ಮಂಗಳವಾರ, ಡಿಸೆಂಬರ್ 9, 2008

ಒಂದು ಪವಿತ್ರಕಾರ್ಯ

ಮುಂಬೈಯಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿ ನಡೆದು ಹಿಂಸೆ ತಾಂಡವವಾಡಿತು. ಆದರೆ ಅದಕ್ಕಿಂತ ಹೆಚ್ಚಾಗಿ ನಮ್ಮ ಇಂಡಿಯಾ ದೇಶದ ಒಳ ಭಯೋತ್ಪಾದಕರಿಂದ ಒರಿಸ್ಸಾ ಮತ್ತು ಕರ್ನಾಟಕಗಳು ಹಿಂಸೆಯಿಂದ ಜರ್ಜರಿತಗೊಂಡವು. ಮುಂಬೈ ಭಯೋತ್ಪಾದಕರು ಧರ್ಮವನ್ನು ನೋಡದೆ ಹಿಂಸಿಸಿದರೆ ಈ ಒಳಗಿನ ಭಯೋತ್ಪಾದಕರು ಕ್ರೈಸ್ತರನ್ನೇ ಗುರಿಯಾಗಿಸಿಕೊಂಡು ಹಿಂಸಿಸಿದರು. ಇವರ ದೌರ್ಜನ್ಯಕ್ಕೆ ಅಮಾಯಕರು ಬಲಿಯಾಗಿ, ಹೆಂಗಸರು ಅಪಮಾನಿತರಾಗಿ, ಮಕ್ಕಳು ಅನಾಥರಾಗಿದ್ದಾರೆ. ಈ ಸಂತ್ರಸ್ತರಿಗಾಗಿ ನಮ್ಮ ಹೃದಯಗಳು ಮರುಗಿವೆಯಾದರೂ ನಾವು ಇವರಿಗಾಗಿ ಮಾಡಿದ್ದೇನು ಎಂದು ಚಿಂತಿಸಬೇಕಿದೆ. ನಮ್ಮ ಅನುಕಂಪ, ನಮ್ಮ ಪ್ರಾರ್ಥನೆ, ಆಕ್ರೋಶ, ವಿಚಾರವಿನಿಮಯ, ಜಾಗೃತಿಗಳ ಹೊರತಾಗಿ ನಾವು ಮಾಡಬೇಕಾದುದು ಇನ್ನೇನೋ ಇದೆ.
ಇಂದು ನಾವೆಲ್ಲ ಕ್ರಿಸ್ತನ ಆಗಮನ ಕಾಲದಲ್ಲಿದ್ದೇವೆ. ಇದು ಸ್ವಚ್ಛತೆಯ, ಸಿದ್ಧತೆಯ, ಬದಲಾವಣೆಯ, ನವೀಕರಣದ ದಿನಗಳು. ನಮ್ಮ ಮನೆಗಳಲ್ಲಿ ಮನಗಳಲ್ಲಿ ಯೇಸುಕ್ರಿಸ್ತನ ಜನನವನ್ನು ಸ್ವಾಗತಿಸಲು ನಾವೆಲ್ಲ ಸಿದ್ಧರಾಗುತ್ತಿದ್ದೇವೆ. ಆದರೆ ಒರಿಸ್ಸಾದಲ್ಲಿನ ಕ್ರೈಸ್ತ ಜನತೆ ಇನ್ನೂ ಭಯದ ಆತಂಕ ವಾತಾವರಣದಲ್ಲಿದ್ದಾರೆ. ಇಂದು ಆ ಜನ ನೀರು ನೆರಳಿಲ್ಲದವರಾಗಿದ್ದಾರೆ. ಈ ಸಂದರ್ಭದಲ್ಲಿ "ನನ್ನ ಅತಿ ಕಡೆಯ ಸೋದರನಿಗೆ ನೀನು ಏನು ಮಾಡುವಿಯೋ ಅದನ್ನು ನನಗೇ ಮಾಡಿದಂತೆ" ಎಂದ ಯೇಸುಕ್ರಿಸ್ತನ ನುಡಿಗಳು ನಮ್ಮ ಮನಸ್ಸಿನಲ್ಲಿ ಧ್ವನಿಸಲಿ. ಆದ್ದರಿಂದ ದೌರ್ಜನ್ಯಕ್ಕೊಳಗಾದ ಒರಿಸ್ಸಾದ ಕ್ರೈಸ್ತ ಜನತೆಗೋಸ್ಕರ ಏನನ್ನಾದರೂ ಮಾಡೋಣ. ಏಕೆಂದರೆ ಆ ಜನ ಧರ್ಮದ ಕಾರಣವಾಗಿ ತಮ್ಮ ಮನೆಮಠ ಆಸ್ತಿಪಾಸ್ತಿಗಳನ್ನು ಮಾತ್ರವಲ್ಲತಮ್ಮ ಆಪ್ತೇಷ್ಟರನ್ನೂ ಕಳೆದುಕೊಂಡಿದ್ದಾರೆ. ಅಸಂಖ್ಯ ಚರ್ಚುಗಳು, ಅನಾಥಾಶ್ರಮಗಳು ಸುಟ್ಟು ಬೂದಿಯಾಗಿವೆ. ಅವುಗಳನ್ನೆಲ್ಲ ಮರು ನಿರ್ಮಾಣ ಮಾಡಿ ಕುಟುಂಬಗಳಿಗೆ ಆಶ್ರಯ ಕಲ್ಪಿಸಬೇಕಾಗಿದೆ. ನಾವು ಆ ನತದೃಷ್ಟರ ಸಹೋದರರಾಗಿ ಕಿಂಚಿತ್ತಾದರೂ ಸಹಾಯ ಮಾಡೋಣ. ಅನಾಥರಿಗೆ ದೀನದರಿದ್ರರಿಗೆ ಸಹಾಯ ಮಾಡುವುದು ನಮಗೊಂದು ಪವಿತ್ರಕಾರ್ಯ.
ನಮ್ಮ ಕ್ರಿಸ್ಮಸ್ ಆಚರಣೆಯ ವೆಚ್ಚವನ್ನು ತಗ್ಗಿಸಿ ಆ ಹಣವನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸೋಣ: The Cuttack Roman Catholic Diocesan Corporation, SB A/C No.855 (RTGS CODE FDRL 0001232), The Federal Bank Ltd., (First Floor), #14D, Bapuji nagar, Janapath, Bhubaneshwar 751009, ORISSA
ಫೆಡೆರಲ್ ಬ್ಯಾಂಕಿಗೆ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲದವರು ಮೇಲೆ ತಿಳಿಸಿದ ಖಾತೆಗೆ ಚೆಕ್ಕು ಬರೆದು ಅದನ್ನು ಈ ವಿಳಾಸಕ್ಕೆ ಕಳುಹಿಸಿರಿ. Most Rev. Raphael Cheenath, SVD., Archbishop's house, # 9/16, Satyanagar, Bhubaneshwar, Orissa. Phone: 0674 257525 email: crcdc@satyam.net.in
ಪರಿಹಾರ ಸಾಮಗ್ರಿಗಳನ್ನು ಕಳಿಸಲಿಚ್ಛಿಸುವವರು ದಯಮಾಡಿ ವಿಳಾಸಕ್ಕೆ ಕಳಿಸಬಹುದು. Sister Suma, Missionaries of Charity, Satyanagar, Bhubaneshwar 751007, Orissa
ನಿಮ್ಮ ಕೊಡುಗೆಗಳಿಂದ ಒರಿಸ್ಸಾದ ಸಂತ್ರಸ್ತ ಜನತೆಯು ಒಳ್ಳೆಯ ದಿನಗಳನ್ನು ಕಾಣುವಂತಾಗಲಿ.
ದೇವರು ನಿಮಗೂ ಒಳ್ಳೆಯದು ಮಾಡಲಿ. ಕ್ರಿಸ್ತನು ನಿಮಗೆ ತನ್ನ ಪ್ರೀತಿಶಾಂತಿಗಳನ್ನು ಧಾರೆಯೆರೆಯಲಿ. ನೆಮ್ಮದಿ ನಿರಾತಂಕ ನಿರುಮ್ಮಳತೆ ನಿಮ್ಮದಾಗಲಿ. ಮೈಮನಸ್ಸುಗಳ ಆರೋಗ್ಯ ವರ್ಧಿಸಲಿ. ಸಂತೃಪ್ತಿ, ಸಮೃದ್ಧಿಗಳು ತುಂಬಿ ತುಳುಕಾಡಲಿ. ಕ್ರಿಸ್ತನೇ ನಿಮ್ಮ ದಾರಿದೀವಿಗೆಯಾಗಿ ಕೈ ಹಿಡಿದು ಮುನ್ನಡೆಸಲಿ. ಕ್ರಿಸ್ತಜಯಂತಿಯ ಹಾರ್ದಿಕ ಶುಭಾಶಯಗಳು.

ಕಾಮೆಂಟ್‌ಗಳಿಲ್ಲ: