ಸೋಮವಾರ, ಡಿಸೆಂಬರ್ 26, 2011

ತೆಸಿಯೇ ಸ್ವಾಮಿಯವರು TEISSIER Hippolyte, MEP (1853 - 1922)


ನವೆಂಬರ್ ೧೫ನೇ ತಾರೀಖು ತೆಸಿಯೇ ಸ್ವಾಮಿಯವರ ಜನ್ಮದಿನ. ಬೆಂಗಳೂರು, ಮೈಸೂರು ಮತ್ತು ಶೀಮೊಗ್ಗೆ ಧರ್ಮಪ್ರಾಂತ್ಯಗಳು ವಿಶೇಷವಾಗಿ ಸ್ಮರಿಸಿಕೊಳ್ಳಬೇಕಾದಂಥ ಅನುಪಮ ಚೇತನ ಈ ತೆಸಿಯೇ ಸ್ವಾಮಿಯವರು. ಫ್ರಾನ್ಸ್ ದೇಶದ ಐಷಾರಾಮೀ ಜೀವನವನ್ನು ಬದಿಗೊತ್ತಿ ಕ್ರಿಸ್ತರಾಜ್ಯವನ್ನು ಪಸರಿಸುವ ಕಷ್ಟಕರ ಹಾದಿ ತುಳಿದ ಇವರು ಏಳು ದಶಕಗಳ ಕಾಲ ನಮ್ಮ ನಾಡಿನಲ್ಲಿ ಜೀವ ಸವೆಸಿದವರು. ಅಂದು ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಅದೇ ತಾನೇ ಪ್ರವರ್ಧಿಸುತ್ತಿತ್ತು. ಇಲ್ಲಿ ಧರ್ಮಪ್ರಚಾರ ನಡೆಸಿದ್ದ ಜೆಸ್ವಿತರು ತಂತಮ್ಮ ನಾಡುಗಳಿಗೆ ಹಿಂದಿರುಗಿ ಐವತ್ತು ವರ್ಷಗಳಾಗಿದ್ದವು. ಸ್ಥಳೀಯ ಕ್ರೈಸ್ತರು ಆಧ್ಯಾತ್ಮಿಕ ಪೋಷಣೆಯಿಲ್ಲದೆ ಜ್ಞಾನಸ್ನಾನ ಪೂಜೆ ಸತ್ಪ್ರಸಾದಗಳಿಲ್ಲದೆ ಮದುವೆ ಮತ್ತು ಸಾವುಗಳನ್ನು ಮಂತ್ರಿಸುವವರಿಲ್ಲದೆ ಸೊರಗಿದ್ದರು. ಉಪದೇಶಿಗಳಷ್ಟೇ ಜಪತಪಗಳನ್ನು ಮುಂದುವರಿಸಿದ್ದರು.
ಫ್ರಾನ್ಸ್ ದೇಶದ ಮಿಷನರಿಗಳು ಧರ್ಮಸೇವೆಯ ಹೊಣೆ ಹೊತ್ತುಕೊಂಡಿದ್ದರಾದರೂ ಅವರ ವ್ಯಾಪಕ ಚಟುವಟಿಕೆಗೆ ಅಪಾರ ಹಣ ಮತ್ತು ಗುರುವರ್ಯರ ಅವಶ್ಯಕತೆ ಇತ್ತು. ದೇಶೀಯ ಗುರುಗಳನ್ನು ಹುಟ್ಟುಹಾಕುವ ಪದ್ಧತಿ ಇನ್ನೂ ಶುರುವಾಗಿರಲಿಲ್ಲ. ಪ್ರತಿಯೊಂದಕ್ಕೂ ಯೂರೂಪಿನತ್ತಲೇ ನೋಡಬೇಕಾದಂಥ ಪರಿಸ್ಥಿತಿ ಇತ್ತು. ಫ್ರೆಂಚರು ವಸಾಹತು ಹೊಂದಿದ್ದ ಪಾಂಡಿಚೇರಿಯಲ್ಲಿ ಫ್ರೆಂಚ್ ಮಿಷನರಿಗಳು ಕೇಂದ್ರ ಕಚೇರಿ ಇಟ್ಟುಕೊಂಡು ಗುರುಗಳಿಗೆ ನಿರ್ದೇಶನ ನೀಡುತ್ತಿದ್ದರು. ಅಂಥ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ದ್ಯುಬುವಾ, ಶಾರ್ಬೊನೊ, ಶೆವಾಲಿಯೇ ಮುಂತಾದವರು ಕ್ರಿಸ್ತರಾಜ್ಯದ ಸಸಿಗೆ ನೀರೆರೆದು ಪೋಷಿಸಿದರು. ತೆಸಿಯೇ ಅವರು ಕೂಡಾ ಇಂಥ ಮಹನೀಯರಲ್ಲಿ ಒಬ್ಬರು.
೧೮೫೩ರಲ್ಲಿ ಫ್ರಾನ್ಸ್ ದೇಶದಲ್ಲಿ ಹುಟ್ಟಿದ ತೆಸಿಯೇ ಅವರು ತಮ್ಮ ಇಪ್ಪತ್ತಾರನೇ ವಯಸ್ಸಿನಲ್ಲಿ ಅಂದರೆ ೧೮೭೯ರಲ್ಲಿ ಗುರುಪಟ್ಟ ಪಡೆದು ಅದೇ ವರ್ಷ ಬೆಂಗಳೂರಿಗೆ ಬಂದರು. ಆರು ತಿಂಗಳ ಕಾಲ ಇಲ್ಲಿ ಕನ್ನಡವನ್ನು ಅಭ್ಯಸಿಸಿದ ಅವರು ಇಂದು ತಮಿಳುನಾಡಿಗೆ ಸೇರಿಹೋಗಿರುವ ಹೊಸೂರಿನ ಸಮೀಪದ ಮತ್ತಿಕೆರೆಗೆ ನಿಯುಕ್ತರಾದರು. ಹೊಸೂರಿಗೆ ಸಮೀಪವಿರುವ ಮತ್ತಿಕೆರೆ, ಮರಂದನಹಳ್ಳಿ, ದಾಸರಹಳ್ಳಿ, ತಳಿ ಮುಂತಾದ ಧರ್ಮಕೇಂದ್ರಗಳು ಅಂದು ಕನ್ನಡನಾಡಿನ ಭಾಗಗಳೇ ಆಗಿದ್ದು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರು ಕನ್ನಡದಲ್ಲಿಯೇ ಜಪತಪಗಳನ್ನು ಮಾಡುತ್ತಿದ್ದರೆಂಬುದು ಗಮನಾರ್ಹ.
ಅಲ್ಲಿ ಕೆಲ ತಿಂಗಳು ಕಳೆದ ಮೇಲೆ ತೆಸಿಯೇ ಸ್ವಾಮಿಯವರನ್ನು ಶೀಮೊಗ್ಗೆಗೆ ಕಳಿಸಲಾಯಿತು. ಮಲೆನಾಡಿನ ಸುಂದರ ಪರಿಸರದಲ್ಲಿ ಮೂರುವರ್ಷಗಳ ಕಾಲ ಕ್ರಿಸ್ತನ ಸೇವೆ ಮಾಡಿದ ಆ ಉತ್ಸಾಹೀ ತರುಣ ೧೮೮೪ರ ಜನವರಿಗೆ ಬೆಂಗಳೂರಿನ ಶಿಲ್ವೆಪುರಕ್ಕೆ ಬಂದರು. ಆಗಷ್ಟೇ ಶಿಲ್ವೆಪುರವು ಕ್ಷಾಮ ಮತ್ತು ಪ್ಲೇಗಿನಿಂದ  ಅನಾಥರಾಗಿದ್ದವರ ಪುನರ್ವಸತಿ ಕೇಂದ್ರವಾಗಿ ರೂಪುಗೊಂಡಿತ್ತು. ಆ ಹೊಸ ಶಿಬಿರದ ಜನರಿಗೆ ಒಂದು ವರ್ಷಕಾಲ ಕೃಷಿ ಚಟುವಟಿಕೆಗಳ ಕುರಿತ ಮಾರ್ಗದರ್ಶನ ನೀಡಿದ ತೆಸಿಯೇ ಸ್ವಾಮಿಗಳು ೧೮೮೫ರ ಜೂನ್ ತಿಂಗಳಲ್ಲಿ ಶ್ರೀರಂಗಪಟ್ಟಣದ ಬಳಿಯ ಗಂಜಾಂ ಎಂಬ ಊರಿಗೆ ವರ್ಗವಾದರು.
 ಗಂಜಾಮು ಮೈಸೂರು ಪ್ರಾಂತ್ಯದ ಪ್ರಾಚೀನ ಕ್ರೈಸ್ತಕೇಂದ್ರ. ಅಲ್ಲಿದ್ದ ಕ್ರೈಸ್ತರೆಲ್ಲ ಸಿರಿವಂತ ಒಕ್ಕಲುಮಕ್ಕಳು. ಜೆಸ್ವಿತರ ನಿರ್ಗಮನದ ನಂತರ ತಮಗೆ ಗುರುಗಳ ಕೊರತೆಯಾದಾಗ ಟಿಪ್ಪುಸುಲ್ತಾನನ ಮೂಲಕ ಗೋವೆಯವರೆಗೂ ಅಹವಾಲು ಕೊಂಡೊಯ್ದ ಜನ ಅವರು. ಅಂಥಾ ಹೋರಾಟದ ಪರಂಪರೆಯುಳ್ಳ ಗಂಜಾಮು ತೆಸಿಯೇ ಅವರ ಕರ್ಮಭೂಮಿಯಾಯಿತು. ಅಲ್ಲಿದ್ದುಕೊಂಡೇ ಅವರು ಇಡೀ ಮೈಸೂರು ಜಿಲ್ಲೆಯಲ್ಲಿ ಸುತ್ತಾಡಿ ಕ್ರೈಸ್ತರಿಗೆ ಅಧ್ಯಾತ್ಮದ ಪೋಷಣೆ ಮಾಡಿದರು. ಕೊಡಗಿನ ಗಡಿಯ ಕಾಡುಕುರುಬರನ್ನು ಕ್ರೈಸ್ತಧರ್ಮಕ್ಕೆ ಬರಮಾಡಿಕೊಳ್ಳುವಲ್ಲಿ ಅವರ ಸಾಧನೆ ಗಣನೀಯ. ದೋರನಹಳ್ಳಿಯ ಸಂತ ಅಂತೋಣಿಯವರ ಪುಣ್ಯಕ್ಷೇತ್ರವನ್ನು ಜನಪ್ರಿಯಗೊಳಿಸಿ ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ನಿರರ್ಗಳವಾಗಿ ಕನ್ನಡದಲ್ಲಿ ಮಾತನಾಡುತ್ತಾ ಜನಸಾಮಾನ್ಯರೊಂದಿಗೆ ಆತ್ಮೀಯರಾಗಿದ್ದ ತೆಸಿಯೇ ಸ್ವಾಮಿಯವರನ್ನು ಅಂದು ಮೈಸೂರು ಧರ್ಮಪ್ರಾಂತ್ಯದ ಬಿಷಪರಾಗಿದ್ದ ಕುವಾಡು (Mgr. Couadou) ಅವರು ೧೮೯೦ರಲ್ಲಿ ಎಂಟು ಜಿಲ್ಲೆಗಳ ಇಡೀ ಮೈಸೂರು ಪ್ರಾಂತ್ಯಕ್ಕೆ prosecutor ಆಗಿ ನೇಮಿಸಿ ಬಿಷಪರ ಮನೆಯಲ್ಲಿಯೇ ಅವರಿಗೊಂದು ಸ್ಥಾನ ಕಲ್ಪಿಸಿದರು.
ಸುಮಾರು ಇಪ್ಪತ್ತಾರು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಸಮರ್ಥವಾಗಿ ನಿರ್ವಹಿಸಿದರಲ್ಲದೆ ಬೆಂಗಳೂರಿನ ಮಾರ್ಥಾ ಆಸ್ಪತ್ರೆಯಲ್ಲಿ ಆಧ್ಯಾತ್ಮಿಕ ಗುರುವಾಗಿಯೂ ಜನರಿಗೆ ಮಾರ್ಗದರ್ಶನ ನೀಡಿದರು. ಮಾರ್ಥಾ ಆಸ್ಪತ್ರೆಯಲ್ಲಿ ನರ್ಸಿಂಗ್ ಶಾಲೆಯನ್ನು ತೆರೆದು ನೂರಾರು ಹೆಣ್ಣುಮಕ್ಕಳಿಗೆ ಕೆಲಸ ಕಲ್ಪಿಸಿದರು. ದೇಶೀ ಹೆಣ್ಣುಮಕ್ಕಳಿಗಾಗಿಯೇ ಸಂತ ಫ್ರಾನ್ಸಿಸರ ಮೂರನೇ ಮಠವನ್ನು ಸ್ಥಾಪಿಸಿದರು. ಬೆಂಗಳೂರಿನ ಪ್ರಸಿದ್ಧ ಸಂತ ಜೋಸೆಫರ ಕಾಲೇಜನ್ನು ಕಟ್ಟಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
೧೯೧೬ರ ಸೆಪ್ಟೆಂಬರ್ ೪ನೇ ತಾರೀಖು ತೆಸಿಯೇ ಸ್ವಾಮಿಯವರ ಜೀವನದಲ್ಲಿ ಒಂದು ಮಹತ್ವದ ದಿನ. ಆ ದಿನ ಅವರು ಇಡೀ ಮೈಸೂರು ಪ್ರಾಂತ್ಯಕ್ಕೆ ಮೇತ್ರಾಣಿಯಾಗಿ ನೇಮಕಗೊಂಡರು. ನಿಜ ಹೇಳಬೇಕೆಂದರೆ ಬಿಷಪ್ ಪದವಿ ಅವರಿಗೆ ಹೂವಿನ ಹಾಸಿಗೆಯಾಗಿರಲಿಲ್ಲ. ಹಲವಾರು ಕಷ್ಟ ತೊಂದರೆಗಳನ್ನು ಅವರು ಎದುರಿಸಬೇಕಾಗಿತ್ತು. ಯೂರೋಪಿನಲ್ಲಿ ಮಹಾಯುದ್ಧ ನಡೆಯುತ್ತಿದ್ದ ಕಾರಣ ಜೀವನಾವಶ್ಯಕ ವಸ್ತುಗಳ ಕೊರತೆಯಿಂದ ಜನಜೀವನ ದುರ್ಭರವಾಗಿತ್ತು. ಗುರುಗಳ ಸಂಖ್ಯೆಯೂ ಕಡಿಮೆಯಿತ್ತು. ಯೂರೋಪಿನ ಸಹಾಯಧನ ನಿಂತುಹೋಗಿತ್ತು. ಇಂಥ ಕಠಿಣವಾದ ದಿನಗಳಲ್ಲಿ ತೆಸಿಯೇ ಸ್ವಾಮಿಗಳು ವಿಶಾಲ ಧರ್ಮಪ್ರಾಂತ್ಯವನ್ನು ತನ್ನ ಕಾಲುಗಳ ಮೇಲೆ ನಿಲ್ಲುವಂತೆ ಮಾಡಲು ಬಹುವಾಗಿ ಶ್ರಮಿಸಿದರು.
ಅವರ ೪೭ವರ್ಷಗಳ ದೀರ್ಘಕಾಲದ ಅವಿರತ ಸೇವೆಯ ಫಲವಾಗಿ ಅವಿಭಜಿತ ಮೈಸೂರು ಧರ್ಮಪ್ರಾಂತ್ಯವು ಇಡೀ ದೇಶದಲ್ಲಿಯೇ ಒಂದು ಮಾದರಿ ಧರ್ಮಪ್ರಾಂತ್ಯವಾಗಿ ರೂಪುಗೊಂಡಿತು ಎಂದರೆ ಅತಿಶಯವಲ್ಲ. ಹೀಗೆ ಯೇಸುಕ್ರಿಸ್ತನ ವಿನಮ್ರ ಸೇವಕನಾಗಿ ಹಗಲೂ ಇರುಳೂ ದುಡಿದ ಅವರು ೧೯೨೨ ಫೆಬ್ರವರಿ ೨೬ರಂದು ಸ್ವರ್ಗಸ್ಥರಾದರು. ಅಂದಿನ ಕಾಲದಲ್ಲಿ ಬಿಷಪರ ನಿವಾಸವೂ ಪ್ರಧಾನಾಲಯವೂ ಆಗಿದ್ದ ಸಂತ ಪ್ಯಾಟ್ರಿಕ್ಕರ ದೇವಾಲಯದ ಆವರಣದಲ್ಲಿಯೇ ಅವರನ್ನು ಮಣ್ಣುಮಾಡಲಾಗಿದೆ.
ಯಾವಾಗಲಾದರೂ ಆ ದೇವಾಲಯಕ್ಕೆ ಭೇಟಿ ನೀಡಿದಾಗ ಬಲಿಪೀಠದ ಬಳಿ ಬಲರೆಕ್ಕೆಯಲ್ಲಿ ತೆಸಿಯೇ ಸ್ವಾಮಿಗಳ ಸಮಾಧಿಕಲ್ಲನ್ನು ನೋಡಿ ನಮಿಸೋಣ. ನಮ್ಮ ನಾಡಿನಲ್ಲಿ ಕ್ರೈಸ್ತಧರ್ಮವು ಬಲವಾಗಿ ಬೇರೂರಲು ಶ್ರಮವಹಿಸಿ ನೀರೆರೆದ ಒಬ್ಬ ಮಹಾನ್ ದೇವಸೇವಕನನ್ನು ಹೃತ್ಪೂರ್ವಕವಾಗಿ ಸ್ಮರಿಸೋಣ. 

ಬುಧವಾರ, ಡಿಸೆಂಬರ್ 7, 2011

ಮಿಶನರಿ ಯಾತ್ರೆಯ ಹಿಂದೆ


೧೫-೧೬ನೇ ಶತಮಾನಗಳಲ್ಲಿ ವಾಣಿಜ್ಯ ಉದ್ದೇಶಗಳಿಗಾಗಿ ಐರೋಪ್ಯರು ಹೊಸಹೊಸ ಜಲಮಾರ್ಗಗಳನ್ನು ಕಂಡುಹಿಡಿದು ವಿವಿಧ ಖಂಡಗಳನ್ನು ತಲುಪಿ ಅಲ್ಲೆಲ್ಲಾ ತಮ್ಮ ಕೋಠಿಗಳನ್ನು ಸ್ಥಾಪಿಸಿಕೊಂಡರು. ಅವರೊಂದಿಗೆ ಅವರ ವಾಣಿಜ್ಯ ಹಡಗುಗಳಲ್ಲಿ ಕ್ರೈಸ್ತ ಧರ್ಮಪ್ರಚಾರದ ಅಭಿಲಾಷೆಯುಳ್ಳ ಪಾದ್ರಿಗಳೂ ಸ್ವಯಿಚ್ಛೆಯಿಂದ ಪ್ರಯಾಣಿಸಿ ಹೊಸ ದೇಶಗಳ ಒಳನಾಡನ್ನೆಲ್ಲ ಸುತ್ತಿದರು.
ಹಾಗೆ ಇಂಡಿಯಾ ದೇಶಕ್ಕೆ ಜಲಮಾರ್ಗವಾಗಿ ಬಂದವರಲ್ಲಿ ಪೋರ್ಚುಗೀಸರೇ ಮೊದಲಿಗರು. ೧೪೯೮ರಲ್ಲಿ ವಾಸ್ಕೊ ಡ ಗಾಮನು ಕಲ್ಲಿಕೋಟೆಯಲ್ಲಿ ಲಂಗರು ಹಾಕುವುದರೊಂದಿಗೆ ಇಂಡಿಯಾದ ನೆಲದಲ್ಲಿ ಹೊಸ ಗಾಳಿ ಬೀಸುವುದಕ್ಕೆ ಕಾರಣಕರ್ತನಾದನು. ಪೋರ್ಚುಗೀಸ್ ಸರ್ಕಾರದ ವತಿಯಿಂದ ನಡದ ಇಂತಹ ಸಾಹಸೀ ಜಲಯಾತ್ರೆಗಳನ್ನು ಕ್ರೈಸ್ತ ಜಗದ್ಗುರು ಪೋಪರೂ ಹರಸಿ ಆಶೀರ್ವದಿಸಿದ್ದರು. ಅಂತೆಯೇ ಹೊಸದಾಗಿ ಕಂಡುಹಿಡಿವ ದೇಶಗಳಲ್ಲಿ ಧರ್ಮಪ್ರಚಾರಕರಿಗೆ ಸಹಕಾರ ನೀಡಬೇಕೆನ್ನುವ ಕ್ರೈಸ್ತ ಜಗದ್ಗುರುಗಳ ಮನವಿಯನ್ನು ಧರ್ಮಭೀರುಗಳಾದ ಪೋರ್ಚುಗೀಸರು ಶಿರಸಾವಹಿಸಿ ಪಾಲಿಸಿದ್ದರಲ್ಲಿ ಅತಿಶಯವೇನೂ ಇಲ್ಲ.
ಅಲ್ಲದೆ ವರ್ತಕರ ಮತ್ತು ಧರ್ಮಪ್ರಚಾರಕರ ನಡುವೆ ಒಂದು ಕಂಡೂ ಕಾಣದ ಒಳ ಒಪ್ಪಂದವಿದ್ದಂತೆಯೂ ತೋರುತ್ತದೆ. ಧರ್ಮಪ್ರಚಾರಕರು ಮಳೆಬಿಸಿಲೆನ್ನದೆ ಹಸಿವು ನೀರಡಿಕೆಯೆನ್ನದೆ ಕಾಡುಮೇಡುಗಳೆನ್ನದೆ ಸುತ್ತಿ ಕ್ರಿಸ್ತಸಂದೇಶವನ್ನು ಪ್ರಚಾರ ಮಾಡುತ್ತಿದ್ದರು. ಪಾದ್ರಿಗಳ ಕೆಲಸದಲ್ಲಿ ತ್ಯಾಗ ಬಲಿದಾನಗಳೇ ಮೇಲುಗೈಯಾದರೆ ಅದೇ ವೇಳೆಯಲ್ಲಿ ಸಮಾನಸಾಹಸಿಗಳಾಗಿದ್ದ ವಾಣಿಜ್ಯ ಯಾತ್ರಿಗಳಲ್ಲಿ ಧನದಾಹದ ಸ್ವಾರ್ಥ ಮೇಲಾಟ ನಡೆಸಿದ್ದವು. ಆದರೂ ಈ ವರ್ತಕರು ಧರ್ಮಪ್ರಚಾರಕರನ್ನು ಅತ್ಯಂತ ಗೌರವದಿಂದ ಪರಿಭಾವಿಸುತ್ತಿದ್ದರು. ವರ್ತಕರ ಹಡಗುಗಳಲ್ಲಿ ಪಾದ್ರಿಗಳು ಪತ್ರಗಳನ್ನು, ಬಟ್ಟೆಬರೆಗಳನ್ನು, ಔಷಧಿ ಉಡುಗರೆ ಪೂಜಾಸಾಮಗ್ರಿಗಳನ್ನು ಉಚಿತವಾಗಿ ಸಾಗಿಸಬಹುದಿತ್ತು. ಅವರು ಒಂದು ಪೆಟ್ಟಿಗೆಯ ಮೇಲೆ ವಿಳಾಸದಾರರ ಹೆಸರು ಬರೆದು ಹಡಗಿನ ಸಿಬ್ಬಂದಿಗೆ ನಿಶ್ಚಿಂತೆಯಿಂದ ಒಪ್ಪಿಸಿಬಿಟ್ಟರೆ ಸಾಕಿತ್ತು, ಅದರೊಳಗೇನಿದೆ ಎಂದು ವಿಚಾರಿಸುವ ಗೊಡವೆಗೇ ಹೋಗದೆ ಅದು ವಿಳಾಸದಾರರಿಗೆ ಖಂಡಿತ ತಲುಪುತ್ತಿತ್ತು. ಹೀಗೆ ಇಂದಿನ ಕೊರಿಯರ್ ಸೇವೆಯ ಮೂಲಬೇರುಗಳನ್ನು ನಾವಿಲ್ಲಿ ಕಾಣಬಹುದು. 
ವರ್ತಕ ಸಮುದಾಯವು ತಮಗಾಗಿ ಇಷ್ಟನ್ನೆಲ್ಲ ಮಾಡುವಾಗ ಅವರ ಋಣ ತೀರಿಸಲು ಪಾದ್ರಿ ಸಮುದಾಯವು ತಾನೂ ಏನಾದರೂ ಮಾಡಬೇಕಲ್ಲವೇ?  ಅವರು ತಾವು ಸಂದರ್ಶಿಸಿದ ಪ್ರಾಂತ್ಯಗಳ ರಾಜನೊಂದಿಗೆ ಸಂವಾದಿಸಿ ರಾಯಭಾರಿಯ ಕೆಲಸ ಮಾಡುತ್ತಿದ್ದರು. ಆ ರಾಜನನ್ನು ಭೇಟಿಯಾದಾಗ ಚಿನ್ನಬೆಳ್ಳಿಯ ಕುಸುರಿವಸ್ತುಗಳು, ಬೆಲೆಬಾಳುವ ವಸ್ತ್ರಗಳು, ವಿಶೇಷವಾಗಿ ಭಟ್ಟಿಯಿಳಿಸಿದ ಮದ್ಯ ಮುಂತಾದವುಗಳನ್ನು ಉಡುಗರೆಯಾಗಿ ನೀಡಲಾಗುತ್ತಿತ್ತು. ಈ ವಸ್ತುಗಳನ್ನು ವರ್ತಕ ಸಿಬ್ಬಂದಿಯೇ ಒದಗಿಸುತ್ತಿದ್ದಂತೆ ತೋರುತ್ತದೆ. ಆ ಮೂಲಕ ಆ ರಾಜರುಗಳೊಂದಿಗೆ ದೌತ್ಯದಲ್ಲಿ ಯಶರಾಗುತ್ತಿದ್ದ ಪಾದ್ರಿಗಳು ಅವರ ನಾಡಿನಲ್ಲಿ ಮುಕ್ತವಾಗಿ ಸಂಚರಿಸಲು ಸನ್ನದು ಪಡೆಯುತ್ತಿದ್ದರು ಮತ್ತು ಅದೇ ವೇಳೆಯಲ್ಲಿ ಆ ರಾಜರು ತಮ್ಮ ಸೇನಾಪಡೆಯನ್ನು ಮೇಲ್ದರ್ಜೆಗೇರಿಸಲು ವರ್ತಕರೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದ್ದರು. ವಿಜಯನಗರದ ಅರಸನು ತನ್ನ ಓರಗೆಯ ಬಿಜಾಪುರ ಸುಲ್ತಾನನ್ನು ಮಣಿಸಲು ಪೋರ್ಚುಗೀಸರಿಂದ ಕುದುರೆಗಳನ್ನೂ ಮದ್ದುಗುಂಡುಗಳನ್ನೂ ಖರೀದಿಸಿದ ಉದಾಹರಣೆ ಇತಿಹಾಸದಲ್ಲಿ ದಾಖಲಾಗಿದೆ.
ಹೀಗೆ ಪೋರ್ಚುಗೀಸರು ಇಂಡಿಯಾ ದೇಶಕ್ಕೆ ತಾವು ಕಂಡುಕೊಂಡ ಜಲಮಾರ್ಗಕ್ಕೆ ಪೋಪ್ ಜಗದ್ಗುರುಗಳಿಂದ ವಿಶೇಷ ಪರ್ಮಿಟ್ಟು ಮಾಡಿಕೊಂಡಿದ್ದರಲ್ಲವೇ? ಅವರು ಅಂದು ಪೋಪ್ ಜಗದ್ಗುರುಗಳಿಗೆ ಇಂಡಿಯಾ, ಸಿಲೋನ್, ಬರ್ಮಾ, ಚೀನಾ, ಜಪಾನ್ ದೇಶಗಳನ್ನು ಒಟ್ಟು ಸೇರಿಸಿ ಈ ಅಗಾಧವಾದ ಪ್ರದೇಶವನ್ನು ಒಂದು ಪುಟ್ಟ ಭೂಭಾಗದಂತೆ ತೋರಿಸಿದ ಭೂಪಟವನ್ನು ತಯಾರಿಸಿ ಧರ್ಮಪ್ರಚಾರದ ಹಕ್ಕನ್ನು ಪಡೆದಿದ್ದರು. ಹೀಗೆ ಅವರು ಯೂರೋಪಿನಲ್ಲಿ ಸಂಬಾರ ಪದಾರ್ಥಗಳನ್ನು ವಿಕ್ರಯಿಸುವ ಏಕೈಕ ದೊರೆಗಳಾಗಿ ಮೆರೆಯಲು ತೊಡಗಿದಾಗ ಚಿನ್ನದ ಹುಡುಕಾಟದಲ್ಲಿ ತೊಡಗಿದ್ದ ಸ್ಪೇನ್, ಇಂಗ್ಲೆಂಡ್ ಮತ್ತು ಫ್ರಾನ್ಸ್ ಮುಂತಾದ ದೇಶಗಳಿಗೆ ಕಣ್ಣುಕಿಸುರಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಅವರೂ ಇಂಡಿಯಾದತ್ತ ಮುಖ ಮಾಡಲಾರಂಭಿಸುತ್ತಿದ್ದಂತೆ ಪೋರ್ಚುಗೀಸರಿಗೆ ಆತಂಕ ಶುರುವಾಯಿತು.
ಇಂಡಿಯಾದ ಜಲಮಾರ್ಗದಲ್ಲಿ ಆ ಇನ್ನಿತರರೂ ಪಯಣಿಸಿದರೆ ಇಂಡಿಯಾ ಸೇರಿದಂತೆ ಜಪಾನ್ ವರೆಗಿನ ಭೂಮಾಪನದ ಅಳತೆ ಸಿಕ್ಕಿ ಪೋಪರೆದುರು ಮುಖಭಂಗವಾಗುವುದು ಮಾತ್ರವಲ್ಲ, ಸಿಗುತ್ತಿದ್ದ ವರಮಾನದಲ್ಲಿ ಕಡಿತ ಉಂಟಾಗುವುದು ಅವರಿಗೆ ಬೇಡವಾಗಿತ್ತು. ಅದಕ್ಕಾಗಿ ಅವರು ಇಂಗ್ಲಿಷರು ಮತ್ತು ಫ್ರೆಂಚರ ವಿರುದ್ಧ ಕ್ರೈಸ್ತ ಜಗದ್ಗುರು ಪೀಠಕ್ಕೆ ಒತ್ತಡ ತರಲೆತ್ನಿಸಿದರು. ತಾವೇ ಕ್ರೈಸ್ತ ಧರ್ಮರಕ್ಷಕರು, ಈ ಆಂಗ್ಲರು ಮತ್ತು ಫ್ರೆಂಚರು ಪಾಷಂಡಿಗಳು ಎನ್ನುವ ಅಭಿಪ್ರಾಯವನ್ನು ಬಿಂಬಿಸಲು ಸಹಾ ಅವರು ಹಿಂಜರಿಯಲಿಲ್ಲ.
ಒಂದು ಶತಮಾನದ ಕಾಲ ಇಲ್ಲಿ ನೆಲೆನಿಂತು ಅಪಾರ ಹಣಗಳಿಸಿದರೂ ಧರ್ಮಪ್ರಚಾರಕ್ಕೆ ನೀಡಿದ ಕೊಡುಗೆ ಏನು ಎಂಬ ಪ್ರಶ್ನೆಗೆ ಇಂಕ್ವಿಸಿಷನ್ ಎಂಬ ಬಲವಂತ ದೀಕ್ಷೆ ಉತ್ತರವಾಯಿತೇ? ಅಲ್ಲದೆ ಪೋರ್ಚುಗೀಸ್ ರಾಜಕಾರಣವು ವ್ಯಾಟಿಕನ್ನಿನ ಕ್ರೈಸ್ತ ಜಗದ್ಗುರುಪೀಠದ ಆಡಳಿತದಲ್ಲೂ ಕೈಹಾಕಿ ಪೋಪರ ಮತ್ತು ಬಿಷಪರ ಆಯ್ಕೆಗಳನ್ನು ಪೋರ್ಚುಗೀಸ್ ರಾಜಕಾರಣದ ದಾಳದಂತೆಯೇ ನಡೆಸಿಕೊಂಡದ್ದೂ ಸುಳ್ಳೇನಲ್ಲ. ಅದೇ ರಾಜಕೀಯ ಹುನ್ನಾರದ ಫಲವಾಗಿಯೇ ಜಗದ್ಗುರುಪೀಠವು ತನಗೆ ನಿಷ್ಠರಾಗಿದ್ದ ಯೇಸುಸಭೆಯನ್ನು ಬಹಿಷ್ಕರಿಸಿತ್ತು ಎಂಬುದಂತೂ ಕಟುಸತ್ಯ.
ಕೊನೆಗೂ ರೋಮಾಪುರಿಯ ಈ ಜಗದ್ಗುರುಪೀಠವು ಆ ಕಬಂಧಬಾಹುವಿನಿಂದ ಹೊರಬಂದು ತನ್ನ ಕಾಲಮೇಲೆ ನಿಲ್ಲುವ ಮುನ್ನ ಶತಮಾನಗಳ ಕಾಲ ಪಾದ್ರುವಾದೆ ಮತ್ತು ಪ್ರಾಪಗಾಂಡಾಗಳ ನಡುವಿನ ಶೀತಲಸಮರವನ್ನು ಎದುರಿಸಬೇಕಾಯಿತೆಂಬುದು ಇತಿಹಾಸ.

ಗುರುವಾರ, ಡಿಸೆಂಬರ್ 1, 2011

ಮಣ್ಣಿನ ದಾಖಲೆ


ಕ್ರೈಸ್ತಧರ್ಮ ನಮ್ಮ ನೆಲದ ಧರ್ಮವಲ್ಲ. ನಮ್ಮ ಮಣ್ಣಿನ ಧರ್ಮಗಳಲ್ಲಾದರೆ ಧರ್ಮಸಂಹಿತೆಗಿಂತಲೂ ಹೆಚ್ಚಾಗಿ ಪುರಾಣಪುಣ್ಯ ಕತೆಗಳು, ಉಪಕತೆಗಳು, ನೀತಿಪ್ರಧಾನ ಪ್ರಸಂಗಗಳು ಜನಜನಿತವಾಗಿವೆ. ಆದರೆ ಕ್ರೈಸ್ತಧರ್ಮವನ್ನು ಪ್ರಚುರಪಡಿಸಿದ ವಿದೇಶೀಯರು ತಮ್ಮ ಪಾಶ್ಚಾತ್ಯ ದೇಶಗಳ ಶೈಲಿಯಲ್ಲೇ ವಿಷಯ ನಿರ್ದುಷ್ಟ ಕಟ್ಟುಪಾಡಿಗೆ ಒಳಗಾದವರು. ಅದರ ಜೊತೆಜೊತೆಗೇ ಅವರು ನಮ್ಮ ನಾಡಿಗೆ ಬಂದಾಗ ಅವರಿಗೆ ಭಾಷೆಯ/ಭಾಷಾಂತರದ ಸಂದಿಗ್ದತೆಯೂ ಕಾಡುತ್ತಿತ್ತು. ಈ ಒಂದು ಹಿನ್ನೆಲೆಯಲ್ಲಿ ಆ ಕಾಲದ ಸಂದರ್ಭವನ್ನು ವಿವೇಚಿಸಿದಾಗ ವಿದೇಶೀ ಪಾದ್ರಿಗಳು ಹಾಗೂ ಕ್ರೈಸ್ತ ಜನಸಾಮಾನ್ಯರ ನಡುವೆ ಸ್ಥಳೀಯರೇ ಆದ ಉಪದೇಶಿಗಳು ಪ್ರಮುಖ ಸೇತುವೆಯಾಗಿ ನಿಲ್ಲುವುದನ್ನು ಕಾಣುತ್ತೇವೆ.
ಒಂದೆಡೆ ಈ ಉಪದೇಶಿಗಳು ವಿದೇಶೀ ಪಾದ್ರಿಗಳಿಗೆ ಕನ್ನಡ ಕಲಿಸುವ ಗುರುಗಳಾಗಿದ್ದರೆ ಅದೇ ನೇರದಲ್ಲಿ ಆ ಪಾದ್ರಿಗಳು ಹೇಳುವ ತತ್ತ್ವಗಳಿಗೆ ದೇಶೀಯ ನೆಲೆಯಲ್ಲಿ ತಕ್ಕ ಪದಗಳನ್ನು ಸಂಯೋಜಿಸಿ ಜನರಿಗೆ ತಲಪಿಸುವ ಹೊಣೆಗಾರಿಕೆಯುಳ್ಳವರೂ ಆಗಿದ್ದರು.
ನಮ್ಮ ದೇಶೀಯ ಸಮಾಜಕ್ಕೆ ಅತಿ ಪುರಾತನ ಧಾರ್ಮಿಕ ಆಕರಗಳೆಂದರೆ ವೇದಗಳು, ಧರ್ಮಪ್ರವರ್ತನ ಸೂತ್ರ, ತೀರ್ಥಂಕರ ಚರಿತ್ರೆ, ಷಟ್‌ಸ್ಥಲಸಿದ್ಧಾಂತ ಮತ್ತು ದ್ವೈತಾದ್ವೈತಗಳು. ಇವೆಲ್ಲವುಗಳಲ್ಲಿ ಅತಿ ಪ್ರಾಚೀನವಾದುದು ವೇದಗಳೇ ಆದ್ದರಿಂದ ಕ್ರೈಸ್ತರ ಧರ್ಮಗ್ರಂಥವನ್ನು ವೇದಗಳಿಗೆ ಸಮನಾಗಿ ಪರಿಗಣಿಸುವುದಾಗಲೀ ಅಥವಾ ಚತುರ್ವೇದಗಳ ಸಾಲಿನಲ್ಲಿಟ್ಟು ಸತ್ಯವೇದ ಎಂದು ಕರೆಯುವುದಾಗಲೀ ಈ ಉಪದೇಶಿಗಳಿಂದಲೇ ಸಾಧ್ಯ. ಆದರೆ ಕನ್ನಡನಾಡು ಮಾತ್ರವಲ್ಲ ಇಡೀ ದಕ್ಷಿಣ ಇಂಡಿಯಾದಲ್ಲಿ ಕ್ರೈಸ್ತಧರ್ಮ ಪ್ರಚಾರವನ್ನು ನಡೆಸಿದ ಜೆಸ್ವಿತರಾಗಲೀ ಫ್ರೆಂಚ್ ಮಿಷನ್ನಿನವರಾಗಲೀ ಯಾರೂ ಈ ಉಪದೇಶಿಗಳನ್ನು ತಮ್ಮ ವರದಿಗಳಲ್ಲಿ ದಾಖಲಿಸಲಿಲ್ಲವೆನ್ನುವುದು ವಿಷಾದಕರ ಸಂಗತಿ.
ಮೇಲೆ ಹೇಳಿದ ಮತಪ್ರಚಾರಕರಿಗೆ ತಾವು ಎಷ್ಟು ಮಂದಿಗೆ ಕ್ರೈಸ್ತದೀಕ್ಷೆ ಕೊಟ್ಟೆವೆನ್ನುವ ಅಂಕಿಸಂಖ್ಯೆಗಳೇ ಮುಖ್ಯವಾಗುತ್ತವೆ ಹೊರತು ಎಂಥಾ ಜನರಿಗೆ ತಾವು ದೀಕ್ಷೆಯನ್ನು ಧಾರೆ ಎರೆದೆವೆನ್ನುವುದು ಮುಖ್ಯವಾಗುವುದಿಲ್ಲ. ಹಾಗೇನಾದರೂ ಉಲ್ಲೇಖವಿದ್ದಲ್ಲಿ ವ್ಯಕ್ತಿಯೊಬ್ಬನ ದೀಕ್ಷಾಸಂದರ್ಭದಲ್ಲಿ ನಡೆದ ಘರ್ಷಣೆ, ಅಲ್ಲಿನ ಪಾಳೇಗಾರನ ಅಥವಾ ಜನನಾಯಕನ ಅಥವಾ ಅರಸನ ಪಾತ್ರಗಳು ಚಿತ್ರಿತವಾಗುವ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಆ ವ್ಯಕ್ತಿಯನ್ನು ಉಲ್ಲೇಖಿಸಲಾಗಿರುತ್ತದೆ. ಇನ್ನೆಲ್ಲಿಯೂ ಹೊಸಕ್ರೈಸ್ತರ ಮೂಲಹೆಸರುಗಳನ್ನು ಪ್ರಸ್ತಾಪಿಸಿರುವುದೇ ಇಲ್ಲ. ಹೀಗೊಬ್ಬ ಬ್ರಾಹ್ಮಣ ಕ್ರೈಸ್ತನಾದ, ಹೀಗೊಬ್ಬ ಶೈವಸಂನ್ಯಾಸಿ ಕ್ರೈಸ್ತನಾದ, ಅಲ್ಲೊಬ್ಬ ಹೆಂಗಸು ಕ್ರೈಸ್ತಳಾದಳು, ಈ ಊರಿನಲ್ಲಿ ಇಷ್ಟು ಸಂಖ್ಯೆಯ ಮಂದಿ ಕ್ರೈಸ್ತರಾದರು ಎಂಬುದನ್ನಷ್ಟೇ ಕಾಣುತ್ತೇವೆ.
ಆಮೇಲೆ ಆ ಹೊಸಕ್ರೈಸ್ತರ ಪಾಡೇನಾಯಿತು, ಅವರ ಬದುಕು ಆಚಾರ ವಿಚಾರಗಳು ತೀವ್ರತರ ಬದಲಾವಣೆಗಳನ್ನು ಕಂಡವೇ, ಅವರಿಂದ ಸೃಷ್ಟಿಯಾದ ಜನಪದವೇನಾದರೂ ಇತ್ತೇ, ಅವರ ಧರ್ಮದೊಂದಿಗೇನೆ ಜನಪದವೂ ಮುಂಪೀಳಿಗೆಗಳಿಗೆ ಹರಿದು ಬಂತೇ ಎಂಬುದನ್ನು ತಿಳಿಸುವ ದಾಖಲೆಗಳಿಲ್ಲ.