ಬುಧವಾರ, ಏಪ್ರಿಲ್ 27, 2011

ಜನಲೋಕಪಾಲ ಮಸೂದೆ ಪ್ರಸ್ತಾವ


ಭಾರತೀಯ ಸೇನೆಗೆ ೧೯೬೩ರಲ್ಲಿ ಸೇರಿದ ಅಣ್ಣಾ ಹಜಾರೆಯವರು ೧೫ ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ತೆಗೆದುಕೊಂಡು ತನ್ನ ಹುಟ್ಟೂರು ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ರಾಲೆಗಾಂವ್ ಸಿದ್ಧಿ ಎಂಬ ಹಳ್ಳಿಗೆ ಬಂದಾಗ ಆ ಊರಿನ ಸ್ಥಿತಿ ಶೋಚನೀಯವಾಗಿತ್ತು. ಆ ಹಳ್ಳಿ ರಸ್ತೆ, ನೀರು, ಕರೆಂಟು ಯಾವುದೂ ಇಲ್ಲದೆ, ಶಿಕ್ಷಣ, ಕೃಷಿ, ನಾಗರಿಕ ಸವಲತ್ತು ಬಗ್ಗೆ ಯಾವುದೇ ಮುನ್ನೋಟವಿಲ್ಲದ ನಿರಕ್ಷರಕುಕ್ಷಿಗಳಿಂದ ತುಂಬಿತ್ತು. ಬರ ಆ ಊರನ್ನು ಬೆಂಗಾಡಾಗಿಸಿತ್ತು. ಕಳ್ಳಭಟ್ಟಿ ಸಾರಾಯಿ ದಂಧೆ ಉತ್ತುಂಗದಲ್ಲಿತ್ತು. ೧೯೭೫ ರಲ್ಲಿ ಅಣ್ಣಾ ಹಜಾರೆ ತನ್ನ ಊರನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯಗಳು ದೇಶಕ್ಕೇ ಮಾದರಿಯಾಗಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ನೀರಾವರಿ ವ್ಯವಸ್ಥೆ, ಶಾಲೆ ಹೀಗೆ ಎಲ್ಲವನ್ನು ಊರವರ ಸಹಕಾರದೊಂದಿಗೆ ಮಾಡಿ ಅದನ್ನು ಮಾದರಿ ಗ್ರಾಮವಾಗಿಸಿ ಸ್ವಾವಲಂಬೀ ಜೀವನ ನಡೆಸಲು ಅಲ್ಲಿನ ಜನರನ್ನು ಪ್ರೇರೇಪಿಸಿದ ಕೀರ್ತಿ ಅಣ್ಣಾ ಅವರ ಸಾಧನೆಯ ದ್ಯೋತಕ.
ಕೆಲ ವರ್ಷಗಳ ಹಿಂದೆ ಅಣ್ಣಾ ಅವರು ಮಾಹತಿಹಕ್ಕು ಕಾನೂನು ಜಾರಿಗೆ ಬರುವಂತೆ ಮಾಡಿದ ಕೀರ್ತಿಗೂ ಭಾಜನರಾಗಿದ್ದಾರೆ. ಅವರು ಅದಕ್ಕಾಗಿ ೨೦೦೩ರ ಜುಲೈನಲ್ಲಿ ೧೨ ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದರು.ಅದರ ಫಲವಾಗಿ ೨೦೦೫ರಲ್ಲಿ ಮಾಹಿತಿಹಕ್ಕು ಕಾಯಿದೆ ೨೦೦೫ ಜಾರಿಗೆ ಬಂತು.
ಜನಪರ ಕಾಳಜಿಗಾಗಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪಡೆದ ಇವರು ಈಗ, ಭ್ರಷ್ಟರ ವಿಚಾರಣೆಯನ್ನು ಎರಡು ವರ್ಷಗಳಲ್ಲಿ ಮುಗಿಸಲು ಅನುಕೂಲವಾಗುವ ಜನ ಲೋಕಪಾಲ ಮಸೂದೆ ಜಾರಿಯಾಗಬೇಕು. ಇದು ಕಟ್ಟು ನಿಟ್ಟಿನ ಕಾಯ್ದೆಯಾಗಬೇಕು. ಇದರಿಂದ ಭ್ರಷ್ಟಾಚಾರ ನಿಯಂತ್ರಣ ಸಾಧ್ಯ ಎನ್ನುತ್ತಾ, ಈ ಕಾಯ್ದೆಯ ಕರಡು ರಚಿಸಲು ಜನರನ್ನೂ ಸೇರಿಸಿಕೊಳ್ಳಬೇಕೆಂಬ ಆಗ್ರಹದೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದ್ದು ಎಲ್ಲರಿಗೂ ವೇದ್ಯವಾಗಿದೆ.
ಆದರೆ ಯಾವುದೇ ಸರ್ಕಾರಕ್ಕೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲ ಮಾಡಲು ಬದ್ಧತೆ ಇಲ್ಲ. ಏಕೆಂದರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಹಲವಾರು ಪಕ್ಷಗಳ ಸರ್ಕಾರಗಳ ಮುಂದೆ ಅದರ ಪ್ರಸ್ತಾವಗಳು ಬಂದರೂ ಜಾರಿಯಾಗಿರಲಿಲ್ಲ. ಅದರ ಈಗಿನ ಪ್ರಸ್ತಾವಗಳಂತೂ ಜಾಳುಜಾಳಾಗಿವೆಯಲ್ಲದೆ ಅದರ ಕರಡು ಸಿದ್ಧತಾ ಸಮಿತಿಯಲ್ಲಿ ಭೂಹಗರಣದಲ್ಲಿ ಸಿಲುಕಿರುವ ಶರದ್ ಪವಾರ್ ಅಂಥವರೂ ಇದ್ದರು. ಈ ಒಂದು ಅಂಶವನ್ನು ಮುಂದುಮಾಡಿಕೊಂಡು ಕೇಂದ್ರಸರ್ಕಾರವನ್ನು ನೊಣೆಯಬಹುದು ಎಂದು ಬಾಯಲ್ಲಿ ಜೊಲ್ಲು ಸುರಿಸುತ್ತಾ ಅಣ್ಣಾ ಹಜಾರೆಯವರಿಗೆ ಬೆಂಬಲು ಸೂಚಿಸಲು ಬಂದ ಬಿಜೆಪಿಯಂಥ ಪಕ್ಷಗಳ ನಾಯಕರನ್ನು ಅಣ್ಣಾ ಅವರು ಬಾಗಿಲಲ್ಲೇ ತಡೆದು ಹಿಂದಕ್ಕೆ ಕಳುಹಿಸಿದ್ದೂ ಸುದ್ದಿಯಾಯಿತು.
ಕರ್ನಾಟಕಕ್ಕೆ ದಕ್ಷ ಆಡಳಿತ, ಭ್ರಷ್ಟಮುಕ್ತ ಸರ್ಕಾರ, ಹಗರಣಮುಕ್ತ ಸರ್ಕಾರವನ್ನು ನೀಡುತ್ತೇವೆ ಎಂಬ ಆಶ್ವಾಸನೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವು ಹೇಗೆ ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿದೆ ಎಂಬ ಅಂಗೈ ಹುಣ್ಣಿಗೆ ಕನ್ನಡಿಯೇನೂ ಬೇಕಾಗಿಲ್ಲ ಅಲ್ಲವೇ?
ಲೋಕಪಾಲ ಮಸೂದೆ ಎಂಬುದು ಸರಕಾರ ಸಿದ್ಧಪಡಿಸುತ್ತಿರುವ ಮಸೂದೆಯಾದರೆ, ಅಣ್ಣಾ ಹಜಾರೆ ಪ್ರಸ್ತಾಪಿಸಿದ್ದು ಜನ ಲೋಕಪಾಲ ಮಸೂದೆ, ಅದು ಜನರಿಂದಲೇ ರೂಪುಗೊಳ್ಳುವ ಮಸೂದೆಯಾಗಿರುತ್ತದೆ.
ಸರಕಾರದ ಪ್ರಸ್ತಾವನೆ ಮತ್ತು ಅಣ್ಣಾ ಹಜಾರೆ ನೇತೃತ್ವದ ಒಮ್ಮನಸ್ಸಿನ ಮಂದಿ ರೂಪಿಸಿದ ಪ್ರಸ್ತಾವನೆಯ ತುಲನೆ ಇಲ್ಲಿದೆ.

ಸರಕಾರದ ಪ್ರಸ್ತಾಪದಲ್ಲಿರುವುದು:
ಲೋಕಪಾಲರಿಗೆ ಭ್ರಷ್ಟರ ವಿರುದ್ಧ ತಾವಾಗಿಯೇ ಕ್ರಮ ಕೈಗೊಳ್ಳುವ ಅಧಿಕಾರವಿರುವುದಿಲ್ಲ ಅಥವಾ ಅವರು ಭ್ರಷ್ಟಾಚಾರದ ಕುರಿತು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವಂತಿಲ್ಲ. ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭಾ ಅಧ್ಯಕ್ಷರು ಅನುಮತಿ ಮೂಲಕ ಬಂದ ದೂರುಗಳನ್ನು ಮಾತ್ರವೇ ಅದು ತನಿಖೆ ನಡೆಸಬೇಕು.

ಅಣ್ಣಾ ಹಜಾರೆಯವರ ಪ್ರಸ್ತಾಪ:
ಯಾವುದೇ ಕೇಸಿನಲ್ಲಿ ತಾವಾಗಿಯೇ ತನಿಖೆ ಆರಂಭಿಸುವ ಹಕ್ಕು ಲೋಕಪಾಲರಿಗೆ ಇರಬೇಕು ಮತ್ತು ನೇರವಾಗಿ ಸಾರ್ವಜನಿಕರಿಂದ ಅವರು ದೂರುಗಳನ್ನು ಸ್ವೀಕರಿಸಬಹುದು. ಯಾವುದೇ ಕೇಸಿನ ತನಿಖೆ ಆರಂಭಿಸಲು ಯಾರದೇ ಅನುಮತಿ ಅಥವಾ ಉಲ್ಲೇಖಗಳು ಬೇಕಾಗಿಲ್ಲ.

ಸರಕಾರ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಾಗಿರುತ್ತದೆ. ಅದು ಅದರ ತನಿಖಾ ವರದಿಯನ್ನು ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ "ಜವಾಬ್ದಾರಿಯುತ ಮಂಡಳಿ"ಗೆ ಸಲ್ಲಿಸುತ್ತದೆ.
ಅಣ್ಣಾ: ಲೋಕಪಾಲ ಎಂಬುದು ಸಲಹಾ ಸಂಸ್ಥೆಯಲ್ಲ. ಕೇಸಿನ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಶಿಕ್ಷೆ ವಿಧಿಸುವ ಹಕ್ಕು ಕೂಡ ಅದಕ್ಕೆ ಇರಬೇಕು. ಯಾವುದೇ ಸರಕಾರಿ ನೌಕರರ ವಿರುದ್ಧ ಶಿಸ್ತು ಕ್ರಮ ಆದೇಶಿಸುವ ಅಧಿಕಾರವನ್ನೂ ಅದು ಹೊಂದಿರಬೇಕು.

ಸರಕಾರ: ಲೋಕಪಾಲರಿಗೆ ಪೊಲೀಸ್ ಅಧಿಕಾರಗಳಿಲ್ಲ. ಅದರ ಎಲ್ಲ ತನಿಖೆಗಳು ’ಪ್ರಾಥಮಿಕ ತನಿಖೆಗಳಿಗೆ’ ಸಮ. (ಹಾಗಿದ್ದರೆ, ಅದರ ವರದಿ ಅಂಗೀಕೃತವಾದರೆ ಚಾರ್ಜ್ ಶೀಟ್ ಸಲ್ಲಿಸುವುದು ಯಾರು?)
ಅಣ್ಣಾ: ಲೋಕಪಾಲರಿಗೆ ಪೊಲೀಸ್ ಅಧಿಕಾರ ಬೇಕು. ಎಫ್ಐಆರ್ ದಾಖಲು ಮಾಡಲು, ಕ್ರಿಮಿನಲ್ ತನಿಖೆ ನಡೆಸಲು ಮತ್ತು ದಂಡನಾ ಕ್ರಮಗಳನ್ನು ಕೈಗೊಳ್ಳಲು ಅವರಿಗೆ ಅಧಿಕಾರ ಬೇಕು.

ಸರಕಾರ: ಮಸೂದೆ ಜಾರಿಗೆ ಬಂದ ಬಳಿಕ ಕೇಂದ್ರೀಯ ತನಿಖಾ ಮಂಡಳಿಯ ಪಾತ್ರ ಏನು ಎಂಬುದರ ಉಲ್ಲೇಖವಿಲ್ಲ. ರಾಜಕಾರಣಿಗಳ ವಿರುದ್ಧ ತನಿಖೆ ಕೈಗೊಳ್ಳುವ ಸಿಬಿಐ ಅಧಿಕಾರ ಹೋಗುತ್ತದೆಯೇ?
ಅಣ್ಣಾ: ಸಿಬಿಐಯ ಭ್ರಷ್ಟಾಚಾರ-ನಿಗ್ರಹ ಘಟಕವನ್ನು ಲೋಕಪಾಲ ಜೊತೆ ವಿಲೀನಗೊಳಿಸಬೇಕು. ಈ ಮೂಲಕ, ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳಲು ಏಕೈಕ ಸ್ವತಂತ್ರ ಸಂಸ್ಥೆ ಇರುವಂತಾಗುತ್ತದೆ.

ಸರಕಾರ: ಭ್ರಷ್ಟಾಚಾರಕ್ಕೆ ತೀರಾ ಸಣ್ಣ ಶಿಕ್ಷೆ - ಕನಿಷ್ಠ ೬ ತಿಂಗಳು, ಗರಿಷ್ಠ ೭ ವರ್ಷ.
ಅಣ್ಣಾ: ಶಿಕ್ಷೆ ಕಠಿಣವಾಗಬೇಕು. ಕನಿಷ್ಠ ೫ ವರ್ಷಗಳು ಹಾಗೂ ಗರಿಷ್ಠ ಜೀವಾವಧಿ ಶಿಕ್ಷೆ.

ಸರಕಾರ: ಅಕ್ರಮ ಸಂಪತ್ತು ಹೊರತೆಗೆಯುವ ಅಧಿಕಾರವಿಲ್ಲ. ಅಂದರೆ ಯಾವುದೇ ಭ್ರಷ್ಟ ವ್ಯಕ್ತಿಯು ಜೈಲಿನಿಂದ ಹೊರಬಂದ ಬಳಿಕ, ಅದೇ ಹಣ-ಸಂಪತ್ತನ್ನು ಬಳಸಿಕೊಳ್ಳಬಹುದಾಗಿದೆ.
ಅಣ್ಣಾ: ಭ್ರಷ್ಟಾಚಾರದಿಂದಾಗಿ ಸರಕಾರಕ್ಕೆ ಆಗುವ ನಷ್ಟವನ್ನು ಆಪಾದಿತರಿಂದಲೇ ವಸೂಲು ಮಾಡಬೇಕು.