ಭಾನುವಾರ, ಡಿಸೆಂಬರ್ 28, 2008

ಕ್ರಿಸ್ತಜಯಂತಿಯ ಮೆಲುಕು

"ದ್ಯಾವರಿಗೆ ರಾಜರ ಪಟ್ಟ ಕಟ್ಟಿ ಊರು ತುಂಬಾ ಮೆರವಣಿಗೆ ಮಾಡಿದ್ದಾಯ್ತು, ಇನ್ನು ಒಂದು ತಿಂಗಳಿಗೆ ಸ್ವಾಮಿ ಹುಟ್ಟೋ ಹಬ್ಬ, ನಾಳೆಯಿಂದ ಕೊರೆತ ಒಸಿ ಜಾಸ್ತಿ" ಇವು ನಮ್ಮ ತಾತನ ಮಾತುಗಳನ್ನು ಕೇಳಿದಾಗ "ಸ್ವಾಮಿ ಹುಟ್ಟೋದು" ಅನ್ನೋ ಪದ ಮನಸ್ಸಿಗೆ ಲಗತ್ತಾಗಿ ಓ ಅದು ಕ್ರಿಸ್ಮಸ್ ಅಲ್ಲವೇ ಎಂಬುದು ಹೊಳೆದು ಮನ ಪ್ರಫುಲ್ಲವಾಗುತ್ತದೆ. ಈ ಕ್ರಿಸ್ಮಸ್ ಅನ್ನೋ ಪದವೇ ವಿಶ್ವದೆಲ್ಲೆಡೆ ಎಲ್ಲರ ಮನಸಿನಲ್ಲೂ ಸಂತಸದ ಭಾವ ಮೂಡಿಸುತ್ತದೆ.

ಕ್ರಿಸ್ಮಸ್ಸು ಅಂತ ನಾವು ಹೇಳೋ ಪದ ತಾತನ ಬಾಯಲ್ಲಿ ಕಿಸ್‌ಮಿಸ್ಸು ಆಗುವಾಗ ಮರೆಯಲ್ಲೇ ಕಿಸಕ್ಕನೆ ನಕ್ಕು ರಾತ್ರಿ ಅಮ್ಮನೊಟ್ಟಿಗೆ ಈ ಮಾತು ಹೇಳುತ್ತಾ ನಗುತ್ತಿದ್ದುದು ಕನಸೆಂಬಂತೆ ಕ್ರಿಸ್ಮಸ್ ಬಂದ ಕೂಡಲೇ ಮನಸಿನಲ್ಲಿ ಹಾಯ್ದುಹೋಗುತ್ತದೆ.

ಅದು ಸರಿ ಕ್ರಿಸ್ಮಸ್ಸಿಗೆ ಅಮ್ಮ ಅದೇನೆಲ್ಲ ತಿಂಡಿಗಳನ್ನು ಮಾಡುತ್ತಿದ್ದರಲ್ಲ. ಶಾಲೆ ಕಳೆದು ಮನೆಗೆ ಬರುವಷ್ಟರಲ್ಲಿ ನಾನಾ ತರದ ತಿಂಡಿಗಳನ್ನು ಮಾಡಿ ಡಬ್ಬಿಗಳಿಗೆ ತುಂಬಿ ಅಟ್ಟಕ್ಕೇರಿಸಿ, ಏನೂ ನಡೆದಿಲ್ಲವೆಂಬಂತೆ ಮನೆಯನ್ನು ಒಪ್ಪ ಓರಣವಾಗಿಟ್ಟಿರುತ್ತಿದ್ದರಲ್ಲ. ಹಬ್ಬದ ದಿನವಷ್ಟೇ ಅಷ್ಟೂ ತಿಂಡಿಗಳು ಹೊರಬರುತ್ತಿದ್ದವು. ಕಜ್ಜಾಯ, ಕರ್ಚಿಕಾಯಿ, ಚಕ್ಕುಲಿ, ಕಲ್‌ಕಲ್, ರೋಸ್‌ ಕುಕ್ಕೀಸ್, ಶಕ್ಕರ್‍ ಪೊಳೆಯಂಥ ಬಿಸ್ಕತ್ತು, ರವೆಉಂಡೆ, ನಿಪ್ಪಟ್ಟು, ಕೋಡುಬಳೆ, ಕಾರಸೇವೆ ಇನ್ನೂ ಏನೇನೋ? ನೆರೆಹೊರೆಯವರಿಗೆಲ್ಲ ಅವನ್ನು ಹಂಚಿದಾಗ ಅಪರೂಪದ ತಿಂಡಿಗಳನ್ನು ಕಂಡ ಅವರ ಮುಖಗಳು ಅರಳುವುದನ್ನು ನೋಡುವುದೇ ಒಂದು ಚೆಂದವಾಗಿತ್ತು.

ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯ (ಚರ್ಚ್) ದ ಹಿಂದುಗಡೆಯೇ ತಾತ ನೆಲೆಸಿದ್ದು ಅವರು ನಿತ್ಯ ಬೆಳಕು ಹರಿಯುವ ಮುನ್ನವೇ ಅಂದಿನ ಶಾಂತ ಪ್ರಶಾಂತ ವಾತಾವರಣದ ಆ ಗುಡಿಯಲ್ಲಿನ ಬೃಹತ್ ಗಂಟೆ ಬಾರಿಸಿದಾಗ ಢಣ್ ಎಂಬ ಆ ನಿನಾದ ಬಹುದೂರದವರೆಗೆ ಬಹುಹೊತ್ತಿನವರೆಗೆ ಅನುರಣಿಸುತ್ತ ಅನೂಹ್ಯ ಭಾವದೀಪ್ತಿಯನ್ನು ಬೆಳಗುತ್ತಿತ್ತು. ನವೆಂಬರ್ ಕೊನೆಯ ಭಾನುವಾರದಂದು ಆ ದೇವಾಲಯದಲ್ಲಿ ಕ್ರಿಸ್ತರಾಜರ ಹಬ್ಬವನ್ನು ವೈಭವದಿಂದ ಆಚರಿಸುವುದರೊಂದಿಗೆ ಕ್ರೈಸ್ತರ ಧಾರ್ಮಿಕ ವರ್ಷಕ್ಕೆ ಅಂತ್ಯ ಹಾಡಿ ಅದರ ಮರುದಿನದಿಂದಲೇ ಕ್ರಿಸ್ತನ ಹುಟ್ಟನ್ನು ಎದುರು ನೋಡುವ ಸಂಭ್ರಮ ತಾತನ ಮಾತುಗಳಲ್ಲಿ ಮೂಡಿಬಂದ ರೀತಿಯೂ ಅತ್ಯಂತ ಆಪ್ತವಾಗಿತ್ತು.

ಅಲ್ಲ, ಈ ಕ್ರಿಸ್ಮಸ್ ಸೀಸನ್ ಒಂಥರಾ ಮನಸಿಗೆ ಮುದ ನೀಡೋ ಸೀಸನ್ನು. ಒಂದು ತಿಂಗಳ ಆ ಸೀಸನ್ನು ಹೇಗೆ ಕಳೆಯುತ್ತಿತ್ತೆಂಬುದೇ ತಿಳಿಯುತ್ತಿರಲಿಲ್ಲ. ಗಾನವೃಂದದವರಂತೂ ಆ ಒಂದು ತಿಂಗಳೆಲ್ಲ ಮನೆಮನೆಗಳಿಗೆ ಭೇಟಿ ನೀಡಿ ಕ್ರಿಸ್ಮಸ್ ಗೀತೆಗಳನ್ನು ಹಾಡಿ ಊರೆಲ್ಲ ನಲಿವು ತುಂಬುತ್ತಾರೆ. ದೇವಾಲಯವು ಮೊದಲೇ ವಾರ್ಷಿಕ ಹಬ್ಬಕ್ಕೆಂದು ಸುಣ್ಣಬಣ್ಣ ಕಂಡಿರುತ್ತಿತ್ತಲ್ಲ. ಇನ್ನು ಕ್ರಿಸ್ಮಸ್ಸಿಗಾಗಿ ಬರೀ ಬಣ್ಣದ ತೋರಣಗಳ ಸಿಂಗಾರವಾಗುತ್ತಿತ್ತು ಅಷ್ಟೇ.

ಅಷ್ಟೇ ಅನ್ನೋದು ಬರೀ ಉಡಾಫೆಯ ಮಾತಾದೀತು. ಹಗಲೆಲ್ಲ ಕೆಲಸಕ್ಕೆ ತೆರಳುವ ಜನ ಸಂಜೆಯಾಗುತ್ತಲೇ ದೇವಾಲಯಕ್ಕೆ ಬಂದು ಈ ಸಿಂಗಾರದ ಕೆಲಸಕ್ಕೆ ತೊಡಗುತ್ತಿದ್ದರು. ಕೆಲವರು ಹಸಿ ಬಿದಿರಿನಿಂದ ದೊಡ್ಡದಾದ ನಕ್ಷತ್ರ ಕಟ್ಟುತ್ತಿದ್ದರು. ಕೆಲವರು ಬಹು ದೂರದವರೆಗೆ ಬಟ್ಟೆಯ ತೋರಣಗಳನ್ನು ಕಟ್ಟುತ್ತಿದ್ದರು. ಕೆಲವರು ಬಣ್ಣಬಣ್ಣದ ಜಗಮಗಿಸುವ ವಿದ್ಯುದ್ದೀಪಗಳನ್ನು ಕಟ್ಟುತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಯೇಸು ಜನನಕ್ಕೆ ಆಸರೆಯಾದ ದನದ ಕೊಟ್ಟಿಗೆಯನ್ನು ಕಟ್ಟುವುದು ಇದೆಯಲ್ಲ ಅದಂತೂ ಬಲು ನಾಜೂಕಿನ ಕೆಲಸ. ಅದೇನು ಸುಮ್ಮನೇ ಆದೀತೇ? ಬಿದಿರ ಗಳಗಳನ್ನು ಸಿಗಿದು ಅಡ್ಡಕ್ಕೆ ಉದ್ದಕ್ಕೆ ಬಿಗಿದು, ಅದಕ್ಕೆ ಎತ್ತರೆತ್ತರಕ್ಕೆ ಬೆಳೆದಿದ್ದ ಕಾಸೆ ಹುಲ್ಲನ್ನು ಕಟ್ಟಿ ಗೋಡೆ ರಚಿಸಬೇಕು. ಅಗಲವಾದ ಕಾಗದಗಳಿಗೆ ಕಂದು ಬಣ್ಣ ಬಳಿದು ಮುದ್ದೆ ಮಾಡಿ ಬಂಡೆಗಳ ಆಕೃತಿ ಮಾಡಿಟ್ಟು ಸೂರು ರೂಪಿಸಬೇಕು. ಗಿಡಗಳನ್ನೂ ಸಸಿಗಳನ್ನೂ ಕಲಾತ್ಮಕವಾಗಿ ಜೋಡಿಸಿ ಪುಟ್ಟ ಸಸ್ಯೋದ್ಯಾನ ರೂಪಿಸಿ ಅವುಗಳ ನಡುವೆ ನಿರ್ಭರವಾಗಿ ಹರಿವ ನೀರಿನ ಸಣ್ಣ ಒರತೆಗಳನ್ನು ಮಾಡಬೇಕು.

ಇಷ್ಟೆಲ್ಲ ಆದ ಮೇಲೆ ಆ ಗೋಶಾಲೆಯಲ್ಲಿ ಹಸುಕರುಗಳು ಇಲ್ಲದಿದ್ದರೆ ಹೇಗೆ? ಬಣ್ಣಬಣ್ಣದ ಮಣ್ಣಿನ ದನಗಳು, ಕರುಗಳು, ಕುರಿ ಮಂದೆಯೊಂದಿಗೆ ಕುರುಬರು, ಮೂರು ಜ್ಞಾನಿಗಳು ಮತ್ತು ಅವರ ಒಂಟೆಗಳು, ಮತ್ತು ಮುಖ್ಯವಾಗಿ ಎಲ್ಲ ಆಕರ್ಷಣೆಗಳ ಕೇಂದ್ರಬಿಂದುವಾಗಿ ಮರಿಯಾಮಾತೆ ಮತ್ತು ಜೋಸೆಫರ ನಡುವೆ ಪುಟ್ಟ ಗೋದಲಿಯಲ್ಲಿ ಮಲಗಿದ ಯೇಸುಕಂದನ ಆ ಸುಂದರ ನಗು. ಜೊತೆಯಲ್ಲಿ ನಾವೂ ಇದ್ದೇವೆ ಎಂಬಂತೆ ಹಸಿಹುಲ್ಲಿನ ಸ್ನಿಗ್ದ ಕಂಪು, ಮೊಂಬತ್ತಿಗಳಲ್ಲಿ ಕುಣಿಯುವ ಬೆಳಕು.

ಡಿಸೆಂಬರ್ ಇಪ್ಪತ್ನಾಲ್ಕರ ರಾತ್ರಿ ಹನ್ನೊಂದಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಜನ ಬರತೊಡಗಿ ದೇವಾಲಯದ ತುಂಬೆಲ್ಲ ಹೊಸಬಟ್ಟೆಯ ಗಮಲಿನೊಂದಿಗೆ ಸುಗಂಧದ ಪರಿಮಳ ಹರಡಿರುತ್ತಿತ್ತು. ಅಷ್ಟು ಜನರಿದ್ದರೂ ಅಲ್ಲಿ ದಿವ್ಯ ಮೌನ. ಹನ್ನೆರಡಕ್ಕೆ ಇನ್ನೂ ಐದು ನಿಮಿಷ ಇರುವಂತೆಯೇ ಒಂದು ಭಜನೆಯೊಂದಿಗೆ ಪೂಜಾವಿಧಿ ಪ್ರಾರಂಭವಾಗಿ ಸರಿಯಾಗಿ ಹನ್ನೆರಡು ಗಂಟೆಗೆ ಚರ್ಚಿನ ಗಂಟೆಯ ಢಣ್ ಢಣ್ ನಾದದೊಂದಿಗೆ ಎಲ್ಲರೂ ಭಕ್ತಿಯೊಂದಿಗೆ "ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಮನಸ್ಕರಿಗೆ ಶಾಂತಿ" ಎಂದು ಎದೆತುಂಬಿ ಹಾಡುವ ಆ ಶುಭಗಳಿಗೆ "ಕ್ರಿಸ್ತಜಯಂತಿಯ ಶುಭಾಶಯಗಳು" ಎಂಬ ಘೋಷಣೆಗೆ ನಾಂದಿಯಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಹೊರಗೆ ನಕ್ಷತ್ರಗಳು ನಗುತ್ತಿದ್ದವು. ಅವುಗಳೊಂದಿಗೆ ವಿದ್ಯುದ್ದೀಪಗಳು ಪೈಪೋಟಿ ನಡೆಸುತ್ತಿದ್ದವು. ಕ್ರಿಸ್ಮಸ್ ಮರದಲ್ಲಿ ತೂಗುಬಿಟ್ಟ ದೀಪಗಳು ಕಣ್ಣು ಮಿಟುಕಿಸುತ್ತಿದ್ದವು. ಚಿತ್ತಾರವುಳ್ಳ ಬಣ್ಣದ ಬೆಲೂನುಗಳು ತೇಲಾಡುತ್ತಿದ್ದವು.

ಜನರೆಲ್ಲ ಹಳೆಯ ವಿರಸಗಳೆಲ್ಲವನ್ನೂ ಮರೆತು ಗಂಡು ಹೆಣ್ಣು, ಮಕ್ಕಳು ವೃದ್ಧರೆಂಬ ಭೇದವಿಲ್ಲದೆ ಕೈ ಕುಲುಕುತ್ತಾ ಸಂಭ್ರಮ ಸಡಗರಗಳಿಂದ ಕ್ರಿಸ್ತಜಯಂತಿಯ ಶುಭಾಶಯಗಳನ್ನು ಹಂಚಿಕೊಳ್ಳುವ ಈ ಕ್ರಿಸ್ಮಸ್ ಮತ್ತೆ ಮತ್ತೆ ಬರುತ್ತಿರಲಿ, ಸಂಭ್ರಮ ಸಡಗರಗಳ ಜೊತೆಜೊತೆಗೇ, ಜಾತಿ ಮತಗಳ ಭೇದವ ಕಿತ್ತೊಗೆದು ಶಾಂತಿ ಸೌಹಾರ್ದ ಮೂಡಿಸಲಿ.

ಮಂಗಳವಾರ, ಡಿಸೆಂಬರ್ 9, 2008

ಒಂದು ಪವಿತ್ರಕಾರ್ಯ

ಮುಂಬೈಯಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದು ಹಿಂಸೆ ತಾಂಡವವಾಡಿತು. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಇಂಡಿಯಾ ದೇಶದ ಒಳ ಭಯೋತ್ಪಾದಕರಿಂದ ಒರಿಸ್ಸಾ ಮತ್ತು ಕರ್ನಾಟಕಗಳು ಹಿಂಸೆಯಿಂದ ಜರ್ಜರಿತಗೊಂಡವು. ಮುಂಬೈ ಭಯೋತ್ಪಾದಕರು ಧರ್ಮವನ್ನು ನೋಡದೆ ಹಿಂಸಿಸಿದರೆ ಈ ಒಳಗಿನ ಭಯೋತ್ಪಾದಕರು ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ಹಿಂಸಿಸಿದರು. ಇವರ ದೌರ್ಜನ್ಯಕ್ಕೆ ಅಮಾಯಕರು ಬಲಿಯಾಗಿ, ಹೆಂಗಸರು ಅಪಮಾನಿತರಾಗಿ, ಮಕ್ಕಳು ಅನಾಥರಾಗಿದ್ದಾರೆ. ಈ ಸಂತ್ರಸ್ತರಿಗಾಗಿ ನಮ್ಮ ಹೃದಯಗಳು ಮರುಗಿವೆಯಾದರೂ ನಾವು ಇವರಿಗಾಗಿ ಮಾಡಿದ್ದೇನು ಎಂದು ಚಿಂತಿಸಬೇಕಿದೆ. ನಮ್ಮ ಅನುಕಂಪ, ನಮ್ಮ ಪ್ರಾರ್ಥನೆ, ಆಕ್ರೋಶ, ವಿಚಾರವಿನಿಮಯ, ಜಾಗೃತಿಗಳ ಹೊರತಾಗಿ ನಾವು ಮಾಡಬೇಕಾದುದು ಇನ್ನೇನೋ ಇದೆ.
ಇಂದು ನಾವೆಲ್ಲ ಕ್ರಿಸ್ತನ ಆಗಮನ ಕಾಲದಲ್ಲಿದ್ದೇವೆ. ಇದು ಸ್ವಚ್ಛತೆಯ, ಸಿದ್ಧತೆಯ, ಬದಲಾವಣೆಯ, ನವೀಕರಣದ ದಿನಗಳು. ನಮ್ಮ ಮನೆಗಳಲ್ಲಿ ಮನಗಳಲ್ಲಿ ಯೇಸುಕ್ರಿಸ್ತನ ಜನನವನ್ನು ಸ್ವಾಗತಿಸಲು ನಾವೆಲ್ಲ ಸಿದ್ಧರಾಗುತ್ತಿದ್ದೇವೆ. ಆದರೆ ಒರಿಸ್ಸಾದಲ್ಲಿನ ಕ್ರೈಸ್ತ ಜನತೆ ಇನ್ನೂ ಭಯದ ಆತಂಕ ವಾತಾವರಣದಲ್ಲಿದ್ದಾರೆ. ಇಂದು ಆ ಜನ ನೀರು ನೆರಳಿಲ್ಲದವರಾಗಿದ್ದಾರೆ. ಈ ಸಂದರ್ಭದಲ್ಲಿ "ನನ್ನ ಅತಿ ಕಡೆಯ ಸೋದರನಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ" ಎಂದ ಯೇಸುಕ್ರಿಸ್ತನ ನುಡಿಗಳು ನಮ್ಮ ಮನಸ್ಸಿನಲ್ಲಿ ಧ್ವನಿಸಲಿ. ಆದ್ದರಿಂದ ದೌರ್ಜನ್ಯಕ್ಕೊಳಗಾದ ಒರಿಸ್ಸಾದ ಕ್ರೈಸ್ತ ಜನತೆಗೋಸ್ಕರ ಏನನ್ನಾದರೂ ಮಾಡೋಣ. ಏಕೆಂದರೆ ಆ ಜನ ಧರ್ಮದ ಕಾರಣವಾಗಿ ತಮ್ಮ ಮನೆಮಠ ಆಸ್ತಿಪಾಸ್ತಿಗಳನ್ನು ಮಾತ್ರವಲ್ಲತಮ್ಮ ಆಪ್ತೇಷ್ಟರನ್ನೂ ಕಳೆದುಕೊಂಡಿದ್ದಾರೆ. ಅಸಂಖ್ಯ ಚರ್ಚುಗಳು, ಅನಾಥಾಶ್ರಮಗಳು ಸುಟ್ಟು ಬೂದಿಯಾಗಿವೆ. ಅವುಗಳನ್ನೆಲ್ಲ ಮರು ನಿರ್ಮಾಣ ಮಾಡಿ ಕುಟುಂಬಗಳಿಗೆ ಆಶ್ರಯ ಕಲ್ಪಿಸಬೇಕಾಗಿದೆ. ನಾವು ಆ ನತದೃಷ್ಟರ ಸಹೋದರರಾಗಿ ಕಿಂಚಿತ್ತಾದರೂ ಸಹಾಯ ಮಾಡೋಣ. ಅನಾಥರಿಗೆ ದೀನದರಿದ್ರರಿಗೆ ಸಹಾಯ ಮಾಡುವುದು ನಮಗೊಂದು ಪವಿತ್ರಕಾರ್ಯ.
ನಮ್ಮ ಕ್ರಿಸ್ಮಸ್ ಆಚರಣೆಯ ವೆಚ್ಚವನ್ನು ತಗ್ಗಿಸಿ ಆ ಹಣವನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸೋಣ: The Cuttack Roman Catholic Diocesan Corporation, SB A/C No.855 (RTGS CODE FDRL 0001232), The Federal Bank Ltd., (First Floor), #14D, Bapuji nagar, Janapath, Bhubaneshwar 751009, ORISSA
ಫೆಡೆರಲ್ ಬ್ಯಾಂಕಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲದವರು ಮೇಲೆ ತಿಳಿಸಿದ ಖಾತೆಗೆ ಚೆಕ್ಕು ಬರೆದು ಅದನ್ನು ಈ ವಿಳಾಸಕ್ಕೆ ಕಳುಹಿಸಿರಿ. Most Rev. Raphael Cheenath, SVD., Archbishop's house, # 9/16, Satyanagar, Bhubaneshwar, Orissa. Phone: 0674 257525 email: crcdc@satyam.net.in
ಪರಿಹಾರ ಸಾಮಗ್ರಿಗಳನ್ನು ಕಳಿಸಲಿಚ್ಛಿಸುವವರು ದಯಮಾಡಿ ವಿಳಾಸಕ್ಕೆ ಕಳಿಸಬಹುದು. Sister Suma, Missionaries of Charity, Satyanagar, Bhubaneshwar 751007, Orissa
ನಿಮ್ಮ ಕೊಡುಗೆಗಳಿಂದ ಒರಿಸ್ಸಾದ ಸಂತ್ರಸ್ತ ಜನತೆಯು ಒಳ್ಳೆಯ ದಿನಗಳನ್ನು ಕಾಣುವಂತಾಗಲಿ.
ದೇವರು ನಿಮಗೂ ಒಳ್ಳೆಯದು ಮಾಡಲಿ. ಕ್ರಿಸ್ತನು ನಿಮಗೆ ತನ್ನ ಪ್ರೀತಿಶಾಂತಿಗಳನ್ನು ಧಾರೆಯೆರೆಯಲಿ. ನೆಮ್ಮದಿ ನಿರಾತಂಕ ನಿರುಮ್ಮಳತೆ ನಿಮ್ಮದಾಗಲಿ. ಮೈಮನಸ್ಸುಗಳ ಆರೋಗ್ಯ ವರ್ಧಿಸಲಿ. ಸಂತೃಪ್ತಿ, ಸಮೃದ್ಧಿಗಳು ತುಂಬಿ ತುಳುಕಾಡಲಿ. ಕ್ರಿಸ್ತನೇ ನಿಮ್ಮ ದಾರಿದೀವಿಗೆಯಾಗಿ ಕೈ ಹಿಡಿದು ಮುನ್ನಡೆಸಲಿ. ಕ್ರಿಸ್ತಜಯಂತಿಯ ಹಾರ್ದಿಕ ಶುಭಾಶಯಗಳು.

ಶನಿವಾರ, ನವೆಂಬರ್ 1, 2008

ಒರಿಸ್ಸಾ ಮತ್ತು ಮತಾಂತರ

ಒರಿಸ್ಸಾದ ಆದಿವಾಸಿ ಜನ ಹಿಂದೂಗಳೂ ಅಲ್ಲ ಕ್ರೈಸ್ತರೂ ಅಲ್ಲ. ಅವರೆಲ್ಲ ಪ್ರಕೃತಿಪೂಜಕರು. ರಾಮನಾಗಲೀ ಕ್ರಿಸ್ತನಾಗಲೀ ಯಾರೆಂದು ಅವರಿಗೆ ತಿಳಿಯದು. ಬೆಟ್ಟಗುಡ್ಡಗಳೇ ಅವರ ಮನೆ. ಅರಣ್ಯವೇ ಅವರ ದೇವರು. ಅರಣ್ಯದಲ್ಲಿ ಸಿಗುವ ಯಾವುದೋ ಮರದ ಬೇರು, ಅದರಿಂದೊಸರುವ ನೀರು, ಗೆಡ್ಡೆಗೆಣಸುಗಳು, ಯಾವುದೋ ಮರದ ಎಲೆ, ಅಪರೂಪಕ್ಕೆ ಸಿಗುವ ಮೊಲ ಮುಂಗುಸಿ ಮುಂತಾದ ಪ್ರಾಣಿಗಳು, ಕಾಡ ಹಕ್ಕಿಗಳು ಕೋಳಿಗಳು ಇವೇ ಅವರ ಆಹಾರ. ಆರು ತಿಂಗಳು ಒಂದೇ ಸಮನೆ ಮಳೆ ಸುರಿದರೂ ಎಲ್ಲ ಇಂಗಿಹೋಗುವ ಹಾಗೂ ಮತ್ತಾರು ತಿಂಗಳ ಬಿಸಿಲ ಬೇಗೆಗೆ ಎಲ್ಲ ಒಣಗಿ ಮರುಭೂಮಿಯಂತಾಗುವ ನೆಲ, ಇಲ್ಲಿ ಜೀವನ ನಡೆಸುವುದೇ ಪ್ರತಿನಿತ್ಯದ ಗೋಳಾಗಿರುವಾಗ ದೇವರುದಿಂಡರಿಗೆ ಎಲ್ಲಿ ಸಮಯ? ಎಲ್ಲೋ ಕೆಲವರು ಕಣಿವೆಗಳ ಕೆಸರು ಭೂಮಿಯಲ್ಲಿ ಭತ್ತ ಬೆಳೆದುಕೊಳ್ಳುತ್ತಾರೆ. ಅಲ್ಲಲ್ಲಿ ವಾರಕ್ಕೊಮ್ಮೆ ನಡೆವ ಸಂತೆಗಳಲ್ಲಿ ಈ ಆದಿವಾಸಿಗಳು ಕಾಡಿನ ಉತ್ಪನ್ನಗಳನ್ನು ಆಹಾರ ಪದಾರ್ಥಗಳಿಗಾಗಿ ವಿನಿಮಯಿಸಿಕೊಳ್ಳುತ್ತಾರೆ.
ಸಂತಾಲಿ ಎಂಬ ಸಂಪರ್ಕ ಭಾಷೆಯೊಂದನ್ನು ಹೊರತುಪಡಿಸಿದರೆ ಅವರ ಭಾಷೆಗಳೂ ವೇಷಭೂಷಣಗಳೂ ವೈವಿಧ್ಯಮಯ. ಹೆಚ್ಚಿನವರು ಲಂಗೋಟಿ ಬಿಟ್ಟರೆ ಬೇರೇನೂ ಧರಿಸುವುದಿಲ್ಲ. ಹೆಂಗಸರು ಮಾತ್ರ ಸೀರೆಯನ್ನು ಅದರ ಮಾಮೂಲಿ ಶೈಲಿಯಲ್ಲಿ ಉಡದೆ ಒಂದು ಸುತ್ತು ತಂದು ಭುಜದ ಹತ್ತಿರ ಗಂಟು ಹಾಕ್ಕೊಂಡಿರುತ್ತಾರೆ. ರವಿಕೆ ಇರೋದಿಲ್ಲ ಆದರೆ ಲಂಗೋಟಿ ಇರುತ್ತೆ. ಕೂದಲನ್ನು ಕೊಂಡೆ ಸುತ್ತಿ ಪಕ್ಕಕ್ಕೆ ವಾಲಿಬಿಟ್ಟಿರುತ್ತಾರೆ. ಮೂವತ್ತು ವರ್ಷಗಳ ಹಿಂದೆ ಸಿನಿಮಾ ಮೂಲಕ ಈ ಹೇರ್‍ ಸ್ಟೈಲ್ ಎಲ್ಲೆಡೆ ಹಬ್ಬಿತ್ತು. ಒರಿಸ್ಸಾ, ಮಹಾರಾಷ್ಟ್ರ, ಆಂಧ್ರ, ಛತ್ತೀಸಗಡ, ಜಾರ್ಖಂಡ್ ರಾಜ್ಯಗಳಲ್ಲಿ ಹರಡಿರುವ ಇವರಿಗೆ ಯಾವುದೇ ಗಡಿಗಳಿಲ್ಲ.ಹಸಿವು ನೀಗಿಕೊಳ್ಳಲು ಎಲ್ಲೆಂದರಲ್ಲಿಗೆ ಸ್ಥಳ ಬದಲಾಯಿಸುತ್ತಾರೆ, ಏನೂ ಸಿಕ್ಕದಾದಾಗ ತಮ್ಮದೇ ಹಸುಗಳನ್ನು ಕೊಂದು ತಿನ್ನುತ್ತಾರೆ. ಹೀಗಿದ್ದರೂ ಹಸಿವಿನಿಂದ ಸಾಯುವವರೇನೂ ಕಮ್ಮಿಯಿಲ್ಲ.
ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು ಎನ್ನುವ ಧ್ಯೇಯವುಳ್ಳ ಕ್ರೈಸ್ತ ಸಂಸ್ಥೆಗಳು ಇವರಿಗೆ ಬದುಕುವ ರೀತಿಯನ್ನು ಕಲಿಸುತ್ತಿವೆ, ಆರೋಗ್ಯ ನೀಡುತ್ತಿವೆ, ಅಕ್ಷರ ಕಲಿಸುತ್ತಿವೆ, ಹೆಣ್ಣುಮಕ್ಕಳು ಕಿರಿಯವಯಸ್ಸಿನಲ್ಲಿ ತಾಯಿಯರಾಗದಂತೆ ನೋಡುತ್ತಿವೆ. ಎಲ್ಲಕ್ಕೂ ಮೊದಲು ಬಟ್ಟೆ ತೊಡುವುದನ್ನು ಹೇಳಿಕೊಟ್ಟಿವೆ. ಆದರೆ ಉದ್ಯೋಗ ನಿಮಿತ್ತ ಇಲ್ಲಿ ನೆಲೆನಿಂತ ಒರಿಸ್ಸಾದ ಪೂರ್ವಭಾಗದ ನಾಗರಿಕ ಜನ ಈ ಆದಿವಾಸಿಗಳನ್ನು ನಿಕೃಷ್ಟವಾಗಿ ಕಾಣುತ್ತಾರೆ. ಸೌದೆ ಹುಣಿಸೇಹಣ್ಣು ಜೇನು ಪುನುಗು ಇತ್ಯಾದಿಗಳನ್ನು ಕೊಟ್ಟು ದೂರ ನಿಂತು ಸೊಂಟ ಬಗ್ಗಿಸಿ ಹಣಕ್ಕಾಗಿ ಹಲ್ಲುಗಿಂಜುವ ಗಿರಿಜನರು ತಲೆಯೆತ್ತಿ ಓಡಾಡುವುದನ್ನು ನೋಡಿದಾಗ ಆ (ಅ)ನಾಗರಿಕರಿಗೆ ಒಂಥರಾ ಇರುಸುಮುರುಸಾಗುತ್ತದೆ. ಆದಿವಾಸಿಗಳ ಬದುಕನ್ನು ಮೇಲೆತ್ತುವುದಕ್ಕಿಂತ ಮೊದಲು ಅವರಿಗೆ ಗೋಹತ್ಯೆ ಕಾಣುತ್ತದೆ, ಆದಿವಾಸಿಗಳ ಬೆತ್ತಲೆ ದೇಹದ ಮೇಲೆ ಒಳ್ಳೆ ಉಡುಪು ಕಾಣುತ್ತದೆ, ಮತಾಂತರ ಕಾಣುತ್ತದೆ. ಹೀಗೆ ಒರಿಸ್ಸಾದಲ್ಲಿ ಈ ಅಮಾಯಕ ಆದಿವಾಸಿಗಳ ಕಗ್ಗೊಲೆಯಾಯಿತು, ಅವರ ಬದುಕಿನ ಅನ್ನವನ್ನು ನೆಲಕ್ಕೆ ಚೆಲ್ಲಲಾಯಿತು, ಆದರೆ ನೋಡಿ ಎಲ್ಲೂ ಈ ಕ್ರೈಸ್ತರು ತಮ್ಮ ಬಿಲ್ಲುಬಾಣ ಭರ್ಜಿಗಳನ್ನು ಕೈಗೆ ತೆಗೆದುಕೊಳ್ಳಲಿಲ್ಲ.

ಮೈಲಾರಲಿಂಗ

ಇಂಡಿಯಾದ ಸಂಸ್ಕೃತಿಯಲ್ಲಿ ಶಿವನಿಗೆ ಇರುವ ಸ್ಥಾನ ಅನನ್ಯ. ಅಪ್ಪಟ ದೇಶೀಯ ದೈವವಾದ ಶಿವನು ಬೇಡಿದವರಿಗೆ ಎಲ್ಲವನ್ನೂ ಕೊಡುವವನೇ ಹೊರತು ಯಾರೊಂದಿಗೂ ಅನಗತ್ಯವಾಗಿ ಜಗಳಕ್ಕೆ ನಿಂತವನಲ್ಲ. ಸತಿಯು ಸತ್ತಾಗ ಕೆಂಡಾಮಂಡಲವಾದನೇ ಹೊರತು ಕೆಡುಕು ಮಾಡಲಿಲ್ಲ. ಸಮರವೆಂಬುದು ಅಮಂಗಳ ಎಂಬ ಭಾವನೆ ಆತನದು. ಮಹಾಕವಿ ಕುವೆಂಪು ಅವರು ಶಿವ ಎಂಬ ಪದವನ್ನು ಸುಂದರವಾದದ್ದು, ಮಂಗಳಕರವಾದದ್ದು ಎಂಬುದಕ್ಕೆ ಸಂವಾದಿಯಾಗಿ ಬಳಸಿದ್ದಾರೆ. ಸತ್ಯ ಶಿವ ಸೌಂದರ್ಯಕ್ಕೆ ನಮಿಸುವ ನಾವು ನಮ್ಮ ದೇಶದಲ್ಲಿ ಶಿವನಿಗೆ ಮೇರುಸ್ಥಾನವನ್ನೇ ನೀಡಿದ್ದೇವೆ. ಪ್ರಕೃತಿಯ ಆರಾಧಕನಾದ ಮಾನವ ಪ್ರಕೃತಿಯಲ್ಲಿ ಸೌಂದರ್ಯವನ್ನು ಅಂದರೆ ಶಿವನನ್ನು ಕಂಡಿದ್ದಾನೆ. ಕಲ್ಲಬಂಡೆಗಳ ಲಿಂಗರೂಪವೆಲ್ಲ ಶಿವನೇ. ಲಿಂಗರೂಪದ ಬೆಟ್ಟಗಳೆಲ್ಲ ಶಿವನ ತಾಣಗಳು. ಆತ ಮಲೆಯವಾಸಿ. ಕನ್ನಡದ ಮಲೆ+ಅಯ್ಯ> ಮಲೆಯಯ್ಯ> ಮಲ್ಲಯ್ಯನಾಗಿ ವಿಜೃಂಭಿಸಿದ್ದಾನೆ. ಜನಪದರು ಅವನನ್ನು ಮಲೆಮಾದಯ್ಯ, ಪರ್ವತಪ್ಪ, ಗುಡ್ಡಯ್ಯ, ಗಿರಿಯಪ್ಪ, ಗಿರಿಗೌಡ ಇತ್ಯಾದಿಯಾಗಿ ಕರೆದಿದ್ದಾರೆ. ಆದರೆ ಎಲ್ಲೂ ಶಿವನನ್ನು ಮಲ್ಲಾರಿ, ಮೈಲಾರಿ, ಮಲ್ಲಣ್ಣ, ಮಲ್ಲಯ್ಯ ಎಂದು ಕರೆದ ಉದಾಹರಣೆಯಿಲ್ಲ. ಈ ನಿಟ್ಟಿನಲ್ಲಿ ನಾವು ಸ್ವಲ್ಪ ವೀರಗಲ್ಲು ಹಾಗೂ ಮಾಸ್ತಿಕಲ್ಲುಗಳ ಹಿನ್ನೆಲೆ ಮುನ್ನೆಲೆಗಳನ್ನು ಮನನ ಮಾಡಬೇಕಾಗುತ್ತದೆ.

ಊರ ಹಿತಕ್ಕಾಗಿಯೋ ಮಾನಿನಿಯರ ರಕ್ಷಣೆಗಾಗಿಯೋ ತನ್ನ ಪಶುಗಳ ಕ್ಷೇಮಕ್ಕಾಗಿಯೋ ಹುತಾತ್ಮನಾದವನ ನೆನೆಪಿಗೆ ಸ್ಮಾರಕ ನೆಟ್ಟು ಪೂಜಿಸುವ ಕಲ್ಲೇ ವೀರಗಲ್ಲು. ಕನ್ನಡ ಸಂಸ್ಕೃತಿ ಎಲ್ಲೆಲ್ಲಿ ಪಸರಿಸಿತ್ತೋ ಅಲ್ಲೆಲ್ಲಾ ಈ ವೀರಗಲ್ಲುಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ವೀರಗಲ್ಲುಗಳಲ್ಲಿ ಸಾಮಾನ್ಯವಾಗಿ ಮೂರು ಹಂತಗಳಿದ್ದು ಅತಿ ಕೆಳಗಿನದರಲ್ಲಿ ವೀರನು ಸೆಣಸುತ್ತಿರುವ ದೃಶ್ಯ, ಅದರ ಮೇಲೆ ಅವನು ಸಾಯುವಾಗ ಅಪ್ಸರೆಯರು ಬಂದು ಉಪಚರಿಸುತ್ತಿರುವ ದೃಶ್ಯ, ಎಲ್ಲಕ್ಕಿಂತ ಮೇಲಿನ ಹಂತದಲ್ಲಿ ವೀರನು ಶಿವನ ಸಾನ್ನಿಧ್ಯದಲ್ಲಿ ವಿರಾಜಮಾನನಾದ ದೃಶ್ಯ ಕಂಡುಬರುತ್ತದೆ. ಈ ಸಂಗತಿ ಹೇಗಾಯಿತು ಎಂಬುದನ್ನು ಅರುಹುವ ಪಠ್ಯವನ್ನೂ ಕೆಲ ವೀರಗಲ್ಲುಗಳಲ್ಲಿ ಕೆತ್ತಲಾಗಿರುತ್ತದೆ. ಮತ್ತೂ ಕೆಲವದರಲ್ಲಿ ಯಾವ ಕೆತ್ತನೆಯೂ ಇರದೆ ಬರಿದೇ ಕಲ್ಲೊಂದನ್ನು ಸ್ಮಾರಕವಾಗಿ ನೆಟ್ಟು ಅದರ ಮೇಲೊಂದು ಶಿವಲಿಂಗವಿಟ್ಟು ಹೋದ ಪ್ರಸಂಗಗಳು ಇವೆ. ವೀರನ ಸ್ಮರಣೆಯಲ್ಲಿ ಲಿಂಗಕ್ಕೆ ನಿತ್ಯುಪೂಜೆ ಮಾಡಿ ವರುಷಕ್ಕೊಮ್ಮೆ ಸಂತರ್ಪಣೆ ಮಾಡಿ ಕಾಲಕ್ರಮೇಣ ಕಲ್ಲು ಮರೆತುಹೋಗಿ ಲಿಂಗವೊಂದೇ ಉಳಿದು ಅದೇ ಪ್ರಧಾನವಾಗಿ ಅದಕ್ಕೊಂದು ಮಂದಿರವಾಗಿ ಮುನ್ನಡೆದ ಪ್ರಸಂಗಗಳೂ ಇವೆ.

ಗಂಡನೊಂದಿಗೆ ಚಿತೆಯೇರಿದ ಹೆಣ್ಣಿನ ಸ್ಮರಣೆಗೆ ನಿಲ್ಲಿಸಿದ ಮಾಸ್ತಿ (ಮಹಾಸತಿ) ಕಲ್ಲುಗಳ ಕಥೆಯೂ ಹೀಗೇ ಆಗಿ ಇಂದು ಅವು ಶಕ್ತಿದೇವತೆಗಳ ಗುಡಿಗಳಾಗಿರುವುದು ವೇದ್ಯವಾದ ಸಂಗತಿಯೇ.

ಬಹುಶಃ ಮೈಲಾರಲಿಂಗವೂ ಇಂಥ ಒಂದು ವೀರಸ್ಮರಣೆಯ ಪ್ರತೀಕವಾಗಿದ್ದು ಅನಂತರ ದೈವೀರೂಪ ತಳೆದಿರಬೇಕು. ಈ ಮೈಲಾರಲಿಂಗನ ಭಕ್ತರು ಬ್ರಾಹ್ಮಣರಲ್ಲೂ ಇದ್ದಾರೆಂಬುದೇ ಮತ್ತೊಂದು ವಿಶೇಷ. ಮರಾಟಿಗರು ಪೂಜಿಸುವ ಖಂಡೋಬ (ಖಡ್ಗ ಹಿಡಿದ ವೀರ), ತೆಲುಗರು ಪೂಜಿಸುವ ಮಲ್ಲಿಕಾರ್ಜುನ ಹಾಗೂ ಕನ್ನಡಿಗರ ಮೈಲಾರ ಇವೆಲ್ಲ ವೀರಪುರುಷನೊರ್ವನ ವಿವಿಧ ರೂಪಗಳು. ಏಕೆಂದರೆ ನಮ್ಮ ದೇಶೀ ದೈವವಾದ ಶಿವನು ಎಂದು ಖಡ್ಗ ಹಿಡಿದವನಲ್ಲ.

ಬೀದರಿಗೆ ಹೋಗಿದ್ದಾಗ ಹಲಬರ್ಗಾ ನೋಡಿಬರೋಣವೆಂದು ಹೊರಟವನು ದಾರಿ ಮಧ್ಯೆ ಖಾನಾಪುರ ಎಂಬಲ್ಲಿ "ಮೈಲಾರ ಮಲ್ಲಣ್ಣಾ (ಖಂಡೋಬ) ಗುಡಿ" ಅನ್ತ ಬೋರ್ಡು ಕಂಡು ಫಕ್ಕನೇ ಅಚ್ಚರಿಗೊಂಡೆ. ಅಂದು ಭಾನುವಾರ, ರಸ್ತೆಯ ಎರಡೂ ಬದಿ ಜಾನುವಾರು ಸಂತೆ ನೆರೆದಿತ್ತು. ಮೈಲಾರ ಎಷ್ಟು ದೂರ ಅನ್ತ ಯಾರನ್ನೋ ಕೇಳಿದೆ. ಒಂದಿಬ್ಬರು ಓಡಿಬಂದರು ಬಕ್ರಾ ಬೇಕೇನ್ರೀ ಅನ್ತ. ನಾನು ಅವರಿಗೆ ಬೇಕಾದ ಗಿರಾಕಿ ಅಲ್ಲ ಅನ್ನೋದು ಖಾತ್ರಿಯಾಗಿ ಸುಮ್ಮನೇ ನೋಡುತ್ತಾ ನಿಂತರು. “ಮೈಲಾರಕ್ ನಡದೀನ್ರೀ, ಏಸು ದೂರ ಅದರೀ?” ಅಂದೆ. “ಮೈಲಾರ ಅನ್ನೋ ಊರು ಇರಾಂಗಿಲ್ರೀ, ಅಲ್ಲಿಬರೀ ಮಲ್ಲಣ್ಣಾಗುಡಿ ಅದರೀ, ನೀವ್ ಹಿಂಗಾ ಹೋಗರೀ, ಕಣ್ಣಿಗ್ ಕಾಣ್ತಾವ್ರೀ" ಅಂದರು. “ಅಲ್ರೀಯಪಾ, ಮೈಲಾರ ಅನ್ನೋ ಊರು ಇಲ್ಲೇನ್ರೀ? ಬೋರ್ಡು ಹಾಕ್ಯಾರಲ್ರೀ" ಅಂದಿದ್ದಕ್ಕೆ "ಅದ ಒಂದು ದೊಡ್ ಕತಿರೀ, ಅವರವ್ವನ ಶಾಪಾರೀ, ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನೋ ಗೂಗಿ ಇರಂಗಿಲ್ಲ, ಅಂದಿದ್ಲಲ್ಲರೀ, ಅಲ್ಲೊಂದು ಕಾಗೀನೂ ಇಲ್ಲ, ಗೂಗೀನೂ ಇಲ್ಲ, ಮನುಷ್ಯಾರ್‍ ಭೀ ಮನಿ ಮಾಡಂಗಿಲ್ಲರೀ" ಅಂತ ಉತ್ತರ ಬಂತು. ಯಾಕೋ ತುಂಬಾ ಕುತೂಹಲ ಮೂಡಿತಾದರೂ ಆ ಕತೆಯನ್ನು ಮುಂದುವರಿಸುವ ಉಮೇದು ಅವರಿಗಿರಲಿಲ್ಲ.

ಸಣ್ಣಗೆ ಹರಿದಿದ್ದ ಹೊಳೆಯ ಮೇಲಿನ ಕಿರುಸೇತುವೆ ದಾಟಿ, ಒಂದು ತಿರುವು ತಿರುಗುತ್ತಿದ್ದಂತೆ ಧುತ್ತೆಂದು ಗೋಚರವಾಯಿತು ಆ ಗುಡಿ. ಗುಡಿಯ ಮುಂದಿನ ಕೊಳದಲ್ಲಿ ಹೆಂಗಸರು ಗಂಡಸರೆನ್ನದೆ ಎಲ್ಲರೂ ಮೈ ತೊಳೆದುಕೊಳ್ಳುತ್ತಿದ್ದರು. ಗುಡಿಯ ಪ್ರಾಂಗಣದ ಒಳಹೊಕ್ಕಂತೆ ಅಲ್ಲೊಂದು ದೊಡ್ಡ ಜನಜಂಗುಳಿ ತುಂಬಿತ್ತು. ನೋಡುವುದಕ್ಕೆ ಧರ್ಮಛತ್ರದಂತೆ ತೋರುತ್ತಿತ್ತು. ತೋರುವುದೇನು ಅದು ಧರ್ಮಶಾಲೇನೇ. ಅಲ್ಲಲ್ಲೇ ಉರುಳಿಕೊಂಡಿದ್ದೋರು, ಸೀರೆ ಪಂಚೆ ಒಣಗಿಹಾಕ್ತಿದ್ದೋರು, ಬೇಳೆ ರುಬ್ಬಿ ಒಬ್ಬಟ್ಟು ಸುಡುತಿದ್ದೋರು, ತಲೆ ಬಾಚುತಿದ್ದೋರು, ಬಳೆ ತೊಡಿಸುತಿದ್ದೋರು, ಇವರೆಲ್ಲರ ಗೌಜು ಗದ್ದಲ, ಅರಿಸಿನದ ನೀರಿನ ಓಕುಳಿ, ಬಿಸಿಲ ಮೇಲಾಟ, ಒಲೆಗಳ ಹಸಿಸೌದೆಯ ಹೊಗೆಯ ಮೇಲಾಟ, ಇವೆಲ್ಲವನ್ನೂ ದಾಟಿ ಮುಂದಿನ ಪ್ರಾಂಗಣಕ್ಕೆ ಹೋದಾಗ ಅಲ್ಲೊಂದು ಬೇರೆಯೇ ಲೋಕ ತೆರೆದುಕೊಂಡಿತ್ತು.

ದೊಡ್ಡ ಅಂಗಳದಲ್ಲಿ ಗಾರೆ ಗಚ್ಚಿನ ಗುಡಿಯೊಂದು ಮೈದಳೆದಿತ್ತು. ಸುಮಾರು ೧೫ ಅಡಿ ಅಗಲ ೩೦ ಅಡಿ ಉದ್ದದ ಕಟ್ಟಡವದು. ಮುಂದಿನ ಅಂಕಣದಲ್ಲಿ ಮಗುವಿಗೆ ಚೌಲ ತೆಗೆಯುವ ಕಾರ್ಯ ನಡೆದಿತ್ತು. ಅವರನ್ನು ದಾಟಿಕೊಂಡು ಗುಡಿಯ ಒಳಹೊಕ್ಕರೆ ಅಲ್ಲಿ ಯಾವುದೆ ನಿರ್ಬಂಧವಿಲ್ಲದೆ ದೇವರ ಮೂರ್ತಿಯ ಮುಂದೆಯೇ ಹಲವರು ನಿಂತಿದ್ದರು. ಅದೊಂದು ಎರಡಡಿ ಎತ್ತರದ ನಿಂತ ನಿಲುವಿನ ಬಣ್ಣ ಹಚ್ಚಿದ ಮಣ್ಣಿನ ಮೂರ್ತಿ. ಅದರ ಎರಡೂ ಬದಿಯಲ್ಲಿ ಹೆಣ್ಣು ಮೂರ್ತಿಗಳು. ಅವುಗಳ ಆಚೆ ಈಚೆ ಕುಳಿತ ಪೂಜಾರಿಗಳೆನಿಸಿಕೊಂಡ ವ್ಯಕ್ತಿಗಳು ಭಕ್ತರು ನೀಡುತ್ತಿದ್ದ ಅಂಗವಸ್ತ್ರವನ್ನು ದೇವರ ಹೆಗಲ ಮೇಲೆ ಹಾಕುತ್ತಿದ್ದರು. ಭಕ್ತರಿಗೆ ಕುಂಕುಮ ನೀಡುತ್ತಿದ್ದರು. ಭಕ್ತರಲ್ಲಿ ಹೆಚ್ಚಿನವರು ಹೆಂಗಸರೇ. ಭಕ್ತಜನರು ಕಡಿಮೆಯಾದ ಮೇಲೆ ನಾನು ಆ ಪೂಜಾರಿಗಳನ್ನು ಕೇಳಿದೆ, ಇದಾವ ದೇವರು ಶಿವನೇ? ಅನ್ತ. ಅಲ್ಲವೆಂದರು. ಮಲ್ಲಣ್ಣಾ ದೇವರು ಅಂದರು. ಪಕ್ಕದಲ್ಲಿರುವವರು ಅವನ ಹೆಂಡತಿಯರೇ ಎಂದೆ. ಅವನು ಶಿವ ಹಾಗೂ ಅವನ ಬದಿಯಲ್ಲಿರುವವರು ಗಿರಿಜೆ ಮತ್ತು ಗಂಗೆ ಎಂಬ ವಾದ ನನ್ನ ಮನದಲ್ಲಿತ್ತು. ಆದರೆ ಅವರು ನೀಡಿದ ಉತ್ತರ ನನ್ನನ್ನು ತಬ್ಬಿಬ್ಬಾಗಿಸಿತು. ಅವರು ಅವನ ತಂಗಿಯರೆಂದರು. ಬಂದವರೆಲ್ಲರೂ ಆ ತಂಗಿಯರಿಗೆ ನಮಿಸದೆ ಕೇವಲ ಮುಖ್ಯಮೂರ್ತಿಗಷ್ಟೇ ನಮಿಸುತ್ತಿದ್ದರು. ಅಲ್ಲಿದ್ದ ಒಂದೇ ಒಂದು ಹಣತೆಗೆ ತಾವು ತಂದಿದ್ದ ಗಟ್ಟಿ ತುಪ್ಪವನ್ನು ಬಳಿಯುತ್ತಿದ್ದರು. ನಿಧಾನಕ್ಕೆ ತುಪ್ಪ ಕರಗಿ ಕೆಳಗಡೆಯೇ ಇದ್ದ ಡಬ್ಬದಲ್ಲಿ ಶೇಖರವಾಗುತ್ತಿತ್ತು.. ಆದರೆ ನನ್ನ ಮನದ ಸಂಶಯ ಕರಗದೆ ಇನ್ನೂ ಗಟ್ಟಿಯಾಗುತ್ತಿತ್ತು.

ಬ್ರಾಹ್ಮಣರಲ್ಲದ ಆ ಪೂಜಾರಿಗಳು ಬಹು ತಾಳ್ಮೆಯಿಂದ ನನ್ನ ಪ್ರಶ್ನೆಗಳಿಗೆ ಉತ್ತರಿಸಿದರು. ಮೈಲಾರ ಹಿಂದೆ ಕುರುಬರ ತಾಣವಾಗಿತ್ತು. ಆ ಊರಿನ ಹೆಣ್ಣುಮಗಳೊಬ್ಬಳು ಹೊಲೆಯನೊಬ್ಬನನ್ನು ಪ್ರೇಮಿಸಿದ್ದಳು. ಅವನದೂ ಅಷ್ಟೆ ಉತ್ಕಟ ಪ್ರೇಮ. ಊರವರಿಗೆ ಆತ ಆ ಹೆಣ್ಣುಮಗಳನ್ನು ತನಗೆ ಮದುವೆ ಮಾಡಿಕೊಡುವಂತೆ ವಿನಂತಿಸಿದ. ಆದರೆ ಅವರು ಒಪ್ಪಲಿಲ್ಲ. ಅವರ ವಿರೋಧವನ್ನು ಲೆಕ್ಕಿಸದೆ ಆತ ಈ ಹೆಣ್ಣುಮಗಳನ್ನು ಹೊತ್ತೊಯ್ಯುವುದಾಗಿ ಹಟ ತೊಟ್ಟ. ಅಂತೆಯೇ ಆ ಪ್ರೇಮಿಗಳಿಬ್ಬರೂ ಒಂದು ದಿನ ಓಡಿಯೂ ಹೋದರು. ಎಲ್ಲಿಂದಲೋ ಕುದುರೆಯ ಮೇಲೆ ಧಾವಿಸಿ ಬಂದ ಆ ಹೆಣ್ಣಿನ ಅಣ್ಣ ಆ ಹೊಲೆಯ ಹುಡುಗನಿಗೆ ಯಮನಾದ. ಸಿಕ್ಕಲ್ಲೇ ಅವನನ್ನು ತುಂಡರಿಸಿ ತಂಗಿಯನ್ನು ಊರಿಗೆ ಮರಳಿ ತಂದ. ಇತ್ತ ಹುಡುಗನ ಕಡೆಯವರು ಬಂದರು. ಊರನ್ನು ಸೂರೆಗೈದರು. ಹುಡುಗನ ತಾಯಿಯ ಗೋಳಂತೂ ಹೇಳತೀರದು. ಭಾವಾವೇಶದಿಂದ ಆಕೆ ಶಪಿಸಿದಳು "ಕಾ ಅನ್ನೋ ಕಾಗಿ ಇರಂಗಿಲ್ಲ, ಗೂ ಅನ್ನಕ್ ಗೂಗಿ ಇರಂಗಿಲ್ಲ, ಊರೆಲ್ಲ ನಾಶವಾಗ್ಲಿ" ಅನ್ತ. ಈಗ ಅಲ್ಲಿ ಊರಿಗೆ ಊರೂ ಇಲ್ಲ, ಒಂದು ಕಾಗೆ ಗೂಗೆನೂ ಇಲ್ಲ.

ಪೂಜಾರಿಗಳು ಒಂದು ಹಿತ್ತಾಳೆಯ ಗೊಂಬೆಯೊಂದನ್ನು ಕೈಲಿ ಹಿಡಿದು ತೋರಿದರು. ಕುಂಕುಮ ಬಳಿದಿದ್ದರೂ ಮಂದ ಬೆಳಕಿನಲ್ಲಿ ಮಿನುಗುತ್ತಿದ್ದ ಅದನ್ನು ಹಾಗೇ ಹತ್ತಿರ ಹಿಡಿದು ನೋಡಿದೆ. ಕುದುರೆಯ ಮೇಲೆ ಕುಳಿತವನೊಬ್ಬ ಖಡ್ಗ ಹಿಡಿದು ನೆಲದ ಮೇಲೆ ನಿಂತವನ ಮೇಲೆ ಪ್ರಯೋಗಿಸುತ್ತಿದ್ದಾನೆ. ಅವನ ಬದಿಯಲ್ಲಿ ಹೆಣ್ಣೊಬ್ಬಳಿದ್ದಾಳೆ.

ಮೌನವಾಗಿ ಹೊರಬಂದೆ. ಗುಡಿಯ ಗೋಡೆಯ ಮೇಲೆ ಅದೇ ದೃಶ್ಯದ ಬಣ್ಣದ ಚಿತ್ತಾರ ಮೂಡಿಸಿದ್ದರು. ಗುಡಿಗೊಂದು ಸುತ್ತು ಬಂದೆ. ಒಂದು ಗೋಡೆಯ ಮೇಲೆ ಕನಕದಾಸರ ಚಿತ್ರವಿತ್ತು. ಇನ್ನೊಂದರ ಮೇಲೆ ಕಾಳಿದಾಸನ ಚಿತ್ರ. ಯಾವುದೋ ಧ್ವನಿವರ್ಧಕದಿಂದ ಮಲ್ಲಣ್ಣ ಬೇರೆಯಲ್ಲ ಮಾರ್ಕಂಡೇಯ ಬೇರೆಯಲ್ಲ ಅನ್ತ ಒಂದು ಹಾಡು ತೇಲಿ ಬರುತ್ತಿತ್ತು.

ನನ್ನ ಸ್ನೇಹಿತರೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯವನ್ನೂ ಇಲ್ಲಿ ಧಾಖಲಿಸುತ್ತೇನೆ. ”ಬಳ್ಳಾರಿ ಜಿಲ್ಲಾ ಸನೇಕಿನ ಆಂಧ್ರಪ್ರದೇಶದ ಗಡಿಯೊಳಗಿನ ಒಂದ ಹಳ್ಯಾನ ಮಂದಿ ಮಗ್ಗಲಕಿನ ಹಳ್ಯಾನ ಮಂದಿ ಜೋಡಿ ಬಡಗಿ ತಗೊಂಡ ಬಡದಾಡ್ತಾರ. ಒಂದ ಹಳ್ಯಾನ ದೈವ ಗುಡ್ಡದ ಮಲ್ಲಯ್ಯ ಅದ . . ಮೈಲಾರಲಿಂಗ. ಇನ್ನೊಂದ ಹಳ್ಯಾನ ಮಂದಿ ಅದನ್ನು ತಮ್ಮ ಹಳ್ಳಿಗೆ ತಗೊಂಡ ಹೋಗಾಕ ಬರ್ತಾರ. ದೈವ ಇರೂ ಹಳ್ಯಾನ ಮಂದಿ ಜಗಳಕ್ಕ ನಿಲ್ತಾರ. ದರ ವರ್ಸಾ ದಸರಾಕ್ಕ ಇದೂ ನಡಿಯೂದ. ತಲಿ ಒಡಕೋತಾರ. ಪಟ್ಟಿ ಕಟಗೊಂಡ ಮತ್ತ ಬರ್ತಾರ ಬೆಳತನ್ಕ ಜಗಳಕ್ಕ ನಿಲ್ತಾರ, ದೇವರ ಹೊಳ್ಳಿ ಬಂದ ಕೂಡ್ಲೆ ಬಡದಾಟ ಮುಗೀತದ. ಎರಡೂ ಹಳ್ಳಿ ಮಂದಿ ಸೇರಿ ಹಬ್ಬಾ ಮಾಡ್ತಾರ.”

ಅಂಗುಲಹುಳು

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.
ಪಶ್ಚಿಮದ ದೇಶದಲ್ಲಿ ’ಅಂಗುಲದಹುಳು" ಎಂಬ ಕೀಟವಿದೆಯಂತೆ. ಉದ್ದನೆಯ ಕಾಲುಗಳಲ್ಲಿ ಅದು ನಡೆದಾಡುವಾಗ ಅದರ ಪ್ರತಿಯೊಂದು ಹೆಜ್ಜೆಯ ಅಂತರ ಒಂದು ಅಂಗುಲ ಇರುತ್ತದೆಯಂತೆ. ಕರಾರುವಾಕ್ಕಾದ ಆ ಅಳತೆಯನ್ನೇ ಮುಂದೆ ಅಳತೆ ಪಟ್ಟಿ ಮಾಡುವಾಗ ಮಾನಕವಾಗಿ ತೆಗೆದುಕೊಂಡರಂತೆ. ಅಲ್ಲದೆ ತಾವು ಹೋದಲ್ಲೆಲ್ಲ ತಮ್ಮ ಅಳತೆಯೇ ಶ್ರೇಷ್ಠ ಹಾಗೂ ಸರ್ವಮಾನ್ಯ ಎಂದು ವಾದಿಸತೊಡಗಿದರಂತೆ.
ಆಫ್ರಿಕಾದ ಆನೆಗಳು ಆ ಹುಳುವನ್ನು ರಾಜಮರ್ಯಾದೆಯೊಂದಿಗೆ ಕರೆಸಿಕೊಂಡು ತಮ್ಮ ದಂತಗಳ ಉದ್ದವನ್ನು ಅಳತೆ ಮಾಡಿಸಿಕೊಂಡವು. ಅಮೆರಿಕದ ಮೊಸಳೆಗಳು ಬಾಯ್ದೆರೆದು ತಮ್ಮ ಹಲ್ಲುಗಳ ಮೊನಚನ್ನು ಜಗತ್ತಿಗೆ ಸಾರಿಕೊಂಡವು. ಯೂರೋಪಿನ ಹುಂಜಗಳು ತಮ್ಮ ರೆಕ್ಕೆಗರಿಯ ಥಳುಕನ್ನು ಲೆಕ್ಕ ಮಾಡಿಸಿಕೊಂಡು ಹೆಮ್ಮೆಯಿಂದ ಬೀಗಿದವು. ನಮ್ಮ ದೇಶಕ್ಕೂ ಆ ಹುಳ ಬಂದು ಹಿಮಾಲಯವನ್ನು ಹತ್ತಿಳಿದು ಉನ್ನತ ಶಿಖರದ ಎತ್ತರ ಇಂತಿಷ್ಟೇ ಎಂದು ತಿಳಿಹೇಳಿತು.
ಕೆಲವರು ತಮ್ಮ ಬಾಯಗಲವನ್ನು ಕೆಲವರು ತಮ್ಮ ನೋಟಶಕ್ತಿಯನ್ನು ಅಳತೆ ಮಾಡಿಸಿಕೊಂಡರು. ಕನ್ನಡದಲ್ಲೇನಿದೆ ಅನ್ತ ಯಾರೋ ಕೇಳ್ತಿದ್ರಲ್ಲ, ಆ ಹುಳು ಇತ್ತ ತಿರುಗಿತು. ಅಷ್ಟರಲ್ಲಾಗಲೇ ಮಲ್ಲಿಗೆಯ ಸುವಾಸನೆಗೆ ಅದರ ತಲೆ ತಿರುಗತೊಡಗಿತ್ತು. ಮಾವಿನ ಮರದಲ್ಲಿ ಕೋಗಿಲೆಯ ಇಂಚರ "ಕುಹೂ" ಎಂದಿತು. “ಕೋಗಿಲೆಯ ಸ್ವರವನ್ನೇ ಮೊದಲು ಅಳೆಯೋಣ, ಆ ನಂತರ ಮಿಕ್ಕಿದ್ದು" ಎಂದ ಆ ಹುಳು ಅದನ್ನು ಅಳೆಯತೊಡಗಿತು. ರಾಗಗಾನಮಾಧುರ್ಯದ ಆ ಪಂಚಮಸ್ವರವಲ್ಲರಿಯನ್ನು ಆ ಹುಳು ಇನ್ನೂ ಅಳೆಯುತ್ತಲೇ ಇದೆ, ಆದರೆ ಆ ಸುಮಧುರ ಕಂಠದ ಉದ್ದಗಲಗಳ ನಿಲುವನ್ನು ಅದು ಮುಟ್ಟಲಾಗಿಲ್ಲ.. ಇನ್ನು ಕನ್ನಡ ವಾಗ್ದೇವಿಯ ಭಂಡಾರದ ಸಿರಿ, ಪ್ರಾಕೃತಿಕ ಸಂಪತ್ತು, ಜನಮಾನಸದ ಔನ್ನತ್ಯ ಇವೆಲ್ಲ ಇನ್ನೂ ನಿಲುಕಲಾರದವು ಅಲ್ಲವೇ?

ಶನಿವಾರ, ಮೇ 3, 2008

ನನ್ನ ಓದು

ನಮ್ಮಪ್ಪ ನಮ್ಮನೆಗೆ ಚಂದಮಾಮ ತರಿಸ್ತಿದ್ರು. ನಾವ್ ಮಕ್ಕಳು ಓದಲಿ ಅಂತ. ನಮ್ಮ ಚಿಕ್ಕಪ್ಪ ಬಾಲಮಿತ್ರ ತರಿಸೋರು. ಚಂದಮಾಮನೇ ಚೆಂದ ಅಂತ ನಾವ್ಗೋಳು, ಬಾಲಮಿತ್ರ ಚಂದ ಅಂತ ನಮ್ಮ ಚಿಕ್ಕಪ್ಪನ ಮಕ್ಕಳು ಮಾತಾಡ್ಕೋತಿದ್ದು ಈಗ್ಲೂ ನೆಪ್ಪೈತೆ. ಎಂಟಿವಿ ಆಚಾರ್ಯರ ಭೀಮನಿಗೂ ರಮಾನಂದ ಸಾಗರರ ಭೀಮನಿಗೂ ಅಜಗಜಾಂತರ ವ್ಯತ್ಯಾಸವಿದೆ ಎನ್ನುವುದು ಈ “ಅಜಗಜಾಂತರ”ಕ್ಕೆ ಕೊಡಬಹುದಾದ ಒಂದು ಒಳ್ಳೆಯ ಉದಾಹರಣೆ. ಇನ್ನು ಬೇತಾಳನ ಕಥೆಗಳಂತೂ ಯಾವ ಕ್ವಿಜ್ ಪ್ರೋಗ್ರಾಮನ್ನೂ ಮೀರಿಸುವಂಥದು. ಅದರ ಮುಂದೆ ಡೆರಿಕ್ ಒಬ್ರೇನು ಏನೇನೂ ಅಲ್ಲ.
ಮಲ್ಲೇಶ್ವರದಲ್ಲಿ ನಾನು ಓದುತ್ತಿದ್ದ ನಿರ್ಮಲರಾಣಿ ಶಾಲೆಯಲ್ಲಿ ಅಮರ ಚಿತ್ರಕಥೆಗಳ ದೊಡ್ಡ ಸಂಗ್ರಹವಿತ್ತು. ಆಗ ಅದು ಕೊಎಡ್ ಇಸ್ಕೂಲು. ಆರನೇ ತರಗತಿಯಲ್ಲಿದ್ದಾಗ ಪಕ್ಕದ ಕಪಾಟಿನಲ್ಲಿದ್ದ ಆ ಪುಸ್ತಕಗಳನ್ನು ಸದ್ದಿಲ್ಲದೇ ತೆಗೆದುಕೊಂಡು ಪಠ್ಯಪುಸ್ತಕದ ಕೆಳಗಿಟ್ಟುಕೊಂಡು ಕದ್ದುಮುಚ್ಚಿ ಓದುತ್ತಿದ್ದ ದಿನಗಳವು. ನಳದಮಯಂತಿ, ಶಕುಂತಲಾ ಹೀಗೆ ಒಂದೆರಡಲ್ಲ ನೂರಾಎರಡು. ನಮ್ಮ ಆ ಕಳ್ಳ ಓದು ಟೀಚರಾಗಿದ್ದ ಮದರ್ ಫ್ರಾನ್ಸಿಸ್ಕ ಅವರಿಗೆ ಗೊತ್ತಾಗುತ್ತಲೇ ಇರಲಿಲ್ಲ. ಪಕ್ಕದ್ಮನೆ ಹುಡುಗಿ ರಮಾಳನ್ನು ಕೀಟಲೆ ಮಾಡಿದಾಗಲೆಲ್ಲ ಅವಳು ಈ ಕಳ್ಳ ಓದಿನ ಬಗ್ಗೆ ಮದರ್ಗೆ ಹೇಳುವುದಾಗಿ ಹೆದರಿಸುತ್ತಿದ್ದಳು. ಸುಜಾತ ಅಂತ ಇನ್ನೊಂದು ಹುಡುಗಿ ಇದ್ದಳು. ಸಂಪಿಗೆ ರಸ್ತೆಯಲ್ಲಿ ಅವರ ಜ್ಯೂಸ್ ಅಂಗಡಿ ಇದೆ. ನನ್ನನ್ನು ಹೆದರಿಸೋದರಲ್ಲಿ ಆಕೆ ರುಸ್ತುಂ. ಹುಡುಗರಲ್ಲಿ ರಮೇಶ, ನಾಗರಾಜ, ಭಾಸ್ಕರ, ದಯಾನಂದ ಮುಂತಾದ ಗೆಳೆಯರ ನೆನಪಾಗುವುದೂ ಈ ಅಮರ ಚಿತ್ರಕತೆಗಳ ನೆರಳಿನಲ್ಲೇ. ಅಮರ ಚಿತ್ರಕಥೆ (ಐಬಿಎಚ್ ಪ್ರಕಾಶನ) ಯ ರೂಪದಲ್ಲಿ ಮನೋವಿಕಾಸದ ಹಾದಿಯಲ್ಲಿ ಬೈಬಲ್ಲಿನ ಜೊತೆಗೆ ಪುರಾಣವನ್ನೂ ರಕ್ತಗತ ಮಾಡಿಸಿದ್ದಕ್ಕಾಗಿ ಕಾರಂತರನ್ನು ನಾನು ಮರೆಯಲಾಗದು.
ನಾನು ಹೈಸ್ಕೂಲು (ಕಾಡುಮಲ್ಲೇಶ್ವರನ ಗುಡಿಯ ಬಳಿಯಿದ್ದ ಶಾರದಾ ವಿದ್ಯಾನಿಕೇತನ) ಸೇರುವ ವೇಳೆಗಾಗಲೇ ಕಾರಂತರ ಕಿರಿಯರ ವಿಶ್ವಕೋಶ (ನವಕರ್ನಾಟಕ ಪಬ್ಲಿಕೇಷನ್ಸ್) ಬಂದಿತ್ತು. ಆದರೆ ಅದು ಶಾಲೆಯ ಕಪಾಟಿನಲ್ಲಿ ಬಂಧಿಯಾಗಿತ್ತು. ನಾವು ಕೆಲ ಹುಡುಗರು ಈಸ್ಟ್ ಪಾರ್ಕ್ ಮೈದಾನದಲ್ಲಿ ಆಡ್ಕಂತಾ ಇದ್ದೋರು ಒಂದು ದಿನ ಕಲ್ ಬಿಲ್ಡಿಂಗ್ ಅಂತಾರಲ್ಲ, ಅದೇ ಹದಿನೆಂಟನೇ ಕ್ರಾಸ್ ಬಸ್ಟ್ಯಾಂಡ್ ಹತ್ರ ಇರೋ ಗೋರ್ಮೆಂಟಿಸ್ಕೂಲು, ಅದರಾಗೆ ಒಂದು ಲೇಬ್ರರಿ ಇರೋದ್ನ ಕಂಡಿಡಿದೋ. ಬಾಕ್ಲು ತೆಗೆದೇ ಇತ್ತು. ಅದ ನೋಡ್ಕಳೋರು ಒಬ್ರು ಬುಟ್ರೆ ಬ್ಯಾರೆ ಯಾರೂ ಇತ್ತಿಲ್ಲ. ಒಳೀಕ್ ಬರ್ಬೋದಾ ಅಂತ ಕೇಳಿದ್ದೇಟ್ಗೆ ಅಯ್ ಬನ್ನಿ ಓದ್ಕಳಿ ಅನ್ನೋದಾ. ಆಗ ಶುರುವಾಯ್ತು ನನ್ನ ಅಧ್ಯಯನದ ಪ್ರಸ್ಥಾನ. ಬಂಗಾಳ ದೇಶದ ಜಾನಪದ ಕತೆಗಳು, ಗೋನೂಝಾನ ಕತೆಗಳು, ಭಾರತಭಾರತಿ ಪುಸ್ತಕ ಸಂಪದ, ಅರೇಬಿಯನ್ ನೈಟ್ಸ್, ಮಕ್ಕಳ ಮಂಛೌಸನ್ ಹೀಗೆ ಅವೆಲ್ಲ ಆ ಕಾಲಕ್ಕೇ ಸರಿ.
ನನ್ನ ಯೌವನಕಾಲಕ್ಕೆ ಬಹುವಾಗಿ ಕಾಡಿದ್ದು ಖಂಡೇಕರರ ’ಯಯಾತಿ’ (ಇನಾಂದಾರ್ ಅನುವಾದ). ಆಮ್ಯಾಕೆ ಕೊಂಚ ಬಲಿತ ಮ್ಯಾಗೆ ಓದಿದ್ದು ಭೈರಪ್ನೋರು ಬರೆದಿರೋ ಪರ್ವ ಅಂತ ಮಾಬಾರ್ತದ ಕತೆ, ಓ ಯಾಪಾಟಿ ಐನಾತಿನನ್ಮಗಂದೂ ಅಂತೀರಾ? ತೇಜಸ್ವಿ ಅಂಬೋರು ಬರ್ದಿರೋ ಕಿರಗೂರಿನ ಗಯ್ಯಾಳಿಗಳು ಓದಿವ್ರಾ? ಜಯಂತ ಕಾಯ್ಕಿಣಿ ಅವರ ತೂಫಾನ್ ಮೇಲು? ಊ.. ದೇಸ ನೋಡ್ಬೇಕು ಕೋಸ ಓದ್ಬೇಕು ಅಂತಾರಲ್ಲ ದಿಟವೇನೇಯ. ಪುಸ್ತಕ ಓದ್ಬೇಕೂ ಅನ್ನೋ ತೆವಲು ನಿಮ್ಗೂ ಇದ್ರೆ ನೀವೂನೂ ಇಂಜಿನ್ ಡಿವಿಜನ್ನಾಗಿರೋ ನಮ್ ಕನ್ನಡ ಲೇಬ್ರೇರಿಗೆ ಬರಬೇಕ್ರ.

ಸೋಮವಾರ, ಮಾರ್ಚ್ 17, 2008

ಬಿ ಎಲ್ ರೈಸ್

ಬಿ ಎಲ್ ರೈಸ್ ಅವರ ಅತಿ ದೊಡ್ಡ ವಿದ್ವತ್ಪೂರ್ಣ ಕೆಲಸವೆಂದರೆ ಪುರಾತತ್ವ ಇಲಾಖೆಯ ಪೂರ್ಣಕಾಲದ ಅಧಿಕಾರಿಯಾಗಿ ಹದಿನಾರು ವರ್ಷಗಳ ಕಾಲ ಹಳ್ಳಿಹಳ್ಳಿಗಳನ್ನೂ ಕಾಡುಮೇಡುಗಳನ್ನೂ ಅಲೆದು ೮೮೬೯ ಕನ್ನಡ ಶಾಸನಗಳನ್ನು ಹನ್ನೆರಡು ಸಂಪುಟಗಳಲ್ಲಿ “ಎಪಿಗ್ರಾಫಿಯಾ ಕರ್ನಾಟಿಕಾ” ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ್ದು. ಕ್ರಿಸ್ತಶಕ ೧೮೬೦ರಿಂದ ೧೯೦೬ರವರೆಗೆ ಅವಿಶ್ರಾಂತವಾಗಿ ದುಡಿದ ಇವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿನ ಹ್ಯಾರೋ ಪಟ್ಟಣದಲ್ಲಿ ನೆಲೆನಿಂತರು. ಅವರು ಇಳಿವಯಸ್ಸಿನಲ್ಲಿರುವಾಗ ಲಂಡನ್ನಿನಲ್ಲಿ ನಡೆದ ವಿಶ್ವ ವಾಣಿಜ್ಯ ಮೇಳದಲ್ಲಿ ಮೈಸೂರು ಸಂಸ್ಥಾನದ ಮಳಿಗೆಯಲ್ಲಿ ನಮ್ಮ ಉತ್ಪನ್ನಗಳಾದ ಗಂಧದೆಣ್ಣೆ, ಕಬ್ಬಿಣ ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ರೈಸ್ ಅವರು ಕನ್ನಡದಲ್ಲಿಯೇ ತಮ್ಮ ಸಂಭಾಷಣೆ ಆರಂಭಿಸಿದರು. ಮಳಿಗೆಯ ಪ್ರತಿನಿಧಿಗಳು ಇಂಗ್ಲಿಷಿನಲ್ಲಿಯೇ ಉತ್ತರಿಸುತ್ತಿದ್ದುದನ್ನು ಗಮನಿಸಿ ತಡೆದ ಅವರು “ದಯವಿಟ್ಟು ಕನ್ನಡದಲ್ಲಿ ಮಾತನಾಡಿ, ಎಷ್ಟು ಇಂಪಾದ ಭಾಷೆ ಅದು” ಎಂದರಂತೆ. ಇದು ಅವರ ಅನುಪಮ ಕನ್ನಡಪ್ರೀತಿಗೆ ಸಾಕ್ಷಿ.
ನಾನಂತೂ ಅವರನ್ನು ಬೆಂಗಳೂರಿಗ ಮೇಲಾಗಿ ಕನ್ನಡಿಗ ಎಂದೇ ಗುರುತಿಸುತ್ತೇನೆ. ನನ್ನ ಪ್ರಶ್ನೆಯಲ್ಲಿ ಅವರನ್ನು ವಿದೇಶೀ ಎಂದು ಸಂಬೋಧಿಸಿದ್ದೇನೆ, ಏಕೆಂದರೆ ನಾಡಪ್ರೇಮದಿಂದ ಅವರು ಏನೇ ಮಾಡಿದರೂ ನಮ್ಮ ದೇಶಸ್ಥರಿಗೆ ಅದು ಮತಾಂತರದ ಕ್ರಿಯೆಯಾಗಿ ತೋರುತ್ತದೆ ಅಥವಾ ಇಂಡಿಯಾವನ್ನು ಎಂದಾದರೊಂದು ದಿನ ತಮ್ಮ ಕಿಸೆಯಲ್ಲಿ ಹಾಕಿಕೊಂಡು ಓಡಿಹೋಗುವರೆಂಬಂತೆ ತೋರುತ್ತದೆ.
(ಕೆಂಪುಕಪ್ಪುಅದ್ವಾನಿ ಎಂಬ ರಾಜಕಾರಣಿ ಸ್ವತಃ ತಾವು ವಿದೇಶೀಯಾಗಿದ್ದರೂ ಇಂಡಿಯಾವು ತಮ್ಮದೆಂಬಂತೆ ವರ್ತಿಸುತ್ತಾರೆ. ಇಂಡಿಯಾದಲ್ಲಾಗುವ ಯಾವುದೇ ವಿಕೋಪವು ಅವರಿಗೆ ಪಾಕಿಸ್ತಾನದ ಕೈವಾಡ ಎಂಬಂತೆ ತೋರುತ್ತದೆ. ಇಂಡಿಯಾದ ಸೊಸೆಯಾಗಿ ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಒಬ್ಬ ಹೆಣ್ಣುಮಗಳು ಅವರಿಗೆ ಕನಸಿನಲ್ಲೂ ಕಾಡುತ್ತಾಳೆ. ಅದಕ್ಕಾಗಿಯೇ ಅವರು ವೋ ವಿಲಾಯ್ತೀ ಔರತ್ ಎಂದು ಆಗಾಗ್ಗೆ ಬಡಬಡಿಸುತ್ತಿರುತ್ತಾರೆ. ಈ ಮನೋಭಾವ ಇಂದು ನಮ್ಮ ದೇಶಸ್ಥರಲ್ಲಿ ಈಗೀಗ ಬಹಳವಾಗುತ್ತಿದೆ).

ಶುಕ್ರವಾರ, ಫೆಬ್ರವರಿ 22, 2008

ಮತಾಂತರ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕ್ರೈಸ್ತಧರ್ಮದ ವ್ಯಾಖ್ಯೆಯಲ್ಲಿ ಕ್ರಿಸ್ತತತ್ವಗಳನ್ನು ಜಗತ್ತಿನೆಲ್ಲೆಡೆ ಸಾರಬೇಕೆನ್ನುವ ಕಾಳಜಿ ಇದೆಯೇ ಹೊರತು ಮತಾಂತರ ಮಾಡಬೇಕು ಎಂದಿಲ್ಲ. ಹಣದ ಎದುರಲ್ಲಿ, ಕತ್ತಿಯ ತುದಿಯಲ್ಲಿ ನಡೆಯುವ ಮತಾಂತರ ಮತಾಂತರವೇ ಅಲ್ಲವೆಂದು ಕ್ರೈಸ್ತಧರ್ಮ ಹೇಳುತ್ತದೆ. ಧಾರ್ಮಿಕತೆ ಗೊತ್ತಿಲ್ಲದ ರಾಜಕೀಯ ನಾಯಕರು ತಮ್ಮ ಸ್ವಲಾಭಕ್ಕಾಗಿ ಆ ರೀತಿ ಮಾಡಿದ್ದು ಇತಿಹಾಸದ ದುರಂತ. ಆದರೆ ಕ್ರೈಸ್ತಧರ್ಮ ಅದನ್ನು ಮಾನ್ಯಗೊಳಿಸಲಿಲ್ಲವೆಂಬುದೂ ಅಷ್ಟೇ ಸತ್ಯ. ವ್ಯಕ್ತಿಯೊಬ್ಬ ಪೂರ್ಣ ಪರಿವರ್ತನೆಗೊಂಡು ತಾನೇ ತಾನಾಗಿ ಕ್ರೈಸ್ತನಾಗುತ್ತೇನೆಂದು ಮುಂದೆ ಬಂದರೂ ಚರ್ಚು ಒಮ್ಮಿಂದೊಮ್ಮೆಲೇ ಕ್ರೈಸ್ತದೀಕ್ಷೆ ಕೊಟ್ಟುಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿನೀತಿಗಳಿವೆ. ಇದನ್ನರಿಯದ ಮೂಢಜನರು ಚರ್ಚಿಗೆ ತೆರಳಿ ತೀರ್ಥ ಪ್ರೋಕ್ಷಣೆಯಾದ ಕೂಡಲೇ ತಾವು ಕ್ರೈಸ್ತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಇತರರೂ ಇದು ಹೌದೆಂದು ತಿಳಿದುಕೊಳ್ಳುತ್ತಾರೆ. ಕ್ರೈಸ್ತಧರ್ಮವೆಂಬುದು ಕೆಲವರಿಗೆ ವಂಶಪಾರಂಪರ್ಯದ ಬಳುವಳಿ ಮತ್ತೆ ಕೆಲವರಿಗೆ ಅದು ಒಂದು ದಿವ್ಯ ಅನುಭವ.

ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಪಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರಲ್ಲ.

ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಹಾಗೂ ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.

ಇನ್ನೂ ಕೆಲವರು ಯೂರೋಪ್ ಅಮೆರಿಕೆಗಳಲ್ಲಿರುವ ಎಲ್ಲರೂ ಕ್ರೈಸ್ತರೆಂದು ಭಾವಿಸಿದಂತಿದೆ. ಅಲ್ಲಿನ ಚರ್ಚುಗಳು ಹಾಳು ಸುರಿಯುತ್ತಿವೆ ಎಂಬ ಅಂಶ ಅವರಿಗೆ ತಿಳಿದಂತಿಲ್ಲ. ಅಲ್ಲಿನ ಜನ ಕ್ರೈಸ್ತಧರ್ಮಕ್ಕಾಗಿ ಬೇರೊಂದು ದೇಶದ ಮೇಲೆ ದ್ವೇಷ ಸಾಧಿಸುತ್ತಾರೆಂಬ ಅಥವಾ ಯುದ್ಧ ಸಾರುತ್ತಾರೆಂಬ ಮಾತು ಬಾಲಿಶವಾಗುತ್ತದೆ. ಏಕೆಂದರೆ ಎರಡು ಮಹಾಯುದ್ಧಗಳು ನಡೆದದ್ದು ರಾಜಕೀಯ ಹಿತಾಸಕ್ತಿಗಾಗಿ ಎಂಬುದು ಸರ್ವವೇದ್ಯ ಸಂಗತಿ. ಅಂತೆಯೇ ಅಮೆರಿಕದ ವಿಯೆಟ್ನಾಂ ಮೇಲಿನ ಯುದ್ಧವು ಜಗತ್ತಿನ ಪೂರ್ವಭಾಗದಲ್ಲಿ ಅದರ ಆಧಿಪತ್ಯ ಸ್ಥಾಪಿಸುವ ಹುನ್ನಾರವಾಗಿತ್ತು, ಇರಾಕಿನ ಮೇಲಿನ ದಾಳಿ ವ್ಯಾಪಾರೀ ಕಾರಣವಾಗಿತ್ತು ಹಾಗೂ ಆಫ್ಘನ್ ಮೇಲಿನ ದಾಳಿ ಸೇಡಿನ ಕ್ರಿಯೆಯಾಗಿತ್ತು. ಇವಾವುದಕ್ಕೂ ಚರ್ಚು ತನ್ನ ಆಶೀರ್ವಾದ ಹಸ್ತ ತೋರಿಲ್ಲ. ಇವಾವುದೂ ಧರ್ಮಯುದ್ಧಗಳ ಪರಿಧಿಗೆ ಬರುವುದಿಲ್ಲ.

ಗುರುವಾರ, ಫೆಬ್ರವರಿ 21, 2008

ಯೇಸುಕ್ರಿಸ್ತ ಎಂಬ ಉಚ್ಚಾರಣೆ

ಹೀಬ್ರೂ ಭಾಷೆಯ ಜೇಸು ಎಂಬ ಪದವನ್ನು ಅಂದಿನ ಕಾಲದ ವಿದ್ವತ್ ಭಾಷೆಯಾಗಿದ್ದ ಗ್ರೀಕ್ನಲ್ಲಿ Jesus (ಜೇಸುಸ್) ಎಂದು ಬರೆಯುತ್ತಿದ್ದರು. ಆದರೆ ಗ್ರೀಕರು 'ಜ' ಅಕ್ಷರವನ್ನು 'ಯ' ಎಂಬುದಾಗಿ ಉಚ್ಚರಿಸುತ್ತಾರೆ. (ನಮ್ಮ ದೇಶದಲ್ಲಿ ಒರಿಸ್ಸಾ, ಛತ್ತೀಸಗಡದಿಂದ ಹಿಡಿದು ಈಶಾನ್ಯ ಭಾಗದ ಎಲ್ಲ ರಾಜ್ಯಗಳ ಜನರು 'ಯ'ಕಾರಕ್ಕೆ 'ಜ'ಕಾರ ಬಳಸುವುದನ್ನು ನೋಡಬಹುದು). ಗ್ರೀಕರ ಪ್ರಕಾರ ಅವರ ದೇವರ ಹೆಸರು AJAX ಎಂಬುದನ್ನು 'ಅಯಾಸ್' ಎಂದು ಉಚ್ಚರಿಸುವಂತೆ 'Jesus' ಎಂಬುದು 'ಯೇಸು' ಎಂದಾಯಿತು.

ಅದೇರೀತಿ ಜೆಹೋವ>ಯೆಹೋವ, ಜೂದ>ಯೂದ, ಜೋಸೆಫ್>ಯೋಸೆಫ್, ಜೋರ್ಡಾನ್>ಯೋರ್ದಾನ್, ಜೋನಾ>ಯೋನಾ, ಜೊವಾನ್ನ>ಯೊವಾನ್ನ, ಜೆರಿಕೋ>ಯೆರಿಕೋ, ಜೆರೆಮಿಯ>ಯೆರೆಮಿಯ, ಜೆಹೊಶುವ>ಯೆಹೊಶುವ ಇತ್ಯಾದಿಗಳನ್ನು ಹೆಸರಿಸಬಹುದು.

ಕನ್ನಡದ ಸಂದರ್ಭದಲ್ಲಿ ಕೆಲವರು ಯೇಸು ಎಂಬುದನ್ನು ಏಸು ಎಂದು ಬರೆಯುವುದನ್ನು ಕಂಡಿದ್ದೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ಜ ಮತ್ತು ಯ ಎರಡೂ ವ್ಯಂಜನಗಳೇ ಆಗಿವೆ. ಆದರೆ ಇಲ್ಲಿ ನಾವು ತಿಳಿದಂತೆ ಎ ಏ ಗಳು ನಮ್ಮ ಅಕ್ಷರಮಾಲೆಯಲ್ಲಿ ಸ್ವರಗಳಾಗಿ ಸ್ಥಾನ ಪಡೆದಿವೆ. ಮೇಲಿನ ಹೆಸರುಗಳಿಗೆ ಸ್ವರಗಳನ್ನು ಬಳಸುವುದಾದರೆ ಯೇಸುವನ್ನು ಏಸುವಾಗಿ, ಯೆಹೋವನನ್ನು ಎಹೋವನನ್ನಾಗಿ, ಜೆರಿಕೋವನ್ನು ಎರಿಕೋವನ್ನಾಗಿ ಮಾಡಬಹುದೇನೋ ಸರಿ. ಆದರೆ ಜೋಸೆಫ್, ಜೊವಾನ್ನ ಇತ್ಯಾದಿಗಳನ್ನು ಹೇಗೆ ಬರೆಯುವುದು?

ಸಂಸ್ಕಾರದ ವಿವಾದ

ಅನಂತಮೂರ್ತಿಯವರು ಅತ್ಯಂತ ಪ್ರಗತಿಪರರಾಗಿದ್ದೂ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೇರವಾಗಿ ಸಂದೇಶ ಕೊಡಲು ಹೋಗದೇ ಕನ್ನಡಿ ತೋರಿದವರು. ಕ್ರಿಶ್ಚಿಯನ್ ಹೆಣ್ಣನ್ನು ಮದುವೆಯಾಗಿರುವುದರಿಂದ ತಮ್ಮ ಸಂಸ್ಕಾರ ಹೇಗಿದ್ದೀತು ಎಂಬುದರ ಸುಳಿವನ್ನು ಇಲ್ಲಿ ನೀಡಿದ್ದಾರೆಂದು ಕುಹಕಿಗಳು ಆಡಿಕೊಂಡರಂತೆ. ಪರ್ವ ಬರೆದ ಭೈರಪ್ಪ ಪರ್ವರ್ಟೆಡ್ ಭೈರಪ್ಪ ಎನ್ನಲಿಲ್ಲವೇ ಹಾಗೆ. ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಇಡೀ ವ್ಯವಸ್ಧೆಗೇ ಸಂಸ್ಕಾರ ಆಗಬೇಕಿದೆ ಎಂಬುದನ್ನು ಧ್ವನಿಸುತ್ತಾರೆ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.