ಶುಕ್ರವಾರ, ಮಾರ್ಚ್ 25, 2011

ಮರಿಯಾಪುರದಲ್ಲಿ ‘ಯೇಸು ಮಹಿಮೆ’

ಬನ್ನೇರುಘಟ್ಟ ಬೆಟ್ಟದ ಪಶ್ಚಿಮ ಬುಡದಲ್ಲಿ ಹಸಿರುಹೊತ್ತ ಮರಿಯಾಪುರ ಗ್ರಾಮಕ್ಕೆ ಈಗ ೧೨೭ ವರ್ಷ. ಇದನ್ನು ತಲುಪಲು ಬೆಂಗಳೂರು ಕನಕಪುರ ಹೆದ್ದಾರಿಯಲ್ಲಿ ಕಗ್ಗಲೀಪುರದ ಬಳಿ ತಿರುಗಬೇಕು.
ಆರ್ಟ್ ಆಫ್ ಲಿವಿಂಗ್ ಬಳಿ ಉದಿಪಾಳ್ಯದಿಂದ ಒಂದು ಕಿಲೊಮೀಟರು ಮುಂದೆ ಸಾಗಿದರೆ ಸಿಗುವ ಕಗ್ಗಲೀಪುರ ಒಂದು ಜಂಕ್ಷನ್ ಎನ್ನಬಹುದು. ಅಲ್ಲಿಂದ ಎಡಕ್ಕೆ ನಾಲ್ಕೈದು ಕಿ.ಮೀ ಒಳ ದಾರಿಯಲ್ಲಿ ಗುಳಕಮಲೆ, ತರಳು ದಾಟಿ ಮುಂದೆ ಹೋದಾಗ ಸಿಗುವುದೇ ಮರಿಯಾಪುರ.

ಶತಮಾನಕ್ಕೂ ಹಿಂದೆ ಪ್ಲೇಗ್ ಮತ್ತು ಕ್ಷಾಮದ ಹೆಮ್ಮಾರಿಗೆ ಸಿಲುಕಿ ಇಲ್ಲಿದ್ದ ತಟ್ಟಗುಪ್ಪೆ ಎಂಬ ಊರು ನಿರ್ಜನವಾದಾಗ ಫ್ರೆಂಚ್ ಮಿಷನರಿ ಫಿಲಿಪ್ ಸಿಜನ್ ಅವರು ಮಹಾರಾಜರಿಂದ ಈ ಊರನ್ನು ಪಡೆದು ೧೮೮೪ರಲ್ಲಿ ಮರುನಿರ್ಮಾಣ ಮಾಡಿದರು. ಅದೇ ಈಗಿನ ಮರಿಯಾಪುರ.

ನೂರಕ್ಕೆ ನೂರು ಕ್ರೈಸ್ತರೇ ವಾಸಿಸುವ ಇಲ್ಲಿನ ಅಚ್ಚರಿಯ ಸಂಗತಿಯೆಂದರೆ ಪರದೆಯಿಲ್ಲದೆ ನಡೆಯುವ ಧ್ವನಿ ಬೆಳಕಿನ ಬೃಹನ್ನಾಟಕ.ಸುಗ್ಗಿ ಕಳೆದ ನಂತರದ ವಿರಾಮದ ದಿನಗಳಲ್ಲಿ ಕ್ರೈಸ್ತ ಜನಪದರು ನಾಟಕ, ಕೋಲಾಟ, ಗೀತಗಾಯನಗಳಲ್ಲಿ ತೊಡಗಿಕೊಳ್ಳುವುದಕ್ಕೆ ತಪಸ್ಸು ಕಾಲವು ಇಂಬುಗೊಡುತ್ತದೆ. ಯೇಸು ಸ್ವಾಮಿಯ ಕೊನೆಯ ಗಳಿಗೆಗಳನ್ನು ಮನನ ಮಾಡುವ ತ್ಯಾಗ ನೇಮಗಳ ದಿನಗಳನ್ನು ತಪಸ್ಸು ಕಾಲ ಎನ್ನುತ್ತಾರೆ. ಈ ದಿನಗಳಲ್ಲಿ ಬೇಗೂರು, ಕಾಮನಹಳ್ಳಿ, ದೊರೆಸಾನಿಪಾಳ್ಯ, ವೀರನಪಾಳ್ಯ, ಆರೋಬೆಲೆ, ಮರಿಯಾಪುರಗಳಲ್ಲಿ ಕ್ರೈಸ್ತರಿಂದ ನಡೆಯುವ ನಾಟಕಗಳು ಪ್ರಸಿದ್ಧವಾದವು.

ದೊರೆಸಾನಿಪಾಳ್ಯದ ಡ್ರಾಮಾ ಮಾಸ್ತರ್ ದಾವಿದಪ್ಪನವರಲ್ಲಿ ‘ಜೋಸೆಫ್ ಮತ್ತು ಹನ್ನೆರಡು ಸಹೋದರರು, ಜ್ಞಾನಸುಂದರಿ, ಅಲ್ಫೋನ್ಸೆ, ಗುಣಸುಂದರಿ, ಯೂಸ್ತಾಕಿಯುಸ್, ಜೂಡಿತಮ್ಮ, ಎಸ್ತೆರಮ್ಮ’ ಮುಂತಾದ ಕ್ರೈಸ್ತ ನಾಟಕಗಳ ಹಸ್ತಪ್ರತಿಗಳನ್ನು ಈಗಲೂ ಕಾಣಬಹುದು.

ಅರ್ಕಾವತಿ ದಂಡೆಯ ಆರೂಬೆಲೆಯಲ್ಲಿ ಶುಭ ಶುಕ್ರವಾರ ಮತ್ತು ಪವಿತ್ರ ಶನಿವಾರ ರಾತ್ರಿ ಆಡುವ ‘ಯೇಸುಕ್ರಿಸ್ತನ ಮಹಿಮೆ’ ನಾಟಕ ಈಗಲೂ ಪ್ರಸಿದ್ಧ.

ಇವೆಲ್ಲವುಗಳ ನಡುವೆ ಮರಿಯಾಪುರದ ಧ್ವನಿ ಬೆಳಕಿನ ನಾಟಕಕ್ಕೆ ಹೊಸ ಹೊಳಪಿದೆ. ಸ್ವಾಮಿ ಫಿಲಿಪ್ ಸಿಜನ್ ಅವರ ನೆನಪು ಚಿರಸ್ಥಾಯಿಯಾಗಿಸುವ ಗ್ರಾಮಸ್ಥರ ಪ್ರಯತ್ನದಿಂದಾಗಿ ಈ ನಾಟಕವು ಹೊಸ ರೂಪ ತಳೆದಿದೆ.

ಗ್ರಾಮದ ಚರ್ಚ್ನ ಹಿಂಬದಿಯ ೧೨೫ ಮೀಟರು ಉದ್ದದ ದಿಬ್ಬದ ಮೇಲೆ ವಿಶಾಲ ವೇದಿಕೆ ನಿರ್ಮಿಸಿ ಇಡೀ ರಾತ್ರಿ ಆಡಲಾಗುವ ಈ ನಾಟಕದಲ್ಲಿ ೩೫೦ ನಟ ನಟಿಯರು, ಸುಮಾರು ೫೦೦ ಬಾಲ ಬಾಲೆಯರು ಹೆಜ್ಜೆ ಹಾಕುತ್ತಾರೆ. ಇನ್ನೂರಕ್ಕೂ ಹೆಚ್ಚು ಸ್ಪಾಟ್ಲೈಟ್ ಹಾಗೂ ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಹತ್ತು ಸಾವಿರ ವ್ಯಾಟ್ಗಳ ಸ್ಪಷ್ಟ ಧ್ವನಿ ನಾಟಕಕ್ಕೆ ವಿಶೇಷ ಪರಿಣಾಮ ತುಂಬುತ್ತದೆ.

ಯೇಸುವಿನ ಜೀವನವನ್ನು ಕೇಂದ್ರವಾಗಿಸಿಕೊಂಡು ಇಡೀ ಬೈಬಲನ್ನು ಸುಮಾರು ಆರೂವರೆ ಗಂಟೆಗಳ ಕಾಲ ಚಿತ್ರಿಸುತ್ತ ಅಂದಿನ ಕಾಲದ ವೇಷಭೂಷಣಗಳನ್ನು ಬಳಸಲಾಗುತ್ತದೆ. ಜೊತೆಗೆ ದನ ಕರು, ಕುರಿ, ಕತ್ತೆ, ಒಂಟೆ, ಕುದುರೆ, ರಥಗಳು ಹಾಗೂ ಎತ್ತಿನ ಗಾಡಿಗಳು ಬೃಹತ್ ವೇದಿಕೆ ಮೇಲೆ ಬಂದು ಹೋಗುವುದು ಚಿತ್ತಾಕರ್ಷಕವಾಗಿರುತ್ತದೆ. ನಗರದ ಜಂಜಡಗಳನ್ನು ಮರೆತು ಹಳ್ಳಿಗಾಡಿನ ನಿರಭ್ರ ಆಗಸದ ಕೆಳಗೆ ಶುದ್ಧ ಗಾಳಿ ಸೇವಿಸುತ್ತಾ ರಾತ್ರಿ ಕಳೆಯುವ ಈ ಅನುಭವ ನಿಜಕ್ಕೂ ಚೇತೋಹಾರಿ.
http://beta.prajavani.net/web/include/story.php?news=902§ion=56&menuid=13

ಕಾಮೆಂಟ್‌ಗಳಿಲ್ಲ: