ಭಾನುವಾರ, ಜನವರಿ 11, 2009

ಸಾಪ್ತಾಹಿಕ ಪುರವಣಿ ೧೧೦೧೨೦೦೯

ಇಂದಿನ ಪ್ರಜಾವಾಣಿ ಸಾಪ್ತಾಹಿಕ ಪುರವಣಿಯ ಲೇಖನಗಳು ನನ್ನ ಮನಸ್ಸಿಗೆ ಬಹುವಾಗಿ ಲಗತ್ತಾದವು.

"ಸಂಕ್ರಾಂತಿಯ ಹಿಗ್ಗು ಕಾಣುವುದು ಸುಗ್ಗಿಯಲ್ಲಿ. ಮುಳುಗಡೆಯ ನಂತರ ಚಿಂದಿಯಾದ ಬದುಕು, ಉಳುವ ಭೂಮಿಯ ತೊಳೆದುಹಾಕಿದ ಯೋಜನೆಗಳ ನಡುವೆ ಮಣ್ಣಿನ ಮಕ್ಕಳೆಲ್ಲಾ ಕಂಗಾಲು. ಬದುಕನ್ನು ಮತ್ತೆ ಕಟ್ಟುವ ಅನಿವಾರ್ಯತೆಗೆ ಮುಖಾಮುಖಿಯಾಗಿರುವ ರೈತವರ್ಗ ಅಸಲಿ ಸುಗ್ಗಿಯನ್ನೂ, ಸಂಕ್ರಮಣವನ್ನೂ ಎದುರು ನೋಡುತ್ತಿದೆ. ಅವರ ಪಥ ಬದಲಾಗುವುದು ಎಂದೋ?" ಎನ್ನವು ಲೇಖನ ’ಸುಗ್ಗಿಯಲ್ಲೂ ಕುಗ್ಗಿದವರು’. ರೈತನ ಹಬ್ಬವಾದ ಸಂಕ್ರಾಂತಿಯು ಹೇಗೆ ರೈತನನ್ನು ನೇಪಥ್ಯಕ್ಕೆ ಸರಿಸುತ್ತಾ ಇತರರ ಹಬ್ಬವಾಗಿದೆ ಎಂಬುದನ್ನು ಸಾರುತ್ತದೆ.

ಹಾಗಂತ, ಸಂಕ್ರಾಂತಿಯ ಸವಿಯನ್ನು ಮೆಲುಕು ಹಾಕದಿರಲು ಸಾಧ್ಯವೇ? "ಹೊಲ ಇದ್ದವರೆಲ್ಲ ತಮ್ಮ ಆಪ್ತೇಷ್ಟರಿಗೆ ’ಸೀತನಿ ತಿನ್ನಾಕ ಹೋಗೂನು ಬರ್‍ರಿ’ ಎಂದು ಆತ್ಮೀಯ ವೀಳ್ಯವಿತ್ತರೆ, ಭೂರಿಭೋಜನದ ಹಬ್ಬವೇ ಆಗಿರುತ್ತದೆ. ಬುತ್ತಿಗೆ ಸಜ್ಜೆ ರೊಟ್ಟಿ, ಝಣಕದ ಒಡಿ, ಎಣ್ಣಿಗಾಯಿ, ಮೊಸರನ್ನದ ಬುತ್ತಿ, ಸೇಂಗಾ ಹಿಂಡಿ, ಗಟ್ಟ ಮೊಸರು, ಗೋಧಿ ಕುಟ್ಟಿದ ಹುಗ್ಗಿ . . . ಜೊತೆಗೆ ಹಸಿಮೆಂತ್ಯ ಸೊಪ್ಪು, ಹೊಲದ ಬದುವಿನ ಮೇಲೆ ಸಿಗುವ ಹಕ್ಕರಿಕೆ, ಎಳೆ ಕಡಲೆಗಿಡದ ಎಲೆಗಳು.. ಹೀಗೆ ಒಂದೆರಡಲ್ಲ, ಹತ್ತು ಹಲವು ಪದಾರ್ಥಗಳೊಂದಿಗೆ ಸಿಹಿ ಸೀತನಿ ಸವಿಯುವ ನೆವದಲ್ಲಿ ಒಂದು ’ಈಟ್ ಔಟ್’ . .

ಇಂದು ಕಾಲೇಜಿನಲ್ಲಿ ಗೋಕಾಕರ ಮೊದಲ ಉಪನ್ಯಾಸ, ಅವರನ್ನು ಗೇಲಿ ಮಾಡಿ ಕೆಣಕಲು ನಾವು ಪಣ ತೊಟ್ಟಿದ್ದೆವು. ಆದರೆ ತರಗತಿ ಪ್ರಾರಂಭವಾಗುತ್ತಿದ್ದಂತೆ ಅವರ ಮಾತಿನ ಓಘದ ಝರಿಗೆ ನಾವೆಲ್ಲ ಮಂತ್ರಮುಗ್ದರಾಗಿಬಿಟ್ಟೆವು. ಅದೇನು ಕವಿಯೊಬ್ಬ ಕಾವ್ಯದ ವಿಮರ್ಶೆ ಮಾಡುತ್ತಿದ್ದಾನೋ ಅಥವಾ ವಿಮರ್ಶೆಯೇ ಕಾವ್ಯವಾಗುತ್ತಿದೆಯೋ . .

ಕಿಟೆಲ್ ತಮ್ಮ ನಿಘಂಟಿನಲ್ಲಿ "ಇದ್ದಕ್ಕಿದ್ದ ಹಾಗೆ" ಎಂಬುದು ಜನರ ಮಾತಿನಲ್ಲಿ ಬಳಕೆಯಾಗಿದೆ ಎಂದು ಹೇಳುತ್ತಾರೆ. ಅಲ್ಲದೆ ಬರವಣಿಗೆಯಲ್ಲಿ ಮುಂಬಯಿ ಪ್ರಾಂತ್ಯದ ಶಾಲಾ ಪುಸ್ತಕಗಳಲ್ಲಿ ಬಳಕೆಯಾಗಿದೆಯೆಂದೂ ಹೇಳಿದ್ದಾರೆ. ಇದ್ದಕ್ಕಿದ್ದ ಹಾಗೆ ಎಂಬುದಕ್ಕೆ ಇರುವಂತೆಯೇ, ಯಥಾವತ್ತಾಗಿ, ತದ್ದವತ್ತಾಗೆ ಎಂಬ ತಿರುಳುಗಳನ್ನು ಕಿಟೆಲ್ ಅವರು ಗುರುತಿಸುತ್ತಾರೆ. ಈಗ ೧.ನಡುಹಗಲಲ್ಲಿ ಇದ್ದಕ್ಕಿದ್ದ ಹಾಗೆ ಮೋಡ ಕವಿದು ಮಳೆ ಸುರಿಯಿತು. ೨. ನೀನು ಇದ್ದಕ್ಕಿದ್ದ ಹಾಗೆ ಬಂದು ಕೇಳಿದರೆ ಅಷ್ಟು ಹಣ ನಾನು ಎಲ್ಲಿ ತರಲಿ? . . ಅಂದರೆ ನೂರು ವರುಷಗಳ ಅವಧಿಯಲ್ಲಿ ಇದ್ದಕ್ಕಿದ್ದ ಹಾಗೆ ಎಂಬ ರಚನೆಯ ತಿರುಳಿನಲ್ಲಿ ಎದ್ದುಕಾಣುವ ಬದಲಾವಣೆಯಾಗಿದೆ ಎಂದಾಯ್ತು.

ಸಿದ್ದರಾಮನು ಎಂಬ ಗೋವು ಬದ್ದನಾಗಿರೆ ಹಸ್ತದೊಳಗೆ ಗದ್ದುಗೆಯು ಸಿಗದಿರಲು ಆಗ ಎದ್ದು ನಡೆದನು ಕೇರ್‍ಳಕೆ | ಅಂಕಿ ಇದಿಗೋ ಸಂಖ್ಯೆ ಇದಿಗೋ ಸಂಕ್ರಮಣ ನಿರ್ಧಾರವಿದಿಗೋ ಬಿಂಕದಿಂದಲೆ ಆಚೆ ನಡೆವೆನು ಥಿಂಕು ಮಾಡಿರಿ ಎಂದನು

ಇವಿಷ್ಟಲ್ಲದೆ ಪ್ರಿಯಾ ತೆಂಡೂಲ್ಕರರ ಕತೆ, ಹರಿಯಬ್ಬೆ ಪ್ರೇಮಕುಮಾರರ ಸಂಸ್ಕೃತಿ ಮೆಲುಕು, ತಾರಿಣಿ ಶುಭದಾಯಿನಿಯವರ ಕಾವ್ಯದೃಷ್ಟಿ, ಲಕ್ಷ್ಮಣ ಕೊಡಸೆಯವರ ವಿಮರ್ಶೆ, ಯಲ್ಲಾಪ್ರಗಡ ಸುಬ್ಬರಾಯರ ಬಗ್ಗೆ ಬಿಂದುಸಾರ ಅವರ ಲೇಖನ, ವಿಜ್ಞಾನ-ವಿನೋದ, ಸಾಗರಕ್ಕೆ ೪೮ ಕಿಲೋಮೀಟರು ದೂರದಲ್ಲಿರುವ ಸಿಗಂದೂರಿಗೆ ನೀರಯಾತ್ರೆ, ಭುಬನೇಶ್ವರದಿಂದ ಪುರಿಗೆ ಹೋಗುವ ದಾರಿಯಲ್ಲಿರುವ ಪಿಪಿಲಿ ಎಂಬ ಪುಟ್ಟ ಗ್ರಾಮದ ಕರಕುಶಲಕಲೆ ಇವುಗಳೆಲ್ಲ ಮನಸೆಳೆಯುತ್ತವೆ.

ಒಟ್ಟಿನಲ್ಲಿ ಸಾಪ್ತಾಹಿಕ ಪುರವಣಿ ಒಂದು ಓದಲೇಬೇಕಾದ ಸರಕು.

2 ಕಾಮೆಂಟ್‌ಗಳು:

Admin ಹೇಳಿದರು...

ತುಂಬ ಚೆನ್ನಾಗಿದೆ ಮೂಡಿ ಬಂದಿದೆ....

ಪ್ರಸನ್ನ

cmariejoseph.blogspot.com ಹೇಳಿದರು...

ಧನ್ಯವಾದಗಳು ಪ್ರಸನ್ನ ಅವರೇ.

ಪ್ರೀತಿಯಿಂದ
ಸಿ ಮರಿಜೋಸೆಫ್