ಶುಕ್ರವಾರ, ನವೆಂಬರ್ 20, 2015

ಬೆಳ್ಮಣ್ಣಿನ ಪವಾಡ

ಮರಿಯಳು ಬೆತ್ಲೆಹೇಮಿನ ಗೋಶಾಲೆಯಲ್ಲಿ ಅಸುಕಂದನಿಗೆ ಜನ್ಮವಿತ್ತು ಇನ್ನೂ ಒಂದೆರಡು ದಿನವಾಗಿರಲಿಲ್ಲ. ಪುಟ್ಟಮಗು ಯೇಸುವನ್ನು ಸಂಹರಿಸಲೆಂದು ಹೆರೋದನ ಸೈನಿಕರು ಬರುತ್ತಿದ್ದಾರೆಂದು ಜನರಾಡಿಕೊಳ್ಳುತ್ತಿದ್ದ ಮಾತು ಅವರಿಗೆ ಬರಸಿಡಿಲಿನಂತೆ ಕೇಳಿಸಿತು. ಜೋಸೆಫರು ಕೂಡಲೇ ದೂರಪ್ರಯಾಣಕ್ಕೆ ಕತ್ತೆಯೊಂದನ್ನು ಸಿದ್ಧಮಾಡಿ ಹಸಿಬಾಣಂತಿ ಮರಿಯಳನ್ನೂ ಎಳೆಗೂಸು ಯೇಸುವನ್ನೂ ಹೊರಡಿಸಿದರು. ಕತ್ತೆ ಇನ್ನೂ ನೂರು ಹೆಜ್ಜೆ ಹಾಕಿರಲಿಲ್ಲ, ಅಷ್ಟರಲ್ಲಿ ಚಳಿಗೋ ಏನೋ ಮಗು ಯೇಸು ಅಳತೊಡಗಿದ. ಮರಿಯಮ್ಮನವರು ಅಲ್ಲೇ ಮರಳ ದಿಬ್ಬದ ಮರೆಯಲ್ಲಿ ಕುಳಿತು ಯೇಸುಪಾಪುವಿಗೆ ಹಾಲೂಡಿಸತೊಡಗಿದರು. ಅಳು ನಿಲ್ಲಿಸಿದ ಯೇಸು ಒಂದು ಕ್ಷಣ ಈ ಕಡೆ ಕಣ್ಣು ಹಾಯಿಸಿದ. ಕಣ್ಣಿನಿಂದ ಹೊರಟ ಪ್ರಕಾಶದ ಜೊತೆಗೇ ಅವನ ಹಾಲು ತುಂಬಿದ ತುಟಿಯಿಂದ ಒಂದು ಹನಿ ನೆಲಕ್ಕೆ ಬಿತ್ತು. ಆ ಕ್ಷಣವೇ ಆ ನೆಲದ ಮಣ್ಣೆಲ್ಲ ಹಾಲಿನಂತೆ ಬೆಳ್ಳಗಾಯಿತು ಎಂದು ಐತಿಹ್ಯವಿದೆ. ಇಂದಿಗೂ ಆ ತಾಣದಲ್ಲಿ ನೆಲದ ಮಣ್ಣು ಹಾಲಿನ ಪುಡಿಯಂತೆ ಬೆಳ್ಳಗಿದೆ. ಬೆತ್ಲೆಹೇಮಿಗೆ ಹೋದ ಜನ ಚಿಟಿಕೆಯಷ್ಟು ಮಣ್ಣನ್ನು ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಾರೆ. ಕೆಲವರು ಮನೆಗೆ ಕೊಂಡೊಯ್ದು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯುತ್ತಾರೆ. ಅದ್ಭುತವೆಂದರೆ ಮನಃಶಾಂತಿ ಮನೋಲ್ಲಾಸಗಳಿಂದ ಅವರು ಪುಳಕಗೊಳ್ಳುತ್ತಾರೆ. ಅವರ ಕಷ್ಟಗಳು ತೀರಿ ಬೇಡಿಕೆಗಳು ಈಡೇರುತ್ತವೆ. ಇಲ್ಲಿ ತೋರಿಸಿರುವ ಚಿತ್ರ ಆ ಜಾಗದ ಘಟನೆಯನ್ನು ಸೂಚಿಸುತ್ತದೆ. ಅಲ್ಲಿ ಮಾರಾಟವಾಗುವ ಈ ಚಿತ್ರದಲ್ಲಿ ಕೆಳಗೊಂದು ದುಂಡಾದ ಭರಣಿ ಕಾಣುತ್ತದಲ್ಲವೇ? ಅದರಲ್ಲಿ ಅರ್ಧ ಚಮಚೆಯಷ್ಟು ಬಿಳಿಯ ಮಣ್ಣಿದೆ ನೋಡಿ. ಅದು ಈ ಸ್ಥಳದ ಪವಿತ್ರ ಮಣ್ಣು. ಪವಾಡಕರ್ತ ಯೇಸುಕ್ರಿಸ್ತ ಇಂದಿಗೂ ಪವಾಡಗಳನ್ನು ನಡೆಸುತ್ತಿದ್ದಾನೆನ್ನಲು ಒಂದು ಸಾಕ್ಷಿಯಿದು.
ಮಗುವಿಗೆ ಹಾಲೂಡಿಸುತ್ತಿರುವ ಮಹಿಳೆಯ ಚಿತ್ರವನ್ನು ಯಾರೂ ಪ್ರದರ್ಶಿಸುವುದಿಲ್ಲ. ಅದರಲ್ಲೂ ದೈವರೂಪಗಳಾದ ಸಂತ ಮೇರಿ ಮತ್ತು ಯೇಸುಕ್ರಿಸ್ತನ ಕುರಿತು ಹಾಗೆ ಮಾಡುವುದುಂಟೇ? ಜನಪದದಲ್ಲಿ ಎಲ್ಲವೂ ಸಾಧ್ಯ ಎಂಬಂತೆ ಈ ಚಿತ್ರ ಆ ತಾಣದಲ್ಲಿ ಮಾರಾಟಕ್ಕೆ ಲಭ್ಯವಿದೆ. ಆ ಪವಿತ್ರ ತಾಣಕ್ಕೆ ಭೇಟಿ ನೀಡಿದವರು ಸ್ಮರಣಿಕೆಯಂತೆ ಅದನ್ನು ಕೊಂಡೊಯ್ಯುತ್ತಾರೆ.

ಕಾಮೆಂಟ್‌ಗಳಿಲ್ಲ: