ಸೋಮವಾರ, ನವೆಂಬರ್ 1, 2010

ಹಿಂದೀ ಮಾತ್ರವೇ ರಾಷ್ಟ್ರಭಾಷೆಯೇ?

ಇಂಡಿಯಾದ ಸಂವಿಧಾನವು ಹದಿನೈದು ಭಾಷೆಗಳನ್ನು ರಾಷ್ಟ್ರಭಾಷೆಗಳನ್ನಾಗಿ ಅಂಗೀಕರಿಸಿದೆಯಾದರೂ ಹಿಂದೀಯನ್ನು ಮಾತ್ರವೇ ರಾಷ್ಟ್ರಭಾಷೆಯೆಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಎರಡು ಸಾವಿರ ವರ್ಷಗಳ ಇತಿಹಾಸವಿದ್ದು ಸಾವಿರ ವರ್ಷಗಳ ಹಿಂದೆಯೇ ಮಹಾಕಾವ್ಯಗಳನ್ನು ನೀಡಿದ ಕನ್ನಡವೆಲ್ಲಿ, ಕೇವಲ ನಾಲ್ಕುನೂರು ವರ್ಷಗಳ ಹಿಂದೆ ಮುಸ್ಲಿಮರ ಆಳ್ವಿಕೆಯಲ್ಲಿ ಕಲಬೆರೆಕೆಯಾಗಿ ಹುಟ್ಟಿದ ಹಿಂದೀ ಎಲ್ಲಿ?
ಐದು ಕೋಟಿ ಜನ ಕನ್ನಡ ಮಾತನಾಡುತ್ತಾರೆ ಹೌದು ಆದರೆ ಐದು ರಾಜ್ಯಗಳ ಜನ ಹಿಂದೀ ಭಾಷೆಯಾಡುತ್ತಾರೆ ಎಂದು ಅವರು ಹೇಳುತ್ತಾರೆ. ಆದರೆ ಕೇಳಿ ಬಿಹಾರದ ಹಿಂದೀ ಭಾಷೆ ಉತ್ತರಪ್ರದೇಶದಲ್ಲಿ ಅರ್ಥವಾಗದು. ಜಾನ್ಸಿಯಲ್ಲಿ ಬರೆದ ಹಿಂದೀಯನ್ನು ಜಾರ್ಖಂಡ್ ಜನ ಅರ್ಥ ಮಾಡಿಕೊಳ್ಳಲಾಗದು. ಹಿಂದೀಯನ್ನು ಒಂದು ಸಂಪರ್ಕ ಭಾಷೆಯಾಗಿ ತರುವ ಪ್ರಯತ್ನವೇನೋ ಸರಿಯೇ. ಆದರೆ ಅದು ಉತ್ತರ ಇಂಡಿಯಾಕ್ಕಷ್ಟೇ ಸರಿ. ಏಕೆಂದರೆ ಅಲ್ಲಿನ ಜನರಿಗೆ ತಮ್ಮ ಹಿಂದೀಯನ್ನು ಮತ್ತೊಬ್ಬ ಹಿಂದೀ ಮನುಷ್ಯನಿಗೆ ಸಂವಹಿಸಲು ಒಂದೇ ರೀತಿಯ ಹಿಂದೀಯ ಅವಶ್ಯಕತೆ ಇದೆ. ಆದರೆ ದಕ್ಷಿಣ ಇಂಡಿಯಾಕ್ಕೆ ಹಿಂದೀಯ ಅಗತ್ಯವಿಲ್ಲ. ಅಷ್ಟೇ ಅಲ್ಲ, ಉತ್ತರದ ಪಂಜಾಬ, ಕಾಶ್ಮೀರದಲ್ಲಿ ಹಾಗೂ ಒರಿಸ್ಸಾ, ಬಂಗಾಳ, ಅಸ್ಸಾಂ, ಅರುಣಾಚಲದಂಥ ಈಶಾನ್ಯ ರಾಜ್ಯಗಳಲ್ಲಿ ಹಿಂದೀ ನಡೆಯದು. ಈ ರಾಜ್ಯಗಳಲ್ಲಿ ಇಂಗ್ಲಿಷು ಸಂಪರ್ಕ ಭಾಷೆಯಾಗಿ ನಿಲ್ಲಬಲ್ಲದು. ನಮ್ಮ ದಕ್ಷಿಣ ಇಂಡಿಯಾದಲ್ಲೂ ಇಂಗ್ಲಿಷು ಪರಸ್ಪರ ಬೆಸೆಯುವ ಕೊಂಡಿಯಾಗಿದೆ. ಈ ಹಿಂದೀ ಜನಕ್ಕೆ ಇಂಗ್ಲಿಷು ಬಾರದ್ದರಿಂದ ತಮ್ಮ ಮಾತೃಭಾಷೆಯನ್ನೇ ಇಂಡಿಯಾದ ಇತರ ಜನರೆಲ್ಲ ಕಲಿಯಲಿ ಎಂದು ಆಶಿಸುತ್ತಾರೆ.
ಅದರ ಬದಲು ಜಾಗತಿಕ ವೇದಿಕೆಯಲ್ಲಿ ಸೆಣೆಸಲು ಎಲ್ಲರೂ ಇಂಗ್ಲಿಷನ್ನು ಉಪಭಾಷೆಯಾಗಿ ಕಲಿತರೆ ಒಳ್ಳೆಯದು. ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಇಂಗ್ಲಿಷನ್ನು ಒಂದು ಸಂಪರ್ಕಭಾಷೆಯಾಗಿ ನೆಲೆಗೊಳಿಸುವುದು ಸುಲಭ. ವಿಪರ್ಯಾಸವೆಂದರೆ ಅವುಗಳಲ್ಲಿ ಹಿಂದೀಯನ್ನು ಜಾರಿಗೆ ತರಲಿಕ್ಕಾಗಿ ಅಪಾರ ಹಣ ವ್ಯಯ ಮಾಡಲಾಗುತ್ತಿದೆ. ಕೆಲವೊಮ್ಮೆಯಂತೂ ಹಿಂದೀಯನ್ನು ಬಲವಂತವಾಗಿ ಹೇರಲಾಗುತ್ತಿದೆ. ವಿವಿಧ ರಾಜ್ಯಗಳಲ್ಲಿ ನೆಲೆಗೊಂಡ ಅಂಥ ಸಂಸ್ಥೆಗಳಲ್ಲಿ ಆಯಾ ರಾಜ್ಯಭಾಷೆಯನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಅಲ್ಲಿ ಹಿಂದೀಯನ್ನು ಬಲವಂತವಾಗಿ ಹೇರಬಾರದು.
ಆದರೆ ರಾಷ್ಟ್ರಮಟ್ಟದ ಸಂಸ್ಥೆಗಳಲ್ಲಿ ಹಿಂದೀ ಭಾಷೆಯೇ ಪ್ರಧಾನ ಎಂಬುದಾಗಿ ಕೆಲ ಮುಟ್ಠಾಳರು ಪ್ರತಿಪಾದಿಸುತ್ತಿದ್ದಾರೆ. ಅವರನ್ನು ಮುಟ್ಠಾಳರು ಎಂದು ಏಕೆ ಕರೆಯುತ್ತಿದ್ದೇನೆ ಎಂದರೆ ಅವರಿಗೆ ಹಿಂದೀ ಕುರಿತ ವಾಸ್ತವತೆಯ ಅರಿವಿಲ್ಲ. ಹಿಂದೀಗಾಗಿ ನೀಡಲಾಗುವ ಪುಡಿಗಾಸಿನ ಎಂಜಲಿಗಾಗಿ ಅವರು ಕನ್ನಡವನ್ನು ಬಲಿಗೊಡುತ್ತಿದ್ದಾರೆ. ಅದೇ ನೇರದಲ್ಲಿ ಅವರು ತಮ್ಮ ಮುಂದಿನ ಪೀಳಿಗೆಗೂ ವಂಚನೆ ಮಾಡುತ್ತಿದ್ದಾರೆ.
ಈ ಸಂಸ್ಥೆಗಳಲ್ಲಿ ನಡೆವ ಹಿಂದೀ ಪಕ್ಷಾಚರಣೆಯನ್ನೇ ನೋಡೋಣ. ಅದರಲ್ಲಿ ಭಾಗವಹಿಸುವವರಾದರೂ ಎಷ್ಟು ಮಂದಿ? ಕೇವಲ ಬೆರಳೆಣಿಕೆಯಷ್ಟು ಮಂದಿ. ಪ್ರತಿವರ್ಷವೂ ನೋಟಿಂಗ್ ಅಂಡ್ ಡ್ರಾಫ್ಟಿಂಗ್, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಗಾಯನಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವವರು ಅದೇ ನಾಲ್ಕೈದು ಮಂದಿ. ಅದರ ಬಹುಮಾನಗಳನ್ನು ಅವರವರೇ ಹಂಚಿಕೊಳ್ಳುತ್ತಾರೆ.

1 ಕಾಮೆಂಟ್‌:

ವಿ.ರಾ.ಹೆ. ಹೇಳಿದರು...

ಜನರ ಮನಸ್ಸಿನಲ್ಲಿ ಈ ತಪ್ಪು ತಿಳುವಳಿಕೆ ಎಷ್ಟು ಬೇರೂರಿದೆ ಅಂದ್ರೆ ಅದನ್ನು ಕಿತ್ತುಹಾಕುವುದು ದೊಡ್ಡ ಕಷ್ಟವಾಗಿದೆ.