ಗುರುವಾರ, ಅಕ್ಟೋಬರ್ 31, 2013

ಹಿಂದೀ ಎಂಬ ಭೂತ

ದೇಶದ ತುಂಬೆಲ್ಲ “ಹಿಂದೀ ರಾಷ್ಟ್ರಭಾಷೆ” ಎಂಬ ವ್ಯವಸ್ಥಿತ ಸುಳ್ಳನ್ನು ಹರಡಲಾಗುತ್ತಿದೆ ಎಂಬುದು ಆತಂಕಕಾರೀ ವಿಚಾರ. ರಾಜಭಾಷೆಗೂ ರಾಷ್ಟ್ರಭಾಷೆಗೂ ವ್ಯತ್ಯಾಸ ತಿಳಿಯದ ಹಾಗೂ ರಾಜಭಾಷೆಯನ್ನೇ ರಾಷ್ಟ್ರಭಾಷೆ ಎಂದು ತಪ್ಪಾಗಿ ತಿಳಿದಿರುವ ಜನರೇ ಹಿಂದೀಯನ್ನು ರಾಷ್ಟ್ರಭಾಷೆ ಎಂದು ಭಾವಿಸಿದ್ದಾರೆ, ಅವರೇ ಈ ಸುಳ್ಳಿನ ಪ್ರಚಾರಕರೂ ಆಗಿದ್ದಾರೆ. ಕೇಂದ್ರಸರ್ಕಾರವು ಇಂಗ್ಲಿಷಿನ ಜೊತೆಗೆ ಹಿಂದೀಯನ್ನೂ ನಮ್ಮ ದೇಶದ ರಾಜಭಾಷೆ ಎಂಬುದಾಗಿ ಘೋಷಿಸಿದೆ. ರಾಜಭಾಷೆ ಎಂದರೆ ಅಧಿಕೃತ ನುಡಿ ಅಥವಾ ಆಡಳಿತ ನುಡಿ ಎಂದರ್ಥ.
ಫ್ರಾನ್ಸ್, ಜಪಾನ್, ರಷ್ಯಾಗಳು ತಮ್ಮದೇ ಆದ ದೇಶನುಡಿಯನ್ನು ಹೊಂದಿ ಏಳಿಗೆ ಹೊಂದಿರುವುದಲ್ಲದೆ ತಮ್ಮದೇ ಆದ ಒಂದು ಮರ್ಯಾದೆ ಉಳಿಸಿಕೊಂಡಿವೆ. ಅವು ಎಂದೂ ಪರಕೀಯ ನುಡಿಯಾದ ಇಂಗ್ಲಿಷಿನ ಮರೆ ಹೊಕ್ಕಿಲ್ಲ, ಹಾಗೆ ಮಾಡದೆಯೂ ಅವು ತಮ್ಮ ಪಯಿರನ್ನು ಎಲ್ಲೆಡೆ ಹಂಚಲು ಸಾಧ್ಯವಾಗಿದೆ ಎಂಬುದನ್ನು ಗಮನಿಸಿದಾಗ ದೇಶಕ್ಕೆಲ್ಲ ಒಂದೇ ನುಡಿಯಿರತಕ್ಕದ್ದೆಂಬ ವಾದ ಒಂದೆಡೆಯಿದೆ.
ಆದರೆ ನಮ್ಮ ದೇಶದ ಸಂದರ್ಭಕ್ಕೆ ಅದು ಅನ್ವಯಿಸುವುದೇ ಎಂಬುದು ಚರ್ಚಿಸಬೇಕಾದ ಸಂಗತಿ. ಏಕೆಂದರೆ ನಮ್ಮ ದೇಶವು ಹಲವು ನುಡಿಗಳ ತವರು. ಆಳ ಅಳವು ಹಲಬಗೆ ಹಾಗೂ ಅಕ್ಕರದ ನಡೆಗಳ ಕಾರಣದಿಂದಾಗಿ ನಮ್ಮಲ್ಲಿ ಹಲವಾರು ಸಿರಿವಂತ ನುಡಿಗಳಿವೆ. ಅವು ಹಿಂದೀ ಮತ್ತು ಇಂಗ್ಲಿಷಿನ ಪ್ರವೇಶಕ್ಕೆ ಮುನ್ನವೇ ಸೊಂಪಾಗಿ ಬೆಳೆದುಬಂದಿವೆ. ಇವೆಲ್ಲವೂ ತಮ್ಮದೇ ಆದ ಪ್ರಾಂತ್ಯಗಳಲ್ಲಿ ತಮ್ಮದೇ ಆದ ರಾಜಾಳ್ವಿಕೆಗಳಲ್ಲಿ ತಮ್ಮದೇ ಭಾಷಿಕ ಜನರ ಹೃದಯಗಳಲ್ಲಿ ವಿಪುಲವಾಗಿ ಸಂಮೃದ್ಧಿಗೊಂಡು ಬಂದಿವೆ. ಅವು ಹಾಗೇ ಇದ್ದಿದ್ದರೆ ಚೆನ್ನಾಗಿತ್ತೇನೋ?
ಆದರೆ ನಮ್ಮ ಈ ವಿಶಾಲ ಭೂಖಂಡದ ಮೇಲೆ ವಾಣಿಜ್ಯೋದ್ದೇಶಗಳಿಗಾಗಿ ಹೊರಗಿನವರ ಅತಿಕ್ರಮಣ ಪ್ರಾರಂಭವಾದ ಮೇಲೆ ನಾವೆಲ್ಲ ಒಂದೇ ದೇಶದವರು ಎನ್ನುವ ಪರಿಕಲ್ಪನೆ ಮೂಡಿಬಂದಿತು. ನಾವೆಲ್ಲ ಭಾರತೀಯರು ಎಂಬುದು ಉದಾತ್ತ ಭಾವನೆಯೇ ಸರಿ. ಈ ಒಂದು ಉದಾತ್ತ ಭಾವನೆಯ ಮುಂದುವರಿದ ಭಾಗವಾಗಿ ನಾವೆಲ್ಲ ಸಂತಸದಿಂದ ಹೊಸ ನುಡಿಯಾದ ಹಿಂದೀಯನ್ನು ಕಲಿಯಲು ಉತ್ಸುಕರಾದೆವು. ನಮ್ಮ ಪಠ್ಯಗಳಲ್ಲಿ ಬಲವಂತವಾಗಿ ಹಿಂದೀಯನ್ನು ಹೇರಿ ಪರೀಕ್ಷೆಗಳಲ್ಲಿ ಅವಕ್ಕೆ ಉತ್ತರಗಳನ್ನೂ ಹೇಳಿ ನಮ್ಮನ್ನು ಪಾಸು ಮಾಡಿದರು. ಒಂದು ಒಳ ಕಾರ್ಯಸೂಚಿ ಹೊಂದಿದ್ದ ಹಿಂದೀ ಭಾಷಿಕ ಪಟ್ಟಭದ್ರರು ನಮ್ಮ ಹಿಂದೀ ಕಲಿಕೆಯು ನಿರ್ವಿಘ್ನವಾಗಿ ನಡೆಯುತ್ತಿರುವುದನ್ನು ಕಂಡು ಸಂಭ್ರಮಪಟ್ಟರು.
ತಮ್ಮದೇ ರಾಜ್ಯಕಟ್ಟುವ ಹುನ್ನಾರ ಹೊಂದಿದ್ದ ಅವರು ದೇಶದ ಇತರ ಸಂಪದ್ಭರಿತ ನುಡಿಗಳನ್ನು ಬಲಿಗೊಟ್ಟು ಹಿಂದೀಯನ್ನು ಪೋಷಿಸಿದರೆಂಬುದೇ ಇತಿಹಾಸದ ವ್ಯಂಗ್ಯ. ಇನ್ನೊಂದು ನುಡಿಯನ್ನು ಸಂವಹನಕ್ಕಾಗಿ ಕಲಿಯಬೇಕೆನ್ನುವುದು ಖುಷಿಯ ವಿಚಾರವೇನೋ ಸರಿಯೇ ಆದರೆ ಆ ಇನ್ನೊಂದು ನುಡಿಯನ್ನು ಬಲವಂತವಾಗಿ ಹೇರುವಾಗ ಅದು ಮನಸಿಗೆ ಕಸಿವಿಸಿ ಮಾಡುವುದಂತೂ ನಿಜ. ಅದರ ಪರಿಣಾಮವಾಗಿ ಇವೊತ್ತು ಹಿಂದೀ ಇಲ್ಲದಿದ್ದರೆ ನೀನು ಬದುಕಲಾರೆ ಎಂಬಂತ ವಾತಾವರಣ ಸೃಷ್ಟಿಯಾಗಿದೆ.
ಹೆಚ್ಚಿನ ಓದಿಗೆ ಇಲ್ಲವೇ ಕೆಲಸಕ್ಕೆ ನೀವು ಫ್ರಾನ್ಸ್ ದೇಶಕ್ಕೆ ಹೋಗಬೇಕಾಗುತ್ತದೆ ಎಂದುಕೊಳ್ಳೋಣ. ಆಗ ನೀವು ಫ್ರೆಂಚ್ ನುಡಿಯನ್ನು ಕಲಿಯಲೇಬೇಕು. ನೀವಾಗೇ ನಿಮ್ಮ ಪರಿಶ್ರಮದಿಂದ ಅದನ್ನು ಕಲಿತರೂ ಅಲೆಯೆನ್ಸ್ ಫ್ರಾಂಚೇಸ್ ಎಂಬ ಫ್ರೆಂಚ್ ಸರ್ಕಾರದ ಏಜೆನ್ಸಿಯಲ್ಲಿ ನಿಮ್ಮ ಪರಿಣತಿಯನ್ನು ಒರೆಗೆ ಒಡ್ಡಿ ಪ್ರಮಾಣಿತರಾಗಬೇಕು. ಆಗಲೇ ನಿಮಗೆ ಫ್ರಾನ್ಸ್ ದೇಶದ ವೀಸಾ ದೊರೆಯುವುದು. ಅದನ್ನೇ ನಮ್ಮ ದೇಶಕ್ಕೂ ಅನ್ವಯಿಸಿ ನಿಮಗೆ ಹಿಂದೀ ಗೊತ್ತಿದ್ದರೆ ಮಾತ್ರವೇ ಸರ್ಕಾರೀ ನೌಕರಿ ಎಂದು ಯಾರಾದರೂ ಹೇಳಿದರೆ ಆತಂಕವಾಗುವುದು ಸಹಜವೇ. ಆದರೆ ಈ ಆತಂಕವನ್ನು ಸೃಜಿಸುವುದು ಸರ್ಕಾರವಲ್ಲ ಬದಲಿಗೆ ಅದರ ನೀತಿಯನ್ನು ತಪ್ಪಾಗಿ ಅರ್ಥೈಸುವ ಅದರ ನೌಕರಶಾಹಿ ಎಂದರೆ ತಪ್ಪಾಗದು. ತಮ್ಮ ವೈಯಕ್ತಿಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಈ ಆತಂಕವಾದಿಗಳು ಅಥವಾ ಭಯೋತ್ಪಾದಕರು ಹಿಂದೀ ಇಲ್ಲದಿದ್ದರೆ ನೀನು ಬದುಕಲಾರೆ ಎಂಬಂತಹ ಭಯವನ್ನು ಹುಟ್ಟಿಸುತ್ತಾರೆ.
ಹಾಗೆ ನೋಡಿದರೆ ಇಂಗ್ಲಿಷ್ ಆಳ್ವಿಕೆಯ ಫಲವಾಗಿ ನಮ್ಮ ದೇಶದ ಆಡಳಿತ ಹಾಗೂ ನ್ಯಾಯಾಂಗದ ಮೂಲೆ ಮೊಡಕುಗಳಲ್ಲಿ ಇಂಗ್ಲಿಷು ಹಬ್ಬಿ ಹರಡಿದೆ. ಅದು ಹಿಂದೀಗೆ ಪರ್ಯಾಯವಾಗಿ ಅಧಿಕೃತ ನುಡಿಯಾಗಿದೆ ಮಾತ್ರವಲ್ಲ ಸಂಪರ್ಕ ನುಡಿಯಾಗಿಯೂ ಇದೆ. ಜಗತ್ತಿನ ಎಲ್ಲ ರಂಗಗಳಲ್ಲೂ ಇಂಗ್ಲಿಷು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದರಿಂದ ಇಂಗ್ಲಿಷನ್ನು ಇನ್ನಷ್ಟು ಕಾಲ ನಮ್ಮ ದೇಶದ ಆಡಳಿತ ನುಡಿಯಾಗಿ ಮುಂದುವರಿಸುವುದರಲ್ಲಿ ಏನೇನೂ ತಪ್ಪಿಲ್ಲ.
ಆದರೆ ಸಂವಹನೆಯ ನುಡಿಯಾಗಿ ಸ್ಥಳೀಯ ಜನಪದಕ್ಕೂ ಸ್ಥಾನ ಕಲ್ಪಿಸಬೇಕಾದ್ದು ನ್ಯಾಯ. ಆದರೆ ದೇಶದ ಎಲ್ಲೆಡೆಯೂ ಈ ಜನಪದದ ಜಾಗವನ್ನು ಹಿಂದೀಯು ಎಂದೆಂದೂ ಪಡೆಯಲು ಸಾಧ್ಯವಿಲ್ಲ. ಹಿಂದೀ ರಾಜ್ಯಗಳೆಂದು ಗುರುತಿಸಿಕೊಂಡಿರುವ ರಾಜ್ಯಗಳಲ್ಲೇ ಅವಧೀ, ಭೋಜಪುರೀ, ಖಡೀಬೋಲೀ, ಮುಂತಾದ ಜನಪದಗಳಿವೆ. ಈ ಜನಪದರು ಶಿಷ್ಟ ಹಿಂದೀಯನ್ನು ಶಾಲೆಯಲ್ಲಿ ಕಲಿತು ಶಾಲೆಯ ನಂತರ ಮರೆಯುತ್ತಾರೆ. ಹಿಂದೀ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭೋಜಪುರೀ ಸಿನಿಮಾಗಳು ತಯಾರಾಗುತ್ತವೆಂದರೆ ಆ ನುಡಿಯ ಹೆಚ್ಚಳವನ್ನು ಅಲ್ಲಗಳೆಯಲಾಗದು. ಅಂದರೆ ನುಡಿಯುವ ಹಿಂದೀಗೂ ಬರೆಯುವ ಶಿಷ್ಟ ಹಿಂದೀಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಖಚಿತ. ನುಡಿಯುವ ಹಿಂದೀಯನ್ನು ಅಲ್ಪ ಮಟ್ಟಿಗೆ ಅರ್ಥ ಮಾಡಿಕೊಳ್ಳಬಹುದಾದರೂ ಬರೆಯುವ ಹಿಂದೀ ಕ್ಲಿಷ್ಟವಾದ ಕಬ್ಬಿಣದ ಕಡಲೆಯಾಗಿದೆ. ಬಂಗಾಲಿ, ಅಸ್ಸಾಮಿ, ಒಡಿಯಾ ರಾಜ್ಯಗಳವರ ಭಾವನೆಯೂ ಇದೇ ಆಗಿದೆ. ಹಿಂದೀಯನ್ನು ಬಲವಾಗಿ ವಿರೋಧಿಸುವವರ ಸಾಲಿನಲ್ಲಿ ಬಂಗಾಳಿಗರಿಗೆ ಹೆಚ್ಚಿನ ಸ್ಥಾನವಿದೆ. ಈಶಾನ್ಯ ರಾಜ್ಯಗಳ ಜನ ಹಿಂದೀ ಹೇರಿಕೆ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ತಮಿಳರು ಹಿಂದೀ ಹೇರಿಕೆಯನ್ನು ವಿರೋಧಿಸುತ್ತಾರಾದರೂ ದೆಹಲಿಯ ಆಯಕಟ್ಟಿನ ಅಧಿಕಾರಸ್ಥಾನದಲ್ಲಿ ಕುಳಿತು ತಮಗೆ ಬೇಕಾದ್ದನ್ನು ಹಿಂದೀ ಮೂಲಕವೇ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಈಶಾನ್ಯ ರಾಜ್ಯದವರಿಗೆ ಹಿಂದೀ ಮಾತನಾಡುವವರ ಮೇಲೆ ಜನಾಂಗೀಯ ದ್ವೇಷವಿದೆ.
ಹೀಗೆಂದ ಮಾತ್ರಕ್ಕೆ ನಾನು ಹಿಂದೀ ದ್ವೇಷವನ್ನು ಪ್ರತಿಪಾದಿಸುತ್ತಿದ್ದೇನೆಂದು ಅರ್ಥವಲ್ಲ. ಕೆಲಸದ ನಿಮಿತ್ತ ದೇಶ ಸುತ್ತುವ ನನಗೆ ಹಿಂದೀ ಸಂಪರ್ಕ ನುಡಿಯಾಗಿ ಬರುತ್ತದೆ. ಆದರೆ ಹಿಂದೀಯ ಆಡಳಿತ ಪದಕೋಶವು ನನಗಿನ್ನೂ ಜೀರ್ಣವಾಗದ ಸಂಗತಿ. ಹಾಗಾಗಿ ನನಗೆ ಹಿಂದೀ ಒಂದು ಫಾರಿನ್ ಲ್ಯಾಂಗ್ವೇಜ್. ಇಲ್ಲಿ ಫಾರಿನ್ ಎಂದರೆ ವಿದೇಶೀ ಎಂದಲ್ಲ ಅಪರಿಚಿತ ಎಂಬುದಾಗಿ ಪರಿಭಾವಿಸಬೇಕು.
ಅರ್ಜಿಯೊಂದು ಇಂಗ್ಲಿಷಿನಲ್ಲಿದ್ದರೆ ಇಂಗ್ಲಿಷಿನಲ್ಲೇ ತುಂಬುವ ನಾನು ಅದು ಇಂಗ್ಲಿಷ್ ಮತ್ತು ಹಿಂದೀಯಲ್ಲಿದ್ದರೆ ಕನ್ನಡದಲ್ಲಿ ತುಂಬುತ್ತೇನೆ. ಏಕೆಂದರೆ ಅದು ಹಿಂದೀ ವಿರುದ್ಧದ ನನ್ನ ಪ್ರತಿಭಟನೆಯ ಸಂಕೇತ. ಮತ್ತು ಆ ಸಂದರ್ಭಗಳಲ್ಲಿ ನನ್ನೊಂದಿಗೆ ಜಗಳಾಡುವವರು ಹಿಂದೀ ಭಾಷಿಕರಾಗಿರದೆ ಕನ್ನಡಿಗರೇ ಆಗಿರುತ್ತಾರೆಂಬುದೂ ವಿಪರ್ಯಾಸ. ಈ ರೀತಿಯ ಹಿಂದೀ ಬಳಕೆಗೆ ಕೇಂದ್ರಸರ್ಕಾರದ ರಾಜಭಾಷಾ ಇಲಾಖೆಯಿಂದ ಸಂಭಾವನೆ ಸಿಗುತ್ತದೆಂಬುದೂ ಅಷ್ಟೇ ನಿಜ. ಅಂದರೆ ತೆರಿಗೆದಾರನ ಹಣದ ಒಂದಷ್ಟು ಪಾಲು ಈ ರೀತಿಯ ತೆವಲಿಗಾಗಿ ಬಳಕೆಯಾಗುತ್ತದೆ ಎಂದಂತಾಯಿತು.
ನಾನು ಉದ್ಯೋಗದಲ್ಲಿರುವ ಸಂಸ್ಥೆಯಲ್ಲಿ ಪ್ರತಿವರ್ಷ ಹಿಂದೀ ಪಕ್ಷಾಚರಣೆ, ಹಿಂದೀ ಪತ್ರಿಕೆಯ ಪ್ರಕಟನೆ, ಹಿಂದೀ ನಾಮಫಲಕ, ಹಿಂದೀ ಸೂಚನೆಗಳು, ಹಿಂದೀ ಟಿಪ್ಪಣಿಗಳು ಮುಂತಾದವಕ್ಕಾಗಿ ಅಪಾರ ಹಣದ ವ್ಯಯವಾಗುತ್ತದೆ. ಇದಕ್ಕೆಲ್ಲ ಆ ರಾಜಭಾಷಾ ಇಲಾಖೆಯಿಂದಲೇ ಹಣ ಹರಿದುಬರುತ್ತದೆ. ಹಿಂದೀಯನ್ನು ಎಷ್ಟರಮಟ್ಟಿಗೆ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂಬುದನ್ನು ಅಳೆಯಲು ಆಡಿಟ್ ವ್ಯವಸ್ಥೆಯೂ ಇದೆ. ಹಿಂದೀ ಬಳಕೆಗೆ ನೀಡುವ ಪ್ರೋತ್ಸಾಹವನ್ನು ಹಣದ ರೂಪದಲ್ಲೇ ನೀಡಲಾಗುತ್ತದೆ. ಇನ್ನಾವ ಉಡುಗರೆಯ ರೂಪದಲ್ಲಲ್ಲ. ಹಿಂದೀ ನುಡಿಯ ಪ್ರದೇಶದ ಹಿಂದೀ ಮಾತುಗಾರರು ಹಾಗೂ ಹಿಂದೀಯೇತರ ನೆಲದ ಅನ್ಯ ಭಾಷಿಕರು ಎಂಬುದಾಗಿ ದೇಶವನ್ನು ವಿಂಗಡಿಸಿ ಈ ಎರಡನೆಯ ಭಾಗದವರಿಗೆ ಗರಿಷ್ಠ ಹಣ ಸಿಗುವಂತೆ ನೋಡಿಕೊಳ್ಳಲಾಗುತ್ತದೆ. ಹೀಗೆ ಈ ಹಿಂದಿಯೇತರರು ಹಣದ ಪ್ರಲೋಭನೆಗೆ ಸೋತು ತಮಗೆ ಅರ್ಥವಾಗಲೀ ಬಿಡಲೀ ತಪ್ಪು ತಪ್ಪು ಹಿಂದೀ ಪ್ರಯೋಗಿಸುತ್ತಾ ಹಿಂದೀ ಪ್ರಚಾರಕರಾಗುತ್ತಾರಲ್ಲದೆ ತಮ್ಮದೇ ತಾಯ್ನುಡಿಯನ್ನು ತಮಗರಿವಿಲ್ಲದೇ ಹೊಸಕುತ್ತಾರೆ.

ಹೀಗೆ ತಮ್ಮತನವನ್ನು ಮಾರಿಕೊಳ್ಳುವುದರಿಂದ ನಮ್ಮ ಮುಂದಿನ ಪೀಳಿಗೆಯ ಸ್ವಂತಿಕೆಯನ್ನು ಚಿವುಟುತ್ತಿದ್ದೇವೆಂಬ ಹಾಗೂ ಅವರ ಉದ್ಯೋಗಾವಕಾಶಗಳನ್ನು ಮೊಟಕುಗೊಳಿಸುತ್ತಿದ್ದೇವೆಂಬ ಸತ್ಯವನ್ನು ಅವರು ಅರಿಯಬೇಕು.