ಸೋಮವಾರ, ಮಾರ್ಚ್ 17, 2008

ಬಿ ಎಲ್ ರೈಸ್

ಬಿ ಎಲ್ ರೈಸ್ ಅವರ ಅತಿ ದೊಡ್ಡ ವಿದ್ವತ್ಪೂರ್ಣ ಕೆಲಸವೆಂದರೆ ಪುರಾತತ್ವ ಇಲಾಖೆಯ ಪೂರ್ಣಕಾಲದ ಅಧಿಕಾರಿಯಾಗಿ ಹದಿನಾರು ವರ್ಷಗಳ ಕಾಲ ಹಳ್ಳಿಹಳ್ಳಿಗಳನ್ನೂ ಕಾಡುಮೇಡುಗಳನ್ನೂ ಅಲೆದು ೮೮೬೯ ಕನ್ನಡ ಶಾಸನಗಳನ್ನು ಹನ್ನೆರಡು ಸಂಪುಟಗಳಲ್ಲಿ “ಎಪಿಗ್ರಾಫಿಯಾ ಕರ್ನಾಟಿಕಾ” ಎಂಬ ಮಾಲಿಕೆಯಲ್ಲಿ ಪ್ರಕಟಿಸಿದ್ದು. ಕ್ರಿಸ್ತಶಕ ೧೮೬೦ರಿಂದ ೧೯೦೬ರವರೆಗೆ ಅವಿಶ್ರಾಂತವಾಗಿ ದುಡಿದ ಇವರು ತಮ್ಮ ೭೦ನೇ ವಯಸ್ಸಿನಲ್ಲಿ ನಿವೃತ್ತರಾಗಿ ಇಂಗ್ಲೆಂಡಿನ ಹ್ಯಾರೋ ಪಟ್ಟಣದಲ್ಲಿ ನೆಲೆನಿಂತರು. ಅವರು ಇಳಿವಯಸ್ಸಿನಲ್ಲಿರುವಾಗ ಲಂಡನ್ನಿನಲ್ಲಿ ನಡೆದ ವಿಶ್ವ ವಾಣಿಜ್ಯ ಮೇಳದಲ್ಲಿ ಮೈಸೂರು ಸಂಸ್ಥಾನದ ಮಳಿಗೆಯಲ್ಲಿ ನಮ್ಮ ಉತ್ಪನ್ನಗಳಾದ ಗಂಧದೆಣ್ಣೆ, ಕಬ್ಬಿಣ ಇತ್ಯಾದಿಗಳನ್ನು ಪ್ರದರ್ಶಿಸಲಾಗಿತ್ತು. ಅಲ್ಲಿಗೆ ಆಗಮಿಸಿದ ರೈಸ್ ಅವರು ಕನ್ನಡದಲ್ಲಿಯೇ ತಮ್ಮ ಸಂಭಾಷಣೆ ಆರಂಭಿಸಿದರು. ಮಳಿಗೆಯ ಪ್ರತಿನಿಧಿಗಳು ಇಂಗ್ಲಿಷಿನಲ್ಲಿಯೇ ಉತ್ತರಿಸುತ್ತಿದ್ದುದನ್ನು ಗಮನಿಸಿ ತಡೆದ ಅವರು “ದಯವಿಟ್ಟು ಕನ್ನಡದಲ್ಲಿ ಮಾತನಾಡಿ, ಎಷ್ಟು ಇಂಪಾದ ಭಾಷೆ ಅದು” ಎಂದರಂತೆ. ಇದು ಅವರ ಅನುಪಮ ಕನ್ನಡಪ್ರೀತಿಗೆ ಸಾಕ್ಷಿ.
ನಾನಂತೂ ಅವರನ್ನು ಬೆಂಗಳೂರಿಗ ಮೇಲಾಗಿ ಕನ್ನಡಿಗ ಎಂದೇ ಗುರುತಿಸುತ್ತೇನೆ. ನನ್ನ ಪ್ರಶ್ನೆಯಲ್ಲಿ ಅವರನ್ನು ವಿದೇಶೀ ಎಂದು ಸಂಬೋಧಿಸಿದ್ದೇನೆ, ಏಕೆಂದರೆ ನಾಡಪ್ರೇಮದಿಂದ ಅವರು ಏನೇ ಮಾಡಿದರೂ ನಮ್ಮ ದೇಶಸ್ಥರಿಗೆ ಅದು ಮತಾಂತರದ ಕ್ರಿಯೆಯಾಗಿ ತೋರುತ್ತದೆ ಅಥವಾ ಇಂಡಿಯಾವನ್ನು ಎಂದಾದರೊಂದು ದಿನ ತಮ್ಮ ಕಿಸೆಯಲ್ಲಿ ಹಾಕಿಕೊಂಡು ಓಡಿಹೋಗುವರೆಂಬಂತೆ ತೋರುತ್ತದೆ.
(ಕೆಂಪುಕಪ್ಪುಅದ್ವಾನಿ ಎಂಬ ರಾಜಕಾರಣಿ ಸ್ವತಃ ತಾವು ವಿದೇಶೀಯಾಗಿದ್ದರೂ ಇಂಡಿಯಾವು ತಮ್ಮದೆಂಬಂತೆ ವರ್ತಿಸುತ್ತಾರೆ. ಇಂಡಿಯಾದಲ್ಲಾಗುವ ಯಾವುದೇ ವಿಕೋಪವು ಅವರಿಗೆ ಪಾಕಿಸ್ತಾನದ ಕೈವಾಡ ಎಂಬಂತೆ ತೋರುತ್ತದೆ. ಇಂಡಿಯಾದ ಸೊಸೆಯಾಗಿ ಇಲ್ಲಿನ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ಒಬ್ಬ ಹೆಣ್ಣುಮಗಳು ಅವರಿಗೆ ಕನಸಿನಲ್ಲೂ ಕಾಡುತ್ತಾಳೆ. ಅದಕ್ಕಾಗಿಯೇ ಅವರು ವೋ ವಿಲಾಯ್ತೀ ಔರತ್ ಎಂದು ಆಗಾಗ್ಗೆ ಬಡಬಡಿಸುತ್ತಿರುತ್ತಾರೆ. ಈ ಮನೋಭಾವ ಇಂದು ನಮ್ಮ ದೇಶಸ್ಥರಲ್ಲಿ ಈಗೀಗ ಬಹಳವಾಗುತ್ತಿದೆ).

ಕಾಮೆಂಟ್‌ಗಳಿಲ್ಲ: