ಸೋಮವಾರ, ಅಕ್ಟೋಬರ್ 17, 2011

ಜೇನಿನ ರುಚಿಗಿಂತ


ಬೊಂಬಾಯಿನ ಕೊಲಾಬಾದಲ್ಲಿ ಸಾಗರ್ ಎಂಬೋ ನೌಕಾದಳದ ಅತಿಥಿಗೃಹದಲ್ಲಿ ನಾನು ಕೆಲ ದಿನಗಳ ವಾಸ್ತವ್ಯ ಹೊಂದಿದ್ದೆ. ಅದರ ಎಂಟನೇ ಮಹಡಿಯ ಕಿಟಕಿಯಲ್ಲಿ ನಿಂತು ಸನಿಹದಲ್ಲೇ ಕಾಣುತ್ತಿದ್ದ ರಾಜಾಭಾಯ್ ಗಡಿಯಾರ ಗೋಪುರವನ್ನು ನೋಡುತ್ತಲಿದ್ದೆ. ಅತಿಥಿಗೃಹದ ಕೆಳಗಿನ ಉದ್ಯಾನದಲ್ಲಾಗುತ್ತಿದ್ದ ಗದ್ದಲ ಇಲ್ಲಿಗೂ ಕೇಳಿಸುತ್ತಿತ್ತು. ಆ ಉದ್ಯಾನ ಹಾಗೂ ಅದಕ್ಕೆ ಸೇರಿದ ಸಭಾಂಗಣವು ಸಂಜೆಯಾಗುತ್ತಿದ್ದಂತೆ ಕುಡಿತದ ಕೇಕೆಯ ಹಾಗೂ ಔತಣದ ತಾಣವಾಗುತ್ತಿತ್ತು. ದಿನಗಟ್ಟಲೆ ಸಮುದ್ರದ ಏಕತಾನತೆಯಲ್ಲಿ ಸೋತ ನಾವಿಕರು ದಡಕ್ಕೆ ಬಂದು ಶುಭ್ರವಾದ ಬಟ್ಟೆ ತೊಟ್ಟುಕೊಂಡು ನಗರವನ್ನೆಲ್ಲ ಅಂಡಲೆದು ಕೊನೆಗೆ ಸಂಜೆಯಾಗುತ್ತಿದ್ದಂತೆ ಇಲ್ಲಿ ಸೇರುತ್ತಾರೆ.
ಸಭಾಂಗಣದಲ್ಲಿ ಬೃಹತ್ ಪರದೆಗಳ ಮೇಲೆ ಪ್ರಚಲಿತ ಜನಪ್ರಿಯ ಟಿವಿ ಶೋ ಇದ್ದರೂ ಅದರತ್ತ ಯಾರೂ ನೋಡುವವರಿಲ್ಲ. ಅಲ್ಲ, ಮಾತನಾಡಲಿಕ್ಕೆ ಏನೆಲ್ಲ ವಿಷಯಗಳುಂಟು, ಟಿವಿ ತಾನೇ ಯಾರಿಗೆ ಬೇಕು? ಮೋಜು, ಕುಣಿತ, ಕುಡಿತ, ಧೂಮಲೀಲೆ ಹಾಗೂ ಭರ್ಜರಿ ಬಾಡೂಟವಿರುವಾಗ ನಗು ಕೇಕೆ ಹರಟೆಗಳ ನಡುವೆ ಟಿವಿ ಅದರ ಪಾಡಿಗೆ ಅದು ಚಾಲನೆಯಲ್ಲಿರುತ್ತದೆ. ಎಲ್ಲೋ ಒಬ್ಬೊಬ್ಬರು ನಡುವಯಸ್ಸಿನ ಅಬ್ಬೇಪಾರಿಗಳು ಒಂಟಿಯಾಗಿ ಮಧು ಹೀರುತ್ತಾ ಮನೆಯ ನೆನಪುಗಳನ್ನು ನವೀಕರಿಸುತ್ತಾ ಗೆಳೆಯರಿಗಾಗಿ ಕಾಯುತ್ತಾ ಕುಳಿತಿರುತ್ತಾರೆ. ಅಂಥ ಒಂಟೆತ್ತಿನ ಮೇಜಿನಲ್ಲಿ ಕುಳಿತು ಊಟ ಮುಗಿಸಿದವನು ಮೇಲೆ ಹೋಗಿ ಬೃಹತ್ ಬೊಂಬಾಯಿ ನಗರದ ದೀಪದೃಶ್ಯಗಳನ್ನು ನೋಡುವುದೇ ಚೆಂದ. ಆದರೆ ಇಂದು ಎಂಟನೇ ಮಹಡಿಯಲ್ಲಿ ಇನ್ನೊಬ್ಬ ಸ್ನೇಹಿತನಿಗಾಗಿ ನಿರೀಕ್ಷಿಸುತ್ತ ಕಿಟಕಿಯಾಚೆ ನೋಡುತ್ತಿದ್ದೆ.
ಆ ಸಮಯದಲ್ಲೇ ನನ್ನ ಮೊಬೈಲು ರಿಂಗಣಿಸಿತು. ಮನೆಯಿಂದ ಅಂದರೆ ಬೆಂಗಳೂರಿನಿಂದ ಬಂದ ಕರೆ. ನಾನು ಮಾತನಾಡಿ ಮುಗಿಸಿದ ನಂತರ ಒಬ್ಬ ನಡುವಯಸ್ಕ ನನ್ನ ಬಳಿಗೆ ಬಂದು ’ನೀವು ಕ್ರಿಶ್ಚಿಯನ್ನಾ?’ ಎಂದು ಕೇಳಿದ. ನಾನು ಮುಗುಳ್ನಗುತ್ತಾ ಹೌದೆಂದು ತಲೆಯಾಡಿಸಿದೆ. ನನ್ನ ಹೆಸರನ್ನು ಹೊರತುಪಡಿಸಿದರೆ ಮುಖಚಹರೆಯಿಂದ ಅಥವಾ ಮಾತುಗಾರಿಕೆಯಿಂದ ಯಾರೂ ಇದುವರೆಗೆ ನನ್ನನ್ನು ಕ್ರಿಶ್ಚಿಯನ್ ಎಂದು ಗುರುತಿಸಿಲ್ಲ. ಆದರೆ ಈ ವ್ಯಕ್ತಿ ಅದು ಹೇಗೆ ನನ್ನನ್ನು ಕ್ರಿಶ್ಚಿಯನ್ ಎಂದುಕೊಂಡ? ಅದಕ್ಕವನು ಉತ್ತರಿಸುತ್ತಾ ನಿಮ್ಮ ಮೊಬೈಲಿನ ರಿಂಗ್ ಟೋನ್ ಕೇಳಿ ಹಾಗಂದುಕೊಂಡೆ ಎಂದ.
ತುಂಬಾ ಜನಪ್ರಿಯವಾಗಿರುವ ಒಂದು ಕ್ರೈಸ್ತ ಭಕ್ತಿಗೀತೆಯ ರಾಗವನ್ನು ನನ್ನ ಮೊಬೈಲಿಗೆ ಅಳವಡಿಸಿಕೊಂಡಿದ್ದೇನೆ. ’ಜೇನಿನ ರುಚಿಗಿಂತ ಯೇಸು ಸುನಾಮವು ದಿವ್ಯ ಮಧುರವಾದ್ದೇ’ ಅನ್ನೋ ಆ ರಾಗವನ್ನು ನೀವೆಲ್ಲ ಕೇಳಿರುತ್ತೀರಿ. ವಿಚಿತ್ರವೆಂದರೆ ನನ್ನ ತಮಿಳು ಸಹೋದ್ಯೋಗಿಯಿಂದ ಆ ರಾಗವನ್ನು ಪಡೆದುಕೊಂಡಿದ್ದೆ, ತಮಿಳಿನಲ್ಲೂ ಈ ರಾಗದ ಗೀತೆಯೊಂದಿದೆ. ಅದೇ ರಾಗದ ಹಾಡು ಮಲಯಾಳದಲ್ಲೂ ಇದೆಯೆಂಬುದು ಇದೀಗ ಈ ವ್ಯಕ್ತಿಯಿಂದ ತಿಳಿಯಿತು. ಮಲೆಯಾಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಆ ಕ್ರೈಸ್ತ ಭಕ್ತಿಗೀತೆಯನ್ನು ಇಲ್ಲಿ ನೀಡಿದ್ದೇನೆ. ಜಯನ್ ಎಂಬವರು ಅದನ್ನು ರಚಿಸಿದ್ದಾರೆ. ಎರಡು ಬಗೆಯ ರಾಗಗಳಲ್ಲಿ ಅದು ಪ್ರಚಾರದಲ್ಲಿದೆ. ಪಾಶ್ಚಾತ್ಯ ಶೈಲಿಯ ರಾಗಲ್ಲಿರುವುದನ್ನು ಕೇಳಿದ ನಂತರ
ಯೇಸುದಾಸ್ ಹಾಡುವ ದೇಶಿ ಶೈಲಿಯ ಈ ಗೀತೆಯನ್ನು ಕೇಳಿರಿ.
ಗೀತೆಯ ಪಠ್ಯವನ್ನು ಇಲ್ಲಿ ಕೊಟ್ಟಿದ್ದೇನೆ:
ಎನ್ದತಿಶಯಮೇ ದೈವತ್ತಿನ್ ಸ್ನೇಹಂ
ಎತ್ರ ಮನೋಹರಮೇ, ಅದು
ಚಿನ್ತಯಿಲ್ ಅಡಙ್ಙಾ ಸಿನ್ಧುಸಮಾನಮಾಯ್
ಸನ್ತತಮ್ ಕಾಣುನ್ನು ಞಾನ್
ದೈವಮೇ ನಿನ್ ಮಹಾ ಸ್ನೇಹಮ್ ಅದಿನ್ ವಿಧಂ
ಆರ್ಕು ಗ್ರಹಿಚ್ಚರಿಯಾಮ್
ಎನಿಕ್ಕಾವದಿಲ್ಲೇ ಅದಿನ್ ಆೞಮಳನ್ನಿಡಾನ್
ಎತ್ರ ಬಹುಲಮದು
ಮೋದಮೆೞುಂ ತಿರುಮಾರ್ವಿಲ್ ಉಲ್ಲಾಸಮಾಯ್
ಸಂತತಂ ಚೇರ್ನಿರುನ್ನ, ಏಕ
ಜಾತನಾಮೇಶುವೇ ಪಾದಕರ್ಕಾಯ್ ತನ್ನ
ಸ್ನೇಹಮ್ ಅತಿಶಯಮೇ
ಜೀವಿತತ್ತಿಲ್ ಪಲ ವೀೞ್ಚಗಳ್ ವನ್ನಿಟ್ಟುಂ
ಒಟ್ಟುಂ ನಿಷೇಧಿಕ್ಕಾದೆ, ಎನ್ನೆ
ಕೇವಲಂ ಸ್ನೇಹಿಚ್ಚು ಪಾಲಿಚ್ಚಿಡುಂ ತವ
ಸ್ನೇಹಮತುಲ್ಯಮ್ ಅಹೋ!

ಗೆಳೆಯರೊಬ್ಬರು ಈ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
(ಅಚ್ಚರಿ ಅಚ್ಚರಿ ದೇವನ ಪ್ರೀತಿಯು
ಎನಿತು ಮನೋಹರವು, ಅದು
ಚಿನ್ತೆಯ ಮೀರಿದ ಪೆರ್ಗಡಲೊಲು ಎಂದು
ಅನುದಿನ ಪಾಡುವೆನು, ತಂದೆ
ಅನುದಿನ ಪಾಡುವೆನು
ದೇವನೇ ಹರಿಸಿದೆ ಸ್ನೇಹದ ಹೊನಲ್ಗಳ
ಯಾರು ಅಳೆವವರು, ಎನ್ನ
ತಂದೆಯ ಪ್ರೀತಿಯ ಆಳವನಳೆವುದು
ಮೀರಿದ ಬಲುಮೆಯದು, ಎನ್ನ
ಮೀರಿದ ಬಲುಮೆಯದು
ಮೋದವನೀಯುತ ದೇಹಕುಲ್ಲಾಸವ
ಅನುದಿನ ಪ್ರೀತಿಸುತ, ಏಕ
ಜಾತನೇ ಯೇಸುವೇ ಭಕ್ತರ್ಗೆ ನೀಡಿದ
ಪ್ರೀತಿಯದಚ್ಚರಿಯು, ನಿನ್ನ
ಪ್ರೀತಿಯದಚ್ಚರಿಯು

ಜೀವಿತ ಕಾಲದಿ ಮಾಡಿದ ಪಾಪವ
ಕ್ಷಮಿಸುತ ಪಾಲಿಸುತ, ತಂದೆ
ಸಾಕುತ ಸಲಹುತ ಮುನ್ನಡೆಸುವೆ ನಿನ್ನ
ಪ್ರೀತಿ ಅತುಲ್ಯವದು, ತಂದೆ
ಪ್ರೀತಿ ಅತುಲ್ಯವದು)

ಶನಿವಾರ, ಅಕ್ಟೋಬರ್ 15, 2011

ಎಪ್ಪತ್ತರ ದಶಕದಲ್ಲಿ


ಇದು ಎಪ್ಪತ್ತರ ದಶಕದ ಮಾತು. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯೇ ನಮ್ಮ ಮನೆಯಿದ್ದುದರಿಂದ ಅಲ್ಲಿನ ಪ್ರತಿ ಆಗುಹೋಗುಗಳಿಗೂ ನಾನು ಸಾಕ್ಷಿಯಾಗುತ್ತಿದ್ದೆ. ೧೯೬೦ರಿಂದ ೧೯೭೩ರವರೆಗಿನ ದೀರ್ಘಕಾಲ ಅಲ್ಲಿನ ಗುರುಗಳಾಗಿದ್ದ ಸ್ವಾಮಿ ಅಂತೋಣಿ ಸಿಕ್ವೆರಾ ಅವರು ತಮ್ಮ ಪ್ರಯತ್ನದಿಂದ ಈ ದೇವಾಲಯದ ಸಮುದಾಯವನ್ನು ಪ್ರವರ್ಧಮಾನ ಸ್ಥಿತಿಗೆ ತಂದಿದ್ದರು.
ಪೂಜೆಗಳಲ್ಲಿ ಹೊಸ ಪೀಳಿಗೆಯ ಸಮರ್ಥ ಪಾಲುಗೊಳ್ಳುವಿಕೆಗೆ ಇಂಬುಗೊಡಲು ಅವರು ಹತ್ತಿರದ ನಿರ್ಮಲರಾಣಿ ಶಾಲೆಯನ್ನು ಸಾಧನವಾಗಿ ಬಳಸಿಕೊಂಡಿದ್ದರು. ಅಲ್ಲಿನ ಮದರುಗಳು ಪ್ರತಿ ಭಾನುವಾರ ದೇವಾಲಯಕ್ಕೆ ಆಗಮಿಸಿ ಮಕ್ಕಳನ್ನು ಶಿಸ್ತುಬದ್ದವಾಗಿ ಕೂಡಿಸಿ ಬೆಳೆದ ಮಕ್ಕಳಿಗೆ ವಾಚನ ಓದಲು ಸಿದ್ಧಪಡಿಸಿ ಪುಟ್ಟ ಮಕ್ಕಳಿಗೆ ಜಪ ಧರ್ಮೋಪದೇಶದ ತರಗತಿಗಳನ್ನೂ ನಡೆಸುತ್ತಿದ್ದರು. ಶಾಲೆಯಿಂದ ಹೊರನಡೆದ ಹಳೆಯ ವಿದ್ಯಾರ್ಥಿಗಳೂ ಸಹ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಗಾನವೃಂದ ಪೂಜೆ ಒತ್ತಾಸೆ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಪೀಠದೊಳಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಹಿಂದಿನ ಅಟ್ಟಣಿಗೆಯಲ್ಲಿನ ಗಾನವೃಂದಕ್ಕೆ ಪುಷ್ಪ, ವಿಕ್ಟೋರಿಯಾ ಮುಂತಾದ ಹಿರಿ ವಿದ್ಯಾರ್ಥಿಗಳು ಜೀವಕಳೆ ತುಂಬಿದ್ದರು. ಬ್ರದರ್ ಜೋಸೆಫ್ ಡಿಮೆಲ್ಲೊ, ಬ್ರದರ್ ಎನ್ ಎಸ್ ಮರಿಜೋಸೆಫ್ ಮುಂತಾದವರು ಇಲ್ಲಿಗೆ ಬಂದು ಹಾಡು ಹೇಳಿಕೊಡುತ್ತಿದ್ದರು. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಆದರೆ ಕನ್ನಡ ಓದುತ್ತಿದ್ದ ಹಲವು ಮಂದಿ ಗಾನವೃಂದದಲ್ಲಿದ್ದರು.
೧೯೭೧ರಲ್ಲಿ ರಾಜಾಜಿನಗರದಲ್ಲಿ ಹೊಸ ಚರ್ಚು ತಲೆಯೆತ್ತಿದ್ದರಿಂದ ಮಲ್ಲೇಶ್ವರದ ಈ ಚರ್ಚು ಇಬ್ಭಾಗವಾಯಿತು. ಸಹಜವಾಗಿ ಗಾನವೃಂದದಲ್ಲಿನ ಕನ್ನಡದ ದನಿಗಳು ಸೊರಗಿದವು. ೧೯೭೩ರಲ್ಲಿ ಇನ್ನೊಂದು ಸ್ಥಿತ್ಯಂತರ ನಡೆದು ಥಾಮಸ್ ಫೆರ್ನಾಂಡೊ ಎಂಬ ತಮಿಳು ಪಾದ್ರಿ ಈ ಚರ್ಚಿಗೆ ನೇಮಕವಾದರು. ಅವರು ಯೇಸುಸ್ವಾಮಿ ಸ್ವತಃ ತಮಿಳರಾಗಿದ್ದರೆಂದೂ ಬೆಂಗಳೂರು ತಮಿಳುನಾಡಿನ ಭಾಗವೆಂದೂ ಭಾವಿಸಿದ್ದರು. ಹೀಗೆ ದೇವಾಲಯದ ಭಕ್ತಾದಿಗಳ ನಡುವೆ ಒಂದು ಸ್ಪಷ್ಟ ಗೆರೆ ಎಳೆಯಲಾಯಿತು. ಒಂದು ಕಡೆ ತಮಿಳರೆಂದೂ ಇನ್ನೊಂದು ಕಡೆ ಕನ್ನಡವೆಂದೂ ವಿಭಾಗಿಸಿ ಹಗ್ಗ ಜಗ್ಗಾಟ ಶುರುವಾಯಿತು. ಕನ್ನಡದ ಪೂಜೆಗಳಲ್ಲಿ ಹಾಡುಹಾಡಲು ಪವಿತ್ರಗ್ರಂಥ ಪಠಿಸಲು ಜನರಿಲ್ಲವಾಯಿತು. ಅಲ್ಲಿಯ ತನಕ ನಿರ್ಮಲರಾಣಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತಮಿಳು ಯುವಕರೇ ಕನ್ನಡದ ಬೈಬಲ್ ವಾಚಿಸುತ್ತಿದ್ದರು. ತಮಿಳಿಗಾದರೋ ವಲಸೆ ಬಂದಿದ್ದ ಸ್ಪಷ್ಟ ತಮಿಳು ಉಚ್ಚಾರದ ತಾರ್ಸಿಸ್, ಹ್ಯಾರಿ ಮುಂತಾದ ಓದುಗರಿದ್ದರು.
ಕನ್ನಡಕ್ಕೊದಗಿದ ಈ ಶೂನ್ಯವನ್ನು ತುಂಬಲು ಪೀಟರ್ ಪಿಕಾರ್ಡೊ, ಚೌರಪ್ಪನವರ ಮಗ ಜಾರ್ಜ್, ರೇಲ್ವೆ ಚಾಲಕ ಅರುಳಪ್ಪ, ಸುಬೇದಾರಪಾಳ್ಯದ ಅಂತೋಣಪ್ಪ ಮುಂತಾದವರು ಮುಂದೆ ಬಂದರು.