ಶುಕ್ರವಾರ, ಫೆಬ್ರವರಿ 22, 2008

ಮತಾಂತರ

ಮತಾಂತರದ ಕುರಿತಂತೆ ಇತ್ತೀಚೆಗೆ ಪತ್ರಿಕೆಗಳಲ್ಲಿ ಬಹಳಷ್ಟು ಸುದ್ದಿಗಳು ಪ್ರಕಟವಾಗುತ್ತಿವೆ. ಕೆಲವರು ಭಾವಿಸುವಂತೆ ಕ್ರೈಸ್ತರು ಜಗತ್ತಿನಲ್ಲಿ ತಮ್ಮ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಮತಾಂತರ ನಡೆಸುತ್ತಿದ್ದಾರೆ ಎನ್ನುವುದು ಸರಿಯಲ್ಲ. ಕ್ರೈಸ್ತಧರ್ಮದ ವ್ಯಾಖ್ಯೆಯಲ್ಲಿ ಕ್ರಿಸ್ತತತ್ವಗಳನ್ನು ಜಗತ್ತಿನೆಲ್ಲೆಡೆ ಸಾರಬೇಕೆನ್ನುವ ಕಾಳಜಿ ಇದೆಯೇ ಹೊರತು ಮತಾಂತರ ಮಾಡಬೇಕು ಎಂದಿಲ್ಲ. ಹಣದ ಎದುರಲ್ಲಿ, ಕತ್ತಿಯ ತುದಿಯಲ್ಲಿ ನಡೆಯುವ ಮತಾಂತರ ಮತಾಂತರವೇ ಅಲ್ಲವೆಂದು ಕ್ರೈಸ್ತಧರ್ಮ ಹೇಳುತ್ತದೆ. ಧಾರ್ಮಿಕತೆ ಗೊತ್ತಿಲ್ಲದ ರಾಜಕೀಯ ನಾಯಕರು ತಮ್ಮ ಸ್ವಲಾಭಕ್ಕಾಗಿ ಆ ರೀತಿ ಮಾಡಿದ್ದು ಇತಿಹಾಸದ ದುರಂತ. ಆದರೆ ಕ್ರೈಸ್ತಧರ್ಮ ಅದನ್ನು ಮಾನ್ಯಗೊಳಿಸಲಿಲ್ಲವೆಂಬುದೂ ಅಷ್ಟೇ ಸತ್ಯ. ವ್ಯಕ್ತಿಯೊಬ್ಬ ಪೂರ್ಣ ಪರಿವರ್ತನೆಗೊಂಡು ತಾನೇ ತಾನಾಗಿ ಕ್ರೈಸ್ತನಾಗುತ್ತೇನೆಂದು ಮುಂದೆ ಬಂದರೂ ಚರ್ಚು ಒಮ್ಮಿಂದೊಮ್ಮೆಲೇ ಕ್ರೈಸ್ತದೀಕ್ಷೆ ಕೊಟ್ಟುಬಿಡುವುದಿಲ್ಲ. ಅದಕ್ಕೆ ತನ್ನದೇ ಆದ ರೀತಿನೀತಿಗಳಿವೆ. ಇದನ್ನರಿಯದ ಮೂಢಜನರು ಚರ್ಚಿಗೆ ತೆರಳಿ ತೀರ್ಥ ಪ್ರೋಕ್ಷಣೆಯಾದ ಕೂಡಲೇ ತಾವು ಕ್ರೈಸ್ತರಾದೆವೆಂದು ಭಾವಿಸಿಕೊಳ್ಳುತ್ತಾರೆ. ಇತರರೂ ಇದು ಹೌದೆಂದು ತಿಳಿದುಕೊಳ್ಳುತ್ತಾರೆ. ಕ್ರೈಸ್ತಧರ್ಮವೆಂಬುದು ಕೆಲವರಿಗೆ ವಂಶಪಾರಂಪರ್ಯದ ಬಳುವಳಿ ಮತ್ತೆ ಕೆಲವರಿಗೆ ಅದು ಒಂದು ದಿವ್ಯ ಅನುಭವ.

ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು, ನಿನ್ನ ಶತ್ರುಗಳನ್ನೂ ಪ್ರೀತಿಸು, ನಿನಗೆ ಕೆಡಕು ಮಾಡುವವನನ್ನು ಕ್ಷಮಿಸು, ದೊರೆಯಂತೆ ಭರ್ತ್ಸನೆ ತೋರದೆ ಸೇವಕನಂತೆ ದೀನನಾಗಿರು, ಬೇರೆಯವರ ತಪ್ಪನ್ನು ಎತ್ತಿ ತೋರುವ ಮೊದಲು ನಿನ್ನ ಕಣ್ಣನ್ನು ಸ್ವಚ್ಛಪಡಿಸಿಕೋ, ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಹೃದಯವನ್ನು ಪವಿತ್ರವಾಗಿಸಿಕೊಂಡವನು ದೇವರನ್ನು ಕಾಣುವನು ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ ಎಂಬುದು ಕ್ರೈಸ್ತಧರ್ಮದ ತಿರುಳು. ಈ ತತ್ವವನ್ನಾಚರಿಸಿದವನೇ ನಿಜಕ್ರೈಸ್ತ. ಕ್ರೈಸ್ತ ಎನಿಸಿಕೊಳ್ಳವುದು ಉದಾತ್ತ ಮನೋವಿಕಾಸದ ಪರಮಾವಧಿ. ಹಾಗೆ ನೋಡಿದರೆ ಮಹಾತ್ಮಗಾಂಧಿಯವರು ಒಬ್ಬ ಅಪ್ಪಟ ಕ್ರೈಸ್ತ. ಇದರರ್ಥ ಕ್ರಿಸ್ತನನ್ನು ಅರಿಯಲು ಚರ್ಚಿಗೇ ಹೋಗಬೇಕೆಂದಿಲ್ಲ. ವಿಪರ್ಯಾಸವೆಂದರೆ ನಮ್ಮ ಚರ್ಚಿನ ಎಷ್ಟೋ ಪಾದ್ರಿಗಳು ಬಿಪಪರು ಕ್ರೈಸ್ತರೇ ಅಲ್ಲ. ಶಾಲೆ ಆಸ್ಪತ್ರೆಗಳಲ್ಲಿ ಹಣ ಸುಲಿಯುವ ಮನುಷ್ಯತ್ವವಿಲ್ಲದ ಕ್ರೈಸ್ತ ಸಂನ್ಯಾಸಿನಿಯರೂ ಕ್ರೈಸ್ತರಲ್ಲ.

ಶತಮಾನಗಳ ಹಿಂದೆಯೂ ಚರ್ಚು ಹೀಗೆ ತನ್ನ ಮೇರೆ ಮಿರಿದಾಗ ಮಾರ್ಟಿನ್ ಲೂಥರನು ಬಂಡಾಯವೆದ್ದು ಚರ್ಚಿನ ಹುಳುಕುಗಳನ್ನು ಎತ್ತಿ ತೋರಿದ. ತರುವಾಯ ಚರ್ಚು ತನ್ನ ಆತ್ಮಶೋಧನೆ ನಡೆಸಿ ಸ್ವಜನಪಕ್ಷಪಾತವನ್ನೂ ರಾಜಕೀಯವನ್ನೂ ದೂರವಿಟ್ಟು ವಿಚಾರವಂತಿಕೆಗೆ ಹಾಗೂ ಪ್ರಗತಿಪರ ಧೋರಣೆಗೆ ಪಕ್ಕಾಗಿದೆ. ಇಂದು ಚರ್ಚು ಪವಿತ್ರಬೈಬಲ್ ಹಾಗೂ ತನ್ನದೇ ಆದ ನೀತಿಸಂಹಿತೆಗಳನ್ನು ಮುಂದಿಟ್ಟರೂ ನೆಲದ ನಿಯಮಗಳನ್ನೂ ವಿಜ್ಞಾನದ ಆವಿಷ್ಕಾರಗಳನ್ನೂ ಗೌರವಿಸುತ್ತಾ ಬರುತ್ತಿದೆ.

ಇನ್ನೂ ಕೆಲವರು ಯೂರೋಪ್ ಅಮೆರಿಕೆಗಳಲ್ಲಿರುವ ಎಲ್ಲರೂ ಕ್ರೈಸ್ತರೆಂದು ಭಾವಿಸಿದಂತಿದೆ. ಅಲ್ಲಿನ ಚರ್ಚುಗಳು ಹಾಳು ಸುರಿಯುತ್ತಿವೆ ಎಂಬ ಅಂಶ ಅವರಿಗೆ ತಿಳಿದಂತಿಲ್ಲ. ಅಲ್ಲಿನ ಜನ ಕ್ರೈಸ್ತಧರ್ಮಕ್ಕಾಗಿ ಬೇರೊಂದು ದೇಶದ ಮೇಲೆ ದ್ವೇಷ ಸಾಧಿಸುತ್ತಾರೆಂಬ ಅಥವಾ ಯುದ್ಧ ಸಾರುತ್ತಾರೆಂಬ ಮಾತು ಬಾಲಿಶವಾಗುತ್ತದೆ. ಏಕೆಂದರೆ ಎರಡು ಮಹಾಯುದ್ಧಗಳು ನಡೆದದ್ದು ರಾಜಕೀಯ ಹಿತಾಸಕ್ತಿಗಾಗಿ ಎಂಬುದು ಸರ್ವವೇದ್ಯ ಸಂಗತಿ. ಅಂತೆಯೇ ಅಮೆರಿಕದ ವಿಯೆಟ್ನಾಂ ಮೇಲಿನ ಯುದ್ಧವು ಜಗತ್ತಿನ ಪೂರ್ವಭಾಗದಲ್ಲಿ ಅದರ ಆಧಿಪತ್ಯ ಸ್ಥಾಪಿಸುವ ಹುನ್ನಾರವಾಗಿತ್ತು, ಇರಾಕಿನ ಮೇಲಿನ ದಾಳಿ ವ್ಯಾಪಾರೀ ಕಾರಣವಾಗಿತ್ತು ಹಾಗೂ ಆಫ್ಘನ್ ಮೇಲಿನ ದಾಳಿ ಸೇಡಿನ ಕ್ರಿಯೆಯಾಗಿತ್ತು. ಇವಾವುದಕ್ಕೂ ಚರ್ಚು ತನ್ನ ಆಶೀರ್ವಾದ ಹಸ್ತ ತೋರಿಲ್ಲ. ಇವಾವುದೂ ಧರ್ಮಯುದ್ಧಗಳ ಪರಿಧಿಗೆ ಬರುವುದಿಲ್ಲ.

ಕಾಮೆಂಟ್‌ಗಳಿಲ್ಲ: