ಗುರುವಾರ, ಫೆಬ್ರವರಿ 21, 2008

ಸಂಸ್ಕಾರದ ವಿವಾದ

ಅನಂತಮೂರ್ತಿಯವರು ಅತ್ಯಂತ ಪ್ರಗತಿಪರರಾಗಿದ್ದೂ ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ನೇರವಾಗಿ ಸಂದೇಶ ಕೊಡಲು ಹೋಗದೇ ಕನ್ನಡಿ ತೋರಿದವರು. ಕ್ರಿಶ್ಚಿಯನ್ ಹೆಣ್ಣನ್ನು ಮದುವೆಯಾಗಿರುವುದರಿಂದ ತಮ್ಮ ಸಂಸ್ಕಾರ ಹೇಗಿದ್ದೀತು ಎಂಬುದರ ಸುಳಿವನ್ನು ಇಲ್ಲಿ ನೀಡಿದ್ದಾರೆಂದು ಕುಹಕಿಗಳು ಆಡಿಕೊಂಡರಂತೆ. ಪರ್ವ ಬರೆದ ಭೈರಪ್ಪ ಪರ್ವರ್ಟೆಡ್ ಭೈರಪ್ಪ ಎನ್ನಲಿಲ್ಲವೇ ಹಾಗೆ. ತಮ್ಮ ಸಂಸ್ಕಾರ ಕಾದಂಬರಿಯಲ್ಲಿ ಅನಂತಮೂರ್ತಿಯವರು ಇಡೀ ವ್ಯವಸ್ಧೆಗೇ ಸಂಸ್ಕಾರ ಆಗಬೇಕಿದೆ ಎಂಬುದನ್ನು ಧ್ವನಿಸುತ್ತಾರೆ.
ಪ್ರಾಣೇಶಾಚಾರ್ಯ ಹಾಗೂ ನಾರಾಯಣಪ್ಪ ಈ ಕೃತಿಯಲ್ಲಿ ಎರಡು ಧೃವಗಳಾಗಿ ನಿಲ್ಲುತ್ತಾರೆ. ಪ್ರಾಣೇಶಾಚಾರ್ಯ ಧರ್ಮಭೀರು ಹಾಗೂ ಜನತೆಗೆ ಬುದ್ಧಿ ಹೇಳಬಲ್ಲ ಸಾತ್ವಿಕ. ಆದರೆ ನಾರಾಯಣಪ್ಪ ಎಲ್ಲ ಧರ್ಮಕಟ್ಟಲೆಗಳನ್ನು ಧಿಕ್ಕರಿಸಿ ಚಂದ್ರಿಯನ್ನು ಮಡಗಿಕೊಂಡ ಲಂಪಟ. ಪ್ರಾಣೇಶಾಚಾರ್ಯನ ಪುರಾಣಕ್ಕಿಂತಲೂ ಜನಗಳಿಗೆ ನಾರಾಯಣಪ್ಪನ ಕ್ಯಾಸೆಟ್ ಮೋಡಿಯೇ ಹುಚ್ಚು ಹಿಡಿಸುತ್ತದೆ. ಹೀಗೆ ನಾರಾಯಣಪ್ಪ ವಾಸ್ತವದ ಸಂಕೇತವಾಗುತ್ತಾನೆ.
ನಾರಾಯಣಪ್ಪ ಸತ್ತ ಮೇಲೆ ಚಂದ್ರಿ ಬಂದು ಆತನಿಗೆ ಸಂಸ್ಕಾರ ಮಾಡಬೇಕೆಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಪ್ರಾಣೇಶಾಚಾರ್ಯ ಹಿಂಜರಿದರೂ ಕೊನೆಗೆ ಹಾಸಿಗೆ ಹಿಡಿದಿರುವ ತನ್ನ ಪತ್ನಿಗಾಗಿ ಚಂದ್ರಿಯ ನೆರವನ್ನು ಪಡೆಯಬೇಕಾಗುತ್ತದೆ. ಚಂದ್ರಿಯ ಸಂಗದಲ್ಲಿ ಆತ ನೆಲದ ವಾಸನೆ ಏನೆಂದು ಅರಿಯುತ್ತಾನೆ ಹಾಗೆಯೇ ಪ್ರಾಣೇಶಾಚಾರ್ಯನ ಸನಿಹದಲ್ಲಿ ಆಕೆ ಆಗಸದ ಸಪ್ತರ್ಷಿ ಮಂಡಲವನ್ನು ದರ್ಶಿಸುತ್ತಾಳೆ. (ಇದು ಅಶ್ಲೀಲವೆನಿಸಿದರೆ ಓದಬೇಡಿ, ಅಷ್ಟೇ) ಈ ಕ್ರಿಯೆ ನಡೆದ ಮೇಲೆ ಪ್ರಾಣೇಶಾಚಾರ್ಯನಿಗೆ ತಾನು ತಪ್ಪು ಮಾಡಿದ ಅರಿವುಂಟಾಗಿ ಅಲ್ಲಿ ನಿಲ್ಲದೆ ಓಡಿಹೋಗುತ್ತಾನೆ. ಓಡಿ ಹೋದವನು ಹೋಟೆಲಿಗೆ ನುಗ್ಗಿ ಕಾಫಿ ಹೀರುತ್ತಾನೆ. ಮಡಿವಂತ ಬ್ರಾಹ್ಮಣರು ಹೋಟೆಲಿನಲ್ಲಿ ಕಾಫಿ ಕುಡಿಯುವುದೆಂದರೆ ನಿಷಿದ್ಧವೆನಿಸಿದ್ದ ಆ ಕಾಲದಲ್ಲಿ ಪ್ರಾಣೇಶಾಚಾರ್ಯನ ಕ್ರಿಯೆ ಬದಲಾವಣೆಯ ಸಂಕೇತವಾಗಿ ಕಾಣುತ್ತದೆ.
ಇಲ್ಲಿ ನಾರಣಪ್ಪನ ಹೆಣದ ರೂಪದಲ್ಲಿ ನಮ್ಮ ದೇಶದ ಒಟ್ಟು ವ್ಯವಸ್ಥೆಯೇ ಕೊಳೆತು ನಾರುತ್ತಿದೆ. ಅದಕ್ಕೆ ಸಂಸ್ಕಾರ ಕೂಡಲೇ ಆಗಬೇಕು. ವ್ಯವಸ್ಥೆಯ ಅಂಗವಾದ ಚಂದ್ರಿಯಂಥ ಸೂಳೆಯರೂ ಸಂಸ್ಕಾರಕ್ಕಾಗಿ ಹಪಹಪಿಸುವಾಗ ಹೊಲಸಿನಲ್ಲೇ ಮುಳುಗಿರುವ ಕರ್ಮಠರು ಶಾಸ್ತ್ರಗಳ ತೌಲನಿಕ ಮೀಮಾಂಸೆಯಲ್ಲಿ ತೊಡಗಿದ್ದಾರೆ. ಆಗ ಅನ್ಯಧರ್ಮದ ಅನ್ಯಸಂಸ್ಕೃತಿಯ ಸಜ್ಜನನೊಬ್ಬ ಅವತರಿಸಿ ಸಂಸ್ಕಾರಗೈಯುವ ಪ್ರಕ್ರಿಯೆಯನ್ನು ಗಮನಿಸಿ ಸಮಾಜ ಪರಿವರ್ತನೆಗೆ ಇಂಬುಗೊಡಬೇಕಾದ ಶಿಕ್ಷಕರು ನೆಲದವಾಸನೆ ಮತ್ತು ನಕ್ಷತ್ರದರ್ಶನಗಳ ಜುಗಲಬಂದಿಯಲ್ಲಿ ತೊಡಗಿರುವುದೇ ನಮ್ಮ ಶಿಕ್ಷಣವ್ಯವಸ್ಥೆಯ ದುರಂತ.

ಕಾಮೆಂಟ್‌ಗಳಿಲ್ಲ: