ಶುಕ್ರವಾರ, ಅಕ್ಟೋಬರ್ 30, 2009

ಶೆಟ್ಟಿಹಳ್ಳಿಗೆ ಭೇಟಿ

ಹೀಗೊಮ್ಮೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಹಾಸನದ ಹಳ್ಳಿಗಾಡಿನ ದಾರಿಯಲ್ಲಿ ಪ್ರಯಾಣ ಹೊರಟಿದ್ದ ಒಬ್ಬಾತ ಇಲ್ಲೊಂದು ಚರ್ಚ್ ಕಟ್ಟಡವಿದೆ, ಬಹುಶಃ ಜಲಾಶಯದಲ್ಲಿ ಮುಳುಗಡೆಯಾಗಿದ್ದುದು ಈಗ ನೀರು ಕಡಿಮೆಯಾಗಿರುವುದರಿಂದ ಮೇಲೆದ್ದಿದೆ, ಕಟ್ಟಡ ಮತ್ತು ಅದರ ರಚನೆ ತುಂಬಾ ಚೆನ್ನಾಗಿದೆ ಎಂದು ಬರೆದುಕೊಂಡಿದ್ದ. ಆ ಲೇಖನವನ್ನು ನನಗೆ ತೋರಿಸಿದ ಮಿತ್ರ ಫ್ರಾನ್ಸಿಸ್ ಎಂ ನಂದಗಾಂವ್ ಅವರಿಗೆ ಓ ಇದು ಶೆಟ್ಟಿಹಳ್ಳಿ ಚರ್ಚು ಎಂದು ಹೇಳಿದೆ. ಅದರ ಮುಂದಿನ ವಾರ ಅಂದರೆ ಜನವರಿ ೧೫ರಂದು ಸಂಕ್ರಾಂತಿ ರಜೆಯಿದ್ದುದರಿಂದ ನಾವು ಆ ಚರ್ಚನ್ನು ನೋಡಿಕೊಂಡು ಬರೋಣವೆಂದು ಹೊರಟೇ ಬಿಟ್ಟೆವು. ಗುರುತು ಪರಿಚಯವಿಲ್ಲದ ಆ ಊರಿಗೆ ತೆರಳಿ ದಾರಿಯಲ್ಲಿ ಸಿಕ್ಕ ಯಾರುಯಾರನ್ನೋ ಆ ಚರ್ಚು ಮತ್ತು ಅದರ ಇತಿಹಾಸಗಳ ಕುರಿತು ಕೆದಕಿ ಕೇಳತೊಡಗಿದೆವು. ಮೊದಲು ಸಿಕ್ಕ ಒಬ್ಬ ವ್ಯಕ್ತಿ ತನ್ನನ್ನು ಎಂಥದೋ ಶೆಟ್ಟಿ ಎಂದು ಪರಿಚಯಿಸಿಕೊಂಡ. ನಾವು ಹೀಗೆ ಪತ್ರಿಕೆಯ ಲೇಖನ ನೋಡಿಬಂದೆವು ಎಂದು ಹೇಳಿಕೊಳ್ಳುವಷ್ಟರಲ್ಲಿ ಆತನೇ ಮುಂದುವರಿದು “ಗೊತ್ತು ಗೊತ್ತು, ನಿಮ್ಮನ್ನು ನೋಡಿದರೇ ಗೊತ್ತಾಗುತ್ತೆ, ನಿಮಗೆ ಬೇಕಾದ ಮಾಹಿತಿಯೆಲ್ಲ ನನ್ನಲ್ಲಿದೆ, ನನಗೆ ಗೊತ್ತಿದ್ದಷ್ಟು ಈ ಊರಿನಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ, ಆದರೆ ಆ ಮಾಹಿತಿಯೆಲ್ಲ ನಿಮಗೆ ಏಕೆ? ನೀವು ಹಿಂದೂಗಳಲ್ಲವೇ ನಿಮಗೆ ಇವೆಲ್ಲ ಯಾಕೆ? ಯಾವುದಕ್ಕೂ ನೀವು ನಮ್ಮ ಊರಿನ ಪಾದ್ರಿಯನ್ನು ಕಂಡರೆ ಒಳಿತು” ಎಂದ. ನಾವು ಹಿಂದೂಗಳಲ್ಲ ಕ್ರೈಸ್ತರೇ ಎಂದು ಹೇಳಿಕೊಂಡರೂ ಆತ ತಲೆದೂಗಲಿಲ್ಲ. ಪಾದ್ರಿ ಮನೆಗೆ ಹೋಗಿ ನೋಡಿದರೆ ಅವರು ಇರಲಿಲ್ಲ, ಮಗ್ಗೆಗೆ ಯಾವುದೋ ಹಬ್ಬದಾಚರಣೆಗೆ ತೆರಳಿದ್ದಾರೆಂದು ಅಡುಗೆಯವರು ಹೇಳಿದರು. ಆ ಊರಿನ ಬಗ್ಗೆ ಎಲ್ಲ ಗೊತ್ತೆಂದು ಹೇಳಿಕೊಂಡ ಆ ವ್ಯಕ್ತಿಯನ್ನು ಮತ್ತೆ ಹುಡುಕಿಕೊಂಡು ಹೋದರೆ ಆತ ಕೌಟುಂಬಿಕ ಸಮಸ್ಯೆಯಲ್ಲಿ ಮುಳುಗಿದ್ದನಲ್ಲದೆ ಸ್ವಲ್ಪ ಗುಂಡು ಹಾಕಿಕೊಂಡೂ ಇದ್ದ.
ಅಷ್ಟರಲ್ಲಿ ನಮ್ಮ ಹಿಂದೆ ಸುತ್ತುತ್ತಿದ್ದ ಒಂದೆರಡು ಹುಡುಗರು ನಮ್ಮ ಕಥೆ ಕೇಳಿ ಮುಳುಗಡೆಯ ದೇವಾಲಯಕ್ಕೆ ದಾರಿ ತೋರಿದರು. ಕಾಲೆಳೆಯುತ್ತಾ ಅಲ್ಲಿಗೆ ತಲಪಿದ ನಾವು ವಿವಿಧ ಕೋನಗಳಲ್ಲಿ ಆ ದೇವಾಲಯದ ಫೋಟೋಗಳನ್ನು ತೆಗೆದೆವು. ಅನತಿ ದೂರದಲ್ಲೇ ಹರಿಯುತ್ತಿದ್ದ ಹೇಮಾವತಿ ನದಿಯಲ್ಲಿ ಕೆಲ ಹೆಂಗಳೆಯರು ಬಟ್ಟೆ ತೊಳೆಯುತ್ತಿದ್ದರು. ಅಲ್ಲಿ ಒಂದರೆಡು ಶಿಲುಬೆಕಲ್ಲುಗಳು ಗೋಚರಿಸಿದವು. ಅವುಗಳ ಹತ್ತಿರಕ್ಕೆ ಹೋಗಿ ನೋಡಿದಾಗ ನೀರಿನಲ್ಲಿದ್ದಾಕೆ ಕಾಲೂರಿಕೊಂಡು ಬಟ್ಟೆ ಬಡಿಯುತ್ತಿದ್ದ ಬಂಡೆಯೂ ಶಿಲುಬೆಯಂತೆ ಕಂಡಿತು. “ಅದು ಶಿಲುಬೆಯಲ್ಲವೇ?” ಎಂದಾಕೆಯನ್ನು ಕೇಳಿದಾಗ ಆಕೆ ಭಯಾಶ್ಚರ್ಯಗಳಿಂದ “ಹಾ! ಶಿಲುಬೆ!!” ಎಂದು ಚೀರಿ ನೆಗೆದಳು. ವಾಸ್ತವವಾಗಿ ಅದು ಶಿಲುಬೆಕಲ್ಲೇ ಆಗಿತ್ತು. ನಿಧಾನವಾಗಿ ಅದನ್ನು ದಡಕ್ಕೆ ಸರಿಸಿ ಅದರ ಮೇಲಿನ ಅಕ್ಷರಗಳನ್ನು ಕೂಡಿಸಿ ಕೂಡಿಸಿ ಓದಿದೆವು.
ಅಲ್ಲಿಂದ ಹಿಂದಿರುಗಿ ಬರುವಾಗ ದಾರಿಯಲ್ಲಿದ್ದ ಒಂದು ಲಿಂಗಾಯತ ಹೋಟೆಲಿನಲ್ಲಿ ಸಿಕ್ಕಿದ್ದು ತಿಂದು ಚರ್ಚ್‌ ಬಳಿ ಬಂದು ನೋಡಿದರೆ ಆ ಪಾದ್ರಿ ಇನ್ನೂ ಬಂದಿರಲಿಲ್ಲ. ಅದಾಗಲೇ ನಾಲ್ಕು ಗಂಟೆಯಾಗುತ್ತಾ ಬಂದಿತ್ತು. ಊರ ಕೆಲವರ ಬಳಿ ಊರ ಸಂಪ್ರದಾಯಗಳ ಬಗ್ಗೆ, ಕ್ರಿಸ್ಮಸ್ ಮುಂತಾದ ಹಬ್ಬಗಳ ಬಗ್ಗೆ, ಕೋಲಾಟ ಮುಂತಾದ ಜಾನಪದ ಕಲೆಗಳ ಬಗ್ಗೆ ಕೇಳಿದೆವು. ಆದರೆ ಎಲ್ಲೂ ನಾವು ಯಾರೊಂದಿಗೂ ಆತ್ಮೀಯತೆ ಬೆಳೆಸಿಕೊಳ್ಳಲಾಗಲಿಲ್ಲ ಎಂಬುದೇ ಚಿಂತೆ. ಮೆಲ್ಲನೆ ಅಲ್ಲಿಂದ ಜಾಗ ಖಾಲಿ ಮಾಡಿ ಹಾಸನಕ್ಕೆ ತೆರಳಿ ತಂಗಿದೆವು.
ಮರುದಿನ ಬಸ್ ಹಿಡಿದು ಮತ್ತೆ ಶೆಟ್ಟಿಹಳ್ಳಿಗೆ ಬರುವ ವೇಳೆಗೆ ಅಲ್ಲಿನ ಪಾದ್ರಿಯವರಾದ ವಲೆರಿಯನ್ ಕ್ಯಾಸ್ತೆಲಿನೋ ಅವರು ಬಂದಿದ್ದರು. ನಮ್ಮ ಮಾತುಗಳನ್ನು ಕೇಳಿದ ಅವರು ತಾವು ಚಿಕ್ಕಮಗಳೂರಿನ ಶಾಲೆಯಲ್ಲಿ ಬಹಳವರ್ಷಗಳ ಕಾಲ ಶಿಕ್ಷಕರಾಗಿದ್ದುದಾಗಿಯೂ ಧರ್ಮಕೇಂದ್ರಗಳ ಕೆಲಸಕ್ಕೆ ಹೊಸಬರೆಂದೂ ಹೇಳಿದರಲ್ಲದೆ ಶೆಟ್ಟಿಹಳ್ಳಿಯ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ತಮಗೂ ಆಸಕ್ತಿಯಿದೆ ಎಂಬುದಾಗಿಯೂ ಉತ್ಸಾಹ ತೋರಿದರು. ಕ್ರಿಸ್ತದೀಕ್ಷೆಯ ರಿಜಿಸ್ಟರು ತೆರೆದು ಮೊದಲು ದೀಕ್ಷೆ ಪಡೆದವರ ವಿವರ ನೋಡಿದರು. ಅದು ಹಾಸನದಲ್ಲಿ ನೆಲೆಸಿದ್ದ ಒಬ್ಬ ತಮಿಳು ವ್ಯಕ್ತಿಯದಾಗಿತ್ತು. ಹೀಗೇ ಮಾತನಾಡುತ್ತಾ ಆ ಶಿಲುಬೆಕಲ್ಲಿನ ಪ್ರಸ್ತಾಪ ಬಂತು. ತಟ್ಟನೇ ಅವರು ನಡೆಯಿರಿ ಅದನ್ನು ನೋಡೋಣ ಎಂದು ಎದ್ದೇಬಿಟ್ಟರು. ತಮ್ಮ ಸ್ಕೂಟರ್‍ ಸ್ಟಾರ್ಟ್ ಮಾಡಿ ನಮ್ಮಲ್ಲೊಬ್ಬರನ್ನು ತಮ್ಮೊಂದಿಗೆ ಕರೆದರಲ್ಲದೆ ಊರಿನ ಒಬ್ಬಾತನಿಗೆ ಹೇಳಿ ಕಳುಹಿಸಿ ಆತನನ್ನೂ ಮೋಟರ್‍ ಸೈಕಲ್ ತರಲು ಹೇಳಿ ಹಳೇ ದೇವಸ್ಥಾನದ ಕಡೆಗೆ ಹೊರಟರು. ಆ ಶಿಲುಬೆಯನ್ನು ವೀಕ್ಷಿಸುತ್ತಿರುವಾಗ ಯಾರೋ ಒಬ್ಬಾತ ಪೂರ್ವದಿಕ್ಕಿನ ಕಡೆ ಕೈ ತೋರಿ ಅಲ್ಲಿ ದೂರದಲ್ಲಿ ಊರ ಸಮಾಧಿ ಭೂಮಿಯಿತ್ತು. ಈಗ ನೀರಿಲ್ಲದಿರುವುದರಿಂದ ಸಮಾಧಿಗಳು ಕಾಣುತ್ತಿರಬಹುದು ಎಂದ.
ಕೂಡಲೇ ಸ್ವಾಮಿಗಳು ನಡೆಯಿರಿ ಅಲ್ಲಿಗೂ ಹೋಗೋಣ ಎಂದು ನಮ್ಮನ್ನೂ ಹೊರಡಿಸಿದರು. ಆದರೆ ಆ ಸಮಾಧಿ ಭೂಮಿಯ ಸಮೀಪ ಹೋಗುತ್ತಿದ್ದಂತೆ ಅಲ್ಲಿ ವಿಶಾಲವಾದ ನದಿ ಪಾತ್ರವನ್ನು ದಾಟಬೇಕಾದ ಅನಿವಾರ್ಯತೆ ಎದುರಾಯಿತು. ಯಾರೋ ಒಬ್ಬಾತ ಅಲ್ಲಿ ಒರಗಿಸಿದ್ದ ತೆಪ್ಪವನ್ನು ಎಳೆದು ತಂದು ನಮ್ಮನ್ನು ನದಿ ದಾಟಿಸಿದ. ಅಲ್ಲೂ ಸಹಾ ಅರೆಬರೆ ಮುರಿದ ಶಿಲುಬೆಗಳು ಅವುಗಳ ಮೇಲಿನ ಅಕ್ಷರಗಳು ಕಂಡವು. ಆದರೆ ಮೊತ್ತಮೊದಲು ನದಿಯಲ್ಲಿ ಸಿಕ್ಕ ಶಿಲುಬೆಕಲ್ಲಿನಷ್ಟು ಆಕರ್ಷಕವಾದ ಯಾವುವೂ ಅಲ್ಲಿರಲಿಲ್ಲ. ಅಲ್ಲಿಂದ ಹಿಂದಿರುಗಿ ಬರುತ್ತಿರುವಾಗ ಆ ಸ್ವಾಮಿಯವರು ಆ ಶಿಲುಬೆಕಲ್ಲು ಅಲ್ಲಿರುವುದು ಬೇಡ, ಹೊಸ ದೇವಾಲಯದ ಆವರಣಕ್ಕೆ ತರೋಣ ಎಂದರು. ನಮ್ಮ ಅಭಿಪ್ರಾಯವೂ ಅದೇ ಆಗಿತ್ತು.
ಪಾದ್ರಿಗಳ ಮನೆಯಲ್ಲಿ ಬಿಸಿ ಊಟ ಸಿದ್ಧವಾಗಿತ್ತು. ಊಟಕ್ಕೆ ನಮ್ಮನ್ನೂ ಆಹ್ವಾನಿಸಿದ ಪಾದ್ರಿಗಳು ಆಮೇಲೆ ವಿಶ್ರಾಂತಿಗೆ ತೆರಳಿದಾಗ ನಾವು ಹೊರಬಂದು ಮತ್ತೆ ಊರ ಜನರನ್ನು ಭೇಟಿಯಾಗಲು ಹೊರಟೆವು. ಗುಡಿಯ ಎದುರಿನ ಮನೆಗೆ ಭೇಟಿ ಕೊಟ್ಟು ಅಲ್ಲಿ ವೃದ್ಧ ದಂಪತಿಯನ್ನು ಕಂಡೆವು. ಆ ವೃದ್ಧೆ ಬಾಯಿತುಂಬಾ ಮಾತನಾಡಿದರು. ಆದರೆ ವೃದ್ಧ ಮಾತಿಗೊಪ್ಪಲಿಲ್ಲ. ‘ನಾವು ಯಾತಕ್ಕೂ ಓಗಾಕುಲ್ಲ, ಯಾರ ಕುಟ್ಟೆಯೂ ಮಾತಾಡಕ್ಕುಲ್ಲ, ಪೂಜೆ ನೋಡ್ತೀವಿ, ಬತ್ತೀವಿ, ಅಷ್ಟೇಯ’ ಅಂದರು.
ನಂತರದ ಮನೆ ಹ್ಯಾರಿ ರಾವ್ ಎಂಬಾತನದು. ಅವರಂತೂ ನಮ್ಮೂರಿನ ಚರಿತ್ರೆ ಕಟ್ಟಿಕೊಂಡು ನಿಮಗೇನಾಗಬೇಕು, ಅದರಿಂದ ನಿಮಗೇನು ಲಾಭ? ಎಂದರು. ನಾವೇ ಒಂದಷ್ಟು ಅವರ ಊರಿನ ಮಹತ್ತು ಹಿರಿಮೆ ಗರಿಮೆಗಳ ಬಗ್ಗೆ ಹೇಳಿ, ಪಾದ್ರಿಗಳ ಆಸಕ್ತಿಯ ಬಗ್ಗೆಯೂ ವಿವರಿಸಿ ಹೇಳಿ ಅದಕ್ಕೆ ನಿಮ್ಮಂಥವರಿಂದ ಪ್ರೋತ್ಸಾಹ ಅಗತ್ಯ ಎಂದೆವು. ನದೀ ತೀರದ ಆ ಶಿಲುಬೆಕಲ್ಲನ್ನು ಊರೊಳಕ್ಕೆ ತರಲು ಪಾದ್ರಿಗಳಿಗೆ ಸಹಕರಿಸಿ ಎಂದೆವು. ಅದಕ್ಕಾತ ಊರೊಳಗೆ ಯಾರೂ ತಮಗೆ ಸ್ಪಂದಿಸುವುದಿಲ್ಲ ಎಂದು ಅಲವತ್ತುಕೊಂಡರು.
ಹೀಗೇ ಅಡ್ಡಾಡುತ್ತಾ “ಸ್ನೇಹಜ್ಯೋತಿ” ಸಂಪಾದಕ ಪಾದ್ರಿ ಅದೇ ಊರಿನವರೆಂದು ನೆನಪಿಸಿಕೊಂಡು ಅವರ ಮನೆ ಹುಡುಕುತ್ತಾ ಹೊರಟೆವು. ಅವರ ತಾಯಿಯವರು ತುಂಬಾ ಅದರದಿಂದ ಮಾತನಾಡಿಸಿದರು. ವಿಚಿತ್ರವೆಂದರೆ ಆ ಪಾದ್ರಿಯ ತಮ್ಮನೊಂದಿಗೆ ನಾವು ಮಾತಿಗೆ ತೊಡಗಿದ ಕೂಡಲೇ ಈಗ ಬರುತ್ತೇನೆಂದು ಹೊರಹೋದ ಆತ ಮರಳಿ ಬರಲೇ ಇಲ್ಲ.
ಇದು ಶೆಟ್ಟಿಹಳ್ಳಿಗೆ ನಮ್ಮ ಮೊದಲ ಭೇಟಿ.