ ಕೇಳಿಸುತ್ತಿವೆ. ಆ ಹಾಡುಗಳಲ್ಲಿ ಅಪಾರ ಅರ್ಥವಿದೆ, ಅರ್ಥಕ್ಕೂ ಮಿಗಿಲಾದ ಸಂತಸವಿದೆ. ಹೃದಯವನರಳಿಸುವ ಮನ ಪ್ರಫುಲ್ಲಗೊಳಿಸುವ ತವಕವಿದೆ. 'ಬಂದಿಹುದು ಶುಭದಿನವು ತಂದಿಹುದು ಸಂತಸವ ಏನಾನಂದ ಏನಾನಂದ' ಎಂದು ಕೇಳಿಬರುವ ಆ ಗಾನವೃಂದದ ಮಕ್ಕಳ ಹಾಡು ನಮ್ಮ ಹೃದಯದ ಹಾಡಾಗಿ ಕುಣಿಯುತ್ತದೆ. ಚರ್ಚಿನೊಳಗಿನ ಎಲ್ಲರ ಎದೆಬಡಿತವೂ ಗಾನವೃಂದದ ರಾಗ ತಾನ ಪಲ್ಲವಿಗಳಿಗೆ ಮಿಡಿಯುತ್ತಾ ಭಕ್ತಿರಸದ ಹೊನಲಿನೊಂದಿಗೆ ತೃಪ್ತಿರಸದ ಸೊಬಗಿನಲ್ಲಿ ಮೀಯುತ್ತದೆ.
ಗಂಟೆ ಹನ್ನೆರಡಾಗುತ್ತಿದ್ದಂತೆ ಬಂಗಾರದ ಮೇಲುವಸ್ತ್ರ ಧರಿಸಿದ ಗುರುವರ್ಯರು ಶಿಶುಯೇಸುವಿನ ಸ್ವರೂಪವನ್ನು ಕರಗಳಲ್ಲಿ ಎತ್ತಿಹಿಡಿದು 'ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ' ಎಂಬ ದೂತಗಾನವನ್ನು ಮೇರುಸ್ವರದಲ್ಲಿ ಹಾಡುತ್ತಾರೆ. ಚರ್ಚಿನೊಳಗಣ ಭಕ್ತಾದಿಗಳೆಲ್ಲ ಆ ದನಿಗೆ ದನಿಗೂಡಿಸಿ ಎದೆ ತುಂಬಿ ಹಾಡುತ್ತಾ ದೈವ ಭಜನೆ ಮಾಡುತ್ತಾರೆ. ಅದರೊಂದಿಗೆ ಚರ್ಚಿನ ಎಲ್ಲ ದೀಪಗಳೂ ಜಗಮಗಿಸುತ್ತವೆ. ಎಲ್ಲ ಗಂಟೆಗಳೂ ತಾರಸ್ತಾಯಿಯಲ್ಲಿ ಮೊಳಗುತ್ತವೆ. ಸಂತೋಷದ ನಗೆಯ ಹೂವರಳಿ ಒಡೆದ ಮನಗಳು ಬೆಸೆಯುತ್ತವೆ, ವೈಮನಸ್ಯ ಮರೆತುಹೋಗುತ್ತದೆ, ಅಸಹನೆಯ ಉರಿ ಶಾಂತವಾಗುತ್ತದೆ, ಮುಖವಾಡಗಳು ಕಳಚಿಹೋಗುತ್ತವೆ. ಕೈಕುಲುಕುವಿಕೆಯ ಶುಭಾಶಯಗಳು ಹೃದಯದ ಮಾತಾಗುತ್ತವೆ. ದೇವಾಲಯದ ಗಂಟೆ ಇನ್ನೂ ಮೊಳಗುತ್ತಿರುವಂತೆ ಎಸ್ಸೆಮ್ಮೆಸ್ಸುಗಳು ಜಗದ ಉದ್ದಗಲಕ್ಕೂ ಸರಿದಾಡುತ್ತವೆ.
ಶಾಂತಿ ಪ್ರೀತಿ ದ್ಯೋತಕವಾದ ಕ್ರಿಸ್ಮಸ್ಸು ಮತ್ತೆ ಮತ್ತೆ ಬರುತಿರಲಿ, ಜಗದ ದ್ವೇಷವೆಲ್ಲ ತೊಡೆದು ಬಂದೂಕಿನ ಮೇಲೆ ಮಲ್ಲಿಗೆ 
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/Content/Dec232010/metrothurs20101222218939.asp

ಶುಕ್ರವಾರ, ಡಿಸೆಂಬರ್ 17, 2010

ಹಾರೋಬೆಲೆ ವ್ಯುತ್ಪತ್ತಿ

ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿ ದಂಡೆಯಲ್ಲಿರುವ ಹಾರೋಬೆಲೆ ಎಂಬ ಗ್ರಾಮವು ನೂರಕ್ಕೆ ನೂರು ಕನ್ನಡ ಮನೆಮಾತಿನ ಕ್ರೈಸ್ತರೇ ನೆಲೆಗೊಂಡಿರುವ ಪುರಾತನ ಊರು. ಈ ಹಾರೋಬೆಲೆ ಎಂಬ ಗ್ರಾಮನಾಮದ ವ್ಯುತ್ಪತ್ತಿಗೆ ತೊಡಗುವಾಗ ಸ್ವಾಮಿ ಅಂತಪ್ಪನವರು ಅದನ್ನು ಇಂಗ್ಲಿಷಿನ horrible ಪದದೊಂದಿಗೆ ತಳುಕು ಹಾಕವುದನ್ನು ಗಮನಿಸಿದ್ದೇವೆ. ಆದರೆ ಎರಡು ಶತಮಾನಗಳ ಮುನ್ನ ಇಂಗ್ಲಿಷರು ಇನ್ನೂ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಹಾರೋಬೆಲೆ ಗ್ರಾಮಕ್ಕೆ ಇತಾಲಿಯನ್ ಜೆಸ್ವಿತರ ಪ್ರವೇಶವಾಗಿತ್ತೆನ್ನುವುದನ್ನು ಗಮನಿಸಿರಿ.
ಅಂದು ರಸ್ತೆಗಳಿಲ್ಲದೆ ಗುಡ್ಡ ಬೆಟ್ಟ ಹೊಳೆ ಕಾಡುಗಳಿಂದ ಆವೃತವಾಗಿ ಹೊರಗಿನಿಂದ ದುರ್ಗಮವಾಗಿದ್ದ ಹಾರೋಬೆಲೆಯನ್ನು ಪ್ರವೇಶಿಸುವುದು ಸುಲಭಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಇತಾಲಿಯಾ ಭಾಷೆಯಲ್ಲಿ ಹಾರೋಬೆಲೆಗೆ ಹೋಗುವುದೆಂದರೆ ಅದು orribile ಅನುಭವ (ಭಯಂಕರ ಅನುಭವ) ಎಂಬುದಾಗಿ ಉದ್ಗರಿಸಿರಬೇಕು. ಇತಾಲಿಯಾದ orribile ಎಂಬ ಪದವು ಇಂಗ್ಲಿಷಿನ horrible ಎಂಬ ಪದಕ್ಕೆ ಸಂವಾದಿಯಾಗಿದೆ.
ಹೇಳಿಕೇಳಿ ಈ ಇತಾಲಿಯನ್ ಜೆಸ್ವಿತರು ಕನ್ನಡನಾಡಿಗೆ ಪ್ರವೇಶಿಸಿದ್ದು ೧೬೪೦ ರ ದಶಕದಲ್ಲಿ. ಅಂದರೆ ಕನ್ನಡದ ನುಡಿಗಟ್ಟಿನಲ್ಲಿ ’ಹ’ ಕಾರವು ಇನ್ನೂ ಸಾರ್ವತ್ರಿಕವಾಗಿರದೇ ಇದ್ದ ಕಾಲ. ಆದ್ದರಿಂದ ಹಾರೋಬೆಲೆ ಎಂಬ ಪದಾದಿಯಲ್ಲಿ ’ಹ’ ಕಾರವನ್ನು ಆರೋಪಿಸುವ ಬದಲು ಅಲ್ಲಿ ’ಅ’ ಕಾರವಿತ್ತೆನ್ನುವುದು ಸಮಂಜಸವೆನಿಸುತ್ತದೆ. ಅದು ಬಹುಶಃ ಆರುಬೆಲೆ ಅಥವಾ ಆರೋಬೆಲೆ ಇದ್ದಿರಬಹುದೆಂದು ನನ್ನ ಅನಿಸಿಕೆ. 
ಕನ್ನಡದ ಆಡುಮಾತಿನಲ್ಲಿ ಆರು ಎನ್ನುವುದನ್ನು ಉಳುಮೆ, ಕೃಷಿಗೆ ಸಮಾನಪದವಾಗಿ ಬಳಸಲಾಗುತ್ತದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಮೂಲನಿವಾಸಿಗಳು’ ’ಅ’ ಕಾರವನ್ನು’ಹ’ ಕಾರವನ್ನಾಗಿ ಉಚ್ಚರಿಸುವುದು ಸಹಜವಾದ್ದರಿಂದ ’ಆರೋಬೆಲೆ’ಯನ್ನು ಜನ ’ಹಾರೋಬೆಲೆ’ ಎಂದೇ ಕರೆದಿರಬಹುದು.
ಅಲ್ಲದೆ ’ಬೆಲೆ’ ಎಂಬುದು ’ಬೇಲಿ’ ಎಂಬುದರ ಸಂಕ್ಷಿಪ್ತರೂಪವಾಗಿದೆ. ನಮ್ಮಲ್ಲಿ ಮಂಚನಬೆಲೆ, ಸೂಲಿಬೆಲೆ, ಅತ್ತಿಬೆಲೆ ಮುಂತಾದ ಊರುಗಳಿರುವುದನ್ನು ಗಮನಿಸಿರಿ.
ಆಡುವ ಪದಗಳನ್ನು ಬರವಣಿಗೆಯಲ್ಲಿ ಮೂಡಿಸುವಾಗ ಜನ ಸ್ವಯಂ ಪ್ರೇರಣೆಯಿಂದ ಅವಕ್ಕೆ ಶಿಷ್ಟರೂಪವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಆಡುಮಾತಿನ ಮೂಲ ಆಶಯಕ್ಕೆ ವ್ಯತಿರಿಕ್ತವಾದ ಅರ್ಥ ಮೂಡುವ ಪದಗಳನ್ನು ಟಂಕಿಸಿರುತ್ತಾರೆ. ಉದಾಹರಣೆಗೆ ’ಕಾಡುಗೋಡಿ’ ಯನ್ನು ತೆಗೆದುಕೊಳ್ಳೋಣ. ಕೆರೆಯು ತುಂಬಿದಾಗ ಅದರ ಸುರಕ್ಷೆಯ ದೃಷ್ಟಿಯಿಂದ ಹೆಚ್ಚುವರಿ ನೀರು ಹರಿದುಹೋಗುವಂತೆ ಒಂದೆಡೆ ಒಡ್ಡು ತೆರೆದಿರುತ್ತಾರೆ. ಅದಕ್ಕೆ ಕೋಡಿ ಎನ್ನುತ್ತಾರೆ. ಆ ಕೋಡಿಯ ಮೂಲಕ ಹರಿವ ನೀರು ಹೊಳೆಯಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ, ಇರಲಿ. ಆ ಕೋಡಿಯು ಕಾಡಿನ ಅಂದರೆ ಸುಡುಗಾಡಿನ ಕಡೆಗಿದ್ದರೆ ಅದಕ್ಕೆ ಕಾಡುಗೋಡಿ (ಕಾಡು+ಕೋಡಿ=ಕಾಡುಗೋಡಿ, ಆಗಮಸಂಧಿ) ಎನ್ನುವುದು ಅತ್ಯಂತ ಸೂಕ್ತ. ಆದರೆ ಬರವಣಿಗೆಯ ಶಿಷ್ಟರು ಅದನ್ನು ಕಾಡುಗುಡಿ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಈ ಆರೋಬೆಲೆ ಅಥವಾ ಹಾರೋಬೆಲೆಯನ್ನು ಕೆಲವರು ಹಾರೋಬಲೆ ಎಂಬುದಾಗಿ ಬರೆಯುವುದನ್ನೂ ನೋಡುತ್ತಿದ್ದೇವೆ.

ಬಾಲ್ಯದ ನೆನಪು

ಅದು ಎಪ್ಪತ್ತರ ದಶಕ. ನಾನು ಮಾಧ್ಯಮಿಕ ಶಾಲಾದಿನಗಳ ರಜಾದ ಮಜಾದಲ್ಲಿದ್ದೆ. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯ ಗಂಟೆ ಗೋಪುರದ ಬಳಿಯೇ ನಮ್ಮ ಮನೆಯಿತ್ತು. ಬದಿಯಲ್ಲಿಯೇ ಇದ್ದ ಸಂತ ರಾಯಪ್ಪರ ಗುರುಮಠಕ್ಕೂ ಹೊಕ್ಕು ಬಳಕೆ ನಮಗೆ ಸಲೀಸಾಗಿತ್ತು. ನನ್ನ ಬಾಲ್ಯವೆಲ್ಲ ಕ್ರಿಸ್ತರಾಜರ ದೇವಾಲಯದಿಂದ ಹಿಡಿದು ನಿರ್ಮಲರಾಣಿ ಶಾಲೆಯವರೆಗಿನ ಇಂದಿನ ಕ್ಲರೇಷಿಯನ್ ಮತ್ತು ಎಂಎಸ್‌ಎಫ್‌ಎಸ್ ಸೆಮಿನರಿಗಳವರೆಗೆ ಮಾತ್ರವಲ್ಲ ಸೆಂಟ್ ತೆರೇಸಾಸ್ ಸ್ಯಾನಿಟೋರಿಯಂ ಎಂಬ ಗುಟ್ಟೆ ಆಸ್ಪತ್ರೆವರೆಗಿನ ಪ್ರದೇಶದಲ್ಲಿ ಆಡಾಡುತ್ತಾ ಕಳೆದಿತ್ತು.
ಈ ಒಂದು ನೆನಪಿನ ಬುತ್ತಿಯಿಂದ ಸಣ್ಣ ತುಣುಕೊಂದನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ನಾನು ಪೆನ್ವೆನ್ ಸ್ವಾಮಿಯವರ ಕೊಠಡಿಯ ಬಳಿ ಅಡ್ಡಾಡುತ್ತಿದ್ದಾಗ ಮೇಲುಗಡೆಯ ಕೊಠಡಿಯೊಂದರಿಂದ ಯಾರೋ ನನ್ನನ್ನು ಕರೆದಂತಾಯಿತು. ತಲೆಯೆತ್ತಿ ನೋಡಿದಾಗ ಅದು ಆಗಷ್ಟೇ ಯಾಜಕ ಪದವಿ ಪಡೆದು ರೂಮು ತೆರವು ಮಾಡುತ್ತಿದ್ದ ಯುವ ಬ್ರದರ್ (ಅಲ್ಲ ಫಾದರ್) ಒಬ್ಬರು ನನ್ನನ್ನು ಕರೆಯುತ್ತಿದ್ದುದು ಕಾಣಿಸಿತು. ಅವರು ತಮ್ಮ ಕೊಠಡಿಯಲ್ಲಿನ ಹಳೆಯಪಳೆಯ ವಸ್ತುಗಳನ್ನು ಎಸೆಯುತ್ತಾ ತಮ್ಮ ಬಟ್ಟೆಬರೆ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಾ ತಮ್ಮ ಸೆಮಿನರಿ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದರು. ಆ ಕೆಲಸಕ್ಕೆ ಸಹಾಯ ಮಾಡಲು ಅವರು ನನ್ನನ್ನು ಕೇಳಿಕೊಂಡಾಗ ತುಂಬಾ ಸಂತಸದಿಂದ ಹೂಂಗುಟ್ಟಿದೆ. ನಗುಮುಖದ ಯುವಪಾದ್ರಿಗಳು ಸಹಾಯಕ್ಕೆ ಕರೆದಾಗ ಉತ್ಸಾಹದಿಂದ ಮುಂದಾಗುವುದು ನನಗೆ ಸಹಜವಾಗಿತ್ತು.
ಅವರ ಕೋಣೆಯಲ್ಲಿ ಗೋಡೆಗಳ ಮೇಲೆ ಇದ್ದ ಪಟ ಚಿತ್ರ ಇತ್ಯಾದಿಗಳನ್ನು ತೆಗೆದಿದ್ದರಿಂದ ಕೋಣೆ ಬಿಕೋ ಅನ್ನುತ್ತಿತ್ತು. ಮಂಚಕ್ಕೆ ಕಟ್ಟಿದ್ದ ಸೊಳ್ಳೆಪರದೆ ಬೆಡ್ ಶೀಟು ಮುಂತಾದವುಗಳನ್ನು ತೆಗೆದುಬಿಟ್ಟಿದ್ದರಿಂದ ಅಲ್ಲಿದ್ದ ಹಾಸಿಗೆ ನಿರಾಭರಣ ಸುಂದರಿಯಂತಿತ್ತು. ಹರಿದ ನ್ಯೂಸ್ ಪೇಪರುಗಳು ಬಿಡಿಗೂದಲುಗಳು ಧೂಳಿನೊಂದಿಗೆ ನೆಲದಲ್ಲಿ ಆಟವಾಡುತ್ತಿದ್ದವು. ಕಿಟಕಿಯ ಬಳಿ ಜೋಡಿಸಿದ್ದ ಬಾಚಣಿಗೆಯನ್ನು ನಾನು ಅಲ್ಲಿಂದಲೇ ಹೊರಕ್ಕೆಸೆದಾಗ ಸಣ್ಣಗೆ ಗದರಿದ ಅವರು ಅಲ್ಲಿಂದೇನನ್ನೂ ಕೆಳಗೆ ಹಾಕಬಾರದೆಂದೂ ಬುಟ್ಟಿಯಲ್ಲಿ ತುಂಬಿಕೊಂಡು ಮೆಟ್ಟಿಲಿಳಿದು ಕೆಳಗಿಹೋಗಿ ಕಸದ ರಾಶಿಗೆ ಸುರಿದುಬರುವಂತೆಯೂ ಹೇಳಿದರು. ಹಾಗೆ ನಾನು ಬಹಳಷ್ಟು ವಸ್ತುಗಳನ್ನು ಕಸದರಾಶಿಗೆ ಚೆಲ್ಲಿಬಂದೆ. ಕಿಟಕಿ ಬಳಿಯಲ್ಲಿ ಅವರು ಸಾಲಾಗಿ ಇಟ್ಟಿದ್ದ ಬ್ಲೇಡುಗಳಲ್ಲಿ ಹೊಳಪಿದ್ದ ಒಂದನ್ನು ಮೆಲ್ಲಗೆ ಎತ್ತಿಕೊಂಡು ಅಂಗಿಯ ಕಿಸೆಯಲ್ಲಿಟ್ಟುಕೊಂಡೆ, ಪೆನ್ಸಿಲ್ ಹೆರೆಯುವದಕ್ಕೆ ತುಂಬಾ ಚೆಂದವಾಗಿ ತೋರಿದ್ದ ಅದು ನನ್ನ ಮಿತ್ರರೆದುರಲ್ಲಿ ನನಗೆ ತುಂಬಾ ಹೆಮ್ಮೆ ತಂದುಕೊಡುವ ಸಾಧನವಾದೀತೆಂಬ ಆತ್ಮವಿಶ್ವಾಸ ನನ್ನ ಎದೆಯುಬ್ಬಿಸಿತ್ತು.
ಈ ಒಂದು ಸಂದರ್ಭದಲ್ಲೇ ಒಂದೇ ಶೀರ್ಷಿಕೆಯ ಹಲವಾರು ಪುಸ್ತಕಗಳನ್ನು ಒಟ್ಟಿಗೆ ಕಟ್ಟಿಡಲಾಗಿದ್ದ ಒಂದು ಪುಸ್ತಕದ ಕಟ್ಟು ಕಾಣಿಸಿತು. ಕುತೂಹಲದಿಂದ ಅದರ ಶೀರ್ಷಿಕೆ ಓದಿದೆ. ಅದು ಬಿಳಿ ಹೊದಿಕೆಯ ಮೇಲೆ ಅಚ್ಚ ಕೆಂಪು ಅಕ್ಷರಗಳಲ್ಲಿ ಮುದ್ರಿತವಾಗಿತ್ತು. ಅದರ ಹೆಸರು ಕ್ರೈಸ್ತಗುರು ಕೊಲೆಗಾರರೇ?’ ಎಂಬುದು ನನ್ನ ನೆನಪು. ಮುಂದೆ ಎಷ್ಟೋ ವರ್ಷಗಳ ಕಾಲ ಆ ಯುವಪಾದ್ರಿಯ ಮುಖದೊಂದಿಗೆ ಇತರರ ಮುಖಗಳನ್ನು ಹೋಲಿಸಿಕೊಂಡು ನನ್ನ ನೆನಪನ್ನು ಬ್ರಷ್ ಮಾಡಿಕೊಂಡದ್ದೂ ಉಂಟು. ಡಿಸೆಂಬರ್ ಚಳಿಗೆ ನನ್ನ ಮುಂಬೆರಳ ತುದಿ ಹಿಂಡಿದಾಗಲೆಲ್ಲ ಆ ನನ್ನ ಬಾಲ್ಯದ ಹೊಳಪಿನ ಬ್ಲೇಡಿನ ನೆನಪೂ ಕಾಡುತ್ತದೆ.

ಗುರುವಾರ, ನವೆಂಬರ್ 11, 2010

Bengaluru ಎಂದು ಬರೆಯೋಣ

ಬೆಂಗಳೂರು ಎಂಬ ಹೆಸರು ಇಂಗ್ಲಿಷಿನಲ್ಲಿ Bangalore ಎಂದು ಬರೆಯಲಾಗುತ್ತೆ. ಇಂಗ್ಲಿಷಿನಲ್ಲಿ ಯೋಚಿಸುವ ಮಂದಿ Bang (ಬ್ಯಾಂಗ್) Galore (ಗ್ಯಾಲೋರ್) ಎಂಬುದಾಗಿ ಸಂಬೋಧಿಸಿ ಬ್ಯಾಂಗಲೋರ್ ಎನ್ನುವುದನ್ನು ಗಮನಿಸಿದ್ದೇವೆ. ಹಳ್ಳಿಗಾಡಿನ ಜನರೂ ಸಹ ಬೆಂಗಳೂರನ್ನು ಬೆಂಗಳೂರೆನ್ನದೆ ಬ್ಯಾಂಗಲೋರ್ ಎಂದು ಉಚ್ಚರಿಸುವಷ್ಟರ ಮಟ್ಟಿಗೆ ಇದು ಚಲಾವಣೆಯಲ್ಲಿದೆ.

ಈಗ ಬೆಂಗಳೂರನ್ನು ಬೆಂಗಳೂರೆಂದೇ ಕರೆಯೋಣವೆಂಬ ಕೂಗು ಎದ್ದಿದೆ. ಆದರೆ ಜನಮಾನಸದ ಚಟವನ್ನು ಅಷ್ಟು ಸುಲಭದಲ್ಲಿ ಹೋಗಲಾಡಿಸಲಾದೀತೇ?

ಬೆಂಗಳೂರನ್ನು ಬೆಂಗಳೂರೆಂದು ಉಚ್ಚರಿಸುವ, ಬರೆಯುವ ಹಾಗೂ ಬೇರೆಯವರಿಂದ ಹಾಗೆ ಹೇಳಿಸುವ ಪ್ರಕ್ರಿಯೆಯಲ್ಲಿ ನಮ್ಮ ಕಲ್ಪನೆಗೂ ಮೀರಿದ ಇಚ್ಛಾಶಕ್ತಿ ಹಾಗೂ ಪ್ರೇರಣೆಗಳ ಅಗತ್ಯವಿದೆ. ಈಗಾಗಲೇ NDTV ಯವರು BENGALURU ಪದದ ಬಳಕೆಯನ್ನು ತಮ್ಮ ಟಿವಿ ವಾಹಿನಿಯಲ್ಲಿ ತಂದುಬಿಟ್ಟಿದ್ದಾರೆ. www.map.google.com ನಲ್ಲಿ BENGALURU ಎಂದು ಟೈಪಿಸಿದರೆ ಅದು ಸ್ವೀಕರಿಸುತ್ತದೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ದೆಸೆಯಿಂದ ಇಂದು ಹಲವಾರು ವಿಮಾನಯಾನ ಸಂಸ್ಥೆಗಳು BENGALURU ಎಂದು ಬಳಸಲಾರಂಭಿಸಿದ್ದಾರೆ. ಹಾಗೆಯೇ ಬೆಂಗಳೂರಿನ ಪೊಲೀಸು ಇಲಾಖೆ ಸೇರಿದಂತೆ ಹಲವರು ಸ್ವಯಂಪ್ರೇರಣೆಯಿಂದ ತಮ್ಮ ನಾಮಫಲಕಗಳಲ್ಲಿ ಹಾಗೂ ವಿಳಾಸಗಳಲ್ಲಿ BENGALURU ಎಂಬುದಾಗಿ ಬಳಸುತ್ತಿದ್ದಾರೆ. ಸರ್ಕಾರದ ಆದೇಶ ಬರುವವರೆಗೂ ಕಾಯದೆ ಈಗಿಂದೀಗಲೇ ನಾವೆಲ್ಲ ಬೆಂಗಳೂರನ್ನು ‘ಬೆಂಗಳೂರು’ ಎಂದು ಕರೆಯುವ, ಬರೆಯುವ ಹಾಗೂ ತಿದ್ದುವ ಪ್ರಯತ್ನದಲ್ಲಿ ತೊಡಗೋಣ.

ನಮ್ಮೆಲ್ಲ ಪತ್ರಗಳು, ಲೇಖನಗಳು, ದಾಖಲೆಗಳು, ದಸ್ತಾವೇಜುಗಳು, ಕರಡಚ್ಚುಗಳು, ನಾಮಫಲಕಗಳು, ಠಸ್ಸೆಗಳು, ಶಿರೋನಾಮೆಗಳು, ವಿಳಾಸಸೂಚಿಗಳು ಇತ್ಯಾದಿಗಳಲ್ಲೆಲ್ಲ Bangalore ಅನ್ನು BENGALURU ಆಗಿ ಬದಲಾಯಿಸುವ ಕೆಲಸಕ್ಕೆ ಇಂದೇ ಚಾಲನೆ ನೀಡೋಣ.

ಶುಕ್ರವಾರ, ನವೆಂಬರ್ 5, 2010

ದೇವರು ನಕ್ಕುಬಿಟ್ಟ

ಇದು ಓಷೋ ಹೇಳಿದ ಕಥೆ.
ಆ ಊರಿನಲ್ಲಿ ಇದ್ದುದು ಅದೊಂದೇ ಗುಡಿ. ಬಲು ಸುಂದರವೂ ಭವ್ಯವೂ ದಿವ್ಯವೂ ಕಲಾಪೂರ್ಣವೂ ಆಗಿತ್ತದು. ಊರಿನ ಸಕಲ ಸಿರಿವಂತರೂ ದೇಣಿಗೆ ನೀಡಿ ಅದನ್ನು ನಿರ್ಮಿಸಿದ್ದರು. ಅದಕ್ಕೆ ಒಬ್ಬ ಪೂಜಾರಿಯನ್ನೂ ನೇಮಿಸಿದ್ದರು. ಆತ ಗುಡಿಯ ಬದಿಯಲ್ಲೇ ಮನೆ ಮಾಡಿಕೊಂಡು ನಿತ್ಯ ಪಾರಾಯಣ, ಪೂಜೆ, ಮಂಗಳಾಭಿಷೇಕ, ಗಂಟಾನಾದ, ಸುಗಂಧ ಧೂಪಗಳೊಂದಿಗೆ ಮಂದಿರವನ್ನು ಸೊಬಗಿನ ತಾಣವಾಗಿಸಿದ್ದ.
ಹೀಗಿರುವಲ್ಲಿ ಒಂದು ರಾತ್ರಿ ಬಡವನೊಬ್ಬ ಬಂದು ಪೂಜಾರಿಯ ಮನೆಯ ಬಾಗಿಲು ತಟ್ಟಿದ. ಹಗಲಿನ ಬೆಳಕಲ್ಲೇ ಆತ ಬರಬಹುದಿತ್ತು. ಆದರೆ ನಾನು ನಿಮಗೆ ಹೇಳಲು ಮರೆತಿದ್ದೆ. ಅದು ಸಿರಿವಂತರ ಗುಡಿಯಾಗಿತ್ತು. ಬಡವರಿಗೆ ಅಲ್ಲಿ ಪ್ರವೇಶ ನಿಷಿದ್ಧವಿತ್ತು. ನಮ್ಮ ದೇಶದ ಗುಡಿಗಳ ಜಾಯಮಾನವೇ ಹಾಗೆ. ಗುಡಿಗಳ ನಿರ್ಮಾಣಕ್ಕೆ ಹಣ ಒದಗಿಸುವವರು ಸಿರಿವಂತರು. ದುಡಿಮೆ ಬಡವರದು. ಭಕ್ತಿಭಾವದಿಂದ ತನ್ಮಯತೆಯಿಂದ ಬಡವರು ಗುಡಿಕಟ್ಟಿ ಅದರ ಅಂದ ಹೆಚ್ಚಿಸುತ್ತಾರೆ. ಗುಡಿ ಪೂರ್ಣಗೊಂಡ ನಂತರ ಸಿರಿವಂತರು ಅದರಲ್ಲಿ ತುಂಬಿ ಬಡವರಿಗೆ ಪ್ರವೇಶ ನಿರಾಕರಿಸುತ್ತಾರೆ.
ಬಡವರು ತಮ್ಮದೇ ಆದ ಗುಡಿ ಕಟ್ಟಿಕೊಳ್ಳಲಿ ಎಂದು ನೀವು ವಾದಿಸಬಹುದು. ಆದರೆ ಕೇಳಿ, ಅವರು ತಮ್ಮ ಜೀವನ ನಡೆಸುವುದೇ ಕಷ್ಟವಿರುವಾಗ ಗುಡಿಯನ್ನೆಂತು ಕಟ್ಟಬಲ್ಲರು? ಅವರಿಗೆ ಹೊಟ್ಟೆಯೇ ದೇವರು, ಸಿರಿವಂತರು ಮಾತ್ರ ಅನೇಕ ಗುಡಿಗಳನ್ನು ಕಟ್ಟಬಲ್ಲರು. ಅದರಲ್ಲೂ ಅತಿ ದೊಡ್ಡ ಅತಿ ಎತ್ತರದ ಅತಿ ವಿಸ್ತಾರದ ಗುಡಿಗಳು. ಅವರಿಗೆ ದೇವರಿಗಿಂತಲೂ ದೇವಾಲಯದ ಗಾತ್ರ ಮುಖ್ಯ. ಅವರ ಹಣದ ತೂಕದಷ್ಟೇ ಗುಡಿಯ ಗಾತ್ರವು ಇರುತ್ತದೆ. ಇನ್ನೊಂದು ವಿಷಯ ಗಮನಿಸಿದ್ದೀರಾ? ಇಂದು ದೇವರು ಸಹ ಮಾರುಕಟ್ಟೆಯಲ್ಲಿ ಕೊಳ್ಳುವ ವಸ್ತುವಾಗಿದ್ದಾನೆ. ಸಿರಿವಂತರ ದೇವರು ದೊಡ್ಡದಾಗಿದ್ದರೆ ಬಡವರ ದೇವರು ಚಿಕ್ಕದಾಗಿರುತ್ತಾನೆ.
ಇರಲಿ ಇನ್ನು ನಮ್ಮ ಬಡವನ ವಿಷಯಕ್ಕೆ ಬರೋಣ. ಆತ ಬಹುಶಃ ರಾತ್ರಿ ಹೊತ್ತಿನಲ್ಲಿ ಯಾರೂ ಇಲ್ಲದಿದ್ದಾಗ ಪೂಜಾರಿ ದಯೆತೋರಿ ಗುಡಿಯ ಬಾಗಿಲು ತೆರೆಯಬಹುದೆಂದು ಭಾವಿಸಿದ್ದ. ತನ್ನ ವಿನಂತಿಯನ್ನು ಕೇಳಿ ಅಥವಾ ತನ್ನ ದಯಾರ್ದ್ರ ಗೋಳಿಗೆ ಪೂಜಾರಿಯ ಮನ ಕರಗಬಹುದೆಂದು ಅವ ಭಾವಿಸಿದ್ದ. ಗುಡಿಯೊಳಗಿನ ದೇವರು ಕಲ್ಲಾಗಿದ್ದ ನಿಜ, ಆದರೆ ಅದಕ್ಕಿಂತ ಕಠಿಣತಮ ಮನಸ್ಸು ಪೂಜಾರಿಯದಾಗಿತ್ತು. ಆ ಪೂಜಾರಿ ಕತ್ತಲೆಯಲ್ಲೂ ಮನುಷ್ಯರ ಚರ್ಮದ ಬಣ್ಣವನ್ನು ತಿಳಿಯಬಲ್ಲ ಚಾಣಾಕ್ಷನೂ ಆಗಿದ್ದ. ಬಂದಿದ್ದವನು ಬಡವನೆಂದು ಅವನಿಗೆ ತಿಳಿದುಹೋಯಿತು. ಬಡವ ನಿಧಾನವಾಗಿ ವಿನಂತಿ ಮಾಡಿದ 'ಸ್ವಾಮಿ ಗುಡಿಯ ಬಾಗಿಲು ತೆರೆಯಿರಿ, ನಾನು ದೇವರನ್ನು ನೋಡಲು ಬಂದಿದ್ದೇನೆ.'
ಹಿಂದಿನ ಕಾಲವಾಗಿದ್ದರೆ ಆ ಪೂಜಾರಿ 'ಎಲೈ ದುಷ್ಟನೇ! ತೊಲಗಿಲ್ಲಿಂದ, ಈ ಗುಡಿ ಪರಮಪಾವನಾತ್ಮನದು, ನಿನ್ನ ಅಪವಿತ್ರ ಗಾಳಿ ಇಲ್ಲಿ ಸುಳಿಯಬಾರದು, ನಡಿಯಾಚೆ' ಎನ್ನುತ್ತಿದ್ದನೇನೋ? ಆದರೆ ಬದಲಾದ ಪರಿಸ್ಥಿತಿಯಲ್ಲಿ ಹಾಗೆ ಹೊರಗಟ್ಟುವುದು ನಾಗರೀಕ ಲಕ್ಷಣವಲ್ಲ. ಆತ ಸುರಕ್ಷಿತ ಮಾರ್ಗ ಅನುಸರಿಸಿದ. ನಾನು ಮೊದಲೇ ಹೇಳಿದಂತೆ ಪೂಜಾರಿ ಪುರೋಹಿತರೆಲ್ಲರೂ ಬಲು ಚಾಣಾಕ್ಷ ಮಂದಿ, ಮಿಕ್ಕವರು ಅಕ್ಕಿ ಬೇಳೆ ಮಾರಿದರೆ ಇವರು ದೇವರನ್ನೇ ಮಾರುವವರು.
ಆ ಕಿಲಾಡಿ ಪೂಜಾರಿ ಹೇಳಿದ 'ಸೋದರನೇ, ಗುಡಿಯೊಳಕ್ಕೆ ನೀನು ಬರುವುದರಿಂದ ಆಗುವ ಪ್ರಯೋಜನವಾದರೂ ಏನು? ಎಲ್ಲಿಯ ತನಕ ನಿನ್ನ ಮನಸ್ಸು ಶುದ್ಧವಾಗುವುದಿಲ್ಲವೋ, ಎಲ್ಲಿಯ ತನಕ ನಿನ್ನ ಮನಸ್ಸು ಶಾಂತವಾಗುವುದಿಲ್ಲವೋ ಅಲ್ಲಿಯ ತನಕ ಮಂದಿರದೊಳಗೆ ಪ್ರವೇಶಿಸಿ ಏನೂ ಲಾಭವಿಲ್ಲ, ದೇವರ ದರ್ಶನವೂ ಆಗುವುದಿಲ್ಲ.'
ತನ್ನ ಮನಸ್ಸು ಶಾಂತವಾಗಿಲ್ಲ ಎಂಬುದು ಆಗ ಬಡವನಿಗೆ ಅರಿವಾಯಿತು. ತನ್ನ ಮನದ ತಳಮಳ, ದುಃಖ ದುಗುಡ ಆತಂಕ ಅತಂತ್ರಸ್ಥಿತಿಗೆ ಪರಿಹಾರ ಅದನ್ನು ಶಾಂತವಾಗಿಸುವುದು ಎಂಬ ಸತ್ಯವನ್ನು ಕೇವಲ ಒಂದೇ ಮಾತಿನಲ್ಲಿ ಪೂಜಾರಿ ತಿಳಿಸಿಕೊಟ್ಟದ್ದು, ಅವನಿಗೆ ಪೂಜಾರಿಯ ಬಗ್ಗೆ ಅಪಾರ ಗೌರವ ತಳೆಯುವಂತೆ ಮಾಡಿತು. ಮನಸ್ಸನ್ನು ಶಾಂತವಾಗಿಸಿಕೊಂಡು ಮರಳಿ ಬರುವೆ ಎಂದುಕೊಂಡ. ಆದರೆ ಪೂಜಾರಿಯ ಮುಖದಲ್ಲಿ ಕಿರುನಗೆ ಸುಳಿದುಹೋದದ್ದು ಅವನಿಗೆ ಗೊತ್ತಾಗಲೇ ಇಲ್ಲ.
ಮೂರು ತಿಂಗಳಾಯಿತು, ಆರು ತಿಂಗಳಾಯಿತು, ಬಡವ ಮರಳಿ ಬರಲಿಲ್ಲ. ಒಂದು ದಿನ ಪೂಜಾರಿ ಅವನನ್ನು ರಸ್ತೆಯಲ್ಲಿ ಕಂಡ. ಆ ಬಡವನ ಮುಖದಲ್ಲಿ ಅನಿರ್ವಚನೀಯ ತೇಜಸ್ಸಿತ್ತು. ಅವನ ಕಣ್ಣುಗಳಲ್ಲಿ ಅನುಪಮ ಕಾಂತಿಯಿತ್ತು. ಆತ ಮತ್ಯಾರೋ ಹೊಸ ವ್ಯಕ್ತಿಯಾದಂತೆ ತೊರುತ್ತಿತ್ತು. ಪುಜಾರಿ ಅವನನ್ನು ತಡೆದು ಕೇಳಿದ 'ಗೆಳೆಯನೇ, ನೀನು ಮತ್ತೆ ಬರಲೇ ಇಲ್ಲವಲ್ಲ?'
ಬಡವ ಉತ್ತರಿಸಿದ 'ಸ್ವಾಮೀ, ನಾ ಹೇಗೆ ತಾನೇ ಬರಲಿ, ಮನಸ್ಸನ್ನು ಶಾಂತಗೊಳಿಸುವ ಶುದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನನಗೆ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿಗಳಲ್ಲಿ ಕಣ್ಣೀರಿಡುತ್ತಾ ದೇವಪ್ರಾರ್ಥನೆಯಲ್ಲಿ ಕಳೆಯುತ್ತಿದ್ದೆ. ಒಂದು ರಾತ್ರಿ ಕನಸಿನಲ್ಲಿ ದೇವರು ಬಂದು 'ಏಕೆ ಅಳುತ್ತಿರುವೆ?' ಎಂದು ಕೇಳಿದ. ಅದಕ್ಕೆ ನಾನು 'ದೇವರೇ, ಆ ಗುಡಿಯೊಳಕ್ಕೆ ನಾನು ಹೋಗಬೇಕು, ಅಲ್ಲಿ ನಿನ್ನನ್ನು ಕಾಣಬೇಕು' ಎಂದೆ. ಅದಕ್ಕೆ ದೇವರು ನಕ್ಕುಬಿಟ್ಟ. ನಗುತ್ತಾ ಆತ ಹೇಳಿದ 'ನಿಜಕ್ಕೂ ನೀನೊಬ್ಬ ಹುಚ್ಚ, ಆ ಗುಡಿಯೊಳಕ್ಕೆ ನೀನು ಹೋಗಲಾರೆ, ಸ್ವತಃ ನಾನೇ ಹತ್ತಾರು ವರ್ಷಗಳಿಂದ ಅದರೊಳಕ್ಕೆ ಹೋಗಲು ಪ್ರಯತ್ನಿಸಿ ಸೋತಿದ್ದೇನೆ. ನಾನೇ ಸೋತಿದ್ದೇನೆ ಎಂದ ಮೇಲೆ ನೀನು ಹೇಗೆ ತಾನೇ ಹೋಗಬಲ್ಲೆ, ನಾನು ಬೇಕಾದರೆ ನಿನ್ನ ಹೃದಯ ಮಂದಿರದಲ್ಲಿ ನಿಲ್ಲಬಹುದು, ಆದರೆ ಆ ಗುಡಿಯೊಳಗೆ ಹೋಗುವುದು ಬಲು ಕಷ್ಟ.'
ನಿಜ ಹೇಳಬೇಕೆಂದರೆ ಹತ್ತಾರು ವರ್ಷಗಳಿಂದ ಅಲ್ಲ, ನೂರಾರು ವರ್ಷಗಳಿಂದ ದೇವರಿಗೆ ಮಾನವರು ಕಟ್ಟಿದ ಗುಡಿಗಳೊಳಗೆ ಹೋಗಲಾಗಿಲ್ಲ, ಗುಡಿಗಳು ದಿವ್ಯ ಭವ್ಯ ವಿರಾಟ್ ಸ್ವರೂಪಿಯದಾಗಿದ್ದರೂ ದೇವರಿಗೆ ಅವು ಚಿಕ್ಕವು, ಆದರೆ ಆತ ದರಿದ್ರರ ಮನದೊಳಗೆ ಪ್ರವೇಶಿಸಬಲ್ಲ, ಒಂಟೆಯು ಸೂಜಿಯ ಕಣ್ಣೊಳಗೆ ಪ್ರವೇಶಿಸುವಂತೆ.


ಮಂಗಳವಾರ, ನವೆಂಬರ್ 2, 2010

ಗಿಬ್ರಾನನ ಜೀಸಸ್

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ"
           
ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್‌ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನುಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಆ ಎಪ್ಪತ್ತು ವ್ಯಕ್ತಿಗಳು ಜುದಾಸನಾಗಿ, ಪಿಲಾತನಾಗಿ, ಪೇತ್ರನಾಗಿ, ಮಗ್ದಲದ ಮರಿಯಳಾಗಿ ಮೈದಳೆದಿದ್ದಾರೆ. ಆದರೆ ಗ್ರಮಥದ ಕೊನೆಯಲ್ಲಿನ ನೀಳ್ಗವನದಲ್ಲಿ ಗಿಬ್ರಾನ್ ತಾನೇ ತಾನಾಗಿ ಮೂಡಿ ಬಂದಿದ್ದಾನೆ. ಹತ್ತೊಂಬತ್ತು ಶತಮಾನಗಳ ನಂತರ ಎಂದು ಹೇಳಿದ್ದರೂ ಎಪ್ಪತ್ತು ಜೊತೆ ಕಣ್ಣುಗಳ ಮೂಲಕ ಯೇಸುವಿನ ವಿಶ್ವರೂಪವನ್ನು ಕಂಡ ಭಾಗ್ಯಶಾಲಿ ಗಿಬ್ರಾನ್.

ಕ್ರಿಸ್ತಶಕ ೧೮೮೩ರಲ್ಲಿ ಲೆಬನಾನ್‌ನಲ್ಲಿ ಹುಟ್ಟಿದ ಗಿಬ್ರಾನ್ ಬಹುಶಃ ತನ್ನ ೩೫-೪೦ನೇ ವಯಸ್ಸಿನಲ್ಲಿ ಭ್ರಾಮಕ ಸ್ಥಿತಿಯಲ್ಲಿ ಯೇಸುವಿನ ಜೀವನ ಕಥನವನ್ನು ಕಣ್ಣಾರೆ ಕಂಡವನಂತೆ ಬಣ್ಣಿಸುತ್ತಾ ಇರುವಾಗ್ಗೆ ಆತನ ಗೆಳತಿ ಅದನ್ನು  ಬರೆದುಕೊಂಡಳಂತೆ, "ಜೀಸಸ್, ದಿ ಸನ್ ಆಫ್ ಮ್ಯಾನ್" ಎಂಬ ಆ ಪುಸ್ತಕದಲ್ಲಿ ಯೇಸುವಿನ ಜನನದಿಂದ ಮರಣದವರೆಗಿನ ಕಥೆಯು ಅನುಕ್ರಮವಾಗಿ ಮೂಡಿಬರದೆ ಅಲ್ಲಲ್ಲಿ ಕೆದಕಿದಂತೆ ಇರುವುದಾದರೂ ಆ ಪುಸ್ತಕ ಶ್ರೀಯೇಸುವನ್ನು ಕುರಿತ ಸಾಂಪ್ರದಾಯಿಕ ಕಥಾನಕವನ್ನು ಬದಿಗೊತ್ತಿ ಕ್ರೈಸ್ತ ಪ್ರಪಂಚದಲ್ಲಿ ಹೊಸ ವೈಚಾರಿಕ ತರಂಗಗಳಿಗೆ ಕಾರಣವಾಯಿತು, ಅಷ್ಟೇ ಜನಪ್ರಿಯವೂ ಆಯಿತು.

ಇದರಲ್ಲಿ ಯೇಸುವಿನ ಜೀವನಕಾಲದ ವಿಭಿನ್ನ ಕಾಲಘಟ್ಟದ ವಿಭಿನ್ನ ವ್ಯಕ್ತಿಗಳು ಯೇಸುವಿನ ಜೀವನವನ್ನು ತೆರೆದಿಡುತ್ತಾ ಸಾಗುತ್ತಾರೆ. ಅದು ಹೊಗಳಿಕೆಯಾಗಿರಬಹುದು-ತೆಗಳಿಕೆಯಾಗಿರಬಹುದು, ಅವ್ಯಾಜ ಪ್ರೇಮವಾಗಿರಬಹುದು, ಮಮತೆ ವಾತ್ಸಲ್ಯದ ಆರ್ದ್ರತೆಯಿರಬಹುದು, ಈರ್ಷ್ಯೆಯಿರಬಹುದು-ಸ್ನೇಹವಿರಬಹುದು, ಭಕ್ತಿಯಿರಬಹುದು-ಅಹಮಿಕೆಯಿರಬಹುದು, ಎಲ್ಲ ವಿವರಣೆಯಲ್ಲಿಯೂ ಯೇಸುವನ್ನು ಎಣೆಯಿಲ್ಲದ ಔನ್ನತ್ಯದಲ್ಲಿ ನಿಲ್ಲಿಸುವುದೇ ಗಿಬ್ರಾನನ ತಂತ್ರಗಾರಿಕೆಯಾಗಿದೆ.

ಉದಾಹರಣೆಗೆ ಕೆಲ ತುಣುಕುಗಳನ್ನು ನೋಡೋಣ.
೧.         ಯೇಸುವಿನ ಶಿಷ್ಯ ಲೂಕ ಕೇಳುತ್ತಾನೆ: ಗುರುಗಳೇ, ನೀವು ಪಾಪಿಗಳನ್ನೂ ಬಡಪಾಯಿಗಳನ್ನೂ ಚಂಚಲರನ್ನಷ್ಟೇ ಆದರಿಸಿ, ಡಾಂಭಿಕರನ್ನು ಅಲಕ್ಷಿಸುತ್ತೀರಲ್ಲ? ಅದಕ್ಕೆ ಯೇಸು ಹೇಳುತ್ತಾನೆ ನೀವು ಪಾಪಿಗಳೆಂದು ಕರೆಯುವ ಈ ದುರ್ಬಲರು ಗೂಡಿನಿಂದ ಕೆಳಕ್ಕೆ ಬಿದ್ದ ರೆಕ್ಕೆ ಬಲಿಯದ ಹಕ್ಕಿ ಮರಿಗಳು, ಆದರೆ ಆಷಾಢಭೂತಿಗಳಾದರೋ ಮರಿಹಕ್ಕಿಯ ಮರಣಕ್ಕೆ ಕಾದಿರುವ ರಣಹದ್ದುಗಳು, ದುರ್ಬಲರು ಮರಳುಗಾಡಿನ ನಡುವೆ ಕಳೆದುಹೋದವರು, ಡಂಭಾಚಾರಿಗಳು ತಮ್ಮ ನೆಲೆ ಅರಿತಿದ್ದರೂ ಸುಂಟರಗಾಳಿಯ ನಡುವೆ ತುಂಟಾಟವಾಡುವರು.

೨.         ಪಿಲಾತನ ಆಂತರ್ಯ: ನಾನು ವೇದಿಕೆಯ ಮೇಲೆ ಕುಳಿತಿದ್ದೆ, ಅವನು ನನ್ನೆಡೆಗೆ ಸುದೀರ್ಘ ಹಾಗೂ ಸುನಿಶ್ಚಿತ ಹೆಜ್ಜೆ ಹಾಕುತ್ತಾ ನಡೆದು ಬಂದ, ಬಳಿಕ ಅನು ಸ್ಥೈರ್ಯದಿಂದ ನಿಂತುಕೊಂಡು ಮುಖವನ್ನು ಮೇಲಕ್ಕೆತ್ತಿದ, ಆ ಕ್ಷಣಕ್ಕೆ ನನಗೇನಾಯಿತೋ ನನಗೇ ತಿಳಿಯದಾಯಿತು. ಆದರೆ ನಾನು ನನ್ನ ಆಸನವನ್ನು ಬಿಟ್ಟೆದ್ದು ಅವನೆಡೆಗೆ ಹೋಗಿ ಅನವ ಪಾದದಡಿ ಬೀಳಬೇಕೆಮದು ನನ್ನ ಇಚ್ಛೆ ಅಲ್ಲದಿದ್ದರೂ ನನಗೆ ಆಸೆಯಾಯಿತು. ಒಬ್ಬ ಗ್ರೀಕ್ ತತ್ವಜ್ಞಾನಿಯು 'ಏಕಾಕಿಯೇ ಸಮರ್ಥತಮ ನಾಯಕ' ಎಂದು ಹೇಳಿದ್ದನ್ನು ನಾನು ಓದಿದ್ದು ನನ್ನ ನೆನಪಿಗೆ ಬಂತು.

೩.         ಮಗ್ದಲದ ಮರಿಯಳ ಮನದ ತುಮುಲ: ಗೆಳೆಯಾ ಕೇಳಿಲ್ಲಿ, ನಾನು ಸತ್ತಂತೆಯೇ ಇದ್ದೆ, ಆತ್ಮದಿಂದ ಪರಿತ್ಯಕ್ತಳಾದ ಹೆಣ್ಣಾಗಿದ್ದೆ, ಎಲ್ಲರಿಗೂ ಸೇರಿದವಳಾಗಿದ್ದರೂ ಯಾರಿಗೂ ಬೇಡದವಳಾಗಿದ್ದೆ, ವೇಶ್ಯೆಯೆಂದೇ ನನ್ನನ್ನು ಕರೆಯುತ್ತಿದ್ದರು.
ನಾನು ಅವನತ್ತ ನೋಡಿದೆ. ನನ್ನ ಆತ್ಮವು ಒಳಗೊಳಗೆಯೇ ನಡುಗಿಬಿಟ್ಟಿತು. ನನ್ನ ಮನದ ಬಾಂದಳದ ದಿಗಂತದಿಗಂತವೆಲ್ಲವೂ ಆತನ ಬರುವಿಕೆಗಾಗಿಯೇ ಕಾದಿತ್ತು. ಅವನಿಗೆ ನಾನೆಂದೆ 'ನೀನು ನನ್ನ ಮನೆಗೆ ಬರುವುದಿಲ್ಲವೇ?' ಅವನೆಂದ 'ಈಗಾಗಲೇ ನಾನು ನಿನ್ನ ಮನೆಯೊಳಗಿಲ್ಲವೇ?' ಆತ ಆಡಿದ ಮಾತು ಆಗ ನನಗೆ ಅರ್ಥವಾಗಲಿಲ್ಲ, ಆದರೆ ಈಗ ಅದರರ್ಥವನ್ನು ನಾನು ಬಲ್ಲೆ.
ಅವನು ನನ್ನ ಕಣ್ಣಲ್ಲಿ ಬೆಳಗುಕಂಗಳಿಂದ ನೋಡುತ್ತಾ ಹೇಳಿದ 'ನಿನಗೆ ಅನೇಕ ಪ್ರೇಮಿಗಳಿದ್ದಾರೆ ಆದರೂ ನಾನೊಬ್ಬ ಮಾತ್ರ ನಿನ್ನನ್ನು ಪ್ರೀತಿಸುತ್ತೇನೆ, ಇತರರು ನಿನ್ನ ಸನಿಹದಲ್ಲಿ ತಮ್ಮನ್ನೇ ಪ್ರೀತಿಸಿಕೊಳ್ಳುತ್ತಾರೆ, ನಾನು ಮಾತ್ರ ನಿನ್ನೊಳಗಿನ ನಿನ್ನನ್ನು ಪ್ರೀತಿಸುತ್ತೇನೆ, ಉಳಿದವರು ಅವರ ಆಯುಷ್ಯದೊಂದಿಗೆ ಅಳಿದುಹೋಗುವ ನಿನ್ನ ಚೆಲುವನ್ನು ಮಾತ್ರ ಕಂಡರೆ ನಾನು ಮಾತ್ರ ನಿನ್ನಲ್ಲಿ ಬಾಡದ ಚೆಲುವನ್ನು ಕಾಣುತ್ತೇನೆ, ನಿನ್ನ ಬದುಕಿನ ಶಿಶಿರ ಕಾಲದಲ್ಲಿ ಆ ಚೆಲುವು ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಅಳುಕುವುದಿಲ್ಲ, ಎಲ್ಲರೂ ತಮಗಾಗಿ ನಿನ್ನನ್ನು ಪ್ರೀತಿಸುತ್ತಾರೆ, ನಾನು ನಿನಗಾಗಿ ಮಾತ್ರವೇ ನಿನ್ನನ್ನು ಪ್ರೀತಿಸುವೆ' ಎಂದು ಹೇಳಿ ಆತ ಹೊರಟುಹೋದ. ಆತ ಹೊರಟು ನಡೆದಂತೆ ಇನ್ನಾವ ಪುರುಷನೂ ನನ್ನಿಂದ ನಡೆದುಹೋಗಲಿಲ್ಲ, ನನ್ನ ತೋಟದಲ್ಲಿ ಹುಟ್ಟಿ ಮೂಡಣದೆಡೆಗೆ ಸಾಗಿದ ಉಸಿರೇ ತಾನೆಂಬಂತೆ, ಎಲ್ಲದರ ಅಡಿಗಲ್ಲುಗಳನ್ನು ಅಲುಗಾಡಿಸಿಬಿಡುವ ಬಿರುಗಾಳಿಯಂತೆ, ನನ್ನೊಳಡಗಿದ್ದ ಪೈಶಾಚೀ ಘಟಸರ್ಪವನ್ನು ಅವನ ಕಂಗಳ ಸೂರ್ಯಾಸ್ತವು ಕೊಂದುಬಿಟ್ಟಿತ್ತು. ಅಂದೇ ನಾನು ಸ್ತ್ರೀಯಾದೆ, ಮಗ್ದಲದ ಮರಿಯಳಾದೆ'

೪.         ಗಲಿಲೇಯದ ಒಬ್ಬ ವಿಧವೆ: ನನ್ನ ಚೊಚ್ಚಲ ಒಬ್ಬನೇ ಮಗ ಯೇಸುವಿನ ಬೋಧನೆಯನ್ನು ಕೇಳುವವರೆಗೆ ಹೊಲದಲ್ಲಿ ಗೆಯ್ಮೆ ಮಾಡುತ್ತಾ ತೃಪ್ತಿಯಿಂದಲೇ ಇದ್ದ. ಯೇಸುವನ್ನು ಕಂಡಿದ್ದೇ ನನ್ನ ಮಗ ಬೇರೆಯೇ ಆಗಿಬಿಟ್ಟ. ಯಾವುದೋ ಆತ್ಮವನ್ನು ಆವಾಹಿಸಿದವನಂತೆ, ಹೊಲ ತೋಟಗಳನ್ನಷ್ಟೇ ಅಲ್ಲ ನನ್ನ ಯೋಚನೆಯನ್ನೂ ಬಿಟ್ಟುಬಿಟ್ಟ. ನಜರೇತಿನ ಆ ಯೇಸು ಒಬ್ಬ ಪಾಪಿ; ಏಕೆಂದರೆ ಒಳ್ಳೇ ಜನರು ತಾಯಿಯಿಂದ ಮಗನನ್ನು ಅಗಲಿಸುವರೇ? ಈ ಮನುಷ್ಯರು ಯೇಸುವನ್ನು ಹಿಡಿದು ಶಿಲುಬೆಗೇರಿಸಿ ಒಳ್ಳೆಯದನ್ನೇ ಮಾಡಿದರು. 'ನನ್ನ ನುಡಿಗಳನ್ನು ಕೇಳುವವರೂ, ನನ್ನನ್ನು ಹಿಂಬಾಲಿಸುವವರೂ ನನ್ನ ಬಂಧುಗಳು, ನನ್ನ ತಂದೆತಾಯಿಗಳು' ಎಂದಿದ್ದನಂತೆ. ಆದರೆ ಅವನ ಬೆಂಬತ್ತಿ ಹೋಗಲೆಂದು ಮಕ್ಕಳು ತಮ್ಮ ತಾಯಂದಿರನ್ನು ಏಕೆ ತೊರೆಯಬೇಕು?

ಹೀಗೆ ಗಿಬ್ರಾನನು ಪವಿತ್ರ ಬೈಬಲ್‌ನಲ್ಲಿ ಕಾಣದ ಎಷ್ಟೋ ಪ್ರಸಂಗಗಳನ್ನು ತನ್ನ ಒಳಗಣ್ಣಿಂದ ಹೆಕ್ಕಿ ತೆಗೆದು ಮತ್ತಷ್ಟು ಧ್ವನಿಪೂರ್ಣವಾಗಿ ತನ್ನದೇ ಚಿರಂತನವಾದ ಉಪಮೆಗಳಿಂದ ಅಲಂಕರಿಸಿ ಮನುಕುಲದ ಗದ್ಯಸಾಹಿತ್ಯಕ್ಕೆ ಮೇರುಕೃತಿಯನ್ನು ಕೊಡಮಾಡಿದ್ದಾನೆ.

ಜುದಾಸ ಮತ್ತು ಯೇಸುವಿನ ತುಲನೆಯನ್ನು ಗಿಬ್ರಾನನು ಎರಡೇ ವಾಕ್ಯಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ ನೋಡಿ :
"ಒಬ್ಬ ಮನುಷ್ಯ ತಾನು ರಾಜಕುಮಾರನಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ
ಇನ್ನೊಬ್ಬ ಮನುಷ್ಯ ಎಲ್ಲಾ ಮನುಷ್ಯರೂ ರಾಜಕುಮಾರರಾಗಲಿರುವ ಒಂದು ಸಾಮ್ರಾಜ್ಯಕ್ಕಾಗಿ ಹಾತೊರೆದ"

ಒಟ್ಟಿನಲ್ಲಿ ಕಹ್‌ಲಿಲ್ ಗಿಬ್ರಾನನ "ಜೀಸಸ್" (Jesus, the son of Man) ಹೊಸಒಡಂಬಡಿಕೆಯ ನಂತರದ ಮಹತ್ತರ ದೃಶ್ಯಕಾವ್ಯವೆಂದು ಹೇಳಬಹುದು.

ಕ್ರಿಸ್ತಶಕ ೧೯೫೫ರಲ್ಲಿ ಶ್ರೀಯುತರಾದ ದೇಸಾಯಿ ದತ್ತಮೂರ್ತಿ (ದೇವದತ್ತ) ಅವರು ಇದನ್ನು ಕನ್ನಡಿಸಿ ಧಾರವಾಡದ ಮಿಂಚಿನಬಳ್ಳಿ ಚಾವಡಿ (ಬುರ್ಲಿ ಬಿಂಧುಮಾಧವರ ಪ್ರಕಾಶನ ಸಂಸ್ಥೆ) ಯ ಮೂಲಕ ಕನ್ನಡಿಗರ ಕೈಗಿತ್ತಿದ್ದಾರೆ. ಅದರ ಮುನ್ನುಡಿಯಲ್ಲಿ ವಿನಾಯಕ ಕೃಷ್ಣ ಗೋಕಾಕರು 'ಓರ್ವ ಮಹಾಕವಿಯು ಈ ಕೃತಿಯಲ್ಲಿ ಒಂದು ಮಹಾಜೀವನಕ್ಕೆ ತನ್ನ ಹೃದಯದ ಕನ್ನಡಿಯನ್ನು ಎತ್ತಿ ಹಿಡಿದಿದ್ದಾನೆ' ಎಂದು ಗಿಬ್ರಾನನನ್ನು ಹೊಗಳಿದ್ದಾರೆ, ಅಷ್ಟೇ ಮುಕ್ತ ಕಂಠದಿಂದ ದೇವದತ್ತರ ಕನ್ನಡಾನುವಾದವನ್ನು ಶ್ಲಾಘಿಸಿದ್ದಾರೆ.

ಪ್ರಭುಶಂಕರ ಅವರು ಗಿಬ್ರಾನನ ಕೃತಿಯನ್ನು ಕಿರುಗಾತ್ರದಲ್ಲಿ ಪರಿಚಯಿಸಿದ್ದಾರೆ. ಕೃತಿಯನ್ನು ಇಡಿಯಾಗಿ ನೀಡಲು ಅವರಿಗೆ ತಮ್ಮದೇ ಆದ ಇತಿಮಿತಿಗಳಿವೆ.

ಚಸರಾ ಮತ್ತು ಎಲ್ಸಿ ನಾಗರಾಜರಿಂದ ಅನುವಾದಗೊಂಡಿರುವ "ಜೀಸಸ್" (ಸಂಚಲನ ಪ್ರಕಾಶನ, ಬೆಂಗಳೂರು, ೧೯೯೬) ಶಬ್ದಸಂಪತ್ತು ಮತ್ತು ಭಾಷಾವೈಪರೀತ್ಯದ ದೃಷ್ಟಿಯಿಂದ ದೇವದತ್ತರಿಗಿಂತ ಬೇರೆಯೇ ಆಗಿ ಕಂಡರೂ ಎರಡೂ ಕೃತಿಗಳ ಸಮರ್ಥ ಅನುವಾದವು ಅವುಗಳನ್ನು ಮೇಲ್ಮಟ್ಟದಲ್ಲೇ ಇರಿಸುತ್ತದೆ. ಕನ್ನಡ ಬಲ್ಲ ಪ್ರತಿಯೊಬ್ಬರೂ ಈ ಕೃತಿಗಳನ್ನು ಓದಿ ಅನುಭವಿಸಬೇಕು.

ಸೋಮವಾರ, ನವೆಂಬರ್ 1, 2010

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೇ?

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?
ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.
ಅದರ ಬದಲು ಜಾಗತಿಕ ವೇದಿಕೆಯಲ್ಲಿ ಸೆಣೆಸಲು ಎಲ್ಲರೂ ಇಂಗ್ಲಿಷನ್ನು ಉಪಭಾಷೆಯಾಗಿ ಕಲಿತರೆ ಒಳ್ಳೆಯದು. ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಇಂಗ್ಲಿಷನ್ನು ಒಂದು ಸಂಪರ್ಕಭಾಷೆಯಾಗಿ ನೆಲೆಗೊಳಿಸುವುದು ಸುಲಭ. ವಿಪರ್ಯಾಸವೆಂದರೆ ಅವುಗಳಲ್ಲಿ ಹಿಂದೀಯನ್ನು ಜಾರಿಗೆ ತರಲಿಕ್ಕಾಗಿ ಅಪಾರ ಹಣ ವ್ಯಯ ಮಾಡಲಾಗುತ್ತಿದೆ. ಕೆಲವೊಮ್ಮೆಯಂತೂ ಹಿಂದೀಯನ್ನು ಬಲವಂತವಾಗಿ ಹೇರಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನೆಲೆಗೊಂಡ ಅಂಥ ಸಂಸ್ಥೆಗಳಲ್ಲಿ ಆಯಾ ರಾಜ್ಯಭಾಷೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹಿಂದೀಯನ್ನು ಬಲವಂತವಾಗಿ ಹೇರಬಾರದು.
ಆದರೆ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಹಿಂದೀ ಭಾಷೆಯೇ ಪ್ರಧಾನ ಎಂಬುದಾಗಿ ಕೆಲ ಮುಟ್ಠಾಳರು ಪ್ರತಿಪಾದಿಸುತ್ತಿದ್ದಾರೆ. ಅವರನ್ನು ಮುಟ್ಠಾಳರು ಎಂದು ಏಕೆ ಕರೆಯುತ್ತಿದ್ದೇನೆ ಎಂದರೆ ಅವರಿಗೆ ಹಿಂದೀ ಕುರಿತ ವಾಸ್ತವತೆಯ ಅರಿವಿಲ್ಲ. ಹಿಂದೀಗಾಗಿ ನೀಡಲಾಗುವ ಪುಡಿಗಾಸಿನ ಎಂಜಲಿಗಾಗಿ ಅವರು ಕನ್ನಡವನ್ನು ಬಲಿಗೊಡುತ್ತಿದ್ದಾರೆ. ಅದೇ ನೇರದಲ್ಲಿ ಅವರು ತಮ್ಮ ಮುಂದಿನ ಪೀಳಿಗೆಗೂ ವಂಚನೆ ಮಾಡುತ್ತಿದ್ದಾರೆ.
ಈ ಸಂಸ್ಥೆಗಳಲ್ಲಿ ನಡೆವ ಹಿಂದೀ ಪಕ್ಷಾಚರಣೆಯನ್ನೇ ನೋಡೋಣ. ಅದರಲ್ಲಿ ಭಾಗವಹಿಸುವವರಾದರೂ ಎಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು ಮಂದಿ. ಪ್ರತಿವರ್ಷವೂ ನೋಟಿಂಗ್ ಅಂಡ್ ಡ್ರಾಫ್ಟಿಂಗ್, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಗಾಯನಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಅದೇ ನಾಲ್ಕೈದು ಮಂದಿ. ಅದರ ಬಹುಮಾನಗಳನ್ನು ಅವರವರೇ ಹಂಚಿಕೊಳ್ಳುತ್ತಾರೆ.

ಕನ್ನಡದಲ್ಲಿ ಓಸಿಆರ್‍

ಕಿಟೆಲ್ ನಿಘಂಟಾಗಲೀ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟಾಗಲೀ ಪಂಪಭಾರತವೇ ಆಗಲಿ ಮತ್ತೆ ಅದನ್ನು ಟೈಪು ಮಾಡುವುದು ಅತಿ ತ್ರಾಸಾದ ಕೆಲಸ. ಅದರ ಬದಲು ಸ್ಕ್ಯಾನಿಂಗ್ ಮಾಡಿ ಅಚ್ಚು ಹಾಕೋದು ಸುಲಭವೆನ್ನಬಹುದೇನೋ? ಈಗಾಗಲೇ ನವದೆಹಲಿಯ AES ನವರು ಹಳೆಯ ಕನ್ನಡ ಪುಸ್ತಕಗಳನ್ನು ಹೀಗೆಯೇ ಮರುಮುದ್ರಣ ಮಾಡಿದ್ದಾರೆ. ಆದರೆ ಅಚ್ಚಾಗುವ ಮುನ್ನ ಆ ಪುಸ್ತಕದ ಒಡಲಲ್ಲಿ ಏನನ್ನಾದರೂ ತಿದ್ದಬೇಕೆಂದರೆ ಅದು ಸಾಧ್ಯವಿಲ್ಲ.

ಮೈಸೂರು ವಿವಿ ಯವರು ತಮ್ಮ ಇಂಗ್ಲಿಷ್ ಕನ್ನಡ ನಿಘಂಟನ್ನು ಪಿಡಿಎಫ್ ರೂಪದಲ್ಲಿ ನೀಡಿದ್ದಾರೆ.

ಪುಸ್ತಕದ ಪುಟಗಳನ್ನು ನೋಡಿ ತಾನಾಗೇ ಅಕ್ಷರಗಳನ್ನು ಕಂಪೋಸ್ ಮಾಡುತ್ತಂತಲ್ಲ ಒಂದು ತಂತ್ರಾಂಶ, ಅದು ಕನ್ನಡದಲ್ಲಿ ಇದ್ದಿದ್ದರೆ ಎಷ್ಟು ಚೆನ್ನಿತ್ತು ಅಲ್ಲವೇ? ಇಂಗ್ಲಿಷಿನಲ್ಲಿ ಈಗಾಗಲೇ ಅಂಥದು ಇದೆಯಂತೆ. ಇಂಗ್ಲಿಷಿನಲ್ಲಿ ಬರೇ ೨೬+೨೬ ಅಕ್ಷರಗಳಿರುವುದರಿಂದ ಈ ತಂತ್ರಾಂಶ ಸಾಧ್ಯವಾಗಿದೆಯಂತೆ. ಆದರೆ ಕನ್ನಡದಲ್ಲಿ ಅಕ್ಷರಮಾಲೆ, ಒತ್ತಕ್ಷರ, ಕಾಗುಣಿತ ಎಲ್ಲ ಸೇರಿದರೆ ಅದು ಹತ್ತಿರ ಹತ್ತಿರ ೫೦೦ ಆಗುತ್ತದೆಯಾದ್ದರಿಂದ ಈ ಓಸಿಆರ್‍ (ಆಪ್ಟಿಕಲ್ ಕ್ಯಾರಕ್ಟರ್‍ ರೆಕಗ್ನಿಶನ್) ತಂತ್ರಾಂಶ ಸಾಧ್ಯವಾಗುತ್ತಿಲ್ಲವಂತೆ.

ಹಿಂದೊಮ್ಮೆ ತಾತಾ ವಿಜ್ಞಾನ ಮಂದಿರದ ಇಬ್ಬರು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಂತೆ. ನೋಡಿ http://www.springerlink.com/content/09gn4jx2eqcwk9xy/ ಅಲ್ಲದೆ ಅಡೋಬ್ ನವರಾಗಲೀ, ಮೈಕ್ರೋಸಾಫ್ಟಿನವರಾಗಲೀ ಅಥವಾ ಇನ್ಯಾರಾದರೂ ಈ ಕುರಿತು ತಮ್ಮ ಪ್ರಯತ್ನ ಮುಂದುವರಿಸಿರಬಹುದು. ಆ ಪ್ರಯತ್ನ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.

ಏಕೆಂದರೆ ನಮ್ಮಲ್ಲಿ ನವಕರ್ನಾಟಕದವರ ಜ್ಞಾನವಿಜ್ಞಾನಕೋಶ, ಮೈಸೂರು ವಿಶ್ವವಿದ್ಯಾಲಯದವರ ಕನ್ನಡ ವಿಶ್ವಕೋಶ, ರೈಸರ ಎಪಿಗ್ರಾಫಿಯಾ ಕರ್ನಾಟಿಕಾ, ಕಿಟೆಲರ ನಿಘಂಟು, ಕವಿಗಳ ಸಾರಸ್ವತ ಭಂಡಾರ ಎಲ್ಲವೂ ಪುಸ್ತಕ ರೂಪದಲ್ಲಿದೆ. ಅವನ್ನೆಲ್ಲ ಡಿಜಿಟೈಸ್ ಮಾಡಿ ಅಂತರ್ಜಾಲದಲ್ಲಿ ಊಡಿದರೆ ಎಷ್ಟು ಚೆನ್ನ ಅಲ್ಲವೇ? ಆದ್ದರಿಂದ ಅಂಥಾ ಒಂದು ತಂತ್ರಾಂಶದ ಅಗತ್ಯ ಇಂದು ಎದ್ದು ಕಾಣುತ್ತಿದೆ.

ಶನಿವಾರ, ಆಗಸ್ಟ್ 14, 2010

ಲತೀನ ಕನ್ನಡ ನಿಘಂಟು

೧೯೮೭ರ ಮಾರ್ಚ್ ತಿಂಗಳ ಒಂದು ದಿನ. ಮಲ್ಲೇಶ್ವರದ ಆಟದ ಮೈದಾನದಲ್ಲಿ ಬೆಂಗಳೂರು ಬುಕ್ ಫೇರ್ ಎಂಬ ಮೇಳ ನಡೆದಿತ್ತು. ನಾನು ಸುಮ್ಮನೇ ಕುತೂಹಲಕ್ಕಾಗಿ ಎಂದು ಅಲ್ಲಿಗೆ ತೆರಳಿದ್ದವನು ಕಣ್ಣಾಡಿಸುತ್ತಿರುವಾಗ ನವದೆಹಲಿಯ ಏಶಿಯನ್ ಎಜುಕೇಷನಲ್ ಸರ್ವಿಸಸ್ ಎಂಬ ಹೆಸರಿನ ಒಂದು ಪುಸ್ತಕ ಮಳಿಗೆಯಲ್ಲಿ ಕನ್ನಡ ಶೀರ್ಷಿಕೆಯ ಪುಸ್ತಕಗಳನ್ನು ಕಂಡು ಸೋಜಿಗದಿಂದ ಒಳಹೊಕ್ಕೆ. ಬುಚರ್ ಎಂಬುವನು ಸಂಪಾದಿಸಿದ್ದ ಕನ್ನಡ ಇಂಗ್ಲಿಷು ನಿಘಂಟುವನ್ನು ತಿರುವುತ್ತಿದ್ದೆ. ಅಂಗಡಿಯವನು ಪುಸ್ತಕಗಳನ್ನು ಕಟ್ಟಿಡುವುದರಲ್ಲಿ ಮಗ್ನನಾಗಿದ್ದ. ಏಕೆಂದರೆ ಅಂದೇ ಪುಸ್ತಕ ಪ್ರದರ್ಶನದ ಕೊನೆಯ ದಿನ ಹಾಗೂ ಮುಕ್ತಾಯದ ವೇಳೆಯೂ ಸಮೀಪಿಸಿತ್ತು. ನನಗೇನೋ ಆ ಪುಸ್ತಕವನ್ನು ಕೊಳ್ಳುವಾಸೆ ಆದರೆ ಅದರ ಮುಖಬೆಲೆ ಇಪ್ಪತ್ತೈದು ರೂಪಾಯಿ. ನನ್ನ ಜೇಬಿನಲ್ಲಿದ್ದದ್ದು ಬರೇ ಇಪ್ಪತ್ತು ರೂಪಾಯಿ. ಅಂಗಡಿಯವನಿಗೆ ಅರ್ಥವಾಯಿತೇನೋ, ಆತ ಮುಗುಳ್ನಕ್ಕು ನಿಮ್ಮಲ್ಲೆಷ್ಟಿದೆಯೋ ಅಷ್ಟೇ ಕೊಡಿ ಸಾಕು ಎಂದ. ಸಂಕೋಚದಿಂದ ಇಪ್ಪತ್ತು ರೂಪಾಯಿ ಕೊಟ್ಟೆ. ಆತ ಸಂತೋಷದಿಂದ ಬಿಲ್ ಬರೆದು ಹರುಕು ಮುರುಕು ಇಂಗ್ಲಿಷಿನಲ್ಲಿ ಏನೇನೋ ಹೇಳಿದೆ. ಹಣದ ಮೌಲ್ಯಕ್ಕಿಂತಲೂ ಪುಸ್ತಕ ಕೊಳ್ಳಬೇಕೆನ್ನುವ ಮನಸ್ಸು ಮುಖ್ಯ ಎಂದು ಹೇಳಿದನೆಂದು ನಾನು ಅರ್ಥೈಸಿಕೊಂಡು ತಲೆದೂಗಿದೆ. ಏಕೆಂದರೆ ನನ್ನ ಇಂಗ್ಲಿಷು ಅವನದಕ್ಕಿಂತಲೂ ಮೇಲ್ಮಟ್ಟದ್ದಾಗಿರಲಿಲ್ಲ ಎಂದು ಎದೆ ಮುಟ್ಟಿ ಹೇಳುತ್ತೇನೆ.

ಆ ಪುಸ್ತಕ ಕೆಲ ದಿನಗಳವರೆಗೆ ನನ್ನನ್ನು ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿತ್ತು. ಕಿಟೆಲರ ಕೃತಿಯನ್ನಾಧರಿಸಿದ ಸಂಗ್ರಹ ರೂಪದ ಪದಕೋಶವದು. ನಾವು ನಿತ್ಯವೂ ಬಳಸುವ ಕನ್ನಡ ಪದಗಳ ಮೂಲ ನಿಷ್ಪನ್ನಗಳ ಸೂಚಿಯೊಂದಿಗೆ ಇದ್ದ ಆ ಪದಸಂಗ್ರಹಕ್ಕೆ ಮಾರುಹೋದೆ. ಕನ್ನಡದಲ್ಲಿ ಯೋಚಿಸಿ ಇಂಗಲೀಸು ಪದಪ್ರಯೋಗ ಮಾಡುವ ನನ್ನಂಥವರ ಪದಸಂಪದವನ್ನು ಹೆಚ್ಚಿಸಲು ಅದು ಬಲು ಒಳ್ಳೆಯ ಪುಸ್ತಕ.

ಅದು ಸರಿ ಕನ್ನಡದ ಬಗ್ಗೆ ಕೆಲಸ ಮಾಡಿದ ಕ್ರೈಸ್ತ ಮಿಷನರಿಗಳೆಲ್ಲ ಕಿಟೆಲ್ ರೈಸ್ ಫ್ಲೀಟ್ ಮೊಗ್ಲಿಂಗ್ ಮುಂತಾದ ಪ್ರೊಟೆಸ್ಟಾಂಟರೇ. ಹಾಗಿದ್ದರೆ ಕಥೋಲಿಕ ಮಿಷನರಿಗಳು ಕನ್ನಡದಲ್ಲಿ ಏನೂ ಮಾಡಲೇ ಇಲ್ಲವೇ? ಈ ಪ್ರಶ್ನೆಗೆ ಉತ್ತರ ಸ್ವಲ್ಪ ಜಟಿಲವಾದದ್ದು. ಏಕೆಂದರೆ ಪ್ರೊಟೆಸ್ಟೆಂಟರ ಕೃತಿಗಳು ಪ್ರಾಪಂಚಿಕ ಬಳಕೆಗೆ ತೆರೆದಿಟ್ಟುಕೊಂಡಿವೆಯಾದರೆ ಕಥೋಲಿಕರವು ಅವರ ಮಠಗಳ ಆರ್ಕೈವುಗಳಲ್ಲಿ ಸಂರಕ್ಷಿತವಾಗಿ ಲೋಕದ ಕಣ್ಣಿಗೆ ಮರೆಯಾಗಿವೆ. ರೋಮಿನ ಪ್ರಖ್ಯಾತ ಗ್ರೆಗರಿಯನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದರಿಂದಲೇ ಅಲ್ಲವೇ ಸ್ವಾಮಿ ಅಂತಪ್ಪನವರಿಗೆ ೧೭ನೇ ಶತಮಾನದಲ್ಲಿ ಜೆಸ್ವಿತರು ನಮ್ಮ ನಾಡಿನ ಆಗುಹೋಗುಗಳ ಬಗ್ಗೆ ಬರೆದ ಅಮೂಲ್ಯ ಪತ್ರಗಳು ಕಣ್ಣಿಗೆ ಬಿದ್ದದ್ದು? ಇಂದು ಆ ಜೆಸ್ವಿತ್ ಪತ್ರಗಳ ಬೆಳಕಲ್ಲಿ ಕನ್ನಡ ನಾಡಿನ ಇತಿಹಾಸವನ್ನು ಪುನರ್ ರಚನೆ ಮಾಡಬಹುದಾಗಿದೆ.

ಬೆಂಗಳೂರಿನ ಪ್ರಾಚೀನ ಚರ್ಚುಗಳಲ್ಲೊಂದಾದ ಸಂತ ಮೇರಿ ಬೆಸಿಲಿಕಾದಲ್ಲಿನ ಗುರುವರ‍್ಯರಾದ ಸ್ವಾಮಿ ಅರುಳಪ್ಪನವರ ಬಳಿ ಈ ವಿಷಯಗಳನ್ನು ಕುರಿತು ಚರ್ಚಿಸುತ್ತಿದ್ದಾಗ ಅವರು ತಮ್ಮ ಬಳಿಯಿದ್ದ ಒಂದು ಅಮೂಲ್ಯ ಗ್ರಂಥವನ್ನು ನನಗೆ ತೋರಿಸಿದರು. ಅದರ ತಲೆಬರಹವನ್ನು Dictionarium Latino Canarense (ದಿಕ್ತಿಯನೇರಿಯುಂ ಲತೀನೊ ಕನಾರೆನ್) ಎಂದು ಬರೆಯಲಾಗಿತ್ತು. ಅಂದರೆ ಅದೊಂದು ಲತೀನ ಕನ್ನಡ ಪದಕೋಶ. ಎಲ್ಲೂ ಉಪಲಭ್ದವಿಲ್ಲದ ಅಪರೂಪದ ಪುಸ್ತಕ ಅದು. ಅದನ್ನು ಮರುಪ್ರಕಟಿಸಿದರೆ ಹೇಗೆ ಎಂದು ಅರುಳಪ್ಪನವರು ಕೇಳಿದರು. ಅದರ ಬಗ್ಗೆ ಮಾನ್ಯ ಜಿ ವೆಂಟಸುಬ್ಬಯ್ಯವರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅವರು ಆ ಪುಸ್ತಕವನ್ನು ಹಿಂದೊಮ್ಮೆ ನೋಡಿದ್ದೇನೆ, ಆದರೆ ಅದರ ಮರುಪ್ರಕಟನೆಯಿಂದ ಯಾರಿಗೂ ಪ್ರಯೋಜನವಿಲ್ಲ, ಆ ಪುಸ್ತಕವನ್ನು ಪ್ರದರ್ಶನ ಮಳಿಗೆಯಲ್ಲಿ ಇಡಲಷ್ಟೇ ಯೋಗ್ಯ ಎಂದರು. ಅರುಳಪ್ಪನವರಿಗೆ ನಿರಾಶೆಯಾಯತೇನೋ? ಅವರಿಗೆ ಹೇಳಿದೆ ಇಂದು ಲತೀನ ಕನ್ನಡ ನಿಘಂಟು ಬಳಕೆಗೆ ಬರುವುದೋ ಇಲ್ಲವೋ ಅದು ಮುಖ್ಯವಲ್ಲ, ಇಂತದೊಂದು ಚರಿತ್ರಾರ್ಹ ಗ್ರಂಥವೊಂದು ಕಥೋಲಿಕರಿಂದ ರಚಿತವಾಗಿತ್ತು ಎಂಬುದನ್ನು ಪ್ರಪಂಚಕ್ಕೆ ತಿಳಿಯಪಡಿಸುವುದು ಮುಖ್ಯ ಎಂದು. ಹಣಕಾಸಿನ ನೆರವಿನ ಭರವಸೆ ನೀಡಿ ಅವರು ಆ ಅಮೂ ಗ್ರಂಥದ ಮರುಪ್ರಕಟನೆಯ ಜವಾಬ್ದಾರಿಯನ್ನು ನನಗೊಪ್ಪಿಸಿದರು.

ಸುಮಾರು ೧೨೦೦ ಪುಟಗಳ ಆ ಪುಸ್ತಕವನ್ನು ಬರೆದವರಾರು ಎಂಬುದನ್ನು ಎಲ್ಲಿಯೂ ಹೇಳಿರಲಿಲ್ಲ. ಮುಖಪುಟದಲ್ಲಿ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೇತುಸ್ ಅಪೊಸ್ತೊಲಿಕುಸ್ ಮಯಿಸ್ಸುರ್ ಎಂದಷ್ಟೇ ಬರೆಯಲಾಗಿತ್ತು. ಅದನ್ನು ಒರೆಗೆ ಹಚ್ಚಿದಾಗ AUCTORE = Author ಲೇಖಕ, RR = Right Reverend ಪೂಜ್ಯ, EPISCOPO JASSENSI = Bishop of Jasso ಯಸೊ ಪ್ರಾಂತ್ಯದ ಧರ್ಮಾಧಿಕಾರಿ, V. A. MAISSURENSI = Apostolic Vicar to Mysore ಮೈಸೂರು ಪ್ರಾಂತ್ಯಕ್ಕೆ ನಿಯುಕ್ತರಾದ ಗುರುಸ್ವಾಮಿಗಳು ಎಂಬುದಾಗಿ ಬಿಡಿಸಿ ಅದು ಮತ್ಯಾರೂ ಅಲ್ಲದೆ ಬಿಷಪ್ ಎತಿಯೇನ್ ಲೂಯಿ ಶಾರ್ಬೊನೊ ಎಂಬ ತೀರ್ಮಾನಕ್ಕೆ ಬರಲಾಯಿತು.

ಇನ್ನು ಅದರ ಮೊದಲ ಪುಟಗಳಲ್ಲಿ ಮುದ್ರಿತವಾಗಿರುವ ಪ್ರಸ್ತಾವನೆಯು ಲತೀನ ಭಾಷೆಯಲ್ಲಿದ್ದು ಅದನ್ನು ತರ್ಜುಮೆ ಮಾಡುವವರು ಯಾರೂ ದೊರಕಲಿಲ್ಲವಾಗಿ ಅಂತರ್ಜಾಲದ ಮರೆಹೊಕ್ಕೆ. ಆದರೆ ದುರದೃಷ್ಟವೆಂದರೆ ಅಂತರ್ಜಾಲದಲ್ಲಿ ಸ್ಪ್ಯಾನಿಶ್, ಇಟಾಲಿಯನ್, ಫ್ರೆಂಚ್, ಜರ್ಮನ್, ಪೋರ್ಚುಗೀಸ್, ಜಪಾನೀ ಮುಂತಾದ ಹಲವಾರು ಭಾಷೆಗಳಿಗೆ ತರ್ಜುಮೆಯ ಸೌಲಭ್ಯವಿದ್ದರೂ ಲತೀನ ಭಾಷೆಯಿಂದ ತರ್ಜುಮೆ ಮಾಡಲು ಯಾವ ತಂತ್ರಾಂಶವೂ ಸಿಕ್ಕಲಿಲ್ಲ. ಕೆಲ ಅಂತರ್ಜಾಲ ತಾಣಗಳು ಲತೀನದ ಪಠ್ಯವನ್ನು ಕಳಿಸಿ, ಪ್ರಯತ್ನಿಸುತ್ತೇವೆ ಎಂದುದರಿಂದ OCR ತಂತ್ರಜ್ಞಾನ ಬಳಸಿ ಪಠ್ಯವನ್ನು ಅಂತರ್ಜಾಲಕ್ಕೆ ಊಡಿದೆ. ಆದರೆ ಫಲಿತಾಂಶ ಶೂನ್ಯವಾಗಿತ್ತು.

ಆ ವೇಳೆಗೆ ಫಾದರ್ ದೇವದತ್ತ ಕಾಮತರ ಪ್ರಸ್ತಾಪ ಮಾಡಿದರು ಸ್ವಾಮಿ ಅರುಳಪ್ಪನವರು. ಈ ಫಾದರ್ ದೇವದತ್ತರು ಸಂಸ್ಕೃತ ವಿದ್ವಾಂಸರಾಗಿದ್ದು ಮಧ್ವಾಚಾರ್ಯರ ಕೃತಿಗಳ ಬಗ್ಗೆ ಆಳ ಸಂಶೋಧನೆ ನಡೆಸಿದ್ದಾರೆ. A Study on the Doctrines of Madhvacharya ಅನ್ನೋದು ಅವರ ಸಂಶೋಧನಾ ಪ್ರಬಂಧವಾಗಿದೆ. ಅವರು ಲತೀನದ ಪಂಡಿತರೂ ಆಗಿದ್ದರಿಂದ ನಮ್ಮ ಕೆಲಸ ಸುಲಭವಾಯಿತು. ಒಂದೇ ದಿನದಲ್ಲಿ ಅವರು ಲತೀನ ಪ್ರಸ್ತಾವನೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟರು. ಆ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ.

ಇಂದು ನಾವು ಅದನ್ನೊಪ್ಪಲು ಸಾಧ್ಯವಿಲ್ಲವಾದರೂ ಶಾರ್ಬೊನೊ ಅವರ ಸಮಕಾಲೀನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಅವರ ತಿಳುವಳಿಕೆಯ ನೆಲೆಯನ್ನು ಗುರುತಿಸಬಹುದಾಗಿದೆ. ಏಕೆಂದರೆ ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ಅಂದಿನ ಸಂದರ್ಭದಲ್ಲಿ ಮುದ್ರಿತ ಪುಸ್ತಕಗಳ ಕೊರತೆ ಹಾಗೂ ಎಲ್ಲೆಡೆಯೂ ಅವು ಸಿಗದಿದ್ದ ಕಾರಣದಿಂದ ಶಾರ್ಬೊನೊ ಅವರ ಹೇಳಿಕೆಯನ್ನು ನಾವು ಅನುಕಂಪದಿಂದ ನೋಡಬೇಕಾಗುತ್ತದೆ.

ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.

ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಹದಿನೈದು ವರ್ಷಗಳ ಕಾಲ ಅವರು ಜನಸಾಮಾನ್ಯರ ಒಡನಾಟದಲ್ಲಿ ಕೇಳಿದ ಮಾತುಗಳನ್ನು ಟಿಪ್ಪಣಿ ಮಾಡಿಟ್ಟುಕೊಂಡು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಿದ್ದಾರೆ. ಏಕೆಂದರೆ ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು. ಅಲ್ಲದೆ ನಮ್ಮ ದೇಶಕ್ಕೆ ಭೇಟಿ ನೀಡುತ್ತಿದ್ದ ಐರೋಪ್ಯ ಕಥೋಲಿಕ ಮಿಷನರಿಗಳು ಯಾವ ಮಾತೃಭಾಷೆಯವರೇ ಆಗಿದ್ದರೂ ಲತೀನ ಭಾಷೆಯನ್ನು ಕಲಿತಿರುತ್ತಿದ್ದರು.

ಶಾರ್ಬೊನೊ ಅವರ ಈ ಪುಸ್ತಕದಲ್ಲಿನ ಮೊದಲ ನಮೂದು ಲತೀನ ಆಗಿದ್ದು ಎರಡನೇ ನಮೂದು ಕನ್ನಡವಾಗಿದೆ. ಉದಾಹರಣೆಗೆ ನೋಡುವುದಾದರೆ ab ostio jacens = ಬಾಗಲಿಗೆ ಮುಂಚೆ, ಯೆದುರಾಗಿ ಬಿದ್ದಿರುವ, liberis impuberibus = ಮಕ್ಕಳ ಸಂಣ ಪ್ರಾಯದೊಳು, ಸಂಣ ಪ್ರಾಯದ ಕಾಲದಲ್ಲಿ.

ಇವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆ, ಅದರಲ್ಲಿ ರ ಒತ್ತಕ್ಷರ, ತ ಒತ್ತಕ್ಷರಗಳು, ಪ ಮತ್ತು ಸ ದೀರ್ಘಾಕ್ಷರಗಳು ಇಂದಿಗೂ ತೆಲುಗು ಲಿಪಿಯಲ್ಲಿ ಉಳಿದುಕೊಂಡಿವೆ. ಅಲ್ಲದೆ ಇವರ ಪುಸ್ತಕದಲ್ಲಿ ಅರ್ಕವೊತ್ತು ಕಾಣುವುದಿಲ್ಲ.

ಈ ಪುಸ್ತಕವನ್ನು ಅವಲೋಕಿಸಿದ ನುಡಿಯರಿಗ ಡಾ. ಕೆ ವಿ ನಾರಾಯಣರು ಬಹು ಸಂತೋಷಪಟ್ಟು ಒಂದು ವಿದ್ವತ್ ಲೇಖನ ಬರೆದುಕೊಟ್ಟರು. ಅಲ್ಲದೆ ಈ ಪುಸ್ತಕದ ಮರುಪ್ರಕಟನೆಯ ಸುದ್ದಿ ಕೇಳಿ ಇತರ ನುಡಿಯರಿಗರಾದ ಕನ್ನಡ ವಿವಿಯ ಡಾ. ಮುರಿಗೆಪ್ಪನವರು, ರಂಗಾಯಣದ ಲಿಂಗದೇವರು ಹಳೆಮನೆಯವರು, ಧಾರವಾಡದ ಸಂಗಮೇಶ ಸವದತ್ತಿಮಠ ಅವರು ಬಲು ಸಂಭ್ರಮಿಸಿದರು.

ಹೀಗೆ ಅಂತೂ ಇಂತೂ ಈ ಲತೀನ ಕನ್ನಡ ನಿಘಂಟು ಮರುಮುದ್ರಿತವಾಗಿ ೨೦೧೦ ಆಗಸ್ಟ್ ೮ ರಂದು ಭಾನುವಾರ ಬೆಳಗ್ಗೆ
ಹತ್ತೂವರೆ ಗಂಟೆಗೆ ಕನ್ನಡಭವನದ ನಯನ ಸಭಾಂಗಣದಲ್ಲಿ ಲೋಕಾರ್ಪಿತವಾಯಿತು.
http://www.prajavani.net/Content/Aug82010/books20100807198321.asp