ಭಾನುವಾರ, ಡಿಸೆಂಬರ್ 26, 2010

ಕ್ರಿಸ್ಮಸ್ ರಾತ್ರಿ

ಕ್ರಿಸ್ಮಸ್ ಸಂದರ್ಭದ ಆ ಸಂಭ್ರಮವೇ ಅನುಪಮ. ಚಳಿಯ ಚುಮುಚುಮು ರಾತ್ರಿಯಲ್ಲಿನ ನಕ್ಷತ್ರಗಳ ಒಡ್ಡೋಲಗದಲ್ಲಿ ಇಬ್ಬನಿಯ ಮಸುಕಾದ ತೆರೆಯ ನಡುವೆ ಮೋಂಬತ್ತಿಗಳು ಜಗಮಗಿಸುತ್ತಿವೆ. ಜರತಾರಿ ರೇಷ್ಮೆಯ ಸರಪರ ಸದ್ದು ಕಿಲಕಿಲ ನಗುವಿನೊಂದಿಗೆ ಜುಗಲಬಂದಿ ಹಾಡುತ್ತಿದೆ. ನುಣುಪು ಹಸ್ತಗಳ ನಡುವೆ ಬೆಚ್ಚನೆಯ ಶುಭಾಶಯಗಳು ತವಕದಿಂದ ಕುಣಿಯುತ್ತಿವೆ. ಕುತ್ತಿಗೆಯ ಹಿಂಭಾಗದಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣಗೆ ನಡುಕ ಹುಟ್ಟಿಸಿ ತನ್ನಿರುವನ್ನು ಪ್ರಕಟಪಡಿಸುವ ಆ ಚಳಿ ಮರುಕ್ಷಣವೇ ಮುದುಡಿಕೊಂಡು ಮೂಲೆ ಹಿಡಿಯುತ್ತಿದೆ. ನೂರಾರು ಕಂಠಗಳು ಚರ್ಚಿನ ಆ ಕಲ್ಲುಗೋಡೆಗಳ ನಡುವೆ ಕ್ಯಾರಲ್ಲುಗಳನ್ನು ಎದೆತುಂಬಿ ಹಾಡುತ್ತಿದ್ದರೆ ಆ ಬಿಸಿಯುಸಿರುಗಳ ಎದುರಲ್ಲಿ ಬೃಹತ್ ಬಾಗಿಲು ಕಿಟಕಿಗಳ ನಡುವಿನಿಂದ ತೂರಿಬರುವ ಹಿಮಗಾಳಿಯೂ ಸೋತು ಶರಣಾಗುತ್ತಿದೆ.
ನನ್ನ ಬಾಲ್ಯಕಾಲದಿಂದಲೂ ನೋಡುತ್ತಿದ್ದೇನೆ, ಅಲ್ಲ ಕೇಳುತ್ತಿದ್ದೇನೆ, ಕ್ರಿಸ್ಮಸ್ ಗೀತೆಗಳ ಆ ಸೊಬಗು ಆ ಸೊಗಡು ಆ ಸೌಂದರ್ಯ ನವನವೋನ್ಮೇಷಶಾಲಿನಿಯಾಗಿ ಚಿರಯೌವನೆಯಾಗಿಯೇ ಉಳಿದುಕೊಂಡಿದೆ. ಜನಿಸಿಹನಾರು ಗೋದಲಿಯೊಳು ವಿನಯದ ಶಿಶುವಾಗಿ, ಜನರೇ ಸಂತೋಷಿಸಿರಿ ಯೇಸುಬಾಲರು ಹುಟ್ಟಿದರು, ಭಗವಾನ್ ಕ್ರಿಸ್ತರು ಹುಟ್ಟಿದ ಸುದಿನ ಜಗದೊಳು ಮಹದಾನಂದದ ದಿನ, ಸುಂದರ ರಕ್ಷಕನೇ ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ, ಮಂಗಳಶ್ರೀ ರಾತ್ರಿಯಲಿ ಬೆತ್ಲೆಹೇಂ ಗ್ರಾಮದಿ . . . ಹೀಗೆ ಈ ಕ್ರಿಸ್ಮಸ್ ಗೀತೆಗಳ ಸೊಗಸೇ ಅನನ್ಯ. ಅದರಲ್ಲಿ ಹೃದಯಗಳನ್ನು ಬೆಸೆಯುವ ಸುಮಧುರ ನಾದವಿದೆ, ಅನುಪಮ ಕಾಂತಿಯಿದೆ, ಪ್ರೀತಿಶಾಂತಿಯಿದೆ.
ಕ್ರಿಸ್ತಜಯಂತಿಗೆ ನಾಲ್ವತ್ತು ದಿನಗಳ ಮುಂಚಿನಿಂದಲೇ ಆಗಮನಕಾಲ ಶುರುವಾಗುತ್ತದೆ. ಕ್ರಿಸ್ತನನ್ನು ಎದುರುಗೊಳ್ಳುವ ನಿರೀಕ್ಷೆಯ ಈ ಕಾಲವೆಲ್ಲ ಸುಣ್ಣ ಬಣ್ಣ ಅಲಂಕಾರ, ಹೊಸಬಟ್ಟೆ ಖರೀದಿ, ಉಡುಗರೆಗಳ ಆಯ್ಕೆ, ಶುಭಾಶಯಪತ್ರಗಳ ಸಿದ್ಧತೆ, ಹಳೆಯ ಪಳೆಯ ವಸ್ತುಗಳ ವಸ್ತ್ರಗಳ ವಿಲೇವಾರಿ, ಕ್ಯಾರಲ್ಲುಗಳ ಗಾನ, ಕರ್ಚಿಕಾಯಿ ಕಜ್ಜಾಯ ಕಲ್ಕಲ್ಸ್ ಎಂಬ ವಿಶಿಷ್ಟ ತಿಂಡಿಗಳ ತಯಾರಿ, ಇವೆಲ್ಲವುಗಳ ಭರಾಟೆಯಲ್ಲಿ ಅತಿ ಶೀಘ್ರವಾಗಿ ಕಳೆಯುತ್ತದೆ. ಹೀಗೆ ಕ್ರಿಸ್‌ಮಸ್ಸು ನಿಜವಾಗಿಯೂ ಬಲು ನಿರೀಕ್ಷೆಯ ಹಬ್ಬವೇ ಸರಿ.
ಹಾಗೆ ನೋಡಿದರೆ ಈ ಕ್ರಿಸ್ಮಸ್ಸು ಮಕ್ಕಳ ಹಬ್ಬ ಎನ್ನಬಹುದೇನೋ? ಏಕೆಂದರೆ ಈ ದಿನಗಳಲ್ಲಿ ಮಕ್ಕಳ ಬಗ್ಗೆ ಎಂದಿಗಿಂತ ಹೆಚ್ಚು ಕಾಳಜಿ. ಅವರೆಷ್ಟು ಕುಣಿದು ಕುಪ್ಪಳಿಸಿದರೂ ಕೇಳುವವರಿಲ್ಲ. ಅವರಿಗೆ ಬೇಕೆನಿಸಿದ ಉಡುಗರೆ, ಬೇಕೆನಿಸಿದ ಬಟ್ಟೆಬರೆ, ತಿಂಡಿ ತಿನಿಸು, ಆಟೋಟ ಸುತ್ತಾಟ, ಸಂಭ್ರಮ ಸಡಗರ . . ನೋಡ್ತಾ ನೋಡ್ತಾ ಇದ್ರೆ ವಯಸ್ಕರೂ ಮಕ್ಕಳಲ್ಲಿ ಮಕ್ಕಳಾಗಿ ಬಿಡುವುದರಲ್ಲಿ ಸಂದೇಹವೇ ಇಲ್ಲ. ಮಕ್ಕಳ ಮನದಿಂಗಿತವನ್ನು ತಿಳಿದುಕೊಂಡು ಸಾಂಟಾಕ್ಲಾಸ್ ಎಂಬ ಕಾಲ್ಪನಿಕ ವ್ಯಕ್ತಿಯ ನೆವದಲ್ಲಿ ಇವರೇ ಉಡುಗರೆ ತಂದು ಮಕ್ಕಳ ಮನ ಗೆಲ್ಲುವುದು, ಆ ಮಕ್ಕಳು ಮುಂದೆ ದೊಡ್ಡವರಾಗಿ ಅವರ ಮಕ್ಕಳಿಗೆ ಈ ಪವಿತ್ರವಾದ ಗುಟ್ಟನ್ನು ಗುಟ್ಟಾಗಿಯೇ ದಾಟಿಸುವುದು ಇವೆಲ್ಲ ಕ್ರಿಸ್‌ಮಸ್ ಹಬ್ಬವು ದಯಪಾಲಿಸಿದ ಪ್ರೀತಿಯ ಕೊಡುಗೆಯೇ ಅಲ್ಲವೇ?
ಡಿಸೆಂಬರ್ ತಿಂಗಳಿನ ಇಪ್ಪತ್ನಾಲ್ಕನೇ ದಿನದ ಮೈ ನಡುಗಿಸುವ ಚಳಿಯಲ್ಲಿ ಅದೂ ಮಧ್ಯರಾತ್ರಿ ಸಮೀಪಿಸುತ್ತಿದ್ದಂತೆ ಕ್ರಿಸ್‌ಮಸ್ ಸಂಭ್ರಮ ಗರಿಗೆದರುತ್ತದೆ. ಪ್ರಾಚೀನ ರೋಮನ್ ಚಕ್ರಾಧಿಪತ್ಯದ ಜೂಲಿಯನ್ ಕ್ಯಾಲೆಂಡರಿನ ಪ್ರಕಾರ ಡಿಸೆಂಬರ್ ಇಪ್ಪತ್ನಾಲ್ಕರ ನಡುರಾತ್ರಿ ಸೂರ್ಯನು ಮಕರ ಸಂಕ್ರಾಂತಿಯನ್ನು ದಾಟುವ ಈ ಸಂದರ್ಭ ಅವರಿಗೆಲ್ಲ ಸುಗ್ಗಿಯ ಹಬ್ಬ ಮಾತ್ರವಲ್ಲ ಕತ್ತಲಿನಿಂದ ಬೆಳಕಿನಡೆಗೆ ಸಾಗುವ ಬೆಳಕಿನ ಹಬ್ಬವಾಗಿತ್ತು. ಪುರಾತನ ರೋಮನರು ಸೂರ್ಯನ ಜಾಗದಲ್ಲಿ ಯೇಸುಕ್ರಿಸ್ತನನ್ನು ಅಲಂಕರಿಸಿ ಕ್ರಿಸ್‌ಮಸ್ ಆಚರಣೆಗೆ ನಾಂದಿ ಹಾಡಿದರು. ಅದರಿಂದಲೇ ಕ್ರಿಸ್ಮಸ್ ದಿನದ ಹಿಂದಿನ ನಡುರಾತ್ರಿಯ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಇದೆ.
ಅಂದಿನ ರಾತ್ರಿ ಹನ್ನೊಂದು ಗಂಟೆಯ ಸುಮಾರಿಗೆಲ್ಲ ಎಲ್ಲೆಲ್ಲಿಂದ ಜನ ಬಂದು ಚರ್ಚಿನೊಳಗಡೆ ತಮ್ಮ ಜಾಗ ಹಿಡಿದುಕೊಳ್ಳುತ್ತಾರೆ. ಗಾನವೃಂದದವರು ಒಂದಾದ ಮೇಲೊಂದರಂತೆ ಕ್ರಿಸ್ಮಸ್ ಹಾಡುಗಳನ್ನು ಹಾಡುತ್ತಾ ಕ್ರಿಸ್ತನಿರೀಕ್ಷೆಗೆ ಹೊಳಪು ನೀಡುತ್ತಾರೆ. ಅವೆಲ್ಲ ಗೊತ್ತಿರುವ ಹಾಡುಗಳೇ. ಪ್ರತಿವರ್ಷ ಇದೇ ಸಮಯಕ್ಕೆ ನಾವು ಹಾಡಿದ್ದೇ ಅಲ್ಲವೇ? ಆದರೂ ಇಂದು ಅವು ಹೊಚ್ಚ ಹೊಸದರಂತೆ ನಿತ್ಯನಾವೀನ್ಯತೆಯಿಂದ ಕಂಗೊಳಿಸುತ್ತಿವೆ ಅಲ್ಲ ಇನಿದಾಗಿ ಕೇಳಿಸುತ್ತಿವೆ. ಆ ಹಾಡುಗಳಲ್ಲಿ ಅಪಾರ ಅರ್ಥವಿದೆ, ಅರ್ಥಕ್ಕೂ ಮಿಗಿಲಾದ ಸಂತಸವಿದೆ. ಹೃದಯವನರಳಿಸುವ ಮನ ಪ್ರಫುಲ್ಲಗೊಳಿಸುವ ತವಕವಿದೆ. 'ಬಂದಿಹುದು ಶುಭದಿನವು ತಂದಿಹುದು ಸಂತಸವ ಏನಾನಂದ ಏನಾನಂದ' ಎಂದು ಕೇಳಿಬರುವ ಆ ಗಾನವೃಂದದ ಮಕ್ಕಳ ಹಾಡು ನಮ್ಮ ಹೃದಯದ ಹಾಡಾಗಿ ಕುಣಿಯುತ್ತದೆ. ಚರ್ಚಿನೊಳಗಿನ ಎಲ್ಲರ ಎದೆಬಡಿತವೂ ಗಾನವೃಂದದ ರಾಗ ತಾನ ಪಲ್ಲವಿಗಳಿಗೆ ಮಿಡಿಯುತ್ತಾ ಭಕ್ತಿರಸದ ಹೊನಲಿನೊಂದಿಗೆ ತೃಪ್ತಿರಸದ ಸೊಬಗಿನಲ್ಲಿ ಮೀಯುತ್ತದೆ.
ಗಂಟೆ ಹನ್ನೆರಡಾಗುತ್ತಿದ್ದಂತೆ ಬಂಗಾರದ ಮೇಲುವಸ್ತ್ರ ಧರಿಸಿದ ಗುರುವರ್ಯರು ಶಿಶುಯೇಸುವಿನ ಸ್ವರೂಪವನ್ನು ಕರಗಳಲ್ಲಿ ಎತ್ತಿಹಿಡಿದು 'ಮಹೋನ್ನತದಲ್ಲಿ ದೇವರಿಗೆ ಮಹಿಮೆ ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ' ಎಂಬ ದೂತಗಾನವನ್ನು ಮೇರುಸ್ವರದಲ್ಲಿ ಹಾಡುತ್ತಾರೆ. ಚರ್ಚಿನೊಳಗಣ ಭಕ್ತಾದಿಗಳೆಲ್ಲ ಆ ದನಿಗೆ ದನಿಗೂಡಿಸಿ ಎದೆ ತುಂಬಿ ಹಾಡುತ್ತಾ ದೈವ ಭಜನೆ ಮಾಡುತ್ತಾರೆ. ಅದರೊಂದಿಗೆ ಚರ್ಚಿನ ಎಲ್ಲ ದೀಪಗಳೂ ಜಗಮಗಿಸುತ್ತವೆ. ಎಲ್ಲ ಗಂಟೆಗಳೂ ತಾರಸ್ತಾಯಿಯಲ್ಲಿ ಮೊಳಗುತ್ತವೆ. ಸಂತೋಷದ ನಗೆಯ ಹೂವರಳಿ ಒಡೆದ ಮನಗಳು ಬೆಸೆಯುತ್ತವೆ, ವೈಮನಸ್ಯ ಮರೆತುಹೋಗುತ್ತದೆ, ಅಸಹನೆಯ ಉರಿ ಶಾಂತವಾಗುತ್ತದೆ, ಮುಖವಾಡಗಳು ಕಳಚಿಹೋಗುತ್ತವೆ. ಕೈಕುಲುಕುವಿಕೆಯ ಶುಭಾಶಯಗಳು ಹೃದಯದ ಮಾತಾಗುತ್ತವೆ. ದೇವಾಲಯದ ಗಂಟೆ ಇನ್ನೂ ಮೊಳಗುತ್ತಿರುವಂತೆ ಎಸ್ಸೆಮ್ಮೆಸ್ಸುಗಳು ಜಗದ ಉದ್ದಗಲಕ್ಕೂ ಸರಿದಾಡುತ್ತವೆ.
ಶಾಂತಿ ಪ್ರೀತಿ ದ್ಯೋತಕವಾದ ಕ್ರಿಸ್ಮಸ್ಸು ಮತ್ತೆ ಮತ್ತೆ ಬರುತಿರಲಿ, ಜಗದ ದ್ವೇಷವೆಲ್ಲ ತೊಡೆದು ಬಂದೂಕಿನ ಮೇಲೆ ಮಲ್ಲಿಗೆ 
ಬಳ್ಳಿ ಹಬ್ಬಿ ಸಾಮರಸ್ಯದ ಹೂವರಳಿಸಲಿ.
http://www.prajavani.net/Content/Dec232010/metrothurs20101222218939.asp

ಶುಕ್ರವಾರ, ಡಿಸೆಂಬರ್ 17, 2010

ಹಾರೋಬೆಲೆ ವ್ಯುತ್ಪತ್ತಿ

ಕನಕಪುರ ತಾಲೂಕಿನಲ್ಲಿ ಅರ್ಕಾವತಿ ನದಿ ದಂಡೆಯಲ್ಲಿರುವ ಹಾರೋಬೆಲೆ ಎಂಬ ಗ್ರಾಮವು ನೂರಕ್ಕೆ ನೂರು ಕನ್ನಡ ಮನೆಮಾತಿನ ಕ್ರೈಸ್ತರೇ ನೆಲೆಗೊಂಡಿರುವ ಪುರಾತನ ಊರು. ಈ ಹಾರೋಬೆಲೆ ಎಂಬ ಗ್ರಾಮನಾಮದ ವ್ಯುತ್ಪತ್ತಿಗೆ ತೊಡಗುವಾಗ ಸ್ವಾಮಿ ಅಂತಪ್ಪನವರು ಅದನ್ನು ಇಂಗ್ಲಿಷಿನ horrible ಪದದೊಂದಿಗೆ ತಳುಕು ಹಾಕವುದನ್ನು ಗಮನಿಸಿದ್ದೇವೆ. ಆದರೆ ಎರಡು ಶತಮಾನಗಳ ಮುನ್ನ ಇಂಗ್ಲಿಷರು ಇನ್ನೂ ಇಂಡಿಯಾಕ್ಕೆ ಕಾಲಿಡುವ ಮುನ್ನವೇ ಹಾರೋಬೆಲೆ ಗ್ರಾಮಕ್ಕೆ ಇತಾಲಿಯನ್ ಜೆಸ್ವಿತರ ಪ್ರವೇಶವಾಗಿತ್ತೆನ್ನುವುದನ್ನು ಗಮನಿಸಿರಿ.
ಅಂದು ರಸ್ತೆಗಳಿಲ್ಲದೆ ಗುಡ್ಡ ಬೆಟ್ಟ ಹೊಳೆ ಕಾಡುಗಳಿಂದ ಆವೃತವಾಗಿ ಹೊರಗಿನಿಂದ ದುರ್ಗಮವಾಗಿದ್ದ ಹಾರೋಬೆಲೆಯನ್ನು ಪ್ರವೇಶಿಸುವುದು ಸುಲಭಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಇತಾಲಿಯಾ ಭಾಷೆಯಲ್ಲಿ ಹಾರೋಬೆಲೆಗೆ ಹೋಗುವುದೆಂದರೆ ಅದು orribile ಅನುಭವ (ಭಯಂಕರ ಅನುಭವ) ಎಂಬುದಾಗಿ ಉದ್ಗರಿಸಿರಬೇಕು. ಇತಾಲಿಯಾದ orribile ಎಂಬ ಪದವು ಇಂಗ್ಲಿಷಿನ horrible ಎಂಬ ಪದಕ್ಕೆ ಸಂವಾದಿಯಾಗಿದೆ.
ಹೇಳಿಕೇಳಿ ಈ ಇತಾಲಿಯನ್ ಜೆಸ್ವಿತರು ಕನ್ನಡನಾಡಿಗೆ ಪ್ರವೇಶಿಸಿದ್ದು ೧೬೪೦ ರ ದಶಕದಲ್ಲಿ. ಅಂದರೆ ಕನ್ನಡದ ನುಡಿಗಟ್ಟಿನಲ್ಲಿ ’ಹ’ ಕಾರವು ಇನ್ನೂ ಸಾರ್ವತ್ರಿಕವಾಗಿರದೇ ಇದ್ದ ಕಾಲ. ಆದ್ದರಿಂದ ಹಾರೋಬೆಲೆ ಎಂಬ ಪದಾದಿಯಲ್ಲಿ ’ಹ’ ಕಾರವನ್ನು ಆರೋಪಿಸುವ ಬದಲು ಅಲ್ಲಿ ’ಅ’ ಕಾರವಿತ್ತೆನ್ನುವುದು ಸಮಂಜಸವೆನಿಸುತ್ತದೆ. ಅದು ಬಹುಶಃ ಆರುಬೆಲೆ ಅಥವಾ ಆರೋಬೆಲೆ ಇದ್ದಿರಬಹುದೆಂದು ನನ್ನ ಅನಿಸಿಕೆ. 
ಕನ್ನಡದ ಆಡುಮಾತಿನಲ್ಲಿ ಆರು ಎನ್ನುವುದನ್ನು ಉಳುಮೆ, ಕೃಷಿಗೆ ಸಮಾನಪದವಾಗಿ ಬಳಸಲಾಗುತ್ತದೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿನ ಮೂಲನಿವಾಸಿಗಳು’ ’ಅ’ ಕಾರವನ್ನು’ಹ’ ಕಾರವನ್ನಾಗಿ ಉಚ್ಚರಿಸುವುದು ಸಹಜವಾದ್ದರಿಂದ ’ಆರೋಬೆಲೆ’ಯನ್ನು ಜನ ’ಹಾರೋಬೆಲೆ’ ಎಂದೇ ಕರೆದಿರಬಹುದು.
ಅಲ್ಲದೆ ’ಬೆಲೆ’ ಎಂಬುದು ’ಬೇಲಿ’ ಎಂಬುದರ ಸಂಕ್ಷಿಪ್ತರೂಪವಾಗಿದೆ. ನಮ್ಮಲ್ಲಿ ಮಂಚನಬೆಲೆ, ಸೂಲಿಬೆಲೆ, ಅತ್ತಿಬೆಲೆ ಮುಂತಾದ ಊರುಗಳಿರುವುದನ್ನು ಗಮನಿಸಿರಿ.
ಆಡುವ ಪದಗಳನ್ನು ಬರವಣಿಗೆಯಲ್ಲಿ ಮೂಡಿಸುವಾಗ ಜನ ಸ್ವಯಂ ಪ್ರೇರಣೆಯಿಂದ ಅವಕ್ಕೆ ಶಿಷ್ಟರೂಪವನ್ನು ನೀಡುವ ಪ್ರಯತ್ನ ಮಾಡುತ್ತಾರೆ. ಹಾಗೆ ಮಾಡುವಾಗ ಅವರಿಗೆ ಅರಿವಿಲ್ಲದಂತೆಯೇ ಆಡುಮಾತಿನ ಮೂಲ ಆಶಯಕ್ಕೆ ವ್ಯತಿರಿಕ್ತವಾದ ಅರ್ಥ ಮೂಡುವ ಪದಗಳನ್ನು ಟಂಕಿಸಿರುತ್ತಾರೆ. ಉದಾಹರಣೆಗೆ ’ಕಾಡುಗೋಡಿ’ ಯನ್ನು ತೆಗೆದುಕೊಳ್ಳೋಣ. ಕೆರೆಯು ತುಂಬಿದಾಗ ಅದರ ಸುರಕ್ಷೆಯ ದೃಷ್ಟಿಯಿಂದ ಹೆಚ್ಚುವರಿ ನೀರು ಹರಿದುಹೋಗುವಂತೆ ಒಂದೆಡೆ ಒಡ್ಡು ತೆರೆದಿರುತ್ತಾರೆ. ಅದಕ್ಕೆ ಕೋಡಿ ಎನ್ನುತ್ತಾರೆ. ಆ ಕೋಡಿಯ ಮೂಲಕ ಹರಿವ ನೀರು ಹೊಳೆಯಾಗಿ ನದಿಯಾಗಿ ಹರಿದು ಸಮುದ್ರ ಸೇರುತ್ತದೆ, ಇರಲಿ. ಆ ಕೋಡಿಯು ಕಾಡಿನ ಅಂದರೆ ಸುಡುಗಾಡಿನ ಕಡೆಗಿದ್ದರೆ ಅದಕ್ಕೆ ಕಾಡುಗೋಡಿ (ಕಾಡು+ಕೋಡಿ=ಕಾಡುಗೋಡಿ, ಆಗಮಸಂಧಿ) ಎನ್ನುವುದು ಅತ್ಯಂತ ಸೂಕ್ತ. ಆದರೆ ಬರವಣಿಗೆಯ ಶಿಷ್ಟರು ಅದನ್ನು ಕಾಡುಗುಡಿ ಎಂಬುದಾಗಿ ಭಾವಿಸಿಕೊಳ್ಳುತ್ತಾರೆ. ಹಾಗೆಯೇ ನಮ್ಮ ಈ ಆರೋಬೆಲೆ ಅಥವಾ ಹಾರೋಬೆಲೆಯನ್ನು ಕೆಲವರು ಹಾರೋಬಲೆ ಎಂಬುದಾಗಿ ಬರೆಯುವುದನ್ನೂ ನೋಡುತ್ತಿದ್ದೇವೆ.

ಬಾಲ್ಯದ ನೆನಪು

ಅದು ಎಪ್ಪತ್ತರ ದಶಕ. ನಾನು ಮಾಧ್ಯಮಿಕ ಶಾಲಾದಿನಗಳ ರಜಾದ ಮಜಾದಲ್ಲಿದ್ದೆ. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯ ಗಂಟೆ ಗೋಪುರದ ಬಳಿಯೇ ನಮ್ಮ ಮನೆಯಿತ್ತು. ಬದಿಯಲ್ಲಿಯೇ ಇದ್ದ ಸಂತ ರಾಯಪ್ಪರ ಗುರುಮಠಕ್ಕೂ ಹೊಕ್ಕು ಬಳಕೆ ನಮಗೆ ಸಲೀಸಾಗಿತ್ತು. ನನ್ನ ಬಾಲ್ಯವೆಲ್ಲ ಕ್ರಿಸ್ತರಾಜರ ದೇವಾಲಯದಿಂದ ಹಿಡಿದು ನಿರ್ಮಲರಾಣಿ ಶಾಲೆಯವರೆಗಿನ ಇಂದಿನ ಕ್ಲರೇಷಿಯನ್ ಮತ್ತು ಎಂಎಸ್‌ಎಫ್‌ಎಸ್ ಸೆಮಿನರಿಗಳವರೆಗೆ ಮಾತ್ರವಲ್ಲ ಸೆಂಟ್ ತೆರೇಸಾಸ್ ಸ್ಯಾನಿಟೋರಿಯಂ ಎಂಬ ಗುಟ್ಟೆ ಆಸ್ಪತ್ರೆವರೆಗಿನ ಪ್ರದೇಶದಲ್ಲಿ ಆಡಾಡುತ್ತಾ ಕಳೆದಿತ್ತು.
ಈ ಒಂದು ನೆನಪಿನ ಬುತ್ತಿಯಿಂದ ಸಣ್ಣ ತುಣುಕೊಂದನ್ನು ಹಂಚಿಕೊಳ್ಳುತ್ತೇನೆ. ಒಂದು ದಿನ ನಾನು ಪೆನ್ವೆನ್ ಸ್ವಾಮಿಯವರ ಕೊಠಡಿಯ ಬಳಿ ಅಡ್ಡಾಡುತ್ತಿದ್ದಾಗ ಮೇಲುಗಡೆಯ ಕೊಠಡಿಯೊಂದರಿಂದ ಯಾರೋ ನನ್ನನ್ನು ಕರೆದಂತಾಯಿತು. ತಲೆಯೆತ್ತಿ ನೋಡಿದಾಗ ಅದು ಆಗಷ್ಟೇ ಯಾಜಕ ಪದವಿ ಪಡೆದು ರೂಮು ತೆರವು ಮಾಡುತ್ತಿದ್ದ ಯುವ ಬ್ರದರ್ (ಅಲ್ಲ ಫಾದರ್) ಒಬ್ಬರು ನನ್ನನ್ನು ಕರೆಯುತ್ತಿದ್ದುದು ಕಾಣಿಸಿತು. ಅವರು ತಮ್ಮ ಕೊಠಡಿಯಲ್ಲಿನ ಹಳೆಯಪಳೆಯ ವಸ್ತುಗಳನ್ನು ಎಸೆಯುತ್ತಾ ತಮ್ಮ ಬಟ್ಟೆಬರೆ ಪುಸ್ತಕಗಳನ್ನು ಜೋಡಿಸಿಕೊಳ್ಳುತ್ತಾ ತಮ್ಮ ಸೆಮಿನರಿ ಜೀವನಕ್ಕೆ ವಿದಾಯ ಹೇಳಲು ತಯಾರಿ ನಡೆಸಿದ್ದರು. ಆ ಕೆಲಸಕ್ಕೆ ಸಹಾಯ ಮಾಡಲು ಅವರು ನನ್ನನ್ನು ಕೇಳಿಕೊಂಡಾಗ ತುಂಬಾ ಸಂತಸದಿಂದ ಹೂಂಗುಟ್ಟಿದೆ. ನಗುಮುಖದ ಯುವಪಾದ್ರಿಗಳು ಸಹಾಯಕ್ಕೆ ಕರೆದಾಗ ಉತ್ಸಾಹದಿಂದ ಮುಂದಾಗುವುದು ನನಗೆ ಸಹಜವಾಗಿತ್ತು.
ಅವರ ಕೋಣೆಯಲ್ಲಿ ಗೋಡೆಗಳ ಮೇಲೆ ಇದ್ದ ಪಟ ಚಿತ್ರ ಇತ್ಯಾದಿಗಳನ್ನು ತೆಗೆದಿದ್ದರಿಂದ ಕೋಣೆ ಬಿಕೋ ಅನ್ನುತ್ತಿತ್ತು. ಮಂಚಕ್ಕೆ ಕಟ್ಟಿದ್ದ ಸೊಳ್ಳೆಪರದೆ ಬೆಡ್ ಶೀಟು ಮುಂತಾದವುಗಳನ್ನು ತೆಗೆದುಬಿಟ್ಟಿದ್ದರಿಂದ ಅಲ್ಲಿದ್ದ ಹಾಸಿಗೆ ನಿರಾಭರಣ ಸುಂದರಿಯಂತಿತ್ತು. ಹರಿದ ನ್ಯೂಸ್ ಪೇಪರುಗಳು ಬಿಡಿಗೂದಲುಗಳು ಧೂಳಿನೊಂದಿಗೆ ನೆಲದಲ್ಲಿ ಆಟವಾಡುತ್ತಿದ್ದವು. ಕಿಟಕಿಯ ಬಳಿ ಜೋಡಿಸಿದ್ದ ಬಾಚಣಿಗೆಯನ್ನು ನಾನು ಅಲ್ಲಿಂದಲೇ ಹೊರಕ್ಕೆಸೆದಾಗ ಸಣ್ಣಗೆ ಗದರಿದ ಅವರು ಅಲ್ಲಿಂದೇನನ್ನೂ ಕೆಳಗೆ ಹಾಕಬಾರದೆಂದೂ ಬುಟ್ಟಿಯಲ್ಲಿ ತುಂಬಿಕೊಂಡು ಮೆಟ್ಟಿಲಿಳಿದು ಕೆಳಗಿಹೋಗಿ ಕಸದ ರಾಶಿಗೆ ಸುರಿದುಬರುವಂತೆಯೂ ಹೇಳಿದರು. ಹಾಗೆ ನಾನು ಬಹಳಷ್ಟು ವಸ್ತುಗಳನ್ನು ಕಸದರಾಶಿಗೆ ಚೆಲ್ಲಿಬಂದೆ. ಕಿಟಕಿ ಬಳಿಯಲ್ಲಿ ಅವರು ಸಾಲಾಗಿ ಇಟ್ಟಿದ್ದ ಬ್ಲೇಡುಗಳಲ್ಲಿ ಹೊಳಪಿದ್ದ ಒಂದನ್ನು ಮೆಲ್ಲಗೆ ಎತ್ತಿಕೊಂಡು ಅಂಗಿಯ ಕಿಸೆಯಲ್ಲಿಟ್ಟುಕೊಂಡೆ, ಪೆನ್ಸಿಲ್ ಹೆರೆಯುವದಕ್ಕೆ ತುಂಬಾ ಚೆಂದವಾಗಿ ತೋರಿದ್ದ ಅದು ನನ್ನ ಮಿತ್ರರೆದುರಲ್ಲಿ ನನಗೆ ತುಂಬಾ ಹೆಮ್ಮೆ ತಂದುಕೊಡುವ ಸಾಧನವಾದೀತೆಂಬ ಆತ್ಮವಿಶ್ವಾಸ ನನ್ನ ಎದೆಯುಬ್ಬಿಸಿತ್ತು.
ಈ ಒಂದು ಸಂದರ್ಭದಲ್ಲೇ ಒಂದೇ ಶೀರ್ಷಿಕೆಯ ಹಲವಾರು ಪುಸ್ತಕಗಳನ್ನು ಒಟ್ಟಿಗೆ ಕಟ್ಟಿಡಲಾಗಿದ್ದ ಒಂದು ಪುಸ್ತಕದ ಕಟ್ಟು ಕಾಣಿಸಿತು. ಕುತೂಹಲದಿಂದ ಅದರ ಶೀರ್ಷಿಕೆ ಓದಿದೆ. ಅದು ಬಿಳಿ ಹೊದಿಕೆಯ ಮೇಲೆ ಅಚ್ಚ ಕೆಂಪು ಅಕ್ಷರಗಳಲ್ಲಿ ಮುದ್ರಿತವಾಗಿತ್ತು. ಅದರ ಹೆಸರು ಕ್ರೈಸ್ತಗುರು ಕೊಲೆಗಾರರೇ?’ ಎಂಬುದು ನನ್ನ ನೆನಪು. ಮುಂದೆ ಎಷ್ಟೋ ವರ್ಷಗಳ ಕಾಲ ಆ ಯುವಪಾದ್ರಿಯ ಮುಖದೊಂದಿಗೆ ಇತರರ ಮುಖಗಳನ್ನು ಹೋಲಿಸಿಕೊಂಡು ನನ್ನ ನೆನಪನ್ನು ಬ್ರಷ್ ಮಾಡಿಕೊಂಡದ್ದೂ ಉಂಟು. ಡಿಸೆಂಬರ್ ಚಳಿಗೆ ನನ್ನ ಮುಂಬೆರಳ ತುದಿ ಹಿಂಡಿದಾಗಲೆಲ್ಲ ಆ ನನ್ನ ಬಾಲ್ಯದ ಹೊಳಪಿನ ಬ್ಲೇಡಿನ ನೆನಪೂ ಕಾಡುತ್ತದೆ.