ಶುಕ್ರವಾರ, ಮಾರ್ಚ್ 25, 2011

ಮರಿಯಾಪುರದಲ್ಲಿ ‘ಯೇಸು ಮಹಿಮೆ’

ಬನ್ನೇರುಘಟ್ಟ ಬೆಟ್ಟದ ಪಶ್ಚಿಮ ಬುಡದಲ್ಲಿ ಹಸಿರುಹೊತ್ತ ಮರಿಯಾಪುರ ಗ್ರಾಮಕ್ಕೆ ಈಗ ೧೨೭ ವರ್ಷ. ಇದನ್ನು ತಲುಪಲು ಬೆಂಗಳೂರು ಕನಕಪುರ ಹೆದ್ದಾರಿಯಲ್ಲಿ ಕಗ್ಗಲೀಪುರದ ಬಳಿ ತಿರುಗಬೇಕು.
ಆರ್ಟ್ ಆಫ್ ಲಿವಿಂಗ್ ಬಳಿ ಉದಿಪಾಳ್ಯದಿಂದ ಒಂದು ಕಿಲೊಮೀಟರು ಮುಂದೆ ಸಾಗಿದರೆ ಸಿಗುವ ಕಗ್ಗಲೀಪುರ ಒಂದು ಜಂಕ್ಷನ್ ಎನ್ನಬಹುದು. ಅಲ್ಲಿಂದ ಎಡಕ್ಕೆ ನಾಲ್ಕೈದು ಕಿ.ಮೀ ಒಳ ದಾರಿಯಲ್ಲಿ ಗುಳಕಮಲೆ, ತರಳು ದಾಟಿ ಮುಂದೆ ಹೋದಾಗ ಸಿಗುವುದೇ ಮರಿಯಾಪುರ.

ಶತಮಾನಕ್ಕೂ ಹಿಂದೆ ಪ್ಲೇಗ್ ಮತ್ತು ಕ್ಷಾಮದ ಹೆಮ್ಮಾರಿಗೆ ಸಿಲುಕಿ ಇಲ್ಲಿದ್ದ ತಟ್ಟಗುಪ್ಪೆ ಎಂಬ ಊರು ನಿರ್ಜನವಾದಾಗ ಫ್ರೆಂಚ್ ಮಿಷನರಿ ಫಿಲಿಪ್ ಸಿಜನ್ ಅವರು ಮಹಾರಾಜರಿಂದ ಈ ಊರನ್ನು ಪಡೆದು ೧೮೮೪ರಲ್ಲಿ ಮರುನಿರ್ಮಾಣ ಮಾಡಿದರು. ಅದೇ ಈಗಿನ ಮರಿಯಾಪುರ.

ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಇಲ್ಲಿನ ಅಚ್ಚರಿಯ ಸಂಗತಿಯೆಂದರೆ ಪರದೆಯಿಲ್ಲದೆ ನಡೆಯುವ ಧ್ವನಿ ಬೆಳಕಿನ ಬೃಹನ್ನಾಟಕ.ಸುಗ್ಗಿ ಕಳೆದ ನಂತರದ ವಿರಾಮದ ದಿನಗಳಲ್ಲಿ ಕ್ರೈಸ್ತ ಜನಪದರು ನಾಟಕ, ಕೋಲಾಟ, ಗೀತಗಾಯನಗಳಲ್ಲಿ ತೊಡಗಿಕೊಳ್ಳುವುದಕ್ಕೆ ತಪಸ್ಸು ಕಾಲವು ಇಂಬುಗೊಡುತ್ತದೆ. ಯೇಸು ಸ್ವಾಮಿಯ ಕೊನೆಯ ಗಳಿಗೆಗಳನ್ನು ಮನನ ಮಾಡುವ ತ್ಯಾಗ ನೇಮಗಳ ದಿನಗಳನ್ನು ತಪಸ್ಸು ಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ಬೇಗೂರು, ಕಾಮನಹಳ್ಳಿ, ದೊರೆಸಾನಿಪಾಳ್ಯ, ವೀರನಪಾಳ್ಯ, ಆರೋಬೆಲೆ, ಮರಿಯಾಪುರಗಳಲ್ಲಿ ಕ್ರೈಸ್ತರಿಂದ ನಡೆಯುವ ನಾಟಕಗಳು ಪ್ರಸಿದ್ಧವಾದವು.

ದೊರೆಸಾನಿಪಾಳ್ಯದ ಡ್ರಾಮಾ ಮಾಸ್ತರ್ ದಾವಿದಪ್ಪನವರಲ್ಲಿ ‘ಜೋಸೆಫ್ ಮತ್ತು ಹನ್ನೆರಡು ಸಹೋದರರು, ಜ್ಞಾನಸುಂದರಿ, ಅಲ್ಫೋನ್ಸೆ, ಗುಣಸುಂದರಿ, ಯೂಸ್ತಾಕಿಯುಸ್, ಜೂಡಿತಮ್ಮ, ಎಸ್ತೆರಮ್ಮ’ ಮುಂತಾದ ಕ್ರೈಸ್ತ ನಾಟಕಗಳ ಹಸ್ತಪ್ರತಿಗಳನ್ನು ಈಗಲೂ ಕಾಣಬಹುದು.

ಅರ್ಕಾವತಿ ದಂಡೆಯ ಆರೂಬೆಲೆಯಲ್ಲಿ ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರ ರಾತ್ರಿ ಆಡುವ ‘ಯೇಸುಕ್ರಿಸ್ತನ ಮಹಿಮೆ’ ನಾಟಕ ಈಗಲೂ ಪ್ರಸಿದ್ಧ.

ಇವೆಲ್ಲವುಗಳ ನಡುವೆ ಮರಿಯಾಪುರದ ಧ್ವನಿ ಬೆಳಕಿನ ನಾಟಕಕ್ಕೆ ಹೊಸ ಹೊಳಪಿದೆ. ಸ್ವಾಮಿ ಫಿಲಿಪ್ ಸಿಜನ್ ಅವರ ನೆನಪು ಚಿರಸ್ಥಾಯಿಯಾಗಿಸುವ ಗ್ರಾಮಸ್ಥರ ಪ್ರಯತ್ನದಿಂದಾಗಿ ಈ ನಾಟಕವು ಹೊಸ ರೂಪ ತಳೆದಿದೆ.

ಗ್ರಾಮದ ಚರ್ಚ್ನ ಹಿಂಬದಿಯ ೧೨೫ ಮೀಟರು ಉದ್ದದ ದಿಬ್ಬದ ಮೇಲೆ ವಿಶಾಲ ವೇದಿಕೆ ನಿರ್ಮಿಸಿ ಇಡೀ ರಾತ್ರಿ ಆಡಲಾಗುವ ಈ ನಾಟಕದಲ್ಲಿ ೩೫೦ ನಟ ನಟಿಯರು, ಸುಮಾರು ೫೦೦ ಬಾಲ ಬಾಲೆಯರು ಹೆಜ್ಜೆ ಹಾಕುತ್ತಾರೆ. ಇನ್ನೂರಕ್ಕೂ ಹೆಚ್ಚು ಸ್ಪಾಟ್ಲೈಟ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹತ್ತು ಸಾವಿರ ವ್ಯಾಟ್ಗಳ ಸ್ಪಷ್ಟ ಧ್ವನಿ ನಾಟಕಕ್ಕೆ ವಿಶೇಷ ಪರಿಣಾಮ ತುಂಬುತ್ತದೆ.

ಯೇಸುವಿನ ಜೀವನವನ್ನು ಕೇಂದ್ರವಾಗಿಸಿಕೊಂಡು ಇಡೀ ಬೈಬಲನ್ನು ಸುಮಾರು ಆರೂವರೆ ಗಂಟೆಗಳ ಕಾಲ ಚಿತ್ರಿಸುತ್ತ ಅಂದಿನ ಕಾಲದ ವೇಷಭೂಷಣಗಳನ್ನು ಬಳಸಲಾಗುತ್ತದೆ. ಜೊತೆಗೆ ದನ ಕರು, ಕುರಿ, ಕತ್ತೆ, ಒಂಟೆ, ಕುದುರೆ, ರಥಗಳು ಹಾಗೂ ಎತ್ತಿನ ಗಾಡಿಗಳು ಬೃಹತ್ ವೇದಿಕೆ ಮೇಲೆ ಬಂದು ಹೋಗುವುದು ಚಿತ್ತಾಕರ್ಷಕವಾಗಿರುತ್ತದೆ. ನಗರದ ಜಂಜಡಗಳನ್ನು ಮರೆತು ಹಳ್ಳಿಗಾಡಿನ ನಿರಭ್ರ ಆಗಸದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುವ ಈ ಅನುಭವ ನಿಜಕ್ಕೂ ಚೇತೋಹಾರಿ.
http://beta.prajavani.net/web/include/story.php?news=902§ion=56&menuid=13

ಗುರುವಾರ, ಮಾರ್ಚ್ 24, 2011

ಹಿಂದುತ್ವ ಸಾಧುವೇ?

ಹೀಗೊಂದು ಪತ್ರಿಕೆಯಲ್ಲಿ ಓದುತ್ತಿರುವಾಗ ಒಂದು ಬರಹ ಕಣ್ಣಿಗೆ ಬಿತ್ತು. ಅದರ ಪ್ರಕಾರ ಎಲ್ಲ ಧರ್ಮಗಳೂ ಒಂದೇ ಏಕೆಂದರೆ Temple, Church, Mosque ಎಂಬ ಭಕ್ತಿಸ್ಥಾನಗಳೂ, Geeta, Bible, Quran ಎಂಬ ಧರ್ಮಗ್ರಂಥಗಳೂ ಸಮ ಸಮ ಅಕ್ಷರಗಳಲ್ಲಿರುವಾಗ ಎಲ್ಲವೂ ಸಮಾನವಲ್ಲವೇ? ಅದೇಕೆ ನಾವು ಕಿತ್ತಾಡುವುದೆನ್ನುವ ಭಾವ ಆ ಲೇಖನದಲ್ಲಿತ್ತು. ಅದರ ಲೇಖಕನ ಆಶಯವೇನೋ ಚೆನ್ನಾಗಿದೆ. ಆದರೆ ಹಿಂದೂ ಧರ್ಮದ ಧರ್ಮಗ್ರಂಥವು ಗೀತೆ ಎಂಬುದನ್ನು ನೋಡಿ ನನ್ನಲ್ಲಿ ವಿಚಾರದ ತುಮುಲಗಳೆದ್ದವು. ಏಕೆಂದರೆ ನನ್ನ ಅರಿವಿಗೆ ಬಂದಂತೆ ಹಿಂದೂ ಎನ್ನುವುದು ಒಂದು ಜೀವನಶೈಲಿಯಷ್ಟೆ. ಅದೊಂದು ಧರ್ಮವಲ್ಲ. ಆಗಲಿ ಅದನ್ನು ಧರ್ಮವೆಂದೇ ಅಂದುಕೊಂಡರೂ ಗೀತೆಯನ್ನು ಅದರ ಧರ್ಮಗ್ರಂಥವೆಂದು ಕರೆಯಲಾಗದು. ಏಕೆಂದರೆ ಹಿಂದೂಸಂಸ್ಕೃತಿಯಲ್ಲಿ ಅನೇಕ ದೇವರುಗಳು, ಅನೆಕ ಪಂಗಡಗಳು, ಅನೇಕ ಒಳಧರ್ಮಗಳು ಇವೆ. ಅವೆಲ್ಲವುಗಳ ತತ್ತ್ವ ಮತ್ತು ಸಂಹಿತೆಗಳು ಒಂದೇ ತೆರನಾಗಿಲ್ಲ. ಹಿಂದೂ ಎಂಬ ಗ್ರಹಿಕೆಯ ಕುರಿತು ಅದರ ಬೆಂಬಲಿಗರು ಯಾವುದೋ ಒಂದು ಸಣ್ಣ ಅರ್ಥಹೀನ ಎಳೆಯನ್ನು ಹಿಡಿದು ನಿಜದ ಹತ್ತಿರಕ್ಕೇ ಬಾರದಂತೆ ಅಗಾಧವಾಗಿ ವಾದ ಮಾಡುತ್ತಾರೆ. ಹಿಂದುತ್ವದ ಹೆಸರು ಹೇಳಿಕೊಂಡು ಕೆಲವರು ಮಾಡುತ್ತಿರುವುದೂ ಅದನ್ನೇ.
ಮೊದಲಿಗೆ ಅವರ ರಾಮನನ್ನೇ ತೆಗೆದುಕೊಳ್ಳೋಣ. ನಮ್ಮ ಕಲ್ಪನೆಯ ರಾಮ ಒಬ್ಬ ಆದರ್ಶ ಪುರುಷ, ಪಿತೃವಾಕ್ಯ ಪರಿಪಾಲಕ, ಅವನ ಹೆಂಡತಿ ಸೀತೆ ಒಬ್ಬ ಆದರ್ಶ ಪತ್ನಿ, ಪತಿವ್ರತಾ ಶಿರೋಮಣಿ, ಸನ್ನಡತೆಯ ನಾರಿ. ರಾಮಸೀತೆಯರಂತೆಯೇ ಬಹಳಷ್ಟು ಆದರ್ಶ ದಂಪತಿಯರು ಹಿಂದೂ ಪುರಾಣಗಳಲ್ಲಿ ಮಾತ್ರವಲ್ಲ ನಮ್ಮ ದೇಶದ ಎಲ್ಲೆಡೆ ಕಾಣಸಿಗುತ್ತಾರೆ. ಶಿವ ಪಾರ್ವತಿ, ನಳ ದಮಯಂತಿ, ಆಯ್ದಕ್ಕಿ ಮಾರಯ್ಯ ದಂಪತಿ ಮುಂತಾದವರನ್ನೆಲ್ಲ ಹೀಗೆ ಹೆಸರಿಸಬಹುದು. ಆದರೆ ಹಿಂದುತ್ವವಾದಿಗಳು ರಾಮನೊಬ್ಬನನ್ನೇ ಹಿಂದೂ ಸಂಸ್ಕೃತಿಯ ಪ್ರತಿನಿಧಿಯಾಗಿ ಮಾತ್ರವಲ್ಲ ನಮ್ಮ ರಾಷ್ಟ್ರದ ಪ್ರತೀಕ ಸಹ ಎಂದು ಬಿಂಬಿಸುತ್ತಾರೆ.
ಧಾರ್ಮಿಕತೆ ಮತ್ತು ರಾಷ್ಟ್ರೀಯತೆಗಳು ಎರಡು ವಿಭಿನ್ನ ಚೌಕಟ್ಟುಗಳನ್ನು ಹೊಂದಿವೆಯೆಂಬುದನ್ನು ಅವರು ಅರಿತಂತಿಲ್ಲ. ರಾಷ್ಟ್ರವೊಂದಕ್ಕೆ ತನ್ನದೇ ಇತಿಮಿತಿಗಳಿವೆ, ಸೀಮೆಗಳಿವೆ, ರೀತಿನೀತಿಗಳಿವೆ, ಸಂವಿಧಾನ ಮತ್ತು ಶಾಸನಗಳಿವೆ. ದರ್ಮದ ಕುರಿತು ಹೇಳಬೇಕೆಂದರೆ ಅದು ಹೃದಯಕ್ಕೆ ಸಂಬಂಧಿಸಿದ್ದು, ಆತ್ಮಕ್ಕೆ ಸಂಬಂಧಿಸಿದ್ದು. ಅದಕ್ಕೆ ದೇಶ ಕಾಲಗಳ ಗಡಿಗಳಿಲ್ಲ. ಇನ್ನು ರಾಮನ ಕುರಿತು ಹೇಳಬೇಕೆಂದರೆ ಬಹು ಸಂಸ್ಕೃತಿಯ ಬಹು ದೇವರುಗಳ ನಮ್ಮ ದೇಶಕ್ಕೆ ರಾಮನೊಬ್ಬನೇ ನಾಯಕನಾಗಲಾರ. ವಾಲ್ಮೀಕಿಯ ಕತೆಯಂತೆ ರಾಮ ದೇವತಾ ಪುರುಷನಲ್ಲ, ಏಕೆಂದರೆ ಆನಂತರ ಅಂದರೆ ಸಾವಿರದೈನೂರು ವರ್ಷಗಳ ನಂತರ ಬಂದ ತುಲಸಿದಾಸರು ರಾಮನಿಗೆ ದೈವತ್ವ ಪ್ರಾಪ್ತಿ ಮಾಡಿದರು. ವಾಲ್ಮೀಕಿಯ ರಾಮಾಯಣವನ್ನು ಹಿಡಿದುಕೊಂಡರೆ ರಾಮನಿಗೆ ಚಾರಿತ್ರಿಕ ಸ್ಥಾನವೂ ಸಿಗುವುದಿಲ್ಲ, ಏಕೆಂದರೆ ಅಲ್ಲಿ ಅವನೊಬ್ಬ ಕಾಲ್ಪನಿಕ ಕಥಾನಾಯಕ. ಇನ್ನು ಅವನ ಜನ್ಮಸ್ಥಳ ಅಯೋಧ್ಯೆ ಎನ್ನುವುದು ಸತ್ಯದ ತಲೆಯಮೇಲೆ ಹೊಡೆದಂತೆ. ಇಂಥಲ್ಲಿ ರಾಮ ಜನಿಸಿದ ಎನ್ನುವ ವಾದ ಒಂದು ನಂಬುಗೆಯ ತಳಹದಿಯ ಮೇಲೆ ನಿಂತಿದೆ.
ಯೆಹೂದಿ, ಕ್ರೈಸ್ತ, ಇಸ್ಲಾಂ ಮುಂತಾದ ಸೆಮೆಟಿಕ್ ಧರ್ಮಗಳಿಗೆ ಅವುಗಳ ಕಾರಣಪುರುಷರ ದಿನಾಂಕಗಳು ಲಭ್ಯವಿವೆ. ಆದರೆ ಅದೇ ನೇರದಲ್ಲಿ ಹಿಂದೂ ಎಂಬ ಧರ್ಮದ ಕಾರಣಪುರುಷನ ತೇದಿಯನ್ನು ಇಂಥದೇ ಎಂದು ಹೇಳಲಾಗದು. ಯಾರಾದರೂ ಇತಿಹಾಸ ಸಂಶೋಧನೆ ಮಾಡಿ ಯೇಸುಕ್ರಿಸ್ತನೆಂಬುವನು ಇರಲೇ ಇಲ್ಲ ಎಂದು ಸಾಬೀತು ಪಡಿಸಿದರೆ ಕ್ರೈಸ್ತಧರ್ಮಕ್ಕೆ ಉಳಿಗಾಲವಿರುವುದಿಲ್ಲ. ಅಂತೆಯೇ ಇತಿಹಾಸಜ್ಞರು ಕೃಷ್ಣ ಎಂಬುವನು ಇರಲಿಲ್ಲವೆಂದು ಸಾಬೀತು ಪಡಿಸಿದರೆ ಗೀತೆಯ ಗತಿಯೂ ಅಂತೆಯೇ ಇರುತ್ತದೆ. ಇದೇ ವಾದ ರಾಮನಿಗೂ ಅನ್ವಯಿಸುತ್ತದೆ. ಅದಕ್ಕೇ ಕೆಲವರು ಹಿಂದೂ ಧರ್ಮ ಎನ್ನುವುದು ಸನಾತನ ಧರ್ಮ ಅದರ ಹುಟ್ಟನ್ನು ಕಾಲದಿಂದ ಅಳೆಯಲಾಗದು ಎಂದು ವಾದಿಸುತ್ತಾರೆ.
ಸನಾತನ ಹಿಂದೂ ಧರ್ಮಕ್ಕೂ ಇಂದಿನ ಹಿಂದುತ್ವಕ್ಕೂ ಏನಾದರೂ ಹೋಲಿಕೆ ಇದೆಯೇ? ಸನಾತನ ಹಿಂದೂಗಳಿಗೆ ಅನೇಕ ದೇವರುಗಳಿದ್ದು ಶಾಂತಿಯಿಂದಲೂ ಐಕ್ಯದಿಂದಲೂ ಬಾಳುತ್ತಿದ್ದಾರೆ. ನಮ್ಮ ಕಲ್ಪನೆಯ ರಾಮನಿಗೂ ಹಿಂದುತ್ವವಾದಿಗಳು ಹೇಳುವ ರಾಮನಿಗೂ ಅಗಾಧ ವ್ಯತ್ಯಾಸವಿದೆ. ನಮ್ಮ ಕಲ್ಪನೆಯ ರಾಮ ಮರ್ಯಾದಾ ಪುರುಷೋತ್ತಮ, ಎಲ್ಲ ಆದರ್ಶಗಳ ಮೇರುವ್ಯಕ್ತಿ. ಆತ ಕರ್ತವ್ಯಪಾಲಕ, ಹಿರಿಯರನ್ನು ಗೌರವಿಸಿ ಕಿರಿಯರನ್ನು ವಾತ್ಸಲ್ಯದಿಂದ ಕಂಡವನು, ಎಲ್ಲರನ್ನೂ ಪ್ರೀತಿಯಿಂದ ಪರಿಭಾವಿಸಿದವನು, ಶಾಂತಿ ಅವನ ದೊಡ್ಡ ಗುಣ. ಕಾರಣವಿಲ್ಲದೇ ಯಾರೊಂದಿಗೂ ಜಗಳ ಕಾದವನಲ್ಲ. ಪಾರಂಪರಿಕವಾಗಿ ರಾಮ ಶಾಂತಮೂರ್ತಿ. ಅವನೆಂದೂ ಒಂಟಿಯಲ್ಲ ಅವನೊಂದಿಗೆ ಹೆಂಡತಿ ಸೀತೆ, ತಮ್ಮ ಲಕ್ಷ್ಮಣ, ಗೆಳೆಯ ಹನುಮ ಇದ್ದೇ ಇರುತ್ತಾರೆ. ಆದರೆ ಹಿಂದುತ್ವವಾದಿಗಳು ತೋರುವ ರಾಮ ಒಬ್ಬಂಟಿ, ಆತ ಹುಬ್ಬುಗಂಟಿಕ್ಕಿ ಬಿಲ್ಲುಬಾಣಗಳ ಹಿಡಿದು ಜಗಳ ಕಾಯಲು ಸಿದ್ಧನಾಗಿರುವವನು. ಹಿಂದುತ್ವದ ಪ್ರತಿಪಾದಕರಿಗೆ ಉಗ್ರಸ್ವರೂಪಿ ರಾಮನೇ ದೇವರು, ಮತ್ತು ಅವನೇ ಅವರ ಪ್ರಕಾರ ರಾಷ್ಟ್ರನಾಯಕ. ಹಿಂದೂ ಎಂಬ ಭಾವವು ತಾಳ್ಮೆ ಮತ್ತು ಅಹಿಂಸೆ ಎಂಬ ಅಡಿಪಾಯದ ಮೇಲೆ ನಿಂತಿದೆ. ಅದನ್ನು ಹಿಂಸೆ ಮತ್ತು ದ್ವೇಷಗಳ ರೂಪದಲ್ಲಿ ಕಾಣುವುದೇ ಒಂದು ರೀತಿಯ ವ್ಯಂಗ್ಯ. ಅದರೆ ಹಿಂದುತ್ವದ ಸಂದೇಶಗಳು ಈ ಉದಾತ್ತ ಭಾವನೆಗಳಿಗೆ ಧಕ್ಕೆ ತರುವಂತೆ ತೋರುತ್ತಿವೆ, ಮಾತ್ರವಲ್ಲ ಅದನ್ನು ಸಾಬೀತು ಪಡಿಸಿಯೂ ಇವೆ. ವೈರಿಗಳನ್ನು ನಾಶಪಡಿಸೋಣ ಎಂಬುದೇ ಹಿಂದುತ್ವದ ಏಕೈಕ ಸಂದೇಶ, ಕಲ್ಪಿತವಿರಲಿ ನೈಜವಿರಲಿ ವೈರಿ ವೈರಿಯೇ ಎಂಬುದು ಅವರ ವಾದ. ಹಾಗೆ ನೋಡಿದರೆ ವಿಶ್ವದೆಲ್ಲೆಡೆಯ ಭಯೋತ್ಪಾದಕರೂ ಇದೇ ವಾದವನ್ನು ಮುಂದಿಡುತ್ತಾರೆ. ಅಂದರೆ ಹಿಂದುತ್ವವಾದಿಗಳು ಆತಂಕವಾದಿಗಳಾಗುತ್ತಿದ್ದಾರೆಯೇ?
ಹಿಂದುತ್ವವಾದಿಗಳು ಕೆಲ ದಿನಗಳ ಹಿಂದೆ ತ್ರಿಶೂಲಗಳು ತಮ್ಮ ಆಯುಧಗಳಾಗಲಿ ಎಂದು ಬಯಸಿದವರು. ಅದನ್ನೇ ಅವರು ವಿವಿಧ ಜನಗಳಿಗೆ ಹಂಚಿ ಸುದ್ದಿ ಮಾಡಿದ್ದರು. ತ್ರಿಶೂಲ ಮಂಗಳರೂಪಿ ಶಿವನ ಕೈಯಲ್ಲಿನ ಆಭರಣ. ಇಲ್ಲಿ ನಾನು ಅದನ್ನು ಆಯುಧವೆನ್ನುತ್ತಿಲ್ಲ ಏಕೆಂದರೆ ಶಿವ ಅದನ್ನೆಂದೂ ಎಲ್ಲೆಂದರಲ್ಲಿ ಕ್ರೋಧದಿಂದ ಪ್ರಯೋಗಿಸಿಲ್ಲ. ಬದಲಿಗೆ ಹಸನ್ಮುಖನಾಗಿಯೇ ಅದನ್ನು ಹಿಡಿದು ನಿಂತಿರುವುದನ್ನು ನೋಡಿದಾಗ ನಮಗೆ ಶಿವನ ಬಗ್ಗೆ ಪ್ರೀತಿಯ ಭಾವನೆ ಸ್ಫುರಿಸುತ್ತದೆ. ಸ್ವತಃ ಶಿವನೇ ಅಸ್ತ್ರವನ್ನು ದೂರಕ್ಕೆಸೆದು ಭೋಳೇಶಂಕರ ಎನಿಸಿದ್ದಾನೆ. ಆದರೆ ಹಿಂದುತ್ವವಾದಿಗಳು ವಿತರಿಸುವ ಅಥವಾ ಪ್ರದರ್ಶಿಸುವ ತ್ರಿಶೂಲ ಶಿವನ ಆಭರಣದಂತಿರದೆ ದಗಾಕೋರರ ಅಥವಾ ಠಕ್ಕರ ಆಯುಧದಂತಿದೆ.
ಹಾಗೆ ನೋಡಿದರೆ ರಾಮನು ಶಾಂತಿಗೆ ಮಾದರಿಯಾಗಿದ್ದಾನೆ, ಕೃಷ್ಣನು ಅವ್ಯಾಜಪ್ರೇಮಕ್ಕೆ ಮಾದರಿಯಾಗಿದ್ದಾನೆ, ಕಾಳಿಯು ಶಿಕ್ಷಣಕ್ಕೆ ಮಾದರಿಯಾಗಿದ್ದಾಳೆ, ಶಿವನು ನೆಮ್ಮದಿಗೆ ಮಾದರಿಯಾಗಿದ್ದಾನೆ, ಇವೆಲ್ಲವುಗಳ ಸಂಮಿಶ್ರವೇ ಹಿಂದೂ ಪ್ರತೀಕವಾಗಬೇಕು. ಇಂಥ ಉದಾತ್ತ ಸಂಸ್ಕೃತಿಗೆ ಏಕದೇವೋಪಾಸನೆಯ ಏಕಧರ್ಮಗ್ರಂಥದ ಅನಗತ್ಯ ಸಂಕೋಲೆ ಬಿಗಿದು ಆವೇಗ, ಆವೇಶ, ಕ್ರೋಧ, ಹಗೆಗಳನ್ನು ಆವಾಹಿಸಿಕೊಳ್ಳುವ ಹಿಂದುತ್ವವು ಲೋಕಕ್ಕೆ ಕಂಟಕಕಾರಿಯಾಗಿದೆ.