ಶುಕ್ರವಾರ, ಆಗಸ್ಟ್ 26, 2011

ಅಣ್ಣಾ ಹಿಂದೆ ಯಾರಿದ್ದಾರೆ?


ಭ್ರಷ್ಟಾಚಾರವೆಂಬುದು ಇಂದು ನಮ್ಮನ್ನು ಕಾಡುತ್ತಿರುವ ರಾಷ್ಟ್ರವ್ಯಾಪೀ ಜ್ವಲಂತ ಸಮಸ್ಯೆಯಾಗಿದೆ. ಸಮಸ್ಯೆಯಿಂದಾಗಿ ನಾವೆಷ್ಟು ರೋಸಿಹೋಗಿದ್ದೇವೆಂದರೆ ಇದರ ವಿರುದ್ಧ ಪ್ರತಿಭಟಿಸುವ ಯಾರೇ ವ್ಯಕ್ತಿ ನಮಗೆ ನಿಜ ನಾಯಕನಾಗಿ ತೋರುತ್ತಾನೆ. ಏಕೆಂದರೆ ಭ್ರಷ್ಟಾಚಾರದ ನಿಜವಾದ ಬಲಿಪಶುಗಳು ನಾವಾಗಿರುತ್ತೇವೆ, ಎಷ್ಟೊ ವೇಳೆ ಅದರ ವಿರುದ್ಧದ ನಮ್ಮ ವಿರೋಧ ಅಥವಾ ಆಕ್ರೋಶವನ್ನು ಅನಿವಾರ್ಯವಾಗಿ ಅದುಮಿಟ್ಟುಕೊಂಡಿರುತ್ತೇವೆ. ಒಂದು ಹಿನ್ನೆಲೆಯಲ್ಲಿ ಅದರ ವಿರುದ್ಧ ದನಿಯೆತ್ತಬಲ್ಲ ಯಾರೇ ಆದರೂ ನಮಗೆ ಹೀರೋ ಆಗಿ ತೋರುವುದರಲ್ಲಿ ಅತಿಶಯವೇನಿಲ್ಲ. ಅದು ಒಬ್ಬ ಕಿರಣ್ ಬೇಡಿ ಇರಬಹುದು, ಒಬ್ಬ ಸಾಂಗ್ಲಿಯಾನಾ ಇರಬಹುದು, ಒಬ್ಬ ಖೈರನಾರ್ ಇರಬಹುದು, ಒಬ್ಬ ಹರ್ಷಗುಪ್ತ ಇರಬಹುದು, ಒಬ್ಬ ಮಣಿವಣ್ಣನ್ ಇರಬಹುದು ಇವರೆಲ್ಲ ನಮಗೆ ಆದರ್ಶಪ್ರಾಯರಾಗಿಯೇ ತೋರುತ್ತಾರೆ. ಇಂದು ಅಣ್ಣಾ ಹಜಾರೆಯ ಕಾಲ. ಎರಡು ದಶಕಗಳ ಹಿಂದೆ ಅವರ ಸಾಧನೆಯ ಬಗ್ಗೆ ಸುಧಾ ಎಂಬ ವಾರಪತ್ರಿಕೆಯಲ್ಲಿ ಲೇಖನ ಪ್ರಕಟವಾದಾಗ ಹೆಚ್ಚು ಮಂದಿ ಗಮನ ಹರಿಸಲಿಲ್ಲವೆಂಬುದು ನಿಜವೇ ಆದರೂ ಇಂದು ಅಣ್ಣಾ ಬಗ್ಗೆ ಗೊತ್ತಿಲ್ಲದ ಜನವೇ ಇಲ್ಲವೆನ್ನಬಹುದು. ಭ್ರಷ್ಟಾಚಾರದ ವಿರುದ್ಧದ ಅವರ ಕೂಗಿಗೆ ಇವೊತ್ತು ಲಕ್ಷ ಜನರು ದನಿಸೇರಿಸುತ್ತಾರೆ.
ಹಾಗಿದ್ದರೆ ಅಣ್ಣಾ ಅವರು ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆಯೇ? ಬಹುಶಃ ಭ್ರಷ್ಟಾಚಾರ ವಿರುದ್ಧದ ದನಿಯಲ್ಲಿ ಅವರು ಮುಂಚೂಣಿಯಲ್ಲಿ ನಿಂತು ರಾಷ್ಟ್ರವನ್ನು ಪ್ರತಿನಿಧಿಸಬಹುದು, ಆದರೆ ರಾಷ್ಟ್ರವನ್ನು ಮುನ್ನಡೆಸುವ ಅಭಿವೃದ್ಧಿ ಯೋಜನೆಗಳು, ಆರ್ಥಿಕ ನೀತಿಗಳು, ರಕ್ಷಣಾ ಸಂಶೋಧನೆಗಳು, ವಿದೇಶೀ ಸಂಬಂಧಗಳು, ಆರೋಗ್ಯ ಶಿಕ್ಷಣ ಮೂಲಭೂತ ಸೌಲಭ್ಯ ಮುಂತಾದ ಆಂತರಿಕ ಪ್ರಕ್ರಿಯೆಗಳನ್ನು ಮುನ್ನಡೆಸಬಲ್ಲ ಒಂದು ಸಾಂವಿಧಾನಿಕ ಆಡಳಿತಯಂತ್ರ ನಿಸ್ಪೃಹವಾಗಿ ಕೆಲಸ ಮಾಡುತ್ತಲೇ ಇದೆಯಲ್ಲವೇ?
ಭ್ರಷ್ಟಾಚಾರದ ವಿರುದ್ಧದ ಒಂದು ಅಸಹನೆ ಅಂತರ್ವಾಹಿನಿಯಾಗಿ ಹರಿಯುತ್ತಾ ಬಂದು ಇಂದು ಸ್ಫೋಟಿಸಿದೆ. ಆದರೆ ಸೇನಾ ಅತಿರೇಕದ ವಿರುದ್ಧ ಕಳೆದ ಹತ್ತುವರ್ಷಗಳಿಂದ ನಿರಂತರವಾಗಿ ಉಪವಾಸ ಮಾಡುತ್ತಿರುವ ಇರೋಮ್ ಶರ್ಮಿಳಾ ಎಂಬ ಮಣಿಪುರದ ಮಹಿಳೆ, ಪೆಟ್ರೋಲ್ ಕಲಬೆರಕೆ ಮಾಫಿಯಾಗೆ ಬಲಿಯಾದ ಮಂಜುನಾಥ ಎಂಬ ಕೋಲಾರದ ಹುಡುಗ, ಹಲ್ಲಾ ಬೋಲ್ ಎಂಬ ಬೀದಿ ನಾಟಕವಾಡುತ್ತಲೇ ಭೀಕರವಾಗಿ ಕೊಲೆಯಾದ ಸಫ್ದರ್ ಹಷ್ಮಿ ಇವರನ್ನೆಲ್ಲ ನಾವು ಮರೆತುಬಿಡುತ್ತೇವೆ. ಅಷ್ಟೇ ಏಕೆ ಇನ್ನೂ ಕಾಡುತ್ತಿರುವ ಜನಾಂಗದ್ವೇಷ, ಜಾತಿಭೇದ, ಕೋಮುಗಲಭೆ, ಹಲ್ಲೆ ಹಿಂಸೆ ದರೋಡೆ ಅತ್ಯಾಚಾರಗಳನ್ನೂ ನಾವು ಪ್ರತಿಭಟಿಸುವುದೇ ಇಲ್ಲ. ಇಂದು ಅವರಿಗಾದುದು ನಾಳೆ ನಮಗಾದೀತೆಂದು ನಾವು ಯೋಚಿಸುವುದೇ ಇಲ್ಲ.
ಯಾವುದರ ವಿರುದ್ಧವೇ ಆದರೂ ದನಿಯೆತ್ತಲು ಪ್ರತಿಭಟಿಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಮೂಲಕ ಕಾನೂನುಗಳನ್ನು ರೂಪಿಸುವಲ್ಲಿ, ಕ್ರಿಯಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಮ್ಮ ಪಾತ್ರ ಹಿರಿದೆಂಬುದನ್ನು ನಮ್ಮ ಘನ ಸಂವಿಧಾನವು ತೋರಿಸಿದೆ. ಯುವಶಕ್ತಿಯನ್ನು ಬಳಸಿಕೊಂಡು ನೇತಾರರು ಪ್ರಪಂಚದಲ್ಲಿ ಹಲವಾರು ಮಹತ್ತರ ಪಲ್ಲಟಗಳನ್ನು ನಿರ್ವಹಿಸಿದ್ದಾರೆ. ಲೆನಿನನ ಕ್ರಾಂತಿಕಾರೀ ಘೋಷಣೆಗೆ ಓಗೊಟ್ಟ ಯುವಕರು ಕೆಂಪುಕ್ರಾಂತಿಗೆ ಕಾರಣರಾದರು. ಅದೇ ಯುವಕರು ವಯಸ್ಕರಾದ ಮೇಲೆ ಅದೇ ಲೆನಿನನ ಪ್ರತಿಮೆಯನ್ನು ನೆಲಕ್ಕುರುಳಿಸಿದರು. ಜರ್ಮನಿಯ ಯುವಕರನ್ನು ಹುರಿದುಂಬಿಸಿದ ಹಿಟ್ಲರ್ ಯೆಹೂದಿಗಳ ಮಾರಣಹೋಮ ನಡೆಸಿದ. ಆದರೆ ಯುದ್ಧ ಮುಗಿಯುವ ಮೊದಲೇ ತಾನು ಆತ್ಮಹತ್ಯೆ ಮಾಡಿಕೊಂಡ. ತೊಂಬತ್ತರ ದಶಕದಲ್ಲಿ ನಮ್ಮ ದೇಶದ ಯುವಕರನ್ನು ಪ್ರಚೋದಿಸಿದ ಸಂಘಪರಿವಾರವು ಮಸೀದಿ ಒಡೆಯುವ ಮೂಲಕ ದೇಶದ ಶಾಂತ ಸರೋವರವನ್ನು ಕಲಕಿತು.
ಆದರೆ ಜವಾಬ್ದಾರಿಯುತ ಪ್ರಜೆಗಳಾದ ನಾವು ಸಿಖ್ ಹತ್ಯಾಕಾಂಡ, ಗುಜರಾತ್ ದಾಂಧಲೆ, ಒರಿಸ್ಸಾ ಗಲಭೆ, ಕರ್ನಾಟಕದ ಚರ್ಚ್ ದಾಳಿ ಮುಂತಾದವುಗಳನ್ನು ಮೌನವಾಗಿ ವೀಕ್ಷಿಸಿದೆವು. ಅಥವಾ ತೋಚಿದ ನೆಪಗಳನ್ನು ಹೇಳಿಕೊಂಡು ಘಟನೆಗಳನ್ನು ಸಮರ್ಥಿಸಿಕೊಂಡೆವು. ಮಾನವಧರ್ಮವನ್ನು ಮರೆತು ಬೀದಿನಾಯಿಗಳಂತೆ ಕಚ್ಚಾಡಿದೆವು. ಇಂದು ನಾವೆಲ್ಲ ಸಮೂಹ ಸನ್ನಿಗೊಳಗಾದವರಂತೆ ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇವೆ. ಆದರೆ ಭ್ರಷ್ಟಾಚಾರವೆಂದರೆ ಹಣದ ಭ್ರಷ್ಟತೆ ಮಾತ್ರವಲ್ಲ ಮಾನಸಿಕ ಭ್ರಷ್ಟತೆ ಕೂಡಾ ಎಂಬುದನ್ನು ಮರೆತಿದ್ದೇವೆ.
ನಮ್ಮ ಮನಸಿನ ಒಳಹೊಕ್ಕು ಸ್ವತಃ ನಾವು ಭ್ರಷ್ಟರಲ್ಲವೇ ಎಂದು ಒಮ್ಮೆ ಆತ್ಮಶೋಧನೆ ಮಾಡಿಕೊಳ್ಳೋಣ. ಯಾವುದೇ ಚುನಾವಣೆಯಲ್ಲಿ ಪ್ರಲೋಭನೆಗೊಳಗಾಗಿ ಓಟು ಮಾಡಿದ್ದೀವಾ? ಓಟು ಮಾಡುವ ಹಕ್ಕಿದ್ದರೂ ಮಾಡದೇ ಮನೆಯಲ್ಲುಳಿದೆವಾ? ಸುಳ್ಳು ಲೆಕ್ಕ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದೀವಾ? ಸುಳ್ಳು ಬಿಲ್ಲು ತೋರಿಸಿ ಹೆಚ್ಚಿನ ಭತ್ಯೆ ಪಡೆದಿದ್ದೀವಾ? ಬಡ್ಡಿಗೆ ದುಡ್ಡು ಕೊಟ್ಟು ರಕ್ತ ಹೀರಿದ್ದೀವಾ? ವರದಕ್ಷಿಣೆಗಾಗಿ ಪೀಡಿಸಿದ್ದೀವಾ? ಜಾತಿಯ ಕಾರಣಕ್ಕೆ ಜನರನ್ನು ದೂರವಿಟ್ಟಿದ್ದೀವಾ? ಕಾಲೇಜಿಗೆ ಚಕ್ಕರು ಹಾಕಿದ್ದೀವಾ? ಮತ್ತೊಬ್ಬನ ಹೆಂಡತಿಯನ್ನು ಕೆಟ್ಟದೃಷ್ಟಿಯಿಂದ ನೋಡಿದ್ದೀವಾ? ಸ್ನೇಹಿತರಿಗೇ ಮೋಸ ಮಾಡಿ ತಿರಪತಿಗೋ ಧರ್ಮಸ್ಥಳಕ್ಕೋ ತಪ್ಪುಕಾಣಿಕೆ ಕಟ್ಟಿದ್ದೀವಾ?
ಇರಲಿ ಬಿಡಿ. ಇನ್ನು ಅಣ್ಣಾ ಅವರ ಹಿಂದೆ ಇರುವವರಾರೆಂದು ನೋಡೋಣ. ಅವರೆಲ್ಲ ಕಾರ್ಪೊರೇಟ್ ವಲಯದ ಅಥವಾ ಐಟಿ ಸೆಕ್ಟರಿನ ಜನ. ಅಮೆರಿಕದಲ್ಲಿ ಸೋತು ಇಂಡಿಯಾಕ್ಕೆ ಹಿಂದಿರುಗಿದ ಜನ. ಬಂಡವಾಳ ಹೂಡಿಕೆಯಲ್ಲಿ ಸೋತ ಜನ. ರಾಜಕೀಯ ಲಾಭ ಪಡೆಯಲು ಹೊಂಚು ಹಾಕಿದ ಜನ. ನಿಜ ಹೇಳಬೇಕೆಂದರೆ ಬಡ ರೈತರಾಗಲೀ ಬಡ ಕಾರ್ಮಿಕರಾಗಲೀ ಭ್ರಷ್ಟಾಚಾರದ ಕುರಿತು ಹೆಚ್ಚು ತಲೆಕೆಡಿಸಿಕೊಂಡವರೇ ಅಲ್ಲ. ಇಂದು ಭ್ರಷ್ಟಾಚಾರ ನಿರ್ಮೂಲನವೆಂಬುದು ಕೆಲವರಿಗೆ ಫ್ಯಾಷನ್ ಘೋಷಣೆಯಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಅದನ್ನೇ ಹೇಳಿತ್ತು. ಸಂಪೂರ್ಣ ಬದಲಾವಣೆ ತರುತ್ತೇವೆ ಯಾರೂ ಮಾಡದಂಥದನ್ನು ಮಾಡುತ್ತೇವೆ, ಸ್ವಚ್ಛ ಆಡಳಿತ, ದಕ್ಷ ಆಡಳಿತ, ಹಗರಣ ಮುಕ್ತ ಸರ್ಕಾರ, ಭ್ರಷ್ಟಮುಕ್ತ ಸರ್ಕಾರ ಕೊಡುತ್ತೇವೆ ಎಂದು ಘಂಟಾಘೋಷವಾಗಿ ಹೇಳಿತ್ತು. ಆದರೆ ಮಾಡಿದ್ದೇನು? ಇಂದು ಇಂಥದೇ ಫ್ಯಾಸಿಸ್ಟ್ ಶಕ್ತಿಗಳು ಅಣ್ಣಾ ಅವರ ಮುಖವಾಡ ತೊಟ್ಟು ಅವರೊಂದಿಗೆ ಕೈಜೋಡಿಸಿವೆ.
ನೀವು ಹೇಳಬಹುದು ಅಣ್ಣಾ ಅವರೊಂದಿಗೆ ಬಹುಸಂಖ್ಯಾತ ಮಧ್ಯಮವರ್ಗದವರೂ ಅಷ್ಟೇ ಸಂಖ್ಯೆಯ ವಿದ್ಯಾವಂತರೂ ಇದ್ದಾರೆಂದು. ಆದರೆ ಅವರೊಂದಿಗೆ ನಮ್ಮ ದೇಶದ ಅರ್ಧ ಬಿಲಿಯನ್ ಓಬಿಸಿ ಜನ ಇಲ್ಲ, ೨೫೦ ಮಿಲಿಯನ್ ಎಸ್ಸಿಎಸ್ಟಿ ಜನ ಇಲ್ಲ, ೧೫೦ ಮಿಲಿಯನ್ ಅಲ್ಪಸಂಖ್ಯಾತರಿಲ್ಲ. ಅಣ್ಣಾ ಅವರೊಂದಿಗಿದ್ದಾರೆ ಬಾಬಾ ರಾಮ್ದೇವ್ ನಂಥ ಖೂಳರು, ದ್ವೇಷವನ್ನು ಬಿತ್ತಿ ದ್ವೇಷವನ್ನು ಬೆಳೆಯುವಂಥ ದುರುಳರು. ಭ್ರಷ್ಟಾಚಾರ ನಿರ್ಮೂಲದಂಥ ಹೃದಯಸ್ಪರ್ಶಿ ಸಂಗತಿಯನ್ನು ಮುಂದು ಮಾಡಿಕೊಂಡು ಅಣ್ಣಾ ಹೆಸರನ್ನು ಹೈಜಾಕ್ ಮಾಡುವಂಥ ಖದೀಮರು.
ಅಣ್ಣಾ ಅವರ ಪರವಾಗಿ ಟ್ವಿಟರುಗಳು, ಫೇಸ್ ಬುಕ್ಕುಗಳು, -ತಂಡಗಳು, ಬ್ಲಾಗುಗಳು, ಜಾಲತಾಣಗಳು ಬರೆದೇ ಬರೆಯುತ್ತವೆ. ಸುಳ್ಳು ಹೆಸರುಗಳಲ್ಲಿ ಸುಳ್ಳು ಗುರುತುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕುತ್ತವೆ, ಸ್ಪಷ್ಟೀಕರಣ ನೀಡುತ್ತವೆ, ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತವೆ, ಅದೇ ವೇಳೆಯಲ್ಲಿ ವಿರೋಧದ ಸಣ್ಣ ಎಳೆಯನ್ನೂ ಮೊಳೆಯುವ ಮುನ್ನವೇ ಹೊಸಕುತ್ತವೆ. ಇವೆಲ್ಲದರ ಹಿಂದೆ ಇರುವವರಾದರೂ ಯಾರು?
ವಿ ಪಿ ಸಿಂಗ್ ಸರ್ಕಾರವು ಮಂಡಲ್ ಆಯೋಗದ ವರದಿಯನ್ನು ಜಾರಿಗೊಳಿಸಿದಾಗಲೂ ಇಂಥದೇ ಚಿತಾವಣೆಗಳು ನಡೆದಿದ್ದವು. ನೆನಪಿಡಿ, ಮೂರು ಸಾವಿರ ವರ್ಷಗಳ ಹಿಂದಿನ ಜಾತಿಪದ್ಧತಿಯನ್ನು ದೇಶದಲ್ಲಿ ಮರುಸ್ಥಾಪಿಸಲು ಸಂಘಟಿತ ಪ್ರಯತ್ನಗಳು ಚಾಪೆಯ ಕೆಳಗಿನ ನೀರಿನಂತೆ ಕಾರ್ಯವೆಸಗುತ್ತಿವೆ ಎಚ್ಚರ.