ಶುಕ್ರವಾರ, ಸೆಪ್ಟೆಂಬರ್ 19, 2014

ಮಕ್ಕಳನ್ನು ಗೌರವಿಸಿ

ನ್ಯಗ್ರೋಧ ಬೀಜಂ ಕೆಲಂ ಸಿಡಿದು ಪೆರ್ಮರನಾಗದೇ, ಎಳೆಗರುಂ ಎತ್ತಾಗದೇ, ದೈವಾನುಗ್ರಹಮಿದ್ದೊಡಂ ಬಡವಂ ಬಲ್ಲಿದನಾಗನೇ? ಎಂದು ಕನ್ನಡದ  ಕವಿಯೊಬ್ಬ ಹಾಡಿದ್ದಾನೆ. ಪದ್ಯದ ವಿವರಣೆ ಹೀಗಿದೆ: ಆಲದ ಮರದ ಬೀಜವು ಸಾಸಿವೆ ಕಾಳಿಗಿಂತ ಚಿಕ್ಕದು ಆದರೆ ಅದು ಮೊಳೆತು ಭಾರೀ ಗಾತ್ರದ ಮರವನ್ನು ಹುಟ್ಟುಹಾಕುತ್ತದೆ, ಮುದ್ದು ಮುದ್ದಾಗಿ ಜಿಗಿಯುವ ಕರು ನಮ್ಮ ಕಣ್ಣ ಮುಂದೆಯೇ ಬೆಳೆದು ಗೂಳಿಯಾಗಿ ಹೆದರಿಸುವುದಿಲ್ಲವೆ ಹಾಗೆಯೇ ಇಂದು ಬಡವನಾಗಿರುವವನು ದೈವೇಚ್ಛೆಯಿಂದ ನಾಳೆ ಸಿರಿವಂತನಾಗಲೂ ಬಹುದು. ಪವಿತ್ರ ಬೈಬಲಿನಲ್ಲಿ ನಮಗೆ ಇಂಥ ಹಲವು ಉದಾರಣೆಗಳು ಕಾಣಸಿಗುತ್ತವೆ.
ಮೊದಲಿಗೆ ನಾವು ಜೋಸೆಫ್ ಮತ್ತು ಅವನ ಹನ್ನೆರಡು ಸೋದರರ ಕತೆಯನ್ನೇ ತೆಗೆದುಕೊಳ್ಳೋಣ. ಪುಟ್ಟಹುಡುಗ ಜೋಸೆಫ್ ಚಿತ್ರವಿಚಿತ್ರವಾದ ಕನಸುಗಳನ್ನು ಕಾಣುತ್ತಿದ್ದ. ಆದರೆ ಅವನ ತಂದೆ ಜಾಕೋಬನಿಗೆ ತನ್ನ ಮಗನ ಮೇಲೆ ಭರವಸೆತ್ತು. ಅಣ್ಣಂದಿರಾದರೋ ಅವನನ್ನು ಕನಸುಗಾರ ಕನಸುಗಾರ ಎಂದು ಲೇವಡಿ ಮಾಡುತ್ತಿದ್ದರು. ಕೊನೆಗೆ ಅಣ್ಣಂದಿರು ಅವನನ್ನು ವರ್ತಕರಿಗೆ ಮಾರಿಬಿಟ್ಟರು. ವರ್ತಕರ ಕಣ್ಣಿಗೆ ಜೋಸೆಫ್ ಒಳ್ಳೆ ಹಣಕ್ಕೆ ಮಾರಬಹುದಾದ ಒಬ್ಬ ಗುಲಾಮನಾಗಿ ಕಂಡ. ಜೋಸೆಫನನ್ನು ಕೊಂಡುಕೊಂಡ ಅಧಿಕಾರಿಗೆ ಅವನೊಬ್ಬ ಪ್ರಾಮಾಣಿಕ ಹಾಗೂ ಚುರುಕುಬುದ್ದಿಯ ಸೇವಕನಾಗಿ ಕಂಡ. ಅವನ ಹೆಂಡತಿಗೋ ಅವನೊಬ್ಬ ಸುಂದರ ಸುಕಾಯದ ಪುರುಷನಾಗಿ ಕಂಡ. ಜೈಲಿನಲ್ಲಿ ಅವನ ಸಹವಾಸಿಯಾಗಿದ್ದವರು ಜೋಸೆಫನಲ್ಲಿ ದೈವಭಕ್ತಿಯನ್ನು ಗುರುತಿಸಿದರು. ದೇವರು ಜೋಸೆಫನ ಭವಿಷ್ಯದಲ್ಲಿ ಈಜಿಪ್ಟ್ ದೇಶದ ಪ್ರಧಾನಮಂತ್ರಿಯ ಪಟ್ಟವನ್ನು ಬರೆದಿದ್ದರು.
ಎಸ್ತೆರಳ ಕತೆಯನ್ನೇ ನೋಡಿ. ತಂದೆ ತಾಯಿಯಿಲ್ಲದ ಎಸ್ತೆರ್ ತನ್ನ ಚಿಕ್ಕಪ್ಪನ ನೆರಳಿನಲ್ಲಿ ದೈವಭಕ್ತಿಯ ಜೀವನ ನಡೆಸುತ್ತಿದ್ದಳು. ಹೆಣ್ಣುಮಗಳು ದೈವಪ್ರೇರಣೆಂದ ದೇಶದ ರಾಣಿಯಾದಳು ಮಾತ್ರವಲ್ಲ ತನ್ನ ಜನರನ್ನು ಸುರಕ್ಷಿತವಾಗಿ ಕಾಪಾಡಿದಳು. ಎಲ್ಲೋ ಆಡಿಕೊಂಡಿದ್ದ ಸಮುವೇಲನನ್ನು ಎಲೀಯನನ್ನು ದೇವರು ತನ್ನ ವಕ್ತಾರರನ್ನಾಗಿ ಆರಿಸಿಕೊಳ್ಳಲಿಲ್ಲವೇ? ದೇವರಲ್ಲಿ ಅಪಾರ ನಂಬಿಕೆರಿಸಿದ್ದ ಅಬ್ರಹಾಮನು ಇಳಿವಯಸ್ಸಿನಲ್ಲಿ ತಂದೆಯಾಗಿ ಒಂದು ಮಹಾನ್ ಮನುಷ್ಯಸಂಕುಲಕ್ಕೇ ಪಿತಾಮಹನಾದ. ಕುರಿಗಳನ್ನು ಮೇಸುತ್ತಿದ್ದ ದಾವಿದನನ್ನು ದೇವರು ತಮ್ಮ ಪ್ರಜೆಯ ರಾಜನನ್ನಾಗಿ ಅಭಿಷೇಕಿಸಿದರು. ಈಟಿ ಭರ್ಜಿಗಳನ್ನು ಹಿಡಿದಿದ್ದ ಗೊಲಿಯಾತ ಎಂಬ ದೈತ್ಯನನ್ನು ಪುಟ್ಟ ಹುಡುಗ ದಾವೀದ ತನ್ನ ಕವಣೆಯಿಂದಲೇ ಹೊಡೆದು ಕೆಡವಿದ. ದೈವಸಂಕಲ್ಪವಿದ್ದರೆ ನಿಮ್ಮ ಕೆಲಸದಾಕೆ ಸಹಾ ಒಂದಾನೊಂದು ದಿನ ನಿಮ್ಮ ಕಂಪೆನಿಯ ಸಿಇಒ ಆಗಲೂ ಬಹುದುನಿಮ್ಮ ತೋಟದ ಮಾಲಿ ಮುಂದೊಮ್ಮೆ ನಿಮ್ಮ ಕ್ಷೇತ್ರದ ಎಂಎಲ್ಲೆ ಆದರೂ ಆಗಬಹುದು.

ಅದಕ್ಕೇ ಯೇಸು ಚಿಕ್ಕಮಕ್ಕಳನ್ನು ತನ್ನ ಬಳಿಗೆ ಬರಲು ಬಿಡಿ ದೈವೀಸಾಮ್ರಾಜ್ಯದ ವಾರಸುದಾರರು ಅವರು ಎಂದು ಹೇಳಿದ್ದು. (ಮಾರ್ಕ ೧೦:೧೩-೧೬)ಚಿಕ್ಕಮಕ್ಕಳನ್ನು ನಾವು ನಗಿಸಿದರೆ ನಗುವ ಅಳಸಿದರೆ ಅಳುವ ಆಟದ ಗೊಂಬೆಗಳು ಎಂದುಕೊಂಡಿದ್ದೇವೆ. ನಮ್ಮಲ್ಲಿ ಕೆಲವು ಜನ ಪುಟ್ಟ ಕಂದಮ್ಮಗಳನ್ನು ಕಾಮಪಿಪಾಸುಗಳಂತೆ ಕಾಣುತ್ತಿದ್ದಾರೆ. ಸಮಾಜದ ಘೋರ ವ್ಯಂಗ್ಯವಿದು. ಯೇಸು ಹೇಳಿದಂತೆ ಸ್ವರ್ಗಸಾಮ್ರಾಜ್ಯದ ವಾರಸುದಾರರನ್ನು ಯೇಸುವಿಗೆ ಸಮೀಪವಾಗಿರುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಚಿಕ್ಕ ಹುಡುಗನಾಗಿದ್ದಾಗಲೇ ಯೇಸು ಮಹಾದೇವಾಲಯದ ಧರ್ಮಪಂಡಿತರಲ್ಲಿ ಅನೇಕಾನೇಕ ಪ್ರಶ್ನೆಗಳನ್ನು ಕೇಳಿ ಗಲಿಬಿಲಿಗೊಳಿಸಿದ್ದನಲ್ಲವೇ? ಮುಂದೆ ಅದೇ ಯೇಸು ಅನೇಕ ಜಟಿಲ ಧಾರ್ಮಿಕ ಸಮಸ್ಯೆಗಳಿಗೆ ಮನುಷ್ಯಧರ್ಮದ ಪರಿಹಾರಗಳನ್ನು ಹೇಳಿ ಸಮಾಜದ ಉದ್ಧಾರ ಮಾಡಿದನಲ್ಲವೇ? ಹಾಗೆಯೇ ಇಂದಿನ ಮಕ್ಕಳೂ ಸಹ ಮುಂದೆ ದೊಡ್ಡ ವಿಜ್ಞಾನಿಗಳಾಗಿ, ವೈದ್ಯರಾಗಿ, ಇಂಜಿನಿಯರುಗಳಾಗಿ, ಸಮಾಜದ ಒಳಿತಿಗೆ ದುಡಿಯುವ ಶಿಲ್ಪಿಗಳಾಗುವಂತೆ ಮಾಡೋಣ. ದೇವರು ಕುರಿಕಾಯುವ ದಾವಿದನಲ್ಲಿ ದೇಶಕಾಯುವ ರಾಜನನ್ನು ಕಂಡಂತೆ ಮಕ್ಕಳಲ್ಲಿ ನಾವು ದೊಡ್ಡ ವ್ಯಕ್ತಿತ್ವವನ್ನು ಕಾಣೋಣ. ಮಕ್ಕಳನ್ನು ಗೌರವಿಸೋಣ. ಏಕೆಂದರೆ ಮನುಷ್ಯರಾಗಿ ಹುಟ್ಟಿದ ಎಲ್ಲರಲ್ಲೂ ವ್ಯಕ್ತಿತ್ವವಿದ್ದೇ ಇರುತ್ತದೆ.