ಶುಕ್ರವಾರ, ಜೂನ್ 28, 2013

ಅನುವಾದ

ಅನುವಾದಗಳಲ್ಲಿ ಹೆಚ್ಚಿನವರು ಇಂಗ್ಲಿಷ್ ಪದಗಳಿಗೆ ಸಂವಾದಿಯಾಗಿ ಸಂಸ್ಕೃತ ಪದಗಳನ್ನು ಕೊಟ್ಟುಬಿಡುತ್ತಾರೆ. ಕನ್ನಡ ಪದಗಳಿಗಿಂತ ಅವು ಹೆಚ್ಚಿನ ಮರ್ಯಾದೆ ಗೌರವ ತಂದುಕೊಡುತ್ತದೆಂಬುದು ಅವರ ವಾದ. ಅದು ಹೇಗೆಂದರೆ, WIFE ಎಂಬುದನ್ನು ಅವರು ಪತ್ನಿ/ಭಾರ್ಯೆ ಎಂಬುದಾಗಿ ಅನುವಾದಿಸುತ್ತಾರೆ. ಹೆಂಡತಿ ಎಂದು ಬರೆದರೆ ಗಂಡನ ಗೌರವ ಕಡಿಮೆಯಾಗುತ್ತದೆಂಬ ಭಾವನೆಯಿರಬಹುದು, ಪತ್ನಿ ಎಂದು ಬರೆದರೆ ಗಂಡ ಹೆಂಡತಿ ಇಬ್ಬರಿಗೂ ಮರ್ಯಾದೆ ಎಂದೂ ಕೂಡಾ ಇರಬಹುದೇನೋ? ಇಂತಹ ಅನುವಾದವನ್ನು ಒಪ್ಪಿಕೊಳ್ಳಲೇಬೇಕು ಎಂಬಂತ ಅನಿವಾರ್ಯತೆ ಇಂದು ಸಾರ್ವತ್ರಿಕವಾಗಿಬಿಟ್ಟಿದೆ.
ಹೀಗೆ ನಾವು ಕನ್ನಡದ್ದೇ ಆದ ಮೂಡಣ ಪಡುವಣಗಳನ್ನು ಬಿಟ್ಟು ಪೂರ್ವ ಪಶ್ಚಿಮ ಎಂದು ಬಳಸುತ್ತಿದ್ದೇವೆ. ಈ ನಿಟ್ಟಿನಲ್ಲಿ ತಮಿಳರ ಭಾಷಾಭಿಮಾನ ಅನುಕರಣೀಯ. RADIOಗೆ ನಮ್ಮವರು ಆಕಾಶವಾಣಿ ಎಂದು ಹೆಸರಿಟ್ಟರೇನೋ ಸರಿಯೇ, ಆದರೆ ತಮಿಳರು ಅದನ್ನು ವಾನ್ (ಆಗಸ) ಉಲಿ (ವಾಣಿ) ಎಂದರೆ ವಾನುಲಿ ಎಂದು ಕರೆದರು. ಆಮೇಲೆ ನಮ್ಮ ಕೆಲ ಕೇಂದ್ರಗಳೂ ಬಾನುಲಿ ಎಂದು ಕರೆದುಕೊಂಡವು ಎಂಬುದು ಹಳೆಕತೆ. ನಮ್ಮಲ್ಲೇ TEST BED ಎಂಬುದನ್ನು ನಮ್ಮ ಸ್ನೇಹಿತರೊಬ್ಬರು ಪರೀಕ್ಷಾತಲ್ಪ ಎಂಬುದಾಗಿ ಅನುವಾದಿಸಿದ್ದರು. ಅವರು ಪರೀಕ್ಷೆ ನಡೆಸುವ ಹಾಸಿಗೆ ಎಂದು ಮಾಡಬೇಕಿತ್ತು. ಆಗ ಜನರು ಹಾಸಿಗೆಯ ಮೇಲೆ ಅದೆಂಥ ಪರೀಕ್ಷೆ ಎಂದು ಕೇಳುತ್ತಿದ್ದರು. ಅದು ಕಂಡಿತ ನಗೆಪಾಟಲಿನ ವಿಷಯ. ಅದಕ್ಕೇ ಸುಸಂಸ್ಕೃತರಾದ ಅವರು ಸಂಸ್ಕೃತದ ಮರೆಹೊಕ್ಕು ತಲ್ಪ ಎಂದದ್ದು. ಪದಶಃ ಅನುವಾದ ಮಾಡಿದರೆ ಆಗೋದೇ ಹೀಗೆ.
ಟೆಸ್ಟ್ ಬೆಡ್ ಎಂಬ ಪದವನ್ನು ನಿಘಂಟು ನೋಡಿ ಅರ್ಥ ಹುಡುಕದೆ ಅದು ಬಳಕೆಯಾಗುತ್ತಿರುವ ಜಾಗ ಎಂಥದು, ಅಲ್ಲೇನು ಕೆಲಸ ನಡೆಯುತ್ತದೆ ಎಂದು ಅರಿತರೆ ಅನುವಾದ ಸಲೀಸು. ವಿಮಾನಕ್ಕೆ ಇಂಜಿನನ್ನು ಅಳವಡಿಸುವ ಮುನ್ನ ಅದು ಹಾರಾಟಕ್ಕೆ ಯೋಗ್ಯವೇ ಎಂದು ಪರೀಕ್ಷಿಸುವುದು ಈ ಟೆಸ್ಟ್ ಬೆಡ್ಡಿನಲ್ಲಿಯೇ. ಅಂದ ಮೇಲೆ ವಿಮಾನದ ಎಲ್ಲ ಮಾನಕಗಳನ್ನೂ ನೆಲದಲ್ಲಿಯೇ ಅಳವಡಿಸಿ ಅದಕ್ಕೆ ತಕ್ಕಂತೆ ಯಂತ್ರವು ವರ್ತಿಸುತ್ತಿದೆಯೇ ಎಂದು ಒರೆಗೆ ಹಚ್ಚಿ ನೋಡುವುದು. ಆದ್ದರಿಂದ ನಾನು TEST BED ಎಂಬುದನ್ನು ’ಒರೆಪೀಠ’ ಎಂದು ಕರೆದೆ. ಜನ ಅದನ್ನು ಒಪ್ಪಿಕೊಂಡಿದ್ದಾರೆ.
ಈಗ ನಾವಿರುವುದು ಇಂಟರ್ ನೆಟ್ ಕಾಲದಲ್ಲಿ. ಇಂಟರ್ನೆಟ್ ಎಂಬ ಪದವನ್ನಾದರೂ ನಾವು ಕನ್ನಡದ ಜಾಯಮಾನಕ್ಕೆ ತಕ್ಕಂತೆ ರೂಪಿಸಬೇಕಿತ್ತು. ಆದರೆ ಅದು ಅಂತರಜಾಲ ಎಂಬುದಾಗಿ ಬಳಕೆಗೆ ಬಂದುಬಿಟ್ಟಿತು. INTERNATIONAL ಎಂಬುದನ್ನು ಅಂತರ ರಾಷ್ಟ್ರೀಯ ಎಂಬುದಾಗಿ ಬಳಸಿಕೊಂಡು ಬಂದುಬಿಟ್ಟಿದ್ದೇವೆ. ಅದೇ ನೇರದಲ್ಲಿ INTERNET ಬಳಸಿದ ಮೊದಲಿಗರು ಮೊದಲ ಪದಕ್ಕೆ ಅಂತರ ಎಂದು ಅನ್ವಯಿಸಿದರು. ಇನ್ನು ಎರಡನೇ ಪದ NET ಎಂಬುದನ್ನು ಬಲೆ ಎನ್ನಬಹುದಾಗಿತ್ತಲ್ಲವೇ? ಇಲ್ಲೂ ಮತ್ತೆ ಸಂಸ್ಕೃತಕ್ಕೆ ಜೀತಗೈಯುವುದು ಸರಿಯೇ?
ಮೊನ್ನೆಮೊನ್ನೆ ಕನ್ನಡದ ಕೋಟ್ಯಾಧಿಪತಿಯಲ್ಲಿ TRAIN ಎನ್ನಲು ಕನ್ನಡ ಪದವೇನು ಎಂದು ಕೇಳಿ ಅದಕ್ಕೆ ಉತ್ತರವನ್ನೂ ಹೇಳಿದರು. ಅದು ’ಧೂಮ್ರಶಕಟ’ಅಂತೆ. ಅಲ್ಲಪ್ಪಾ ನಾವು ಚಿಕ್ಕ ಹುಡುಗರಿದ್ದಾಗಲೇ TRAIN ಗೆ ಉಗಿಬಂಡಿ ಎಂದು ಕರೆದಿದ್ದು ಸಾಮಾನ್ಯವಾಗಿತ್ತು. ಉಗಿಯ ಅಥವಾ ಹಬೆಯ ಶಕ್ತಿಯಿಂದ ಓಡುವ ಬಂಡಿ. ಕೈಲಾಸಂ ಹೇಳುವಂತೆ ಎತ್ತು ಕುದುರೆ ಇಲ್ಲದೆ ಗಾಡಿ. ಈಗ ಹಬೆಯ ಬಂಡಿ ಇಲ್ಲ, ಏನಿದ್ದರೂ ಡೀಸೆಲ್ ಅಥವಾ ವಿದ್ಯುತ್ತಿನಿಂದ ಚಲಿಸುವ ರೈಲು. ಆದರೆ ನಮ್ಮ ಬಂಡಿಯನ್ನು ನಾವು ಶಕಟ ಎನ್ನುವ ಸಂಕಟವಾದರೂ ಏಕೆ?
CRECHE ಅನ್ನು ಶಿಶುಪಾಲನ ಕೇಂದ್ರ ಎಂದು ಬರೆದಿರುವುದನ್ನು ನೋಡಿದ್ದೇವಲ್ಲವೇ? ಅದೂ ಸಹ ಇಂತಹುದೇ ವಿಪರೀತ ಬುದ್ಧಿಯ ಅನುವಾದ ಎನ್ನಬಹುದು. ಉದ್ಯೋಗಸ್ಥ ಮಹಿಳೆಯರು ತಮ್ಮ ಮಕ್ಕಳನ್ನು ಅಂದರೆ ಎಳೆಯ ಕೂಸುಕಂದಮ್ಮಗಳನ್ನು ಆರೈಕೆಗಾಗಿ ಬಿಟ್ಟುಹೋಗುವ ಮನೆಯನ್ನು ಚಿಕ್ಕದಾಗಿ ಕೂಸಿನಮನೆ, ಕಂದಕುಟೀರ, ಮಕ್ಕಳಾರೈಕೆ ಎನ್ನಬಹುದಲ್ಲ? ಶಿಶುಪಾಲನ ಕೇಂದ್ರ ಅನ್ತಲೇ ಯಾಕೆ, ಶಿಶುಪಾಲನಿಗಿಂತಲೂ ದುರ್ಯೋಧನ ತನ್ನ ಮಕ್ಕಳ ಮೇಲೆ ಪ್ರೀತಿ ಹೊಂದಿದ್ದವನೆಂದು ರನ್ನನ ಗದಾಯುದ್ಧದಲ್ಲಿ ಓದಿದ್ದೇವೆ. ತಂದೆಗೆ ಮಗನಾದವನು ಎಳ್ಳುನೀರು ಬಿಡಬೇಕಾದುದು ಧರ್ಮ, ಆದರೆ ನನಗಿಂತ ಮೊದಲು ನನ್ನ ಮಗ ಯುದ್ಧದಲ್ಲಿ ಮಡಿದು ನಾನೇ ಅವನಿಗೆ ತರ್ಪಣ ಬಿಡುವಂತಾಯಿತೇ ಎಂದು ಹಲುಬುತ್ತಾನೆ. ಆದ್ದರಿಂದ ಶಿಶುಪಾಲನ ಕೇಂದ್ರ ಎನ್ನುವ ಬದಲು ದುರ್ಯೋಧನ ಕೇಂದ್ರ ಎಂದೇಕೆ ಕರೆಯಬಾರದು? ಹಾಗೆಯೇ ಕೆಲವು ಸ್ಥಳಗಳನ್ನು ಕೀಚಕ ಕೇಂದ್ರ ಎಂದೂ ಕರೆಯೋಣ. ಇರಲಿ, ಮತ್ತೆ ಇಂಟರ್‌ನೆಟ್ ಗೆ ಬರೋಣ. ಈಗಾಗಲೇ ಕೆಲ ಕನ್ನಡಿಗರು ಇದನ್ನು ಮಿನ್ ಬಲೆ ಎಂದು ಕರೆದಿದ್ದಾರೆ. ಮಿಂಚಿನ ವೇಗದಲ್ಲಿ ಬೇಕಾದ್ದನ್ನು ತೆರೆದು ತೋರುವ ಇಂಟರನೆಟ್ಟಿಗೆ ಮಿಂಬಲೆ ತುಂಬಾನೇ ಸರಿಹೊಂದುವ ಹೆಸರಾಗಿದೆ. ನಿಧಾನಗತಿಯ ನಮ್ಮ ಅಂಚೆ ವಿಧಾನಕ್ಕಿಂತ ಮಿಂಚಿನ ಸಂಚಾರದ ಅಂಚೆಯಾದ ಈ-ಮೇಲ್ ಅನ್ನು ಮಿನ್ನಂಚೆ ಎಂದು ಕರೆದು ಅದು ಚಲಾವಣೆಗೆ ಬರುತ್ತಲಿದೆ. ಹಾಗೆಯೇ ಮೊಬೈಲ್ ದೂರವಾಣಿಗೆ ಜಂಗಮವಾಣಿ ಎಂಬ ಪ್ರಯೋಗವೂ ಜನಪ್ರಿಯವಾಗಿದೆ.
ಅದೇ ರೀತಿ ನಮ್ಮ ದೈನಂದಿನ ಬಳಕೆಯ ಇಂಗ್ಲಿಷ್ ಪದಗಳಿಗೆ ಕನ್ನಡದ್ದೇ ಆದಂತಹ ಪದಗಳನ್ನು ಹುಡುಕಿ ಬಳಸಿ ಜನಪ್ರಿಯಗೊಳಿಸೋಣ.

3 ಕಾಮೆಂಟ್‌ಗಳು:

ವಿ.ರಾ.ಹೆ. ಹೇಳಿದರು...

ಹೌದು. ಸುಲಭವಾದ ಜನಬಳಕೆಯಲ್ಲಿರುವ ಪದಗಳನ್ನು ಬಳಸಬೇಕು. ಕೆಲವು ಸಂಸ್ಕೃತ ಪದಗಳೂ ಜನಬಳಕೆಯಲ್ಲಿ ಸೇರಿಹೋಗಿರುವುದರಿಂದ ಬಳಕೆ ತಪ್ಪಲ್ಲ. ಆದರೆ ಅಲ್ಲಿ ಒಳ್ಳೆಯ ಕನ್ನಡ ಪದವಿದ್ದಾಗಲೂ ಸುಮ್ಮನೇ 'ಸ್ಟ್ಯಾಂಡರ್ಡ್'ಗೋಸ್ಕರ ಅಪರಿಚಿತ ಪದಗಳನ್ನು ಬಳಸಿ ಕಷ್ಟ ಮಾಡುವುದು ಸರಿಯಲ್ಲ. ಉಗಿಬಂಡಿಯನ್ನು ಧೂರ್ಮಶಕಟ ಮಾಡುವವರ ಬುದ್ಧಿ ಸರಿಯಾಗಲಿ.

ಪಂಡಿತಾರಾಧ್ಯ ಹೇಳಿದರು...

ಪ್ರಿಯ ಮರಿ.ಜೊಸೆಫ಼್,
ನಿಮ್ಮ ಲೇಖನ ಓದಿದೆ. ಕನ್ನಡದಲ್ಲಿ ಕನ್ನಡ ಪದಗಳನ್ನು ಅಂಕಿಗಳನ್ನೂ ಬಳಸಿ ಎನ್ನುವ.ವಿಲಕ್ಷಣ ಸ್ಥಿತಿಯಲ್ಲಿ ನಾವಿದ್ದೇವೆ. ಪ್ರತಿಯೊಂದು ಕಾಲ, ದೇಶ ಸಮಾಜಗಳಿಗೆ ಅನುಗುಣವಾದ ಬೇರೆ ಬೇರೆ ಕನ್ನಡಗಳು ಬಳಕೆಯಲ್ಲಿವೆ. ಎಲ್ಲರೂ.ಒಪ್ಪಿಕೊಂಡ ಯಾರೊಬ್ಬರದೂ ಅಲ್ಲದ ಸಾಮಾನ್ಯ ಕನ್ನಡವೇ ಶಿಷ್ಟ ಕನ್ನಡ. ಅದು ಯಾವ ಒಂದು ಅಡುಮಾತಿನ ಕನ್ನಡವಾಗಿರದೆ ಬರವಣಿಗೆಯಲ್ಲಿ ಮಾತ್ರ ಬಳಸುವ ರೂಪಗಳನ್ನೂ ಒಳಗೊಂಡಿರುತ್ತದೆ. ಈ ವ್ಯತ್ಯಾಸದ ಅರಿವು ಇದ್ದರೆ ಅಡು ಮಾತ ಬರವಣಿಗೆಯ ಬಗ್ಗೆ ಗೊಂದಲವಿರುವುದಿಲ್ಲ.ನೀವು ಉದಾಹರಿಸಿರುವ ಟೆಸ್ಟ್ ಬೆಡ್ ಗೆ ನಿರ್ದಿಷ್ಟ ವೈಮಾನಿಕ ಕ್ಷೇತ್ರದ ಬಳಕೆಯ ವೈಸಿಷ್ಟ್ಯವಿದೆ. ಾದು ನಿತ್ಯ ಬಳಕೆಯ ಪದವಲ್ಲ. ಅದನ್ನು ಪರೀಕ್ಷೆಯ ಕಣ ಎನ್ನಬಹುದು. ಪರೀಕ್ಷಾ ಕಣ ಎಂದರೆ ಒಂದು ಸಂಸ್ಕೃತ ಪದ ಇನ್ನೊಂದು ಕನ್ನಡ ಪದವಾಗಿ ಹಿತವೆನಿಸುವುದಿಲ್ಲ. ಎರಡೂ ಕನ್ನಡ ಪದಗಳು ಅಥವಾ ಎರಡೂ ಸಂಸ್ಕೃತ ಪದಗಳಾಗಿರುವುದು ಹಿತವೆನಕಸುತ್ತದೆ. ಅಂತರ ಎಂದರೆ ಎರಡು ಅಥವಾ ಹೆಚ್ಚು ಗಣಕಗಳ, ಜಾಲಗಳ 'ನಡುವೆ' ಎಂದು ಅರ್ಥ. ಅದರ ಜೊತೆ ಸಂಸ್ಕೃತದ ಜಾಲ ಪದವೇ ಇರುವುದು ಹಿತವೆನಿಸುತ್ತದೆ. ಒರೆ ಮತ್ತಿ ಕಲ್ಲು ಎರಡೂ ಕನ್ನಡ ಪದಗಳು. ಆದ್ದರಿಂದ ಒರೆಗಲ್ಲು ಹಿತವಾದ ಪದ. ಆದರೆ, ಒರೆ ಜೊತೆ ಸಂಸ್ಕೃತದ ಪೀಠ ಸೇರಿಸಿದರೆ ಒರೆಪೀಠ ಹಿತವೆನಿಸುವುದಿಲ್ಲ. ಇಂಥವನ್ನು ಅರಿ ಸಮಾಸದ ಬ್ಗಗೆಯ ರೂಪಗಳು ಎನ್ನುತ್ತಾರೆ.ಹಾಗೆ ಮಾಡಬೇಡಿ. ಪ್ರತಿಯೊಂದು ಭಾಷೆಗೂ ಅದರ ಜಾಯಮಾನವಿರುತ್ತದೆ. ಅದನ್ನು ತಿಳಿದು ಬಳಸಿದರೆ ಹಿತವೆನಿಸುತ್ತದೆ. ಅಂತರ ಜಾಲವನ್ನು ಕನ್ನಡದಲ್ಲಿ ಬಳಕೆಯಲ್ಲಿರುವ ಪದಗಳು. ಅವನ್ನು ಮಿಂಬಲೆ ಎಂದು ಕೆಲವರು ಅನುವಾದಿಸಿದ್ದಾರೆ. ಅದು ಅಂತರ ಜಾಲವಾಗುವುದಿಲ್ಲ.ವಿದ್ಯುನ್ಮಾನ ಜಾಲ ಎಂದಾಗುತ್ತದೆ. ಅಂತರ ಜಾಲ ಎನ್ನುವುದನ್ನು ಎಲೆಕ್ಟ್ರಾನಿಕ್ ನೆಟ್ ಎಂದು ಯಾರೂ ಬಳಸುವುದಿಲ್ಲ. ಯೋಚಿಸಿ.ತಪ್ಪು ಮಾದರಿಗಳನ್ನು ಆದರ್ಶವಾಗಿ ಸ್ವೀಕರಿಸಿರುವುದನ್ನು ಬಿಟ್ಟು ಸ್ವತಂತ್್ವಾಗಿ ಯೋಚಿಸಿ. ನಮಸ್ಕಾರ.
ಪಂಡಿತಾರಾಧ್ಯ
ಕಮೆಂಟ್ ಎಂದರೇನು? ಕನ್ನಡ ಪದಗಳಿಗೆ ಬರವಿಲ್ಲ

cmariejoseph.blogspot.com ಹೇಳಿದರು...

ಅರಿ ಸಮಾಸದ ಬಳಕೆ ಹಿತವಾದದ್ದಲ್ಲ ಎನ್ನುವ ನಿಮ್ಮ ಹೇಳಿಕೆ ಸರಿ. ಆದರೂ ಕನ್ನಡದ ಜಾಯಮಾನದಲ್ಲಿ ಅರಿಸಮಾಸವು ವಿರಳವೆಂಬಂತೆ ಬಳಕೆಯಲ್ಲಿ ಬಂದಿದೆಯೇನೋ ಎನಿಸುತ್ತದೆ. ಅದೇನೇ ಇರಲಿ ಅನುವಾದಗಳಲ್ಲಿ ವಿಷಯ ಮತ್ತು ಸಂದರ್ಭಕ್ಕೆ ತಕ್ಕಂತೆ ಪದಗಳನ್ನು ಕಟ್ಟುವಲ್ಲಿ ಹಾಗೂ ಅವುಗಳ ವಿಷಯ ನಿರ್ದುಷ್ಟತೆಯನ್ನು ತಿಕ್ಕಿ ತೀಡಿ ಒಪ್ಪಿಗೆ ನೀಡಲು ಪರಿಣಿತರ ಚರ್ಚಾವೇದಿಕೆಯ ಅಗತ್ಯವಂತೂ ಇದೆ.