ಶನಿವಾರ, ಅಕ್ಟೋಬರ್ 15, 2011

ಎಪ್ಪತ್ತರ ದಶಕದಲ್ಲಿ


ಇದು ಎಪ್ಪತ್ತರ ದಶಕದ ಮಾತು. ಮಲ್ಲೇಶ್ವರದ ಕ್ರಿಸ್ತರಾಜರ ದೇವಾಲಯದ ಹಿಂಬದಿಯೇ ನಮ್ಮ ಮನೆಯಿದ್ದುದರಿಂದ ಅಲ್ಲಿನ ಪ್ರತಿ ಆಗುಹೋಗುಗಳಿಗೂ ನಾನು ಸಾಕ್ಷಿಯಾಗುತ್ತಿದ್ದೆ. ೧೯೬೦ರಿಂದ ೧೯೭೩ರವರೆಗಿನ ದೀರ್ಘಕಾಲ ಅಲ್ಲಿನ ಗುರುಗಳಾಗಿದ್ದ ಸ್ವಾಮಿ ಅಂತೋಣಿ ಸಿಕ್ವೆರಾ ಅವರು ತಮ್ಮ ಪ್ರಯತ್ನದಿಂದ ಈ ದೇವಾಲಯದ ಸಮುದಾಯವನ್ನು ಪ್ರವರ್ಧಮಾನ ಸ್ಥಿತಿಗೆ ತಂದಿದ್ದರು.
ಪೂಜೆಗಳಲ್ಲಿ ಹೊಸ ಪೀಳಿಗೆಯ ಸಮರ್ಥ ಪಾಲುಗೊಳ್ಳುವಿಕೆಗೆ ಇಂಬುಗೊಡಲು ಅವರು ಹತ್ತಿರದ ನಿರ್ಮಲರಾಣಿ ಶಾಲೆಯನ್ನು ಸಾಧನವಾಗಿ ಬಳಸಿಕೊಂಡಿದ್ದರು. ಅಲ್ಲಿನ ಮದರುಗಳು ಪ್ರತಿ ಭಾನುವಾರ ದೇವಾಲಯಕ್ಕೆ ಆಗಮಿಸಿ ಮಕ್ಕಳನ್ನು ಶಿಸ್ತುಬದ್ದವಾಗಿ ಕೂಡಿಸಿ ಬೆಳೆದ ಮಕ್ಕಳಿಗೆ ವಾಚನ ಓದಲು ಸಿದ್ಧಪಡಿಸಿ ಪುಟ್ಟ ಮಕ್ಕಳಿಗೆ ಜಪ ಧರ್ಮೋಪದೇಶದ ತರಗತಿಗಳನ್ನೂ ನಡೆಸುತ್ತಿದ್ದರು. ಶಾಲೆಯಿಂದ ಹೊರನಡೆದ ಹಳೆಯ ವಿದ್ಯಾರ್ಥಿಗಳೂ ಸಹ ಅವರ ಪ್ರೀತಿಯ ಒತ್ತಾಯಕ್ಕೆ ಮಣಿದು ಗಾನವೃಂದ ಪೂಜೆ ಒತ್ತಾಸೆ ಮುಂತಾದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ದಿನಗಳಲ್ಲಿ ಪೀಠದೊಳಕ್ಕೆ ಹೆಣ್ಣುಮಕ್ಕಳಿಗೆ ಪ್ರವೇಶವಿರಲಿಲ್ಲ. ಆದರೆ ಹಿಂದಿನ ಅಟ್ಟಣಿಗೆಯಲ್ಲಿನ ಗಾನವೃಂದಕ್ಕೆ ಪುಷ್ಪ, ವಿಕ್ಟೋರಿಯಾ ಮುಂತಾದ ಹಿರಿ ವಿದ್ಯಾರ್ಥಿಗಳು ಜೀವಕಳೆ ತುಂಬಿದ್ದರು. ಬ್ರದರ್ ಜೋಸೆಫ್ ಡಿಮೆಲ್ಲೊ, ಬ್ರದರ್ ಎನ್ ಎಸ್ ಮರಿಜೋಸೆಫ್ ಮುಂತಾದವರು ಇಲ್ಲಿಗೆ ಬಂದು ಹಾಡು ಹೇಳಿಕೊಡುತ್ತಿದ್ದರು. ಮನೆಯಲ್ಲಿ ತಮಿಳು ಮಾತನಾಡುತ್ತಿದ್ದ ಆದರೆ ಕನ್ನಡ ಓದುತ್ತಿದ್ದ ಹಲವು ಮಂದಿ ಗಾನವೃಂದದಲ್ಲಿದ್ದರು.
೧೯೭೧ರಲ್ಲಿ ರಾಜಾಜಿನಗರದಲ್ಲಿ ಹೊಸ ಚರ್ಚು ತಲೆಯೆತ್ತಿದ್ದರಿಂದ ಮಲ್ಲೇಶ್ವರದ ಈ ಚರ್ಚು ಇಬ್ಭಾಗವಾಯಿತು. ಸಹಜವಾಗಿ ಗಾನವೃಂದದಲ್ಲಿನ ಕನ್ನಡದ ದನಿಗಳು ಸೊರಗಿದವು. ೧೯೭೩ರಲ್ಲಿ ಇನ್ನೊಂದು ಸ್ಥಿತ್ಯಂತರ ನಡೆದು ಥಾಮಸ್ ಫೆರ್ನಾಂಡೊ ಎಂಬ ತಮಿಳು ಪಾದ್ರಿ ಈ ಚರ್ಚಿಗೆ ನೇಮಕವಾದರು. ಅವರು ಯೇಸುಸ್ವಾಮಿ ಸ್ವತಃ ತಮಿಳರಾಗಿದ್ದರೆಂದೂ ಬೆಂಗಳೂರು ತಮಿಳುನಾಡಿನ ಭಾಗವೆಂದೂ ಭಾವಿಸಿದ್ದರು. ಹೀಗೆ ದೇವಾಲಯದ ಭಕ್ತಾದಿಗಳ ನಡುವೆ ಒಂದು ಸ್ಪಷ್ಟ ಗೆರೆ ಎಳೆಯಲಾಯಿತು. ಒಂದು ಕಡೆ ತಮಿಳರೆಂದೂ ಇನ್ನೊಂದು ಕಡೆ ಕನ್ನಡವೆಂದೂ ವಿಭಾಗಿಸಿ ಹಗ್ಗ ಜಗ್ಗಾಟ ಶುರುವಾಯಿತು. ಕನ್ನಡದ ಪೂಜೆಗಳಲ್ಲಿ ಹಾಡುಹಾಡಲು ಪವಿತ್ರಗ್ರಂಥ ಪಠಿಸಲು ಜನರಿಲ್ಲವಾಯಿತು. ಅಲ್ಲಿಯ ತನಕ ನಿರ್ಮಲರಾಣಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತಮಿಳು ಯುವಕರೇ ಕನ್ನಡದ ಬೈಬಲ್ ವಾಚಿಸುತ್ತಿದ್ದರು. ತಮಿಳಿಗಾದರೋ ವಲಸೆ ಬಂದಿದ್ದ ಸ್ಪಷ್ಟ ತಮಿಳು ಉಚ್ಚಾರದ ತಾರ್ಸಿಸ್, ಹ್ಯಾರಿ ಮುಂತಾದ ಓದುಗರಿದ್ದರು.
ಕನ್ನಡಕ್ಕೊದಗಿದ ಈ ಶೂನ್ಯವನ್ನು ತುಂಬಲು ಪೀಟರ್ ಪಿಕಾರ್ಡೊ, ಚೌರಪ್ಪನವರ ಮಗ ಜಾರ್ಜ್, ರೇಲ್ವೆ ಚಾಲಕ ಅರುಳಪ್ಪ, ಸುಬೇದಾರಪಾಳ್ಯದ ಅಂತೋಣಪ್ಪ ಮುಂತಾದವರು ಮುಂದೆ ಬಂದರು.

ಕಾಮೆಂಟ್‌ಗಳಿಲ್ಲ: